#ಛತ್ರಿ_ಮತ್ತು_ಪಾದರಕ್ಷೆ_ಉತ್ಪತ್ತಿ
ಛತ್ರಿ ಮತ್ತು ಪಾದರಕ್ಷೆಯನ್ನು ಶುಭಕಾರ್ಯಗಳಲ್ಲಿಯೂ ಮತ್ತು ಪಿತೃಕಾರ್ಯಗಳಲ್ಲಿಯೂ ದಾನವಾಗಿ ಕೊಡುವ ಪದ್ಧತಿ ಇದೆ. ಮಹಾಭಾರತದಲ್ಲಿ ಇದಕ್ಕೆ ಸಂಬಂಧಿಸಿದ ವಿಷಯವೊಂದನ್ನು ಹೇಳಲಾಗಿದೆ.
ಅದು ಜ್ಯೇಷ್ಠಮಾಸದ ಬಿಸಿಲಿನ ಕಾಲ. ಭೃಗುವಂಶೀಯರಾದ ಜಮದಗ್ನಿ ಮಹರ್ಷಿಯು ಧನುಸ್ಸಿನಲ್ಲಿ ಬಾಣಗಳನ್ನು ಹೂಡಿ ಮನೋರಂಜನೆಗಾಗಿ ಆಟವಾಡುತ್ತಿದ್ದರು. ಬಹಳ ದೂರದವರೆಗೆ ಹೋಗಿ ಬಿದ್ದ ಬಾಣಗಳನ್ನೆಲ್ಲ ಹೆಕ್ಕಿ ತರುವಂತೆ ಜೊತೆಯಲ್ಲಿದ್ದ ಪತ್ನಿ ರೇಣುಕೆಗೆ ಹೇಳಿದರು. ಮಧ್ಯಾಹ್ನದ ಬಿರುಬಿಸಿಲು, ನೆತ್ತಿಯನ್ನು ಸುಡುತ್ತಿತ್ತು. ಕೋಮಲೆಯಾದ ರೇಣುಕೆಯು ಬಿಸಿಲ ತಾಪದಿಂದಲೂ, ಕಾದ ಮಣ್ಣಿನ ಮೇಲೆ ನಡೆದು ಪರಿತಾಪಪಟ್ಟಳು. ಪತಿಯು ಮೊದಲೇ ಕೋಪಿಷ್ಟ, ತಾನು ಹೋಗುವುದು ವಿಳಂಬವಾದರೆ ಎಲ್ಲಿ ಸಿಟ್ಟಿನಿಂದ ಶಪಿಸುವನೋ ಎಂದು ಹೆದರಿ ಹೇಗೋ ಕಷ್ಟಪಟ್ಟು ಆಶ್ರಮ ತಲುಪಿದಳು. ಆದರೂ ತಡವಾಗಿ ಹೋಯಿತು! ಕ್ರುದ್ಧಗೊಂಡ ಜಮದಗ್ನಿಯು ರೇಣುಕೆಯು ಸಾವಕಾಶವಾಗಿ ಬರಲು ಕಾರಣವೇನು ಎಂದು ಕೇಳಿದಾಗ ದೀನಳಾದ ರೇಣುಕೆಯು ‘ಅಗ್ನಿಸದೃಶವಾದ ಸೂರ್ಯನ ಕಿರಣಗಳಿಂದ ನನ್ನ ನೆತ್ತಿ ಮತ್ತು ಕಾಲು ಸುಡುತ್ತಿತ್ತು. ವೃಕ್ಷದ ನೆರಳಿನಲ್ಲಿ ಸ್ವಲ್ಪಕಾಲ ನಿಂತು ಬಂದೆ’ ಎಂದಳು. ಪ್ರಿಯಪತ್ನಿಯನ್ನು ಭಾದಿಸಿದ ಸೂರ್ಯನ ಮೇಲೆ ಜಮದಗ್ನಿಯ ಕೋಪ ತಿರುಗಿತು. ಕೂಡಲೇ ಧನುಸ್ಸನ್ನು ಠೇಂಕರಿಸಿ ಬಾಣಗಳನ್ನು ಹೂಡಿ ಸೂರ್ಯನ ಕಡೆಗೆ ಮುಖಮಾಡಿ ಅವನನ್ನು ಭೇದಿಸುವುದಕ್ಕೆ ಸಿದ್ಧನಾದ. ಬ್ರಹ್ಮರ್ಷಿ ಅದರಲ್ಲೂ ಕೋಪಿಷ್ಟ, ಕ್ರೋಧಾಗ್ನಿಯಿಂದ ಮೂರುಲೋಕವನ್ನೇ ದಹಿಸುವ ಸಾಮರ್ಥ್ಯವಿದ್ದವನು ಜಮದಗ್ನಿ! ಸೂರ್ಯನಿಗೆ ಮುಂದಾಗುವ ಅನಾಹುತದ ಅರಿವಾಯಿತು. ತಕ್ಷಣವೇ ಬ್ರಾಹ್ಮಣಮುನಿಯ ವೇಷಧರಿಸಿ ಜಮದಗ್ನಿಯ ಎದುರು ಕಾಣಿಸಿಕೊಂಡ.
ಜಗತ್ತಿನ ಸರ್ವಜೀವಜಂತುಗಳಿಗೂ ಸೂರ್ಯನೇ ಆಧಾರ. ಸೂರ್ಯನ ಕಿರಣಗಳು ನೆಲವನ್ನು ಸೋಕಿದರೆ ಮಾತ್ರ ಲೋಕದಲ್ಲಿ ಮಳೆಬೆಳೆಯಾಗಿ ಪ್ರಾಣಿಕೋಟಿಗೆ ಆಹಾರ ಪ್ರಾಪ್ತವಾಗುತ್ತದೆ. ಶಾಸ್ತ್ರೋಕ್ತ ಶುಭಕರ್ಮಾದಿಗಳೂ, ಪಿತೃಕಾರ್ಯಗಳೆಲ್ಲಕ್ಕೂ ಸೂರ್ಯನೇ ಪ್ರಧಾನ. ಅಂತಹ ಸೂರ್ಯನನ್ನು ಬಾಣದಿಂದ ಛೇದಿಸಿ ಭೂಮಿಗಿಳಿಸಿದರೆ ಜಗತ್ತೇ ನಾಶವಾಗುತ್ತದೆ ಹಾಗೆ ಮಾಡಬೇಡ ಎಂದು ಬ್ರಾಹ್ಮಣ ಪ್ರಾರ್ಥಿಸಿದ. ಆದರೆ ಜಮದಗ್ನಿಮುನಿಯ ಕೋಪ ಶಮನವಾಗಲಿಲ್ಲ. ಜ್ಞಾನದೃಷ್ಟಿಯಿಂದ ಬ್ರಾಹ್ಮಣ ರೂಪ ಧರಿಸಿ ತನ್ನೆದುರು ನಿಂತಿರುವವನು ಸೂರ್ಯನೆಂಬುದನ್ನು ಕ್ಷಣಮಾತ್ರದಲ್ಲಿ ತಿಳಿಯಿತು. ಜಮದಗ್ನಿಯು “ಪ್ರಖರ ಕಿರಣಗಳಿಂದ ಜೀವಿಗಳನ್ನು ಸುಡುತ್ತಿರುವ ನಿನ್ನ ಅಹಂಕಾರವನ್ನು ತಗ್ಗಿಸಬೇಕು, ಮಧ್ಯಾಹ್ನ ಸಮಯದಲ್ಲಿ ಅರ್ಧನಿಮಿಷದ ಕಾಲ ನೀನು ನಿಲ್ಲುವ ಸಮಯದಲ್ಲಿ ನಿನ್ನನ್ನು ಬಾಣಗಳಿಂದ ಭೇದಿಸುತ್ತೇನೆ. ನಿನ್ನನ್ನು ಕ್ಷಮಿಸುವ ಪ್ರಮೇಯವೇ ಇಲ್ಲ” ಎಂದು ಗುಡುಗಿದ. ಜಮದಗ್ನಿಯ ಶಕ್ತಿ ಮತ್ತು ಪ್ರಾಬಲ್ಯದ ಅರಿವಿದ್ದ ಸೂರ್ಯನು ಮರುಕ್ಷಣವೇ ಮುನಿಗೆ ಶರಣಾಗತನಾದ. ಶರಣಾಗತನಾದವನನ್ನು ಕೊಲ್ಲುವುದು ಧರ್ಮವಲ್ಲ. ಆದರೆ ಸೂರ್ಯನು ಮಾಡಿದ ಅಪರಾಧವು ಮರುಕಳಿಸದಂತೆ ಏನಾದರೂ ಪರಿಹಾರ ಕಂಡುಕೊಳ್ಳುವಂತೆ ಜಮದಗ್ನಿಯು ಸೂಚಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಸೂರ್ಯದೇವನು ಒಂದು ಛತ್ರಿ ಮತ್ತು ಪಾದರಕ್ಷೆಯನ್ನು ಜಮದಗ್ನಿಗೆ ಕೊಟ್ಟು ‘ನನ್ನ ಕಿರಣಗಳು ತಲೆಯನ್ನು ಸುಡದಂತೆ ಛತ್ರಿಯೂ, ಪಾದಗಳ ರಕ್ಷಣೆಗಾಗಿ ಪಾದುಕೆಗಳನ್ನು ಕೊಡುತ್ತಿದ್ದೇನೆ. ಇವು ಲೋಕದಲ್ಲಿ ಪ್ರಚಲಿತವಾಗುತ್ತದೆ. ಇನ್ನು ಮುಂದೆ ಎಲ್ಲಾ ಪುಣ್ಯಕಾರ್ಯಗಳಲ್ಲಿಯೂ ಇವುಗಳ ದಾನದಿಂದ ಅಕ್ಷಯ ಸತ್ಫಲಗಳನ್ನು ಪಡೆಯುವರು’ ಎಂದು ಅನುಗ್ರಹಿಸಿ ಹೊರಟುಹೋದನು.
ಅಂದಿನಿಂದ ಇಂದಿನವರೆಗೂ ಪ್ರತಿಯೊಂದು ಪರಾಪರ ಕಾರ್ಯಗಳಲ್ಲಿ ಛತ್ರಿ ಮತ್ತು ಪಾದರಕ್ಷೆಯನ್ನು ದಾನವಾಗಿ ಕೊಡುವುದು ಕಾರ್ಯಗಳ ಒಂದು ಅಂಗವಾಗಿ ನಡೆದುಕೊಂಡೇ ಬಂದಿದೆ. ಮನುಷ್ಯನ ಬಾಹ್ಯ ಅಂಗಗಳಲ್ಲಿ ತಲೆ ಮತ್ತು ಪಾದಗಳು ಪ್ರಮುಖ. ಅದರ ರಕ್ಷಣೆಯ ಪ್ರಾಮುಖ್ಯತೆಯನ್ನು ತಿಳಿಸುವುದು ಒಂದು ವಿಷಯವಾದರೆ ಖಗೋಲದಲ್ಲಿ ನಡೆಯುವ ವಿಶೇಷವೊಂದನ್ನು ಇಲ್ಲಿ ಸೂಕ್ಷ್ಮವಾಗಿ ಗಮನಿಸಿ. ಸೂರ್ಯನು ಅರ್ಧನಿಮಿಷ ನಿಲ್ಲುವ ಸಂದರ್ಭವನ್ನು ಖಗೋಳಶಾಸ್ತ್ರದಲ್ಲಿ ‘ಅಯನ ಸಂಕ್ರಾಂತಿ’ (Solstice) ಎನ್ನಲಾಗುತ್ತದೆ. ವರ್ಷದಲ್ಲಿ ಎರಡು ಬಾರಿ ಬೇಸಿಗೆ ಮತ್ತು ಚಳಿಗಾಲದ ಋತು ಬದಲಾವಣೆಯ ಸಂದರ್ಭದಲ್ಲಿ ಸೂರ್ಯನ ಪಥ ಬದಲಾವಣೆಯಾಗುವಾಗ ಒಂದುಕ್ಷಣ ಆಕಾಶದಲ್ಲಿ ನಿಂತಂತೆ ಕಾಣುತ್ತಾನೆ ಎನ್ನುತ್ತದೆ ವಿಜ್ಞಾನ. ಅದನ್ನು ಸೂರ್ಯನ ಸ್ಥಿರತೆ ಎನ್ನುತ್ತಾರೆ. ಆ ವಿಷಯವನ್ನೇ ಜಮದಗ್ನಿಯು ಇಲ್ಲಿ ಹೇಳಿದ್ದಾರೆ ಎಂದಾಗ ನಮ್ಮ ಪೂರ್ವಜರ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಯಾವ ಮಟ್ಟದಲ್ಲಿತ್ತು ಎಂಬುದು ಅನೂಹ್ಯ!!
Article by- Ashwini Hodala