ಶರೀರದಲ್ಲಿ ಮುಖದ ಕೆಲಸದಂತೆ ಸಮಾಜದಲ್ಲಿ ಕೆಲಸ ಮಾಡುವವರು ಯಾರು? ಬಾಹುಗಳಂತೆ ಕೆಲಸ ಮಾಡುವವರು ಯಾರು? ತೊಡೆಗಳಂತೆ ಕೆಲಸಮಾಡುವವರು ಯಾರು?[ಅಥರ್ವ ವೇದದಲ್ಲಿ ಮಧ್ಯೋ ತದಸ್ಯ ಯದ್ ವೈಶ್ಯೋ , ಎಂದು ಹೇಳಿದೆ, ಅಂದರೆಶರೀರದ ಮಧ್ಯಭಾಗದಂತೆ ಕೆಲಸ ಮಾಡುವವರು ವೈಶ್ಯರು] ಶರೀರದಲ್ಲಿ ಕಾಲುಗಳು ಕೆಲಸಮಾಡುವಂತೆ ಸಮಾಜದಲ್ಲಿಕೆಲಸವನ್ನು ಮಾಡುವವರು ಯಾರು?- ಇದು ಪ್ರಶ್ನೆ. ಮುಖದಂತೆ, ಕಾಲುಗಳಂತೆ ಕೆಲಸ ಮಾಡುವವರು ಯಾರು? ಎಂಬುದು ಪ್ರಶ್ನೆಹೊರತು, ಮುಖದಿಂದ ಯಾರು ಜನಿಸಿದರು? ಪಾದದಿಂದ ಯಾರು ಜನಿಸಿದರು? ಎಂಬ ವ್ಯಾಖ್ಯೆಯೇ ತಪ್ಪು.ಇದನ್ನು ನಾವುರಿಯಾಗಿ ತಿಳಿದುಕೊಳ್ಳಬೇಕು. ಇಲ್ಲಿ ಸ್ವಲ್ಪ ವ್ಯಾಕರಣವನ್ನು ಗಮನಿಸಬೇಕು. ಅದೇನೆಂದರೆ || ಪದ್ಭ್ಯಾಮ್ ಶೂದ್ರೋ ಅಜಾಯತ|| ಇಲ್ಲಿ ಗಮನಿಸಬೇಕಾದುದೇನೆಂದರೆ ಪದ್ಭ್ಯಾಮ್ ಎನ್ನುವ ಪದವು ಚತುರ್ಥಿ ವಿಭಕ್ತಿಯಲ್ಲಿ ಇದಕ್ಕೋಸ್ಕರ ಎಂದಾಗುತ್ತದೆ.ಅಂದರೆಪಾದಗಳು ಮಾಡುವ ಕೆಲಸಕ್ಕೋಸ್ಕರ ಎಂದಾಗುತ್ತದೆ. ಪಂಚಮಿ ವಿಭಕ್ತಿಯಲ್ಲಿ ಇದರಿಂದ ಎಂದಾಗುತ್ತದೆ, [ ಅಂದರೆ ಪಾದಗಳಿಂದ] ಎಂದಾಗುತ್ತದೆ. ಪ್ರಶ್ನೆ ಇರುವುದು ಯಾವ ಕೆಲಸಕ್ಕಾಗಿ? ಎಂದಾದ್ದರಿಂದ ಇಲ್ಲಿ ಚತುರ್ಥಿ ವಿಭಕ್ತಿಯನ್ನೇ ನಾವುತೆಗೆದುಕೊಳ್ಳಬೇಕು.ಕಾರಣ ಹಿಂದಿನ ಪ್ರಶ್ನೆಗೆ ಈ ಮಂತ್ರ ಉತ್ತರವಾಗಬೇಕಾದರೆ ಪಾದಗಳಿಗೋಸ್ಕರ ವೆಂದು ಅರ್ಥೈಸಬೇಕೇ ಹೊರತು ಪಾದಗಳಿಂದ ಶೂದ್ರ ಹುಟ್ಟಿದ ಎಂಬುದು ತಪ್ಪು. ಹಾಗೆಯೇ ಮುಖದಿಂದ ಬ್ರಾಹ್ಮಣನಾಗಲೀ,ಬಾಹುಗಳಿಂದಕ್ಷತ್ರಿಯನಾಗಲೀ, ತೊಡೆಗಳಿಂದ ವೈಶ್ಯನಾಗಲೀ ಜನಿಸಲಿಲ್ಲ. ಎಲ್ಲರ ಜನವಾಗಿರುವುದು ತಾಯಿಯ ಗರ್ಭದಿಂದಲೇ. ಸಮಾಜದನಾಲ್ಕು ಕೆಲಸಗಳನ್ನು ಈ ಮಂತ್ರದಲ್ಲಿ ಹೇಳಿದ್ದಾರೆ. ಮುಖದಲ್ಲಿ ಯಾವ ಕೆಲಸ ನಡೆಯುತ್ತದೆ? ಮುಖದಲ್ಲಿ ಗ್ರಹಿಸುವಅಂಗಾಂಗಗಳಿವೆ. ಕಣ್ಣು, ಮೂಗು, ಕಿವಿ, ನಾಲಿಗೆ ಮತ್ತು ಮಿದುಳುಗಳಿವೆ.ಇವೆಲ್ಲವೂ ಹೊರಜಗತ್ತಿನಿಂದ ವಿಷಯಗಳನ್ನು ಸಂಗ್ರಹಿಸುವಇಂದ್ರಿಯಗಳು.ಅಲ್ಲದೆ ಅವುಗಳನ್ನು ವಿಮರ್ಶೆಮಾಡುವ ಹಾಗೂ ನಿರ್ಣಯ ಕೊಡುವ ಮಿದುಳೂ ಕೂಡ ಮುಖದ ಭಾಗದಲ್ಲಿಯೇ ಇದೆ. ಆ ನಿರ್ಣಯಗಳನ್ನು ಉಚ್ಛರಿಸುವ ನಾಲಿಗೆಯೂ ಇಲ್ಲಿಯೇ ಇದೆ. ಆ ನಿರ್ಣಯಗಳನ್ನು ಶರೀರದ ಎಲ್ಲಾ ಅಂಗಾಂಗಗಳಿಗೂ ಕಳಿಸುವ ವ್ಯವಸ್ಥೆಯೂ ಇಲ್ಲೇ ಇದೆ. ಅಂದರೆ ಈ ಶಿರೋ ಭಾಗದಲ್ಲಿರುವ ಅನ್ಯಾನ್ಯ ಅಂಗಾಂಗಗಳು ಮಾಡುವ ಕೆಲಸಗಳನ್ನು ಸಮಾಜದಲ್ಲಿ ಯಾರು ಮಾಡುತ್ತಾರೋ ಅವರನ್ನು ಬ್ರಾಹ್ಮಣ ಎಂದು ಕರೆಯಲಾಗಿದೆ. ಅಂದರೆ ಇದು ಜಾತಿಯಲ್ಲ. ಇದು ಜನ್ಮದಿಂದಬರುವಂತಹದ್ದಲ್ಲ. ಶರೀರದ ಶಿರೋ ಭಾಗವು ನಿರ್ವಹಿಸುವ ಕೆಲಸಗಳನ್ನು ಸಮಾಜದಲ್ಲಿ ಯಾರ್ಯಾರು ಮಾಡುತ್ತಾರೆ, ಅವರೆಲ್ಲಾಬ್ರಾಹ್ಮಣರೇ ಹೌದು.ಶರೀರದ ರಕ್ಷಣೆ ಮಾಡುವ ಅಂಗ ಯಾವುದು? ಒಂದು ವೇಳೆ ಮುಗ್ಗರಿಸಿ ಬೀಳುವ ಸ್ಥಿತಿ ಬಂದರೆ ಮೊದಲುಕೈಯ್ಯನ್ನು ನೆಲಕ್ಕೆ ಕೊಡುತ್ತೀವಲ್ಲವೇ? ತಲೆಯಮೇಲೆ ಏನಾದರೊಂದು ವಸ್ತು ಅಕಸ್ಮಾತ್ ಬಿತ್ತೆಂದರೆ ತಲೆಯನ್ನು ಮೊದಲು ರಕ್ಷಿಸಲು ಧಾವಿಸುವುದು ಕೈ ಅಲ್ಲವೇ? ಹಾಗೆಯೇ ಸಮಾಜದ ಮೇಲಿನ ಆಘಾತಗಳು, ಅನ್ಯಾಯ, ಅಧರ್ಮ, ಅತ್ಯಾಚಾರಗಳಿಂದ ಸಮಾಜವನ್ನು ರಕ್ಷಿಸುವವನು ಕ್ಷತ್ರಿಯ. ಶರೀರದಲ್ಲಿ ಮಧ್ಯಭಾಗದಲ್ಲಿರುವುದು ಶ್ವಾಸಕೋಶ, ಹೃದಯ ಮತ್ತು ಜಠರ ಹಾಗೂತೊಡೆಗಳು.ಶ್ವಾಸಕೋಶವು ತಾನು ತೆಗೆದುಕೊಂಡ ಗಾಳಿಯಿಂದ ಆಮ್ಲಜನಕವನ್ನು ಶರೀರದ ಎಲ್ಲಾ ಭಾಗಗಳಿಗೂ ಹಂಚಬೇಕು.ಹೃದಯವು ರಕ್ತವನ್ನು ಶರೀರದ ಕಣಕಣಗಳಿಗೂ ಹಂಚಬೇಕು. ಹೊಟ್ಟೆ ತನ್ನಲ್ಲಿರುವ ಆಹಾರವನ್ನು ಶರೀರರದ ಎಲ್ಲಾಭಾಗಗಳಿಗೂ ಹಂಚಬೇಕು. ಹೀಗೆ ತಯಾರಿ ಮತ್ತು ಹಂಚುವ ಕೆಲಸವನ್ನು ಮಾಡುವ ಶರೀರದ ಮಧ್ಯಭಾಗವೇನಿದೆ ಅವುಗಳ , ಹಾಗೂ ಶರೀರಕ್ಕೆ ಆಧಾರವನ್ನು ಕೊಡುವ ತೊಡೆಯ ಕಾರ್ಯವನ್ನು ಸಮಾಜದಲ್ಲಿ ಮಾಡುವವನು ವೈಶ್ಯ. ಪಾದವಾದರೋ ಶರೀರದ ಚಲನೆಗೆ ಕಾರಣವಾಗಿದೆ. ಅದಿಲ್ಲದಿದ್ದರೆ ಮನುಷ್ಯನನ್ನು ಹೆಳವನೆನ್ನುತ್ತಾರೆ. ಮನುಷ್ಯನ ಪ್ರಗತಿ ಇರುವುದೇ ಅವನ ಚಲನೆಯ ಶಕ್ತಿಯಿಂದ. ಹೀಗೆ ಸಮಾಜದ ಪ್ರಗತಿಗೆ ಯಾರು ಕಾರಣರೋ ಅವರು ಶೂದ್ರ.ಶರೀರಕ್ಕೆ ತಲೆ ಮಾತ್ರ ಇದ್ದರೆ ಸಾಕೇ? ಕಾಲೂ ಬೇಕಲ್ಲವೇ? ಶರೀರಕ್ಕೆ ತಲೆಯು ಎಷ್ಟು ಮುಖ್ಯವೋ ಕಾಲೂ ಅಷ್ಟೇ ಮುಖ್ಯ.ಕಾಲೆಷ್ಟು ಮುಖ್ಯವೋ ಹೊಟ್ಟೆಯೂ ಅಷ್ಟೇಮುಖ್ಯ, ಕೈಗಳೂ ಅಷ್ಟೇ ಮುಖ್ಯ. ಶರೀರಕ್ಕೆ ಎಲ್ಲಾ ಅಂಗಗಳೂ ಮುಖ್ಯವೇ.ಶರೀರದಲ್ಲಿ ಎಲ್ಲಾ ಅಂಗಗಳೂ ಒಂದಕ್ಕೊಂದುಹೊಂದಿಕೊಂಡು ಕೆಲಸವನ್ನು ಮಾಡಿದರೆ ಮಾತ್ರ ಶರೀರರದ ಕೆಲಸಗಳು ಸುಗಮವಾಗುತ್ತವೆ. ಹಾಗೆಯೇ ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಲ್ಲರೂ ಪರಸ್ಪರ ಹೊಂದಿಕೊಂಡು ತಮ್ಮತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಮಾಡಿದಾಗ ಮಾತ್ರ ಈ ಸಮಾಜರಥವು ಸುಗಮವಾಗಿ ಚಲಿಸುತ್ತದೆ. ಇಲ್ಲಿ ಯಾರೂ ಹೆಚ್ಚೂ ಇಲ್ಲ. ಯಾರೂ ಕಡಿಮೆಯೂ ಇಲ್ಲ. ಇದು ವೇದದಲ್ಲಿನ ಮಾತು. ಇದಕ್ಕೆ ಪೂರಕವಾಗಿ ವೇದದಲ್ಲಿ ಇನ್ನೊಂದು ಮಂತ್ರವು ಇದೆ. || ಅಜ್ಯೇಷ್ಠಾ ಸೋ ಅಕನಿಷ್ಠಾಸ: ಏತೇ ಸಂಭ್ರಾತರೋ ವಾವೃಧು: ಸೌಭಗಾಯ||[ಋಕ್.೫.೬೦.೫] ಈ ಮಂತ್ರದ ಅರ್ಥ ವೇನೆಂದರೆ ಹೇ ಮಾನವರೇ, ನಿಮ್ಮಲ್ಲಿ ಯಾರೂ ಶ್ರೇಷ್ಠರಲ್ಲ-ಯಾರೂಕನಿಷ್ಠರೂ ಅಲ್ಲ. ನೀವೆಲ್ಲರೂ ಪರಸ್ಪರ ಸೋದರರು.ಎಲ್ಲರೂ ಸೌಭಾಗ್ಯಕ್ಕಾಗಿ ಒಂದುಗೂಡಿ ನಡೆಯಬೇಕು. ಅಂದರೆ ಬ್ರಾಹ್ಮಣನಿಗೆಯಾವ ಸ್ಥಾನವೋ ಶೂದ್ರನಿಗೂ ಅದೇ ಸ್ಥಾನ. ಉಚ್ಛ-ನೀಚ ಭೇದ ಎಣಿಸುವವರು ವೇದವನ್ನು ಸರಿಯಾಗಿ ಓದಬೇಕು. ವೇದದಲ್ಲಿ ಇದು ಸ್ಪಷ್ಟವಾಗಿದೆ.
ಇವತ್ತು ರೂಢಿಯಲ್ಲಿ ಬ್ರಾಹ್ಮಣ ಎಂದರೆ ಅರ್ಥ ಏನು? ಅದು ಒಂದು ಜಾತಿ.ನಾವೆಲ್ಲಾ ಒಪ್ಪಿಕೊಂಡಿರುವಂತೆ ಬ್ರಾಹ್ಮಣ ಎಂಬುದು ಹುಟ್ಟಿನಿಂದ ಬರುತ್ತದೆ,ತಂದೆತಾಯಿ ಬ್ರಾಹ್ಮಣರಾಗಿದ್ದರೆ ಜನಿಸುವ ಮಗುವೂ ಬ್ರಾಹ್ಮಣ ಎಂಬುದು ಈಗ ನಡೆದುಬಂದಿರುವ ವಿಚಾರ.ಇದು ಬ್ರಾಹ್ಮಣ ಎಂಬ ಪದಕ್ಕಷ್ಟೇ ಅಲ್ಲ, ಎಲ್ಲಾ ಜಾತಿಯ ಕಥೆಯೂ ಇದೇ ಆಗಿದೆ. ವೈಶ್ಯ ನೆಂದರೆ ವೈಶ್ಯ ತಂದೆತಾಯಿಗೆ ಜನಿಸಿರುವವ ಎಂದೇ ಅರ್ಥ ಮಾಡುತ್ತೇವೆ.ಇದು ಎಲ್ಲಾ ಜಾತಿಗೂ ಅನ್ವಯ. ಅಥವಾ ಮತಗಳ ಹೆಸರಲ್ಲಿ ನೋಡಬೇಕೆಂದರೆ ಹಿಂದುಗಳ ಮನೆಯಲ್ಲಿ ಹುಟ್ಟಿದ ಮಗು ಹಿಂದು. ಕ್ರಿಶ್ಚಿಯನ್ ಮನೆಯಲ್ಲಿ ಹುಟ್ಟಿದ ಮಗು ಕ್ರೈಸ್ತ್ , ಮುಸಲ್ಮಾನರ ಮನೆಯಲ್ಲಿ ಹುಟ್ಟಿದವ ಮುಸ್ಲಿಮ್,ಲಿಂಗಾಯಿಯತರ ಮನೆಯಲ್ಲಿ ಹುಟ್ಟಿದವ ಲಿಂಗಾಯಿತ. ಒಟ್ಟಿನಲ್ಲಿ ಜಾತಿಯಾಗಲೀ, ಮತವಾಗಲೀ ಹುಟ್ಟಿನಿಂದ ಬರುತ್ತದೆಂಬ ವಿಚಾರ ನಮ್ಮ ತಲೆಯಲ್ಲಿ ಸೇರಿಕೊಂಡಿದೆ. ಆದರೆ ವೇದವು ಹೇಳುವ ವಿಚಾರವನ್ನು ನಾವು ಪ್ರಾಮಾಣಿಕವಾಗಿ ಗಮನಿಸುವುದಾದರೆ ಈ ರೀತಿಯ ಹುಟ್ಟಿನಿಂದ ಬರುವ ಜಾತಿಯನ್ನು ವೇದವು ಒಪ್ಪುವುದಿಲ್ಲ.ಭಗವಂತನು ಈ ರೀತಿಯ ವಿಭಾಗವನ್ನು ಮಾಡಿರುವುದಿಲ್ಲ. ಇಂದು ಇರುವ ಎಲ್ಲಾ ಈ ಜಾತಿಯ ವ್ಯವಸ್ಥೆಯನ್ನು ಮನುಷ್ಯನು ಭಗವಂತನಿಗೆ ವಿರುದ್ಧವಾಗಿ ಮಾಡಿಕೊಂಡಿದ್ದಾನೆಯೇ ಹೊರತು ಭಗವಂತನು ಮಾಡಿದ್ದಲ್ಲ. ಮನುಷ್ಯನು ಮಾಡಬಾರದೆಂದೇನೂ ಅಲ್ಲ, ಆದರೆ ಮನುಷ್ಯನು ಮಾಡಿದ್ದು ಭಗವಂತನ ಆದೇಶಕ್ಕೆ ಅನುಗುಣವಾಗಿರಬೇಕು.ಈ ಜಾತಿ ವ್ಯವಸ್ಥೆಯು ಭಗವಂತನ ಆದೇಶಕ್ಕೆ ವಿರುದ್ಧವಾಗಿದೆ.ಅಲ್ಲದೆ ವೇದದಲ್ಲಿರುವ ವರ್ಣಾಶ್ರಮ ವ್ಯವಸ್ಥೆಗೆ ತದ್ವಿರುದ್ಧವಾಗಿದೆ.ವೇದದಲ್ಲಿ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ,ಶೂದ್ರ ಎಂಬ ಪದಗಳು ಪ್ರಯೋಗದಲ್ಲಿವೆ. ಆದರೆ ಅವುಗಳನ್ನು ಎಲ್ಲೂ ಈಗಿರುವ ಜಾತಿಯ ಅರ್ಥದಲ್ಲಿ ಬಳಸಿಲ್ಲ.ಒಬ್ಬ ವ್ಯಾಪಾರ ಮಾಡುವ ವ್ಯಕ್ತಿ ಇದ್ದಾನೆಂದರೆ ವೇದಗಳ ಪ್ರಕಾರ ಅವನು ವೈಶ್ಯ.ಅವನು ಯಾವ ಮನೆಯಲ್ಲಿ ಹುಟ್ಟಿದ್ದಾನೆ? ಅವರಪ್ಪ ಯಾರು? ಅವರಮ್ಮ ಯಾರು? ಎಂಬುದು ನಗಣ್ಯ.ವ್ಯಾಪಾರ ಮಾಡುವ ವ್ಯಕ್ತಿಯೊಬ್ಬನ ಹೆಸರು ಡಿಸೋಜ ಎಂದು ಭಾವಿಸೋಣ. ಅವನನ್ನು ಇಂದು ನಾವು ಏನೆಂದು ಕರೆಯುತ್ತೇವೆ? ಅವನನ್ನು ಕ್ರಿಶ್ಚಿಯನ್ ಎಂದು ಕರೆಯುತ್ತೇವೆ. ಆದರೆ ವೇದದ ಪ್ರಕಾರ ಅವನು ವೈಶ್ಯ. ಇಬ್ರಾಹಿಮ್ ಎಂಬುವನೊಬ್ಬ ಟೀಚರ್ ಕೆಲಸದಲ್ಲಿದ್ದರೆ ಅವನನ್ನು ಮುಸ್ಲಿಮ್ ಎಂದೇ ನಾವು ಕರೆಯುತ್ತೇವೆ. ವೇದದ ಪ್ರಕಾರ ಜ್ಞಾನವನ್ನು ಪ್ರಚಾರ ಮಾಡುತ್ತಿರುವ ಇಬ್ರಾಹಿಮ್ ಕೂಡ ಬ್ರಾಹ್ಮಣನೇ.ಜಾತಿ ಎಂಬುದು ಹುಟ್ಟಿನಿಂದ ಬರುವಂತಹದ್ದಲ್ಲ. ಇದನ್ನೆಲ್ಲಾ ಮನುಷ್ಯನು ವೇದದ ಆದೇಶಕ್ಕೆ ವಿರುದ್ಧವಾಗಿ ಮಾಡಿಕೊಂಡಿರುವ ವ್ಯವಸ್ಥೆ. ಇದು ತಪ್ಪು.
ಇವತ್ತಿನ ನಮ್ಮ ಕಲ್ಪನೆ ಹೇಗಿದೆ, ಎಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ವ್ಯವಸ್ಥೆಯಲ್ಲಿ ಬ್ರಾಹ್ಮಣ ಶ್ರೇಷ್ಠ, ಶೂದ್ರ ಕನಿಷ್ಠ.ಇದು ಇವತ್ತಿನ ವ್ಯವಸ್ಥೆಯಲ್ಲ, ಅನೇಕ ಶತಮಾನಗಳಿಂದ ಶೂದ್ರರನ್ನು ಕೀಳಾಗಿ ಕಾಣುತ್ತಾ ಬರಲಾಗಿರುವ ಧ್ಯೋತಕ..ಮೇಲ್ಜಾತಿ ಎಂಬುವರಿಂದ ಕೀಳ್ಜಾತಿ ಎಂಬುವರ ಮೇಲೆ ದೌರ್ಜನ್ಯಗಳು ನಡೆದಿರುವ ಹಲವು ಉಧಾಹರಣೆಗಳು ಚರಿತ್ರೆಯಲ್ಲಿದೆ.ಇವತ್ತಿಗೂ ಕೆಳಜಾತಿಯವರು ಮೇಲ್ಜಾತಿಯವರ ಸೇವೆ ಮಾಡುವುದಕ್ಕಾಗಿಯೇ ಇರುವುದು ಎಂಬ ಭಾವನೆ ಹಲವರಲ್ಲಿದ್ದು ಸಮಾಜದಲ್ಲಿನ ಸಾಮರಸ್ಯ ಕೆಡಲು ಮುಖ್ಯ ಕಾರಣವಾಗಿದೆ.ಈ ಜಾತಿ ವ್ಯವಸ್ಥೆಯು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆಯೇ ಹೊರತು ನೆಮ್ಮದಿಗೆ ಕಾರಣವಾಗಿಲ್ಲ.ಆದ್ದರಿಂದಲೇ ಇದು ಭಗವಂತನು ಮಾಡಿರುವ ವ್ಯವಸ್ಥೆಯಲ್ಲ. ಭಗವಂತನು ಸಮಾಜದಲ್ಲಿ ನೆಮ್ಮದಿ ಹಾಳುಮಾಡುವ ವ್ಯವಸ್ಥೆ ಮಾಡಿರಲು ಸಾಧ್ಯವೇ ಇಲ್ಲ.ಭಗವಂತನ ಮಕ್ಕಳಾದ ನಾವೆಲ್ಲರೂ ಸುಖ ಶಾಂತಿ, ನೆಮ್ಮದಿಯಿಂದ ಬದುಕ ಬೇಕೆಂಬುದೇ ಭಗವಂತನ ಇಚ್ಛೆ.ಇದನ್ನು ನಾವು ಸರಿಯಾಗಿ ಅರ್ಥಮಾಡಿಕೊಂಡಾಗ ಈಗ ಸಮಾಜದ ನೆಮ್ಮದಿ ಹಾಳುಮಾಡಲು ಯಾವಯಾವ ವ್ಯವಸ್ಥೆಗಳಿವೆ, ಅವೆಲ್ಲಾ ಭಗವಂತನು ಮಾಡಿದ್ದಲ್ಲ, ಅದನ್ನು ವೇದವನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅಜ್ಞಾನಿಗಳು ಮಾಡಿದ್ದು, ಎಂದು ನಾವು ತಿಳಿದುಕೊಳ್ಳಬಹುದು , ಅಷ್ಟೇ ಅಲ್ಲ, ಸಮಾಜದ ನೆಮ್ಮದಿಯನ್ನು ಹಾಳುಮಾಡುವಂತಹ ವ್ಯವಸ್ಥೆಯನ್ನು ಪಾಲಿಸ ಬೇಕಾಗಿಲ್ಲ.
ವೇದವು ನಿಜವಾಗಿ ಏನು ಹೇಳುತ್ತದೆಂಬುದನ್ನು ಈಗ ನೋಡೋಣ.ಶೂದ್ರರನ್ನು ಕೀಳು ಅಥವಾ ಬ್ರಾಹ್ಮಣರನ್ನು ಮೇಲು ಎಂದು ಕರೆಯಲು ಹಾಗೆ ಭಾವಿಸಿರುವವರು ಕೊಡುವ ಕಾರಣವೇನೆಂದರೆ, ವೇದದಲ್ಲಿ ಬರುವ ಒಂದು ಮಂತ್ರ.ಪುರುಷಸೂಕ್ತದ ಈ ಮಂತ್ರವನ್ನು ತಪ್ಪಾಗಿ ಅರ್ಥೈಸಿರುವುದೇ ಇವೆಲ್ಲಾ ಆಭಾಸಗಳಿಗೆ ಮೂಲ ಕಾರಣ. ಅದನ್ನೀಗ ನೋಡೋಣ.
||ಬ್ರಾಹ್ಮಣೋಸ್ಯ ಮುಖಮಾಸೀತ್| ಬಾಹೂ ರಾಜನ್ಯ ಕೃತ: | ಊರೂತದಸ್ಯ ಯದ್ವೈಶ್ಯೋ|ಪದ್ಭ್ಯಾಮ್ ಶೂದ್ರೋ ಅಜಾಯತ|| ಈ ಮಂತ್ರವು ನಾಲ್ಕೂ ವೇದಗಳಲ್ಲಿ ಬರುತ್ತದೆ. ಬ್ರಾಹ್ಮಣರು ಭಗವಂತನ ಮುಖದಿಂದ, ಬಾಹುಗಳಿಂದ ಕ್ಷತ್ರಿಯರು, ತೊಡೆಯಿಂದ ವೈಶ್ಯರು ಹಾಗೂ ಕಾಲುಳಿಂದ ಶೂದ್ರರೂ ಹುಟ್ಟಿದರು, ಎಂದು ತಪ್ಪಾಗಿ ಅರ್ಥೈಸಲಾಗಿದೆ. ಇಲ್ಲಿಂದ ಸಮಾಜದ ನೆಮ್ಮದಿ ಕೆಡಿಸುವ ಕ್ರಿಯೆ ಶುರುವಾಗಿದೆ.ಮುಖದಿಂದ ಹುಟ್ಟಿದ ಬ್ರಾಹ್ಮಣ ಮೇಲು, ಕಾಲುಗಳಿಂದ ಹುಟ್ಟಿದ ಶೂದ್ರ ಕೀಳೆಂಬ ಭಾವನೆಯನ್ನು ಗಟ್ಟಿಯಾಗಿ ಬಿತ್ತಲಾಗಿದೆ.ದುರ್ದೈವವೆಂದರೆ ಹಲವಾರು ಸಂಸ್ಕೃತ ಪಂಡಿತರೆನೆಸಿಕೊಳ್ಳುವರೂ ಸಹ ಈ ಮಂತ್ರಗಳಿಗೆ ಇದೇ ಅರ್ಥವನ್ನು ಹೇಳುತ್ತಾ ಸಮಾಜದ ನೆಮ್ಮದಿ ಹಾಳುಮಾಡುವ ಕೆಲಸವನ್ನು ಮಾಡಿದ್ದಾರೆ.ಇದು ಒಂದು ದೊಡ್ಡ ಗೊಂದಲ. ಈ ಗೊಂದಲವನ್ನು ಮೊದಲು ಬಿಡಿಸಿಕೊಳ್ಳುವ ಪ್ರಯತ್ನ ಮಾಡೋಣ.ಬ್ರಾಹ್ಮಣೋಸ್ಯ ಮುಖಮಾಸೀತ್, ಎಂಬ ಈ ಮಂತ್ರಕ್ಕೆ ಅರ್ಥವನ್ನು ಹುಡುಕುವ ಮೊದಲು ಅದರ ಹಿಂದಿನ ಮಂತ್ರವನ್ನು ನೋಡಬೇಕು. ಹಿಂದಿನ ಮಂತ್ರವು ಏನು ಹೇಳುತ್ತದೆಂದರೆ ಈ ಸಮಾಜ ಪುರುಷನ ಮುಖ ಯಾವುದು? ಬಾಹುಗಳು ಯಾವುವು?ತೊಡೆ ಹಾಗೂ ಕಾಲುಗಳು ಯಾವುವು? ಪ್ರಶ್ನೆ ಹೀಗಿರುವಾಗ ಉತ್ತರ ಹೇಗಿರ ಬೇಕು? ಮುಖ ಯಾವುದೆಂದರೆ ಮುಖ ಇದು ಎಂದು ಹೇಳಬೇಕಲ್ಲವೇ? ಅಂದರೆ ಬ್ರಾಹ್ಮಣನು ಸಮಾಜ ಪುರುಷನ ಮುಖ, ಕ್ಷತ್ರಿಯರು ಬಾಹುಗಳು, ವೈಶ್ಯರು ತೊಡೆಗಳು ಮತ್ತು ಶೂದ್ರರು ಪಾದಗಳು, ಎಂದು ತಾನೇ ಉತ್ತರಿಸ ಬೇಕಾದ್ದು.ಆದರೆ ಹೀಗೆ ಅರ್ಥ ಮಾಡಿದರೆ ಕೇಳಿದ ಪ್ರಶ್ನೆಯೇ ಒಂದು ಉತ್ತರವೇ ಬೇರೆ ಆಗುತ್ತದಲ್ಲವೇ?.....
ಶ್ರೀ ಸುಧಾಕರಶರ್ಮರು- ಹರಿಹರಪುರ ಶ್ರೀಧರ್ ಸಂಪಾದಕ
No comments:
Post a Comment
If you have any doubts. please let me know...