March 31, 2021

ವೇದಗಳು ಸಾಮಾನ್ಯ ಜ್ಞಾನ

ಪ್ರಶ್ನೆ:
ವೇದವೆಂದರೇನು?

ಉತ್ತರ:
ವೇದವೆಂದರೆ ಜ್ಞಾನ.

ಪ್ರಶ್ನೆ:
ವೇದಜ್ಞಾನವನ್ನು ನೀಡಿದವರು ಯಾರು?

ಉತ್ತರ:
ಸಾಕ್ಷಾತ್ ಭಗವಂತ

ಪ್ರಶ್ನೆ:
ಭಗವಂತ ವೇದಜ್ಞಾನವನ್ನು ಎಂದು ನೀಡಿದ?

ಉತ್ತರ:
ಸೃಷ್ಟಿಯ ಆರಂಭದಲ್ಲೇ ಭಗವಂತ ವೇದಜ್ಞಾನವನ್ನು ನೀಡಿದ.

ಪ್ರಶ್ನೆ:
ಭಗವಂತ ವೇದಜ್ಞಾನವನ್ನೇಕೆ ನೀಡಿದ?

ಉತ್ತರ:
ಮಾನವಕುಲದ ಒಳಿತಿಗಾಗಿ ನೀಡಿದ.

ಪ್ರಶ್ನೆ:
ವೇದಗಳೆಷ್ಟು?

ಉತ್ತರ:
ನಾಲ್ಕು
ಋಗ್ವೇದ
ಯಜುರ್ವೇದ
ಸಾಮವೇದ
ಅಥರ್ವವೇದ.

ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಯಾರಿಗೆ ನೀಡಿದ?

ಉತ್ತರ:
ನಾಲ್ಕು ಋಷಿಗಳಿಗೆ.

ಪ್ರಶ್ನೆ:
ವೇದಗಳ ಜ್ಞಾನವನ್ನು ಭಗವಂತ ಋಷಿಗಳಿಗೆ ಹೇಗೆ ನೀಡಿದ?

ಉತ್ತರ:
ಯೋಗಾವಸ್ಥೆಯ ಸಮಾಧಿ ಸ್ಥಿತಿಯಲ್ಲಿ.

ಪ್ರಶ್ನೆ:
ವೇದಗಳಲ್ಲಿ ಎಂತಹ ಜ್ಞಾನವಿದೆ?

ಉತ್ತರ:
ಎಲ್ಲ ಸತ್ಯ ವಿದ್ಯೆಗಳು,ಜ್ಞಾನ ಹಾಗೂ ವಿಜ್ಞಾನ

ಪ್ರಶ್ನೆ:
ವೇದಗಳ ಜ್ಞಾನವನ್ನು ಮೊದಲು ಪಡೆದವರು ಯಾರಾರು?

ಉತ್ತರ:
ಅಗ್ನಿ-ಋಗ್ವೇದ
ವಾಯು-ಯಜುರ್ವೇದ
ಆದಿತ್ಯ-ಸಾಮವೇದ
ಅಂಗಿರಾ-ಅಥರ್ವವೇದ

ಪ್ರಶ್ನೆ:
ಋಗ್ವೇದದ ಪ್ರಮುಖ ವಿಷಯ ಯಾವುದು?

ಉತ್ತರ:
ಜ್ಞಾನ

ಪ್ರಶ್ನೆ:
ಯಜುರ್ವೇದದ ಪ್ರಮುಖ ವಿಷಯ ಯಾವುದು?

ಉತ್ತರ:
ಕರ್ಮ

ಪ್ರಶ್ನೆ:
ಸಾಮವೇದದ ಪ್ರಮುಖ ವಿಷಯ ಯಾವುದು?

ಉತ್ತರ:
ಉಪಾಸನೆ

ಪ್ರಶ್ನೆ:
ಅಥರ್ವವೇದದ ಪ್ರಮುಖ ವಿಷಯ ಯಾವುದು?

ಉತ್ತರ:
ವಿಜ್ಞಾನ

ಪ್ರಶ್ನೆ:
ವೇದವನ್ನು ಓದುವ ಅಧಿಕಾರ ಯಾರಿಗಿದೆ?

ಉತ್ತರ:
ಉತ್ತಮ ಸಂಸ್ಕಾರ ಹಾಗೂ ಕಾಯಿಕ,ವಾಚಿಕ,ಮಾನಸಿಕ ಪರಿಶುದ್ಧಿಯಿರುವವರಿಗಷ್ಟೇ

ಪ್ರಶ್ನೆ:
ವೇದಗಳಲ್ಲಿ ಮೂರ್ತಿಪೂಜೆಯ ವಿಧಾನವಿದೆಯೇ?

ಉತ್ತರ:
ಖಂಡಿತವಾಗಲೂ ಇಲ್ಲ.

ಪ್ರಶ್ನೆ:
ವೇದಗಳಲ್ಲಿ ಅವತಾರವಾದದ ಪ್ರಮಾಣವಿದೆಯೇ?

ಉತ್ತರ:
ಇಲ್ಲ

ಪ್ರಶ್ನೆ:
ವೇದಗಳಲ್ಲಿ ಜಾತಿಪದ್ಧತಿಯನ್ನು ಹೇಳಲಾಗಿದೆಯೇ?

ಉತ್ತರ:
ಎಲ್ಲೂ ಇಲ್ಲ.

ಪ್ರಶ್ನೆ:
ವೇದಗಳಲ್ಲಿ ಪ್ರಾಣಿಹತ್ಯೆಯನ್ನು ಸಮರ್ಥಿಸಲಾಗಿದೆಯೇ?

ಉತ್ತರ:
ಖಂಡಿತಾ ಇಲ್ಲ.

ಪ್ರಶ್ನೆ:
ಅತಿದೊಡ್ಡ ವೇದ ಯಾವುದು?

ಉತ್ತರ:
ಋಗ್ವೇದ

ಪ್ರಶ್ನೆ:
ವೇದಗಳ ಇತಿಹಾಸವೆಷ್ಟಿರಬಹುದು?

ಉತ್ತರ:
ಸುಮಾರು ಒಂದು ಅರಬ್ ೯೬ ಕೋಟಿ ವರ್ಷಕ್ಕಿಂತಲೂ ಮುಂಚೆ.

ಪ್ರಶ್ನೆ:
ವೇದಾರ್ಥವನ್ನು ಅರಿಯಲು ದರ್ಶನಶಾಸ್ತ್ರಗಳ ಅವಶ್ಯಯಕತೆಯಿದೆಯೇ?

ಉತ್ತರ:
ಖಂಡಿತಾ ಇದೆ.

ಪ್ರಶ್ನೆ:
ದರ್ಶನ ಶಾಸ್ತ್ರಗಳೆಷ್ಟಿವೆ? ಅವುಗಳ ಪ್ರವರ್ತಕರು ಯಾರು?

ಉತ್ತರ:
ಷಟ್ (ಆರು) ದರ್ಶನಗಳಿವೆ.

ನ್ಯಾಯದರ್ಶನ-ಗೌತಮ ಮುನಿಗಳು

ವೈಶೇಷಿಕ ದರ್ಶನ- ಕಣಾದ ಮುನಿಗಳು

ಯೋಗದರ್ಶನ-ಪತಂಜಲಿ ಮುನಿಗಳು

ಮೀಮಾಂಸಾದರ್ಶನ- ಜೈಮಿನಿ ಮುನಿಗಳು

ಸಾಂಖ್ಯದರ್ಶನಕಪಿಲ ಮುನಿಗಳು*

ವೇದಾಂತದರ್ಶನ-ವ್ಯಾಸ ಮುನಿಗಳು

ಪ್ರಶ್ನೆ:
ದರ್ಶನಗಳಲ್ಲಿರುವ ವಿಷಯಗಳೇನು?

ಉತ್ತರ: ಆತ್ಮಾ, ಪರಮಾತ್ಮಾ, ಪ್ರಕೃತಿ, ಜಗತ್ತಿನ ಉತ್ಪತ್ತಿ, ಮೋಕ್ಷ, ಭೌತಿಕ ಹಾಗೂ ಆಧ್ಯಾತ್ಮಿಕ ಜ್ಞಾನ ಮುಂತಾದವು.

ಪ್ರಶ್ನೆ:
ಪ್ರಾಮಾಣಿಕ ಉಪನಿಷತ್ತುಗಳೆಷ್ಟು?

ಉತ್ತರ:
ಕೇವಲ ಹನ್ನೊಂದು.

ಪ್ರಶ್ನೆ:
ಉಪನಿಷತ್ತಿನ ಹೆಸರುಗಳು?

ಉತ್ತರ:
ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ್ಯ, ಐತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ ಹಾಗೂ ಶ್ವೇತಾಶ್ವತರ

ಪ್ರಶ್ನೆ:
ಉಪನಿಷತ್ತುಗಳಲ್ಲಿರುವ ವಿಷಯಗಳ ಆಧಾರ ಯಾವುದು?

ಉತ್ತರ:
ವೇದಗಳು

ಪ್ರಶ್ನೆ:
ವೇದಾಂಗಗಳೆಷ್ಟು? ಅವು ಯಾವವು?

ಉತ್ತರ:
ಆರು. ಅವುಗಳೆಂದರೆ-
ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ್ಯ ಹಾಗೂ ಕಲ್ಪ

ಪ್ರಶ್ನೆ:
ವೇದಾಂಗಗಳ ಪ್ರಯೋಜನವೇನು?

ಉತ್ತರ:
ವೇದಾರ್ಥವನ್ನು ತಿಳಿಯಲು.

ಅಪ್ರದಕ್ಷಿಣ ಮತ್ತು ಪ್ರಾಚೀನಾವೀತಿ



ಒಮ್ಮೆ ಈ ಜಗತ್ತಿನಲ್ಲಿರುವ ಎಲ್ಲಾ ಜೀವಿಗಳು ಅವುಗಳ ಸೃಷ್ಟಿಕರ್ತನಾದ ಪ್ರಜಾಪತಿಯ ಬಳಿ ಹೋಗಿ ಕೇಳಿಕೊಳ್ಳುತ್ತವೆ. ನೀನು ಸಕಲ ಸೃಷ್ಟಿಗೆ ಮೂಲ, ಆದರೆ ನಮಗಿನ್ನೂ ಜೀವಿಸುವ ಮಾರ್ಗದರ್ಶನ ದೊರಕಿಲ್ಲ ನಮ್ಮ ನಾವು ಜೀವಿಸುವ ಕ್ರಮವನ್ನು ತಿಳಿಸಿಕೊಡು ಎಂದು ಪ್ರಾರ್ಥಿಸುತ್ತಾರೆ. ಆ ಸಂದರ್ಭದಲ್ಲಿ ದೇವತೆಗಳು, ಪಿತೃಗಳು, ಮಾನವರು ಮತ್ತು ಉಳಿದ ಪ್ರಾಣಿಗಳೆಲ್ಲವೂ ಇದ್ದವು. ಆಗ ದೇವತೆಗಳು ತಮ್ಮ ಮೊಣಕಾಲನ್ನು ನೆಲಕ್ಕೆ ಊರಿ ಪ್ರಜಾಪತಿಯ ಸಮೀಪಕ್ಕೆ ಸಾಗುತ್ತಾರೆ. ಆಗ ಪ್ರಜಾಪತಿ ದೇವತೆಗಳಿಗೆ ಹೇಳುತ್ತಾನೆ. “ನಿಮಗೆ ಯಜ್ಞವೇ ಆಹಾರ, ಅಮೃತವೇ ನಿಮಗೆ ದೊರೆತ ರಸಯುಕ್ತ ಆಹಾರ, ಸೂರ್ಯನೇ ತೇಜಸ್ಸು ಎನ್ನುತ್ತಾನೆ. ಇದನ್ನೇ ಶತಪಥ ಬ್ರಾಹ್ಮಣದಲ್ಲಿ “ಬ್ರವೀದ್ಯಜ್ಞೋವೋನ್ನಮಮೃತತ್ವಂ ವ ಊಗ್ರ್ವಃ ಸೂರ್ಯೋ ವಾ ಜ್ಯೋತಿರಿತಿ” ಎಂದು ಹೇಳಲಾಗಿದೆ. ಇದು ದೇವತೆಗಳ ಕುರಿತಾದರೆ, ಇನ್ನು. . . .  

ಪಿತೃಗಳು ಯಜ್ಞೋಪವೀತವನ್ನು ಬಲದ ಭುಜದಮೇಲೆ ಧರಿಸಿ ಪ್ರಾಚೀನಾವೀತಿಯಂತೆ ತಮ್ಮ ಎಡದ ಮೊಣಕಾಲನ್ನು ನೆಲದ ಮೇಲೆ ಊರಿ ಪ್ರಜಾಪತಿಯ ಸಮೀಪಕ್ಕೆ ತೆರಳುತ್ತಾರೆ. ತಮ್ಮ ಜೀವನದ ಕ್ರಮವನ್ನು, ಜೀವಿಸುವಿಕೆಯನ್ನು ಕೇಳುತ್ತಾರೆ. ಆಗ ಅವರಿಗೆ ಪ್ರಜಾಪತಿ ಹೇಳುತ್ತಾನೆ. ನಿಮಗೆ ಪ್ರತಿ ಮಾಸವೂ ಸಹ ಆಹಾರ ಲಭಿಸುವಂತಾಗಲಿ. ನಿಮಗೆ ಸ್ವಧಾ ಎನ್ನುವ ಹೆಸರಿನಿಂದ ಕರೆಯಲ್ಪಟ್ಟು ಆ ಆಹಾರವೇ ನಿಮ್ಮ ಮನೋವೇಗದ ಮೂಲವಾಗಿರುತ್ತದೆ. ಚಂದ್ರನೇ ನಿಮಗೆ ಜ್ಯೋತಿ ರೂಪನಾಗಿರುತ್ತಾನೆ. ಎಂದು ಕಳುಹಿಸುತ್ತಾನೆ.

ಮಾನವರಿಗೂ ಸಹ ಅವರವರ ಸ್ವರೂಪಕ್ಕನುಗುಣವಾಗಿ ಹೇಳಿ ಕಳುಹಿಸುತ್ತಾನೆ. ಅದನ್ನೇ ಶತಪಥಬ್ರಾಹ್ಮಣದಲ್ಲಿ “ಅಥೈನಂ ಪಿತರಃ | ಪ್ರಾಚೀನಾವೀತಿನಃ” ಎಂದು ಹೇಳಲಾಗಿದೆ.
ಅದಕ್ಕೆ ಪಿಂಡಪ್ರದಾನ ಯಜ್ಞವನ್ನು ಮಾಸಿಕ ಶ್ರಾದ್ಧ ರೂಪದಲ್ಲಿ ಸ್ವಧಾ ರೂಪದಿಂದ ಇಂದಿಗೂ ಕೊಡಲಾಗುತ್ತದೆ. ಇದನ್ನು ಪಿಂಡಪಿತೃಯಜ್ಞ ಎಂದು ಕರೆಯಲಾಗುತ್ತದೆ. ಈ ಯಜ್ಞದ ಸ್ವರೂಪದಲ್ಲಿ ದಕ್ಷಿಣಾಗ್ನಿಯೇ ಪ್ರಧಾನವಾಗಿರುತ್ತದೆ. ಯಜ್ಞೋಪವೀತವು ಪ್ರಾಚೀನಾವೀತಿಯ ರೂಪದಲ್ಲಿರಬೇಕು. ಅಂದರೆ ಬಲಭುಜದ ಮೇಲೆ ಇರಬೇಕು. ಅಪ್ರದಕ್ಷಿಣ ಕ್ರಮದಲ್ಲಿ ಕಾರ್ಯ ನಡೆಯುತ್ತದೆ. ಪಿತೃಗಳ ಜೊತೆಗೆ ಕವ್ಯವಾಹನನಾದ ಅಗ್ನಿಯೂ ಇರುತ್ತಾನೆ. ಸ್ವಧಾರೂಪವಾದ ಹವಿಸ್ಸು ಪಿತೃಗಳಿಗೆ ಅತ್ಯಂತ ಶ್ರೇಷ್ಠವಾಗಿರುತ್ತದೆ ಎಂದು ಬೃಹಸ್ಪತಿ ತಿಳಿಸುತ್ತಾನೆ. ಇವೆಲ್ಲವೂ ಬೃಹಸ್ಪತಿಯ ನಿರ್ದೇಶನದಂತೆ ನಡೆಯಲ್ಪಡುತ್ತದೆ. ಮುಂದೆ ಇದೇ ನಿಯಮವನ್ನು ಯಮನು ಅನುಸರಿಸುತ್ತಾನೆ. ಹೀಗೇ ನಿಯಾಮಕನ ಕುರಿತು ಹೇಳುವ ಮೊದಲು ಯಮ ಪಿತೃನಿಯಾಮಕ ಎನ್ನಿಸಿಕೊಂಡು ಕಾಲಕ್ಕೊಂದು ಸ್ಪಷ್ಟರೂಪವನ್ನು ಕೊಡುತ್ತಾನೆ. ಮನು ಯಮ ಸಮಕಾಲೀನರು ಮನುವು ಮನುಷ್ಯರ ನಿಯಾಮಕನಾಗುತ್ತಾನೆ. ಆದರೆ ಯಮ ಹಾಗಲ್ಲ ಪ್ರಪಂಚದ ಎಲ್ಲಾ ಹಿಡಿತ ಪಡೆದುಕೊಳ್ಳುತ್ತಾನೆ. ಯಮನ ವ್ಯಕ್ತಿತ್ವವೇ ಆಶ್ಚರ್ಯ ಹುಟ್ಟಿಸುತ್ತದೆ. ಯಮ ಒಬ್ಬ ಋಷಿಯಾಗಿಯೂ ಕಾಣಿಸಿಕೊಳ್ಳುತ್ತಾನೆ. ಋಗ್ವೇದದ ಹತ್ತನೇ ಮಂಡಲದ ೧೪ನೇ ಸೂಕ್ತದ ದೃಷ್ಟಾರನಾಗಿ ಒಬ್ಬ ದೊಡ್ಡ ಸಾಧಕನಾಗಿಯೇ ಕಾಣಿಸಿಕೊಳ್ಳುತ್ತಾನೆ.

ಪರೇಯಿವಾಂಸಂ ಪ್ರವತೋ ಮಹೀರನು ಬಹುಭ್ಯಃ ಪಂಥಾಮನುಪಸ್ಪಶಾನಂ|
ವೈವಸ್ವತಂ ಸಂಗಮನಂ ಜನಾನಾಂ ಯಮಂ ರಾಜಾನಂ ಹವಿಷಾ ದುವಸ್ಯ ||
ತನ್ನ ಜೀವಿತಾವಧಿಯಲ್ಲಿ ಮನುಷ್ಯರು ಆಚರಿಸಿದ ಶ್ರೇಷ್ಠವಾದ ಕರ್ಮಗಳನ್ನಾಧರಿಸಿ ಮರಣಾನಂತರ ಅವರನ್ನು ಆಯಾಯ ಪ್ರದೇಶಗಳಿಗೆ ಕರೆದೊಯ್ಯುವ, ಮತ್ತು ಅನೇಕ ಪುಣ್ಯಕಾರ್ಯಗಳನ್ನು ಮಾಡಿದ ಸತ್ಪುರುಷರಿಗೆ ಸ್ವರ್ಗದ ದಾರಿಯನ್ನು ಯಾವುದೇ ಹಿಂಸೆಯಿಲ್ಲದೇ ತೋರಿಸುವವನೂ, ವಿವಸ್ವಂತನ ಮಗನೂ, ಪಾಪಿಗಳಿಗೆ ಅವರ ಕರ್ಮಾನುಸಾರ ಯೋಗ್ಯ ಸ್ಥಾನಕ್ಕೆ ತಲುಪಿಸುವವನೂ, ಪಿತೃಗಳಿಗೆಲ್ಲಾ ಒಡೆಯ ಯಮ. 
ನಿಯಂತೃ ಎನ್ನುವ ಅರ್ಥ ಸೂಕ್ತವೆನ್ನಿಸಿದರೂ, ನಿಯಮಿಸು ಅಥವಾ ಹತೋಟಿಯಲ್ಲಿಡು ಎನ್ನುವ ಯಮ್ ಧಾತುವಿನಿಂದ ಯಮ ಹುಟ್ಟಿಕೊಂಡಿದೆ. ಪಿತೃಗಳ ಲೋಕಕ್ಕೆ ಅಧಿಪತಿಯಾಗಿ, ಪಿತೃ ಲೋಕದ ಪಾಲಕನಾಗಿ, ತನಗೆ ಸೆರಿದ ಪಿತೃಗಳನ್ನು ಅಂಕೆಯಲ್ಲಿ ನಿಯಮಿಸಿ ಇಟ್ಟುಕೊಳ್ಳುವವನು. ನಿಯಮವನ್ನು ಮಾಡುವವನು ಯಮ ಎಂದೆನ್ನಿಸಿಕೊಳ್ಳುವನು. “ಯಚ್ಛತಿ ಉಪರಮಯತಿ ಜೀವಿತಾತ್” ಎಂದು “ಎಲ್ಲಾ ಪ್ರಾಣಿವರ್ಗಗಳ ಜೀವನವನ್ನು ಕೊನೆಗೊಳಿಸುವವನು ಯಮ ಎನ್ನುವುದು ಯಾಸ್ಕ ಮಹರ್ಷಿಗಳ ಅಬಿಪ್ರಾಯ. “ಪರೇಯಿವಾಂಸಂ ಪ್ರವತೋ ಮಹೀರನು ಬಹುಭ್ಯಃ” ಇಲ್ಲಿ ಪ್ರವತಃ ಎನ್ನುವುದು ಮನುಷ್ಯರ ಕುರಿತಾಗಿ. “ಪಂಥಾಮನುಪಸ್ಪಶಾನಂ” ಎನ್ನುವಲ್ಲಿ ಜಗದ ಜೀವಗಳನ್ನು ಹೊತ್ತೊಯ್ಯುವವನು ಎಂದು ಹೇಳಿದ್ದರೆ, “ಜನಾನಾಂ ಯಮಂ ರಾಜಾನಂ” ಎಂದು ಹೇಳಿದ್ದು ಅಲ್ಲಿ ಎಲ್ಲರನ್ನೂ ಪಕ್ಷಪಾತ ಮಾಡದೇ ತನ್ನಲ್ಲಿ ಸೇರಿಸಿಕೊಳ್ಳುವವನು ಎಂದು ಹೇಳಿದ್ದು ಈ ಋಕ್ಕಿನಲ್ಲಿ ಹೇಳಲಾಗಿದೆ.

#ಅಪ್ರದಕ್ಷಿಣ_ಪ್ರದಕ್ಷಿಣ
ಸದ್ಯೋಜಾತರು

ಹುಟ್ಟಿನಿಂದ ಬಂದದ್ದಲ್ಲ ವರ್ಣ

-----------------------------------------

*ಬ್ರಾಹ್ಮಣರಾಗಿ ಪೂಜಿಸಲ್ಪಟ್ಟು.. ಈ ದಿನಗಳಲ್ಲೂ ಪೂಜಿಸಲ್ಪಡುತ್ತಿರುವ..... ಯಜ್ಞಯಾಗಾದಿಗಳಲ್ಲಿ ಇಂದಿಗೂ ಹವಿಸ್ಸಿನ ಭಾಗವನ್ನೂ ಸಹ ಸ್ವೀಕರಿಸುತ್ತಿರುವ ಬ್ರಾಹ್ಮಣೇತರರು.....*
*(ವಜ್ರಸೂಚಿಕೋಪನಿಷತ್ತಿನ ಪ್ರಕಾರ...)*
*೧. ಋಷ್ಯಶೃಂಗ.... ಜಿಂಕೆಗಳನ್ನು ಹಿಡಿಯುವವರ ಜಾತಿಯಲ್ಲಿ ಹುಟ್ಟಿದವನು.*
*೨. ಕೌಶಿಕ ..... ಹುಲ್ಲು ಕೊಯ್ಯುವ ಜಾತಿಗೆ ಸೇರಿದವನು.*
*೩. ಜಂಬೂಕ ಮಹರ್ಷಿ.... ನರಿಗಳನ್ನು ಹಿಡಿಯುವ ಜಾತಿಯವರು...*
*೪. ವಾಲ್ಮೀಕಿ... ಕಿರಾತಕರ ಒಂದು ಜಾತಿಗೆ ಸೇರಿದವನು. ಈತ ರಚಿಸಿದ ರಾಮಾಯಣ..... ಹಿಂದುಗಳಿಗೆ ಪರಮ ಪವಿತ್ರವಾದ ಗ್ರಂಥ. ಈತನನ್ನು ಆದಿಕವಿಯೆಂದು ಗೌರವಿಸಲಾಗುತ್ತಿದೆ.* 
*೫. ವ್ಯಾಸ..... ಮೀನುಗಳನ್ನು ಹಿಡಿಯುವ ಬೆಸ್ತರ ಜಾತಿಗೆ ಸೇರಿದವನು. ಹಿಂದುಗಳಿಗೆ ಪರಮಪವಿತ್ರವಾದ ವೇದಗಳು.... ಈತನ ಮೂಲಕ ವಿಭಜಿಸಲ್ಪಟ್ಟವು. ಆದ್ದರಿಂದ ಈತನನ್ನು ವೇದವ್ಯಾಸ.... ಎಂದು ಪೂಜಿಸುತ್ತಾರೆ.* 
*೬. ಗೌತಮ.... ಮೊಲ ಹಿಡಿಯುವ ಜಾತಿಗೆ ಸೇರಿದವನು.* 
*೭. ವಶಿಷ್ಟ... ಒಬ್ಬ ವೇಶ್ಯೆಗೆ ಜನಿಸಿದವನು. ಈತನ ಹೆಂಡತಿ ನಿಮ್ನಜಾತಿಗೆ (ಮಾದಿಗ) ಸೇರಿದ ಮಹಿಳೆಯಾದ ಆರುಂಧತೀ ದೇವಿ. ಈ ದಿನಗಳಲ್ಲೂ ಸಹ ನವ ದಂಪತಿಗಳು ಆರಂಧತೀ ಮತ್ತು ವಶಿಷ್ಟರಿಗೆ ನಮಸ್ಕರಿಸುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ಪ್ರತಿ ಪೂಜೆಯಲ್ಲೂ ಹಿಂದುಗಳಿಂದ ಆರಂಧತೀವಶಿಷ್ಠಾಭ್ಯಾಂ ನಮಃ ...... ಎಂದು ಪೂಜೆಗಳನ್ನು ಸ್ವೀಕರಿಸುತ್ತಿದ್ದಾರೆ. ಇವರ ಮಗ ಶಕ್ತಿ. ಇವನ ಹೆಂಡತಿ ಸಹ ನಿಮ್ನ ಜಾತಿಗೆ ಸೇರಿದಾಕೆ...... ಚಂಡಾಲಾಂಗಿನಿ. ಇವರ ಮಗ ಪರಾಶರ ಮಹರ್ಷಿ. ಈತ ಬೆಸ್ತ ಮಹಿಳೆ ಮತ್ಸ್ಯಗಂಧಿಯನ್ನು ಸೇರಿ ವ್ಯಾಸನ ಜನನಕ್ಕೆ ಕಾರಣರಾದರು.*  
*೮. ಅಗಸ್ತ್ಯ..... ಮಣ್ಣಿನ ಪಾತ್ರೆಯಲ್ಲಿ ಹುಟ್ಟಿದವನು.* 
*9. ಮತಂಗ ಮಹರ್ಷಿ....* *ನಿಮ್ನಕುಲದಲ್ಲಿ ಜನಿಸಿದರೂ...... ಬ್ರಾಹ್ಮಣನಾದ! ಈತನ ಮಗಳೇ.. ಮಾತಂಗಕನ್ಯೆ... ಒಂದು ಶಕ್ತಿ ದೇವತೆ.* *ಕಾಳಿದಾಸನನ್ನು ಮೊದಲ್ಗೊಂಡು ಎಷ್ಟೋ ಜನ ಮಹನೀಯರು ಈ ಮಾತೆಯ ಉಪಾಸನೆಯನ್ನು ಮಾಡಿದ್ದಾರೆ….. ಮಾಡುತ್ತಿದ್ದಾರೆ. ಆಕೆಯೇ ಶ್ಯಾಮಲಾದೇವಿ.* 
*ಇನ್ನೂ...*
*೧. ಐತರೇಯ ಮಹರ್ಷಿ ಒಬ್ಬ ದಸ್ಯ ಮತ್ತು ಕಿರಾತಕ ದಂಪತಿಗಳಿಗೆ ಜನಿಸಿದವನು...... ಅಂದರೆ ಇಂದಿನ ಲೆಕ್ಕಾಚಾರದಂತೆ ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿದವರು...... ಜನ್ಮತಃ ಬ್ರಾಹ್ಮಣನಲ್ಲ ಆದರೆ ಆತ ಅತ್ಯುನ್ನತವಾದ ಬ್ರಾಹ್ಮಣನಾದ. ಆತನ ಕೃತಿಗಳೇ ಐತರೇಯ ಬ್ರಾಹ್ಮಣ ಮತ್ತು ಐತರೇಯೋಪನಿಷತ್ತು. ಐತರೇಯ ಬ್ರಾಹ್ಮಣವು ಬಹಳ ಕ್ಲಿಷ್ಟವಾದುದು. ಋಗ್ವೇದವನ್ನು ಅರ್ಥ ಮಾಡಿಕೊಳ್ಳಲು ಇದು ಸಹಾಯಕ.* 
*೨. ಐಲುಷ ಮಹರ್ಷಿ ಒಬ್ಬ ದಾಸಿ ಪುತ್ರ. ಆತ ಋಗ್ವೇದದ ಮೇಲೆ ದೀರ್ಘವಾದ ಅಧ್ಯಯನವನ್ನು ಮಾಡಿ ಬಹಳಷ್ಟು ವಿಷಯವನ್ನು ಅರಿತ. ಆತನನ್ನು ಋಷಿಗಳೆಲ್ಲರೂ ಅಹ್ವಾನಿಸಿ ತಮ್ಮ ಆಚಾರ್ಯನನ್ನಾಗಿ ಮಾಡಿಕೊಂಡರು (ಐತರೇಯ ಬ್ರಾ. ೨.೧೯)*
*೩. ಸತ್ಯಕಾಮ ಜಾಬಾಲ ಮಹರ್ಷಿ ಸಹ ಒಬ್ಬ ವೇಶ್ಯೆಯ ಮಗ. ತಂದೆಯ ಗೋತ್ರವಲ್ಲ..... ಕಡೇ ಪಕ್ಷ ತನ್ನ ತಂದೆ ಹೆಸರೇನು ಎಂದೂ ಸಹ ತಿಳಿಯದವನು.  ಆದರೆ  ಜ್ಞಾನದಿಂದಾಗಿ ಬ್ರಾಹ್ಮಣನಾದ.*
*ಉನ್ನತವಾದ ವಂಶಗಳಲ್ಲಿ ಹುಟ್ಟಿಯೂ ಸಹ ವರ್ಣಾಶ್ರಮ ಧರ್ಮಗಳನ್ನು ಅನುಸರಿಸದೇ ಇದ್ದವರು ...... ನಿಸ್ಸಂದೇಹವಾಗಿ ಬಹಿಷ್ಕರಿಸಲ್ಪಟ್ಟರು.....* *ಅವರಲ್ಲಿ ಕೆಲವರು* 
*೧. ಭೂದೇವಿಯ ಮಗ.... ಕ್ಷತ್ರಿಯನಾದ ನರಕ...... ರಾಕ್ಷಸನಾದ!*

*೨. ಬ್ರಹ್ಮನ ವಂಶಸ್ಥರಾದ ಹಿರಣ್ಯಾಕ್ಷ, ಹಿರಣ್ಯಕಶಪು ಮತ್ತು ರಾವಣರು... ಬ್ರಾಹ್ಮಣಾದರೂ..... ರಾಕ್ಷಸರಾದರು......*

*೩. ರಘುವಂಶದ ಮೂಲಪುರುಷನಾದ ರಘುಮಹಾರಾಜನ ಮಕ್ಕಳಲ್ಲಿ ಒಬ್ಬನಾಗಿದ್ದ ಪ್ರವಿದ್ಧನು.... ರಾಕ್ಷಸನಾದ.* 

*೪. ತ್ರಿಶಂಕು ಮಹಾರಾಜ ಕ್ಷತ್ರಿಯ...... ಆದರೆ ಚಂಡಾಲನಾದ!*

*೫. ವಿಶ್ವಾಮಿತ್ರನು ಕ್ಷತ್ರಿಯ.... ಬ್ರಾಹ್ಮಣನಾದ.... ಈತನ ವಂಶಸ್ಥರೇ... ವಿಶ್ವಾಮಿತ್ರ ಗೋತ್ರದ ಬ್ರಾಹ್ಮಣರಾದರು. ವಿಶ್ವಾಮಿತ್ರನ ಮಕ್ಕಳಲ್ಲಿ ಕೆಲವರು ಅನ್ಯರಾದರು.* 

*೬. ನವ ಬ್ರಹ್ಮರಲ್ಲಿ ಒಬ್ಬನಾದ ದಕ್ಷ ಪ್ರಜಾಪತಿಯ ಮಗ ಪೃಷಧ..... ಬ್ರಹ್ಮಜ್ಞಾನವಿಲ್ಲದ ಕಾರಣ ಅನ್ಯನಾಗಿ ಬದಲಾದ (ವಿಷ್ಣುಪುರಾಣ ೪.೧.೧೪)*
 
*೭. ನೇದಿಷ್ಟ ಮಹಾರಾಜನ ಮಗ.... ನಾಭ. ಇವನಿಗೆ ಕ್ಷಾತ್ರ ಜ್ಞಾನವಿಲ್ಲದ ಕಾರಣ, ವರ್ತಕ ಜ್ಞಾನವಿದ್ದ ಕಾರಣ ವೈಶ್ಯನಾಗಿ ಮಾರ್ಪಟ್ಟ (ವಿಷ್ಣುಪುರಾಣ ೪.೧.೧೩).* 
*೮. ಕ್ಷತ್ರಿಯರಾದ ರಥೋದರ, ಅಗ್ನಿವೇಶ, ಹರಿತ.... ಬ್ರಹ್ಮಜ್ಞಾನದ ಕಾರಣದಿಂದಾಗಿ ಬ್ರಾಹ್ಮಣರಾದರು. ಹರಿತನ ವಂಶಿಕರು ಅವನ ಹೆಸರನ್ನೇ ಹೊಂದಿ ಹರಿತಸ ಗೋತ್ರದ ಬ್ರಾಹ್ಮಣರೆನಿಸಿದ್ದಾರೆ (ವಿಷ್ಣುಪುರಾಣ ೪.೩.೫)*
*೯. ಶೌನಕ ಮಹರ್ಷಿಯ ಮಕ್ಕಳು.... ನಾಲ್ಕು ವರ್ಣಗಳಿಗೆ ಸೇರಿದವರಾಗಿ ಬದಲಾದರು (ವಿಷ್ಣುಪುರಾಣ ೪.೮.೧)*
*೧೦. ಅದೇ ವಿಧವಾಗಿ ಗೃತ್ಸಮದ, ವೀತವ್ಯ, ವೃತ್ಸಮತಿ.... ಇವರ ಮಕ್ಕಳೂ ಸಹ ನಾಲ್ಕು ವರ್ಣಗಳಿಗೆ ಸೇರಿದವರಾದರು.* 
*ಇವರಲ್ಲಿ ಬಹಳಷ್ಟು ಜನ.... ವೇದಮಂತ್ರಗಳನ್ನು ಸಹ ರಚಿಸಿದವರಾಗಿದ್ದಾರೆ!*
*****
*ಹಿಂದೂ ಧರ್ಮವು ಜ್ಞಾನವನ್ನು ಅವಲಂಬಿಸಿದೆಯೇ ಹೊರತು, ಜನನವನ್ನು ಅವಲಂಬಿಸಿಲ್ಲ. ಒಳ್ಳೆಯ ಮನಸ್ಸುಳ್ಳ ಪ್ರತಿ ವ್ಯಕ್ತಿ ಸಹ ಜ್ಞಾನಕ್ಕೆ ಅರ್ಹನೇ!*
***
*ನಾವು ಹಂಚಿಕೊಳ್ಳುವ ವಿವಿಧ ಸಂದೇಶಗಳೊಂದಿಗೆ ಈ ಸಂದೇಶವನ್ನೂ ಸಹ ನಮ್ಮ ಬಂಧುಮಿತ್ರರು ಮತ್ತು ಆಪ್ತರೊಂದಿಗೆ ಹಂಚಿಕೊಳ್ಳೋಣ.?*
*ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆಯ ಕುರಿತಾಗಿ ಜನರಲ್ಲಿ ಬೇರೂರಿರುವ ತಪ್ಪು ಕಲ್ಪನೆಗಳನ್ನು  ದೂರ ಮಾಡೋಣ.*

March 30, 2021

ಸಂದ್ಯಾವಂದನೆಯಲ್ಲಿ ಮಹೇ ರಣಾಯ ಚಕ್ಷಸೇ

ಮಹೇ ರಣಾಯ ಚಕ್ಷಸೇ ಎನ್ನುತ್ತಾ ಸಂಧ್ಯಾವಂದನೆ.

ಸಂಧ್ಯಾವಂದನೆ ನಿತ್ಯವೂ ಮಾಡುತ್ತೇವೆ. ಆದರೆ ಸಂಧ್ಯಾವಂದನೆಯ ಮಂತ್ರಗಳ ಉಪಯೋಗ ತಿಳಿದಿರುವುದಿಲ್ಲ. ಅಥವಾ ಅದರ ಮಹತ್ವದ ಕಡೆಗೆ ಗಮನ ಹರಿಸುವುದಿಲ್ಲ. ನೀರಿನೊಂದಿಗಿನ ಆಟದಲ್ಲಿ ಮುಗಿಸಿ ಬಿಡುತ್ತೇವೆ. ಅದೊಂದು ಸಂಪ್ರದಾಯವೋ ಕರ್ತವ್ಯವೋ ಅನ್ನುವ ಮಟ್ಟಿಗೆ ಮಾಡಿ ಮುಗಿಸುತ್ತೇವೆ. ಇಲ್ಲಿ ನಾನು ಕೇವಲ ಪ್ರೋಕ್ಷ್ಷಣ್ಯಕ್ಕೆ ಮಾತ್ರ ಬರುವೆ. 

ಇದು ಇಂದ್ರನು ವಿಶ್ವರೂಪಾಚಾರ್ಯ ಎನ್ನುವ ತನ್ನ ಪುರೋಹಿತನನ್ನೇ ಸಂಹಾರ ಮಾಡಿದಾಗ ಬ್ರಹ್ಮಹತ್ಯಾ ದೋಷ ಬರುತ್ತದೆ ಆಗ ಸಿಂಧುದ್ವೀಪ ಎನ್ನುವ ಋಷಿಯನ್ನು ಇಟ್ಟುಕೊಂಡು ತನ್ನ ಪಾಪವನ್ನು ಪರಿಹಾರ ಮಾಡಿಕೊಳ್ಳುತ್ತಾನೆ. ಸಿಂಧು ದ್ವೀಪ ಋಷಿಯು ಪಾಪ ಪರಿಹಾರಾರ್ಥವಾಗಿ ನೀರನ್ನು ಕುರಿತು ಜಪ ಮಾಡಿ ಪಾಪ ಪರಿಹಾರವನ್ನು ಮಾಡಿಕೊಳ್ಳುತ್ತಾನೆ. ಹಾಗಾದರೆ ಆ ನೀರನ್ನು ಹೇಗೆ ಪ್ರಾರ್ಥಿಸಿದ ಎನ್ನುವುದನ್ನು ಗಮನಿಸೋಣ. ನೀರು, ಗಾಳಿ ಮತ್ತು ಬೆಂಕಿ ಇವು ಮೂರೂ ಮನುಷ್ಯನಿಗೆ ಅತ್ಯವಶ್ಯಕವಾದವು. ಇವುಗಳಲ್ಲಿ ಒಂದರ ಕೊರತೆ ಉಂಟಾದರೂ ಬದುಕು ಅಲ್ಲೋಲ ಕಲ್ಲೋಲ ನಿಶ್ಚಿತ. ಒಂದು ಅಧಿಕವಾದರೂ ಸಂಕಷ್ಟವೇ. ಪ್ರತಿಯೊಂದು ಜೀವಿಯೂ ನೀರಿಗಾಗಿ ಹಾತೊರೆಯುತ್ತದೆ. ಕಶ್ಯಪ ಮಹರ್ಷಿ ಮಳೆಗಾಗಿ ಸ್ತುತಿಸುವಾಗ ಕಪ್ಪೆಯು ನೀರಿಗಾಗಿ ಕೂಗುತ್ತದೆ. ಮೋಡವಾದ ತಕ್ಷಣ ಕೂಗುವುದು ಅದರ ಕರ್ತವ್ಯವೇನೋ ಅನ್ನಿಸಿ ಬಿಡುತ್ತದೆ. ಅಂದರೆ ಪ್ರಕೃತಿಯ ಜೊತೆ ಜೀವಿಯ ಸಂಬಂಧ ಅಗಾಧವಾದದ್ದು. ಹೌದು. ಋಗ್ವೇದದ ಹತ್ತನೇ ಮಂಡಲದ ೯ನೇ ಸೂಕ್ತ ನೀರನ್ನು ಕುರಿತಾಗಿಯೇ ಧ್ಯಾನಿಸಲ್ಪಟ್ಟಿದೆ. ಈ ಸೂಕ್ತದ ದೃಷ್ಟಾರ ಸಿಂಧುದ್ವೀಪ ಎನ್ನುವ ಋಷಿ. ತ್ರಿಶಿರಾಸ್ತ್ವಾಷ್ಟ್ರ ಎನ್ನುವುದು ಈ ಋಷಿಗಿರುವ ಇನ್ನೊಂದು ಹೆಸರು. ಇಲ್ಲಿ ನೀರನ್ನು ಆಪಃ ಎಂದು ಕರೆಯಲಾಗಿದ್ದು ಅದು ಉದಕಾಭಿಮಾನಿ ದೇವತೆಗಳನ್ನು ಕುರಿತಾದದ್ದು. ಇದನ್ನು ಸಾಮಾನ್ಯವಾಗಿ ಉಪನಯನವಾಗಿ ದಿನವೂ ಸಂಧ್ಯಾವಂದನೆಯನ್ನು ಮಾಡುವ ಅಭ್ಯಾಸ ಇಟ್ಟುಕೊಂಡವರು ಒಮ್ಮೆಯಾದರೂ ಹೇಳುತ್ತಾರೆ.

ಒಂದು ನದೀ ಅಥವಾ ಸರೋವರದಲ್ಲಿ ತನ್ನ ಸೊಂಟದ ತನಕ ನೀರು ಬರುವಷ್ಟು ನಿಂತು ಹನ್ನೆರಡು ವರ್ಷ ಈ ಸೂಕ್ತ ಜಪಮಾಡಿದರೆ ಬ್ರಹ್ಮಹತ್ಯಾದೋಷ ನಿವಾರಣೆಯಾಗುತ್ತದೆ ಎನ್ನುವುದನ್ನು ಋಗ್ವಿಧಾನ ಮತ್ತು ಬೃಹದ್ದೇವತಾದಲ್ಲಿ ವಿಧಿ ಪೂರ್ವಕವಾಗಿ ಹೇಳಲಾಗಿದೆ. ಇಂದಿಗೂ ನೀರನ್ನು ಮುಟ್ಟಿ ಗಂಗೇಚ ಯಮುನೇ ಚೈವ ಎನ್ನುವ ಶ್ಲೋಕವನ್ನು ಹೇಳುವ ರೂಢಿ ಇದ್ದೇ ಇದೆ.

ಪ್ರಾತರುತ್ಥಾಯ ಸತತಂ ಕುರ್ಯಾನ್ಮಾರ್ಜನಮಾತ್ಮನಃ |
ರಾತ್ರೌ ಕೃತಸ್ಯ ಪಾಪಸ್ಯ ಅವಿಜ್ಞಾತಸ್ಯ ನಿಷ್ಕೃತಿಃ ||
ರಾತ್ರಿ ಕಾಲದಲ್ಲಿ ತಿಳಿಯದೇ ಮಾಡಿದ ಯಾವುದೇ ಪಾಪಕೃತ್ಯವಿದ್ದರೂ ಸಹ ಅದು ಪರಿಹಾರವಾಗಲಿ ಎಂದು ಸ್ನಾನದ ನಂತರ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳುವುದರಿಂದ ಪರಿಹಾರವಾಗುತ್ತದೆ ಎನ್ನಲಾಗಿದೆ.
ಅದೇ ರೀತಿ ಸಾಯಂಕಾಲ ಸ್ನಾನದ ನಂತರ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ಹಗಲಿನಲ್ಲಿ ಗೊತ್ತಾಗದೇ ಘಟಿಸಿದ ಪಾಪ ಕಾರ್ಯದ ಪರಿಮಾರ್ಜನೆ ಎನ್ನುವಲ್ಲಿ ಶುದ್ಧವಾದ ನೀರು ನಮಗೆ ಸೋಕಿದಾಗ ದೇಹದಲ್ಲಿ ಇರತಕ್ಕ ರೋಗಾಣುಗಳು ಮತ್ತು ಸೂಕ್ಷ್ಮ ಜೀವಿಗಳು ದೇಹದಿಂದ ದೂರಕ್ಕೆ ಹೋಗುತ್ತವೆ ಎನ್ನುವ ಸೂಕ್ಷಾರ್ಥ ಇದೆ.
ಆಪೋ ಹಿ ಷ್ಠಾ ಮಯೋಭುವಸ್ತಾ ನ ವೂರ್ಜೇ ದಧಾತನ |
ಮಹೇ ರಣಾಯ ಚಕ್ಷಸೇ || ಎನ್ನುವ ಈ ಋಕ್ಕಿನಲ್ಲಿ ಆಪಃ ಎನ್ನುವುದು ಉದಕ ದೇವತೆಗಳಿಗೆ. ಆಪಃ ಎನ್ನುವುದು ಸುತ್ತಲೂ ಹರಡಿಕೊಳ್ಳುವುದು ಎನ್ನುವ ಅರ್ಥ ಕೊಡುತ್ತದೆ. ನೀರು ನಿಲ್ಲುವ ಸ್ವಭಾವದ್ದಲ್ಲ ಸುತ್ತಲೂ ಪಸರಿಸುವ ಸ್ವಭಾವದ್ದು, ಈ ನೀರು ಶುದ್ಧವಾಗಿದ್ದಾಗ ಎಂತಹ ರೋಗಗಳಿದ್ದರೂ ಗುಣ ಪಡಿಸಬಲ್ಲದು ಎನ್ನಲಾಗಿದೆ. ಕೆಲವೊಂದು ರೋಗಗಳು ಇದರಿಂದಲೇ ಬಂದರೂ ಅವೆಲ್ಲವೂ ಸಹ ನೀರಿನಿಂದಲೇ ಗುಣಮುಖವಾಗುತ್ತವೆ. ಆಪಃ ಎನ್ನುವುದು ಸುಖ ಮತ್ತು ಸಮೃದ್ಧಿಯನ್ನು ನೀಡುತ್ತದೆ. ಉದಕಾಭಿಮಾನಿ ದೇವತೆಗಳೆ ನೀವು ಎಲ್ಲರಿಗೂ ಆರೋಗ್ಯದೊಂದಿಗೆ ಸುಖ ಮತ್ತು ಸಮೃದ್ಧಿಯನ್ನು ಒದಗಿಸಿ ಅವರ ಅನ್ನಾದಿ ಆಹಾರಗಳ ಸಮೃದ್ಧಿಕೊಟ್ಟು ಸುಖ ಶಾಂತಿ ನೆಲೆಸುವಂತೆ ಮಾಡಿರಿ ಎಂದು ಈ ಋಕ್ಕಿನಲ್ಲಿ ಹೇಳಲಾಗಿದೆ.

ಯೋ ವಃ ಶಿವತಮೋ ರಸಸ್ತಸ್ಯ ಭಾಜಯತೇಹ ನಃ |
ಉಶತೀರಿವ ಮಾತರಃ || ಹಾಲುಗಲ್ಲದ ಹಸುಳೆಯ ಅಥವಾ ತನ್ನ ಮಗುವಿನ ಪುಷ್ಟಿಯನ್ನು ಅಪೇಕ್ಷಿಸುವ ತಾಯಿಯಂತೆ ಎನ್ನುವ ಮಾತು "ಉಶತೀರಿವ ಮಾತರಃ" ಎಂದು. ಎಂತಹ ಉದಾತ್ತ ಮಾತು. ತಾಯಿ ತನ್ನ ಸರ್ವಸ್ವವನ್ನೂ ತನ್ನ ಮಗುವಿಗೆ ಧಾರೆ ಎರೆಯುತ್ತಾಳೆ. ತಾಯಿಗೆ ಮಗುವಿನ ಶ್ರೇಯೋಭಿವೃದ್ಧಿ ಬಹಳ ಮುಖ್ಯವಾಗುತ್ತದೆ. ಅದನ್ನೇ ಇಲ್ಲಿ ಹೇಳಲಾಗಿದೆ. ಉದಕಾಭಿಮಾನಿ ಅಪ್ ದೇವತೆಗಳೇ ನಿಮ್ಮ ನೀರು ಅತ್ಯಂತ ರುಚಿಕರ ಅಂತಹ ನೀರನ್ನು ನಮಗೆ ದಯಪಾಲಿಸಿ. ತಾಯಿ ತನ್ನ ಮಗುವಿಗೆ ಸ್ತನ್ಯಪಾನ ಮಾಡಿಸಿ ಮಗುವಿಗೆ ಪುಷ್ಟಿಯನ್ನು ಕೊಡುವಂತೆ ನಮಗೂ ಆಯುರಾರೋಗ್ಯವನ್ನು ಕೊಡಿ ಎನ್ನಲಾಗಿದೆ.
ತಸ್ಮಾ ಅರಂ ಗಮಾಮ ವೋ ಯಸ್ಯ ಕ್ಷಯಾಯ ಜಿನ್ವಥ|
ಆಪೋ ಜನಯಥಾ ಚ ನಃ || ಉದಕಾಭಿಮಾನಿ ಅಪ್ ದೇವತೆಗಳೆ ನಾವು ಮಾಡಿದ ಪಾಪದ ಪರಿಹಾರವನ್ನು ನೀವು ಮಾಡುತ್ತೀರಿ ಆದುದರಿಂದ ಆದಷ್ಟು ವೇಗವಾಗಿ ನಾವು ನಿಮ್ಮ ಸಮೀಪಕ್ಕೆ ಬಂದು ನಿಮ್ಮನ್ನು ಪ್ರಾರ್ಥಿಸಿ ನಿಮ್ಮನ್ನು ಸಂಪ್ರೀತಿಗೊಳಿಸುತ್ತೇವೆ. ನಮಗೆ ನೀವು ಪುತ್ರ ಪೌತ್ರಾದಿ ಸಂಪತ್ತುಗಳನ್ನು ಕೊಡಿ ಎನ್ನಲಾಗಿದೆ.

ಶಂ ನೋ ದೇವೀರಭೀಷ್ಟಯ ಆಪೋ ಭವಂತು ಪೀತಯೇ |
ಶಂ ಯೋರಭಿ ಸ್ರವಂತು ನಃ ||
ಹೌದು ಈ ನೀರು ಸ್ವಚ್ಚವಾಗಿದ್ದರೆ ಕಲ್ಮಶರಹಿತವಾಗಿದ್ದರೆ ಅವು ರೋಗ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತವಂತೆ. ನೀರು ದೇಹದಲ್ಲಿ ಪ್ರಮಾಣಕ್ಕಿಂತ ಕಡಿಮೆಯಾದರೂ ರೋಗದ ತೀವ್ರತೆ ಅಧಿಕವಾಗುತ್ತದೆಯಂತೆ. ಜೀರ್ಣ ಮತ್ತು ಅಜೀರ್ಣಕ್ಕೂ ಇದೇ ನೀರು ಅತ್ಯಂತ ಅವಶ್ಯವಂತೆ. ಪಚನಕ್ರಿಯೆ ನಡೆಯಲೂ ನೀರು ಬೇಕೇ ಬೇಕು ಅನ್ನುತ್ತಾ ’ಶಂ ನೋ’. . . ಎನ್ನುತ್ತದೆ. ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ರೋಗಕಾರಕ ಕ್ರಿಮಿಗಳಿಂದ ನಮಗೆ ಹಾನಿ ಉಂಟಾಗದಿರಲಿ ಎನ್ನುವ ಈ ಋಕ್ಕಿನ ಆಶಯ ಬಹಳ ಮಹತ್ವದ್ದು. ನಾವು ಕುಡಿಯುವ ನೀರು ಕುಡಿಯಲು ಯೋಗ್ಯವಾಗಿರುವಂತೆ ದೊರಕಿಸಿಕೊಡಿ ಎನ್ನುವ ಮಾತು ನಿಜಕ್ಕೂ ಸೂರ್ಯ ಚಂದ್ರರಿರುವ ತನಕವೂ ಸತ್ಯದ್ದು.
ನೀರಿನ ಕುರಿತಾಗಿ ಇನ್ನೂ ಬರೆಯಲಿಕ್ಕಿದೆ ಆದರೆ ಒಂದಂತೂ ಸತ್ಯ ಬಾಯಾರಿದಾಗ ಒಂದು ಹನಿ ನೀರು ಸಿಕ್ಕಿದರೆ ಸಾಕು ಅನ್ನಿಸುತ್ತದೆ. ನೀರಿನ ಮಹತ್ವ ವೇದಗಳಲ್ಲಿ ಬಹಳ ದೀರ್ಘವಾಗಿ ಹೇಳಲಾಗಿದೆ. ಅದನ್ನು ಸಾಧ್ಯವಾದರೆ ಬರೆಯುವೆ. ನೀರನ್ನು ಶೇಖರಿಸಿ ಮುಂದಿನ ಪೀಳಿಗೆಗೆ ಸಿಗುವಂತೆ ಈಗಲೇ ಜಾಗ್ರತೆ ವಹಿಸಿ ಕಾಪಾಡಿಕೊಳ್ಳಬೇಕಾಗಿದೆ.

#ಆಪೋ_ಹಿ_ಷ್ಠಾ
ಸದ್ಯೋಜಾತರು

ಷಷ್ಠ್ಯಬ್ದಿಪೂರ್ವ” ಮತ್ತು “ಷಷ್ಠ್ಯಬ್ದ್ಯೋತ್ತರ

Good Evening, Happy Sunday 
28th March 2021
@ Hiremath, TapOvana, Tumkur 

ನಾವು, ನೀವುಗಳು 
“ಷಷ್ಠ್ಯಬ್ದಿಪೂರ್ವ” 
ಮತ್ತು “ಷಷ್ಠ್ಯಬ್ದ್ಯೋತ್ತರ” ಎಂಬೀ 
ಎರಡು ಕಾಲಘಟ್ಟದಲ್ಲಿ ವಿಂಗಡಿಸಲ್ಪಟ್ಟಿದ್ದೇವೆ.

ಮನುಷ್ಯನಿಗೆ ಸರಿಸುಮಾರು 
100 ವರುಷಗಳ ಆಯುಷ್ಯವಿದೆ ಎಂದು 
ಅಂದಾಜಿಸಲಾಗಿದೆ.

ಹಾಗೆಂದ ಮಾತ್ರಕ್ಕೆ 
ಎಲ್ಲರೂ ನೂರು ವರುಷಗಳವರೆಗೆ 
ಬದುಕುತ್ತಾರೆ ಎಂದೇನಿಲ್ಲ.

ಕೆಲವರು ನೂರರ ಒಳಗೇನೇ 
ದೇವರ ಹತ್ತಿರ ದಯಮಾಡಿಸುತ್ತಾರೆ.

ಇನ್ನು ಕೆಲವರು ನೂರಕ್ಕಿಂತಲೂ 
ಹೆಚ್ಚು ವರುಷ ಬದುಕಿ 
“ಶತಾಯುಷಿ” ಗೌರವಕ್ಕೆ ಪಾತ್ರರಾಗುತ್ತಾರೆ.

ಸಿದ್ಧಗಂಗೆಯ ಪರಮಪೂಜ್ಯ 
ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು 111 ವರುಷ

ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು 102 ವರುಷ.

ಇವರೆಲ್ಲ ನೂರು ವರುಷಗಳಿಗಿಂತಲೂ 
ಹೆಚ್ಚುಕಾಲ ಬದುಕಿ 
“ಶತಾಯುಷಿ” ಗೌರವಕ್ಕೆ ಭಾಜನರಾದರು.

ನೂರು ವರುಷಗಳ ಮನುಷ್ಯನ ಬದುಕನ್ನು 
ನಾವು ಎರಡು ಕಾಲಘಟ್ಟದಲ್ಲಿ 
ವಿಂಗಡಿಸುತ್ತಿದ್ದೇವೆ.

ಒಂದು,
 “ಷಷ್ಠ್ಯಬ್ದಿಪೂರ್ವ” 

ಇನ್ನೊಂದು, “ಷಷ್ಠ್ಯಬ್ದ್ಯೋತ್ತರ” 
ಷಷ್ಠ್ಯಬ್ದಿ ಉತ್ತರ

“ಪ್ರಿ ಷಷ್ಠ್ಯಬ್ದಿ” & “ಪೋಸ್ಟ್ ಷಷ್ಠ್ಯಬ್ದಿ”

Pre Shasthyabdi &  Post Shasthyabdi

ಕ್ರಿಸ್ತಪೂರ್ವ (ಬಿ. ಸಿ.) 
ಮತ್ತು ಕ್ರಿಸ್ತಶಕ ಎಂದ ಹಾಗೆ. (ಎ. ಡಿ.)

ಕ್ರಿಸ್ತನ ಪೂರ್ವದ ಕಾಲ 
ಮತ್ತು ಕ್ರಿಸ್ತನ ನಂತರದ ಕಾಲ.

B. C. & A. D.

Before Christ 
& After the Death of Christ

ವಚನಸಾಹಿತ್ಯದ ಕುರಿತು ಹೇಳುವ 
ಸಂದರ್ಭದಲ್ಲಿ

ಮತ್ತು ವಚನಸಾಹಿತ್ಯವನ್ನು 
ವಿಂಗಡಿಸುವ ಸಂದರ್ಭದಲ್ಲಿ

“ಬಸವಪೂರ್ವ” ವಚನಸಾಹಿತ್ಯ 
ಮತ್ತು “ಬಸವೋತ್ತರ” ವಚನಸಾಹಿತ್ಯ 
ಎಂದು ಹೇಳುವುದಿಲ್ಲವೆ?
Pre Basava &  Post Basava

ಹಾಗೆ, 
ಈ “ಷಷ್ಠ್ಯಬ್ದಿಪೂರ್ವ” 
ಮತ್ತು “ಷಷ್ಠ್ಯಬ್ದ್ಯೋತ್ತರ” ಕಾಲಗಳು!!

ಅಷ್ಟು ಮಾತ್ರವಲ್ಲ,

ಈ “ಷಷ್ಠ್ಯಬ್ದಿಪೂರ್ವ” 
ಮತ್ತು “ಷಷ್ಠ್ಯಬ್ದ್ಯೋತ್ತರ” ಈ ಕಾಲಗಳೆರಡೂ

ಸಿದ್ಧಾಂತ ಶಿಖಾಮಣಿಯ 
ಅಂಗಸ್ಥಲ ಮತ್ತು ಲಿಂಗಸ್ಥಲವಿದ್ದ ಹಾಗೆ.

ಸಿದ್ಧಾಂತ ಶಿಖಾಮಣಿಯ 
ಅಂಗಸ್ಥಲವೂ ಆರು ಸ್ಥಲಗಳನ್ನು 
ಒಳಗೊಂಡಿದೆ.

ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, 
ಶರಣ, ಐಕ್ಯ   ಎಂದು.

ಸಿದ್ಧಾಂತ ಶಿಖಾಮಣಿಯ 
ಲಿಂಗಸ್ಥಲವೂ ಕೂಡ ಆರು ಸ್ಥಲಗಳನ್ನು 
ಒಳಗೊಂಡಿದೆ.

ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, 
ಶರಣ, ಐಕ್ಯ ಎಂದು.

ಸಿದ್ಧಾಂತ ಶಿಖಾಮಣಿಯಲ್ಲಿ 
ಮತ್ತೆ ಅಂಗಸ್ಥಲಾಂತರ್ಗತ 44 ಸ್ಥಲಗಳುಂಟು.

ಹಾಗೆಯೇ ಲಿಂಗಸ್ಥಲದಲ್ಲೂ 
ಲಿಂಗಸ್ಥಲಾಂತರ್ಗತ 57 ಸ್ಥಲಗಳುಂಟು.

ಒಟ್ಟು ಸಿದ್ಧಾಂತ ಶಿಖಾಮಣಿಯಲ್ಲಿ 
101 ಅಂದರೆ ``ಏಕೋತ್ತರ'' ಶತಸ್ಥಲಗಳಿವೆ.

“ಕಲಿಯೋದಕ್ಕಾಗಿ” ಅಂಗಸ್ಥಲದ 
ಆರುಸ್ಥಲಗಳನ್ನು ನಿಗದಿಗೊಳಿಸಲಾಗಿದೆ.

“ಕಲಿಸೋದಕ್ಕಾಗಿ” ಲಿಂಗಸ್ಥಲದ 
ಆರು ಸ್ಥಲಗಳನ್ನು ನಿಯೋಜಿಸಲಾಗಿದೆ.

ಸಾಧಕ, 
ಕಲಿಯುವಾಗಲೂ ಆರು ಸ್ಥಲಗಳ ಯಾತ್ರೆ 
ಮಾಡಿಕೊಂಡಿರಬೇಕು.

ಹಾಗೆಯೇ 
ಆತ ಕಲಿಸುವಾಗಲೂ ಆರು ಸ್ಥಲಗಳ ಯಾತ್ರೆ 
ಮಾಡಿಕೊಂಡಿರಬೇಕು.

ಅಂಗಸ್ಥಲಗಳಲ್ಲಿ ಆತ ಸಾಧಕನಾಗಿರಬೇಕು.
ಲಿಂಗಸ್ಥಲಗಳಲ್ಲಿ ಆತ ಶಿಕ್ಷಕನಾಗಬೇಕು.

“ಷಷ್ಠ್ಯಬ್ದಿಪೂರ್ವ” 
ಮತ್ತು “ಷಷ್ಠ್ಯಬ್ದ್ಯೋತ್ತರ” ಎಂಬ 
ಈ ಎರಡು ಕಾಲಘಟ್ಟಗಳಲ್ಲಿ ವಿಂಗಡಿಸಲ್ಪಟ್ಟಿರುವ 
ನಮ್ಮ, ನಿಮ್ಮಗಳ ಬದುಕು ಕೂಡ 
ಅಂಗಸ್ಥಲ, ಲಿಂಗಸ್ಥಲವಿದ್ದ ಹಾಗೆ.

ನಮ್ಮ, ನಿಮ್ಮಗಳ ದೈನಂದಿನ ಬದುಕಿನಲ್ಲಿ

ಷಷ್ಠ್ಯಬ್ದಿಪೂರ್ವ ಕಾಲದಲ್ಲೂ 
ಊಟ, ಉಪಚಾರ, ವ್ಯವಹಾರ...., ಇತ್ಯಾದಿ 
ಇರುತ್ತದೆ.

ಷಷ್ಠ್ಯಬ್ದ್ಯೋತ್ತರ ಕಾಲದಲ್ಲೂ 
ಊಟ, ಉಪಚಾರ, ವ್ಯವಹಾರ...., ಇತ್ಯಾದಿ 
ಇರುತ್ತದೆ.

ಷಷ್ಠ್ಯಬ್ದಿಪೂರ್ವ ಕಾಲದಲ್ಲಿ 
ಊಟ, ಉಪಚಾರ, ವ್ಯವಹಾರಾದಿಗಳು 
ಸಾಧಕನಂತೆ ಇರಬೇಕು.

ಷಷ್ಠ್ಯಬ್ದ್ಯೋತ್ತರ ಕಾಲದಲ್ಲಿ 
ಊಟ, ಉಪಚಾರ, ವ್ಯವಹಾರಾದಿಗಳು 
ಶಿಕ್ಷಕನಂತೆ ಇರಬೇಕು.

ಷಷ್ಠ್ಯಬ್ದಿಪೂರ್ವ ಕಾಲದಲ್ಲಿ 
ನಾವು, ನೀವುಗಳು ಭವದ ಸುಪರ್ದಿನಲ್ಲಿದ್ದರೆ

ಷಷ್ಠ್ಯಬ್ದ್ಯೋತ್ತರ ಕಾಲದಲ್ಲಿ ನಾವು, ನೀವುಗಳು 
ಅನುಭವದ ಸುಪರ್ದಿನಲ್ಲಿರಬೇಕು.

ಈ ನಮ್ಮ ಬ್ರಹ್ಮಾಂಡ ಬದುಕಿನಲ್ಲಿ

ನಾವು, ನೀವುಗಳು 
“ಕಲಿಯೋದಕ್ಕಾಗಿ” 
ಅರವತ್ತು ವರುಷಗಳನ್ನು ಮೀಸಲಾಗಿರಿಸಿದರೆ

“ಕಲಿಸೋದಕ್ಕಾಗಿ” 
ನಲವತ್ತು ವರುಷಗಳನ್ನು ಮೀಸಲಾಗಿರಿಸಬೇಕು.

ನಲವತ್ತೋ, ಐವತ್ತೋ, ಇನ್ನೇನೋ, ಇನ್ನೊಂದೋ....

ಒಟ್ಟಿನಲ್ಲಿ, ನಾವು, ನೀವುಗಳು ಆಗ್ರಹಿಸಿದಷ್ಟಲ್ಲ, 
ಆ ಭಗವಂತ ಅನುಗ್ರಹಿಸಿದಷ್ಟು ಮಾತ್ರ...!!

ಡಾ. ಶಿವಾನಂದ ಶಿವಾಚಾರ್ಯರು 
ಹಿರೇಮಠ, ತುಮಕೂರು

March 29, 2021

ಸ್ವಸ್ತಿಕದ ಮಹತ್ವ


 “ಸು” ಹಾಗೂ “ಅಸ್” ಶಬ್ದಗಳಿಂದ ಕೂಡಿದ ಶಬ್ದ ಸ್ವಸ್ತಿಕ.”ಸು” ಎಂದರೆ ಶುಭ,ಕಲ್ಯಾಣ ಹಾಗೂ ಮಂಗಳಕರ.”ಅಸ್” ಎಂದರೆ ಅಸ್ತಿತ್ವ.”ಸ್ವಸ್ತಿಕ” ಎಂದರೆ ಮಂಗಳಮಯದಿಂದ ಕೂಡಿದ್ದು.

ನಮ್ಮ ಸಂಸ್ಕೃತಿಯ ಮಂಗಳಕಾರ್ಯಗಳು ಸ್ವಸ್ತಿವಾಚನದ ಮೂಲಕ ಪ್ರಾರಂಭವಾಗುತ್ತವೆ. “ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ ಸ್ವಸ್ತಿ ನ ಪೂಷಾ ವಿಶ್ವದೇವಾಃ | ಸ್ವಸ್ತಿ ನ ಸ್ತಾರ್ಕ್ಷ್ಯೋ ಅರಿಷ್ಟನೇಮಿಃ ಸ್ವಸ್ತಿ ನೋ ಬೃಹಸ್ಪತಿರ್ದದಾತು || (ಮಹಾನ್ ಕೀರ್ತಿಶಾಲಿ ಇಂದ್ರ ನಮಗೆ ಒಳಿತನ್ನು ಮಾಡಲಿ,ಜ್ಞಾನಸ್ವರೂಪ ಪೂಷಾದೇವ ನಮಗೆ ಮಂಗಳವನ್ನುಂಟು ಮಾಡಲಿ,ಭಗವಾನ್ ಗರುಡ ನಮಗೆ ಕಲ್ಯಾಣವನ್ನುಂಟುಮಾಡಲಿ,ಬೃಹಸ್ಪತಿ ದೇವ ನಮ್ಮನ್ನು ರಕ್ಷಿಸಲಿ) ಹೀಗೆ ಸೃಷ್ಟಿಯಲ್ಲಿರುವ ಸಮಸ್ತ ದೇವಾನುದೇವತೆಗಳು ನಮ್ಮನ್ನು ಪೋಷಿಸಲಿ ಎಂದು ಸಾರುತ್ತದೆ ಸ್ವಸ್ತಿ ಸೂಕ್ತ. ಸಹಸ್ರಾರು ವರ್ಷಗಳ ಹಿಂದೆಯೇ ಸ್ವಸ್ತಿಕ ರೂಪವನ್ನು ಕಂಡುಹಿಡಿದವರು ನಮ್ಮ ಋಷಿಮುನಿಗಳು.ಸ್ವಸ್ತಿಕದಲ್ಲಿರುವ ರೇಖೆಗಳು ಏಕಮೇವ ಅದ್ವಿತೀಯ ಬ್ರಹ್ಮನನ್ನು ಪ್ರತಿಪಾದಿಸುತ್ತವೆ.

ನಾಲ್ಕು ಬಿಂದುಗಳು ಭಗವಾನ್ ವಿಷ್ಣುವಿನ ನಾಲ್ಕು ಕೈಗಳನ್ನು ಪ್ರತಿನಿಧಿಸುತ್ತವೆ.ಭಗವಾನ್ ವಿಷ್ಣು ತನ್ನ ನಾಲ್ಕು ಭುಜಗಳಿಂದ ನಾಲ್ಕು ದಿಕ್ಕುಗಳನ್ನು ಸಂರಕ್ಷಿಸುತ್ತಾನೆ.ನಮ್ಮ ಸನಾತನಧರ್ಮದ ಪ್ರತೀಕ ಸ್ವಸ್ತಿಕ.ದೇವಾನುದೇವತೆಗಳ ಶಕ್ತಿ ಹಾಗೂ ಮನುಷ್ಯನ ಮಂಗಳಮಯ ಕಾಮನೆಗಳ ಸಂಗಮವೇ ಸ್ವಸ್ತಿಕ.ಸರ್ವಾಂಗಗಳಲ್ಲೂ ಮಂಗಳಮಯ ತೇಜಸ್ಸನ್ನು ಹೊಂದಿರುವ ಶುಭಕರ ಚಿಹ್ನೆ ಸ್ವಸ್ತಿಕ.

ಅನೇಕ ದೇಶಗಳಲ್ಲಿ ಇಂದಿಗೂ ಸ್ವಸ್ತಿಕವನ್ನು ರಾಜಚಿಹ್ನೆಯಾಗಿ ಅಥವಾ ಮಂಗಲಮಯಚಿಹ್ನೆಯನ್ನಾಗಿ ಗೌರವಿಸಲಾಗುತ್ತಿದೆ.

ಭಾರತೀಯ ಸಂಸ್ಕೃತಿಯಲ್ಲಿ ವಿವಾಹ,ದೀಪಾವಳಿ,ಸರಸ್ವತಿ,ಗಣೇಶ ಪೂಜೆಗಳಲ್ಲಿ,ಗೃಹಪ್ರವೇಶ,ಮಂದಿರಗಳ ಪ್ರವೇಶದ್ವಾರದಲ್ಲಿ,ಹಲವು ಮಂಗಳ ಕಾರ್ಯಗಳಲ್ಲಿ ಸ್ವಸ್ತಿಕಚಿಹ್ನೆಯನ್ನು ಬಳಸಲಾಗುತ್ತದೆ.ಸ್ವಸ್ತಿಕದಿಂದ ಮನೆಯಲ್ಲಿ ಅನ್ನ,ವಸ್ತ್ರ,ವೈಭವಕ್ಕೆಂದೂ ಕೊರತೆ ಬರುವುದಿಲ್ಲವೆಂಬ ನಂಬಿಕೆಯಿದೆ. 

ಲೋಕಾಃ ಸಮಸ್ತಾಃ ಸುಖಿನೋ ಭವಂತು..
 ಪ್ರದೀಪ ಹೆಗಡೆ .

ಭಕ್ತಿಯೆಂಬ ಪೃಥ್ವಿಯ ಮೇಲೆ

ಭಕ್ತಿಯೆಂಬ ಪೃಥ್ವಿಯ ಮೇಲೆ

ಗುರುವೆಂಬ ಬೀಜವಂಕುರಿಸಿ

ಲಿಂಗವೆಂಬ ಎಲೆಯಾಯಿತ್ತು.

ಲಿಂಗವೆಂಬ ಎಲೆಯ ಮೇಲೆ

ವಿಚಾರವೆಂಬ ಹೂವಾಯಿತ್ತು.

ಆಚಾರವೆಂಬ ಕಾಯಾಯಿತ್ತು.

ನಿಷ್ಪತ್ತಿಯೆಂಬ ಹಣ್ಣಾಯಿತ್ತು.

ನಿಷ್ಪತ್ತಿಯೆಂಬ ಹಣ್ಣು

ತೊಟ್ಟು ಕಳಚಿ ಬೀಳುವಲ್ಲಿ

ಕೂಡಲಸಂಗಮದೇವನು

ತನಗೆ ಬೇಕೆಂದೆತ್ತಿಕೊಂಡನು.

ಪ್ರಸ್ತುತ ವಚನದಲ್ಲಿ ರೂಪಕಗಳ ಸರಮಾಲೆಯಿದೆ.

ಈ ಮೂಲಕ ಭಕ್ತಿಯ ವಿಕಾಸ ಹಾಗೂ ಸಸ್ಯವೊಂದರ ಬೆಳವಣಿಗೆ ಇವುಗಳ ನಡುವಿನ ಸಮಾನಾಂತರತೆಯೊಂದನ್ನು ವಚನ ಮುಂದಿಡುತ್ತಿದೆ.

ಭಕ್ತಿಯನ್ನು ಸಾಮಾನ್ಯವಾಗಿ ಅದರ ಸ್ಥಗಿತತೆಯಲ್ಲಿ ಗ್ರಹಿಸುವುದು ನಮ್ಮ ರೂಢಿ. ಭಕ್ತಿ ಇರುವುದು ಅಥವಾ ಇಲ್ಲದಿರುವುದು – ಇದು ನಮ್ಮ ಸ್ಥಿತಿ ಅಥವಾ ಆಯ್ಕೆಗಳಲ್ಲಿ ಒಂದು. ಒಮ್ಮೆ ಭಕ್ತರಾದೆವೆಂದರೆ ಆ ಅನಂತರ ನಾವು ಎಂದೆಂದಿಗೂ ಭಕ್ತರೆ. ಹೀಗೆ ಭಕ್ತಿಯೆನ್ನುವುದು ನಮಗೆ ಒಂದು ಕಾಲಘಟ್ಟದಲ್ಲಿ ನೆಲೆಗೊಳ್ಳುವ ಒಂದು ಸಂಗತಿ. ಆದರೆ ವಚನದಲ್ಲಿ ಭಕ್ತಿ ಇದಕ್ಕೆ ವ್ಯತಿರಿಕ್ತವಾದ ಒಂದು ನೆಲೆಯಲ್ಲಿದೆ. ಇಲ್ಲಿ ಅದಕ್ಕೊಂದು ಚಲನಶೀಲತೆಯಿದೆ. ಜತೆಗೆ ಮುಖ್ಯವಾಗಿ ಅದಕ್ಕೊಂದು ಜೈವಿಕ ಸ್ವರೂಪವಿದೆ. ಹಂತದಿಂದ ಹಂತಕ್ಕೆ ಅದು ವಿಕಸನಗೊಳ್ಳುತ್ತ ಹೋಗುತ್ತದೆ. ಹೀಗಾಗಿ ಸಾಮಾನ್ಯವಾಗಿ ಮನೋಧರ್ಮವೆಂಬಂತೆ ಕಾಣಲಾಗುವ ಭಕ್ತಿ ಇಲ್ಲಿ ಅಸ್ತಿತ್ವವಾಗಿ ಪರಿವರ್ತಿತವಾಗಿದೆ. ಇಲ್ಲಿ ಭಕ್ತನಲ್ಲಿ ಭಕ್ತಿಯಿಲ್ಲ; ಭಕ್ತನೇ ಭಕ್ತಿಯೂ ಆಗಿದ್ದಾನೆ. ಭಕ್ತಿಯನ್ನು ಜೀವಂತವಾಗಿಸಬೇಕಿಲ್ಲ; ಜೀವಂತಿಕೆಯೇ ಭಕ್ತಿಯಾಗಿದೆ.

ಭಕ್ತಿ ಪೃಥ್ವಿಯಾಗುವುದೆಂದರೆ ಬೆಳವಣಿಗೆಯ ಸಾಧ್ಯತೆಯನ್ನು ಹುದುಗಿಸಿಕೊಂಡಂತೆ. ಇಲ್ಲಿ ಅಂಕುರಿಸುವುದು ಗುರುವೆಂಬ ಬೀಜ. ಗುರು ಬೀಜವಾಗುವುದೆಂದರೆ ಇಲ್ಲಿನ ಬೀಜದ ಹಿಂದೆ ಮತ್ತೊಂದು ಹಣ್ಣಿದೆಯೆಂದರ್ಥ. ಯಾವುದು ಸ್ವತಃ ಹಣ್ಣಾಗಿದೆಯೋ ಅದು ಮಾತ್ರವೇ ಮತ್ತೊಂದು ಹಣ್ಣಿನ ವಿಕಸನಕ್ಕೆ ಅಂಕುರಾರ್ಪಣ ಮಾಡಬಲ್ಲದು. ಇದು ಸಮಷ್ಟಿಯ ಅಸ್ತಿತ್ವವು ವ್ಯಷ್ಟಿಯ ಅಸ್ತಿತ್ವದಲ್ಲಿ ಮೈದಾಳುವ ವಿಧಾನವೂ ಹೌದು. ಹೀಗಾಗಿ ಇಲ್ಲೊಂದು ಜೈವಿಕ ಪರಂಪರೆಯ ಮುಂದುವರಿಕೆಯಿದೆ. ಅಲ್ಲದೆ ಬೀಜ ಅಂಕುರಿಸಬೇಕೆಂದರೆ ಮಣ್ಣು ಅದನ್ನು ತನ್ನೊಳಗೆ ಆಹ್ವಾನಿಸಿಕೊಳ್ಳಬೇಕು. ಹೀಗೆ ಭಕ್ತಿಯ ಮೂಲಭೂತ ಸ್ವರೂಪದಲ್ಲಿಯೇ ಸಮರ್ಪಣೆಯ ಗುಣವಿದೆ. ಯಾವುದು ಸಮರ್ಪಿಸಿಕೊಳ್ಳಬಲ್ಲುದೋ ಅದು ಮಾತ್ರ ವಿಸ್ತರಿಸಿಕೊಳ್ಳಬಲ್ಲುದು.

ಆ ವಿಸ್ತರಣೆಯ ವಿವರಗಳು ವಚನದಲ್ಲಿ ಮುಂದೆ ಕಾಣಿಸಿಕೊಳ್ಳುತ್ತವೆ. ‘ಗುರುವೆಂಬ ಬೀಜವಂಕುರಿಸಿ ಲಿಂಗವೆಂಬ ಎಲೆಯಾಯಿತ್ತು.’ ಒಂದು ಭೂತವಾದರೆ ಮತ್ತೊಂದು ವರ್ತಮಾನ. ಇದು ಇಲ್ಲಿ ‘ಇರಿಸಿದ’ ಲಿಂಗವಲ್ಲ; ‘ವಿಕಸಿಸಿದ’ ಲಿಂಗ, ‘ಬೆಳೆದ’ ಲಿಂಗ. ಭಕ್ತಿ ಅಸ್ತಿತ್ವವಾದಾಗ ದೈವಿಕತೆ ಆಂತರ್ಯದ ಸಂಗತಿಯಾಗುತ್ತದೆ. ‘ಲಿಂಗವೆಂಬ ಎಲೆಯ ಮೇಲೆ ವಿಚಾರವೆಂಬ ಹೂವಾಯಿತ್ತು.’ ಲಿಂಗಕ್ಕೂ ವಿಚಾರಕ್ಕೂ ಇರುವ ಸಂಬಂಧವೆಂದರೆ ಎಲೆಗೂ ಹೂವಿಗೂ ಇರುವ ಸಂಬಂಧ, ಸಹ-ಜ ಸಂಬಂಧ. ಹೀಗಾಗಿ ಇಲ್ಲಿ ವಿಚಾರ ಆರೋಪಿತವಾಗುವುದಿಲ್ಲ, ಲಿಂಗದೊಂದಿಗೆ ‘ಸಹಜ’ವಾಗುತ್ತದೆ. ಇದಲ್ಲದೆ ಲಿಂಗದೊಂದಿಗೆ ಪ್ರಸ್ತಾವವಾದಾಗ ಹೂವಿಗೆ ಒಂದು ಪೂಜೆಯ ಪರಿವೇಷವೂ ಉಂಟಾಗುವುದಷ್ಟೆ. ಪೂಜೆಯನ್ನು ಸಾಮಾನ್ಯವಾಗಿ ಒಂದು ಭಾವಕ ನೆಲೆಯಲ್ಲಿ ಪರಿಭಾವಿಸುವುದು ರೂಢಿ. ಆದರೆ ಇಲ್ಲಿ ವಿಚಾರವು ಹೂವಿನೊಂದಿಗೆ ಸಮೀಕರಣಗೊಂಡಿರುವುದು ಇಡಿಯ ಆರಾಧನೆಯ ಪ್ರಕ್ರಿಯೆಯು ಬೇರೊಂದು ಆಯಾಮದಲ್ಲಿ ವಿಸ್ತರಿಸಿಕೊಳ್ಳುವಂತೆ ಮಾಡುತ್ತದೆ. ಈ ಜೈವಿಕ ಕ್ರಿಯೆಯ ಮುಂದುವರಿಕೆಯಲ್ಲಿ ಹೂ ಕಾಯಾಗುತ್ತದೆ. ಇದಕ್ಕೆ ಸಮಾನಾಂತರವಾಗಿ ವಿಚಾರವು ಆಚಾರವಾಗುತ್ತದೆ. ವಿಚಾರವು ಆಚಾರವಾಗುವುದೆಂದರೆ ಅದು ಆಲೋಚನೆ ಮತ್ತು ಕ್ರಿಯೆಗಳ ನಡುವಿನ ಸಂಬಂಧದ ನೆಲೆಯೂ ಹೌದು. ಇಲ್ಲಿನ ಆಚಾರಕ್ಕೆ ವಿಶಿಷ್ಟ ಹಿಂದು-ಮುಂದುಗಳ ಸನ್ನಿವೇಶವಿದೆ. ಅದರ ಹಿಂದಿನ ತುದಿಯಲ್ಲಿ ವಿಚಾರವಿದ್ದರೆ ಮುಂದಿನ ತುದಿಯಲ್ಲಿ ನಿಷ್ಪತ್ತಿ (= ನಿಲುಗಡೆ, ಮುಕ್ತಿ) ಇದೆ. ಆಚಾರದ ಕ್ರಿಯೆಗಳು ಅದನ್ನು ಬಿಡುಗಡೆಯತ್ತ ಮುನ್ನಡೆಸಿದಾಗ ಮಾತ್ರ ಅದು ನಿಷ್ಪತ್ತಿಯೆಂಬ ಹಣ್ಣಿನಲ್ಲಿ ಪರ್ಯವಸಾನವಾಗಲು ಸಾಧ್ಯ. ವಚನದಲ್ಲಿ ಈ ಪ್ರಕ್ರಿಯೆ ಇನ್ನೂ ಮುಂದುವರಿಯುತ್ತದೆ. ‘ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಕಳಚಿ ಬೀಳುತ್ತದೆ’. ಇದು ಒಂದೆಡೆಯಿಂದ ತುದಿಯೂ ಹೌದು, ಇನ್ನೊಂದೆಡೆಯಿಂದ ಮೊದಲೂ ಹೌದು. ಒಂದೆಡೆಯಿಂದ ಇಲ್ಲಿ ಪೃಥ್ವಿಯ ಸಂಗದಿಂದ ಬಿಡಿಸಿಕೊಳ್ಳುವುದಿದ್ದರೆ ಇನ್ನೊಂದೆಡೆಯಿಂದ ಮತ್ತೆ ತನ್ನನ್ನು ಪೃಥ್ವಿಯ ಸನ್ನಿಧಿಗೆ ಒಪ್ಪಿಸಿಕೊಳ್ಳುವುದೂ ಇದೆ. ಭಕ್ತಿಯೆಂಬುದು ಬಿಡುಗಡೆಯೋ, ಬಂಧನವೋ? ಇಲ್ಲಿ ಬಿಡುಗಡೆಯಲ್ಲಿನ ಬಂಧನವೂ ಇದೆ, ಬಂಧನದಲ್ಲಿನ ಬಿಡುಗಡೆಯೂ ಇದೆ.

ಇಲ್ಲಿಂದ ಮುಂದೆ ವಚನ ನಮ್ಮನ್ನು ತನ್ನ ಶಿಖರದೆಡೆಗೆ ಕೊಂಡೊಯ್ಯುತ್ತದೆ. ‘ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಕಳಚಿ ಬೀಳುವಲ್ಲಿ ಕೂಡಲಸಂಗಮದೇವನು ತನಗೆ ಬೇಕೆಂದೆತ್ತಿಕೊಂಡನು.’ ಈ ಚಿತ್ರ ಇಲ್ಲಿನ ಇಡೀ ಭಕ್ತಿಯ ಪ್ರಕ್ರಿಯೆಗೆ ಒಂದು ಹೊಸ ತಿರುವನ್ನು ಕೊಡುತ್ತದೆ. ನಾವು ಸಾಮಾನ್ಯವಾಗಿ ಭಕ್ತಿಯನ್ನು ಭಕ್ತನ ಅಗತ್ಯವಾಗಿ ಗ್ರಹಿಸುತ್ತೇವೆ. ಆದರೆ ಇಲ್ಲಿ ಆ ಗ್ರಹಿಕೆ ಪಲ್ಲಟಗೊಂಡಿದೆ. ಇಲ್ಲಿ ಅದು ದೇವನ ಅಗತ್ಯವಾಗಿದೆ. ಸಮರ್ಪಣೆಯೊಂದಿಗೆ ತಳುಕುಹಾಕಿಕೊಂಡಿರುವ ಭಕ್ತಿ ಇಲ್ಲಿ ‘ಒಪ್ಪಿಸಿಕೊಳ್ಳುವಿಕೆ’ಗಿಂತ ಹೆಚ್ಚಾಗಿ ‘ಒಪ್ಪಿಕೊಳ್ಳುವಿಕೆ’ಯಲ್ಲಿ ಅರ್ಥವನ್ನು ಕಂಡುಕೊಳ್ಳುತ್ತಿದೆ. ಏಕೆಂದರೆ ಇಲ್ಲಿ ಯಾವುದೂ ಮಾಡಿದ್ದಲ್ಲ, ಎಲ್ಲವೂ ಆದದ್ದು – ಬೀಜವಂಕುರಿಸಿ ಎಲೆಯಾದಂತೆ, ಹೂವಾದಂತೆ ಕಾಯಾದಂತೆ, ಹಣ್ಣಾದಂತೆ.

ಉಪಮನ್ಯು

ನಂದ್ಯಾದಿ ಪ್ರಮುಥಗಣದಲ್ಲಿ ಒಬ್ಬನಾದ ಉಪಮನ್ಯು ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿಗೆ ಲಿಂಗ ದೀಕ್ಷಾ ಕೊಟ್ಡಿದ್ದು ಸತ್ಯವೆ ಎಂಬ ಒಂದು ಜಿಜ್ಞಾಸೆ

ಆವಾಹನೆ ಮಾಡುವಾಗ (ಸಾಕ್ಷಾತ್ ವೃಷಭ, ನಂದಿಯ ಅವತಾರ)

 ಉಪಮನ್ಯು
 ಕೂಡ ನಂದ್ಯಾದಿ ಚತುರ್ವಿಂಶತಿ ಪ್ರಮಥಗಣ  ಜನರಲ್ಲಿ ಅವರು ಬರುತ್ತಾರೆ.

ಪ್ರಮಥಗಣಂಗಳೇ ಶರಣರು
. ಈ ಪ್ರಮತ ರಲ್ಲಿ ಬಸವಣ್ಣನವರು ಬರುತ್ತಾರೆ ನಂದಿ ಅವತಾರವಾಗಿ 
ಎಂಬುದು ಇದು ಸತ್ಯ .
ಉಪಮನ್ಯು
ಅವರು ವಿಷ್ಣುವಿಗೆ ಲಿಂಗದೀಕ್ಷೆಯನ್ನು ಕೊಟ್ಟಿದ್ದಾರೆಂದು ವಚನದಲ್ಲಿದೆ ಹೇಳಿದೆ .

ಇಲ್ಲಿ ಒಂದು ವಚನದಲ್ಲಿ ಉರಿಲಿಂಗಪೆದ್ದಿ ಅವರು ಶಿವನ ಒಡ್ಡೋಲಗದಲ್ಲಿ ಇರುವವರು ಶರಣರು ಎಂದು ಹೇಳಿದ್ದಾರೆ. ಉಪಮನ್ಯು ಶರಣ ಎಂದು ಸೂಚಿಸಿದ್ದಾರೆ.

 ಗುರುವೆ ಪರಶಿವನು ಪರಶಿವನೇ ಶರಣಭರಿತನಾಗಿ ಎಮ್ಮ ಶರಣರೇ ಗುರು. ಒಂದು ದೀಕ್ಷೆಯಲ್ಲಿ ಗುರುವೆಂದಡೆ, ನಿಮಗೆಲ್ಲಕೆ ಕರ್ತನಹ ವಿಷ್ಣು ಎಮ್ಮ ಶರಣ ಉಪಮನ್ಯುವಿನ ಕೈಯಲ್ಲಿ ದೀಕ್ಷೆಯ ಪಡೆದು ಶಿಷ್ಯನಾದನು, ಅಂತಾಗೆ ಎಮ್ಮ ಶರಣರೆ ಗುರು. ಲಿಂಗಿನಾ ಸಹ ವರ್ತಿತ್ವಂ ಲಿಂಗಿನಾ ಸಹ ವಾದಿತಾ ಲಿಂಗಿನಾ ಸಹ ಚಿಂತಾ ಚ ಲಿಂಗಯೋಗೋ ನ ಸಂಶಯಃ ಲಿಂಗಾಂಗಿನಾ ಚ ಸಂಗಶ್ಶ ಲಿಂಗಿನಾ ಸಹವಾಸಿತಾ ಲಿಂಗೇನ ಸಹ ಭುಕ್ತಿಶ್ಯ ಲಿಂಗಯೊಗೋ ನ ಸಂಶಯಃ ಒಂದು ದೀಕ್ಷೆಯಲ್ಲಿ ಗುರುವೆ ನೀವು ? ನಿಮಗೆ ಕರ್ತರಹ ವಿಷ್ಣು ಬ್ರಹ್ಮ ಮೊದಲಾದವರನು ನಮ್ಮ ಶರಣರೆ ಶಿಕ್ಷಿಸಿಕೊಳ್ಳುತಿಹರಾಗಿ ನಮ್ಮ ಶರಣರೇ ಗುರು ಕಾಣಿರೋ ಸ್ವಾನುಭಾವದಲ್ಲಿ. ಗುರುವೆ ದೇವ ದಾನವ ಮಾನವರೆಲ್ಲರೂ ? ಪರಸ್ತ್ರೀಯರಿಗೆ ಅಳಪುವುದು ಹಿರಿದು ಗುರುತ್ವವೇ ? ಅಲ್ಲ. ಪರಧನ ಅನ್ಯದೈವ ಉಭಯವಿಜ್ಞಾನ ಅಜ್ಞಾನ, ದ್ವಂದ್ವಕ್ರಿಯಾ ವರ್ತಿಸುತ್ತಿಹರಾಗಿ. ಅದು ಕಾರಣ, ಸರ್ವರೂ ಲಘುವಾದರು ಅನುಭಾವಸಿದ್ಧಿಯಾದ ನಿಮ್ಮ ಶರಣರೇ ಗುರು. ಶಿವತನು ಲಿಂಗಪ್ರಾಣವಾದ ಬಳಿಕ ಉತ್ಪತ್ತಿಸ್ಥಿತಿಲಯವೆಂದು ಧ್ಯಾನಿಸುವೆ ಚಿಂತಿಸುವೆ ಅಂಜುವೆ ಮನವೇ ನೀನೊಂದು ಕ್ರಿಯಾಕರ್ಮ ಉಪಾಧಿಯಿಂದ. ತ್ರಿವಿಧಕ್ಕೆ ತತ್ಕ್ರಿಯಾಕರ್ಮ ಉಪಾಧಿಯಿಂದ ಈ ತ್ರಿವಿಧಕ್ಕೆ ತತ್ಕ್ರಿಯಾಕರ್ಮವ ಮಾಡಿ ಸಂಸಾರವ ಗೆಲಿವೆನೆಂಬೆ ಮನವೆ, ಇದು ಜ್ಞಾನವಲ್ಲ. ನಿರುಪಾಧಿಕನಾಗಿ ಮಹಾಲಿಂಗ ಕರುಣಿ ಶ್ರೀಗುರುವಾದ ಲಿಂಗವಾದ ಜಂಗಮವಾದ ಪ್ರಸಾದವಾದ ಲಿಂಗತನುವಾದ ಲಿಂಗಪ್ರಾಣವಾದ ಲಿಂಗಕ್ರೀಯಾದ. ಸರ್ವಕ್ರಿಯಾ ಕರ್ಮಂಗಳು ಲಿಂಗಕ್ರಿಯಾಕರ್ಮ, ಉತ್ಪತ್ತಿಸ್ಥಿತಿಲಯವೆಂಬುದಿಲ್ಲ ಸರ್ವವೂ ಲಿಂಗಸ್ಥಿತಿ, ದುಶ್ಚಿಂತೆಯ ಬಿಡು ನಿರುಪಾಧಿಕನಾಗು. ಗುರುಕರುಣಿಸಿದ ಲಿಂಗಕ್ಕೆ ನೀನು ಉಪಾಧಿಕ ಕ್ರೀಯ ಮಾಡದೆ ಸುಚಿತ್ತದಿಂದ ಮಹಾಲಿಂಗವನು ಧ್ಯಾನಿಸಿ ಪೂಜಿಸಿ ಚಿಂತಿಸಿ ಅಲ್ಲಿಯೇ ಸುಖಿಯಾಗು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ರಕ್ಷಿಸುವನು.

ಆಗಮಗಳು ಶಿವನಿಂದ ಉಪದೇಶಿಸಲ್ಪಟ್ಟವುಗಳಾಗಿವೆ. 
ಶಿವಮಹಾಪುರಾಣದ ವಾಯುಸಂಹಿತೆಯ ಅನುಸಾರ ಶೈವಾಗಮಗಳನ್ನು ಸ್ವತಂತ್ರ ಮತ್ತು ಶ್ರೌತ ಎಂದು ಎರಡು ಬಗೆಯಲ್ಲಿ ವೀಭಜಿಸಲಾಗಿದೆ. ಅವುಗಳಲ್ಲಿ ಕಾಮಿಕಾದಿ ವಾತುಲಾಂತ ಸಿದ್ದಾಂತ ವಾಚ್ಯಗಳಾದ ಇಪ್ಪತೆಂಟು ಆಗಮಗಳನ್ನು ಸ್ವತಂತ್ರಾಗಮಗಳು ಎಂದು ಕರೆಯಲಾಗುತ್ತದೆ. 
ಶ್ರೌತಾಗಮಗಳು ನೂರು ಕೋಟಿಯಷ್ಟು ವಿಸ್ತಾರವಾಗಿವೆ.
ಅವುಗಳನ್ನು ಪಾಶುಪತ , ವೃತ,ಮತ್ತು ಜ್ಞಾನ ಎಂದು ಕರೆಯಲಾಗುತ್ತದೆ.
ಅದರಲ್ಲಿ ಕ್ರೀಯಾ, ತಪ,ಜಪ,ಧ್ಯಾನ ಮತ್ತು ದಾನ ಎಂಬ ಹೆಸರಿನ ಐದು ಪರ್ವಗಳಿವೆ. 
  ಈ ಶಾಸ್ತ್ರಗಳನ್ನ ರುರು, ದಧೀಚಿ , ಅಗಸ್ತ್ಯ, #ಉಪಮನ್ಯೂ ಎಂಬ ಹೆಸರಿನ ನಾಲ್ಕು ಋಷಿಗಳು ಉಪದೇಶಿಸಿದ್ದಾರೆ.

ಧೌಮ್ಯನ ಅಣ್ಣನಾದ #ಉಪಮನ್ಯುವಿನಿಂದ ಶ್ರೀಕೃಷ್ಣನಿಗೆ  ಉಪದೇಶಿಸಲ್ಪಟ್ಟ ಜ್ಞಾನದ ಬಗ್ಗೆ 
ಮಹಾಭಾರತದ ವಾಯುಸಂಹಿತೆಯ ಉತ್ತರ ಭಾಗದಲ್ಲಿ ಸಂಗ್ರಹವಾಗಿದೆ.

ಉಮಾಪತಿರ್ಭುತಪತಿಃ ಶ್ರೀಕಂಠೋ ಬ್ರಹ್ಮಣಃ ಸುತಃ|
ಉಕ್ತವಾನಿದಮವ್ಯಗ್ರೋ ಜ್ಞಾನಂ ಪಾಶುಪತಂ ಶಿವಃ||
        (ಮಹಾಭಾರತ ಅನುಶಾಸನ ಪರ್ವ )
ವೈಷ್ಣವಾಗಮ ಮತ್ತು ಶಾಕ್ತಾಗಮಗಳ ಸ್ವರೂಪ ಮತ್ತು ದರ್ಶನವನ್ನು ಪ್ರೊ. ವಜ್ರವಲ್ಲಭ ದ್ವೀವೇದಿ ಅವರು ತಮ್ಮ
 " ಆಗಮ ಮೀಮಾಂಸಾ "ಎಂಬ ಸಂಶೋಧನಾ ಗ್ರಂಥದಲ್ಲಿ ವಿಸ್ತಾರವಾಗಿ ಹೇಳಿದ್ದಾರೆ.

ಮಾಹಿತಿ ಸಂಗ್ರಹ 
Dattatreya S Mulge

March 28, 2021

ಶ್ರೀ ಪ್ಲವನಾಮ ಸಂವತ್ಸರದ ಹಬ್ಬ ಹರಿದಿನಗಳು (2021-2022)

ಶ್ರೀ ಪ್ಲವನಾಮ ಸಂವತ್ಸರದ ಹಬ್ಬ ಹರಿದಿನಗಳು (2021-2022)
ಚೈತ್ರ ಮಾಸ: ಶುದ್ದ
13.04.2021  ಮಂಗಳವಾರ ಉಗಾದಿ ಹಬ್ಬ
21.04.2021  ಬುಧುವಾರ ಶ್ರೀ ರಾಮ ನವಮಿ
23.04.2021 ಶುಕ್ರವಾರ  ಏಕಾದಶಿ
27.04.2021  ಮಂಗಳವಾರ  ಪೌರ್ಣಿಮೆ, ಹನುಮ ಜಯಂತಿ

ಚೈತ್ರ ಬಹುಳ:ಕ್
07.05.2021 ಶುಕ್ರವಾರ ಏಕಾದಶಿ

ವೈಶಾಖ ಶುದ್ಧ:
14.05.2021 ಶುಕ್ರವಾರ ಅಕ್ಷಯ ತೃತೀಯ

23.05.2021 ಭಾನುವಾರ ಏಕಾದಶಿ

25.05.2021 ಮಂಗಳವಾರ ಶ್ರೀ ನರಸಿಂಹ ಜಯಂತಿ
ವೈಶಾಖ ಬಹುಳ.
06.06.2021 ಭಾನುವಾರ ಏಕಾದಶಿ
ಅಬ್ಬೂರು ಶ್ರೀ ಬ್ರಹ್ಮಣ್ಯ ತೀರ್ಥರ ಆರಾಧನೆ

ಜೇಷ್ಠ ಶುದ್ಧ:
21.06.2021 ಸೋಮವಾರ ಏಕಾದಶಿ
23.06.2021 ಬುಧುವಾರ ಮುಳಬಾಗಿಲು ಶ್ರೀ ಶ್ರೀಪಾದರಾಜರ ಆರಾಧನೆ

ಜೇಷ್ಠ ಬಹುಳ:
05.07.2021 ಸೋಮವಾರ ಏಕಾದಶಿ
07.07.2021 ಬುಧುವಾರ ಕುಂಭಕೋಣಂ ಶ್ರೀ ಶ್ರೀ ವಿಜಯೇಂದ್ರ ತೀರ್ಥರ ಆರಾಧನೆ

ಆಷಾಡ ಮಾಸದ ಶುದ್ಧ:
20.07.2021 ಮಂಗಳವಾರ ಪ್ರಥಮ ಏಕಾದಶಿ
ಆಷಾಡ ಬಹುಳ:
28.07.2021 ಬುಧುವಾರ ಮಳಖೇಡ ಶ್ರೀ ಜಯತೀರ್ಥರ ಆರಾಧನೆ
04.08.2021 ಬುಧುವಾರ ಏಕಾದಶಿ
08.8.2021 ಭಾನುವಾರ ಭೀಮನ ಅಮಾವಾಸ್ಯೆ

ಶ್ರಾವಣ ಮಾಸ ಶುದ್ದ:
12.08.2021 ಗುರುವಾರ ನಾಗಚತುರ್ಥಿ
13.08.21 ಶುಕ್ರವಾರ ನಾಗಪಂಚಮಿ
18.08.2021 ಬುಧವಾರ ಏಕಾದಶಿ
20.08.2021 ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ
21.08.2021 ಶನಿವಾರ ಋಗ್ವೇದ ಉಪಾಕರ್ಮ
22.08.2021 ಭಾನುವಾರ ಯಜುರ್ವೇದ ಉಪಾಕರ್ಮ
ಶ್ರಾವಣ ಬಹುಳ:
24.08.2021 ಮಂಗಳವಾರ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ
30.08.2021 ಸೋಮವಾರ ಶ್ರೀ ಶ್ರೀ ಕೃಷ್ಣ ಜನ್ಮಾಷ್ಟಮಿ
03.08.2021 ಶುಕ್ರವಾರ ಏಕಾದಶಿ

ಭಾದ್ರಪದ ಮಾಸದ ಶುದ್ಧ:
09.09.2021 ಗುರುವಾರ ಸ್ವರ್ಣಗೌರಿ ವ್ರತ
10.09.2021ಶುಕ್ರವಾರ ಶ್ರೀ ವಿನಾಯಕ ಚತುರ್ಥಿ
11.09.2021 ಶನಿವಾರ ಋಷಿಪಂಚಮಿ 
15.09.2021 ಬುಧುವಾರ ಶ್ರಿಜಗನಾಥ್ ದಾಸರ ಆರಾಧನೆ
17.09.2021 ಶುಕ್ರವಾರ ಏಕಾದಶಿ
19.09.2021 ಭಾನುವಾರ ಶ್ರೀ ಅನಂತ ಪದ್ಮನಾಭ ವ್ರತ

ಭಾದ್ರಪದ ಬಹುಳ:
02.10.2021 ಏಕಾದಶಿ
06.10.2021 ಬುಧವಾರ ಮಹಾಲಯ ಅಮಾವಾಸ್ಯೆ

ಆಶ್ವೀಜ ಶುದ್ಧ:
13.10.2021 ಬುಧವಾರ ಸರಸ್ವತಿ ಪೂಜೆ
14.10.2021 ಗುರುವಾರ ಮಹಾನವಮಿ
15.10.2021 ಶುಕ್ರವಾರ ವಿಜಯ ದಶಮಿ
16.10.2021 ಶನಿವಾರ ಏಕಾದಶಿ
 ಆಶ್ವೀಜ ಬಹುಳ:
01.11.2021 ಸೋಮವಾರ ಏಕಾದಶಿ
04.11.2021 ಗುರುವಾರ ನರಕ ಚತುರ್ದಶಿ

ಕಾರ್ತಿಕ  ಶುದ್ಧ:
05.11.2021 ಶುಕ್ರವಾರ ಬಲಿಪಾಡ್ಯಮಿ
14.11.2021ಭಾನುವಾರ ಶ್ರೀ ವಿಜಯದಾಸರ ಆರಾಧನೆ
15.11.2021 ಸೋಮವಾರ ಏಕಾದಶಿ
16.11.2021 ಮಂಗಳವಾರ ಉತ್ವಾನ ದ್ವಾದಶಿ

 ಕಾರ್ತಿಕ ಬಹುಳ:
22.11.2021 ಸೋಮವಾರ ಶ್ರೀ ಕನಕದಾಸರ ಆರಾಧನೆ
30.11.2021 ಮಂಗಳವಾರ ಏಕಾದಶಿ

ಮಾರ್ಗಶಿರ ಮಾಸದ ಶುದ್ಧ:
14.12.2021 ಮಂಗಳವಾರ ಏಕಾದಶಿ, ಗೀತ ಜಯಂತಿ
16.12.2021 ಗುರುವಾರ ಹನು ಮಧ್ವೃತ

ಮಾರ್ಗಶಿರ ಬಹುಳ
30.12.2021 ಗುರುವಾರ ಏಕಾದಶಿ

ಪುಷ್ಯ ಮಾಸ ಶುದ್ಧ:
13.01.2022 ಗುರುವಾರ ವೈಕುಂಠ ಏಕಾದಶಿ
15.01.2022 ಶನಿವಾರ ಮಕರ ಸಂಕ್ರಮಣ

 ಪುಷ್ಯ ಬಹುಳ:
25.01.2022 ಮಂಗಳವಾರ ಶ್ರೀ ಗೋಪಾಲದಾಸು ರ ಆರಾಧನೆ
28.01.2022 ಶುಕ್ರವಾರ ಏಕಾದಶಿ
01.02.2022 ಮಂಗಳವಾರ ಶ್ರೀ ಪುರಂದರ ದಾಸರ ಆರಾಧನೆ 

ಮಾಘಮಾಸ ಶುದ್ದ:
08.02.2022 ಮಂಗಳವಾರ ರಥಸಪ್ತಮಿ
10.02.2022 ಗುರುವಾರ ಶ್ರೀ ಮಧ್ವನವಮಿ 
12.02.2022 ಶನಿವಾರ ಏಕಾದಶಿ

ಮಾಘ ಬಹುಳ:
27.02.2022 ಭಾನುವಾರ ಏಕಾದಶಿ
01.03.2022 ಮಂಗಳವಾರ ಮಹಾ ಶಿವರಾತ್ರಿ

ಫಾಲ್ಗುಣ  ಶುದ್ಧ:
04.03.2022 ಶುಕ್ರವಾರ ಶ್ರಿಗುರುಸಾರ್ವಭೌಮರ ಪಟ್ಟಾಭಿಷೇಕ ದಿನ
14.03.2022 ಸೋಮವಾರ ಏಕಾದಶಿ

ಫಾಲ್ಗುಣ ಬಹುಳ:
20.03.2022 ಭಾನುವಾರ ಶ್ರೀ ಸುಧೀಂದ್ರ ತೀರ್ಥರ ಆರಾಧನೆ
21.03.2022 ಸೋಮವಾರ ಶ್ರೀ ವಾದಿರಾಜ ತೀರ್ಥರ ಆರಾಧನೆ
22.03.2022 ಮಂಗಳವಾರ ಶ್ರೀ ವ್ಯಾಸರಾಜರ  ಆರಾಧನೆ
28.03.2022 ಸೋಮವಾರ ಏಕಾದಶಿ

ಕೃಪೆ: ಶ್ರೀ ವ್ಯಾಸರಾಜ ಮಠದ ಪಂಚಾಗ

ಎಲ್ಲರಿಗೂ ಶ್ರೀ ಪ್ಲವನಾಮ ಸಂವತ್ಸರದ ಶುಭಾಶಯಗಳು.

ಪ್ರಸನ್ನ

ನಮ್ಮೊಳಗಿರುವ ರಾಕ್ಷಸತನ

ನಿಮ್ಮೊಳಗಿರುವ ರಾಕ್ಷಸನ ಪರಿಚಯ ನಿಮಗಿದೆಯೇ?

ಒಬ್ಬ ಮನುಷ್ಯನಲ್ಲಿರುವ ಒಳ್ಳೆಯ ಗುಣಗಳನ್ನು ಹುಡುಕಿ ಒಳ್ಳೆಯ ಮಾತುಗಳನ್ನಾಡಿದಾಗ ನೀವು ಖಂಡಿತ ಮನುಷ್ಯ ಗಣಕ್ಕೆ ಸೇರಿದವರೆಂದು ನಿಮಗೇ ಅರಿವಾಗುತ್ತದೆ. 
ಇನ್ನೊಬ್ಬರ ಕಷ್ಟ ಕಂಡು ಅಹಂಕಾರದಿಂದ ಆಡಿಕೊಳ್ಳದೆ, ಕೈಚಾಚಿ ಸಹಾಯ ಹಸ್ತ ನೀಡುವವನೂ ದೇವ ಗಣಕ್ಕೆ ಸೇರಿದವನೆಂದರೆ ತಪ್ಪಾಗಲಾರದು.

 ಕೆಲವು ಮನುಷ್ಯರ ಬಾಹ್ಯ ನಡವಳಿಕೆಯಿಂದ ಹಾಗೂ ಅವರ ಅಂತರಂಗದ ಚಿಂತನೆಗಳಿಂದ ಸುಲಭವಾಗಿ ಊಹಿಸಬಹುದು. 

ಅಪ್ಪ ಅಮ್ಮನ ಮಡಿಲಿನಲ್ಲಿ ಮೂಲಭೂತ ಸೌಕರ್ಯ ಪಡೆದುಕೊಳ್ಳುತ್ತಿರುವ ಬಾಲ್ಯಾವಸ್ಥೆಯಲ್ಲೂ ನಮ್ಮೊಳಗೊಬ್ಬ “ನಾನು’ ಎಂಬ ಸ್ವಾರ್ಥ ರಾಕ್ಷಸ ಬೆಳೆಯುತ್ತಿರುತ್ತಾನೆ. ಹಾಗೆಯೇ ವಯಸ್ಸಿಗೆ ಅನುಗುಣವಾಗಿ ನಮ್ಮ ಆಸೆ, ದುರಾಸೆಗಳು ಬೆಳೆಯುತ್ತಿರುತ್ತವೆ. ನಾವು ನಮ್ಮೊಳಗೆ ಹಲವು ಬಾರಿ ಲೆಕ್ಕಾಚಾರ ಹಾಕಿಕೊಂಡು ಅನಂತರ ಹೊರಗೆ ತೋರ್ಪಡಿಸಿಕೊಳ್ಳುತ್ತೇವೆ. ನಮ್ಮನ್ನು ನಾವೇ ಗಮನಿಸುತ್ತಾ ಹೋದರೆ, ನಮ್ಮ ಒಳಗಿರುವ ವ್ಯಕ್ತಿಯ ಪರಿಚಯ ನಮಗಾಗುತ್ತದೆ. 

ಹೊರಗಿನ ಪ್ರಪಂಚಕ್ಕೆ ಕಾಣುವ ವ್ಯಕ್ತಿಯೇ ಬೇರೆ, ಒಳಗಿರುವ ವ್ಯಕ್ತಿಯೇ ಬೇರೆ. ಅಂದರೆ ಒಂದು ರೀತಿ ಮುಖವಾಡ ಹಾಕಿಕೊಂಡಂತೆ. ಮುಖವಾಡದಲ್ಲಿ ಕಾಣುವ ವ್ಯಕ್ತಿ ಒಬ್ಬನಾದರೆ, ಮುಖವಾಡದ ಒಳಗಿರುವ ವ್ಯಕ್ತಿ ಇನ್ನೊಬ್ಬ. ಮುಖವಾಡದಲ್ಲಿ ಕಾಣುವ ಗುಣ-ಸ್ವಭಾವ ಒಂದಾಗಿದ್ದರೆ, ಮುಖವಾಡದ ಒಳಗೆ ಇನ್ನೊಂದು ಗುಣ-ಸ್ವಭಾವ. ಈ ಒಳಗಿನ ಗುಣ-ಸ್ವಭಾವವವನ್ನು ಅರ್ಥಾತ್‌ ರಾಕ್ಷಸನನ್ನು ನಾವು ಹೊರಗೆ ತೋರಿಸಿಕೊಳ್ಳುವುದೇ ಇಲ್ಲ. 

ರಾಕ್ಷಸ, ಮನುಷ್ಯ, ದೇವ ಗಣಗಳಿರುವ ಹಾಗೆ ಮನುಷ್ಯನಿಗೆ ಮೂರು ಗುಣಗಳು ಇರುತ್ತವೆ. ರಾಜಸಿಕ-ತಾಮಸಿಕ-ಸಾತ್ವಿಕ. ತಾಮಸ ಗುಣದವನು ಅತಿ ಪೊಗರು, ಗರ್ವ, ಅಹಂಕಾರದ ಮದದಿಂದ ಮೆರೆಯುತ್ತಿರುವವನಾದರೆ, ರಾಜಸ ಗುಣದವನು ಅಜ್ಞಾನ, ಸೋಂಬೇರಿ, ನಿರುತ್ಸಾಹಿ. ಎಲ್ಲವನ್ನೂ ಜಿಗುಪ್ಸೆಯಿಂದ ಕಾಣುತ್ತಾನೆ. 
ಆದರೆ ಸಾತ್ವಿಕ ಗುಣದವನು ಮಾತ್ರ ಅರಿಷಡ್ವರ್ಗಗಳನ್ನೂ ಹಿಡಿತದಲ್ಲಿಟ್ಟುಕೊಂಡು ಎಲ್ಲವನ್ನೂ ಎಲ್ಲ ಸಂದರ್ಭಗಳಲ್ಲೂ ಸಮತೋಲನದಲ್ಲಿ ಕಾಣುತ್ತಾನೆ. ಸಾತ್ವಿಕ ಗುಣದವನು ಹೊಗಳಿಕೆಗೆ ಹಿಗ್ಗುವುದೂ ಇಲ್ಲ ತೆಗೆಳಿಕೆಗೆ ಕುಗ್ಗುವುದೂ ಇಲ್ಲ. ಚಿತ್ತ ಚಾಂಚಲ್ಯವೂ ಇಲ್ಲ. ಆದ್ದರಿಂದ ಅವನನ್ನು ಅವನೊಳಗಿರುವ ರಾಕ್ಷಸನೂ ಯಾವ ಹೊತ್ತಿನಲ್ಲೂ ಯಾವುದೇ ಅಡ್ಡದಾರಿಗೆ ಕರೆದೊಯ್ಯಲು ಸಾಧ್ಯವಿಲ್ಲ.

 ನಮ್ಮಲ್ಲಿ ಕೆಲವರಿದ್ದಾರೆ, ದಿನ ಬೆಳಗಾದರೆ ಬೇರೆಯವರ ತಪ್ಪನ್ನು ಹುಡುಕುವುದೇ ಅವರ ಕೆಲಸ. ಯಾವತ್ತೂ ಇತರರ ಬಗ್ಗೆಯೇ ಅವರಿಗೆ ಚಿಂತೆ. ಯಾವ ಬಗ್ಗೆ, ಯಾವ ರೀತಿಯಲ್ಲಿ ಏನು ಕೆಟ್ಟ ಸುದ್ದಿಗಳನ್ನು ಹರಡುವುದು ಎಂಬುದೇ ಅವರ ಚಿಂತೆ, ಬೇರೆಯವರ ತಲೆಗೆ ಹುಳ ಬಿಟ್ಟು ಅವರ ಚೈತನ್ಯ ಕುಂದಿಸಲು ಹಾತೊರೆಯುವ ಕ್ಷುಲ್ಲಕ ಬುದ್ಧಿ. ಈ ಎಲ್ಲ ಬಾಲಿಶ ಹಾಗೂ ಅಪಾಯಕಾರಿ ಗುಣಗಳು 'ರಾಕ್ಷಸನ ಗಣ' ಕ್ಕೆ ಸೇರಿದವರ ಆಸ್ತಿ. 
ಈ ಕೆಟ್ಟ ಗುಣಗಳನ್ನು ಇಟ್ಟುಕೊಂಡು ಮೆರೆಯುವ ವ್ಯಕ್ತಿಗಳು ತಮ್ಮ ಜೀವನವನ್ನು ತಾವೇ ಕೆಳಮಟ್ಟಕ್ಕೆ ಇಳಿಯುತ್ತಿರುತ್ತೇವೆ ಎಂಬುದರ ಅರಿಲ್ಲದಷ್ಟು ಅಲ್ಪಜ್ಞಾನಿಗಳಾಗಿರುತ್ತಾರೆ.

 ಯಾವುದಕ್ಕೂ ಪ್ರತಿಕ್ರಿಯಿಸದೆ ತಾಳ್ಮೆಯಿಂದ ಎಲ್ಲವನ್ನೂ ಗೆಲ್ಲಬೇಕು. ಅದು ನಮ್ಮ ಗೆಲುವಿನ ಗುಟ್ಟೂ ಹೌದು. ಆತುರದಿಂದ ಯಾರು ಯಾರಿಗೂ ಬುದ್ಧಿ ಕಲಿಸಲು ಸಾಧ್ಯವಿಲ್ಲ. ನಿಮ್ಮೊಳಗಿರುವ ರಾಕ್ಷಸ ಆತುರದ ನಿರ್ಧಾರ ತೆಗೆದುಕೊಂಡು ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಲು ಬಿಡಬೇಡಿ, ನೀವು ಅದರ ತಂಟೆಗೆ ಹೋಗಬೇಡಿ. ಬೇರೆಯವರು ಕ್ರೂರಿಗಳಂತೆ, ರಾಕ್ಷಸರಂತೆ ವರ್ತಿಸಿದರೂ ನೀವು ಅವರಂತೆ ವರ್ತಿಸುವ ಅಗತ್ಯವಿಲ್ಲ. ಅವರಂತೆ ವರ್ತಿಸಿದರೆ, ನಿಮಗೂ ಅವರಿಗೂ  ವ್ಯತ್ಯಾಸವೇ ಇರುವುದಿಲ್ಲ  ಅಲ್ಲದೆ ಅವರ ಕೆಟ್ಟ ಗುಣಕ್ಕೆ ನೀವೇಕೆ ಪ್ರತಿಕ್ರಿಯೆ ನೀಡಬೇಕು? ನೀವು ನೀವಾಗಿರಬೇಕೇ ಹೊರತು ನೀವು ಅವರಾಗಬಾರದು. 

ರಾಕ್ಷಸ ಗುಣದವರು ಎಂದಿಗೂ ಸಾಧನೆಗೆ ಅರ್ಹರಲ್ಲ, ಅವರು ತಮ್ಮ ಕೈಯಲ್ಲಿರುವ ಸಣ್ಣ ಸಾಧನದಿಂದ ಬೇರೆಯವರ ಜೀವನವನ್ನೇ ಹಾಳುಮಾಡುವ ಶಕ್ತಿ ತಮ್ಮಲ್ಲಿದೆ ಎಂಬ ಒಣ ಜಂಭದಲ್ಲಿ ಮೈಮರೆಯುತ್ತಾರೆ. ಇದರಿಂದ ಅವರಿಗೆ ಯಾವತ್ತೂ ಜೀವನದಲ್ಲಿ ಬೆಳೆಯಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ಅವರು  ಸಾಧನೆಯ ಪಥದಿಂದ ದೂರ ಸರಿಯುತ್ತಿರುತ್ತಾರೆ. ಕೈಯಲ್ಲಿರುವ ಸಾಧನವೇ ಸಾಧನೆ ಎಂದು ಭ್ರಮಿಸುವ ಅವರು, ಸಾಧನ ಸಾಧನೆಯಲ್ಲ ಎಂಬುದನ್ನು ಮರೆತಿರುತ್ತಾರೆ. ಅದು ಅರಿವಾಗುವ ಹೊತ್ತಿಗೆ ಕಾಲ ಕಳೆದು ಹೋಗಿರುತ್ತದೆ. ಮತ್ತೆ ಉಳಿಯೋದು ಪಶ್ಚಾತ್ತಾಪ ಮಾತ್ರವಾಗಿರುತ್ತದೆ.

ನೀವು ಸಾತ್ವಿಕ ಗುಣದವರಾಗಿದ್ದಾಗ ನಿಮಗೆ ಜೀವನದಲ್ಲಿ ಸಾರ್ಥಕತೆಯ ಗೆಲವು ನಿಶ್ಚಿತ. ಯಶಸ್ಸಿನ ಹಾದಿಯಲ್ಲೇ ಮುನ್ನಡೆಯುತ್ತೀರಿ. ರಾಕ್ಷಸನ ಗುಣದವರಿದ್ದಾಗಲೇ ಸಾತ್ವಿಕ ಗುಣದವರಿಗೆ ಒಂದು ಬೆಲೆ ಇರುವುದು. 'ಜೀವನ ಒಂದು' 'ಸುಂದರ ಯದ್ಧಭೂಮಿ'. ಇಲ್ಲಿ ಪ್ರತಿನಿತ್ಯ ಸತ್ಯ, ಧರ್ಮ ಸಂತೋಷಕ್ಕಾಗಿ ಹೋರಾಟ ಮಾಡುವುದು ನಮ್ಮ ಧರ್ಮ. ನಾವು ಗೆದ್ದಾಗ ರಾಕ್ಷಸರು ಖಂಡಿತ ಕೆಳಗೆ ಬಿದ್ದೇ ಬೀಳುತ್ತಾರೆ. ಹಾಗೆ ನಮ್ಮೊಳಗಿರುವ ಮಾನವೀಯತೆ, ಧಾರ್ಮಿಕತೆ ಹೆಚ್ಚಾಗುತ್ತಿದ್ದಂತೆ ರಾಕ್ಷಸತನ ತಾನಾಗೇ ಕಡಿಮೆಯಾಗುತ್ತದೆ. 

ಮರಳುಗಾಡು

ಓದಿ ನಿಮಗೂ ಇಷ್ಟ ಆಗಬಹುದು.

ಮರಳುಗಾಡಿನಲ್ಲಿ ತನ್ನ ಗೆಳೆಯರ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಭಾರೀ ಮರಳುಗಾಳಿಗೆ ಸಿಲುಕಿ ಗುಂಪಿನಿಂದ ದೂರವಾದ. ದಾರಿ ಕಾಣದೆ ಕಳೆದು ಹೋದ. ಜನವಸತಿಯನ್ನು ಹುಡುಕಿ ಹೊರಟ. ಆದರೆ ಎತ್ತ ನೋಡಿದರೂ ಮರಳೇ ಮರಳು. ದಾರಿ ಕಾಣದಾದ. ಅಲೆದು ಅಲೆದು ಸುಸ್ತಾದ. ಆತನ ಬಳಿ ಇದ್ದ ಕ್ಯಾನ್ ಗಳಲ್ಲಿ ನೀರೂ ಖಾಲಿ ಆಗಿತ್ತು. ನೆತ್ತಿಯ ಮೇಲೆ ಸೂರ್ಯ ಸುಡುತ್ತಿದ್ದ. ಕೆಳಗೆ ಮರಳು ಕಾದ ಕೆಂಡವಾಗಿತ್ತು ನಡೆದು ನಡೆದು ಮೈಯಿಂದ ಬೆವರು ಇಳಿದು ಆ ವ್ಯಕ್ತಿ ನಿತ್ರಾಣನಾದ. ಇನ್ನು ತನಗೆ ನೀರು ಸಿಗದಿದ್ದರೆ ತನ್ನ ಜೀವ ಹೋಗುವುದು ಖಚಿತ ಎಂಬುದನ್ನು ಮನಗಂಡ. ಕೊನೆ ಉಸಿರಿರುವ ತನಕ ದಾರಿ ಹುಡುಕುವ ಛಲದಿಂದ ದೇವರ ಮೇಲೆ ಭಾರ ಹಾಕಿ ಮನಸ್ಸಿಗೆ ಸರಿ ಎನಿಸಿದ ದಿಕ್ಕಿನತ್ತ ಹೆಜ್ಜೆ ಹಾಕಿದ. ಸ್ವಲ್ಪ ದೂರ ನಡೆದ ಮೇಲೆ ಅವನಿಗೆ ಅಲ್ಲಿ ಒಂದು ಪಾಳು ಮನೆ ಕಾಣಿಸಿತು. ಈ ಮನೆಯಲ್ಲಿ ತನಗೆ ನೀರು ಸಿಗಬಹುದು ಎಂಬ ನಿರೀಕ್ಷೆಯಿಂದ ಅತ್ತ ಹೆಜ್ಜೆ ಹಾಕಿದ. ನೀರು, ಆಹಾರ ಇಲ್ಲದೆ ನಿತ್ರಾಣನಾಗಿದ್ದ ಅವನಿಗೆ ಅಷ್ಟು ದೂರ ನಡೆಯುವ ಶಕ್ತಿಯೂ ಇಲ್ಲದಾಗಿತ್ತು. ಸುಸ್ತಾಗಿ ಕುಸಿದು ಬಿದ್ದ, ಆದರೂ ಕೊನೆಯ ಆಸರೆ ಆ ಪಾಳು ಮನೆಯಲ್ಲಿ ಸಿಕ್ಕೀತು ಎಂದು ತೆವಳುತ್ತಾ ಸಾಗಿದ. ಕಷ್ಟ ಪಟ್ಟು ಆ ಮನೆಯ ಮುರಿದ ಬಾಗಿಲು ತಳ್ಳಿ ಒಳಹೋದ. ಕಾದ ನೆಲ, ಸುಡುತ್ತಿದ್ದ ಸೂರ್ಯನಿಂದಂತೂ ಮುಕ್ತಿ ದೊರಕಿತು. ಒಳ ಹೋದ ಆ ವ್ಯಕ್ತಿ ತನಗೆ ಕುಡಿಯಲು ನೀರು ಸಿಗುತ್ತದೆಯೇ ಎಂದು ಹುಡುಕಾಡಿದ. 
ಅಲ್ಲಿ ಒಂದು ನೀರೆತ್ತುವ ಯಂತ್ರ ಇತ್ತು, ಆ ಯಂತ್ರಕ್ಕೆ ಪೈಪ್ ಜೋಡಿಸಲಾಗಿತ್ತು. ಪಂಪ್ ತಿರುಗಲು ಚಕ್ರವನ್ನೂ ಅಳವಡಿಸಲಾಗಿತ್ತು. ಚಕ್ರ ತಿರುಗಿಸಲು ಹ್ಯಾಂಡಲ್ ಹಾಕಲಾಗಿತ್ತು. ಇದನ್ನು ನೋಡಿದ ವ್ಯಕ್ತಿ ನೀರಿಗಾಗಿ ಹ್ಯಾಂಡಲ್ ತಿರುಗಿಸಿದ. ಚಕ್ರ ತಿರುಗಿತು, ಮೋಟರ್ ಸಹ ತಿರುಗಿತಾದರೂ ಪೈಪ್ ನಿಂದ ನೀರು ಬರಲಿಲ್ಲ. ಚಕ್ರ ತಿರುಗಿಸಿ ತಿರುಗಿಸಿ ಸುಸ್ತಾದ ವ್ಯಕ್ತಿ. ಬೇರೆಲ್ಲಾದರೂ ನೀರು ಸಿಗುವುದೇ ಎಂದು ಹುಡುಕಿದ. ಆ ಪಾಳು ಮನೆಯ ಮೂಲೆಯಲ್ಲಿ ಒಂದು ಬಾಟಲಿ ಇತ್ತು. ಅದರಲ್ಲಿದ್ದ ನೀರು ಆವಿ ಆಗದಂತೆ ಮುಚ್ಚಳ ಹಾಕಲಾಗಿತ್ತು. ಸದ್ಯ ಬದುಕಿದೆಯಾ ಬಡಜೀವ ಎಂದು ನೀರು ಕುಡಿಯಲು ಆ ಬಾಟಲ್ ಮುಚ್ಚಳ ತೆಗೆದ, ಇನ್ನೇನು ನೀರು ಕುಡಿಯಬೇಕು ಎನ್ನುವಾಗ, ಬಾಟಲಿ ಮೇಲೆ ಅಂಟಿಸಲಾಗಿದ್ದ ಚೀಟಿ ಕಾಣಿಸಿತು. ಅದರಲ್ಲಿ ಹೀಗೆ ಬರೆದಿತ್ತು. ನೀವು ಈ ನೀರನ್ನು ಯಂತ್ರದ ಪಕ್ಕದಲ್ಲಿರುವ ಫನಲ್ ನಲ್ಲಿ ಹಾಕಿ. ನಂತರ ಗಾಲಿ ತಿರುಗಿಸಿ ಜೋರಾಗಿ ನೀರು ಬರುತ್ತದೆ. ಸ್ನಾನ ಮಾಡಿ, ನಿಮ್ಮ ಬಳಿ ಇರುವ ಕ್ಯಾನ್ ಗಳಲ್ಲಿ ನೀರು ತುಂಬಿಸಿಕೊಳ್ಳಿ ಬಳಿಕ ಮರೆಯದೆ ಈ ಬಾಟಲಿಗೂ ನೀರು ತುಂಬಿಸಿ ಮುಚ್ಚಳ ಮುಚ್ಚಿ, ನಿಮ್ಮಂತೆ ನೀರು ಹುಡುಕಿ ಬರುವವರಿಗೆ ಇದು ಸಹಾಯ ಆಗುತ್ತದೆ. ವ್ಯಕ್ತಿ ಗೊಂದಲಕ್ಕೆ ಬಿದ್ದ. ಕೈಯಲ್ಲಿರುವ ನೀರು ಕುಡಿಯುವುದೋ, ಇಲ್ಲ ಚೀಟಿಯಲ್ಲಿ ಬರೆದಿರುವಂತೆ ನೀರನ್ನು ಫನಲ್ ಗೆ ಹಾಕಿ ಗಾಲಿ ತಿರುಗಿಸಿ ಹೆಚ್ಚು ನೀರು ಪಡೆಯಲು ಪ್ರಯತ್ನ ಮಾಡುವುದೋ ಎಂದು ಯೋಚಿಸಿದ. ಆಕಸ್ಮಾತ್ ಹಳೆಯ ಪಂಪ್ ನಿಂದ ನೀರು ಬಾರದಿದ್ದರೆ ಏನು ಮಾಡುವುದು ನೀರು ಕುಡಿದೇ ಬಿಡೋಣ ಎಂದುಕೊಂಡ. ಈ ನೀರು ಎಷ್ಟು ಹೊತ್ತು ಇರಲು ಸಾಧ್ಯ. ಈಗ ಜೀವ ಉಳಿದರೂ ನಾನು ಜನವಸತಿ ಹುಡುಕಿ ಹೊರಟರೆ ಮತ್ತೆ ನೀರಡಿಕೆಯಿಂದ ಸಾಯುವುದು ಖಂಡಿತ. ಹೆಚ್ಚು ನೀರು ಸಿಕ್ಕರೆ  ಬಾಟಲಿ, ಕ್ಯಾನ್ ಗಳಿಗೆ ತುಂಬಿಸಿಕೊಂಡು ಮುಂದೆ ಸಾಗಬಹುದು ಎಂದು ದೃಢ ನಿರ್ಧಾರ ಮಾಡಿ ಬಾಟಲಿಯಲ್ಲಿದ್ದ ನೀರನ್ನು ಪಂಪ್ ನ ಫನಲ್  ಮುಚ್ಚಳ ತೆರೆದು ಹಾಕಿದ, ಗಾಲಿ ತಿರುಗಿಸಿದ ಯಥೇಚ್ಛವಾಗಿ ನೀರು ಬಂತು. ಸ್ನಾನ ಮಾಡಿದ ಆಯಾಸ ತೀರಿಸಿಕೊಂಡ. ತನ್ನ ಬಾಟಲಿಗಳಿಗೆ, ಕ್ಯಾನ್ ಗಳಿಗೆ ನೀರು ತುಂಬಿಸಿದ. ಆ ಪುಟ್ಟ ಕ್ಯಾನ್ ಗೂ ನೀರು ಹಾಕಿ ಆ ಚೀಟಿಯ ಕೆಳಗೆ ಈ ಯಂತ್ರ ನೀರು ಹಾಕಿದರೆ ಕೆಲಸ ಮಾಡುತ್ತದೆ. ಅಂಜಿಕೆ ಬೇಡ ಎಂಬ ಸಾಲು ಸೇರಿಸಿದ. ಬಳಿಕ ಇನ್ನೇನು ಹೊರಡಬೇಕು ಎಂದು ಬಾಗಿಲು ತೆಗೆದಾಗ ಆ ಬಾಗಿಲ ಹಿಂದೆ ಜನವಸತಿಗೆ ಸಾಗುವ ದಾರಿ ತೋರುವ ನಕ್ಷೆ ಕಾಣಿಸಿತು. ಆ ನಕ್ಷೆಯ ಮಾರ್ಗ ಅನುಸರಿಸಿ ಊರು ಸೇರಿದ.
ನಾವು ಯಾವಾಗಲೂ ಜೀವನದಲ್ಲಿ ಹತಾಶರಾಗಬಾರದು. ಕೊನೆ ಕ್ಷಣದವರೆಗೂ ಹೋರಾಟ ಮಾಡಬೇಕು.  ಎಲ್ಲಕ್ಕಿಂತ ಮಿಗಿಲಾಗಿ ನಾವು ಈ ಸಮಾಜಕ್ಕೆ ಏನಾದರೂ ಕೊಟ್ಟರೆ ನಮಗೆ ಸಮಾಜ ಏನನ್ನಾದರೂ ಕೊಡುತ್ತದೆ ಎಂಬುದನ್ನು ಅರಿಯಬೇಕು. ಆ ವ್ಯಕ್ತಿ ತಾನು ಇದ್ದ ನೀರು ಕುಡಿಯದೆ ಪ್ರಯತ್ನ ಮಾಡಿದ್ದಕ್ಕೆ ಅವನಿಗೆ ಯಥೇಚ್ಛ ನೀರು ಸಿಕ್ಕಿತು. ಮತ್ತೆ ಆತ ಬಾಟಲಿಗೆ ನೀರು ತುಂಬಿಸಿಟ್ಟಿದ್ದರಿಂದ ಮುಂದೆ ಬರುವವರಿಗೂ ಅದು ನೆರವಾಗುವಂತಾಯಿತು. ನಾವು ಸದಾ ಭವಿಷ್ಯದ ಚಿಂತನೆ ಮಾಡಿದರೆ ಬದುಕು ಬಂಗಾರವಾಗುತ್ತದೆ. ಸ್ವಾರ್ಥಕ್ಕೆ ಸಿಲುಕಿದರೆ ಬದುಕು ನಾಶವಾಗುತ್ತದೆ. 
ಕೃಪೆ - Watsup

'ವಿಷ'ಯ


ಒಂದು ದಿನ ಸಾಕ್ರಟಿಸ್ ಏಕಾಂಗಿಯಾಗಿ ತಮ್ಮ ಮನೆ ಅಂಗಳದಲ್ಲಿ ನಡೆದಾಡುತ್ತಿದ್ದಾಗ ಅವನಿಗೆ ಸ್ನೇಹಿತನೊಬ್ಬ, ‘ಸಾಕ್ರಟಿಸ್, ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ, ಆ ಸಂಗತಿ ನಿನಗೆ ಗೊತ್ತಿದೆಯಾ?’ ಎಂದು ಕೇಳಿದ.
ಅದಕ್ಕೆ ಸಾಕ್ರಟಿಸ್, "ಒಂದು ನಿಮಿಷ ತಾಳು, ನೀನು ಆ ವಿಷಯ ಹೇಳುವ ಮೊದಲು ನಿನಗೊಂದು ಮೂರು ಹಂತದ ಪರೀಕ್ಷೆಯೊಡ್ಡುತ್ತೇನೆ. ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ" ಎಂದ.
ಅದಕ್ಕೆ ಆತ ಒಪ್ಪಿಕೊಂಡ.
‘ಮೊದಲ ಹಂತ ಅಂದ್ರೆ ಸತ್ಯ. ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿರಬೇಕು, ಆಯಿತಾ?’ ಎಂದ ಸಾಕ್ರಟೀಸ್.
ಅದಕ್ಕೆ ಸ್ನೇಹಿತ ‘ಅದು ಸತ್ಯ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ. ನನಗೆ ಯಾರೋ ಹೇಳಿದರು. ನಾನು ಅದನ್ನು ಕೇಳಿದೆ ಅಷ್ಟೆ’ ಎಂದ.
ಅವನ ಮಾತಿಗೆ ಸಾಕ್ರಟಿಸ್, ‘ಹೌದಾ? ಆದರೆ ನೀನು ಹೇಳೋದು ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು.
ಹಾಗಾದರೆ ಈಗ ಎರಡನೆ ಹಂತದ ಪರೀಕ್ಷೆ. ಇದು goodness ಪರೀಕ್ಷೆ.
ಅಂದರೆ ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ?’ ಎಂದು ಕೇಳಿದ.
ಅದಕ್ಕೆ ಸ್ನೇಹಿತ, ‘ಇಲ್ಲ…ಇಲ್ಲ… ಅದು ಒಳ್ಳೆಯ ವಿಷಯವಲ್ಲ’ ಎಂದ.
‘ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿ ಕೆಟ್ಟದ್ದು ಅಂತಾಯಿತು. ಅಂದರೆ ಅದು ಸತ್ಯ ಸಂಗತಿ ಹೌದೋ ಅಲ್ಲವೋ ಎಂಬುದು ನಿನಗೆ ಗೊತ್ತಿರದಿದ್ದರೂ ಪರವಾಗಿಲ್ಲ. ನೀನು ಅವನ ಬಗ್ಗೆ ಕೆಟ್ಟದನ್ನು ಹೇಳಬೇಕೆಂದು ಬಯಸಿದ್ದೀಯಾ ಅಂತಾಯಿತು’ ಎಂದ ಸಾಕ್ರಟಿಸ್.
ಈ ಮಾತನ್ನು ಕೇಳಿ ಸ್ನೇಹಿತನ ಮುಖ ಬಿಳುಚಿಕೊಂಡಿತು. ಒಂದು ಕ್ಷಣ ಆತ ತಬ್ಬಿಬ್ಬಾದ.
ಸಾಕ್ರಟಿಸ್ ಮುಂದುವರಿಸಿದ ‘ನನ್ನ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಿನಗೆ ಇನ್ನೂ ಒಂದು ಅವಕಾಶವಿದೆ. ಮೂರನೆ ಹಂತದ ಪರೀಕ್ಷೆಯನ್ನು ಒಡ್ಡುತ್ತೇನೆ. ಈ ಹಂತಕ್ಕೆ ಉಪಯುಕ್ತತೆ ಹಂತ ಎಂದು ಹೆಸರು. ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿಯಿಂದ ನನಗಾಗಲಿ, ಸಮಾಜಕ್ಕಾಗಲಿ ಅಥವಾ ನಿನಗಾಗಲಿ ಯಾವುದಾದರೂ ರೀತಿಯಿಂದ ಪ್ರಯೋಜನವಾಗುತ್ತದೆ, ಉಪಯೋಗವಾಗುತ್ತದೆ ಎಂದು ನಿನಗೆ ಅನಿಸುತ್ತಿದೆಯಾ?’
ಅದಕ್ಕೆ ಸ್ನೇಹಿತ, ಇಲ್ಲ ಅದರಿಂದ ಯಾರಿಗೂ ಲಾಭವಾಗುತ್ತದೆಂದು ನನಗೆ ಅನಿಸುತ್ತಿಲ್ಲ’ ಎಂದ.
ಆ ಸ್ನೇಹಿತನನ್ನು ಹತ್ತಿರಕ್ಕೆ ಕರೆದ ಸಾಕ್ರಟಿಸ್ ನುಡಿದ-‘ಅಯ್ಯಾ, ನೀನು ಹೇಳಲಿರುವ ಸಂಗತಿ ಸತ್ಯವೋ, ಸುಳ್ಳೋ ಎಂಬುದು ಗೊತ್ತಿಲ್ಲ. ಅದರಿಂದ ಯಾವ ಪುರುಷಾರ್ಥ ಸಾಧನೆಯಾಗುತ್ತದೆಂಬುದೂ ಗೊತ್ತಿಲ್ಲ. ಅದರಿಂದ ನನಗಾಗಲಿ, ನಿನಗಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ. ಹೀಗಿರುವಾಗ ಅಂಥ ವಿಷಯವನ್ನು ನನಗೇಕೆ ಹೇಳುತ್ತೀಯಾ? ನಿನ್ನ ಬಾಯಿ ಚಪಲ ತೀರಿಸಿಕೊಳ್ಳಲು ಬೇರೆಯವರ ಬಗ್ಗೆ ಇಲ್ಲಸಲ್ಲದ ಸಂಗತಿ ಹೇಳ್ತೀಯಲ್ಲ, ನಿನಗೆ ನಾಚಿಕೆ ಆಗೊಲ್ಲವಾ? ನಾಲ್ಕು ಜನರಿಗೆ ಉಪಯೋಗವಾಗುವ ಕೆಲಸವಿದ್ದರೆ ಮಾಡು, ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡು" ಎಂದು ಹೇಳಿದರು.
ಈ ದೃಷ್ಟಾಂತದ ಮೂಲಕ ಹೇಳಬಯಸುವುದೇನೆಂದರೆ...
ಸ್ನೇಹಿತರೆ,
ಪ್ರತಿ ನಿತ್ಯ ಸಾಕ್ರೆಟಿಸ್‌ನಿಗೆ ಅವನ ಸ್ನೇಹಿತ ಹೇಳಲು ಬಂದಂತೆ ನಮಗೆಲ್ಲರಿಗೂ ನಮ್ಮ ಸ್ನೇಹಿತರು ಹಲವಾರು ವಿಷವಾಗುವ ವಿಷಯವನ್ನು ತರುತ್ತಿರುತ್ತಾರೆ. ಅದು ಎಷ್ಟು ಅವಶ್ಯಕ ಎಂಬುದನ್ನು ಅರಿತು ಆಲಿಸಬೇಕು. ಹಾಗೆಯೇ ನೀವು ಇನ್ನೊಬ್ಬರಿಗೆ ಮುಟ್ಟಿಸಬೇಕೆನ್ನುವ 'ವಿಷ'ಯ 'ವಿಷ'ವಾಗದಿರುವಂತೆ ಎಚ್ಚರ ವಹಿಸಬೇಕು. ಏಕೆಂದರೆ ಸಂಬಂಧಗಳು ಬಹಳ ಮುಖ್ಯ.
✍ ಚನ್ನೇಶಶಾಸ್ತ್ರಿಗಳು

March 27, 2021

ಅಮಾತ್ಯನೆಂದರೆ.... ಋಗ್ವೇದ

ಅಮಾತ್ಯನೆಂದರೆ . . . . 

ಋಗ್ವೇದದ 10ನೇ ಮಂಡಲದ 39ನೇ ಸೂಕ್ತದ ದೃಷ್ಟಾರೆ ಬ್ರಹ್ಮವಾದಿನಿ ಎನ್ನಿಸಿಕೊಂಡಿದ್ದ ಘೋಷಾ ಎನ್ನುವವಳದ್ದು. ಈಕೆ ಕಕ್ಷೀವಂತ ಎನ್ನುವವನ ಮಗಳು. ಈ ಸೂಕ್ತ ದೃಷ್ಟಾರೆ ತೊನ್ನಿನಂತಹ ಕೆಟ್ಟ ರೋಗದಿಂದಾಗಿ ತನ್ನ ಸಹಜ ರೂಪದಿಂದ ವಿಕೃತಿ ಹೊಂದಿದ್ದಳು. ಈ ಕಾರಣದಿಂದಾಗಿ ಅರವತ್ತು ವರ್ಷ ಕಳೆಯುವ ತನಕವೂ ತನ್ನ ತಂದೆಯ ಮನೆಯಲ್ಲಿಯೇ ಉಳಿಯ ಬೇಕಾಯಿತು. ಕಾಲಾನುಕ್ರಮದಂತೆ ನಡೆಯಬೇಕಾದ ವಿವಾಹ ಸಂಸ್ಕಾರದಿಂದ ವಂಚಿತಳಾಗಿ ಪುತ್ರನನ್ನು ಪಡೆಯಲು ಅಸಮರ್ಥಳಾಗಿ ಉಳಿಯಬೇಕಾಗಿ ಬಂದಾಗ ಆಕೆಗೆ ಸಹಜವಾಗಿ ಜಿಗುಪ್ಸೆ ಕಾಡುತ್ತದೆ. ಘೋಷಾ ಸ್ವಭಾವತಃ ಸಾಧಕರ ವಂಶದಿಂದ ಬಂದವಳು. ತಾನು ಕೂಡ ಸಾಧಕಿಯಾಗಲು ನಿರ್ಧರಿಸುತ್ತಾಳೆ. ತನ್ನ ಅಜ್ಜ, ತನ್ನ ಅಪ್ಪನಂತೆಯೇ ಈಕೆ ಸಹ ಅಶ್ವಿನೀದೇವತೆಗಳ ಸಹಾಯವನ್ನು ಯಾಚಿಸಿಕೊಳ್ಳುತ್ತಾಳೆ ಅದೇ ಅವಳು ಕಂಡುಕೊಂಡ ಸೂಕ್ತಗಳಾಗುತ್ತವೆ. ಸೂಕ್ತ ದೃಷ್ಟಾರಳಾಗುತ್ತಾಳೆ. ಮುಂದೆ ಈಕೆ ತನಗೆ ಬಂದ ತೊನ್ನಿನ ರೋಗದಿಂದಗುಣಮುಖಳಾಗಿ ವಿವಾಹವಾಗಿ ಸುಹಸ್ತ್ಯ ಎನ್ನುವ ಮಗನನ್ನು ಪಡೆಯುತ್ತಾಳೆ. ಈ ರೋಗದ ಕುರಿತಾಗಿ ಮತ್ತು ಮುಪ್ಪಿನಿಂದ ಮರಳಿ ಯೌವನವನ್ನು ಪಡೆಯಬಹುದೆನ್ನುವ ಕುರಿತಾಗಿಯೂ ಸಿಗುವುದು ಇಲ್ಲಿಯೇ. ಅದೇನೇ ಇರಲಿ ನನಗೆ ಇಲ್ಲಿ ಗಮನಸೆಳೆದದ್ದು  ’ಅಮಾಜುರಶ್ಚಿದ್ಭವತೋ’ ಎಂದು ಅದೇ ಸೂಕ್ತದಲ್ಲಿ ಬರುತ್ತದೆ. ಅಂದರೆ ವಿವಾಹವಿಲ್ಲದೇ ತಂದೆಯ ಮನೆಯಲ್ಲಿಯೇ ನಾನು ಉಳಿಯಬೇಕಾಯಿತು ಎನ್ನುವ ಅರ್ಥ. ಇಲ್ಲಿ ಅಮಾ ಎನ್ನುವ ಒಂದೇ ಒಂದು ಪದವನ್ನು ನಾನು ಗಮನಿಸುವುದಾದರೆ ಅಮಾ ಎನ್ನುವುದು ಸಮೀಪಸ್ಥಾನ ಅಥವಾ ಮನೆ ಎನ್ನುವ ಅರ್ಥವನ್ನು ನೀಡುತ್ತದೆ. 
ಇನ್ನು ಬೃಹಸ್ಪತಿಯ ಮಗ ಭರದ್ವಾಜನು ಇಂದ್ರನನ್ನು ಕುರಿತು ಸ್ತುತಿಸುವ ಋಗ್ವೇದದ ಆರನೇ ಮಂಡಲದ ೨೪ನೇ ಸೂಕ್ತದಲ್ಲಿ ’ಅಮಾ ಚೈನಮರಣ್ಯೇ ಪಾಹಿ’ ಎನ್ನುವಲ್ಲಿಯತೂ ಸಹ ಮನೆಯಲ್ಲಾಗಲಿ ಅಥವಾ ಅರಣ್ಯದಲ್ಲಿಯೇ ಇರಲಿ ಕ್ಷುದ್ರಪ್ರಾಣಿಗಳಿಂದ ರಕ್ಷಿಸು ಎನ್ನುವ ಪ್ರಾರ್ಥನೆ ಇದೆ. ಇಲ್ಲಿ ಅಮಾ ಎನ್ನುವುದು ವಾಸಸ್ಥಾನ ಅಥವಾ ಗೃಹವನ್ನು ಕುರಿತಾಗಿ ಹೇಳಲಾಗಿದೆ. ಇನ್ನು ಗೃತ್ಸಮದನೆನ್ನುವ ಋಷಿಯು ಸವಿತೃದೇವತೆಯನ್ನು ಕುರಿತಾಗಿ ಸ್ತುತಿಸುವ ಎರಡನೇ ಮಂಡಲದ 38ನೇ ಸೂಕ್ತದಲ್ಲಿ ’ಕಾಮಶ್ಚರತಾಮಮಾಭೂತ್’ ಎನ್ನುವಲ್ಲಿ ಅಮಾ ದಮ ಇತಿ ಗೃಹನಾಮ ಎಂದು ಭಾಷ್ಯಕಾರರು ಹೇಳುತ್ತಾರೆ. ಅಮಾ ಎಂದರೆ ಮನೆ ಅಥವಾ ವಾಸಸ್ಥಳ. ಯುದ್ಧಕ್ಕೆ ಹೊರಟ ಯೋಧನು ಹಿಂತಿರುಗಿ ಮನೆಯನ್ನು ಸೇರುತ್ತಾನೆ ಎನ್ನವ ಸಂದರ್ಭ ಇದೆ. ಗೃತ್ಸಮದಋಷಿಯು ಇಂದ್ರನನ್ನು ಸ್ತುತಿಸುತ್ತಾ ಎರಡನೇ ಮಂಡಲದ 17ನೇ ಸೂಕ್ತದಲ್ಲಿ ’ಅಮಾಜೂರಿವ ಪಿತ್ರೋಃ ಸಚಾ ಸತೀ’ ಇದಕ್ಕೆ ಭಾಷ್ಯಕಾರರು ಯಾವಜ್ಜೀವಂ ಗೃಹೇ ಏವ ಜೀರ್ಯಂತೀ’ ಎನ್ನುತ್ತಾರೆ. ಅಂದರೆ ವೃದ್ಧಾಪ್ಯದ ತನಕವೂ ತನ್ನ ತಂದೆಯಮನೆಯಲ್ಲಿಯೇ ತಂದೆಯ ಶುಶ್ರೂಷೆಯಲ್ಲಿದ್ದದ್ದನ್ನು ಹೇಳುವುದಾಗಿದೆ. ಸಾಮಾನ್ಯವಾಗಿ ಅಮಾ ಎಂದು ನಾವು ಶಬ್ದವನ್ನು ಕೇಳುವುದು ಆಕಾಶದಲ್ಲಿ ಸೂರ್ಯನಿಲ್ಲದ ದಿನ ಅಂದರೆ ಹುಣ್ಣಿಮೆಯ ನಂತರದ ಹದಿನೈದನೆಯದಿನ. ಅಂದರೆ ಅಲ್ಲಿಯೂ ಅಮಾ ಎನ್ನುವುದು ಸಮೀಪ ಅತವಾ ಜೊತೆಯಗಿರು ಎನ್ನುವ ಅರ್ಥ ಎಂದು ಕೆಲವು ಶಬ್ದಕೋಶಗಳು ಹೇಳುತ್ತವೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ೧:೫:೨ ರಲ್ಲಿ ’ಅಮೈವಾಸಾಂ ತದ್ಭವತಿ’ ಎನ್ನುವುದಾಗಿ ಬರುತ್ತದೆ. ಅಲ್ಲಿ ಅದು ಜೊತೆಗೆ, ಹತ್ತಿರದಲ್ಲಿ ಮತ್ತು ಸನಿಹ ಎನ್ನುವ ಅರ್ಥವನ್ನು ನೀಡುತ್ತದೆ.  
ಅಮಾತ್ಯ ಎಂದು ಮಂತ್ರಿಗಳಿಗೆ ಹೇಳಲಾಗುತ್ತದೆ. ಅಂದರೆ ರಾಜನ ಆಡಳಿತದ ಅಧಿಕಾರಿ ವರ್ಗ ಅದು. ಅಲ್ಲಿ ಅಮಾತ್ಯ ಎನ್ನುವುದು ಸಹ ಸದಾಕಾಲ ರಾಜನಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡುವವರಾಗಿ ಸಮೀಪಸ್ಥರಾಗಿರುವವರು ಅಮಾತ್ಯರು.
ಅಮಾ ಸಹ ಸಮೀಪೇ ಚ ಎಂದು ಅಮರಕೋಶದಲ್ಲಿಯೂ ಬರುತ್ತದೆ. ಅಥರ್ವ ವೇದದಲ್ಲಿ  ಗೌ ಸೂಕ್ತದಲ್ಲಿ ಹಸುವಿಗೆ ಗರ್ಭಪಾತವಾದಾಗ ಯಾವ ಆಹಾರವನ್ನು ಹತ್ತಿರದಲ್ಲಿಡಬೇಕು ಎನ್ನುವುದನ್ನು ಹೇಲಲಾಗುದೆ. ಹೀಗೇ ಅಮಾ ಎನ್ನುವುದು ಸಮೀಪ ಅಥವಾ ವಾಸದ ಸ್ಥಳ ಎನ್ನುವುದು ಸ್ಪಷ್ಟ. ಆದರೂ ಅಮಾತ್ಯ ಮತ್ತಉ ಅಮಾವಾಸ್ಯಾ ನಮಗೆ ಸುಪರಿಚಿತ ಪದಗಳು.

#ಅಮಾ_ಗೃಹ
ಸದ್ಯೋಜಾತರು

ಯಾರು ಕಲಿಯ ಬಹುದು ಯಾರು ಕಲಿಯ ಬಾರದು

 ಯಾರು ಕಲಿಯ ಬಹುದು ಯಾರು ಕಲಿಯ ಬಾರದು ಎನ್ನುವದು ಎಲ್ಲಾ ಯುಗದಲ್ಲೂ ಇದ್ದುಕೊಂಡ ಸಮಸ್ಯೆ. ಎಲ್ಲಾ ಕಾಲದಲ್ಲೂಇದ್ದಿರುವಂತೆ , ಸ್ವಸಾಮರ್ಥ್ಯದಿಂದ ಕಲಿತು ವೇದಕ್ಕೆ ಅಪಭ್ರಂಶ ಹೇಳುವದೂ ಶತರುದ್ರೀಯ ಮತ್ತು ಅಂಭೃಣೀ ಸೂಕ್ತಕ್ಕೆ ,ಬನ್ನಂಜೆಯಂಥವರ  ಭಾಷ್ಯದಿಂದಲೂ , ಭಗವಾನ್ ,ಜಾಕೀರ್ ನಾಯಕ್  ಅಂಥವರ ದುರ್ಮೇಧಿಗಳ ಅಭಿಪ್ರಾಯದಿಂದಲೂ ಕಂಡುಕೊಳ್ಳಬಹುದು. 

ಹಲವು ಸ್ಮೃತಿಗಳು ಸ್ತ್ರೀಯರಿಗೆ , ನಾಲ್ಕನೆಯ ವರ್ಣದವರಿಗೆ ಪತಿತರಿಗೆ ಹೀಗೇ ನಾನಾ ವರ್ಗದವರಿಗೆ ವೇದಾಧ್ಯಯನವನ್ನು ನಿರಾಕರಿಸಿದೆ. ಆದರೇ ವೇದಗಳೇ ಎಲ್ಲಿಯೂ ಈ ವಿಷಯವನ್ನು ಹೇಳುವದಿಲ್ಲ ಎಂಬುದಾಗಿ ಶ್ರೀಶಂಕರರ ಭಾಷ್ಯದಿಂದ ಸ್ಪಷ್ಟವಾಗುತ್ತದೆ. 

ಹಲವಾರು ಧರ್ಮ ಶಾಸ್ತ್ರಗಳನ್ನು ಆಧಾರಿಸಿ ಶ್ರೀ ಮಧ್ವಾಚಾರ್ಯರು ತಮ್ಮ ಬ್ರಹ್ಮ ಸೂತ್ರ *ಅಪಶೂದ್ರಾಧಿಕರಣ* ಎಂಬ ಸೂತ್ರ ಭಾಷ್ಯದಲ್ಲಿ ಸಂಪೂರ್ಣವಾಗಿ ಶ್ರೀಶಂಕರರನ್ನೇ ಅನುಸರಿಸಿದ್ದರೂ ಶ್ರೀಶಂಕರರು ಹಿಡಿದಿರುವ ಜಾಡನ್ನು ಹಿಡಿಯಾಲಾಗದೇ  ಎಡವಿದ್ದಾರೆ. ಅವರು ಎಡವಿದ್ದನ್ನು ಅವರ ಅಜ್ಞಾನಿ ಶಿಷ್ಯರು ಶ್ರೀಶಂಕರರ ಮೇಲೆ ಆರೋಪಿಸಿ ತಮ್ಮ ಅವಿವೇಕವನ್ನು ಮೆರೆಯುವ ಪ್ರಯತ್ನ ಮಾಡಿದ್ದಾರೆ.

ಇಂದಿನ ಶ್ರೋತ್ರೀಯ ಬ್ರಾಹ್ಮಣರ ಚಿಂತೆ ಮತ್ತಷ್ಟೂ ಹಾದಿ ತಪ್ಪುತ್ತಿದೆ.ಇವರಲ್ಲಿ ಸ್ತ್ರೀಯರಿಗೆ ವೇದಾಧ್ಯಯನ ಶಾಸ್ತ್ರದಲ್ಲಿ ಹೇಳಿಲ್ಲ ಎಂಬ ಶಾಸ್ತ್ರ್ರ ಜ್ಞಾನವಿದೆಯೇ ಹೊರತು ಅವುಗಳ ಪೂರ್ವಾಪರದ ಅರಿವಿದ್ದಂತಿಲ್ಲ.  ವಾಸ್ತವ ವಿಷಯವನ್ನು ಹೇಳುತ್ತಿದ್ದೇನೆ ,ಯಾರನ್ನೂ ವೈಯಕ್ತಿಕವಾಗಿ ದೂಷಿಸುತ್ತಿಲ್ಲ.  ಪರಮಹಂಸ ಶ್ರೀಶ್ರೀಶ್ರೀ ಚಂದ್ರಶೇಖರ ಭಾರತಿ ಮಹಾಸ್ವಾಮಿಗಳು , ಅನಂತಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳೂ ಕೂಡ ಸ್ತ್ರೀಯರಿಗೆ ವೇದಾಧ್ಯಯನ ಇಲ್ಲ ಎಂದು ಹೇಳಿರುವದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಈ ಅಭಿಪ್ರಾಯವನ್ನು  ತಿರಸ್ಕಾರ ಮಾಡುವ ಯೋಗ್ಯತೆಯಾಗಲೀ ಪ್ರಯತ್ನವಾಗಲೀ ನನ್ನಲ್ಲಿಲ್ಲ. ಆದರೇ ಈ ಅಭಿಪ್ರಾಯದ ಹಿಂದಿರುವ ಮೂಲ ಉದ್ದೇಶವನ್ನು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ

ಮೊದಲಿಗೆ ವೇದಾಧ್ಯಯನಕ್ಕೆ   ಹಲವರಿಗೆ ಅಧಿಕಾರ ಇಲ್ಲ ಎನ್ನುವ ವಿಷಯವನ್ನು ಮುಂದಿಟ್ಟುಕೊಂಡು ಎದ್ದೇಳುವ ಮೊದಲ ಪ್ರಶ್ನೆ .
ವೇದಾಧ್ಯಯನದ ಪ್ರಯೋಜನ ಏನು ?? ಇದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ವೇದ ಎಂದರೇನು ಎಂದು ತಿಳಿದುಕೊಂಡರೇ ವೇದದ ಪ್ರಯೋಜನ ಅರಿವಾದಂತೆ. ವೇದ ಎಂದರೇ ಮಂತ್ರಗಳಲ್ಲಿ ಅಡಗಿರುವ ಜ್ಞಾನ  ಎನ್ನುವದು ಪ್ರಸಿದ್ಧ ಅರ್ಥ.

*ವಿದ್-ಜ್ಞಾನೇ*   ತಿಳಿದುಕೊಳ್ಳುವದು ,ಅರಿತುಕೊಳ್ಳುವದು. 

ವೇದ - ಶಾಸ್ತ್ರಾಣಿ ವಿಂದಂತಿ ಪ್ರಾಪ್ನುವಂತಿ ಅಸ್ಮಿನ್ *ವಿದ್ ಲೃ ಲಾಭೇ ಘಙ್*  || ೦೩.೦೩.೧೨೧ ||
ಯಾವ ಶಾಸ್ತ್ರಗಳ ಸಹಾಯದಿಂದ ಧರ್ಮವನ್ನು ಬ್ರಹ್ಮವನ್ನು  ತಿಳಿದುಕೊಳ್ಳಬಹುದೋ  ,ತಿಳಿದದ್ದನ್ನು ಪಡೆದುಕೊಳ್ಳಬಹುದೋ ಅದು ವೇದ. 

ಧರ್ಮ್ಮಬ್ರಹ್ಮಪ್ರತಿಪಾದಕಮಪೌರುಷೇಯವಾಕ್ಯಮ್ |  ಇತಿ ವೇದಾನ್ತಶಾಸ್ತ್ರಮ್ || 
ಯಾವುದು ಧರ್ಮ ಹಾಗೂ ಬ್ರಹ್ಮವನ್ನು ಪ್ರತಿಪಾದಿಸುತ್ತವೆಯೋ ಅಂಥ ಅಪೌರುಷೇಯ ಅರ್ಥಾತ್ ಮನುಷ್ಯನ ಪ್ರಯತ್ನವಿಲ್ಲದೇ ತಾನೇ ತಾನಾಗಿ ಕಂಡುಕೊಂಡಂಥ ,ಋಷಿಗಳಾದ , ಕ್ರಾಂತದರ್ಶಿಗಳ ಕಾಣ್ಕೆ.

ಬ್ರಹ್ಮಮುಖನಿರ್ಗತಧರ್ಮ್ಮಜ್ಞಾಪಕಶಾಸ್ತ್ರಮ್ |  ಇತಿ ಪುರಾಣಮ್ || 
ಧರ್ಮವನ್ನು ಜ್ಞಾಪಿಸುವದಕ್ಕಾಗಿ ಪರಮಾತ್ಮನ ಮುಖದಿಂದ ಹೊರ ಬಂದದ್ದು. 

ತತ್ಪರ್ಯ್ಯಾಯಃ |  ಶ್ರುತಿಃ ೨ ಆಮ್ನಾಯಃ ೩ |  ಛನ್ದಃ ೪ ಬ್ರಹ್ಮ ೫ ನಿಗಮಃ ೬ ||  
ಶ್ರುತಿ ,ಆಮ್ನಾಯ, ಛಂದಸ್ಸು , ಬ್ರಹ್ಮ .ನಿಗಮ ಮುಂತಾದ ಪರ್ಯಾಯ ಪದಗಳು ಇವೆ. 

ಹೀಗೇ ವೇದಕ್ಕೆ ನಾನಾರಿತಿಯಲ್ಲಿ ಅಭಿಪ್ರಾಯ ಹೇಳುತ್ತಾರೆ.ಒಟ್ಟಾರೇ ಹೇಳುವದಾದರೇ ಅತ್ಯಂತ ಉತ್ಕೃಷ್ಟವಾದ ಜ್ಞಾನವನ್ನು ಯಾವದು ತಿಳಿಸಿಕೊಡುತ್ತದೆಯೋ ಅದೇ ವೇದ.

ಆದ್ದರಿಂದ ಅತ್ಯುತ್ಕೃಷ್ಟವಾದ , ಬ್ರಹ್ಮ ಜ್ಞಾನ ಪಡೆಯುವದಕ್ಕೇ ವೇದವು ಸಾಧನೆಯಾಗಿದೆ. ಜ್ಞಾನದಿಂದಲೇ ಅಥವಾ ಜ್ಞಾನವೇ ಮುಕ್ತಿ ಎಂಬುದು ಎಲ್ಲಾ ದಾರ್ಶನಿಕರ ಮತವೇ ಆಗಿರುವದರಿಂದ ವೇದದ ಪ್ರಯೋಜನ ಮುಕ್ತಿ ಎಂಬುದು ಸಿದ್ಧವಾಯಿತು. ವೇದಗಳ ಅಧ್ಯಯನ  ಜ್ಞಾನಾರ್ಜನೆಗೆ ಸಾಧನವಾಯಿತು. 

ಹಾಗಿದ್ದರೇ ವೇದಗಳನ್ನು ಅಧ್ಯಯನ ಮಾಡದೇ ಇದ್ದರೇ ಮುಕ್ತಿಯೇ ಇಲ್ಲವೇ ?? ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇದಕ್ಕೆ ಶ್ರೀ ಶ್ರೀ ಶಂಕರಾಚಾರ್ಯರು ಉತ್ತರ ಹೇಳುತ್ತಾರೆ.

ಮನುಷ್ಯ ಜನ್ಮಮಾತ್ರದಿಂದಲೇ ಮುಕ್ತಿಗೆ ಯೋಗ್ಯರಾಗಿರುತ್ತಾರೆ ಎನುವದೇ ಶ್ರೀಶಂಕರರ ಅಭಿಪ್ರಾಯ. ಆದರೇ ಮಾರ್ಗವನ್ನು ಹೀಗೇ ಅರ್ಥಾತ್ ವೇದಾಧ್ಯಯನದಿಂದಲೇ ಮುಕ್ತಿ ಎನ್ನುವದು ಎಲ್ಲರಿಗೂ ಅನ್ವಯವಾಗುವಂಥ ವಿಷಯವಲ್ಲ, ವೇದಾಧ್ಯಯನ ಇಲ್ಲದೆಯೂ ಮುಕ್ತಿಗೆ ಯೋಗ್ಯರು ಎಂಬ ಶಾಸ್ರ್ತ್ರಾಭಿಪ್ರಾಯವನ್ನು ಶ್ರೀಶಂಕರರು ಸಂದರ್ಭಾನುಸಾರವಾಗಿ ಬಹಳ ವಿಸ್ತಾರವಾಗಿ ತಿಳಿಸಿದ್ದಾರೆ. 

ಶ್ರೀಶಂಕರರ ಅಬಿಪ್ರಾಯವನ್ನು ತಿಳಿದುಕೊಳ್ಳುವಲ್ಲಿ ನಮ್ಮಲ್ಲಿರುವ ಪೂರ್ವಾಗ್ರಹವೂ ಅಡಚಣೆಯೇ ಆಗಿರುತ್ತದೆ. ಶ್ರೀ  ಶಂಕರರು ಯಾವಯಾವ ಸಂದರ್ಭದಲ್ಲಿ ಯಾವಯಾವ ಅಭಿಪ್ರಾಯ ಹೇಳಿದ್ದಾರೇ ಎಂಬುದನ್ನು ಕೂಡಿಸಿಕೊಂಡು ಅದರಲ್ಲಿ ಶಂಕರರ ಸಮಗ್ರ  ಅಭಿಪ್ರಾಯ ಏನೆಂದು ತಿಳಿದುಕೊಳ್ಳಬೇಕು.

ಕೆಲವರು ವೇದವನ್ನು ಸಂಪೂರ್ಣ ಅಧ್ಯಯನ ಮಾಡುವದಕ್ಕೂ ಮುಂಚೆಯೇ ಶಾಸ್ತ್ರಕ್ಕೆ ಜೋತು ಬಿದ್ದು , ತಾವು ಅರ್ಥ ಮಾಡಿಕೊಂಡಂಥ ಶಾಸ್ತ್ರಾಭಿಪ್ರಾಯಕ್ಕೆ ಅನುಕೂಲವಾಗುವಂಥ ಶಾಸ್ತ್ರ ವಾಕ್ಯಗಳನ್ನು ,ಅಲ್ಲಿ ಹೇಳಿದ ಆಖ್ಯಾಯಿಕೆ ,ಕಥೆಗಳನ್ನು  ಹುಡುಕುತ್ತಿರುವದು ವಿಪರ್ಯಾಸ. 

ನಾನು ಕಲಿತು ಕೊಳ್ಳಬೇಕು ,ನಾನು ವೇದಾಧ್ಯಯನ ಮಾಡಬೇಕು ಎನ್ನುವದಕ್ಕೆ ಶಾಸ್ತ್ರವೂ ಅನುಕೂಲವಾಗಿದೆ ಎನ್ನುವ ತಿಳುವಳಿಕೆಯೇ ಸಾಕು , ಬೇರೆಯವರಿಗೆ ಅನುಕೂಲವಾಗಿದೆಯೋ ಇಲ್ಲವೋ ಎನ್ನುವ ತಿಳುವಳಿಕೆ ಖಂಡಿತವಾಗಿಯೂ ಹಾದಿತಪ್ಪಿದ ಸೂಚನೆ ಮತ್ತು ಹಾದಿಗೆ ಅಡಚಣೆಯೇ ಆಗಿರುತ್ತದೆ. ಇನ್ನೊಬ್ಬರಿಗೆ ಪ್ರತಿಕೂಲ ಎನ್ನುವ  ತಿಳುವಳಿಕೆಯೂ  ವೇದಾಧ್ಯಯನಕ್ಕೆ  ಅನರ್ಹವೇ ಆಗಿರುತ್ತದೆ ಎಂಬುದು ಸತ್ಯವೇ ಅಲ್ಲವೇ .

ಸ್ತ್ರೀಯರಿಗೆ ವೇದಾಧ್ಯಯನ ಇಲ್ಲವೆಂಬುವವರು,   ಸ್ವತಃ ತಮ್ಮ ವೇದಾಧ್ಯಯನ ಎಷ್ಟರ ಮಟ್ಟಿಗೆ ಆಗಿದೆ ಎನ್ನುವದನ್ನು ತಿಳಿದುಕೊಂಡಿದ್ದಿದ್ದರೇ ಈ ಗೊಂದಲಕ್ಕೆ ಸಿಲುಕುತ್ತಿರಲಿಲ್ಲ. ವೇದಗಳನ್ನು,  ಅದರ ಉದ್ದೇಶಾರ್ಥವನ್ನು ತಿಳಿದುಕೊಳ್ಳದವರಿಗೆ *ಕಿಂ ಋಚಾ ಕರಿಷ್ಯತಿ* ಎಂಬ ಮಾತು ಅನ್ವಯಿಸುತ್ತದೆ.

ಯಾರಾದರೂ ಬಳಿ ಬಂದು ನಾನು ವೇದ ಕಲಿಯಬಹುದೇ ಎಂದು ಕೇಳಿದಾಗ ಶಾಸ್ತ್ರಗಳು ಹೀಗೆ ಹೇಳಿವೆ  ಎಂದು ಹೇಳುವದರ ಜೊತೆಗೆ  ಆಸಕ್ತರ ಪೂರ್ವಾಪರಗಳನ್ನು ತಿಳಿದುಕೊಳ್ಳುವದು ಅತ್ಯಗತ್ಯವಾಗಿರುತ್ತದೆ. ಶತಾಯಗತಾಯ ಹೇಗಾದರೂ ವೇದಮಂತ್ರಗಳನ್ನು ಕಲಿಯಲೇ ಬೇಕೆಂದು ಮನಸ್ಸು ಮಾಡಿದಂಥವರಿಗೂ ,ಗಂಡಸರೋ ಹೆಂಗಸರೋ , ವೇದಗಳು ಸುಲಭವಾಗಿ ತನ್ನ ಗರ್ಭವನ್ನು ತೋರಿಸಿಕೊಳ್ಳುವದಿಲ್ಲ. ಪೂರ್ವ ಸಂಸ್ಕಾರದಿಂದಲೇ ಇದು ತಿಳಿಯುವಂಥದ್ದು. 

ಅಧಿಕಾರಿಗಳು ಎಂಬು ಬೀಗುವ ಗಂಡಸರಿಗಿಂತ , ನಾನು ಎಷ್ಟೋ ಹೆಂಗಸರು ನೂರು ಪಾಲು ಉತ್ತಮವಾಗಿ ವೇದಮಂತ್ರಗಳನ್ನು ಸ್ವರಬದ್ಧವಾಗಿ ಹೇಳುವದನ್ನೂ ಹೇಳಿಕೊಡುವದನ್ನೂ ನೋಡಿದ್ದೇನೆ. ಹೀಗಿರುವಾದ ಯಾವಶಾಸ್ತ್ರ ಇಂಥವರಿಗೆ ಯಾವ ಅಧಿಕಾರವನ್ನು ಕೊಟ್ಟರೇ ಏನು ಪ್ರಯೋಜನ ? ಸಕಾಲ ಸಂಧ್ಯಾವಂದನೆ ಮಾಡಿದವರಿಗೇ ದುರ್ಲಭವಾದ ಇದು ಸಕಾಲ ಸಂಧ್ಯಾವಂದನೆಯನ್ನೂ ಮಾಡದೇ  ಇರುವವರಿಗೆ ಬೇರೆಯವರ ಅಧಿಕಾರದ ವಿಷಯ ಗೋಚರವಾಗುವದಾದರೂ ಹೇಗೆ ?

ಶ್ರೀ ಶ್ರೀ ಚಂದ್ರ ಶೇಖರ ಭಾರತಿ ಮಹಾಸ್ವಾಮಿಗಳು ,ಅನಂತಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳಂಥವರು ಆಸಕ್ತರಿಗೆ ಈ ವಿಷಯದ ಬಗ್ಗೆ ಹೇಳಬಹುದು.  ಏಕೆಂದರೇ ಆಸಕ್ತರ ಪೂರ್ವಾಪರ ತಿಳಿಯುವಂಥ ಜ್ಞಾನಘನರು ಅವರಾಗಿರುವದರಿಂದ , ಈ ವಿಷಯ ಅವರು ಹೇಳಿದವರಿಗೇ ಅನ್ವಯಿಸುತ್ತದೆಯೇ ಹೊರತು ಸಂಬಂಧವಿಲ್ಲದವರಿಗೆ ಯಾವ ಕಾಲಕ್ಕೂ ಅನ್ವಯಿಸುವದಿಲ್ಲ. ಏಕೆಂದರೇ ಗುರುವಿನ ಅವಶ್ಯಕತೆಯೇ ಬೇಡವೆಂದು ಸ್ವಸಾಮರ್ಥ್ಯದ ಮೇಲೇ ಅಧ್ಯಯನ ಮಾಡುವಂಥವರು ಈಗಲೂ ಹೇರಳವಾಗಿದ್ದಾರೆ .ಅವರಿಗೇ ಯವಕಾಲದಲ್ಲೂ ಅಧಿಕಾರವೇ ಇರುವದಿಲ್ಲ.

ಆದ್ದರಿಂದ ವೇದಾಧ್ಯಯನದ ಅಧಿಕಾರ ಯೋಗ್ಯ ಗುರು ನಿರ್ಧಾರ ಮಾಡುತ್ತಾನೆಯೇ ಹೊರತು ಶಾಸ್ತ್ರಗಳಲ್ಲ. 

ಈಗ ಪುನಃ ಮೂಲ ಪ್ರಶ್ನೆಯ ಕಡೆ ಗಮನ ಹರಿಸೋಣ.
ಸ್ತ್ರೀಯರಿಗೆ ವೇದಕ್ಕೆ ಅಧಿಕಾರ ಇದೆಯೋ ಇಲ್ಲವೋ ?

ವೇದ ಮಂತ್ರಗಳನ್ನು ಕಂಡುಕೊಂಡಥ ,ಕ್ರಾಂತ ದರ್ಶಿಗಳಾದ ಹಲವು ಋಷಿಕೆಯರಿದ್ದಾರೆ ಅರ್ಥಾತ್ ಸ್ತ್ರೀ ಮಂತ್ರ ದ್ರಷ್ಟಾರರೂ ಇದ್ದಾರೆ.

ಕ್ರಾಂತ ದರ್ಶಿಗಳು ಅಥವಾ ಮಂತ್ರ ದ್ರಷ್ಟ್ರಾರರು ಎಂದರೇ ಯಾರು ? ಅವರು ಮಾಡುತಿದ್ದ ಉಪಾಸನೆ ಏನು ? ಅವರುಗಳೂ ವೇದಾಧ್ಯಯನವನ್ನು ಮಾಡುತ್ತಿದ್ದರೇ ? ವೇದಾಧ್ಯಯನದಿಂದಲೇ ಅವರು ವೇದಗಳನ್ನು ಕಂಡುಕೊಂಡರೇ ? 

ಹೀಗೆ ಯೋಚಿಸಲಾಗಿ ವೇದೋಕ್ತ ಕರ್ಮಗಳು ,  ವೇದಾಧ್ಯಯನದಿಂದಲೇ ವೇದಗಳನ್ನು ಕಂಡುಕೊಂಡು ಅವುಗಳನ್ನು ದಾಟಿದರು ಎಂಬುದು ವಿಶ್ವಾಮಿತ್ರ,  ಉಚಿಥ್ಯ, ಮೇಧಾತಿಥಿ ,ಕಣ್ವ ಅಂಗಿರಸರೇ ಮೊದಲಾದ ಋಷಿಗಳ ವೃತ್ತಾಂತದಿಂದ ತಿಳಿದುಕೊಳ್ಳಬಹುದು.

ಒಂದು ವೇಳೆ ಸ್ತ್ರೀಯರಿಗೆ ವೇದಾಧ್ಯಯನದ ಅಧಿಕಾರ ಇರಲಿಲ್ಲ ಎಂದರೇ ಮಂತ್ರದ್ರಷ್ಟಾರರಾದ ವಾಗಂಭೃಣಿ , ಅಪಾಲ ಮುಂತಾದ  ಋಷಿಕೆಯರು ವೇದ ಮಂತ್ರಗಳನ್ನು ಹೇಗೆ ಕಂಡು ಕೊಂಡರು ? ಎಂಬ ಪ್ರಶ್ನೆ ಉದ್ಭವಿಸುತ್ತದೆ. 

ಒಂದು ವೇಳೆ ಸ್ತ್ರೀಯರಿಗೆ  ವೇದಾಧ್ಯಯನಕ್ಕೆ ಅಧಿಕಾರ ಇಲ್ಲ ಎಂದಿದ್ದರೇ ಈ ಋಷಿಕೆಯರು  ಕೇವಲ ಧ್ಯಾನೋಪಾಸನೆಗಳಿಂದ ವೇದ ಮಂತ್ರಗಳನ್ನು ಕಂಡುಕೊಂಡರು ಎಂಬುದಾಗುತ್ತದೆ. ಹಾಗಾಗಿ ಗುರುವಿನ ಉಪದೇಶಿತ ಮಾರ್ಗದಿಂದ ಸರಿಯಾದ ಧ್ಯಾನೋಪಾಸನೆಗಳ ಸಾಮರ್ಥ್ಯ ಉಳ್ಳ ಸ್ತ್ರೀಯರು , ಪೂರ್ವಸಂಸ್ಕಾರದಿಂದಲೂ  ವೇದ ಮಂತ್ರಗಳನ್ನು  ಕಂಡುಕೊಳ್ಳಬಹುದಾಗಿದೆ ಎಂಬುದು ಸಿದ್ಧವಾಗುತ್ತದೆ . 

ಶಾಸ್ತ್ರಗಳು ಹೇಳುವಂತೆ ಅಧಿಕಾರ ಇಲ್ಲದ ಸ್ತ್ರೀಯರಿಗೆ ವೇದಮಂತ್ರಗಳು ಗೋಚರವಾಗಲೇ ಬಾರದಿತ್ತು. ಆದ್ದರಿಂದ ವೇದಗಳೇ  ಅಧ್ಯಯನ ಅಧಿಕಾರಕ್ಕೆ  ಲಿಂಗಭೇದಗಳನ್ನು  ಹೇಳುತ್ತಿಲ್ಲ  ಎಂಬುದು ಸಿದ್ಧವಾಯಿತು. 

ಹಾಗಾದರೇ ಶಾಸ್ರ್ತ್ರಗಳು ವ್ಯರ್ಥವಾಯಿತಲ್ಲ  ?? ಎಂದರೇ ಇಲ್ಲ ಎನ್ನುತ್ತೇವೆ . 

ಧ್ಯಾನೋಪಾಸನೆಗಳ ಸಾಮರ್ಥ್ಯ ಉಳ್ಳವರೆಲ್ಲರೂ ಮಂತ್ರ ದ್ರಷ್ಟಾರರಾಗುತ್ತಾರೆ ಎಂಬುದು ಸಾಹಸಾಭಿಪ್ರಾಯವಾಗುತ್ತದೆ.  ಶಾಸ್ತ್ರಗಳು ಜ್ಞಾಪಕವನ್ನು ಮಾಡುತ್ತಿದೆಯೇ ಹೊರತು  ಮತ್ತೊಂದನ್ನು ಹೊಸದಾಗಿ ಹುಟ್ಟುಹಾಕುವದಿಲ್ಲ. ಸುಪ್ತವಾಗಿದ್ದುಕೊಂಡಿರುವ *ವಿದ್-ಜ್ಞಾನೇ* ಎಂಬುದಕ್ಕೆ   ಶಾಸ್ತ್ರದಿಂದ ಸಂಸ್ಕಾರ ಉಂಟಾಗುತ್ತಿದೆ ಮತ್ತು ಸಂಸ್ಕಾರ ಮಾರ್ಗವನ್ನು  ಸೂಚಿಸುತ್ತಿದೆಯೇ ಹೊರತು  ಶಾಸ್ತ್ರಗಳಿಂದ ನಿರ್ಬಂಧನೆಗಳು ಉಂಟಾಗುತ್ತಿಲ್ಲ. ಇಲ್ಲಿ ಪೂರ್ವ ಸಂಸ್ಕಾರ, ಗುರೂಪದೇಶ , ಸಾಧನೆ ಮುಂತಾದವುಗಳು ಪೂರಕವಾಗಿ ಕೆಲಸ ಮಾಡುತ್ತಿವೆ ಎಂಬುದಾಗಿ ತಿಳಿದುಕೊಳ್ಳಬೇಕು.

ಯಾರಿಗಾದರೂ ವೇದಾಧ್ಯಯನ ಮಾಡಬೇಕು ಎಂದಾಗ ಸೂಕ್ತ ಗುರುವಿನ ಬಳಿಸಾರಬೇಕು. ಜ್ಞಾನಿಯಾದ ಗುರು ಆಸಕ್ತರ ಪೂರ್ವಾಪರಗಳನ್ನು ಕಂಡುಕೊಂಡು ಮಂತ್ರ ದೀಕ್ಷೆ ಕೊಡುತ್ತಾರೆ. ಇಲ್ಲಿ ಗಂಡಸರಿಗೆ ಮಾತ್ರವೇ ಅಧಿಕಾರ ಇದೆ ಎಂದು ಶಾಸ್ತ್ರ ಹೇಳಿದೆ ಎಂಬುದೊಂದೇ ಅಳತೆಗೋಲಾಗಿದ್ದರೇ ಗುರುವಿನ ಬಳಿ ಸಾರಿದವರೆಲ್ಲಾ ಮಂತ್ರ ದ್ರಷ್ಟಾರರೋ ಜ್ಞಾನಿಗಳೇ ಆಗಿಬಿಡುತ್ತಿದ್ದರು. ಹಾಗಾಗಿರುವದು ಲೋಕದಲ್ಲಿ ಕಂಡಿಲ್ಲ. ಅಧಿಕಾರಿಗಳಾಗಿರುವ ಗಂಡಸರೇ ವೇದಗಳಲ್ಲಿ ಯಾವ ಆಸಕ್ತಿಯೂ ಇಲ್ಲದೇ ಅನಧ್ಯಯನದಲ್ಲಿದ್ದಾರೆ.

ಮುಂಬರುವ ಸಂಚಿಕೆಗಳಲ್ಲಿ ವೇದಗಳಲ್ಲಿ ಸ್ತ್ರೀಯರು ವೇದಾಧ್ಯಯನ ಮಾಡಿರುವಂಥ ವಿಷಯಗಳನ್ನು ತಿಳಿಸಿಕೊಡುತ್ತೇನೆ. ಅವುಗಳು ಹೇಗೆ ಧರ್ಮ ಶಾಸ್ತ್ರದಲ್ಲಿ ಹೇಳಿರುವದಕ್ಕೆ ವಿರುದ್ಧವಾಗಿಲ್ಲ ಎಂಬುದನ್ನೂ ತಿಳಿಸಿಕೊಡುತ್ತೇನೆ.

ಸತ್ಯಪ್ರಕಾಶ

ವೃಷಭ (ಬಸವಣ್ಣ) ಇರುವ ಘಂಟೆ ಹನುಮಂತ ಇರುವ ಘಂಟೆಗಿಂತಲೂ ಭಿನ್ನವಾಗಿ ಶಬ್ದಮಾಡುತ್ತದೆಯೋ ?

ಭಕ್ತರ ಕೃತಕೃತ್ಯತಾ  ಭಾವ 

ಗುರುದರ್ಶನಕ್ಕೆ ಹಾಗೂ ಗುರುಸೇವೆಗೇ ಹೆಚ್ಚು ಮಹತ್ವ. ಹೀಗಿದ್ದರೂ ಸಖರಾಯ ಪಟ್ಟಣದಲ್ಲಿ ಐತಿಹಾಸಿಕ ಹೊಯ್ಸಳ ಕಾಲದ ಬಲ್ಲಾಳೇಶ್ವರ ದೇವಸ್ಥಾನ,   ಶಕುನಿ ರಂಗನಾಥ ಸ್ವಾಮಿ ದೇವಾಲಯ , ರಾಮೇಶ್ವರ ಲಕ್ಷ್ಮಣೇಶ್ವರ ದೇವಸ್ಥಾನ ಹೀಗೇ ಎಲ್ಲಾ ದೇವಾಸ್ಥಾನಗಳಿಗೇ ಎಲ್ಲಾ ಕಾಲದಲ್ಲೂ ಪೂಜಾಸಾಮಗ್ರಿಗಳು , ಧವಸ ಧಾನ್ಯಗಳು ಮುಂತಾದವುಗಳ ಪೂರೈಕೆ ನಿರಂತರವಾಗಿ ನಡೆಯುತ್ತಿತ್ತು. ಪೂಜಾಕೈಂಕರ್ಯ , ಪಾರಂಪರಿಕವಾಗಿ ಅಧಿಕಾರದಲ್ಲಿರುವ ಪೌರೋಹಿತ ಕುಟುಂಬಗಳು , ಒಂದೇ ದೇವಸ್ಥಾನಕ್ಕೆ ಎರಡು ಮೂರೂ ಕುಟುಂಬಗಳಿಗಿದ್ದ ಪೂಜಾಧಿಕಾರ ,ಮತ್ತು ಅವರ  ನಡುವಣ ಆಗಾಗ ತಲೆದೋರುತ್ತಿದ್ದ ಸಾಂಪ್ರಾದಾಯಿಕ ಆಚರಣೆಗಳಲ್ಲಿ ಭಿನ್ನಾಭಿಪ್ರಾಯವೂ ಸಹಜವಾಗೇ ಇದ್ದುಕೊಂಡಿದ್ದವು.ಎಲ್ಲಾ ಸಮಸ್ಯೆಗೂ ಸಮಾಧಾನ ಗುರುಗಳೊಬ್ಬರೇ ಎಂಬುದು ಪುರೋಹಿತರ ನಂಬಿಕೆಯೂ ಆಗಿತ್ತು. ಯಾವುದೇ ಶಾಸ್ತ್ರ ಸಂಬಂಧ ಸಂಶಯವನ್ನು ಕರಾರುವಾಕ್ಕಾಗಿ ಪರಿಹಾರ ಮಾಡುತ್ತಿದ್ದುದೂ ಅಲ್ಲದೇ ಎಲ್ಲವೂ ಸರಿಹೋದ ನಂತರ *ಏನೋ ನಾನು ವೇದಶಾಸ್ತ್ರಗಳನ್ನು ಓದಿದವನಲ್ಲ ,ಲೋಕವನ್ನು ಸುತ್ತಾಡಿ ,ಲೋಕದಿಂದ ಕಿಂಚಿತ್ತು ತಿಳಿದುಕೊಂಡದ್ದನ್ನು   ನಿಮಗೆ ಹೇಳಿದ್ದೇನೆ, ಬೇಕಿದ್ದರೇ  ಶೃಂಗೇರೀ ಗುರುಗಳನ್ನು ಸಂಪರ್ಕ ಮಾಡಿ ಸಂಶಯವನ್ನು ಪರಿಹಾರ ಮಾಡಿಕೊಳ್ಳಿ ಎಂದುಬಿಡುತ್ತಿದ್ದರು. 
ಹಲವಾರು ಬಾರಿ ಶೃಂಗೇರೀ ಗುರುಗಳೇ *ಅವಧೂತರು ಹೇಳಿದ ಮೇಲೆ ಯಾವ ಶಾಸ್ತ್ರವನ್ನೂ ನೋಡುವ ಅವಶ್ಯಕತೆಯಿಲ್ಲ ಎಂಬುದಾಗಿ ಹೇಳಿದ್ದನ್ನು ನಾವುಗಳೇ ಕೇಳಿದ್ದೇವೆ. 
ಮೂಲದಲ್ಲಿ ಶ್ರದ್ಧೆಯಿಲ್ಲದಿದ್ದರೇ  ಸಂಶಯಗಳು ಬರುತ್ತವೆ ಎಂಬುದಾಗಿ ಗುರುಗಳೂ ಹೇಳುತ್ತಲೇ ಬಂದಿದ್ದರು.
ನೈವೇದ್ಯವನ್ನು ದೇವರ ಮುಂದೆ ಇಡಬೇಕೇ , ಎಡಭಾಗದಲ್ಲಿಡಬೇಕೋ ,ಬಲಭಾಗದಲ್ಲಿಡಬೇಕೋ ? ಯಾವ ದೇವರಿಗೇ ಯಾವ ನೈವೇದ್ಯ ? ಎಷ್ಟು ವೀಳ್ಯದೆಲೆಗಳನ್ನು ಇಡಬೇಕು ? ಎಷ್ಟು ಅಡಕೆಗಳನ್ನು ಇಡಬೇಕು ? ವೀಳ್ಯದೆಲೆಯ ಮೇಲಿಡುವ ಫಲಗಳನ್ನು , ತೆಂಗಿನ ಕಾಯಿಯನ್ನು ಯಾವ ದಿಕ್ಕಿನಲ್ಲಿಡಬೇಕು ?? ಹೀಗೇ ನಾನಾ ಪ್ರಶ್ನೆಗಳು. 
ಗುರುನಾಥರ ಹಾಸ್ಯಪ್ರಜ್ಞೆಯ ಪರಿಚಯ ಸ್ವಲ್ಪಮಟ್ಟಿಗೇ ಮಾಡಿಕೊಡುತ್ತೇನೆ.
ಮೇಲೆ ಹೇಳಿದ ಪ್ರಶ್ನೆಗಳನ್ನು ಹೊತ್ತುಕೊಂಡ ಮಹನೀಯರೊಬ್ಬರು ಗುರುವಿನ ಬಳಿಬಂದು ಇದಕ್ಕೆ ಉತ್ತರ ಹೇಳಬೇಕೆಂದು ಕೇಳಿಕೊಂಡರು. 
ಗುರುಗಳು ಹುಸಿನಗುತ್ತಾ * ಅಲ್ಲಾರೀ, ಅವನಿಗೆ ತೋರಿಸಿ ನೀವು ತಿನ್ನುವದಕ್ಕೇ ಇಷ್ಟೆಲ್ಲಾ ನಾಟಕ ಮಾಡಬೇಕಾ ?? ಹಸಿದವನು ಬಂದಾಗ ಅಂಥವನಿಗೆ ಕೊಟ್ಟರೇ ಅದೇ ದೇವರಿಗೆ ಕೊಟ್ಟಂತೇ ಅಲ್ಲವೇ ?   ನೀವು  ಶಾಸ್ತ್ರದ ಪ್ರಕಾರವೇ ನೈವೇದ್ಯವನ್ನು ಯಾವ ದಿಕ್ಕಿನಲ್ಲಿಟ್ಟಿದ್ದೀರಿ ಎಂದು ನೋಡಿಕೊಂಡು ಯಾವಾಗಲಾದರೂ ಆ ಭಗವಂತನು ಬಂದು ನೈವೇದ್ಯ ಸ್ವೀಕರಿಸಿದ್ದು ನಿಮ್ಮ ಅನುಭವದಲ್ಲಿದೆಯೋ ?? ಅಥವಾ ಈ ದಿಕ್ಕಿನಲ್ಲಿಟ್ಟರೇ ನಾನು ಸ್ವೀಕರಿಸುವದಿಲ್ಲ ಎಂಬ ಕನಸೇನಾದರೂ ಬಿದ್ದಿತ್ತೇ ??

ಆ ಪರಮಾತ್ಮ ಏನಾದ್ರೂ ಒಂದೇ ಒಂದು ಸಲ ನೀವಿಡುವ ನೈವೇದ್ಯದ ಮೇಲೆ ಕೈ ಆಡಿಸುವ ಹಾಗಿದ್ದರೇ ನೀವು ನಿಜವಾಗಿಯೂ ಅವನಿಗೆ ನೈವೇದ್ಯಕ್ಕೆ ಏನಾದರೂ ಇಡುತ್ತಿದ್ದೀರೋ ?? ಅಥವಾ ಇಷ್ಟೊಂದು ದೇವಾಲಯಗಳು ಇರುತ್ತಿದ್ದವೋ ? 
ನಿಮ್ಮ ಆಚರಣೆಗೂ ದೇವಾಲಯಕ್ಕೂ ಏನೂ ಸಂಬಂಧವಿಲ್ಲ. ದೇವಾಲಯದ ಉದ್ದೇಶವನ್ನೇ ಮರೆತು ಇಂದಿಗೇ ಅದು ಒಂದು ವ್ಯಾಪಾರ ಆಗಿರುವದು ಶೋಚನೀಯ, ಶಾಸ್ತ್ರವನ್ನು ಊರ್ಗೋಲು ಮಾಡಿಕೊಳ್ಳಿ , ನೇತು ಹಾಕಿಕೊಳ್ಳುವಕೊಂಡಿ ಮಾಡಿಕೊಳ್ಳಬೇಡಿ* ಎಂದುಬಿಟ್ಟರು.

ಮತ್ತೊಮ್ಮೆ ಊರಿನ ಹಿರಿಯ ಪುರೋಹಿತರು ಬಂದು *ಗುರುಗಳೇ ಯಾರೋ ಭಕ್ತರು ಹಿಂದೆ ದೇವಸ್ಥಾನಕ್ಕೆ ಬಂದು ಹರಕೆಯನ್ನು ಹೊತ್ತಿದ್ದರಂತೆ. ಅದರಂತೆ  ಬಂದು ಘಂಟೆಯನ್ನು ಸಮರ್ಪಣೆ ಮಾಡಿದ್ದಾರೇ , ಅದನ್ನು ಉಪಯೋಗಿಸಿ ಎಂಬುದಾಗಿಯೂ ಕೇಳಿಕೊಳ್ಳುತ್ತಿದ್ದಾರೆ. ಆದರೇ  ಅವರು ವೃಷಭ (ಬಸವಣ್ಣ) ಇರುವ ಘಂಟೆಯನ್ನು ಕೊಟ್ಟಿದ್ದಾರೆ . ಆದರೇ ನಾವು ಈವರೆವಿಗೂ ಹನುಮಂತ ಇರುವ ಘಂಟೆಯನ್ನು ಉಪಯೋಗಿಸುತ್ತಿದ್ದೇವೆ, . ನಮ್ಮಲ್ಲಿ ಈ ಘಂಟೆಯನ್ನು ಉಪಯೋಗಿಸುವ ಸಂಪ್ರದಾಯ ಇಲ್ಲ,  ಅವರು ನಮ್ಮ ದೇವಸ್ಥಾನಕ್ಕೆ ಸಾಕಷ್ಟು ಅನುದಾನ ಕೊಟ್ಟಿದ್ದಾರೆ ,ತಿರಸ್ಕಾರ ಮಾಡಿದರೇ ಅವರು ಬೇಸರಿಸಿಕೊಳ್ಳಬಹುದು, ಎಂದು ತಮ್ಮ ಅಳಲನ್ನು ತೋರಿಕೊಂಡರು. 

ಗುರುನಾಥರು * ಏಕೆ ವೃಷಭ (ಬಸವಣ್ಣ) ಇರುವ ಘಂಟೆ ಹನುಮಂತ ಇರುವ ಘಂಟೆಗಿಂತಲೂ ಭಿನ್ನವಾಗಿ ಶಬ್ದಮಾಡುತ್ತದೆಯೋ ?? ಅಥವಾ ವೃಷಭ (ಬಸವಣ್ಣ) ಇರುವ ಘಂಟೆಯ ಶಬ್ದ ನಿಮ್ಮ ದೇವರಿಗೆ ಹಿಡಿಸುವದಿಲ್ಲವೋ ?? ಎಂದು ಕೇಳಿದರು.
ಪುರೋಹಿತರು * ಹಾಗಲ್ಲ ಗುರುಗಳೇ ಹನುಮಂತ ಇರುವ ಘಂಟೆ ತುಂಬ ಪವಿತ್ರವಾದ್ದದ್ದು ಎನ್ನುತ್ತಾರೇ. ಅದಕ್ಕೇ ಸಂಶಯ.
ಗುರುನಾಥರು *ಹೌದೋ ,ಹಾಗಿದ್ದರೇ ಆ ಘಂಟೆಯನ್ನು ನೀವು ಯಾವ ಕೈಯ್ಯಲ್ಲಿ ಹಿಡಿದುಕೊಳ್ಳುತ್ತೀರ ?? ಎಡಗೈಯ್ಯಲ್ಲಿ ಅಲ್ಲವೇ. ಪವಿತ್ರವಾದದ್ದನ್ನು ಎಡಗೈಯ್ಯಲ್ಲಿ ಹಿಡಿದುಕೊಂಡರೇ ಅಪವಿತ್ರ ಆಗುವದಿಲ್ಲವೇ ?? ಪವಿತ್ರವಾದದ್ದನ್ನು ಎಡಗೈಯ್ಯಲ್ಲಿ ಮುಟ್ಟಬಾರದು ಎಂದು ಎಲ್ಲಿಯೂ ಶಾಸ್ತ್ರವು ಹೇಳಿಲ್ಲವೇ ??

ಇಂಥದ್ದನ್ನು  ಯಾವ ಕಾಲಕ್ಕೂ ಯಾವ ಶಾಸ್ತ್ರಗಳೂ ಹೇಳಬಾರದು. ಹೇಳಿದ್ದರೂ ಈ ಕಲಿಯುಗದಲ್ಲಿ ಅವುಗಳನ್ನು ಅನುಸರಿಸುವಾಗ ಶಾಸ್ತ್ರಗಳ ಪೂರ್ವಾಪರಗಳನ್ನು ನೋಡುವದಕ್ಕಿಂತ ಭಕ್ತರ ಭಾವನೆಯನ್ನು ನೋಡಬೇಕು. ಅವರಿಂದ ಅನುದಾನ ಸ್ವೀಕರಿಸುವಾಗ ಹಿಂಜರಿಯದ ನೀವು ಈಗೇಕೇ ಸಂಶಯಕ್ಕೊಳಗಾದಿರಿ ?? 

ಈ ದೇವಸ್ಥಾನಕ್ಕೆ ಬಂದ ಆ ಭಕ್ತರಿಗೆ ಪರಿಹಾರ ಸಿಕ್ಕಿದೆ. ತನ್ಮೂಲಕ ನೆಮ್ಮದಿಯೂ ಸಿಕ್ಕಿದೆ, ಆ ನೆಮ್ಮದಿಯ ಹಿಂದಿರುವ ಚೈತನ್ಯವೇ  ಈ  ಘಂಟೆಯನ್ನು ಕೊಡುವಂತೆ ಪ್ರೇರೇಪಣೇ ಮಾಡಿದೆ ಎಂದುಕೊಳ್ಳಲು ನಿಮ್ಮ ಪೌರೋಹಿತ್ಯದ ಭಾವವೇನಾದರೂ ಅಡ್ಡಿಯಾಗುತ್ತಿದೆಯೇ ??  ಇದು ಕೇವಲ ದೇವರಿಗೆ ಕೊಟ್ಟಿರುವ ಕಾಣಿಕೆಯಲ್ಲ. ನೀವು ಸದ್ಭಾವದಿಂದ ಪೂಜೆ ಮಾಡಿರುವದೂ ಆ ಭಕ್ತರ ಕಷ್ಟ ಪರಿಹಾರಕ್ಕೆ ಕಾರಣ ಎಂಬ ನಂಬಿಕೆಯೂ  ಕೃತಕೃತ್ಯತಾ ಭಾವದ ಒಂದು ಅಂಗವಾಗೇ ಇದೆ ಎನ್ನುವದನ್ನು ತಿಳಿಯಿರಿ. ಅದನ್ನೇ ಪೌರೋಹಿತ್ಯ ಎನ್ನುವದು.  ಆ ಕೃತಕೃತ್ಯತಾ ಭಾವದಲ್ಲಿ ಈ ಘಂಟೆಯ ವಿಷಯ ಅಪಸ್ವರವಾಗಬಾರದಲ್ಲವೇ ? ಎಂದುಗುರುನಾಥರು ಕೇಳಿದರು.

ಪುರೋಹಿತರು ನಿರುತ್ತರರಾದರು. 

ಸತ್ಯಪ್ರಕಾಶ.

ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರೀ ತಥಾ

ಪಾಂಡಿತ್ಯಕ್ಕೆ ಸಿಲುಕಿ ನಲುಗುತ್ತಿರುವ ಶ್ರುತಿಸ್ಮೃತಿ ಶ್ಲೋಕಗಳು : ಭಾಗ -೦೧ 

ಭಗವದ್ಗೀತ ಕರ್ಮಯೋಗ : ೦೩.೨೬
ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸಙ್ಗಿನಾಮ್ |||೩.೨೬||
ಜ್ಞಾನಿಯಾದವನು ಕರ್ಮಸಂಗಿಗಳಾದ ಅಜ್ಞರ ಬುದ್ಧಿಯಲ್ಲಿ ಭೇದವನ್ನುಂಟು ಮಾಡಬಾರದು.

ತಿಳಿದವನು ತನ್ನ ಪಾಂಡಿತ್ಯದಿಂದ ಜನರ ನಂಬಿಕೆಯಲ್ಲಿ ಒಡಕನ್ನು ಉಂಟುಮಾಡಬಾರದು ಎಂಬುವದೇ ಮೇಲಿನ ಸೂತ್ರದ ಅರ್ಥ.

ಮೇಲಿನ ಎರಡೂ ಶ್ಲೋಕಗಳು ಇಂದಿನ ಆಧುನಿಕ ಪಂಡಿತರ ಪಾಂಡಿತ್ಯಕ್ಕೆ ಸಿಲುಕಿ ನಲುಗುತ್ತಿರುವ ಶ್ಲೋಕಗಳು.ಇದರಲ್ಲಿ ಹುದುಗಿರುವ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಪಂಡಿತರಗಿರುವ ನಿರ್ಲಕ್ಷ್ಯ ಮತ್ತು ಪೂರ್ವಾಗ್ರಹ ಪೀಡಿತ ಮನೋಭಾವವೇ ಕಾರಣ ಎಂದು ಹೇಳಿದರೇ ಅತಿಶಯೋಕ್ತಿಯಾಗಲಾರದು.
ನಾನು ನೋಡಿದಂತೆ ಕೇಳಿದಂತೆ ಇಂಥ ಮಹನೀಯರು ನಮ್ಮಲ್ಲೇ ಪ್ರಖ್ಯಾತಿಯನ್ನು ಪಡೆದಿರುವದು ಸೋಜಿಗದ ಸಂಗತಿ. ಶಂಕರಮಠಗಳಲ್ಲಿ ಶಂಕರರ ಪರವಾಗಿಯೂ ಸ್ವಮಠಗಳಲ್ಲಿ ಶಂಕರರನ್ನೂ ದೂಷಿಸುವ ಕಾರ್ಯದಲ್ಲಿಯೂ ನಿರತರಾಗಿರುವ ಇಂಥ ವಿಭಜಿತ ವ್ಯಕ್ತಿತ್ವ ಉಳ್ಳವರು , ಕೃಷ್ಣನು ಹದಿನಾರು ಸಾವಿರಹೆಂಡತಿಯನ್ನು ಹೊಂದಿದ್ದರೂ ಅವನನ್ನು ದೂಷಿಸದೇ ಕಾಮಾಶಾಸ್ತ್ರಕೆ ಭಾಷ್ಯಬರೆಯುವವರನ್ನು ಹೀಯಾಳಿಸುವರು ದುರಾಗ್ರಹವನ್ನು ತಮ್ಮ ಮೇಲೆಯೇ ಹೇರಿಕೊಂಡೂ ನಲುಗುತ್ತಿರುವ ಇಂಥ ಪಂಡಿತರನ್ನೂ ಅವರಮಾತಿಗೆ ಮರುಳು ಹೋಗುವವರನ್ನೂ  ಆ ಭಗವಂತನೇ ಕಾಪಾಡಬೇಕು.

ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರೀ ತಥಾ | ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾ ಪಾತಕ ನಾಶನಮ್ || ೦೧ ||

ಈಗ ಮೊದಲಿನ ಶ್ಲೋಕದ ಗಹನಾರ್ಥವನ್ನು ತಿಳಿದುಕೊಳ್ಳೋಣ.
ಸಂದರ್ಭ : ಪಂಚಕನ್ಯಾ ಅಥವಾ ಪಂಚಕಂ ನಾ ಎಂಬ ಪದಗಳ ಉಪಯೋಗದ ಬಗ್ಗೆ ಇರುವ ಸಂಶಯ.
ರೂಢಿಯಲ್ಲಿರುವಂತೆ ಪಠಿಸಿದರೆ ಯಾವ ಅರ್ಥವನ್ನು ತಿಳಿಸಿಕೊಡುತ್ತದೆ. 
ಭಾವಾರ್ಥ : 
ಅಹಲ್ಯೆ . ದ್ರೌಪದೀ , ಸೀತಾ , ಮಂಡೋದರೀ ಮುಂತಾದ ಐವರು ಕನ್ಯೆಯರನ್ನು ನಿತ್ಯ ಸ್ಮರಿಸುವುದರಿಂದ ಮಹಾಪಾತಕಗಳು ನಾಶವಾಗುತ್ತವೆ.
ಸಂಶಯಾರ್ಥ :
ಮೇಲಿನ ಸಂದರ್ಭದಲ್ಲಿ ನಮ್ಮ ಆಧುನಿಕ ಪಂಡಿತರಿಗೆ ಬಂದೊದಗಿರುವ ಸಮಸ್ಯೆ ಏನೆಂದರೇ ಮೇಲೆ ಹೇಳಿದವರೆಲ್ಲರೂ ಮದುವೆಯಾದವರಾದ್ದರಿಂದ ಕನ್ಯೆಯರಲ್ಲ ಎಂಬ ಸಂಸ್ಕೃತ ಅರ್ಥವನ್ನಾಧಾರಿಸಿರುವ ಒಂದು ಅಭಿಪ್ರಾಯ. ಇದನ್ನು "ಪಂಚಕನ್ಯಾ" ಎಂಬುದಾಗಿ ಹೇಳದೇ "ಪಂಚಕಂ ನಾ" ಅರ್ಥಾತ್ ಈ ಐವರನ್ನು ಗಂಡಸರು ಸ್ಮರಿಸಬೇಕು ಎಂಬ ಅರ್ಥವನ್ನು ಹೊರಹಾಕಿದ್ದಾರೆ. 
ಈ ಸಂದರ್ಭದಲ್ಲಿ ನಾವು ಮೊದಲು ಕಂಡುಕೊಳ್ಳಬೇಕಾದ ವಿಷಯವೇನೆಂದರೇ "ನಾ" ಎಂಬ ಪದಕ್ಕೆ ಗಂಡಸರು ಎಂಬ ಅರ್ಥವನ್ನು ಯಾವ ನಿಘಂಟುವಿನಲ್ಲಿ ಅಥವಾ ಯಾವ ಪುರಾತನ ಗ್ರಂಥದಲ್ಲಿ ಇದಯೋ ಇಲ್ಲವೋ ಎಂಬುವದನ್ನು ನಿಶ್ಚಯಮಾಡಿಕೊಳ್ಳುವದು.
ವಾಚಸ್ಪತ್ಯಮ್ ಮತ್ತು ಶಬ್ದಕಲ್ಪದ್ರುಮ ಎಂಬ ನಿಘಂಟುವಿನಲ್ಲಿ 
ನಾ = (ನಹ್ ಬಂಧೇ + ಬಾಹುಲಕಾತ್ ) ನಿಷೇಧೇ " ಅಮಾನೋನಾ ನಿಷೇಧವಾಚಕಾಃ "  ನಿಷೇಧ ವಾಚಕ.
ನಾ=ಅಭಾವಃ = ಕೊರತೆ ಅಥವಾ ನ್ಯೂನತೇ ಎಂಬ ಅರ್ಥ 
ಶಬ್ದಕಲ್ಪದ್ರುಮೇ= ನಯತಿ ನೀಯತೇ ವಾ | ನೀ ಪ್ರಮಾಣೇ ||
ಉಣಾದಿ ಕೋಶೇ : ನಯತೇಡಿಚ್ಚ ನಾ
ಸಂದರ್ಭಶ್ಚ 
ನಾ+ ಕೃ ಪ್ರತ್ಯಯಃ + ಸ ಚ ಡಿತ್ ಪುರುಷಃ  || ಇತ್ಯಮರೇ ||  ನಾ ಎಂಬ ಅಕ್ಷರವು ಪ್ರತ್ಯಯ ರೂಪವಾಗಿ ಸೇರಿದಾಗ ಅರ್ಥಾತ್ ಪಂಚಜನಾಃ ಮುಂತಾದ ಸಂದರ್ಭದಲ್ಲಿ ಮಾತ್ರವೇ ಪುರುಷ ಅಥವಾ ಪುಲ್ಲಿಂಗ ಶಬ್ದವಾಗುತ್ತದೆ. ಮೇಲಿನ ಶ್ಲೋಕದಲ್ಲಿ ಇಂಥ ಪ್ರತ್ಯಯದ ಸಂದರ್ಭವೇ ಇಲ್ಲ.ಹಾಗಾಗಿ ಪ್ರತ್ಯಯ ರೂಪದಲ್ಲದೇ "ನಾ" ಎಂಬ ಪದಕ್ಕೆ ಯಾವಕಾಲದಲ್ಲೂ ಪುರುಷ ಅಥವಾ ಗಂಡಸು ಎಂಬ ಅರ್ಥವು ಬರುವುದೇ ಇಲ್ಲ.ಆದ್ದರಿಂದಲೇ "ನಾ" ಎಂಬ ಶಬ್ದವು ಪಂಡಿತರ ಪೂರ್ವಾಗ್ರಹಕ್ಕೆ ಒಳಗಾಗಿ ತಮ್ಮ ಪಾಂಡಿತ್ಯದ ಭ್ರಾಂತಿಯಿಂದುಂಟಾದ ಅಪಭ್ರಂಶವನ್ನು ಹೊರಹಾಕಿದ್ದಾರೇ ಎಂಬುವದೇ ಸಿದ್ಧಾಂತವಾಯಿತು.

ಇನ್ನು ಕನ್ಯಾ ಎಂಬ ಶಬ್ದದ ಅರ್ಥವನ್ನು ಪರಾಮರ್ಶೆ ಮಾಡೋಣ.
ಕನ್ಯಾ : 
ಅಮರ ಕೋಶದಲ್ಲಿ ಈ ಪದಕ್ಕೆ ಕುಮಾರೀ ಮಾತ್ರವಲ್ಲದೇ , ಗೌರೀ ಎಂಬುವದೂ ಮುಖ್ಯ ಅರ್ಥವಾಗಿರುತ್ತದೆ.  
ಮಹಾಭಾರತ = " ಯಸ್ಮಾತ್ ಕಾಮಯತೇ ಸರ್ವಾನ್ ಕಮೇರ್ಧಾತೋಶ್ಚ ಭಾವಿನಿ | ತಸ್ಮಾತ್ ಕನ್ಯೇಹ ಸುಶ್ರೇಣಿ | ಸ್ವತಂತ್ರಾ ವರವರ್ಣಿನೀ || 
ಉಣಾದಿ ಕೋಶ: ಕನ್+ದೀಪ್ತೌ ಅಘ್ನ್ಯಾದಿತ್ವಾತ್ ಯಕ್ | 
ಪಾಣಿನೀಮತೇ = ಕನ್ಯಾಯಾಃ  ಕನೀನ್ ಚೇತಿ ನಿರ್ದೋಷಾತ್ || 
ವೈದ್ಯಕ ದ್ರವ್ಯಗುಣ= ಶೋಥಘ್ನೀ ಕಾಸಹಾ ಕನ್ಯಾ ||  
ಕನ್ಯಾ ಎಂಬ ಪದಕ್ಕೆ ವಾಚಸ್ಪತ್ಯದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತದೆ.ಅದರಲ್ಲಿಯೂ ಮದುವೆ ಆಗದವಳು ಎಂಬುವದು ಗೌಣಾರ್ಥವಾಗಿಯೇ ಇರುತ್ತದೆ.
ಬಹುಷಃ ಕನ್ಯಾ ಎಂಬ ಶಬ್ದಕ್ಕೆ ಮದುವೆಯಾಗದವಳು ಎಂಬುವದು ಕೇವಲ ಗೌಣಾರ್ಥವೇ ಇರುತ್ತದೆಯಾಗಿ ಮುಖ್ಯಾರ್ಥವಾಗಿ ಅದು ಮೇಲೆ ಹೇಳಿದ ಸ್ತ್ರೀಯರ ಅಪ್ರತಿಮ ಗುಣವಿಶೇಷಣವೇ ಆಗಿರುತ್ತದೆ.
ದೋಷಪರಿಹಾರ : 
"ನಾ" ಎಂಬ ಪದಕ್ಕೆ ಸಾಂದರ್ಭಿಕವಾಗಿ ಪಂಡಿತರು  ಗಂಡಸರು ಅಥವಾ ಪುರುಷ ಎಂಬುದಾಗಿ ನಿರ್ವಚನ ಮಾಡಬಹುದು. ಆದರೇ ಹಾಗೆ ಮಾಡಿದಲ್ಲಿ  ಮೇಲಿನ ಶ್ಲೋಕಕ್ಕೆ ಪಕ್ಷಪಾತ ಮತ್ತು ಪ್ರಾಸಂಗಿಕ ದೋಷಗಳು ಬಂದೊದಗುತ್ತವೆ.

ಪಕ್ಷಪಾತ  ದೋಷ : 
ಮೇಲಿನ ಶ್ಲೋಕದಲ್ಲಿ ಒಂದು ಸಾಮಾಜಿಕ ಕಟ್ಟಳೆಯ ಕಳಕಳಿ ಇರುತ್ತದೆ. ಹಾಗಾಗಿ ಈ ಶ್ಲೋಕವು ಕೇವಲ ಗಂಡಸರಿಗೇ ಮೀಸಲು ಎಂಬ ಅಭಿಪ್ರಾಯವಿರದೇ ಎಲ್ಲರಿಗೂ ಸಮಾನವಾದ ಸಂದೇಶವನ್ನು ರವಾನಿಸುತ್ತದೆ. ಹೆಣ್ಣಿನಮೇಲೆ ಶೋಷಣೆಯು ಹಿಂದಿನಕಾಲದಿಂದಲು ನಡೆಯುತ್ತಲೇ ಬಂದಿದೆ.ಹೀಗೆ ಶೊಷಣೆಗೊಳಗಾದವರು ಅತ್ಮಸ್ಥೈರ್ಯವನ್ನು ಕಳೆದುಕೊಳ್ಳದೇ , ಶೋಷಣೆಗೊಳಗಾದ ಈ ಐವರು ಸ್ತ್ರೀಯರನ್ನು ಧ್ಯಾನಿಸುತ್ತಾ ಧೈರ್ಯವಾಗಿ ಜೀವನವನ್ನು ನಡೆಸಬೇಕು.ಒಂದುವೇಳೇ ಅರಿವಿಲ್ಲದೇ ಮಹಾಪಾತಕ ಎಂದರೆ ಭ್ರೂಣಹತ್ಯಾದಿ ಮುಂತಾದ ತಪ್ಪುಗಳನ್ನು ಮಾಡಿದ್ದರೂ ಸಹ ಇಂಥವರನು ನೆನೆಯುವದರಿಂದ ಅಂಥ ಮಹಾಪಾಪಗಳು ದೂರವಾಗುತ್ತದೆ ಎಂಬುದೇ ಭಾವಾರ್ಥವು.

ಪ್ರಾಸಂಗಿಕ ದೋಷ : 
ಸಾಮಾನ್ಯವಾಗಿ ಮೇಲೆ ಹೇಳಿದ ಐವರೂ ಸ್ತ್ರೀಯರ ಮೇಲಲ್ಲದೇ  ಗಂಡಸರೇ ಹೆಣ್ಣಿನ ಮೇಲೆ ಶೋಷಣೆಮಾಡುತ್ತಾ ಬಂದಿರುತ್ತಾರೆ. ಹಾಗೆ ಈಗಲೂ ಯಾವ ಗಂಡಸಾದರೂ ಇಂಥ ಪಾಪಗಳನ್ನು ಮಾಡಿದರೇ ಇಂಥ ಶೋಷಣೆಗೆ ಒಳಗಾದ ಮೇಲೆ ಹೇಳಿದ ಐವರು ಸ್ತ್ರೀಯರನ್ನು ಸ್ಮರಣೆ ಮಾಡಿಕೊಂಡರೆ ಮಾಡಿದ ಮಹಾಪಾತಕಗಳು ಪರಿಹಾರವಾಗುತ್ತದೆ ಎಂಬ    ಹಾಸ್ಯಾಸ್ಪದ ಅಭಿಪ್ರಾಯವನ್ನು ಕೊಡುತ್ತದೆ.ಇಂಥ ಅಭಿಪ್ರಾಯವನ್ನು ಕೊಡುವ ಪಂಡಿತರಿಂದ್ ಸಮಾಜಕ್ಕೆ ಎಳ್ಳಷ್ಟೂ ಒಳ್ಳೆಯದಾಗುವದಿಲ್ಲ.
 
ಮುಂದಿನ ಭಾಗ : 
ಮುಂದಿನ ಶ್ಲೋಕ ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ | ನರ್ಮದಾ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||೦೨ ||

ಸತ್ಯಾರ್ಥ ಪ್ರಕಾಶ

ಗಂಗೇ ಚ ಯಮುನೇ ಚೈವ

ಪಾಂಡಿತ್ಯಕ್ಕೆ ಸಿಲುಕಿ ನಲುಗುತ್ತಿರುವ ಶ್ರುತಿಸ್ಮೃತಿ ಶ್ಲೋಕಗಳು : ಭಾಗ -೦2
ಹಿಂದಿನ ಸಂಚಿಕೆಯಲ್ಲಿ "ಅಹಲ್ಯಾ ದ್ರೌಪದಿ ಸೀತಾ ತಾರಾ ಮಂಡೋದರೀ ತಥಾ | ಪಂಚಕನ್ಯಾ ಸ್ಮರೇನ್ನಿತ್ಯಂ ಮಹಾ ಪಾತಕ ನಾಶನಮ್ || ೦೧ || "
ಎಂಬ ಶ್ಲೋಕವೇ ಸರ್ವರೀತಿಯಲ್ಲೂ ಸರಿಯಾದದ್ದು ಎಂಬುವದನ್ನು ಶಾಸ್ತ್ರರೀತ್ಯಾ ನಿರೂಪಿಸಿದ್ದಾಯಿತು.ಇನ್ನು ಮುಂದೆ ಈ ಕೆಳಗಿನ ಶ್ಲೋಕವನ್ನು ಮತ್ತು ಅದರ ಭಾವಾರ್ಥವನ್ನು ಪರಾಮರ್ಶಿಸೋಣ.
ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||೦೨ ||
ಸಂಶಯ :
ಇಲ್ಲಿ ಗಂಗೇ ಆದಮೇಲೆ "ಚ" ಬಂದಿದೆ... ಒಮ್ಮೆ ಚಕಾರ ಬಂದ ಮೇಲೆ ಮತ್ತೆ ಯಾಕೆ ಯಮುನೇ ಆದಮೇಲೆ "ಚೈವ" ಬರಬೇಕು.... ನದಿಯ ಹೆಸರು ಮರೆತ ಯಾರೋ ಪಂಡಿತರು "ಚೈವ" ಸೇರಿಸಿದರು... ಮತ್ತೇ ಮುಂದೆ ಅದೇ ಪ್ರಾಕ್ಟೀಸ್ ಆಯಿತು ತಪ್ಪು ಶ್ಲೋಕವಾಯಿತು... *ಅದು "ಚೈವ" ಅಲ್ಲ "ಕೃಷ್ಣಾ" ನದಿಯ ಹೆಸರು ಬಿಟ್ಟಿದೆ ಸೇರಿಸಿ ಹೇಳಿಕೊಳ್ಳಿ ಆಗ ಶ್ಲೋಕ ಸರಿಯಾಗುತ್ತದೆ . ಇಂಥ ಅಭಿಪ್ರಾಯವನ್ನು ಹೊರಹಾಕಿದ ಪಂಡಿತರ ಪಾಂಡಿತ್ಯಕ್ಕೆ ನಗಬೇಕೋ ಅಳಬೇಕೋ ಗೊತ್ತಿಲ್ಲ.
ಈ ಹಿಂದೆ ಹೇಳಿದಂತೆ ಹೇಳಿದಂತೆ ಇಲ್ಲೂ ಈ ಪಂಡಿತರು ತಮ್ಮ ಸಂಸ್ಕೃತ ಪಾಂಡಿತ್ಯದ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಮನುಷ್ಯಕೃತವಾದ ಸಂಸ್ಕೃತ ವ್ಯಾಕರಣಕ್ಕೂ ಅಪೌರುಷೇಯವಾದ ಶ್ರುತಿಸ್ಮೃತಿಗಳ ವ್ಯಾಕರಣಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಈ ಆಧುನಿಕ ಪಂಡಿತರು ತಮ್ಮ ಸಂಸ್ಕೃತ ವ್ಯಾಕರಣದ ವ್ಯವಸಾಯವನ್ನು ಮುಂದಿಟ್ಟುಕೊಂಡು ಶ್ರುತಿಸ್ಮೃತಿಗಳ ಮಂತ್ರಶ್ಲೋಕಗಳ ಅರ್ಥವನ್ನೂ ತಿದ್ದುವ ಸಾಹಸವನ್ನು ಮಾಡಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು. ತೈತ್ತಿರೀಯ ಸಂಹಿತೆಯಲ್ಲಿ ರುದ್ರಾಧ್ಯಾಯದ ಚಮಕ ಭಾಗದಲ್ಲಿ ಸುಮಾರು ಹನ್ನೊಂದು ಅನುವಾಕಗಳಿದ್ದು ಒಟ್ಟಾರೆ ಒಂದು ಸಾವಿರಕ್ಕೂ ಹೆಚ್ಚು "ಚ" ಕಾರಗಳಿವೆ ಎಂಬುವದು ಈ ಪಂಡಿತರ ಗಮನಕ್ಕೆ ಬರದೇ ಇರುವದು ನಮ್ಮ ಪುಣ್ಯ.
ಮೊದಲಿಗೆ ಈ ಸೂತ್ರವನ್ನು ಪರಿಶೀಲಿಸೋಣಾ.
ಯಾಸ್ಕರ ನಿರುಕ್ತ : ಅಧ್ಯಾಯ -೦೧ ಖಂಡಃ -೦೪
ಅಥಯಸ್ಯಾಗಮಾದರ್ಥ ಪೃಥಕ್ತ್ವಮಹ ವಿಜ್ಞಾಯತೇ ನ ತ್ವೌದ್ದೇಶಿಕಮಿವೆ ವಿಗ್ರಹೇಣ ಪೃಥಕ್ತ್ವಾತ್ಸ ಕರ್ಮೋಪಸಂಗ್ರಹಃ ||
ನಿರ್ವಚನ :
ಇಲ್ಲಿಂದ ಮುಂದೆ ಕರ್ಮೋಪಸಂಗ್ರಹ ಅವ್ಯಯ ಅಥವಾ ಸಂಯೋಜಕ ಅವ್ಯಯಗಳ ಲಕ್ಷಣ ಮತ್ತು ನಿರೂಪಣೆ. 
ಸಂಯೋಜಕ ಅಥವಾ ಸಮುಚ್ಚಯಗಳನ್ನು ವಾಕ್ಯದಲ್ಲಿ ಉಪಯೋಗಿಸಿದರೇ , ಅವುಗಳು ತಿಳಿಸುವ ಅರ್ಥವೇನೆಂಬುದನ್ನು ವಿಮರ್ಶಿಸೋಣ.
ಉದಾ: 
ದೇವದತ್ತಯಜ್ಞದತ್ತೌ ಪಚೇತೇ = ದೇವದತ್ತನೂ ಯಜ್ಞದತ್ತನೂ ಅಡುಗೆಯನ್ನು ಮಾಡುತ್ತಾರೆ. 
ದೇವದತ್ತಯಜ್ಞದತ್ತೌ - ದೇವದತ್ತಶ್ಚ ಯಜ್ಞದತ್ತಶ್ಚ :- ಇಲ್ಲಿ ಮೊದಲನೆಯ ಪ್ರಯೋಗದಲ್ಲಿ ಸಮುಚ್ಚಯಾರ್ಥ ಕೊಡುವ ಅವ್ಯಯವು ಅಧ್ಯಾಹೃತವಾಗಿದೆ.ಎರಡನೆಯ ಪ್ರಯೋಗದಲ್ಲಿ "ಚ" ಎಂಬ ಸಮುಚ್ಚಯಾರ್ಥಕ ಪದವು ಉಪಯೋಗಿಸಲ್ಪಟ್ಟಿದೆ.ಈ ಎರಡು ಪ್ರಯೋಗಗಳಲ್ಲಿಯೂ ,ದೇವದತ್ತ ಮತ್ತು ಯಜ್ಞದತ್ತರೆಂಬ ಎರಡು ಪುರುಷರು ಒಟ್ಟಿಗೇ ಸೇರಿ ಪಚನ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದರೂ ,ಇವರಿಬ್ಬರೂ ಪ್ರತ್ಯೇಕವಾಗಿ ಕಾರ್ಯನಿರತರಾಗಿದ್ದಾರೆ ಎಂಬ ಅಭಿಪ್ರಾಯವು ನಮ್ಮ ಮನಸ್ಸಿನಲ್ಲಿ ಮೂಡುತ್ತದೆ.ಸ್ವರೂಪತಃ ಇಬ್ಬರೂ ಪ್ರತ್ಯೇಕವಾಗಿದ್ದರೂ ಏಕಕರ್ಮದಲ್ಲಿ ಪ್ರಸಕ್ತರಾಗಿದ್ದಾರೆ.ವಾಕ್ಯವನ್ನು ಉಚ್ಚರಿಸಿದವನ ಮನಸ್ಸಿನಲ್ಲಿ ಕಾರ್ಯನಿರತರಾದವರ ಪ್ರತ್ಯೇಕತೆಯನ್ನು ತಿಳಿಸಬೇಕೆಂಬ ಉದ್ದೇಶವಿಲ್ಲದಿದ್ದರೂ ,ಸಮುಚ್ಚಯಾರ್ಥವನ್ನು ಉಪಯೋಗಿಸಿದ್ದರಿಂದ ಪ್ರತ್ಯೇಕತೆಯನ್ನು ಗ್ರಹಿಸಿಯೇ ತೀರುತ್ತೇವೆ.
ವಕ್ತೃವಿನ ಉದ್ದೇಶವಿಲ್ಲದಿದ್ದರೂ , ಕ್ರಿಯಾಪದದಿಂದ ಸೂಚಿತವಾದ ಕಾರ್ಯದಲ್ಲಿ ನಿರತರಾದವರ ಪ್ರತ್ಯೇಕತೆ ತಾನಾಗಿಯೇ ತಿಳಿಯುತ್ತದೋ , ಆ ಪದಕ್ಕೆ ಕರ್ಮೋಪಸಂಗ್ರಹ , ಸಮುಚ್ಚಯ , ಸಂಯೋಜಕ ,ಅವ್ಯಯ ವೆಂಬುದಾಗಿ ಕರೆಯುತ್ತಾರೆ.
ಸೂತ್ರ : 
ಚೇತಿ ಸಮುಚ್ಚಯಾರ್ಥ ಉಭಾಭ್ಯಾಂ ಸಂಪ್ರಯುಜ್ಯತೇ " ಅಹಂ ಚ ತ್ವಂಚ ವೃತ್ರಹನ್ " "ಗಂಗೇ ಚ ಯಮುನೇ ಚ " ಇತಿ ||
ಸೂತ್ರಾರ್ಥ : 
ವೃತ್ರಹನ್ = ಎಲೈ ವೃತ್ರ ಸಂಹಾರಕನೇ 
ಅಹಂ ಚ = ನಾನೂ 
ತ್ವಂ ಚ = ನೀನೂ ಇಬ್ಬರೂ ಸೇರಿ ಎಂಬಂತೆ 
ಗಂಗೇಚ = ಗಂಗೆಯೂ 
ಯಮುನೇ ಚ = ಯಮುನೆಯೂ ......
ಜಲೇಽಸ್ಮಿನ್ = ಈ (ಕಲಶದ) ನೀರಿನಲ್ಲಿ
ಸನ್ನಿಧಿಂ ಕುರು = ಬಂದು ಸೇರುವವರಾಗಲೀ ||

ಸತ್ಯಪ್ರಕಾಶ

ಕಪ್ಪೆ ಮತ್ತು ಕೀಟನಾಶಕ

ಕಣ್ಣು ತೆರೆಸುವ, ಕಣ್ಣು ತೆರೆಯಬೇಕಾದ ಬರಹ...👏💞👌💪👏😍✌️🙏 ಕೃಷಿ ಬಳಗಗಳಲ್ಲೂ ಹೀಗೆ ಕೀಟನಾಶಕಗಳ ಪರ ವಹಿಸಿ ಮಾತಾಡುವ, ಬರೆಯುವ ಒಂದಷ್ಟು ಮಂದಿ ಇದ್ದಾರೆ... ವಿವೇಚನೆ, ವಿವೇಕ ನಮ್ಮದಾಗಬೇಕಷ್ಟೆ.👍😍

### 

ಕೆಲವು ದಶಕಗಳ ಹಿಂದೆ ಅಸ್ಸಾಂ ರಾಜ್ಯಕ್ಕೆ ಒಂದು ಕಂಪನಿ ಬಂದು ,ಅಲ್ಲಿನ ರೈತರಿಗೆ ಅಲ್ಲಿ ಸಿಗುವ  ವಿಶಿಷ್ಠವಾದ ಜಾತಿಗೆ ಸೇರಿದ  ಕಪ್ಪೆಗಳನ್ನು ಹಿಡಿದು ಕೊಟ್ಟರೆ ಒಂದಷ್ಟು ಹಣ ಕೊಡುತ್ತೇವೆ  ಎಂದು ಹೇಳಿತ್ತು . ಅಲ್ಲಿನ ರೈತರಿಗೆ ತಮ್ಮ ಭತ್ತದ ಗದ್ದೆಗಳಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಆ ಕಪ್ಪೆಗಳನ್ನು ಅನಾಯಾಸವಾಗಿ ಹಿಡಿದು ಆ ಕಂಪನಿಗೆ ಕೊಟ್ಟು ಹಣ ಮಾಡಿಕೊಳ್ಳುತ್ತಿದ್ದರು . ದಿನ ಕಳೆದಂತೆ ರೈತರ ಕಪ್ಪೆ ಬೇಟೆ ಕಾರಣದಿಂದ ಕಪ್ಪೆಗಳ ಸಂತತಿ ಕಡಿಮೆ ಆಗುತ್ತಾ ಬಂತು . ಆಗ ಆ ಕಂಪನಿಯು ರೈತರು ತಂದು ಕೊಡುವ ಕಪ್ಪೆಗಳಿಗೆ ಹೆಚ್ಚುವರಿ ಹಣ ಕೊಡಲು ಶುರು ಮಾಡಿದ್ದರು . ಆಗ ರೈತರು , ಇದ್ದ- ಬದ್ದ ಕಪ್ಪೆಗಳನ್ನು ಹಿಡಿದು ಆ ಕಂಪನಿಗೆ ಕೊಟ್ಟರು .  ಇದರ  ನಡುವೆ ಈ ರೈತರ ಭತ್ತದ ಗದ್ದೆಗಳಿಗೆ ಯಾವತ್ತೂ ಕಾಣಿಸಿಕೊಳ್ಳದ ಕೀಟ ಭಾಧೆ ಶುರುವಾಯಿತು . ಇದರಿಂದ ರೈತರು ಕಂಗಾಲಾಗಿ ತಲೆ ಮೇಲೆ ಕೈ ಹೊತ್ತು ಕುಳಿತಿರುವಾಗ ಕಪ್ಪೆಗಳನ್ನು ಖರೀದಿಸಿದ ಕಂಪನಿ , ಆ ಪ್ರದೇಶದಲ್ಲಿ ಒಂದು ಆ ಭತ್ತಕ್ಕೆ ಭಾಧೆ ಕೊಡುತ್ತಿದ್ದ ಕೀಟದ ಕೀಟನಾಶಕ ತಯಾರಕ ಘಟಕವನ್ನು ಸ್ಥಾಪಿಸಿತು .......! ಅಂದರೆ ,  ಈ ಕಂಪನಿಯು ತನ್ನ ಅಸಲಿ ಮುಖ ತೋರಿಸಿತ್ತು . ಇದು ಕಪ್ಪೆ ಖರೀದಿಸುವ ಆಗಿರಲಿಲ್ಲ . ಇದು ಮೂಲತಃ ಕೀಟನಾಶಕ ಕಂಪನಿ ಆಗಿತ್ತು ......!
 ಅಂದರೆ ಅಲ್ಲಿ ಆಗಿದಿಷ್ಟು , ಆ ರೈತರ ಭತ್ತದ ಗದ್ದೆಗಳಿಗೆ ಈ ಕೀಟದ ಭಾಧೆ ಮೊದಲಿಂದಲೂ ಇತ್ತು . ಆದರೆ ಅವುಗಳನ್ನು ಆ ವಿಶಿಷ್ಟ ಜಾತಿಗೆ ಸೇರಿದ ಕಪ್ಪೆಗಳು ತಿನ್ನುತ್ತಾ ಅವುಗಳನ್ನು ನಿಯಂತ್ರಿಸುತ್ತಿದ್ದವು . ಅದನ್ನು ಮನಗಂಡ ಆ ಕೀಟನಾಶಕ ಕಂಪನಿ , ಮೊದಲು ಆ ಕಪ್ಪೆಗಳ ನಾಶಕ್ಕೆ ಅಲ್ಲಿನ ರೈತರಿಗೆ ಅರಿವಿಗೆ ಬರದಂತೆ , ಅವರಿಗೆ ಆಮಿಷ ಒಡ್ಡಿ ಪರೋಕ್ಷವಾಗಿ ನಾಶ ಮಾಡಿಸಿದ್ದರು . ಆನಂತರ ಅಲ್ಲಿನ ಭತ್ತದ ಗದ್ದೆಗಳಲ್ಲಿ ಕೀಟಗಳು ನಿಯಂತ್ರಣ ಇಲ್ಲದೆ ಹೆಚ್ಚಾಗಿ ಭತ್ತದ ಫಸಲನ್ನು ಹಾಳು ಮಾಡಿದ್ದವು . ಈ ಸಮಸ್ಯೆ ಶುರುವಾದ ನಂತರ  ಕೀಟನಾಶಕ ಔಷಧಿಯ ಕಂಪನಿ ತನ್ನ ಕೀಟನಾಶಕ ಔಷಧಿ ಘಟಕವನ್ನು ಆ ಪ್ರದೇಶದಲ್ಲಿ ಪ್ರಾರಂಭ ಮಾಡಿ ದುಡ್ಡು ಮಾಡಿ ಕೊಳ್ಳಲು ಶುರು ಮಾಡಿತು ......! ಅಲ್ಲಿಗೆ ರೈತರು ಸ್ವಯಂಕೃತ ಅಪರಾಧದಿಂದ ಖರ್ಚಿಲ್ಲದ ಸ್ವಾಭಾವಿಕ ಮತ್ತು ಪರಿಸರ ಸ್ನೇಹಿಯಾಗಿ ಕೀಟಗಳನ್ನು ನಿಂಯತ್ರಿಸುತ್ತಿದ್ದ ಕಪ್ಪೆಗಳನ್ನು ನಾಶ ಮಾಡಿ ,ತಮ್ಮನ್ನು ವಿನಾಶಕ್ಕೆ ದೂಡುವ ಕೀಟನಾಶಕಗಳಿಗೆ  ಮೊರೆ ಹೋಗುವ ಅನಿವಾರ್ಯತೆ ತಂದುಕೊಂಡರು.......! 
 ಇದು ಅಸ್ಸಾಂ ರೈತರ  ಪರಿಸ್ಥಿತಿ ಒಂದೇ ಅಲ್ಲ . ಇದು ಇಂದು ಇಡೀ ದೇಶದ ರೈತರ ಪರಿಸ್ಥಿತಿ . ಹಿಂದೆ ಭತ್ತದ ಗದ್ದೆಗಳಿಗೆ ಯಾವುದೇ ರೀತಿಯ ಔಷಧಿ ಹೊಡೆಯುತ್ತಿರಲಿಲ್ಲ . ಆದರೆ ಇಂದು ಕೀಟ ನಿಯಂತ್ರಣಕ್ಕಾಗಿ ಭತ್ತದ ಮಡಿಗಳಿಂದ ತೆನೆ ಆಗುವರೆಗೂ ಕೀಟನಾಶಕಗಳನ್ನು ಐದಾರು ಬಾರಿ ಹೊಡೆಯಬೇಕಾದ ಪರಿಸ್ಥಿತಿ ಬಂದಿದೆ . ಅದರಲ್ಲೂ ಭತ್ತಕ್ಕೆ ಒಬ್ಬ ರೈತ ಕೀಟನಾಶಕ ಔಷಧಿ ಹೊಡೆದರೆ ನಿಯಂತ್ರಣಕ್ಕೆ ಬರುವುದಿಲ್ಲ . ಅಂದರೆ ಆ ಭತ್ತದ ಬಯಲಿನ ಎಲ್ಲಾ ರೈತರು ಹೊಡೆದರೆ ಮಾತ್ರ ಆ ಕೀಟಗಳು ನಿಯಂತ್ರಣಕ್ಕೆ ಬರುತ್ತವೆ . ಇಲ್ಲದಿದ್ದರೆ , ಬೆಳೆ ಹಾಳಾಗುವುದು ಖಚಿತ....! ಹಿಂದೆ ನಾನು ಕಂಡಂತೆ  ಭತ್ತದ ಗದ್ದೆಗಳಲ್ಲಿ ಏಡಿಗಳು ,ಕಪ್ಪೆಗಳು ಯಥೇಚ್ಛವಾಗಿ   ಇರುತ್ತಿದ್ದವು . ಭತ್ತದ ಗದ್ದೆಯ ಕಳೆ ಕೀಳಲು ಬರುತ್ತಿದ್ದ ಹೆಣ್ಣಾಳುಗಳು  ಏಡಿ ಹಿಡಿದುಕೊಂಡು ಹೋಗಿ ಮನೆಯಲ್ಲಿ  ರುಚಿಯಾದ ಅಡುಗೆ ಮಾಡುತ್ತಿದ್ದರು . ಆದರೆ ಇಂದು  ಇಡೀ ಭತ್ತದ ಬಯಲಿನಲ್ಲಿ ಕಪ್ಪೆ ,ಏಡಿಗಳು ಹುಡುಕಿದರೂ ಸಿಗುವುದಿಲ್ಲ ......!  ಅಂದರೆ ನಮ್ಮಲ್ಲಿ ಬಂದ ಕೀಟನಾಶಕ ಕಂಪನಿಗಳು , ಇವುಗಳ ನಾಶಕ್ಕೆ ತಮ್ಮ ಕೀಟನಾಶಕ ಔಷಧಿಗಳಲ್ಲೇ ರಹಸ್ಯ ವಿಷ ಸೇರಿಸಿದ್ದವು ಎಂಬ ಅನುಮಾನ ನನ್ನನ್ನು ಕಾಡುತ್ತಿದೆ . ಇದರ ಜತೆಗೆ , ಯಾವುದೇ ತರಕಾರಿ ಬೆಳೆ ಬೆಳೆಯ ಬೇಕಾದರೂ ಹಿಂದೆ ಅಷ್ಟಾಗಿ ಕೀಟನಾಶಕಗಳನ್ನು ಬಳಸದ ರೈತ , ಇಂದು  ಕೀಟನಾಶಕಗಳನ್ನು ಕನಿಷ್ಠ ವಾರಕ್ಕೆ ಒಂದು ಬಾರಿಯಾದರೂ ಹೊಡೆಯಬೇಕಾದ ಪರಿಸ್ಥಿತಿ ಇದೆ .  ಅದರ ಜತೆಗೆ , ಹಲವು ರೋಗಗಳು ತರಕಾರಿ ಕಾಣಿಸಿಕೊಳ್ಳುತ್ತಿವೆ . ಅದಕ್ಕೂ ವಾರಕ್ಕೊಮ್ಮೆ ಔಷಧಿ ಹೊಡೆಯಬೇಕು . ಇವುಗಳ ಬೆಲೆಯನ್ನು ಕೇಳಿದರೆ ಹೆದರಿಕೆ ಆಗುತ್ತದೆ . ಅಂದರೆ ಒಂದು ಬಾರಿ ಔಷಧಿ ಹೊಡೆಯಬೇಕಾದರೆ ಎಕರೆಗೆ ವಾರಕ್ಕೆ ಕನಿಷ್ಠ 2-3 ಸಾವಿರ ಬೇಕಾಗುತ್ತದೆ . ಇಲ್ಲದಿದ್ದರೆ   ಒಂದೇ ವಾರದಲ್ಲಿ ಫಸಲು ಕೀಟ , ರೋಗ ಕಾಣಿಸಿಕೊಂಡು ನಾಶವಾಗುತ್ತದೆ . ಅಂದರೆ  ಇಲ್ಲೂ ಕೂಡಾ ಕೀಟನಾಶಕಗಳ ಕಂಪನಿಗಳು ಸ್ವಾಭಾವಿಕ ಕೀಟನಾಶಕಗಳನ್ನು ನಾಶ ಮಾಡಲು ಹಿಡನ್ ಅಜೆಂಡಾ ಮಾಡಿಕೊಂಡಿವೆ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ . ಯಾಕೆಂದರೆ , ಹಿಂದೆ ಬಯಲು ಪ್ರದೇಶದಲ್ಲಿ ನಮ್ಮಲ್ಲಿದ್ದ ಅಥವಾ ಅಂಗಡಿಯಿಂದ ತಂದ ತರಕಾರಿ ಬಿತ್ತನೆ ಬೀಜಗಳನ್ನು ಬಯಲು ಪ್ರದೇಶದಲ್ಲಿ ಮಡಿ ಮಾಡಿ ನಾಟಿ ಮಾಡುತ್ತಿದ್ದವು . ಆದರೆ ಇಂದು , ಬಯಲು ಪ್ರದೇಶದಲ್ಲಿ ಬಿತ್ತನೆ ಮಾಡಿದರೆ ಅವುಗಳಿಗೆ ಕೀಟ , ರೋಗಗಳು ಕಾಣಿಸಿಕೊಂಡು ಗಿಡಗಳು ಹುಟ್ಟುವುದೇ ಇಲ್ಲ .....! ಅಂದರೆ ನಾವು ಸಸಿಗಳಿಗಾಗಿ ಅವುಗಳನ್ನು ಪಾಲಿ ಹೌಸ್ ನಲ್ಲಿ ಬೆಳೆದು ಮಾರುವ ಮಾರಾಟಗಾರರಿಂದ ಒಂದು ಗಿಡಕ್ಕೆ 70 ಪೈಸೆಯಿಂದ ಶುರುವಾಗಿ 25 ರೂಪಾಯಿ ವರೆಗೆ ಕೊಟ್ಟು ಅವರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ . ಅಂದರೆ ಹಿಂದೆ ಇಲ್ಲದ ಕೀಟಗಳು ಅಥವಾ ರೋಗಗಳು ಇಂದು ಯಥೇಚ್ಛವಾಗಿ ಕಾಣಿಸಿಕೊಳ್ಳಲು ಕಾರಣವೇನು ಅಂತ ಯಾರಾದರೂ ಯೋಚನೆ ಮಾಡಿದ್ದಾರಾ.....!? ಹಾಗಾದರೆ ರೈತರು ಔಷಧಿ ಕಂಪನಿಗಳ ವಿಷವರ್ತುಲಕ್ಕೆ ಸಿಲುಕಿಕೊಂಡಿದ್ದಾರೆಯೇ......!? ಇವುಗಳನ್ನು ಯೋಚಿಸುವುದಿಲ್ಲವೇಕೆ.....!?  ಇಂತಹ ನಮ್ಮ ನಿರ್ಲಕ್ಷ್ಯ ಭಾವನೆ   ಪರಿಣಾಮವಾಗಿ ರೈತರು ಬೆಳೆ ಹೂಡಿಕೆ  ಮತ್ತು ಶ್ರಮದ ವೆಚ್ಚ ಹೆಚ್ಚಾಗಿ ಕೃಷಿಯಲ್ಲಿ ನಷ್ಟ ಅನುಭವಿಸಲು ಕಾರಣವಾಗುತ್ತಿದೆ . 
#ಕೊನೆಮಾತು :- ಈ ಲೇಖನ ಬರೆಯಲು ಎರಡು ಕಾರಣಗಳು .
೧) ಕೆಲವು ದಿನಗಳ ಹಿಂದೆ ಚಿತ್ರದುರ್ಗದ ರೈತ 2 ಲಕ್ಷ ರೂಪಾಯಿ ಖರ್ಚು ಮಾಡಿ 15 kg ತೂಕದ 218 ಕ್ರೇಟ್ ಮಾರಿ ಕೇವಲ 10 ರೂಪಾಯಿ  ಪಡೆದಿದ್ದಾನೆ . 
೨) ಕೆಲವು ದಿನಗಳ ಹಿಂದೆ ಅರಸೀಕೆರೆ ಸನ್ಮಿತ್ರ ಹಿರಿಯ ಪತ್ರಕರ್ತರಾದ ಗೌರವಾನ್ವಿತ ಆನಂದ್ ಕೌಶಿಕ್. ರವರು ಅವರ ವಾಲ್ ನಲ್ಲಿ ಪತ್ರಿಕೋದ್ಯಮದ ಬಗ್ಗೆ ಒಂದು ಪೋಸ್ಟ್ ಹಾಕಿದರು . ಅದರಲ್ಲಿ ನಾನೊಂದು ಅಭಿಪ್ರಾಯ ಹಾಕಿದೆ . ಅದಕ್ಕೆ ಅವರು "  ನೀವು ರೈತರೇ...!? ಎಂದು ಕೇಳಿದರು . ಅದಕ್ಕೆ ನಾನು " ಹೌದು " ಎಂದೆ . ಅದಕ್ಕೆ ಅವರು " ಬೆಳೆಗಳಿಗೆ ಕೀಟನಾಶಕಗಳನ್ನು ಹೊಡೆಯುತ್ತೀರಾ ? " ಎಂದು ಕೇಳಿ ಸುಮ್ಮನಾಗಿ ಬಿಟ್ಟರು . ಹೌದು ಎಂದು ಉತ್ತರ ಕೊಟ್ಟರೂ ಅವರಿಂದ ಪ್ರತ್ಯುತ್ತರ ಇಲ್ಲ....! ಬಹುಶಃ ಅವರಿಗೆ ಪತ್ರಿಕಾ ರಂಗವನ್ನು ಕೆಲವು ಪತ್ರಕರ್ತರು ಹಾಳು ಮಾಡಿದಂತೆ, ರೈತರು ಕೃಷಿ ವ್ಯವಸ್ಥೆಯನ್ನು  ಹಾಳು ಮಾಡಿದ್ದಾರೆ ಎಂಬ ಮನಸ್ಸಿಗೆ ಬಂದಿರಬೇಕು ಎಂದು ನನಗೆ ಅನ್ನಿಸಿತ್ತು . ಅದರ ಪರಿಣಾಮ ಈ ಲೇಖನ ಬರೆಯುವಂತೆ ಮಾಡಿತ್ತು . #ಮೌನ_ಸಾವಿರ_ಪ್ರಶ್ನೆ_ಕೇಳುತ್ತವೆ.

- Sudeeshl Kumar

ಸ್ಪೂರ್ತಿದಾಯಕ ಕಥೆ

ಇಂಥಹ ಸ್ಪೂರ್ತಿದಾಯಕ ಕಥೆಗಳನ್ನು ಮತ್ತೆ ಮತ್ತೆ ಓದಬೇಕೆನಿಸುತ್ತದೆ...

ಕಾಡಿನ ಗರ್ಭಿಣಿ ಜಿಂಕೆಗೆ ಪ್ರಸವವೇದನೆ.ಅದು ನದಿಯ ದಡದಲ್ಲಿ ಎಲ್ಲಾದರೂ ದಟ್ಟ ಹುಲ್ಲು ಇರುವ ಸ್ಥಳವನ್ನು ಹುಡುಕುವ ಯತ್ನದಲ್ಲಿತ್ತು. ಜಿಂಕೆಯ ಪ್ರಸವಕ್ಕೆ ಅನುಗುಣವಾದ ಸ್ಥಳ ದೊರೆಯಿತು.ಆಗಲೇ ಅದರ ಪ್ರಸವ ವೇದನೆ ಕೂಡ ಹೆಚ್ಚಾಗಿತ್ತು.
ಅದೇ ಕ್ಷಣದಲ್ಲಿ ದಟ್ಟ ಕಾರ್ಮೋಡಗಳು ಆವರಿಸಿ ಕಾಳ್ಗಿಚ್ಚು ತನ್ನ ಕೆನ್ನಾಲಿಗೆ ಚಾಚಲು ಆರಂಭಿಸಿತ್ತು. ತಬ್ಬಿಬ್ಬಾದ ಜಿಂಕೆ ತನ್ನ ಎಡಗಡೆ ನೋಡಿದಾಗ ಬೇಟೆಗಾರನೊಬ್ಬ ಶಸ್ತ್ರ ಸನ್ನದ್ಧನಾಗಿ ತನ್ನನ್ನು ಗುರಿಯಾಗಿಸಿದ್ದು ಕಂಡುಬಂತು. ಬಲಗಡೆ ನೋಡಿದರೆ ಹಸಿದ ಹುಲಿ ಅದನ್ನೇ ಸಮೀಪಿಸುತ್ತಿತ್ತು.
ಗರ್ಭಿಣಿ ಜಿಂಕೆ ಏನು ತಾನೇ ಮಾಡಲು ಸಾಧ್ಯ? ಅದಕ್ಕಿರುವುದು ಪ್ರಸವ ವೇದನೆ!
ತನ್ನ ಸರ್ವನಾಶಕ್ಕಾಗಿ ಕಾದು ಕುಳಿತ ಬೇಟೆಗಾರನಿಂದ ಅದು ಬದುಕುಳಿಯಲು ಸಾಧ್ಯವೇ?
ಹಬ್ಬುತ್ತಿರುವ ಕಾಳ್ಗಿಚ್ಚಿನ ನಡುವೆ ಅದು ಮಗುವಿಗೆ ಜನ್ಮ ಕೊಟ್ಟೀತೇ?
ಜಿಂಕೆ ಮುಂದೆ ಏನು ಮಾಡಬಹುದು?
ತನಗೆ ಒದಗಿದ ಕಷ್ಟಗಳನ್ನು, ತನ್ನೆದುರಿಗೇ ಕಾದು ಕುಳಿತಿರುವ ಸಾವನ್ನೂ ಲೆಕ್ಕಿಸದ ಜಿಂಕೆ, ಒಂದು ಹೊಸ ಜೀವಕ್ಕೆ ಜನ್ಮನೀಡುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿತು.ಜಿಂಕೆ ಮಗುವಿಗೆ ಜನ್ಮನೀಡುವ ಸಮಯದಲ್ಲಿ... 
– ಮೋಡ ಕವಿದಿದ್ದ ಕಾರಣ ಬೇಟೆಗಾರನ ಗುರಿ ತಪ್ಪಿ ಹೋಯ್ತು
– ಬೇಟೆಗಾರನ ತಪ್ಪಿದ ಗುರಿಗೆ ಹಸಿದ ಹುಲಿ ಬಲಿಯಾಯ್ತು
– ಕವಿದ ಮೋಡ ಹನಿಗಳನ್ನು ಸುರಿಸಿ ಕಾಳ್ಗಿಚ್ಚನ್ನು ಆರಿಸಿತು
ಅಷ್ಟರಲ್ಲಿ ಜಿಂಕೆಯ ಸುಖ ಪ್ರಸವವೂ ಆಗಿತ್ತು.ಜಿಂಕೆಯಂತೆಯೇ ಮನುಷ್ಯನ ಬದುಕಿನಲ್ಲೂ ಅನೇಕ ಕಡೆಗಳಿಂದ ಕಷ್ಟಗಳು,ನಕಾರಾತ್ಮಕ ಆಲೋಚನೆಗಳು ಬರುತ್ತವೆ.ಕೆಲವೊಮ್ಮೆ ಇಂತಹ ಆಲೋಚನೆಗಳು ನಮ್ಮನ್ನೇ ನಾಶ ಮಾಡುವಷ್ಟು ಪ್ರಬಲವಾಗಿರುತ್ತವೆ.
ಜಿಂಕೆಗೆ ಆ ಕ್ಷಣದಲ್ಲಿ ಹೆಚ್ಚಿನ ಆದ್ಯತೆ ಮಗುವಿಗೆ ಜನ್ಮ ನೀಡುವುದಾಗಿತ್ತು.
ಹಾಗಾಗಿ ಅದು ಉಳಿದ ಕಷ್ಟಗಳನ್ನೆಲ್ಲ ಮರೆತು ತನ್ನ ಕರುಳ ಬಳ್ಳಿಗೆ ಜೀವ ಕೊಡುವುದಕ್ಕೆ ಮೊದಲಾಯ್ತು.
ಮಗುವಿಗೆ ಜೀವ ಕೊಡುವುದರ ಹೊರತಾಗಿ ಮತ್ತೇನನ್ನು ಮಾಡಲು ಜಿಂಕೆ ಅಶಕ್ತವಾಗಿತ್ತು.

ಜಿಂಕೆಯಂತೆಯೇ ನಾವು ಕೂಡ ನಮ್ಮ ಕೆಲಸದ ಮೇಲೆ,ಜೀವನದ ಮೇಲೆ ಪ್ರೀತಿ, ಗಮನ,ನಂಬಿಕೆ,ಭರವಸೆಗಳನ್ನಿಟ್ಟಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.ಆಗ ಎಂತಹುದೇ ಆಘಾತ,ಕಷ್ಟಗಳು ನಮ್ಮನ್ನು ಹತ್ತಿಕ್ಕಲಾರವು.....

ಹಳತು ಹೊಸತು

> ನೀತಿ
 ಹಳತು ಹೊಸತು

ಹಳತೆಂಬ ಕಾರಣಕೆ ಒಳಿತಾಗಬೇಕಿಲ್ಲ
ಹೊಸತಿದು ಎಂಬುದಕೆ ಹೊರದೂಡಬೇಕಿಲ್ಲ
ಅರಿತವರು ಒರೆಗಿರಿಸಿ ಬಳಿಕವೇ ಹೊಗಳುವರು
ಮರುಳರವರಿವರಮಾತನೇ ತಲೆಗೇರಿಸುವರು

ಸಂಸ್ಕೃತ ಮೂಲ: 

ಪುರಾಣಮಿತ್ಯೇವ ನ ಸಾಧು ಸರ್ವಂ
ನ ಚಾಪಿ ಕಾವ್ಯಂ ನವಮಿತ್ಯವದ್ಯಂ |
ಸಂತಃ ಪರೀಕ್ಷ್ಯಾನ್ಯತರದ್ಭಜಂತೇ
ಮೂಢಃ ಪರಪ್ರತ್ಯಯನೇನಬುದ್ಧಿಃ ||

 ಕಾಳಿದಾಸ ಇದನ್ನು ಕಾವ್ಯದ ವಿಷಯವಾಗಿ ಹೇಳಿದ್ದು ಕಡಿಮೆಯೆಂದರೆ ಹದಿನೈದು ಶತಮಾನಗಳ ಹಿಂದೆ. ಆದರೆ, ಅಂದಿಗೂ, ಇಂದಿಗೂ, ಎಂದಿಗೂ, ಎಲ್ಲ ವಿಷಯಕ್ಕೂ ಹೊಂದುವ ನಲ್ನುಡಿ!

ಜೂಲಿಯಸ್ ಸೀಸರ್‌ನಿಂದ ಶಾಲಿವಾಹನ ಶಕೆಯವರೆಗೆ

ಯುಗಾದಿ ಬರುತಿದೆ ತನ್ನಿಮಿತ್ಯ ಸಂಗ್ರಹಿಸಿದ ಲೇಖನ
ಯುಗಾದಿಯ ಶುಭಾಶಯದೊಂದಿಗೆ

_*ಯುಗಾದಿ:*_

_*ನಿತ್ಯ ನಂಬಿಕೆಯ ಬಿಂಬಗಳು*_

ಜೂಲಿಯಸ್ ಸೀಸರ್‌ನಿಂದ ಶಾಲಿವಾಹನ ಶಕೆಯವರೆಗೆ

ವಸಂತ ಋತುವಿನ ಆಗಮನವೆಂದರೆ ಸಂಭ್ರಮ ಪಲ್ಲವಿಸುವ ಸಮಯ. ಈ ಋತುರಾಜನ ಆಗಮನದೊಂದಿಗೆ ಯುಗಾದಿಯೂ ಬರುತ್ತದೆ. ಧರ್ಮಸಿಂಧು, ಅಥರ್ವವೇದ, ಶತಪಥ ಬ್ರಾಹ್ಮಣ ಇನ್ನೂ ಮುಂತಾದ ಧಾರ್ಮಿಕ ಗ್ರಂಥಗಳಲ್ಲಿ ಯುಗಾದಿಯ ವೈಶಿಷ್ಟ್ಯದ ಉಲ್ಲೇಖವಿದೆ. 'ಯುಗ' ಎಂದರೆ- ನೂತನ ವರ್ಷ; 'ಆದಿ' ಎಂದರೆ- ಆರಂಭ. ಅಂದಹಾಗೆ, ಭಗವದ್ಗೀತೆಯ 'ವಿಭೂತಿ ಯೋಗ'ದಲ್ಲಿ ಶ್ರೀಕೃಷ್ಣನು 'ಋತುಗಳಲ್ಲಿ ವಸಂತವು ನಾನು' (ಋತೂನಾಂ ಕುಸುಮಾಕರಃ) ಎಂದು ಖುಷಿಯಿಂದ ಹೇಳಿಕೊಂಡಿದ್ದಾನೆ. ಈ ಋತುವಿನಲ್ಲಿ ಹೊಸ ಚಿಗುರಿನ ಹಸಿರು ವಸ್ತ್ರವನ್ನುಟ್ಟು ರಾರಾಜಿಸುವ ನಿಸರ್ಗವನ್ನು ಕಂಡಾಗ, ಕೋಗಿಲೆಗಳ ಇಂಚರವನ್ನು ಆಲಿಸಿದಾಗ, 'ಆನಂದಮಯ ಈ ಜಗ ಹೃದಯ' ಎಂಬ ಕವಿ ವಾಣಿಯ ಸತ್ಯದ ದರ್ಶನವಾಗುತ್ತದೆ.

ಕ್ರಿಸ್ತಪೂರ್ವ 2000ದಷ್ಟು ಮೊದಲೇ ಮೆಸಪಟೋಮಿಯಾದಲ್ಲಿ ಹೊಸ ವರ್ಷ ಆಚರಿಸುವ ಪದ್ದತಿ ಇತ್ತು. ಬ್ಯಾಬಿಲೋನಿಯಾದಲ್ಲಿ ಮೇಷ ಮಾಸದ ಅಮಾವಾಸ್ಯೆಯಂದು, ಅಸ್ಸೀರಿಯಾದಲ್ಲಿ ತುಲಾ ಮಾಸದ ಅಮಾವಾಸ್ಯೆಯಂದು, ಪರ್ಷಿಯನ್ನರು ಮತ್ತು ಈಜಿಪ್ಶಿಯನ್ನು ತುಲಾ ಸಂಕ್ರಾಂತಿಯಂದು, ಗ್ರೀಕರು ಮಕರ ಸಂಕ್ರಾಂತಿಯಂದು ಹೊಸ ವರ್ಷವನ್ನು ಆಚರಿಸುತ್ತಿದ್ದರು. ಈಗ ನಾವು 'ಯುಗಾದಿ ಯಾವತ್ತು?' ಎಂದು ಯಾರಾದರೂ ಕೇಳಿದರೆ ನಮ್ಮ ಪಂಚಾಂಗ ನೋಡಿ ಥಟ್ಟನೆ ಉತ್ತರ ಹೇಳಬಹುದು ತಾನೇ? ಆದರೆ, ಇವುಗಳಲ್ಲಿ ನಮೂದಿಸಿರುವ ಎಣಿಕೆಗಳ ಹಿಂದೆ ಶತಶತಮಾನಗಳ ಶ್ರಮ, ಲೆಕ್ಕಾಚಾರ, ತಿದ್ದುಪಡಿ ಅಡಗಿದೆ.

ಅಂದಹಾಗೆ ಮನುಷ್ಯನ ಪಾಲಿನ ಪ್ರಪ್ರಥಮ ಪಂಚಾಂಗವೆಂದರೆ ಆಕಾಶ. ಆಗಸದಲ್ಲಿ ಸೂ0ರ್ು ಮತ್ತು ಚಲಿಸುವ ಗ್ರಹಗಳ ಗತಿಗಳನ್ನು ಅಭ್ಯಸಿಸಿದಾಗ ಮೊದಲ ಪಂಚಾಂಗ ಜನ್ಮ ತಾಳಿತು. ಮೊಟ್ಟಮೊದಲಿಗೆ 24 ಗಂಟೆಗಳೆಂದರೆ ಒಂದು ದಿನ ಎಂದು ನಿಗದಿಪಡಿಸಿದ್ದು ಈಜಿಪ್ಶಿಯನ್ನರು. ಹಿಂದೆಲ್ಲಾ ಸೂರ್ಯಾಸ್ತದ ನಂತರದ ಕತ್ತಲಲ್ಲಿ ಏನೂ ಮಾಡಲಾಗದಿದ್ದಾಗ ನಭೋಮಂಡಲದ ವೀಕ್ಷಣೆಯೇ ಹೊತ್ತು ಕಳೆಯುವ ಮಾರ್ಗವಾಗಿತ್ತು. ಆ ಅಂಧಕಾರದಲ್ಲಿ ಒಮ್ಮೆ ಪೂರ್ಣ, ಇನ್ನೊಮ್ಮ ಅಪೂರ್ಣ, ಮತ್ತೊಮ್ಮೆ ಅದೃಶ್ಯವಾಗುತ್ತಿದ್ದ ಸುಂದರ ಚಂದ್ರನು ಮನುಷ್ಯನನ್ನು ಆಕರ್ಷಿಸಿದ. ಇದನ್ನು ಕಂಡೇ ಕೆಲವರು 'ಮಧ್ಯಮ ಸಪ್ತಾಂಶ'ವನ್ನು ಸೃಷ್ಟಿಸಿದರು. ಮುಂದೆ ಇದೇ ದಿನ ಹಾಗೂ ಮಾಸ ಕ್ಯಾಲೆಂಡರ್ ಪಂಚಾಂಗದ ಮೂಲ ಅಳತೆಗೋಲಾಯಿತು.

ಚಾಂದ್ರಮಾನ ಹಾಗೂ ಸೌರಮಾನ ಪಂಚಾಂಗಗಳಲ್ಲಿ ಮೊದಲಿಗೆ ಮಳೆ-ಬೆಳೆ, ಪ್ರವಾಹ, ಸೂರ್ಯ-ಚಂದ್ರರ ಚಲನೆಯ ಗತಿಗಳು ಬೇರೆ ಇರುತ್ತಿದ್ದವು. ಈ ತಪ್ಪನ್ನು ಜೂಲಿಯಸ್ ಸೀಸರ್ ತನ್ನ ರಾಜಬಲ ಪ್ರಯೋಗಿಸಿ ಸರಿ ಮಾಡಿದ. 'ಮುನ್ನೂರರವತ್ತೈದೂ ಕಾಲು ದಿನಗಳಿಗೆ ಒಂದು ವರ್ಷ', 'ನಾಲ್ಕು ವರ್ಷಕ್ಕೊಮ್ಮೆ ಅಧಿಕ ವರ್ಷ' ಎನ್ನುವುದೆಲ್ಲ ಜಾರಿಗೆ ಬಂದಿದ್ದು ಅವನ ಕಾಲದಲ್ಲೇ. ಆದರೆ, ಇದರಲ್ಲೂ ಕೆಲ ಲೋಪಗಳಿದ್ದವು. ಮುಂದೆ 1582ರಲ್ಲಿ ಪೋಪ್ ಗ್ರೆಗೊರಿ ಇದನ್ನು ಇನ್ನಷ್ಟು ಸರಿಪಡಿಸಿದ. ಇದೇ 'ಗ್ರೆಗೊರಿಯನ್ ಕ್ಯಾಲೆಂಡರ್'. ಇಷ್ಟಾದರೂ ಹಲವು ಸಂಸ್ಕೃತಿಗಳು ವ್ಯವಹಾರಕ್ಕೆ ಈ ಕ್ಯಾಲೆಂಡರನ್ನು ಬಳಸಿದರೂ, ತಮ್ಮ ರೀತಿ-ರಿವಾಜು, ಹಬ್ಬ-ಹರಿದಿನ, ಮದುವೆ-ಮುಂಜಿ, ಶುಭ-ಅಶುಭ, ತಿಥಿ-ಮುಹೂರ್ತ, ಸಂಪ್ರದಾಯ-ಸಂಸ್ಕೃತಿಗಳಿಗೆಲ್ಲ ಶತಶತಮಾನಗಳಿಂದಲೂ ಚಾಂದ್ರಮಾನ ಪಂಚಾಂಗವನ್ನೇ ನೆಚ್ಚಿಕೊಂಡಿವೆ. ಈ ನಂಬಿಕೆಯನ್ನು ಯಾರಿಗೂ ಕದಲಿಸಲು ಸಾಧ್ಯವಾಗಿಲ್ಲ. ಇಸ್ಲಾಂ ಅನುಯಾಯಿಗಳು ಸಹ ಅನುಸರಿಸುವುದು ಚಾಂದ್ರಮಾನ ಪಂಚಾಂಗವನ್ನೇ.

ಚೈತ್ರ ಶುಕ್ಲ ಪಾಡ್ಯದ ದಿನವೇ ಚಾಂದ್ರಮಾನ ಯುಗಾದಿ. ಇದು ಬರುವುದು ಮೇಷ ಸಂಕ್ರಮಣದ ಮೊದಲು ಬರುವ ಅಮಾವಾಸ್ಯೆಯ ಮಾರನೇ ದಿನ. ಅಂದರೆ, ಇಂಗ್ಲಿಷ್ ಕ್ಯಾಲೆಂಡರ್‌ನ ಮಾರ್ಚ್ 14ರಿಂದ ಏಪ್ರಿಲ್ 13ರ ಒಳಗೆಯೇ ಇರುತ್ತದೆ. ಆದರೆ ಸೌರಮಾನ ಯುಗದಿ ಮಾತ್ರ ಪ್ರತೀವರ್ಷವೂ ಏಪ್ರಿಲ್ 14ರಂದೇ ಬರುತ್ತದೆ. ವಾಲ್ಮೀಕಿ ಮಹರ್ಷಿಯ ರಾಮಾಯಾಣ ಮಹಾಕಾವ್ಯದ ಪ್ರಕಾರ, ರಾಮನು ರಾವಣನನ್ನು ಕೊಂದು ಅಯೋಧ್ಯೆಗೆ ಬಂದು ಆಳ್ವಿಕೆ ಆರಂಭಿಸಿದ್ದು ಯುಗಾದಿಯಂದೇ.

ಯುಗಾದಿದ ಮಹತ್ವ
ಪಾಶ್ಚಾತ್ಯರ ಪ್ರಭಾವದಿಂದ ಜನವರಿ 1ರಂದು ಹೊಸವರ್ಷದ ಆಡಂಬರ ನಡೆಯುತ್ತದೆ, ನಿಜ. ಆದರೂ ಯುಗಾದಿಯ ಭಾವಸಿಂಚನಕ್ಕೆ ಧಕ್ಕೆ ಉಂಟಾಗಿಲ್ಲ. ವಸಂತ ಋತುವಿನ ಚಿತ್ರಣವೇ ಯುಗಾದಿಯ ಚಿತ್ರಣ. ಯುಗಾದಿ ಹಬ್ಬಗಳ ಸಾಮ್ರಾಟನೂ ಹೌದು. ಯುಗಾದಿಯಲ್ಲಿ

ಚಾಂದ್ರಮಾನ, ಸೌರಮಾನ, ಸಾವನಮಾನ, ನಕ್ಷತ್ರಮಾನ ಮತ್ತು ಬೃಹಸ್ಪತ್ಯಮಾನ ಎಂದು ಐದು ಪ್ರಕಾರ.

ಕ್ರಿಸ್ತಶಕೆ ಆರಂಭವಾಗಿ ಎಪ್ಪತ್ತೆಂಟು ವರ್ಷಗಳ ತರುವಾಯ ಶುರುವಾಗಿದ್ದು ಶಾಲಿವಾಹನ ಶಕೆ. ದಕ್ಷಿಣ ಭಾರತದಲ್ಲಿ ಈಗಲೂ ಈ ಶಕೆ ಬಳಕೆಯಲ್ಲಿದೆ. ಶಕರು ಈ ದೇಶದ ಮೇಲೆ ದಾಳಿ ಮಾಡಿದಾಗ, ಅಂದು ನರ್ಮದಾ ಮತ್ತು ಕಾವೇರಿ ನಡಿಗಳ ನಡುವೆ ರಾಜ್ಯವಾಳುತ್ತಿದ್ದ ಶಾಲಿವಾಹನ, ಅವರ ಬಲವನ್ನು ಮುರಿದು ವಿಜಯ ಪತಾಕೆಯನ್ನು ಹಾರಿಸಿದ ದಿನ ಈ ಚೈತ್ರ ಶುದ್ಧ ಪ್ರತಿಪದೆ.

ಕಮಲಾಕರ ಭಟ್ಟನ ಒಂದು ಬೃಹತ್ ಗ್ರಂಥವಿದೆ. ಅದೇ 'ನಿರ್ಣಯ ಸಿಂಧು'. ಅದರ ಪ್ರಕಾರ 'ಬ್ರಹ್ಮನು ಈ ಜಗತ್ತನ್ನು ಚೈತ್ರ ಶುದ್ಧ ಪ್ರತಿಪದೆಯಂದು ಸೂರ್ಯೋದಯ ಕಾಲಕ್ಕೆ ಸರಿಯಾಗಿ ಸೃಷ್ಟಿಸಿದ. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷ, ವರ್ಷಾಧಿಪತಿಗಳನ್ನೂ ಸೃಷ್ಟಿಸಿ, ಕಾಲಗಣನೆ ಆರಂಭಿಸಿದ'. ಜೊತೆಗೆ ಈ ದಿನ ಯಾವ ವಾರವಾಗಿರುವುದೋ ಆ ವಾರಾಧಿಪತಿ ಆ ವರ್ಷ ರಾಜ. ಉದಾಹರಣೆಗೆ, ಯುಗಾದಿ ಈ ವರ್ಷ ಶನಿವಾರ ಬಂದಿದೆ. ಆದ್ದರಿಂದ ಶನೈಶ್ಚರನೇ ಈ ವರ್ಷದ ರಾಜ.

ಯುಗಾದಿಯ ದಿನವಾದ ಚೈತ್ರ ಶುದ್ಧ ಪ್ರತಿಪದೆಯಿಂದ ವಸಂತ ನವರಾತ್ರಿ ಆರಂಭ. ಇದಾದ ಆರು ತಿಂಗಳಿಗೆ ಸರಿಯಾಗಿ ಶರನ್ನವರಾತ್ರಿ ಬರುತ್ತದೆ. ವಾತಾವರಣದಲ್ಲಿ ಅಗಾಧ ಬದಲಾವಣೆ ಕಾಣುವ ಈ ಎರಡೂ ಋತುಗಳು ಭಕ್ತಿಗೆ ಪ್ರಶಸ್ತ ಮುಹೂರ್ತಗಳಾಗಿವೆ. ಇನ್ನೊಂದು ನಂಬಿಕೆಯ ಪ್ರಕಾರ, ಬ್ರಹ್ಮನು ಜಗತ್ತನ್ನು ಸೃಷ್ಟಿಸಿದ್ದು ಯುಗಾದಿಯಂದೇ. ಅಂದಿನಿಂದ ಕಾಲಗಣನೆಗಾಗಿ ಗ್ರಹ, ನಕ್ಷತ್ರ, ಋತು, ಮಾಸ, ತಿಥಿ ಇತ್ಯಾದಿಗಳನ್ನು ನಿಯೋಜಿಸನೆಂದು ಪುರಾಣಗಳು ಹೇಳುತ್ತವೆ. ಇದೇನೇ ಇರಲಿ, ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಲ್ಲಿ ಚಾಂದ್ರಮಾನ ಯುಗಾದಿಗೆ ಇನ್ನಿಲ್ಲದ ಮಹತ್ತ್ವವಿದೆ. ಆದರೆ ಉತ್ತರ ಭಾರತೀಯರು ವಿಕ್ರಮ ಶಕೆ (ನಮ್ಮದು ಶಾಲಿವಾಹನ ಶಕೆ) ಅನುಸರಿಸುವುದರಿಂದ ದೀಪಾವಳಿಯ ಪಾಡ್ಯದಿಂದ ಅವರು ಹೊಸ ವರ್ಷ ಶುರು ಮಾಡುತ್ತಾರೆ.

ಹಿಂದೂ ಸಂಪ್ರದಾಯದಲ್ಲಿ 'ಧರ್ಮಸಿಂಧು' ಎಂಬ ಒಂದು ಗ್ರಂಥವಿದೆ. ಅದು ಯುಗಾದಿ ಹಬ್ಬದ ದಿನಕ್ಕೆ ಸಂಬಂಧಿಸಿದಂತೆ ಈ ಐದು ವಿಧಿಗಳನ್ನು ಸೂಚಿಸಿದೆ- ತೈಲಾಭ್ಯಂಜನ (ಎಣ್ಣೆ ನೀರು), ದೇವತಾ ಸ್ತುತಿ, ಧರ್ಮ ಧ್ವಜಾರೋಹಣ, ನಿಂಬಕುಸುಮ ಭಕ್ಷಣ (ಬೇವಿನೆಲೆಯ ಸೇವನೆ) ಮತ್ತು ಪಂಚಾಂಗ ಶ್ರವಣ. ಈ ಪೈಕಿ ಪಂಚಾಂಗ ಶ್ರವಣ ಮಾತ್ರ ಸಾಮೂಹಿಕವಾಗಿ ನಡೆಯುತ್ತದೆ. ಇದು ಸಾಮಾನ್ಯವಾಗಿ ನಡೆಯುವುದು ಊರಿನ ಪ್ರಮುಖ ದೇವಸ್ಥಾನಗಳಲ್ಲೇ. ಹೆಚ್ಚಾಗಿ ಹನುಮಂತನ ಗುಡಿಯಲ್ಲಿ ಅಥವಾ ಸಮಾರಂಭದಲ್ಲಿ ಸಾರ್ವಜನಿಕವಾಗಿ ಜಾತಿ ಮತ ಪಂಥಗಳ ಬೇಧವಿಲ್ಲದೆ ಎಲ್ಲರೂ ಸೇರಿ ಒಬ್ಬ ಜ್ಯೋತಿಷಿಯಿಂದ ಪಂಚಾಂಗ ಪಠಣ ಮಾಡಿಸುತ್ತಾರೆ. ಇದು ಮಹಾಭಾರತ ಕಾಲದಿಂದಲೂ ನಡೆದುಕೊಂಡು ಬಂದಿದೆ. ಯುಗಾದಿ ಹಬ್ಬದಂದು 'ತಿಥಿಯ ಶ್ರವಣ ಮಾಡುವುದರಿಂದ ಸಂಪತ್ತು, ವಾರದಿಂದ ಆಯುಷ್ಯ ವೃದ್ಧಿ, ನಕ್ಷತ್ರದಿಂದ ಪಾಪನಾಶ, ಯೋಗದಿಂದ ರೋಗನಾಶ, ಕರಣದಿಂದ ಚಿಂತಿಸಿದ ಕಾರ್ಯದಲ್ಲಿ ಸಿದ್ಧಿ ಲಭಿಸುತ್ತವೆ' ಎಂಬ ನಂಬಿಕೆ ಇದೆ. ಒಂದು ವೇಳೆ ಊರಲ್ಲಿ ದೇಗುಲವಿಲ್ಲವೆಂದರೆ, ಊರಿನ ಪ್ರಮುಖರ ಮನೆ ಇದಕ್ಕೆ ವೇದಿಕೆಯಾಗುತ್ತದೆ. ಇದು, ಒಂದು ದೃಷ್ಟಿಯಿಂದ ಸಾಮಾಜಿಕ ಸಂಘಟನೆಗೆ ಸಹಾಯಕ. ಅಂದಹಾಗೆ, ಪಂಚಾಂಗ ಶ್ರವಣದ ಸಂಪ್ರದಾಯ ಹೆಚ್ಚಾಗಿ ಬಳಕೆಯಲ್ಲಿರುವುದು ಕರ್ನಾಟಕ, ಆಂಧ್ರ, ಕೇರಳ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ. ಪಂಚಾಂಗ ಶ್ರವಣದಲ್ಲಿ ರಾಶಿ ಭವಿಷ್ಯದಿಂದ ಹಿಡಿದು ಮಳೆ-ಬೆಳೆ, ಆಯ-ವ್ಯಯ, ದೇಶದ ಭವಿಷ್ಯ, ಯುದ್ಧ-ಶಾಂತಿ ಹೀಗೆ ಮನುಕುಲದ ಒಳಿತು ಅಡಗಿರುವ ವಿಚಾರಗಳನ್ನೇ ಕೇಳಲಾಗುವುದು.

ಚಾಂದ್ರಮಾನ ಎಂದರೇನು?
ಧಾರ್ಮಿಕ ಆಚರಣೆಗೆ ಸಂಪ್ರದಾಯದ ಆಧಾರವಿದ್ದರೂ ಖಗೋಳದ ಒಂದು ನಿರ್ದಿಷ್ಟ ಘಟನೆಗೆ ಅದು ಸಂವಾದಿಯಾದಾಗ ಇನ್ನೂ ಹೆಚ್ಚು ಅರ್ಥಪೂರ್ಣವಾಗುತ್ತದೆ. ಚಂದ್ರನ ಚಲನೆಯನ್ನು ಅನುಸರಿಸಿ, ಅಮಾವಾಸ್ಯೆ-ಹುಣ್ಣಿಮೆಗಳ ಆಧಾರದ ಮೇಲೆ, ಮಾಸ ಗಣನೆ ಮಾಡುವ ಪದ್ಧತಿಯೇ ಚಾಂದ್ರಮಾನ. 'ತಿಂಗಳು' ಎಂಬ ಹೆಸರು ಬಂದಿರುವುದು ಚಂದ್ರನಿಂದಲೇ. ಹೀಗಾಗಿಯೇ 'ತಿಂಗಳು ಮಾಮ, ತಿಂಗಳ ಬೆಳಕು' ಎಂಬಲ್ಲೆಲ್ಲ 'ತಿಂಗಳು' ಎಂದರೆ 'ಚಂದ್ರ' ಎಂದೇ ಅರ್ಥ. ಇಲ್ಲಿ ಹುಣ್ಣಿಮೆಯಂದು ಚಂದ್ರ ಯಾವ ನಕ್ಷತ್ರಯುಕ್ತನಾಗಿರುವನೋ ಆ ಹೆಸರಿನಿಂದಲೇ ಆಯಾ ತಿಂಗಳನ್ನು ಕರೆಯಲಾಗುತ್ತದೆ. ಉದಾಹರಣೆಗೆ, ಚಂದ್ರ ಅಂದು ಚಿತ್ತಾ ನಕ್ಷತ್ರಯುಕ್ತನಾಗಿದ್ದರೆ ಅದು ಚೈತ್ರ ಮಾಸ, ವಿಶಾಖ ನಕ್ಷತ್ರದಲ್ಲಿದ್ದರೆ ಅದು ವೈಶಾಖ ಮಾಸ. ಇಲ್ಲಿಯ ತಿಥಿಗಳು, ಮಾಸಗಳು ಎಲ್ಲವೂ ಖಗೋಳದಲ್ಲಿ ಸಂಭವಿಸುವ ಘಟನೆಗಳಿಗೆ ಸಂವಾದಿಯಾಗಿವೆ. 5ನೇ ಶತಮಾನದಲ್ಲಿದ್ದ ಪ್ರಸಿದ್ಧ ಖಗೋಳ ವಿಜ್ಞಾನಿ ವರಾಹಮಿಹಿರ ಕೂಡ ಚೈತ್ರ ಶುದ್ಧ ಪಾಡ್ಯವೇ ಹೊಸ ವರ್ಷವೆಂದು ದೃಢೀಕರಿಸಿದ್ದಾನೆ. 
(ಸಂಗ್ರಹ)
 *ಎಲ್ಲರಿಗೂ ಯುಗಾದಿ ಹಬ್ಬದ ಹಾರ್ಧಿಕ ಶುಭಾಷಯಗಳು*

ವಿಕಾರಿನಾಮ ಸಂವತ್ಸರದ ಶುಭಾಶಯ

ರಾಜಾಧಿರಾಜಾಯ . .

ನಮ್ಮಲ್ಲಿ ಹಿಂದೊಬ್ಬ ರಾಜನಿದ್ದ. ರಾಜನೆಂದರೆ ಅದೊಂದು ದೈತ್ಯ ಶಕ್ತಿಯ ವ್ಯಕ್ತಿತ್ವ ಅವನದ್ದು. ಪ್ರಜೆಗಳು ಅವನ ಆಡಳಿತದಲ್ಲಿ ಸ್ವತಃ ಪಾಲ್ಗೊಳ್ಳುತ್ತಿದ್ದರು. ರಾಜನೆನ್ನುವ ಭಯ ಪ್ರಜೆಗಳಲ್ಲಿರಲಿಲ್ಲ. ಆದರೆ ಭಕ್ತಿ ಮತ್ತು ವಿಶ್ವಾಸವಿತ್ತು. ಆ ಕಾರಣದಿಂದಲೇ ಆಡಳಿತದಲ್ಲಿಯೂ ಸಹ ಸ್ವಯಂಸೇವಕರಾಗಿ ಪಾಲ್ಗೊಳ್ಳುತ್ತಿದ್ದರಂತೆ. ಈತ ಪೂರ್ವದ ಬಂಗಾಲದಿಂದ ಪಶ್ಚಿಮದ ಸಮುದ್ರದ ತನಕ ಯುದ್ಧಮಾಡಿದ್ದ. ಉತ್ತರದಲ್ಲಿ ಹಿಮಾಲಯದಿಂದ ಕನ್ಯಾಕುಮಾರಿಯ ತನಕ ಹೋಗಿ ಸಿಂಹಳವನ್ನು ಗೆದ್ದಿದ್ದ. ಇವಿಷ್ಟೂ ಅಲ್ಲದೇ ಈತನ ಆಕ್ರಮಣಗಳಿಗೆ ಹೆದರಿದ ಅನೇಕ ದ್ವೀಪವಾಸಿಗಳು ಸ್ವತಃ ಕಪ್ಪಗಳನ್ನು ಕೊಟ್ಟು ಈತನ ಹೆಸರಿನಲ್ಲಿ ತಾವು ರಾಜ್ಯಭಾರ ಮಾಡುತ್ತಿದ್ದರಂತೆ. ಈತ ಭಾರತದ ಪ್ರದೇಶವನ್ನು ಮಾತ್ರವೇ ಆಕ್ರಮಿಸಿ ಏಕಚಕ್ರಾಧಿಪತ್ಯದಡಿ ತಂದಿಲ್ಲ. ಬಾಹ್ಲೀಕವನ್ನು ವಶಪಡಿಸಿಕೊಂಡಿದ್ದ. ತನ್ನ ದಾರಿಯನ್ನು ಆಯ್ದುಕೊಂಡಾಗ ಪರ್ಷಿಯನ್ನರ ವರ್ಣನೆ ಹೀಗೆ ದಾಖಲಾಗಿದೆ. . . . ಕೆಂಪು ಕೆನ್ನೆಗಳ ಕಮಲದಂತಿರುವ ಮುಖ ಹೊಂದಿರುವ ಮದಿರೆಯ ನಶೆಯಲ್ಲಿದ್ದ ಯವನ ಮಹಿಳೆಯರ ಮುಖವು ರಾಜನ ದಾಳಿಯಿಂದ ಮಸುಕಾಯಿತು. ಪಶ್ಚಿಮ ದೇಶದ ಅಶ್ವ ಸೈನ್ಯವು ವ್ಯರ್ಥವಾಗಿ ಈ ರಾಜನೊಂದಿಗೆ ಹೋರಾಡಿತು. ರಾಜ ಮತ್ತು ಆತನ ಸೈನ್ಯವು ಸಿಂಧೂನದಿಯ ದಡದಲ್ಲಿ ವಿಶ್ರಾಂತಿ ಪಡೆಯಿತು. ಕಾಂಭೋಜದ ರಾಜನಿಗೂ ಸಹ ಇವನನ್ನು ತಡೆಯಲಿಕ್ಕಾಗಲಿಲ್ಲ ಎಂದು ಕಾಳಿದಾಸ ವರ್ಣಿಸುತ್ತಾನೆ. ಮುಂದುವರಿದು ಆತ ಹೇಳುವಂತೆ ತಾಮ್ರಪರ್ಣಿ ನದಿಯ ಸಂಗಮದಿಂದ ಮುತ್ತುಗಳನ್ನು ಹೊತ್ತೊಯ್ದ ನೀರು ಸಾಗರವನ್ನು ಸೇರುವಂತೆ ಪಾಂಡ್ಯ ದೊರೆಯ ಕೀರ್ತಿಗಳೆಲ್ಲವೂ ಸಾಗರದೋಪಾದಿಯಲ್ಲಿ ಈ ದೊರೆಗೆ ಸೇರಿತು. ಎನ್ನುತ್ತಾನೆ. ಶಾಸನದಲ್ಲಿ ಈತನ ಕುರಿತಾಗಿ ಹೇಳುವಂತೆ. ಈತನ ದೇಹದಲ್ಲಿ ಗಾಯಗಳಿಲ್ಲದ ಜಾಗ ಇಲ್ಲವಂತೆ. ಆದರೆ ಇಂತಹ ಪರಾಕ್ರಮಿ ರಾಜ ಇಷ್ಟೆಲ್ಲಾ ರಾಜ್ಯಗಳನ್ನು ಗೆದ್ದ. ಅಖಂಡ ಭಾರತದ ಅಧಿಪತ್ಯಪಡೆದ. ಆದರೆ ಈತ ಮುಂದೆ ಹೇಳುವ ವಿಷಯದ ಪ್ರತಿರೂಪವಾಗಿದ್ದ. ಎಲ್ಲ ಕಡೆ ವಿಜಯಿಯಾಗುತ್ತಾನೆ. ಆದರೆ ಗೆದ್ದ ರಾಜ್ಯಗಳನ್ನು ಪುನಃ ಆ ರಾಜರಿಗೇ ಒಪ್ಪಿಸಿ ಅಲ್ಲಿಗೆ ಅವರನ್ನೇ ಮುಂದುವರಿಯುವಂತೆ ನೋಡಿಕೊಳ್ಳುತ್ತಿದ್ದ. ಹಿಂಸೆ ಎನ್ನುವುದು ಈತನಿಗೆ ಪರಿಚಯವೇ ಇರಲಿಲ್ಲ ಎಂದು ಇತಿಹಾಸದಲ್ಲಿ ದಾಖಲಾಗುತ್ತದೆ. ಈತ ರಾಜ್ಯವಾಳಿದ್ದು ರಾಜರ್ಷಿಯಾಗಿ. ಭಾರತ ವೈದಿಕ ಆಡಳಿತ ಹೊಂದಿತ್ತು. ಈ ರಾಜನೇ ನಮಗೆ #ಸರ್ವ್ವ_ಕರ_ದಾನಾಜ್ಞಾಕರಣ_ಪ್ರಣಾಮಾಗಮನ_ಪರಿತೋಷಿತ_ಪ್ರಚಂಡ_ಶಾಸನಸ್ಯ ಅನೇಕ ಭ್ರಷ್ಟ ರಾಜ್ಯೋತ್ಸನ್ನ ರಾಜವಂಶ ಪ್ರತಿಷ್ಠಾಪನೋದ್ಭೂತ ನಿಖಿಲ ಭುವನ ವಿಚಾರಣ ಶ್ರಾಂತ ಯಶಸಃ ಎಂದು ಘೋಷಿಸಿಕೊಂಡ ಸಮುದ್ರಗುಪ್ತ. ಇಂಥಹ ರಾಜ ಆಳಿದ್ದರೂ ನಮ್ಮಲ್ಲಿ ಎಲ್ಲವಕ್ಕೂ ತಪ್ಪು ಹುಡುಕುವ ಅಥವಾ ಆಧುನಿಕತೆಯನ್ನು ಹುಡುಕುವ ಪರಿಪಾಠವಿದೆ. ಬಹು ಮುಖ್ಯವಾಗಿ ಪ್ರಾಚೀನತೆ ನಮಗದು ಅಸಹ್ಯ. ಇತ್ತೀಚೆಗೆ ನಿರ್ಧಾರಕ್ಕೆ ಬಂದಿದ್ದಾರೆ. ಅದು ಅನೇಕ ಸಾಹಿತ್ಯಗಳಲ್ಲಿ ಮತ್ತು ಲೇಖನಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅಂದರೆ ಈ ದೇಶದಲ್ಲಿ ಆಡಳಿತ ವ್ಯವಸ್ಥೆ ಆರಂಭವಾದದ್ದೇ ಬ್ರಾಹ್ಮಣಗಳು ಬಂದನಂತರ. ಜನಪದವಿರಲಿ, ಮಹಾಜನಪದವಿರಲಿ ಅವೆಲ್ಲವೂ ಆಮೇಲಿನ ಅನ್ಯ ದೇಶೀಯರನ್ನು ನೋಡಿ ಕಲಿತದ್ದು ಎನ್ನುವಂತಹ ಧೋರಣೆ. ಆದರೆ ಗ್ರಾಮ ವ್ಯವಸ್ಥೆ, ಅರಣ್ಯ ರಕ್ಷಣೆ, ಆಡಳಿತವ್ಯವಸ್ಥೆ ಎಲ್ಲವೂ ನಾವು ಕಂಡು ಕೇಳರಿಯದಷ್ಟು ಪ್ರಾಚೀನದಲ್ಲಿಯೇ ಈ ನೆಲದಲ್ಲಿ ರೂಪುಗೊಂಡಾಗಿತ್ತು. ಅದನ್ನೇ ಸ್ವಲ್ಪ ಗಮನಿಸುವೆ.

ಧ್ರುವಂ ತೇ ರಾಜಾ ವರುಣೋ ಧ್ರುವಂ ದೇವೋ ಬೃಹಸ್ಪತಿಃ | ಧ್ರುವಂತ ಇಂದ್ರಶ್ಚಾಗ್ನಿಶ್ಚ ರಾಷ್ಟ್ರಂಧಾರಯತಾಂ ಧ್ರುವಂ ||
ಮಹಾರಾಜ, ನಿನ್ನ ರಾಜ್ಯವನ್ನು ವರುಣದೇವ, ಬೃಹಸ್ಪತಿ ಮತ್ತು ಇಂದ್ರ, ಅಗ್ನಿಗಳ ದಾನ, ಧರ್ಮ, ಸದ್ಗುಣಗಳು ನೆಲೆಸಿ ನಿನ್ನ ರಾಜ್ಯವು ಸ್ಥಿರವಾಗಿದ್ದು ನಿನ್ನನ್ನು ಮತ್ತು ಪ್ರಜೆಗಳನ್ನು ಕಾಪಾಡಿ ಬೆಳಗಲಿ ಎಂದು ಅಂಗಿರಸನ ಮಗನಾದ ಧ್ರುವನು ಆಶಿಸುತ್ತಾನೆ. ಮುಂದಿನ ಮಂತ್ರದಲ್ಲಿ ಪ್ರಜೆಗಳು ನಿನ್ನಲ್ಲಿ ರಾಜಭಕ್ತಿಯನ್ನಿಡುವಂತೆ ಮತ್ತು ಅವರೇ ನಿನಗೆ ಕರಾದಾಯಗಳನ್ನು ಸ್ವ ಮನಸ್ಸಿನಿಂದ ಕೊಡುವಂತೆ ಇಂದ್ರನು ಅನುಗ್ರಹಿಸಲಿ ಎನ್ನುತ್ತಾನೆ. ಅಂದರೆ ರಾಜಾಡಳಿತ ಇತ್ತು ಎನ್ನುವುದು ಸ್ಪಷ್ಟ. ಮತ್ತು ಆ ಕಾಲಕ್ಕೆ ತೆರಿಗೆಯ ಪದ್ಧತಿ ಸಹ ಬಂದಾಗಿತ್ತು. ಆದರೆ ಆ ಕಂದಾಯ ಹೇಗಿತ್ತು ಅನ್ನುವುದನ್ನು ನೋಡಿದರೆ, ’ಅಥೋ ತ ಇಂದ್ರಃ ಕೇವಲೀರ್ವಿಶೋ ಬಲಿಹೃತಸ್ಕರತ್’ ಎನ್ನುವಲ್ಲಿ ರಾಜ ನಿನ್ನ ಆಡಳಿತ ಜನರ ತೊಂದರೆಗಲನ್ನು ನಿವಾರಿಸಿ ಅವರಲ್ಲಿ ಹೇರಳವಾದ ಸಂಪತ್ತು ಕೂಡಿ, ಅವರಿಗೆ ಯಾವುದೇ ತೊಂದರೆಯಾಗದಂತೆ ಅವರೇ ರಾಜಾದಾಯ, ತೆರಿಗೆಗಳನ್ನು ಕೊಡುವಂತೆ ರಾಜನನ್ನು ಮತ್ತು ಪ್ರಜೆಗಳನ್ನು ಇಂದ್ರನು ಪ್ರೇರೇಪಿಸಲಿ ಎನ್ನುವುದಾಗಿ ಹೇಳುವುದರಿಂದ ತೆರಿಗೆಯ ಪದ್ಧತಿ ಆ ಸಮಯಕ್ಕೆ ಹೇಗೆ ಇತ್ತು ಎನ್ನುವುದು ತಿಳಿಯುತ್ತದೆ. ಹೀಗೇ ಋಗ್ವೇದದಲ್ಲಿ ರಾಜ್ಯಾಡಳಿತ ಮತ್ತು ರಾಜನ ನೀತಿ ನಿಯಮಗಳನ್ನು ಹೇಳಲಾಗಿದೆ. ರಾಜನ ಸುಖವೇ ಪ್ರಜೆಗಳ ಸುಖವೆನ್ನುವುದು ಒಂದಾದರೆ, ಎಲ್ಲರನ್ನೂ ಜೀವಿಸಲು ಬಿಡು ಎನ್ನುವುದು ಇನ್ನೊಂದು ಅರ್ಥ. ರಾಜನಾದವ ಕರಗಳನ್ನು ಬೇಡಿ ಸ್ವೀಕರಿಸಬಾರದು ಅಥವಾ ಬಲಾತ್ಕಾರದಿಂದ ತೆಗೆದುಕೊಳ್ಳಲೂ ಬಾರದು. ಪ್ರಜೆಗಳಲ್ಲಿ ತಾವೇ ಸಮರ್ಪಿಸಬೇಕು ಎನ್ನುವ ಭಾವನೆ ಹುಟ್ಟಬೇಕಂತೆ. ಹಾಗಾದರೆ ಆ ರಾಜ ಎಂತವನಿರಬೇಕು! ಅವನ ಆಡಳಿತ ಹೇಗಿರಬಹುದು. ಇನ್ನು ಋಗ್ವೇದದ ನಾಲ್ಕನೇ ಮಂಡಲದ ೨೦ ಸೂಕ್ತದಲ್ಲಿ ವಾಮದೇವ ಋಷಿಯು ರಾಜನು ಯುದ್ಧಮಾಡುವ ಕುರಿತೂ ಹೇಳಿರುವುದು ರಾಜ್ಯಾಡಳಿತದ ಸ್ಥಿತಿಯನ್ನು ಹೇಳುತ್ತ. ಋಗ್ವೇದದ ೭ನೇ ಮಂಡಲದ ೮೪ ಸೂಕ್ತದಲ್ಲಿ ವಸಿಷ್ಠ ರಾಷ್ಟ್ರದ ಕುರಿತು ಹೇಳಿದ್ದು ಸಿಗುತ್ತದೆ. ಹೀಗೇ ಅನೇಕ ದೃಷ್ಟಾರರು ರಾಷ್ಟ್ರಾಡಳಿತವನ್ನು ಸೂಚಿಸಿದ್ದಾರೆ. ಋಗ್ವಿಧಾನದಲ್ಲಿ ರಾಜನ ಪಟ್ಟಾಭಿಷೇಕ ಹೇಗೆ ಮತ್ತು ಯಾವಾಗ ನಡೆಯಬೇಕು ಅನ್ನುವುದನ್ನು ಹೇಳುವುದು ಹೀಗೆ:
ರಾಜಾನಮಭಿಷಿಚ್ಯೇತ ತಿಷ್ಯೇಣ ಶ್ರವಣೇನವಾ | ಪೌಷ್ಣಾ ಸಾವಿತ್ರ ಸೌಮ್ಯಾಶ್ವಿರೋಹಿಣೀಷೂತ್ತರಾಸು ಚ ||
ಎನ್ನುವುದಾಗಿ ಪುಷ್ಯಾ ಮತ್ತು ಶ್ರವಣ ಮೊದಲಾದ ಶುಭ ನಕ್ಷತ್ರದಲ್ಲಿ ರಾಜ್ಯಾಭಿಷೇಕ ಮಾಡಬೇಕು ಎನ್ನುತ್ತಾ, ಅದರ ವಿಧಿ ವಿಧಾನಗಳನ್ನೂ ಸಹ ಹೇಳಲಾಗಿದೆ. ರಾಜನಿಗೆ ಪುರೋಹಿತನಾಗಿದ್ದವನು ರಾಜನನ್ನು ಆಶೀರ್ವದಿಸಬೇಕು. ಅಪ್ರತಿರಥ ಸೂಕ್ತದಲ್ಲಿನ ’ಆಶುಃ ಶಿಶಾನಃ’ ಎನ್ನುವ ಮಂತ್ರವನ್ನು ಪಠಿಸುತ್ತಾ ಎಲೈ ರಾಜನೇ ಸಮಸ್ತ ಪೃಥ್ವಿಯನ್ನು ಜಯಿಸುವವನಾಗು. ನಿನ್ನಲ್ಲಿ ಧರ್ಮವು ಜಾಗ್ರತವಾಗಿರಲಿ. ಪ್ರಜಾ ಪಾಲನೆಯಲ್ಲಿಯೂ ಸಹ ಧರ್ಮವನ್ನು ಆಚರಿಸು. ನಿನ್ನ ವಂಶವು ಅಭಿವೃದ್ಧಿಯಾಗಲಿ. ಎಂದು ಜಪಿಸಬೇಕು. ಯುದ್ಧಾರ್ಥವಾಗಿ ಹೊರಟು ನಿಂತ ರಾಜನನ್ನು ಅದೇ ಸೂಕ್ತದ ಆತ್ವಾಹಾರ್ಷಮಂತರೇಧಿ ಧ್ರುವಸ್ತಿಷ್ಠಾ ವಿಚಾಚಲಿಃ ಎನ್ನುವ ಮಂತ್ರದಿಂದ ಅಭಿಮಂತ್ರಿಸಬೇಕು ಎನ್ನುತ್ತದೆ. 
ಅಂದರೆ ಹಿಂದೆಲ್ಲ ನಮ್ಮ ದೇಶದ ರಾಜರ ಆಡಳಿತವೆಂದರೆ ಅದು ಪ್ರಜೆಗಳ ಆಡಳಿತವಾಗಿತ್ತು. ಅದರಲ್ಲಿ ರಾಜನ ಪ್ರೇರಣೆ ಇರುತ್ತಿತ್ತು.

#ಮಿಹಿರಕುಲಿಯ_ಅಶೋಕನಿಗಿಂತ_ಸಮರ್ಥ_ಸಮುದ್ರಗುಪ್ತ
Sadyojath

March 25, 2021

ಆತ್ಮವಿಶ್ವಾಸ

ವ್ಯವಹಾರದಲ್ಲಿ ತುಂಬಲಾರದ ನಷ್ಟ ಕಂಡ ಬಿಜಿನೆಸ್‌ಮ್ಯಾನ್ ಒಬ್ಬ ಪಾರ್ಕಿನ ಕಲ್ಲುಬೆಂಚಿನ ಮೇಲೆ ಕುಳಿತಿದ್ದ. ಇನ್ನೇನು ಆಕಾಶವೇ ಕಳಚಿ ತಲೆಮೇಲೆ ಬೀಳುತ್ತದೆ ಎಂಬಂತಿತ್ತು ಅವನ ಮುಖ. ಸಾಲಗಾರರು ಬೆನ್ನ ಹಿಂದೆ ಬಿದ್ದಿದ್ದರು, ಪಾಲುದಾರರು ಹಣ ಕೇಳುತ್ತಿದ್ದರು, ಕೆಲಸಗಾರರಿಗೆ ಸಂಬಳ ಕೊಡಬೇಕಿತ್ತು….ಹೀಗೆ ಸಮಸ್ಯೆಗಳ ಸರಮಾಲೆ ಆತನ ಕುತ್ತಿಗೆಗೆ ಸುತ್ತಿಕೊಂಡಿತ್ತು. ಆಗ ಅಲ್ಲಿಗೆ ಮುದುಕನೊಬ್ಬ ಬಂದ. ಬಿಜಿನೆಸ್‌ಮ್ಯಾನ್‌ನ ಮುಖ ನೋಡಿದರೆ ಆತ ಕಷ್ಟದಲ್ಲಿದ್ದಾನೆಂದು ಯಾರು ಬೇಕಾದರೂ ಸುಲಭವಾಗಿ ಹೇಳಬಹುದಿತ್ತು. ‘ಏನಪ್ಪಾ ನಿನ್ನ ಸಮಸ್ಯೆ?’ ಅಂತ ಮುದುಕ ನೇರವಾಗಿ ವಿಷಯಕ್ಕೆ ಬಂದ. ಈತ ತನ್ನೆಲ್ಲ ಕಷ್ಟಗಳನ್ನು ಹೇಳಿಕೊಂಡ. ಸಾಯುವುದೊಂದೇ ಈಗ ಕಾಣಿಸುತ್ತಿರುವ ದಾರಿಯೆಂದು ಹೇಳಿ ಕಣ್ಣೀರಾದ.

ಆಗ ಮುದುಕ ‘ನಾನು ನಿನಗೆ ಸಹಾಯ ಮಾಡುತ್ತೇನೆ. ಯೋಚಿಸಬೇಡ’ ಎಂದು ಹೇಳಿ ಈತನ ಹೆಸರಿನಲ್ಲಿ ಚೆಕ್ ಒಂದನ್ನು ಬರೆದುಕೊಟ್ಟ. ‘ಈ ಹಣ ತೆಗೆದುಕೋ. ನಿನ್ನ ಆರ್ಥಿಕ ಸಮಸ್ಯೆಗಳನ್ನೆಲ್ಲ ಮೊದಲು ಬಗೆ ಹರಿಸಿಕೋ. ಒಂದು ವರ್ಷದ ನಂತರ ಇದೇ ದಿನ, ಇದೇ ಜಾಗಕ್ಕೆ ಬಾ. ಆಗ ನನಗೆ ಹಣ ವಾಪಸ್ ಮಾಡು. ಒಂದು ವರ್ಷ ಸಮಯವಿದೆ, ಬೇಕಾದಷ್ಟು ಹಣವಿದೆ. ನೋಡು ಏನು ಮಾಡ್ತೀಯ’ ಅಂತ ಹೇಳಿ ಬೆನ್ನು ತಿರುಗಿಸಿ ಹೊರಟೇ ಬಿಟ್ಟ!

ಬಿಜಿನೆಸ್‌ಮ್ಯಾನ್ ಚೆಕ್ ತೆಗೆದು ನೋಡಿ ಅವಾಕ್ಕಾದ. 5,00,000 ಡಾಲರ್‌ನ ಚೆಕ್‌ನ ಕೊನೆಗೆ ಅತ್ಯಂತ ಶ್ರೀಮಂತನಾಗಿದ್ದ ಜಾನ್ ಡಿ ರಾಕ್ಫೆಲ್ಲರ್‌ನ ಸಹಿ ಇತ್ತು!  ಅರೇ, ಅವರನ್ನು ನಾನು ಗುರುತಿಸಲೇ ಇಲ್ಲವಲ್ಲ ಎಂದು ಬಿಜಿನೆಸ್‌ಮ್ಯಾನ್ ಕೈ ಕೈ ಹಿಸುಕಿಕೊಂಡ. ನನ್ನೆಲ್ಲ ಕಷ್ಟಗಳು ಒಂದೇ ಕ್ಷಣದಲ್ಲಿ ನಿವಾರಣೆಯಾದವೆಂದು ಹಿಗ್ಗಿದ. ಆದರೂ ಆ ಚೆಕ್‌ಅನ್ನು ನಗದು ಮಾಡಿಸಿಕೊಳ್ಳಬಾರದೆಂದು ನಿರ್ಧರಿಸಿದ. ಅಷ್ಟೊಂದು ದೊಡ್ಡ ಚೆಕ್ ಇದೆ ಎಂಬುದೇ ಆತನಿಗೆ ಬೆಟ್ಟದಷ್ಟು ಆತ್ಮವಿಶ್ವಾಸ ನೀಡಿತ್ತು. ಆತ ಹೊಸ ಹುರುಪಿನೊಂದಿಗೆ ವ್ಯವಹಾರ ಶುರುಮಾಡಿದ. ಹೊಸ ಸಾಲಗಳನ್ನು ಮಾಡಿ, ಹಳೆಯ ಬಾಕಿಗಳನ್ನು ತೀರಿಸಿದ. ಕೆಲವೊಂದಿಷ್ಟು ಮಹತ್ವದ ನಿರ್ಧಾರಗಳ ಮೂಲಕ ವ್ಯವಹಾರವನ್ನು ಹಂತ ಹಂತವಾಗಿ ಮೇಲಕ್ಕೆ ತಂದ. ಮೂರು-ನಾಲ್ಕು ತಿಂಗಳುಗಳಲ್ಲಿ ಆತ ಸಾಲದ ಹೊರೆಯಿಂದ ಮುಕ್ತನಾದ. ವ್ಯವಹಾರ ಸುಗಮವಾಗಿ ನಡೆಯತೊಡಗಿತು.

ಕೊಟ್ಟ ಮಾತಿನಂತೆ ಸರಿಯಾಗಿ ಒಂದು ವರ್ಷದ ಬಳಿಕ ಬಿಜಿನೆಸ್‌ಮ್ಯಾನ್ ಅದೇ ಪಾರ್ಕ್‌ಗೆ ಹೋದ. ಕೈಯಲ್ಲಿ ನಗದು ಮಾಡಿಸಿಕೊಳ್ಳದ ಚೆಕ್ ಇತ್ತು. ಹೇಳಿದ ಸಮಯಕ್ಕೆ ಆ ಶ್ರೀಮಂತ ಮುದುಕನೂ ಬಂದ. ಇನ್ನೇನು ಚೆಕ್ ವಾಪಸ್ ಮಾಡಿ, ತನ್ನ ಯಶಸ್ಸಿನ ಕಥೆ ಹೇಳಬೇಕೆನ್ನುವಷ್ಟರಲ್ಲಿ ಹಿಂದಿನಿಂದ ನರ್ಸ್ ಒಬ್ಬಳು ಓಡಿ ಬರುತ್ತಿರುವುದು ಕಾಣಿಸಿತು. ಆಕೆ ಏದುಸಿರು ಬಿಡುತ್ತಾ ಓಡಿ ಬಂದು ಮುದುಕನನ್ನು ಗಟ್ಟಿಯಾಗಿ ಹಿಡಿದುಕೊಂಡಳು. ‘ಅಬ್ಬಾ ದೇವರೇ ಕೊನೆಗೂ ಈತನನ್ನು ಹಿಡಿದುಬಿಟ್ಟೆ!’ ಎಂದು ಜೋರಾಗಿ ಉಸಿರಾಡುತ್ತಾ ಉದ್ಘರಿಸಿದಳು. ‘ನಿಮಗೆ ಈತ ಏನೂ ತೊಂದರೆ ಕೊಟ್ಟಿಲ್ಲ ಎಂದು ಭಾವಿಸಿದ್ದೇನೆ. ಅಯ್ಯೋ ಈತನೊಬ್ಬ ಹುಚ್ಚು ಮುದುಕ. ಪದೇ ಪದೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗುವ ಚಟ. ತನ್ನನ್ನು ತಾನು ಜಾನ್ ಡಿ. ರಾಕ್ಫೆಲ್ಲರ್ ಅಂತ ಕಂಡವರಿಗೆಲ್ಲ ಪರಿಚಯಿಸಿಕೊಳ್ಳುತ್ತಾನೆ. ಅದನ್ನು ಹೌದು ಎಂದು ನಂಬುವ ಹುಚ್ಚರೂ ಇದ್ದಾರೆ’ ಎಂದು ಹೇಳಿ ಮುದುಕನನ್ನು ಎಳೆದು ಕರೆದುಕೊಂಡು ಹೋದಳು.

ಈ ಬಿಜಿನೆಸ್‌ಮ್ಯಾನ್ ತನ್ನ ಮುಂದೆ ನಡೆದಿದ್ದು ಕನಸೋ, ನಿಜವೋ ಎಂದು ತಿಳಿಯದೆ ಬೆಪ್ಪನಂತೆ ನಿಂತಿದ್ದ. ಒಂದಿಡೀ ವರ್ಷ ಆತ ತನ್ನ ಬಳಿ ಅರ್ಧ ಮಿಲಿಯನ್ ಡಾಲರ್ ಹಣ ಇದೆ ಎಂದು ಭ್ರಮಿಸಿ ವ್ಯಾಪಾರ- ವ್ಯವಹಾರವನ್ನು ವಿಸ್ತರಿಸುತ್ತಾ, ಸಾಲ ಮಾಡಿ, ಸಾಲ ತೀರಿಸುತ್ತಾ ಹೋದ. ಆದರೀಗ ಗೊತ್ತಾಗಿದ್ದೇನೆಂದರೆ ಇವನ ಬಳಿ ಇದ್ದದ್ದು ಅರ್ಧ ಮಿಲಿಯನ್ ಡಾಲರ್ ಚೆಕ್ ಅಲ್ಲ, ಯಾವನೋ ಒಬ್ಬ ಹುಚ್ಚ ಕೊಟ್ಟಿದ್ದ ಕಾಗದದ ಚೂರು! ಹಾಗಾದರೆ ತನ್ನ ಕೈಯಲ್ಲಿ ಇನ್ನೇನೂ ಮಾಡಲು ಸಾಧ್ಯವಿಲ್ಲ ಅಂದುಕೊಂಡಿದ್ದವನಿಂದ ಅಭೂತಪೂರ್ವ ಕೆಲಸಗಳನ್ನು ಮಾಡಿಸಿದ ಆ ಶಕ್ತಿ ಯಾವುದು? ಅದುವೇ ಆತ್ಮವಿಶ್ವಾಸ! ಅದೊಂದು ನಿಮ್ಮ ಜತೆಯಿದ್ದರೆ ಎಂಥ ಅಸಾಧ್ಯವನ್ನೂ ಸಾಧ್ಯಗೊಳಿಸಬಹುದು.
ಕೃಪೆ: ವಿಶ್ವವಾಣಿ

ಕುಶಸ್ಥಲ

ಕುಶಸ್ಥಲ

ಪೊಡವಿಗೋಸುಗ ಬಳಗ ಸಹಿತಲಿ | 
ನಡೆಯಬೇಡ ಕೃತಾಂತನಲ್ಲಿಗೆ || 
ಕೊಡು ಕುಶಸ್ಥಳ ವರವೃಕಸ್ಥಳ ವಾರಣಾವತಿಯ || 
ಬಿಡುಬಿಡೆಲವೊ ಆವಂತಿನಗರವ | 
ನೊಡನೆ ಶಕ್ರಪ್ರಸ್ಥವನು ಸಹ | 
ತಡೆಯದೇ ಧರ್ಮಜಗೆ ಸಾಮದೊಳೆಂದನಸುರಾರಿ || 
ಇದು ಯಕ್ಷಗಾನದ ಕೃಷ್ಣಸಂಧಾನದ ಭಾಮಿನಿ. 

ಮೊನ್ನೆ ಇಂದ್ರಪ್ರಸ್ಥ ಮತ್ತು ಹಸ್ತಿನಾವತಿಯ ಕುರಿತು ಬರೆದಾಗ #ಕುಶಸ್ಥಲದ ಕುರಿತಾಗಿ ಬಂದ ಪ್ರತಿಕ್ರಿಯೆಗೆ. 
ಪಾಂಡವರು ಕೇಳಿದ ಐದು ಪ್ರದೇಶಗಳು ಅಥವಾ ಗ್ರಾಮಗಳೆಲ್ಲವೂ ಯಮುನೆಯ ಹರಿವಿನ ಸ್ಥಳಗಳೇ. ಮತ್ತು ದೆಹಲಿಯ ಆಸುಪಾಸಿನವು. #ಇಂದ್ರಪ್ರಸ್ಥ, #ಸ್ವರ್ಣಪ್ರಸ್ಥ, #ಪನಪ್ರಸ್ಥ, #ವ್ಯಾಘ್ರಪ್ರಸ್ಥ, #ತಿಲಪ್ರಸ್ಥ. ಈ ಐದು ಗ್ರಾಮಗಳನ್ನು ಪಾಂಡವರು ಕೇಳುವುದು. ಇವೆಲ್ಲವೂ ಇಂದ್ರಪ್ರಸ್ಥದೊಳಗೆ ಇವೆ. ಹಾಗಾದರೆ ಕುಶಸ್ಥಳಿ ಅನ್ನುವುದು ಯಾವುದು ? ರಾಮಾಯಣದಲ್ಲಿ ಹೇಳುವಂತೆ ಶ್ರೀ ರಾಮನ ಹಿರಿಯ ಮಗ ಕುಶನು ರಾಜ್ಯಭಾರಮಾಡುವುದಕ್ಕಾಗಿ ಶ್ರೀ ರಾಮನೇ ನಿರ್ಮಿಸಿದ ಒಂದು ಪಟ್ಟಣವನ್ನು ಕುಶಸ್ಥಳೀ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದೆ.  ಶರ್ಯಾತಿ ರಾಜನ ಮೊಮ್ಮಗ ರೇವತನೆಂಬ ರಾಜನು ಇಲ್ಲಿ ಬಹಳ ಕಾಲ ರಾಜ್ಯಭಾರಮಾಡುತ್ತಿದ್ದನು. ಎಮದು ಭಾಗವತದಲ್ಲಿ ಬರುತ್ತದೆ. ಇನ್ನು ಶ್ರೀ ಕೃಷ್ಣ ಹುಟ್ಟಿದ ಮಥುರಾ ನಗರವನ್ನು ಜರಾಸಂಧ ಸುಟ್ಟು ನಾಶಮಾಡುತ್ತಾನೆ. ನಂತರ ಶ್ರೀಕೃಷ್ಣ ವಿಶ್ವಕರ್ಮನಿಂದ ಮಾಡಿಸಿದ ನಗರವನ್ನೂ ಕುಶಸ್ಥಳೀ ಎನ್ನಲಾಗಿದೆ.  ಈ ನಗರವೇ ದ್ವಾರಕಾ. ಕೊನೆಗೆ ಕೃಷ್ಣನ ಅವಸಾನದ ನಂತರ ಏಳನೆಯ ದಿನ ಅದೂ ಮುಳುಗಿ ಹೋಗುತ್ತದೆ ಎಂದು ಭಾಗವತದಲ್ಲಿ ಬರುತ್ತದೆ.
ಮಹಾಭಾರತದ ಸಭಾಪರ್ವದ ಹದಿನಾಲ್ಕನೆಯ ಅಧ್ಯಾಯದಲ್ಲಿ ಹೀಗೆ ಬರುತ್ತದೆ. ಜರಾಸಂಧನ ಮಗಳು ತನ್ನ ತಂದೆಯ ಬಳಿಗೆ ಹೋಗಿ ಅಳುತ್ತಾ “ನನ್ನ ಗಂಡನಾದ ಕಂಸನನ್ನು ಕೊಂದ ಶ್ರೀಕೃಷ್ಣನ ಮಡದಿಗೂ ನನ್ನಂತೆಯೇ ದುಃಖ ಬರಬೇಕು. ಆದರೆ ನೀನು ಯಾವುದನ್ನೂ ಯೋಚಿಸದೇ ಕುಳಿತಿರುವೆಯಲ್ಲಾ ನೀನು ಕೃಷ್ಣನನ್ನು ಸಂಹರಿಸುವ ತನಕ ನನಗೆ ನೆಮ್ಮದಿ ಇಲ್ಲ ಎನ್ನುತ್ತಾಳೆ. ಇದನ್ನು ಶ್ರೀ ಕೃಷ್ಣನ ಗೂಢಚಾರರು ಕೇಳಿಸಿಕೊಳ್ಳುತ್ತಾರೆ. ಅವರಿಂದ ಆ ಸುದ್ಧಿಯನ್ನು ತಿಳಿದ ನಾವು ಮುಂದಾಗುವ ಪರಿಣಾಮವನ್ನು ತಿಳಿದು ಚಿಂತಿತರಾಗುತ್ತೇವೆ. ನಮಗೆ ಯಾವುದು ಮುಖ್ಯವೋ, ಅತಿಮುಖ್ಯವೋ ಅವುಗಳನ್ನು ಮಾತ್ರ ಸಂಗ್ರಹಿಸಿಕೊಂಡು ನಮ್ಮ ಬಂಧು ದಾಯಾದರ ಜೆತೆಗೆ ಬಂದು ಬಿಡಬಹುದೆನ್ನುವ ಕಾರಣದಿಂದ ಪಶ್ಚಿಮದಿಕ್ಕಿನ ಕಡೆಗೆ ಹೊರಟುಹೋಗುತ್ತೇವೆ ಅಲ್ಲಿ ರೈವತಕಪರ್ವತದ ತಪ್ಪಲಿನಲ್ಲಿ ಅತಿಸುಂದರವಾದ ಕುಶಸ್ಥಲೀ ಎಂಬ ಪಟ್ಟಣವಿದೆ. ಅಲ್ಲಿಗೆ ಹೋಗಿ ನಾವೆಲ್ಲರೂ ನೆಲೆಸಿದೆವು. ಆ ನಗರದ ಕೋಟೆ ಕೊತ್ತಲಗಳನ್ನು ಭದ್ರವಾಗಿ ಕಟ್ಟಿದೆವು. ದೇವತೆಗಳಿಗೂ ಕೂಡ ಆ ನಗರಿಯನ್ನು ಪ್ರವೇಶಿಸಲು ಸಾಧ್ಯವಿಲ್ಲದಷ್ಟು ಭದ್ರವಾಗಿ ನಿರ್ಮಿಸಿದ್ದೇವೆ. ಆ ಕೋಟೆಯೊಳಗೆ ನಿಂತು ಹೆಂಗಸರು ಕೂಡ ಯುದ್ಧಮಾಡಿ ಶತ್ರುಗಳನ್ನು ಗೆಲ್ಲಬಹುದು. ಎಂದು ಶ್ರೀಕೃಷ್ಣ ಯುಧಿಷ್ಠಿರನಲ್ಲಿ ಹೇಳುತ್ತಾನೆ.  
ಶಾಂತಿಪರ್ವದ ೩೩೯ನೇ ಅಧ್ಯಾಯದಲ್ಲಿ  ತನ್ನ ಹುಟ್ಟಿನ ಉದ್ದೇಶವನ್ನು ಶ್ರೀಕೃಷ್ಣ ಹೇಳುತ್ತಾ ದ್ವಾಪರಯುಗ ಮತ್ತು ಕಲಿಯುಗಗಳ ಸಂಧಿಕಾಲದಲ್ಲಿ ಅಂದರೆ ದ್ವಾಪರಯುಗದ ಕೊನೆಯಲ್ಲಿ ಕಂಸನನ್ನು ಕೊಲ್ಲಲಿಕ್ಕಾಗಿ ನಾನು ಮಥುರಾಪಟ್ಟಣದಲ್ಲಿ ಹುಟ್ಟುತ್ತೇನೆ. 
ತತ್ರಾಹಂ ದಾನವಾನ್ಹತ್ವಾ ಸುಬಹೂನ್ದೇವಕಣ್ಟಕಾನ್ | 
ಕುಶಸ್ಥಲೀಂ ಕರಿಷ್ಯಾಮಿ ನಿವೇಶಂ ದ್ವಾರಕಾಂ ಪುರೀಮ್ || ೯೦ || ಆಗ ನಾನು ದೇವತೆಗಳಿಗೆ ತೊಂದರೆಯನ್ನು ಕೊಡುವ ಬಹುಸಂಖ್ಯಾತರಾದ ದಾನವರನ್ನು ಸಂಹರಿಸಿ ‘ಕುಶಸ್ಥಲೀ’ ಎಂಬ ಹೆಸರಿನ ಪಟ್ಟಣವನ್ನು ದ್ವಾರಕಾಪುರಿಯನ್ನಾಗಿ ಪರಿವರ್ತಿಸಿ ಅಲ್ಲಿ ವಾಸಮಾಡಿಕೊಂಡಿರುತ್ತೇನೆ. 

ಪ್ರಾಗ್ಜ್ಯೋತಿಷಂ ಪುರಂ ರಮ್ಯಂ ನಾನಾಧನಸಮನ್ವಿತಮ್ |
 ಕುಶಸ್ಥಲೀಂ ನಯಿಷ್ಯಾಮಿ ಹತ್ವಾ ವೈ ದಾನವೋತ್ತಮಮ್ || ೬೨ || ದ್ವಾರಕೆಯಲ್ಲಿಯೇ ವಾಸವಾಗಿರುತ್ತಾ ನಾನು, ಅದಿತಿಗೆ ಅಪ್ರಿಯವಾದ ಕಾರ್ಯವನ್ನೇ ಪುನಃ ಪುನಃ ಮಾಡುವ ಅದಿತಿಯ ಕರ್ಣಕುಂಡಲಗಳನ್ನು ಅಪಹರಿಸುವ ಭೂದೇವಿಯ ಮಗನಾದ ನರಕಾಸುರನನ್ನೂ, ಮುರಾಸುರನನ್ನೂ, ಪೀಠನೆಂಬ ದಾನವನನ್ನೂ ಸಂಹರಿಸುತ್ತೇನೆ. ನರಕಾಸುರನನ್ನು ಸಂಹರಿಸಿ ಅವನ ಪಟ್ಟಣವಾದ, ನಾನಾಪ್ರಕಾರವಾದ ಸಮೃದ್ಧವಾದ ಸಂಪತ್ತಿನಿಂದ ಕೂಡಿದ ಪ್ರಾಗ್ಜ್ಯೋತಿಷ ಪಟ್ಟಣವನ್ನೇ ಕುಶಸ್ಥಲಿಗೆ ಅಂದರೆ ದ್ವಾರಕೆಗೆ ತಂದುಬಿಡುತ್ತೇನೆ ಎನ್ನುತ್ತಾನೆ.

ಅಂದರೆ ಇಲ್ಲಿ ಎಲ್ಲವೂ ದ್ವಾರಕೆಯನ್ನೇ ಕುಶಸ್ಥಲೀ ಎಂದಿವೆ. ಅಂದರೆ ಈ ಕುಶಸ್ಥಲಿಯನ್ನು ಪಾಂಡವರು ಕೇಳಿರಲಿಕ್ಕಿಲ್ಲ. ಅದು ಇಂದ್ರಪ್ರಸ್ಥದಿಂದಲೂ ದೂರ ಹಸ್ತಿನಾವತಿಯಿಂದಲೂ ದೂರ. ಯಕ್ಷಗಾನದ ಈ ಸ್ಥಳಗಳು ಪ್ರಾಯಶಃ ಕವಿಯ ಕಲ್ಪನೆಯ ಸ್ಥಳವಾಗಿರಬಹುದು. ಯಾಕೆಂದರೆ ಸಮೀಪದ ಯಾವ ಪ್ರದೇಶವೂ ಇದ್ದಂತಿಲ್ಲ. ಆವಂತಿಯೂ ಸಹ ದೂರದಲ್ಲಿತ್ತು. ಆದರೆ ಕೊನೆಯಲ್ಲಿ ಆವಂತಿಯಲ್ಲಿ ನಕುಲ ರಾಜ್ಯವಾಳಿದ್ದ ಎಂದು ಮಹಾಭಾರತದ ಉಲ್ಲೇಖ ಸಿಗುತ್ತದೆ. ಆದರೆ ಅದು ಐದು ಗ್ರಾಮ ಕೇಳಿದಾಗ ಅಲ್ಲ. 

#ಹುಲ್ಲು_ಬೆಳೆವ_ಜಾಗ
Sadyoojath
Ravi Madodi

March 24, 2021

ಬ್ರಾಹ್ಮಣನೆಂದರೆ!

ಬ್ರಾಹ್ಮಣನೆಂದರೆ - ಚತ್ವಾರಿವಾಕ್ ಪರಿಮಿತಾನಿ ಪದಾನಿ ತಾನಿ ವಿದುಃ ಬ್ರಾಹ್ಮಣಾ

ಇದೊಂದು ವಿಷಯ ನನ್ನ ಮನಸ್ಸನ್ನು ಹಿಡಿದಿರಿಸಿತು. ಎಲ್ಲಾ ಕಡೆ ಬ್ರಾಹ್ಮಣ ಎನ್ನುವ ಶಬ್ದ ಕೇಳಿದರೆ ಚೇಳು ಕಡಿದಂತೆ ವರ್ತಿಸುವವರಿಗೆ ಇದು ಸ್ವಲ್ಪ ಕಹಿ ಆದರೂ ಆಗಬಹುದು. ಆದರೂ ಚಿಂತೆ ಇಲ್ಲ, ಯಾಕೆಂದರೆ ನಾನೂ . . . . . .;  ಹಾಗಾದರೆ ಬ್ರಾಹ್ಮಣ ಎಂದರೆ ಯಾರು. ಬ್ರಾಹ್ಮಣ ಎನ್ನುವುದು ಯಾವುದೇ ಜಾತಿ ವಾಚಕವಲ್ಲ, ವರ್ಣವಾಚಕವೂ ಅಲ್ಲ. ಅದೊಂದು ಕೇವಲ ಜ್ಞಾನದ ಸಂಕೇತ ಎಂದು ಋಗ್ವೇದ ಹೇಳುತ್ತದೆ. ಅದರಲ್ಲಿ ವೈದ್ಯ ವಿಜ್ಞಾನವನ್ನು ಕಲಿತವರು ಅಂದರೆ ಸಸ್ಯಗಳ ರಸವು ಯಾವ ರೋಗಕ್ಕೆ ಯಾವುದು ರೋಗನಿರೋಧಕವೆಂದು ತಿಳಿದು ಔಷಧ ವಿಜ್ಞಾನ ಬಲ್ಲವನೇ ಬ್ರಾಹ್ಮಣ ಎನ್ನುತ್ತದೆ. ಅಂದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಬ್ರಾಹ್ಮಣ ಅಥವಾ ಬ್ರಹ್ಮ ಎನ್ನುವುದರ ಅರ್ಥವೇ ಜ್ಞಾನ ಅಥವಾ ಅರಿವು ಅಥವಾ ತಿಳಿವಳಿಕೆ ಎಂದು ಅಥರ್ವಾಣ ಮಹರ್ಷಿ ಹೇಳುತ್ತಾರೆ.
ಓಷಧಯಃ ಸಂ ವದಂತೇ ಸೋಮೇನ ಸಹ ರಾಜ್ಞಾ |
ಯಸ್ಮೈ ಕೃಣೋತಿ ಬ್ರಾಹ್ಮಣಸ್ತಂ ರಾಜನ್ಪಾರಯಾಮಸಿ || ಋಗ್ವೇದದ ೧೦ನೇ ಮಂಡಲದ ಈ ಋಕ್ಕಿನಲ್ಲಿ
ಎಲೈ ಋಷಿಯೇ, ಪ್ರಭುವೆ, ಯಾವ ರೋಗಿಗೆ ಓಷಧಿಗಳ ಸ್ವರೂಪವನ್ನು ತಿಳಿದ ವೈದ್ಯನು(ಬ್ರಾಹ್ಮಣನು) ಚಿಕಿತ್ಸೆಯನ್ನು ಮಾಡುವನೋ, ಆ ರೋಗಿಯನ್ನು ಗುಣಪಡಿಸುವ ಜವಾಬ್ದಾರಿ ನಮ್ಮ ಮೇಲಿರುವುದರಿಂದ ನಾವು ಗುಣಪಡಿಸುವೆವು. ಹೀಗೇ ಈ ಜಗತ್ತಿನಲ್ಲಿರುವ ಓಷಧಿಗಳೆಲ್ಲಾ ಸೇರಿ ಸೋಮದೇವನೊಡನೆ ಅಥರ್ವಾಣ ಋಷಿಗೆ ಈ ರೀತಿಯಾಗಿ ಉತ್ತರಿಸುತ್ತವೆ. ಅಂದರೆ, ಬ್ರಾಹ್ಮಣ ಯಾರೂ ಆಗಬಹುದು. ಅದೊಂದು ಅರ್ಹತೆ. ಆ ಅರ್ಹತೆ ಪಡೆದವರೆಲ್ಲ ಬ್ರಾಹ್ಮಣರೇ 

#ವಿಪ್ರನೆಂದರೆ_ವೈದ್ಯ
ಸದ್ಯೋಜಾತರು

March 23, 2021

ಹೆಬ್ಬಾವಿನ ಕಥೆ


ಒಬ್ಬರು ಒಂದು ಹೆಬ್ಬಾವಿನ ಮರಿಯನ್ನು ಸಾಕುತ್ತಾರೆ.
ತುಂಬಾ ಪ್ರೀತಿಯಿಂದ ಅದನ್ನು ಲಾಲಿಸಿ ಪೋಷಿಸುತ್ತಾರೆ. ದಿನಗಳುರುಳಿದಂತೆ ಆ ಹಾವು ದೊಡ್ಡ ಹೆಬ್ಬಾವಾಗಿ ಬೆಳೆಯಿತು...

ಹೀಗಿರುವಾಗ ಅದು ಮೂರ್ನಾಲ್ಕು ದಿನಗಳಿಂದ ಆಹಾರವನ್ನು ತಿನ್ನದೇ ಹಾಯಾಗಿ ಒಂದು ರೀತಿಯ ಮಂಧತೆಯಿಂದ ಮಲಗುತ್ತಿತ್ತು.
ಆತನಿಗೆ ತುಂಬಾ ಚಿಂತೆ ಕಾಡತೊಡಗಿತು.
ಅದು ಸತ್ತು ಹೋದರೆ ಎಂದು ಭಯಗೊಂಡ ಆತ ಅದನ್ನು ಒಂದು ಪಶು ಡಾಕ್ಟರ್ ಹತ್ತಿರ ತೆಗೊಂಡು ಹೋಗಿ ತೋರಿಸಿ ಸಮಸ್ಯೆಯನ್ನು ಹೇಳುತ್ತಾರೆ...

ಡಾಕ್ಟರು ಅದನ್ನು ಪರೀಕ್ಷಿಸಿ ಆತನತ್ರ ಮೂರು ಪ್ರೆಶ್ನೆಗಳನ್ನು ಕೇಳುತ್ತಾರೆ.

ಎಷ್ಟು ದಿವಸಗಳಿಂದ ಹಾವು ಆಹಾರವನ್ನು ತಿನ್ನುತ್ತಿಲ್ಲ?

*ಆತ:* ಮೂರ್ನಾಲ್ಕು ದಿನಗಳಿಂದ.

ಇದು ನಿಮ್ಮ ಹತ್ತಿರ ಮಲಗುತ್ತಿದೆಯಾ?

*ಆತ:* ಸೌಖ್ಯ ಇಲ್ಲದಾಗಿನಿಂದ ಇದು ನನ್ನ ಜೊತೆ ಮಲಗುತ್ತಿದೆ.

ಅದು ನಿಮ್ಮ ಜೊತೆ ಹೇಗೆ ಮಲಗುತ್ತಿದೆ?

*ಆತ:* ನೀಳವಾಗಿ ಮಲಗುತ್ತಿದೆ.

*ಆತನ ಉತ್ತರವನ್ನು ಕೇಳಿದ ಡಾಕ್ಟರ್ ಹೇಳುತ್ತಾರೆ:*
ಈ ಹಾವಿಗೆ ಯಾವ ಕಾಯಿಲೆಯೂ ಇಲ್ಲ. ಇದು ನಿಮ್ಮನ್ನು ತಿನ್ನಲು ಪ್ರಯತ್ನ ಮಾಡುತ್ತಿದೆ. ನಿಮ್ಮ ಹತ್ತಿರ ಮಲಗಿ ನಿಮ್ಮ ಉದ್ದವನ್ನು ಅಳೆಯುತ್ತಿದೆ.  ಉಪವಾಸವಿದ್ದು ದೊಡ್ಡ ಬೇಟೆಗಾಗಿ ತನ್ನ ಶರೀರವನ್ನು ತಯಾರು ಮಾಡುತ್ತಿದೆ.
ಆದಷ್ಟು ಬೇಗ ಇದನ್ನು ಎಲ್ಲಾದರೂ ದೊಡ್ಡ ಕಾಡಲ್ಲಿ ತೆಗೊಂಡೋಗಿ ಬಿಟ್ಟುಬಿಡಿ.

      *"ನಾವು ಅರ್ಹತೆ ಇದ್ದದನ್ನು, ಇರುವವರನ್ನು ಮಾತ್ರ ಒಟ್ಟಿಗೆ ಇಟ್ಟುಕೊಳ್ಳಬೇಕು.* *ಸಂಬಂಧವನ್ನು ಬೆಳೆಸುವಾಗ ಬಹಳ ಜಾಗರೂಕತೆಯಿಂದ ಮುಂದುವರಿಯಬೇಕು. ಒಟ್ಟಿಗೆ ಇದ್ದವರು ಯಾವತ್ತಾದರೂ ತಮ್ಮ ಅಸಲಿ ಮುಖವಾಡವನ್ನು ತೋರಿಸಬಹುದು.*
 *ನಮ್ಮವರಲ್ಲಿಯೂ ನಾವು ಬೆಳಸಿದ, ಉಪವಾಸವಿರುವ ಹೆಬ್ಬಾವುಗಳಿರುತ್ತವೆ, ಹುಷಾರು..."*

March 21, 2021

ತ್ರಿಶಂಕು ಎನ್ನುವ ಖಗೋಲ ವಿಸ್ಮಯ



ತ್ರಿಶಂಕುರ್ಲೋಹಿತಾಂಗಶ್ಚ ಬೃಹಸ್ಪತಿಬುಧಾವಪಿ | ದಾರುಣಾಃ ಸೋಮಮಭ್ಯೇತ್ಯ ಗ್ರಹಾಃ ಸರ್ವೇ ವ್ಯವಸ್ಥಿತಾಃ ಇದು ರಾಮಾಯಣದ ಅಯೋಧ್ಯಾ ಕಾಂಡದಲ್ಲಿ ಬರುವ ಶ್ಲೋಕ. 
ಶ್ರೀರಾಮನು ಅರಣ್ಯಕ್ಕೆ ಹೋಗುತ್ತಾನೆ. ಇತ್ತ ಆಹಿತಾಗ್ನಿಗಳು ಅಗ್ನಿಹೋತ್ರಗಳನ್ನು ಮಾಡಲಿಲ್ಲ. ಗೃಹಸ್ಥರಾದವರು ಪಾಕಯಜ್ಞವನ್ನು ಮಾಡಲಿಲ್ಲ. ಪಾಕಯಜ್ಞ ಅಂದರೆ ಇಲ್ಲಿ ಸಂಸಾರಿಗಳು ಅಡುಗೆಮಾಡಲಿಲ್ಲ ಎಂದು. ಪ್ರಜೆಗಳು ತಮ್ಮ ದೈನಂದಿನಕಾರ್ಯಗಳಲ್ಲಿ ಉದಾಸೀನರಾಗುತ್ತಾರೆ. ಸೂರ್ಯನೂ ಅಸ್ತಂಗತನಾದನು. ಗಜಶಾಲೆಯಲ್ಲಿದ್ದ ಆನೆಗಳು ಮುಂದಿದ್ದ ಆಹಾರವನ್ನು ಮುಟ್ಟಲಿಲ್ಲ. ಶ್ರೀರಾಮನನ್ನು ಆಗಲಿದ ದುಃಖದಿಂದ ಹಸುಗಳು ಕರುಗಳಿಗೆ ಹಾಲುಣಿಸಲಿಲ್ಲ. ಆ ಸಮಯದಲ್ಲಿ ಸ್ತ್ರೀಯರು ಚೊಚ್ಚಲ ಗಂಡುಮಗುವನ್ನು ಪಡೆದರೂ ಸಂತೋಷಗೊಳ್ಳಲಿಲ್ಲ. ಹೀಗೇ ಅಯೋಧ್ಯೆಯ ರಾಜಬೀದಿಗಳು ಬಿಕೋ ಎನ್ನುತ್ತಿದ್ದವು. ಅದೊಂದು ದುಃಖದ ಅಥವಾ ಸೂತಕದ ಊರಾಗಿತ್ತು. ಇವೆಲ್ಲ ಅಲ್ಲಿನ ವಾತಾವರಣವಾಗಿತತ್ತು. ಆದರೆ ನನ್ನ ಗಮನವಿರುವುದು ಮೇಲಿನ ಶ್ಲೋಕದ ಕುರಿತಾಗಿ. ಇಲ್ಲಿ ಈ ಶ್ಲೋಕದಲ್ಲಿ ತ್ರಿಶಂಕು ಎನ್ನುವುದಾಗಿ ಬರುತ್ತದೆ. ತ್ರಿಶಂಕು ಎಂದರೆ ಶನಿಗ್ರಹ. ಹನ್ನೆರಡನೆಯ, ಎಂಟನೆಯ ಮತ್ತು ಜನ್ಮದ ಸ್ಥಾನಗಳಲ್ಲಿ ತ್ರಿಶಂಕುವಿನಂತೆ ಇರುವವನು ಎಂದು ಕೆಲವರ ಅಭಿಪ್ರಾಯ. ಇನ್ನು ಕೆಲವರ ಅಭಿಪ್ರಾಯದಂತೆ ತ್ರಿಶಂಕು ಎಂದರೆ ಕುಜ, ಗುರು ಮತ್ತು ಬುಧ ಗ್ರಹಗಳು ಚಂದ್ರನಿಗೆದುರಾಗಿರುವುದು ಎನ್ನುತ್ತಾರೆ. ಇನ್ನು ಪುರಾಣದ ಕಥೆಯಂತೆ ತ್ರಿಶಂಕುವು ಇಕ್ಷ್ವಾಕುವಂಶದ ಒಬ್ಬ ರಾಜ. ಸತ್ಯವ್ರತ ಅಂತ ಒಬ್ಬ ಸೂರ್ಯವಂಶದ ರಾಜ ಇದ್ದ. ಇಕ್ಷ್ವಾಕು ವಂಶದಲ್ಲಿ ಜನಿಸಿದವನು. ಈ ಸತ್ಯವ್ರತನಿಗೂ ಸಹ ತಾನು ಸಶರೀರನಾಗಿ ದೇವಲೋಕಕ್ಕೆ ಅಂದರೆ ಸ್ವರ್ಗಕ್ಕೆ ಹೋಗಬೇಕು ಎನ್ನುವ ಆಸೆ. ತನ್ನ ಪುರೋಹಿತರಾದ ವಶಿಷ್ಠರಲ್ಲಿ ಕೇಳಿದ. ಅವರು ಧರ್ಮ ಸೂಕ್ಷ್ಮಗಳನ್ನು ತಿಳಿಸಿ ಸಶರೀರನಾಗಿ ಸ್ವರ್ಗಕ್ಕೆ ಹೋಗಲು ಆಗುವುದಿಲ್ಲ ಎಂದು ಹೇಳಿದರು. ಅವರ ಮಕ್ಕಳಲ್ಲಿ ಕೇಳಿದ ಅವರು ಸಹ ಆಗುವುದಿಲ್ಲ ಮತ್ತು ತಂದೆಯ ಮಾತಿಗೆ ಗೌರವ ಕೊಡದ ನೀನು ಚಾಂಡಾಲನಾಗು ಎಂದು ಶಾಪಕೊಟ್ಟರು. ಆದರೆ ಸತ್ಯವ್ರತ ಛಲಗಾರ ನೇರವಾಗಿ ವಿಶ್ವಾಮಿತ್ರರಲ್ಲಿ ಕೇಳಿಕೊಂಡ. ವಿಶ್ವಾಮಿತ್ರ ಮಹರ್ಷಿ ಅದನ್ನು ಒಂದು ಪಂಥಾಹ್ವಾನವಾಗಿ ಸ್ವೀಕರಿಸಿದರು. ಸತ್ಯವ್ರತನನ್ನು ಸಶರೀರನಾಗಿ ಮೇಲಕ್ಕೆ ಕಳುಹಿಸುತ್ತಾರೆ. ಆದರೆ ಇಂದ್ರ ಆತನಿಗೆ ಪ್ರವೇಶಕೊಡದೇ ಸಶರೀರನಾಗಿ ಬರುವಂತಿಲ್ಲ ಎಂದು ಕೆಳಕ್ಕೆ ದೂಡಿದ ಸತ್ಯವ್ರತ ಅತಂತ್ರನಾಗಿ ಕೆಳಕ್ಕೆ ಬರುವಾಗ ವಿಶ್ವಾಮಿತ್ರ ಸತ್ಯವ್ರತನನ್ನು ತಡೆದು ನಿಲ್ಲಿಸಿ ಪ್ರತಿಸ್ವರ್ಗವನ್ನು ನಿರ್ಮಿಸುತ್ತಾರೆ. ಅಲ್ಲಿಂದ ಮುಂದೆ ಆತನಿಗೆ ತ್ರಿಶಂಕು ಎನ್ನುವ ಹೆಸರಾಗುತ್ತದೆ. ಈತನ ಮಗನೇ ಸತ್ಯಹರಿಶ್ಚಂದ್ರ. ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕು. ವಿಶ್ವಾಮಿತ್ರರು ಸತ್ಯವ್ರತನನ್ನು ನಿಲ್ಲಿಸಿದ್ದು ಸೂರ್ಯನಿಂದಲೂ ಗುರುತ್ವ ಇರದ, ಮತ್ತು ಭೂಮಿಯೂ ತನ್ನೆಡೆಗೆ ಸೆಳೆಯದ ಪ್ರದೇಶದಲ್ಲಿ. ಮುಂದೆ ಈತ ವಿಶ್ವಾಮಿತ್ರರ ಅನುಗ್ರಹದಿಂದ ವಿಶಿಷ್ಟಸ್ವರ್ಗವನ್ನು ಪಡೆದು ನಕ್ಷತ್ರವೊಂದರ ಅಧಿದೇವತೆಯಾಗುತ್ತಾನೆ. ತ್ರಿಶಂಕುವು ಒಂದು ನಕ್ಷತ್ರವೇ ಹೊರತು ಗ್ರಹವಲ್ಲ. ಆದರೆ ಗ್ರಹಗಳ ಮಧ್ಯದಲ್ಲಿ ಸೇರಿರುವುದರಿಂದ ‘ಛತ್ರಿನ್ಯಾಯ’ದಿಂದ ಗ್ರಹವೆಂದು ಕರೆಯಲ್ಪಟ್ಟಿದೆ. ಛತ್ರಿ ಹಿಡಿದುಕೊಂಡಿರುವವರ ಮಧ್ಯದಲ್ಲಿ ಛತ್ರಿ ಹಿಡಿದುಕೊಳ್ಳದೇ ಇರುವವನೂ ಒಬ್ಬನಿದ್ದರೆ ಅವನಿಗೂ ‘ಛತ್ರೀ’ ಅಥವಾ ‘ಛತ್ರಿ ಹಿಡಿದಿರುವವನು’ ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ಈ ಶ್ಲೋಕದಲ್ಲಿ  ತ್ರಿಶಂಕು ಎನ್ನುವುದು ಬೇರೆಯೇ ಅರ್ಥದಲ್ಲಿ. ಮಂಗಲಗ್ರಹ, ಗುರು, ಬುಧಗ್ರಹರೂ, ಇತರ ಗ್ರಹಗಳೂ ಕ್ರೂರವಾದ ಕಾಂತಿಯನ್ನು ಹೊಂದಿ ಚಂದ್ರನ ಸಮೀಕ್ಕೆ ಬಂದರು ಎನ್ನುವ ಅರ್ಥದ ಈ ಶ್ಲೋಕವನ್ನು ಗಮನಿಸಿದರೆ, ಪ್ರಾಯಶಃ ಸ್ವಲ್ಪ ತಪ್ಪಿರಬಹುದು ಅನ್ನಿಸುತ್ತದೆ. ’ಅಭ್ಯೇತ್ಯ’ ಎಂದರೆ ಸಮೀಪಿಸಿದೆ ಎಂದಾಗುತ್ತದೆ. ಮಂಗಲ ಗ್ರಹ ಸೂರ್ಯನ ಹತ್ತಿರದಲ್ಲಿತ್ತು. ’ಅವಷ್ಟಬ್ದಂಚ ಮೇ ರಾಮ ನಕ್ಷತ್ರಂ ದಾರುಣ’ ಮುಂತಾದ ಶ್ಲೋಕಗಳು ಇದನ್ನೇ ಹೇಳಿದ್ದು. ಮತ್ತು ಬುಧಗ್ರಹ ಯಾವಾಗಲೂ ಸೂರ್ಯನ ಸಮೀಪವೇ ಇರುವ ಗ್ರಹ. ಆದುದರಿಂದ ಅವುಗಳು ಚಂದ್ರನ ಸಮೀಪಕ್ಕೆ ಹೋಗಲಾರವು. ಸೂರ್ಯನೂ ಸಹ ಪುಷ್ಯಾ ನಕ್ಷತ್ರದಿಂದ ಚೈತ್ರಮಾಸದಲ್ಲಿ ದೂರವೇ ಇರುತ್ತಾನೆ. ತ್ರ್ರಿಶಂಕುವೂ ಸಹ ಗ್ರಹಗಳ ದಾರಿಯಿದ ದೂರವಿರುವುದರಿಂದ ಚಂದ್ರನಿಗೆ ಹತ್ತಿರಬರಲು ಸಾಧ್ಯವಿಲ್ಲ. ಇವೆಲ್ಲವನ್ನೂ ಗಮನಿಸಿದರೆ ಚಂದ್ರನಿಗೆ ಎದುರಾಗಿ ಬಂದಿರಬಹುದೇ ಹೊರತು ಹತ್ತಿರ ಬಂದಿರಲಿಕ್ಕಿಲ್ಲ. ಅದೇನೇ ಇರಲಿ ನನಗದು ಅರ್ಥವಾಗುವುದಿಲ್ಲ ಖಗೋಲ ವಿಜ್ಞಾನ ಗೊತ್ತಿರುವವರಿಗೆ ಅರ್ಥವಾಗುತ್ತದೆ. ಆದರೆ ಇಲ್ಲಿ ಪ್ರಮುಖವಾಗಿ ನಾವು ಗಮನಿಸಬೇಕಾದುದು ಸತ್ಯವ್ರತ ಎನ್ನುವವನು ನಿಜವಾಗಿ ಇದ್ದನೇ ? ಅಥವಾ ವಿಶ್ವಾಮಿತ್ರರೇ ಖಗೋಲ ವಿದ್ಯಮಾನಗಳನ್ನು ತಿಳಿದ ವಿಜ್ಞಾನಿಯಾಗಿದ್ದು ಭೂಮಿಯಿಂದ ಕಕ್ಷೆಗೆ ಸೇರಿಸಿರಬಹುದೇ. ಅಂತೂ ಅರ್ಚನ್ ಎನ್ನುವ ಮಹರ್ಷಿಯೊಬ್ಬ ಗುರುತ್ವದ ಕುರಿತು ಹೇಳಿದ್ದು ಗಮನಿಸಿದರೆ ವಿಶ್ವಾಮಿತ್ರಮಹರ್ಷಿಗಳೂ ಅಸಾಧಾರಣ ವ್ಯಕ್ತಿತ್ವ ಹೊಂದಿದ್ದರು. ಅಂದರೆ ಖಗೋಲ ವಿದ್ಯಮಾನವನ್ನು ಕಥಾರೂಪದಲ್ಲಿ ಹೇಳಲಾಗಿದೆ. 

#ತ್ರಿಶಂಕು_ವಿಶ್ವಾಮಿತ್ರ
Sadyojath

March 20, 2021

ಮುಹೂರ್ತದ ಪ್ರಾಚೀನತೆ



ಇಂದಿನ ಸಟ್ಲೇಜ್ ಎನ್ನುವುದು ಹಿಂದೆ ಶತದ್ರು ಎನ್ನುವ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಅಂದರೆ ನೂರು ಕವಲುಗಳು ಸೇರಿ ಒಂದಾಗಿ ಹರಿಯುವ ನದಿ ಅದು. ಅಥವಾ ಅನೇಕ ಕವಲುಗಳು ಸೇರಿ ಹರಿಯುವ ನದಿ. ಅದಕ್ಕಾಗಿಯೇ ಶತ-ದ್ರು. ಶುತುದ್ರು ಎಂತ ಸಹ ಕರೆದಿರುವುದು ಇದೆ. ಹಿಂದಿನ ವಿಪಾಶಾ ಎನ್ನುವ ನದಿಯನ್ನು ಇಂದು ಬಿಯಾಸ್ ಎಂದು ಕರೆಯಲಾಗುತ್ತಿತ್ತು. ವಿಪಾಶಾ ಮತ್ತು ಶತದ್ರು ಎನ್ನುವ ಈ ಎರಡು ನದಿಗಳ ಸಂಗಮದ ಹತ್ತಿರ ವಿಶ್ವಾಮಿತ್ರ ಮಹರ್ಷಿ ಬರುತ್ತಾರೆ. ಅಲ್ಲಿ ವಿಶ್ವಾಮಿತ್ರ ಮತ್ತು ನದಿಯ ನಡುವೆ ಸಂವಾದ ಏರ್ಪಡುತ್ತದೆ. ಇದು ಋಗ್ವೇದದ 3ನೇ ಮಂಡಲದ 33ನೇ ಸೂಕ್ತದಲ್ಲಿ ಬರುತ್ತದೆ. ವಿಶ್ವಾಮಿತ್ರ ಮತ್ತು ನದಿಗಳೇ ದೃಷ್ಟಾರರಾಗಿಯೂ, ನದೀ ವಿಶ್ವಾಮಿತ್ರ ಮತ್ತು ಇಂದ್ರನೇ ದೇವತೆಗಳಾಗಿರುವ ಸೂಕ್ತ ಇದು.

ಪಿಜವನ ಎನ್ನುವವನ ಮಗನಾದ ಸುದಾಸನಿಗೆ ವಿಶ್ವಾಮಿತ್ರ ಮಹರ್ಷಿಗಳು ಪುರೋಹಿತರಾಗಿದ್ದರು. ಒಮ್ಮೆ ಸುದಾಸ ಒಂದು ಯಾಗವನ್ನು ಮಾಡಿಸುತ್ತಾನೆ. ಯಾಗದ ಪೌರೋಹಿತ್ಯದ ನಿಮಿತ್ತವಾಗಿ ದಕ್ಷಿಣೆಯ ರೂಪವಾಗಿ ಸಂಪತ್ತನ್ನು ವಿಶ್ವಮಿತ್ರರಿಗೆ ಕೊಡುತ್ತಾನೆ. ಆ ಸಂಪತ್ತನ್ನು ತೆಗೆದುಕೊಂಡು ತನ್ನ ಆಶ್ರಮಕ್ಕೆ ಹೋಗುವಾಗ ಕಳ್ಳರು ಸಂಪತ್ತನ್ನು ಅಪಹರಿಸುವ ಸಲುವಾಗಿ ಹಿಂದೆಯೇ ಬರುತ್ತಾರೆ. ವಿಶ್ವಾಮಿತ್ರ ಮಹರ್ಷಿಗಳು ವೇಗವಾಗಿ ನದೀ ಸಂಗಮದ ಸ್ಥಳಕ್ಕೆ ಬಂದಾಗ ನದಿ ಉಕ್ಕಿ ಹರಿಯುತ್ತಿತ್ತು. ಅಪಹರಣಕಾರರಿಂದ ತಪ್ಪಿಸಿಕೊಳ್ಳುವ ಅನಿವಾರ್ಯತೆ ಮಹರ್ಷಿಗಳಿಗಿತ್ತು. ಆಗ ನದಿಯನ್ನು ಪ್ರಾರ್ಥಿಸುತ್ತಾರೆ. ಅದೇ ಇಲ್ಲಿ ಸಂವಾದದ ರೂಪದಲ್ಲಿ ಬಂದಿದೆ. ಅದನ್ನು ನಾನಿಲ್ಲಿ ಬರೆಯುತ್ತಿಲ್ಲ. ಆದರೆ ಈ ಸೂಕ್ತದಲ್ಲಿ ಬರುವ ಒಂದು ಶಬ್ದವನ್ನು ಗಮನಿಸುವೆ. 
ಅಲ್ಲಿ ಸೂಕ್ತದಲ್ಲಿ ರಮಧ್ವಂ ಮೇ ವಚಸೇ ಸೋಮ್ಯಾಯ ಋತಾವರೀರುಪಮುಹೂರ್ತಮೇವೈಃ ಎನ್ನುವುದಾಗಿ ಬರುತ್ತದೆ. ಇಲ್ಲಿ ಮುಹೂರ್ತಮೇವೈಃ ಎನ್ನುವಲ್ಲಿನ ಮುಹೂರ್ತ ಎನ್ನುವುದನ್ನು ಗಮನಿಸಿದರೆ ಈ ಶಬ್ದವು ಋಗ್ವೇದದಲ್ಲಿ ಎರಡು ಸಲ ಮಾತ್ರವೇ ಬಂದಿದೆ. ತುಂಬಿ ಹರಿಯುತ್ತಿರುವ ಪುಣ್ಯವಾಹಿನಿಗಳಾದ ನದಿಗಳೇ ನಿಮ್ಮ ಪ್ರವಾಹವನ್ನು ಕ್ಷಣಕಾಲ ನಿಲ್ಲಿಸಿ ನಾನು ಕುಶಿಕನ ಮಗನಾದ ವಿಶ್ವಾಮಿತ್ರನಾಗಿದ್ದೇನೆ. ನನ್ನ ಆತ್ಮರಕ್ಷಣೆಗಾಗಿ ನಾನು ನಿಮ್ಮನ್ನು ಸ್ತುತಿಸುತ್ತಿದ್ದೇನೆ ಎನ್ನುವ ಪ್ರಾರ್ಥನೆ ಇದೆ. ಅಂದರೆ ಇಲ್ಲಿ ಮುಹೂರ್ತ ಎನ್ನುವುದು ಕಾಲದ ಸೂಚಕವಾದರೂ ಅದು ಕಾಲದ ಅತ್ಯಂತ ಚಿಕ್ಕ ಅವಧಿ. 
ಇನ್ನು ಇಂದ್ರಾಪರ್ವತ ಎನ್ನುವ ಇದೇ ಮಂಡಲದ 53ನೇ ಸೂಕ್ತದಲ್ಲಿ ಇದೇ ವಿಶ್ವಾಮಿತ್ರ ಮಹರ್ಷಿ ಇಂದ್ರಾಪರ್ವತೌ ಎನ್ನುವ ದೇವತೆಯನ್ನು ಸ್ತುತಿಸುವ ಮಂತ್ರದಲ್ಲಿ ತ್ರಿರ್ಯದ್ದಿವಃ ಪರಿ ಮುಹೂರ್ತ ಮಾಗಾತ್ ಎನ್ನುವಲ್ಲಿ ಸಹ ಇಂದ್ರನು ಒಂದೇ ಕಾಲದಲ್ಲಿ ನಡೆಯುವ ಯಜ್ಞಗಳಲ್ಲಿ ಭಾಗಿಯಾಗುತ್ತಾನೆ ಎನ್ನುವ ಅರ್ಥ. ಅಂದರೆ ಇರುವ ಒಂದೇ ಮುಹೂರ್ತದಲ್ಲಿ ಅನೇಕ ಕಡೆ ಇರುತ್ತಾನೆ ಎನ್ನುವುದು. ಈ ಋಕ್ಕನ್ನು ಸೂಕ್ಷ್ಮವಾಗಿ ಗಮನಿಸಿದರೆ. ಇಲ್ಲಿ ಇಂದ್ರ ಒಂದೇ ವಸ್ತುವನ್ನು ಒಡೆದು ವಿಭಾಗಿಸಿ ಅನೇಕವನ್ನಾಗಿ ಮಾಡುತ್ತಾನೆ. ಅದನ್ನೇ ನಾನಾವಿಧವಾದ ಶಕ್ತಿಗಳನ್ನಾಗಿ ಪರಿವರ್ತಿಸುತ್ತಾನೆ ಎನ್ನುವುದನ್ನು ನೋಡಿದರೆ ಅಣುವೊಂದನ್ನು ವಿಭಾಗಿಸಿ ಅನೇಕವನ್ನಾಗಿ ಮಡಿ ಪರಮಾಣುಗಳಿಂದ ನಾವು ಶಕ್ತಿಯನ್ನು ಪಡೆಯಬಹುದು ಎನ್ನುವುದಕ್ಕೆ ಹತ್ತಿರವಾಗುತ್ತದೆ. ಇಲ್ಲಿಯೂ ಸಹ ಮುಹೂರ್ತ ಎನ್ನುವುದು ಅತ್ಯಂತ ಚಿಕ್ಕ ಅವಧಿ ಎನ್ನುವುದು ತಿಳಿಯುತ್ತದೆ. ಇನ್ನು ಮುಹೂರ್ತದ ಕುರಿತು ನಿರುಕ್ತದಲ್ಲಿ 2:25ರಲ್ಲಿ ಮುಹೂರ್ತಮ್ ಏವೈಃ ಅಯನೈಃ ಅವನೈರ್ವಾ | ಮುಹೂರ್ತಃ ಮುಹುಃ ಋತುಃ| ಋತುಃ ಅರ್ತೇಃ ಗತಿಕರ್ಮಣಃ| ಮುಹುಃ ಮೂಢಃ ಇವ ಕಾಲಃ | ಮೂಹೂರ್ತ ಎನ್ನುವುದರ ಅರ್ಥ ಸ್ವಲ್ಪ ಕಾಲ ಅಥವಾ ಕ್ಷಣಕಾಲ. ಮುಹುಃ ಮತ್ತು ಋತುಃ ಎನ್ನುವ ಶಬ್ದಗಳಿಗಿರುವ ಅರ್ಥವೇ ಬೇಗ ಕಳೆಯುವ ಕಾಲ ಎಂದು ಅರ್ಥ.

’ಮುಹೂರ್ತ’ ಶಬ್ದದ ಈ ಅರ್ಥವು ಶತಪಥ ಬ್ರಾಹ್ಮಣದಲ್ಲಿ 1:8:3:17ರಲ್ಲಿ ತನ್ ಮುಹೂರ್ತಂ ಧಾರಯಿತ್ವಾ ಮತ್ತು 2, 3. 2. 5 ಅಥ ಪ್ರಾತಃ ಅನಶಿತ್ವಾ ಮುಹೂರ್ತ ಸಭಾಯಾಮಾಶಿತ್ವಾಪಿ ಇತ್ಯಾದಿಗಳಲ್ಲಿಯೂ ಕಾಳಿದಾಸನ ರಘುವಂಶ ೫.೫೮ರಲ್ಲಿ ಅಲಂ ಹ್ರಿಯಾ ಯನ್ಮುಹೂರ್ತಂ ದಯಾಪರೋ ಭೂಃ ಪ್ರಹರನ್ನಪಿ ತ್ವಂ ಎಂದು ಮುಹೂರ್ತದ ಕುರಿತಾಗಿ ಹೇಳುವ  ಅಭಿಜಾತ ಸಂಸ್ಕೃತ ಸಾಹಿತ್ಯ ಗ್ರಂಥಗಳಲ್ಲಿಯೂ ಕಾಣಬರುತ್ತದೆ. 
ಶತಪಥ ಬ್ರಾಹ್ಮಣದ 10. 4. 2. 18 ಮತ್ತು 12, 3, 2, 5ರಲ್ಲಿ ’ಮುಹೂರ್ತ’ ಶಬ್ದದ ಇನ್ನೊಂದು ಅರ್ಥವಿದೆ; ಹಗಲು15 ಮುಹೂರ್ತಗಳೂ ರಾತ್ರಿ 15 ಮುಹೂರ್ತಗಳಾಗುತ್ತವೆ ಇವೆರಡೂ ಒಟ್ಟೂ ಸೇರಿದರೆ ಒಂದು ಅಹೋರಾತ್ರದಲ್ಲಿ 30 ಮುಹೂರ್ತ ಗಳಾಗುತ್ತವೆ ಎಂದು ಅಲ್ಲಿ ಹೇಳಲಾಗಿದೆ; ಒಂದು ಸಂವತ್ಸರದಲ್ಲಿ 10800 ಮುಹೂರ್ತಗಳಿರುತ್ತವೆ. 30ಕ್ಕೆ 360ನ್ನು ಗುಣಿಸಿದರೆ ಸಿಗುವುದೇ 108000. ಇಲ್ಲಿ ’ಮುಹೂರ್ತ’ವೆಂದರೆ ಹಗಲಿನ ಹದಿನೈದರಲ್ಲಿ ಒಂದು ಅಂಶ. ಎಂದರೆ ಸಾಧಾರಣವಾಗಿ ಎರಡು ನಾಡಿಕಾ ಅಥವಾ ಗಳಿಗೆಗಳಷ್ಟು. ಮುಹೂರ್ತದ ಕುರಿತು ಬೇಕಷ್ಟು ಬರೆಯಬಹುದು ಆದರೆ ಪ್ರಾಚೀನತೆಯನ್ನು ಗಮನಿಸಿದೆ. ಕಾಲದ ಅತ್ಯಂತ ಚಿಕ್ಕ ಅವಧಿ ಮುಹೂರ್ತ ಎಂದು ತೆಗೆದುಕೊಂಡಿರುವುದಂತೂ ಸ್ಪಷ್ಟ. ನಮ್ಮಲ್ಲಿ ಸಾಮಾನ್ಯವಾಗಿ ಕರಾವಳಿ ಜಿಲ್ಲೆಗಳಲ್ಲಿ ಮುಹೂರ್ತ ಎಂದರೆ ಅದು ಒಂದೇ ಅವಧಿಯನ್ನು ಶುಭ ಸಮಾರಂಭಗಳಿಗೆ ಇಟ್ಟಿರುತ್ತಾರೆ. ಅಂದರೆ 10 ರಿಂದ ಹತ್ತೂವರೆಯ ಮಹೂರ್ತದಲ್ಲಿ ಎಂದು ಹೇಳುವುದಿಲ್ಲ ಹತ್ತುಗಂಟೆಯ ಮುಹೂರ್ತ ಎಂದು ಹೇಳುತ್ತಾರೆ. ಅದೇನೇ ಇರಲಿ 48 ನಿಮಿಷಗಳ ಒಂದು ಅವಧಿಯನ್ನೂ ಮುಹೂರ್ತ ಎಂದು ಹೇಳಲಾಗುತ್ತದೆ. ಇದು ಮುಹೂರ್ತದ ಆರಂಭ. 

#ಮುಹೂರ್ತ_
ಮೂಲ ಸದ್ಯೋಜಾತರದ್ದು