February 4, 2026

ಭಸ್ಮ, ರುದ್ರಾಕ್ಷಿ ಧಾರಣೆಯ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವ

ಭಸ್ಮಧಾರಣೆ -
    ಭಸ್ಮವನ್ನು ವಿಭೂತಿ ಎಂದು ಕರೆಯುತ್ತೇವೆ. "ವಿಭೂತಿರ್ಭೂತಿ ಹೇತುತ್ವಾತ್" ಅಂದರೆ "ಭೂತಿಗೆ ಕಾರಣವಾದದ್ದು " ವಿಭೂತಿ". 'ಭೂತಿ' ಎಂದರೆ ಸಂಪತ್ತು. ಸಂಪತ್ತಿಗೆ ಕಾರಣವಾದದ್ದು ವಿಭೂತಿ. ಸಂಪತ್ತೆಂದರೆ ಭೌತಿಕ ಸಂಪತ್ತು ಮತ್ತು ಜ್ಞಾನ ಸಂಪತ್ತು ಎರಡು ವಿಧ. ಜೀವನಕ್ಕೆ ಎರಡೂ ಸಂಪತ್ತುಗಳು ಅವಶ್ಯಕ. ಶಾಸ್ತ್ರೋಕ್ತ ವಿಧಿಯಂತೆ ಶ್ರದ್ಧೆಯಿಂದ ವಿಭೂತಿಯನ್ನು ಧರಿಸಿದರೆ ಉಭಯ ಸಂಪತ್ತುಗಳು ಸಹಜವಾಗಿ ಪ್ರಾಪ್ತವಾಗುತ್ತವೆ‌.
     ವಿಭೂತಿಯನ್ನು ಗೋವಿನ ಸಗಣಿಯನ್ನು ಬೆರಣಿ ಮಾಡಿ ಒಣಗಿಸಿ ನಂತರ ಸುಟ್ಟು ಅದರಿಂದ ಬಂದ ಬೂದಿಯನ್ನು ಸೋಸಿ, ಅದಕ್ಕೆ ನೀರು ಬೆರೆಸಿ ಸೋಸಿ ಉಂಡೆ ಮಾಡಿ ಒಣಗಿಸಿ ಸುಡುತ್ತಾರೆ. ಈ ಪ್ರಕ್ರಿಯೆ ಎರಡರಿಂದ ಮೂರು ಸಲ ನಡೆಯುತ್ತದೆ. ಈ ರೀತಿ ತಯಾರಾದ ಬೂದಿಯನ್ನು ಗಟ್ಟಿ ಆಕಾರ ಮಾಡುತ್ತಾರೆ ಇದೇ ವಿಭೂತಿ. ಗೋಮಾತೆಯಲ್ಲಿ ಸಕಲ ದೇವತೆಗಳು ವಾಸವಾಗಿದ್ದಾರೆ. ಗೋವಿನ ಸಗಣಿಯಲ್ಲಿ ಲಕ್ಷ್ಮಿಯ ನಿವಾಸವಿರುತ್ತದೆ. 
    ಹೀಗೆ ತಯಾರಾದ ಶುಭ್ರ ಲಕ್ಷ್ಮಿ ಸ್ವರೂಪವಾದ ವಿಭೂತಿಯನ್ನು ಪ್ರತಿದಿನ ಶಿವನಾಮ ಸ್ಮರಣೆಯೊಂದಿಗೆ ಮೂರು ಬೆರಳುಗಳಿಂದ ಹಣೆಗೆ ಧರಿಸುವುದರಿಂದ ನಾನಾ ಜನ್ಮ ಜನ್ಮದ ಪ್ರಾರಬ್ಧ ಕರ್ಮಗಳು, ಮಾಡಿದ ಸರ್ವ ಪಾಪಗಳು ನಿವಾರಣೆಯಾಗಿ ಭೌತಿಕ ಸಂಪತ್ತು ಪ್ರಾಪ್ತವಾಗುತ್ತದೆ. ಇದು ಶಿವನಿಗೆ ಅತ್ಯಂತ ಪ್ರಿಯವಾಗಿದೆ. ಇಂತಹ ವಿಭೂತಿಯಲ್ಲಿ ಸೂಕ್ಷ್ಮ ಹಾನಿಕಾರಕ ಬ್ಯಾಕ್ಟೀರಿಯಾ ಜೀವಿಗಳನ್ನು ಕೊಲ್ಲುವ ಮತ್ತು ನಂಜು ನಿವಾರಕ ಗುಣಗಳಿವೆ. ಚರ್ಮ ಕಾಯಿಲೆಗಳಿಗೆ ಗುಣಕಾರಕ. ಈ ಕಾರಣದಿಂದ ನಮ್ಮ ಹಿರಿಯರು ಬೆರಣಿಯ ಬೂದಿಯಿಂದ ಕೈತೊಳೆಯುವುದು. ಪಾತ್ರೆಗಳನ್ನು ತೊಳೆಯುವುದು ಮಾಡುತ್ತಿದ್ದರು. 
ವಿಭೂತಿ ಧಾರಣೆ ಆಧ್ಯಾತ್ಮಿಕ ಮಾತ್ರ ಅಲ್ಲ ವೈಜ್ಞಾನಿಕವಾಗಿಯೂ ಬಹಳ ಉಪಯುಕ್ತವಾಗಿದೆ. 

ರುದ್ರಾಕ್ಷಿ ಧಾರಣೆ
    ರುದ್ರಾಕ್ಷಿಗಳನ್ನು ರುದ್ರನ ಕಣ್ಣುಗಳೆಂದು ಪುರಾಣಗಳಲ್ಲಿ ಕರೆಯುತ್ತಾರೆ. ಅರಿವಿನ ಕಣ್ಣು ಎಂದು ಅರ್ಥ, ರುದ್ರಾಕ್ಷಿಯನ್ನು ಕೊರಳಲ್ಲಿ ಧರಿಸಬೇಕು. ರುದ್ರಾಕ್ಷಿಯಿಂದ ಅನೇಕ ಪ್ರಯೋಜನಗಳಿವೆ. ಸಾಧಕನ ದೈಹಿಕ ಶುದ್ಧತೆಯ ಜೊತೆಗೆ ಅರಿವಿನ ಕಣ್ಣು ತೆರೆಯುತ್ತ ಅಂತರಂಗದೊಳಗೆ ಜ್ಞಾನೋದಯವನ್ನು ಉಂಟು ಮಾಡುತ್ತದೆ. ಇದು ಕೇವಲ ಹೊರಗೆ ಧರಿಸುವ ಮಾಲೆ ಮಾತ್ರ ಅಲ್ಲ ಒಳಗಿನ ಅಜ್ಞಾನ ಕಳೆಯುವ ಬೆಳಕಾಗಿದೆ. 
    ವೈಜ್ಞಾನಿಕವಾಗಿ ಹೇಳುವುದಾದರೆ ಇದು ಆಯಸ್ಕಾಂತದಂತೆ  ಕೆಲಸಮಾಡಿ ರಕ್ತ ಸಂಚಾರವನ್ನು ಕ್ರಮಬದ್ಧವಾಗಿ ನಿಯಂತ್ರಿಸಿ ಹೃದಯದ ಕಾರ್ಯವನ್ನು ಮತ್ತು ರಕ್ತದೊತ್ತಡವನ್ನು(BP) ನಿಯಂತ್ರಿಸುತ್ತದೆ. ಅಲ್ಲದೇ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಭಯ, ಆತಂಕ, ಫೋಬಿಯಾ ಮತ್ತು ಚಿಂತೆಗಳನ್ನು ದೂರ ಮಾಡುತ್ತದೆ. ರುದ್ರಾಕ್ಷಿಯು ಉರಿಯೂತ, ಚರ್ಮದ ಕಾಯಿಲೆಗಳಿಗೆ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ದೇಹದ ಯಾವ ಯಾವ ಭಾಗದಲ್ಲಿ  ಧರಿಸುವರೋ ಆಯಾ ಭಾಗದಲ್ಲಿ ಅಕ್ಯೀಪ್ರೆಶರ್ ನಂತೆ ಕೆಲಸ ಮಾಡಿ ದೇಹಕ್ಕೆ ಚೈತನ್ಯ, ಧ್ಯಾನಕ್ಕೆ ಪ್ರಚೋದನೆ, ಮನಸ್ಸಿನ ಏಕಾಗ್ರತೆಗೆ ಸಹಾಯಮಾಡುತ್ತದೆ. 
    ರುದ್ರನ ನೇತ್ರ ಜಲದಿಂದ ಉತ್ಪನ್ನವಾಗಿರುವದಿಂದ ರುದ್ರಾಕ್ಷಗಳೆಂದು ಪ್ರಸಿದ್ಧವಾದ ಇವು ಶ್ರೀರುದ್ರನಷ್ಟೇ ಸಾಮರ್ಥ್ಯ ಪಡೆದಿರುತ್ತವೆ. ಇವುಗಳನ್ನು ಧರಿಸಿದವನ ದೇಹವು ದೇವಾಲಯದಂತೆ ಪವಿತ್ರವೂ ಮತ್ತು ಶಿವನಂತೆ ಪೂಜ್ಯನೂ ಆಗುವನು.
ಆದುದರಿಂದ ನಾವೆಲ್ಲ ಆಧ್ಯಾತ್ಮಿಕ, ಮಾನಸಿಕ, ದೈಹಿಕ ಆರೋಗ್ಯಕ್ಕಾಗಿ ರುದ್ರಾಕ್ಷಿ ಧಾರಣೆಯನ್ನು ಮಾಡೋಣ. 

ಲಿಂಗಧಾರಣೆ (ಇಷ್ಟಲಿಂಗ)
"ಇಷ್ಟಲಿಂಗಮಿದಮ್ ಸಾಕ್ಷಾದನಿಷ್ಟಪರಿಹಾರಕಮ್" 
ಯಾರು ಪ್ರತಿದಿನವೂ ಗುರುಗಳು ಕೊಟ್ಟ ಇಷ್ಡಲಿಂಗವನ್ನು ಪೂಜಿಸುತ್ತಾರೋ ಅವರ ಸಕಲ ಅನಿಷ್ಟಗಳೂ ಪರಿಹಾರವಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ. 
ಹುಟ್ಟು ಸಾವುಗಳೆಂಬ ಭವಬಂಧನಗಳನ್ನು ನಿವಾರಿಸಿ ಲಿಂಗಾಂಗ ಸಾಮರಸ್ಯ ಮತ್ತು ಇಷ್ಟಪ್ರಾಪ್ತಿಯನ್ನುಂಟು ಮಾಡುವ ಲಿಂಗವೇ ಇಷ್ಟಲಿಂಗ. 
    ಇಷ್ಟಲಿಂಗವನ್ನು ಕಪ್ಪು ಕಂತೆಯಿಂದ ಮಾಡುತ್ತಾರೆ. ನಮ್ಮ ಎಡ ಅಂಗೈಯಲ್ಲಿ ಇಟ್ಟುಕೊಂಟು ಪೂಜೆ ಮಾಡಿ ತದೇಕ ಚಿತ್ತದಿಂದ ಲಿಂಗುವನ್ನೇ ದೃಷ್ಟಿಸಿ ಧ್ಯಾನಮಾಡುವುದರಿಂದ ಮನಸ್ಸಿಗೆ ಏಕಾಗ್ರತೆ ನೆಮ್ಮದಿ ಸಿಗುತ್ತದೆ. ಲಿಂಗವು ಕಪ್ಪು ಇರುವುದರಿಂದ ಆಕರ್ಷಿಸುವ ಶಕ್ತಿ ಇರುತ್ತದೆ. ಸೂರ್ಯನಿಂದ ಉತ್ಪತ್ತಿಯಾಗುವ ಪ್ರಾಣ ಶಕ್ತಿಯನ್ನು ಅದು ಹೀರಿಕೊಂಡು ನಾವು ಪೂಜೆ ಮಾಡುವ ಸಮಯದಲ್ಲಿ ಅಂಗೈಯಲ್ಲಿ ಇಟ್ಟುಕೊಂಡಾಗ ಅಂಗೈ ಮಧ್ಯದಲ್ಲಿ ಯಾವಾಗಲೂ ಬಿಸಿ ಇರುತ್ತದೆ. ಲಿಂಗವೂ ಬಿಸಿಯಾಗಿ ತಾನು ಹೀರಿಕೊಂಡ ಪ್ರಾಣಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ನಾವು ಲಿಂಗವನ್ನೇ ದೃಷ್ಟಿಸುವಾಗ ಕಣ್ಣು ದೃಷ್ಟಿಯ ಮುಖಾಂತರ ನಮ್ಮ ಮೆದುಳನ್ನು ಪ್ರಾಣ ಶಕ್ತಿಯು ಪ್ರವೇಶಿಸಿಸುತ್ತದೆ. ಇದರಿಂದ ನಾವು ಯಾವಾಗಲೂ ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ. ಇರದರಿಂದ ದ್ಯಾನಾಸಕ್ತರಾಗಿ ಪರಮಾತ್ಮನ ಸಾಕ್ಷಾತ್ಕಾರವಾಗಿ ಜೀವನ್ಮುಕ್ತಿ ಪ್ರಾಪ್ತಿಯಾಗುತ್ತದೆ. 
    ಈ ಕಂತೆಲಿಂಗುವನ್ನು ಅನೇಕ ಗಿಡಮೂಲಿಕೆಗಳಿಂದ ತಯಾರಿಸುತ್ತಾರೆ. ಈ ಲಿಂಗುವಿನ ಮೇಲೆ ಪೂಜೆಯ ನಂತರ ಉದಕವನ್ನು (ಜಲ/ಶುದ್ಧನೀರು) ಹಾಕಿ ನಾವು ಸೇವಿಸುವುದರಿಂದ ಗಿಡಮೂಲಿಕೆಯಿಂದ ಹೊರಹೊಮ್ಮುವ ರೋಗನಿರೋಧಕ ಶಕ್ತಿ ನಮ್ಮ ದೇಹದೊಳಗೆ  ಪ್ರವೇಶಿಸಿ ಅನೇಕ ಕಾಯಿಲೆಗಳಿಂದ ಗುಣಮುಖರಾಗುತ್ತಾರೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದುದರಿಂದ ನಾವು ಆಧ್ಯಾತ್ಮಿಕ ಸಾಧನೆ ಪಡೆಯುವುದರ ಜೊತೆಗೆ ದೈಹಿಕವಾಗಿಯೂ ಮಾನಸಿಕವಾಗಿಯೂ ಆರೋಗ್ಯದಿಂದ ಇರಲು ಲಿಂಗಧಾರಣೆ ಅತಿಮುಖ್ಯವಾಗಿದೆ.
ಭಸ್ಮ, ರುದ್ರಾಕ್ಷಿ ಧಾರಣೆಗೆ ಯಾವುದೇ ಜಾತಿ, ಮತ ಪಂಥ ಬೇಧವಿಲ್ಲ, ಎಲ್ಲರೂ ಧಾರಣೆ ಮಾಡಬಹುದು. 

ವೇ|| ಶ್ರೀ || ಚನ್ನೇಶ ಶಾಸ್ತ್ರಿಗಳು ಉ ಮಠದ ಹಿರೇಕೆರೂರ (ಹೊಸಹಳ್ಳಿ)