September 16, 2021

ದೇಹವೇ ದೇಗುಲ.. ಅಷ್ಟಾಚಕ್ರಾ ನವದ್ವಾರಾ

ಅಷ್ಟಾಚಕ್ರಾ ನವದ್ವಾರಾ ದೇವಾನಾಂ ಪೂರಯೋಧ್ಯಾ|
ತಸ್ಯಾಂ ಹಿರಣ್ಯಃ ಕೋಶಃ ಸ್ವರ್ಗೋ ಜ್ಯೋತಿಷಾವೃತಃ ||

[ಅಥರ್ವ ೧೦.೨.೩೧]
ಅನ್ವಯ :
ಅಷ್ಟಾಚಕ್ರಾ ನವದ್ವಾರಾ = ಎಂಟು ಚಕ್ರಗಳು ಒಂಬತ್ತು ದ್ವಾರಗಳಿಂದ ಯುಕ್ತವಾದ
ದೇವಾನಾಂ ಅಯೋಧ್ಯಾ = ದೇವತೆಗಳಿಂದ ಜಯಿಸಲಾಗದ
ಪೂಃ = ಪುರ [ಪುರ ಒಂದಿದೆ.ಅದೇ ಶರೀರ]
ತಸ್ಯಾಂ ಹಿರಣ್ಯಃ ಕೋಶಃ = ಅದರಲ್ಲಿರುವ ಕೋಶವು ಹಿತಕರವೂ ರಮಣೀಯವಾದವೂ ಆದ [ಹೃದಯ]
ಸ್ವರ್ಗಃ = ಸುಖಮಯವಾದುದೂ
ಜ್ಯೋತಿಷಾ ಆವೃತಃ = ಪರಮಜ್ಯೋತಿಯಿಂದ ಆವೃತವಾಗಿದೆ.

ಅರ್ಥ :
ಎಂಟು ಚಕ್ರಗಳಿಂದ ನವದ್ವಾರಗಳಿಂದ ಯುಕ್ತವಾದ ಈ ದೇಹವೆಂಬ ನಗರಿಯನ್ನು ಜಯಿಸಲು ದಿವ್ಯಶಕ್ತಿಗಳಿಂದಲೂ ಸಾಧ್ಯವಿಲ್ಲ. ಈ ನಗರಿಯಲ್ಲಿ ಪರಮ ಚಿನ್ಮಯನಾದ ಆತ್ಮನು ದಿವ್ಯ ಜ್ಯೋತಿಯಿಂದ ಸಮಲಂಕೃತನಾಗಿ ವಾಸಿಸುತ್ತಾನೆ.
ಈಗೊಮ್ಮೆ ನಮ್ಮ ದೇಹದ ವ್ಯವಸ್ಥೆಯನ್ನು ಮನದಲ್ಲಿಯೇ ವೀಕ್ಷಿಸೋಣ.ಎಷ್ಟು ಅದ್ಭುತ! ಎಂಟು ಚಕ್ರಗಳು! ನವದ್ವಾರಗಳು!! ಇವುಗಳ ಬಗ್ಗೆ ನಾನಿಲ್ಲಿ ಚರ್ಚಿಸುವ ಪ್ರಯತ್ನವನ್ನು ಮಾಡುವುದಿಲ್ಲ.ಯೋಗಾಭ್ಯಾಸದಲ್ಲಿ ಇವೆಲ್ಲದರ ಸರಿಯಾದ ಪರಿಚಯವಾಗುತ್ತದೆ. ನಾವು ಕೇವಲ ಹೊರನೋಟದಿಂದಲೇ ಗಮನಿಸಿದರೂ ಅದೆಂತಹ ಅದ್ಭುತ ವ್ಯ್ವಸ್ಥೆಯಲ್ಲವೇ , ಈ ಶರೀರ!! ಆ ಭಗವಂತನ ವ್ಯವಸ್ಥೆಯ ಮುಂದೆ ಮನುಷ್ಯರು ಕಂಡು ಹಿಡಿದಿರುವ ಯಾವುದೇ ಯಂತ್ರವೂ ಸಾಟಿಯಿಲ್ಲ! ಅಲ್ಲವೇ?
ಸ್ವಾಮೀಜಿಯೊಬ್ಬರ ಮಾತು ನೆನಪಾಗುತ್ತದೆ ನಾನು ಕೋಟ್ಯಾಧಿಪತಿ, ಆದರೆ ನನ್ನ ಕಿಸೆಯಲ್ಲಿ ನೂರು ರೂಪಾಯಿ ಇಲ್ಲ!! ಆದರೆ ನನ್ನೆರಡು ಕೈಗಳು ಎರಡು ಕೋಟಿಗಿಂತ ಹೆಚ್ಚಿನ ಬೆಲೆಯವು! ನನ್ನೆರಡು ಕಾಲುಗಳು ಮತ್ತೆರಡು ಕೋಟಿ! ನನ್ನ ತಲೆಗೆ ಬೆಲೆಯನ್ನು ಕಟ್ಟುವುದಾದರೂ ಹೇಗೆ?
ಯೋಚಿಸಿ ನೋಡಿ ,ಕೈಗಳೇ ಇಲ್ಲದೆ ಹುಟ್ಟಿದ ಹೆಣ್ಣು ಮಗಳೊಬ್ಬಳು ಪಾದದಿಂದಲೇ ಚಿತ್ರ ಬಿಡಿಸುವುದನ್ನು ಕಂಡಿದ್ದೇವೆ. ಕಾಲುಗಳೇ ಇಲ್ಲದೆ ಹುಟ್ಟಿದ ವ್ಯಕ್ತಿಯೊಬ್ಬ ತನ್ನ ಕೈಗಳಿಂದಲೇ ನಡೆದು ಜೀವಿಸುತ್ತಾನೆ ! ಆದರೆ ನಮಗೆಲ್ಲವೂ ಇವೆಯಲ್ಲಾ! ಆದರೂ ನಾವು ಬಡವರು!! - ಈ ಯೋಚನೆಯೇ ನಮ್ಮ ದಾರಿದ್ರ್ಯವಲ್ಲವೇ? ಭಗವಂತನು ಕೊಟ್ಟಿರುವ ಈ ಅದ್ದ್ಭುತ ಶರೀರ ಪಡೆದ ನಾವು ಶ್ರೀಮಂತರಲ್ಲವೇ?
ಈ ಶ್ರೀಮಂತದೇಹವನ್ನು ಸುಂದರವಾಗಿ ಕಾಪಾಡಿಕೊಳ್ಳಬೇಕಾದವರು ನಾವೇ ಅಲ್ಲವೇ? ನಾವು ಈ ದೇಹವನ್ನು ದೇವಾಲಯದಂತ ಪವಿತ್ರಭಾವದಿಂದ ಕಂಡಿದ್ದೇವೆಯೇ? ಒಮ್ಮೊಮ್ಮೆ ನನಗೆ ಅನ್ನಿಸುತ್ತದೆ ಈ ದೇಹವನ್ನು ಲೊಡಾಸ್ ಗಾಡಿಯನ್ನಾಗಿ [ ಕೆಟ್ಟು ನಿಂತಿರುವ ವಾಹನ] ಮಾಡಿ ಅದರ ದುರಸ್ತಿಗಾಗಿ ಅದೆಷ್ಟು ವರ್ಕ್ ಶಾಪ್ ಗಳು! [ಆಸ್ಪತ್ರೆಗಳು! ] ನಮ್ಮ ಶರೀರದ ಬಗ್ಗೆ ಸ್ವಲ್ಪ ಚಿಂತನೆ ಮಾಡಬೇಕಲ್ಲವೇ? ಒಮ್ಮೊಮ್ಮೆ ಹೀಗೂ ಆಗುವುದುಂಟು. ನಮ್ಮ ಶರೀರಕ್ಕೆ ಲಾಲನೆ ಪೋಷಣೆ ಹೆಚ್ಚಾಗಿ ಆಗಲೂ ಯಂತ್ರ ಕೆಡುವ ಅವಕಾಶಗಳು! ನಮ್ಮ ಶರೀರಕ್ಕೆ ಗಮನ ಕೊಡುವುದೆಂದರೆ ಅದು ಭೋಗ ಭಾವದಿಂದಲ್ಲ. ನಮ್ಮ ಶರೀರವು ಸುಂದರ ದೇವಾಲಯದಂತಿರಬೇಕಾದರೆ ನಮ್ಮ ಪರಂಪರೆಯಂತೆ ನಮ್ಮ ನಿತ್ಯ ಜೀವನ ಶಿಸ್ತು ಬದ್ಧವಾಗಿ ಸಾಗಬೇಕು. ಕಾಲಕಾಲಕ್ಕೆ ಶರೀರಕ್ಕೆ ವ್ಯಾಯಾಮ, ನಿಯಮಿತವಾಗಿ ಧ್ಯಾನ,ಪ್ರಾಣಾಯಾಮ,ಕಾಲಕಾಲಕ್ಕೆ ಆಹಾರ-ವಿಹಾರ, ಸಚ್ಚಿಂತನೆ, ಸದ್ವ್ಯವಹಾರ, ಸನ್ನಡೆ, ಸತ್ಕರ್ಮಾಚರಣೆ, ಇನ್ನೊಬ್ಬರಿಗೆ ನೋವು ಕೊಡದ ಮಾತು ಎ॒ಲ್ಲವೂ ಗಣನೆಗೆ ಬರುತ್ತದೆ. ನಮ್ಮ ದೇಹವನ್ನು ದೇವಾಲವನ್ನಾಗಿ ಉಳಿಸಿಕೊಳ್ಳುವುದು ನಮ್ಮದೇ ಹೊಣೆ ಅಲ್ಲವೇ?
ಮೂಲ...ವೇದಸುಧೆ

No comments:

Post a Comment

If you have any doubts. please let me know...