"ಗುರು ಬ್ರಹ್ಮ ಗುರು ವಿಷ್ಣು:
ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ
ತಸ್ಮೈ ಶ್ರೀ ಗುರುವೇ ನಮಃ"
ನಾನು ಒಮ್ಮೆ ಚಾಲನಾ ಪರವಾನಗಿ ಪಡೆಯಲು ಹೋಗಿದ್ದೆ. ಅಲ್ಲಿದ್ದ ಅಧಿಕಾರಿ ಒಂದೆರಡು ಚಾಲನಾ ನಿಯಮಗಳ ಪ್ರಶ್ನೆಗಳನ್ನು ಕೇಳಿ ನಂತರ, "ಬ್ರಹ್ಮ ದೊಡ್ಡವನೋ, ಗುರು ದೊಡ್ಡವನೋ?" ಎಂದು ಕೇಳಿದರು. ಆಗ ನನಗೆ ನಿತ್ಯ ಶಾಲೆಯಲ್ಲಿ ಪ್ರಾರ್ಥನೆ ಮಾಡುತ್ತಿದ್ದ ಮೇಲಿನ ಶ್ಲೋಕ ನೆನಪಾಗಿ, "ಗುರು ದೊಡ್ಡವನು" ಎಂದೆನು. ಆಗ ಅಧಿಕಾರಿಯು "ಗುಡ್, ಪರೀಕ್ಷೆ ಪಾಸ್ ಆದೆ, ನಡಿ" ಎಂದು ಪರವಾನಗಿ ದಯಪಾಲಿಸಿದರು. ಹೇಗೂ ಸೀಲು ಒತ್ತಿ ಸಹಿ ಮಾಡಿ ಆಗಿದೆಯೆಲ್ಲ ಎಂದು, "ತಾವು ಕೇಳಿದ ಪ್ರಶ್ನೆ ಇಲ್ಲಿ ಅವಶ್ಯವೇ" ಎಂದು ಕೇಳಿದೆ. ಅದಕ್ಕೆ ಆ ಅಧಿಕಾರಿ, "ಇದು ಭಾರತದ ಪ್ರತಿಯೊಂದು ಮಜಲಿನಲ್ಲಿಯೂ ಕೇಳಬೇಕಾದ ಪ್ರಶ್ನೆ, ನಡಿ" ಎಂದರು.
ಭಾರತದ ಸನಾತನ ಸಂಸ್ಕೃತಿಯಲ್ಲಿ ಗುರುವಿಗೆ ದೇವರಿಗಿಂತ ಮಿಗಿಲಾದ ಸ್ಥಾನಮಾನವನ್ನು ಕೊಡಲಾಗಿದೆ. ಈ ಮಹತ್ವವನ್ನು ಹಿಂದೂ ಪ್ರಬೇಧದ ಎಲ್ಲಾ ಮತಧರ್ಮಗಳೂ ಪಾಲಿಸುತ್ತವೆ. ಪುರಂದರದಾಸರು, "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಪದ ಹಾಡಿದ್ದಾರೆ.
ಇನ್ನು ಇದೇ ರೀತಿ ವೀರಶೈವ ಲಿಂಗವಂತರಲ್ಲಿ ಹಿಂದೂ ಪ್ರಬೇಧದ ಇತರೆಲ್ಲಾ ಮತಪಂಥಗಳಿಗಿಂತ ಗುರುವಿಗೆ ಅತ್ಯಂತ ಹಿರಿಯ ಸ್ಥಾನವನ್ನು ಕೊಡಲಾಗಿದೆ.
ಶೂನ್ಯಪೀಠದ ಶೂನ್ಯಾಧ್ಯಕ್ಷ ಅಲ್ಲಮನು,
"ಶ್ರೀಗುರುವೆ ಎನಗೆ ಕಾಯವು, ಶ್ರೀಗುರುವೆ ಎನಗೆ ಪ್ರಾಣವು,
ಶ್ರೀಗುರುವೆ ಎನಗೆ ಇಹವು, ಶ್ರೀಗುರುವೆ ಎನಗೆ ಪರವು,
ಶ್ರೀಗುರುವೆ ಎನಗೆ ಗತಿಯು, ಶ್ರೀಗುರುವೆ ಎನಗೆ ಮತಿಯು,
ಶ್ರೀಗುರುಪಾದವೆ ಎನಗೆ ಘನತರ ಮುಕ್ತಿಗೆ ಕಾರಣವು.
ಗುಹೇಶ್ವರ ಗುಹೇಶ್ವರಾ, ನಿಮ್ಮಾಣೆ ಇದು ಸತ್ಯ." ಎಂದಿದ್ದಾನೆ.
ಷಟಸ್ಥಲ ಚಕ್ರವರ್ತಿ ಚೆನ್ನಬಸವಣ್ಣನು,
"ಪರುಷವಿದ್ದುದ ಕಂಡು ಪರಿಣಾಮಬಡುವರು,
ಇಷ್ಟಲಿಂಗ ಬಿದ್ದಿತ್ತೆಂದು ಕುತ್ತಿಕೊಂಡು ಸಾವರು.
ಅರಿದರಿದು ಗುರುಶಿಷ್ಯಸಂಬಂಧವು,
ಅರಿವುಳ್ಳವರಿಗಲ್ಲದೆ ಮತ್ತಾರಿಗೆಯೂ ಆಗದು.
ಕುರುಹು ಘನವೋ? ಲಿಂಗ ಘನವೋ? ಅರಿವುಳ್ಳವರು ಹೇಳಿರೆ.
ಮರಹು ಕವಿದಹುದೆಂದು ಕುರುಹ ತೋರಿದನಲ್ಲದೆ
ಅರಿದರಿವ ಮರೆದರೆ ಕೂಡಲಚೆನ್ನಸಂಗಯ್ಯಂಗೆ
ಅವನಂದೇ ದೂರ."
ಎಂದು ಲಿಂಗಕ್ಕಿಂತ ಗುರುವೇ ಪ್ರಮುಖ ಎಂದಿದ್ದಾನೆ.
ಭಕ್ತಿ ಭಂಡಾರಿ ಬಸವಣ್ಣನು,
"ನೋಡಿ ನೋಡಿ ಮಾಡುವ ನೇಮ ಸಲ್ಲವು, ಸಲ್ಲವು.
ತನುವುದ್ದೇಶ, ಮನವುದ್ದೇಶವಾಗಿ
ಮಾಡುವ ನೇಮ ಸಲ್ಲವು, ಸಲ್ಲವು.
ಗುರುಪಥವ ಮೀರಿ ಮಾಡುವ ನೇಮ ಸಲ್ಲವು, ಸಲ್ಲವು.
ಕೂಡಲಸಂಗಮದೇವಯ್ಯಾ
ಇವು ನಿಮ್ಮ ನಿಜದೊಳಗೆ ನಿಲ್ಲವು, ನಿಲ್ಲವು."
ಎಂದು ಗುರುಪಥಕ್ಕಿಂತ ಮಿಗಿಲಾದ ಯಾವ ಪಥವೂ ಸಲ್ಲದು ಎಂದಿದ್ದಾನೆ.
ಇನ್ನು ಆಗಮಗಳಲ್ಲಿ, "ಮಹಾಲಿಂಗವೇ ಗುರುವಿನ ಅನುಗ್ರಹದಿಂದ ಕರಸ್ಥಲಕ್ಕೆ ಬಂದು ಇಷ್ಟಲಿಂಗವಾಗಿದೆ, ಪ್ರಾಣದಲ್ಲಿ ಪ್ರಾಣಲಿಂಗವೆನಿಸಿದೆ, ಭಾವದಲ್ಲಿ ಭಾವಲಿಂಗವೆನಿಸಿದೆ. ಶ್ರೀಗುರುವು ಜೀವನಿಗೆ ದೀಕ್ಷೆ ನೀಡುವಾಗ ಅವನಲ್ಲಿ ಕಂಡುಬರುವ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಭೇದಗಳನ್ನು ವಿಶ್ಲೇಷಿಸಿ ಸ್ಥೂಲ, ಸೂಕ್ಷ್ಮ, ಕಾರಣ ಶರೀರಗಳನ್ನು ಕಲ್ಪಿಸಿ ಅವುಗಳಲ್ಲಿ ಕ್ರಮವಾಗಿ ಈ ಲಿಂಗಗಳನ್ನು ಸ್ಥಾಪಿಸುವನು. ಕಾರಣ ಇಷ್ಟಲಿಂಗದಲ್ಲಿ ದೃಷ್ಟಿಯೋಗ, ಪ್ರಾಣಲಿಂಗದಲ್ಲಿ ಮನೋಯೋಗ ಮತ್ತು ಭಾವಲಿಂಗದಲ್ಲಿ ಭಾವಯೋಗವನ್ನು ಏಕಕಾಲದಲ್ಲಿ ಸಾಧಿಸಿದ ಸಾಧಕರು ಮುಕ್ತರು. ಈ ಮೂರರ ಸಮನ್ವಯವೇ ಶಿವಯೋಗವೆಂಬುದು ಶೈವಾಗಮದ ಸಿದ್ಧಾಂತ. ಅದೇ ಶಿವಾರಾಧನೆಯ ಕ್ರಮ ಎನ್ನಲಾಗಿದೆ.
ಹೀಗೆ ಹಿಂದೂ ಪ್ರಭೇದಗಳಲ್ಲಿ, ವಚನಗಳಿಗೆ ಮೂಲವಾದ ಆಗಮಗಳಲ್ಲಿ ಮತ್ತು ಸಿದ್ಧಾಂತ ಶಿಖಾಮಣಿಯಲ್ಲಿ ಸಹ ಗುರುವನ್ನು ಶಿವನ ಸಾಕ್ಷಾತ್ ಸ್ವರೂಪವೆನ್ನುತ್ತ ಜ್ಞಾನದಾಯಕ ಮತ್ತು ಲಿಂಗ-ಜಂಗಮದೊಂದಿಗೆ ಆತ್ಮನ ಉದ್ಧಾರಕನೆಂದು ಬಣ್ಣಿಸಲಾಗಿದೆ. ಗುರು, ಲಿಂಗ, ಜಂಗಮ ಎಂಬ ತ್ರಿವಿಧ ಸಂಪತ್ತಿನಲ್ಲಿ ಗುರುವೇ ಪ್ರಥಮ ಮತ್ತು ಶ್ರೇಷ್ಠವೆಂದು ಪ್ರತಿಪಾದಿಸಲಾಗಿದೆ.
ಹಾಗಾಗಿಯೇ ಲಿಂಗವಂತ ವೀರಶೈವರಲ್ಲಿ ಸಕಲ ಅರಿವು, ಕಲಿಕೆ (ಜ್ಞಾನ)ಯಿಂದ ಬಯಲು (ಮುಕ್ತಿ)ಗೆ ಗುರುಕಾರುಣ್ಯವೇ ಅಂತಿಮವಾಗಿದೆ. ಈ ಕಾರಣವಾಗಿಯೇ ಲಿಂಗೋದ್ಭವ (ಗರ್ಭದಲ್ಲಿರುವಾಗಲೇ ಕೊಡುವ ಲಿಂಗದೀಕ್ಷೆ)ದಿಂದ ಲಿಂಗೈಕ್ಯರಾಗಿ ಅಂತಿಮ ಸಂಸ್ಕಾರ ಪಡೆಯುವಾಗಲೂ ಗುರುವೇ ಪರಮವಾಗಿದ್ದಾನೆ. ವೀರಶೈವ ಲಿಂಗವಂತ ಮತದ ಎಲ್ಲಾ ಧರ್ಮಗ್ರಂಥಗಳ ಮುಖೇನ ಸಹ "ಗುರುವೇ ಪರಮೋಚ್ಚ" ಎಂದು ಹೇಳಲಾಗಿದೆ.
ಹೀಗಿರುವಾಗ ಅಖಂಡ ವೀರಶೈವ ಮತವನ್ನು ಅವಹೇಳಿಸುತ್ತಾ, ಕೆಲವು ಲಿಂಗಾಹತಿಗಳು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಇತ್ತೀಚಿನ ತಾಜಾ ಉದಾಹರಣೆ ಎಂದರೆ ಈ ಚಿತ್ರ! ಇಲ್ಲಿ ವೀರಶೈವ ಧರ್ಮಗುರುಗಳಾದ ರಂಭಾಪುರಿ ಜಗದ್ಗುರುಗಳ ಪಾದಪೂಜೆಯ ಚಿತ್ರವನ್ನು ತಿರುಚಿ "ಲಿಂಗದ ಮೇಲೆ ಕಾಲಿಟ್ಟ ಸ್ವಾಮಿ" ಎಂದು ಅವಹೇಳಿಸಿ ಲಕ್ಷಾಂತರ ಭಕ್ತರ ಭಾವನೆಗಳನ್ನು ಕೆಣಕಲಾಗಿದೆ. ಪಾದಪೂಜೆಯ ಒಂದು ಕ್ರಮವಾಗಿ ಸ್ವಾಮಿಗಳ ಕಾಲಿಗೆ ಪುಷ್ಪಾರ್ಚನೆ ಮಾಡುತ್ತಿರುವ ಚಿತ್ರವನ್ನು ಹಿಡಿದು ವಿಚಿತ್ರ ವಿಕಾರವಾಗಿ ಸಮಾಜದಲ್ಲಿ ಧಾರ್ಮಿಕ ದ್ವೇಷ ಹರಡುತ್ತಿವೆ.
ಹೀಗೆ ಅವಹೇಳಿಸುವವರಿಗಾಗಿಯೇ ಬಸವಣ್ಣನು,
“ಕಬ್ಬಿನ ಮೇಲೆ ಜೇನಿಟ್ಟಿತ್ತೆಂಬರು,
ಅವು ಒಂದರ ಸಿಹಿಯನೊಂದರಿಯವು.
ಭಕ್ತ ಜಂಗಮದ ನಡುವೆ ಅರ್ಥಪ್ರಾಣ ಅಭಿಮಾನವೆಂಬ
ಸಿಗುರು ಕಾಡಿತ್ತು ಕಾಣಾ, ಕೂಡಲಸಂಗಮದೇವಾ”
ಎಂದಿದ್ದಾನೆ.
ಅಂತೆಯೇ ಗುರುಸ್ವರೂಪಿ ಜಂಗಮನ ಕುರಿತು,
“ಗುರು ಮುನಿದಡೆ ಒಂದು ದಿನ ತಾಳುವೆ,
ಲಿಂಗ ಮುನಿದಡೆ ದಿನವರೆ ತಾಳುವೆ.
ಜಂಗಮ ಮುನಿದಡೆ ಕ್ಷಣಮಾತ್ರ ತಾಳಿದೆನಾದಡೆ,
ಎನ್ನ ಪ್ರಾಣದ ಹೋಕು ಕೂಡಲಸಂಗಮದೇವಾ”
ಎಂದೂ ಬಸವಣ್ಣನು ಹೇಳಿದ್ದಾನೆ.
ಮಡಿವಾಳ ಮಾಚಿದೇವನು ಗುರುವಿನ ಪ್ರಾಮುಖ್ಯತೆಯನ್ನು ಹೀಗೆ ವರ್ಣಿಸಿದ್ದಾನೆ:
"ಅರಿದಲ್ಲದೆ ಗುರುವ ಕಾಣಬಾರದು.
ಅರಿದಲ್ಲದೆ ಲಿಂಗವ ಕಾಣಬಾರದು.
ಅರಿದಲ್ಲದೆ ಜಂಗಮವ ಕಾಣಬಾರದು.
ಇಂತೀ ತ್ರಿವಿಧವು, ಬಸವಣ್ಣನ ಕೃಪೆಯಿಂದ
ಎನಗೆ ಸ್ವಾಯತವಾಯಿತ್ತಾಗಿ,
ಭಿನ್ನವಿಲ್ಲ ಕಾಣಾ ಕಲಿದೇವರದೇವ."
ಹೀಗೆ ಈ ಲಿಂಗಾಹತಿಗಳೊಪ್ಪದ ಆಗಮ, ಸಿದ್ಧಾಂತ ಶಿಖಾಮಣಿಗಳ ಹೊರತಾಗಿಯೂ ವಚನಸಾಹಿತ್ಯದಲ್ಲಿಯೇ ಗುರುವಿನ ಮಹತ್ವ, ಮತ್ತು ಲಿಂಗಕ್ಕಿಂತ ಗುರುವೇ ಮುಖ್ಯ ಎಂಬ ಧಾರ್ಮಿಕ ನೀತಿಯೇ ವಿಜೃಂಬಿಸಿದೆ. ಇಷ್ಟೆಲ್ಲಾ ಇದ್ದೂ ಅರಿವಿಲ್ಲದ ಅರಿವುಗೇಡಿಗಳು ಅರಿತಿಹೆವೆಂದೆಡೆ ಇವರಿಗೇನು ಲಿಂಗ ಸ್ವಾಯತವಾಗುವುದು? ಹಾಗಾಗಿಯೇ ಇವರು ಲಿಂಗಾಹತರು! ಇವರೆಲ್ಲರೂ ಬಸವಣ್ಣ, ಲಿಂಗಾಯತ, ಲಿಂಗದ ಬಗ್ಗೆ ಮಾತನಾಡಲು ಅನರ್ಹರು.
ಇನ್ನು ಅಸಲಿಗೆ ಈ ಲಿಂಗಾಹತಿಗಳು ಆರೋಪಿಸುವಂತೆ ಲಿಂಗದ ಮೇಲೆ ಕಾಲನ್ನೇ ಇಟ್ಟಿದ್ದರೂ ಅದು ವೀರಶೈವ ಲಿಂಗವಂತ ಧರ್ಮಾನುಷ್ಠಾನದ ಭಾಗವೇ ಆಗಿದೆ! ಇದನ್ನು ಶೂನ್ಯಪೀಠವನ್ನು ಏರಿದ್ದ ಅಲ್ಲಮ, ಚೆನ್ನಬಸವಣ್ಣ , ಸಿದ್ಧರಾಮೇಶ್ವರರಾದಿಯಾಗಿ ತಮ್ಮ ವಚನಗಳಲ್ಲಿ ಸ್ಪಷ್ಟವಾಗಿ ಹೀಗೆಯೇ ಮಾಡಬೇಕೆಂದು ಹೇಳಿದ್ದಾರೆ. ಸಾಕ್ಷ್ಯವಾಗಿ ಚೆನ್ನಬಸವಣ್ಣನ ವಚನ ಹೀಗಿದೆ:
"ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ
ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ,
ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು
ಅಂಗುಲಗಳಲ್ಲಿ
ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ
ಮೂರು ವೇಳೆ ಸ್ಪರ್ಶನವ ಮಾಡಿ,
ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು
ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು.
ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು.
ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು.
ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ
ಸ್ಪರ್ಶನೋದಕವೆನಿಸುವುದು.
ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು.
ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ
ಅಪ್ಯಾಯನೋದಕವೆನಿಸುವುದು.
ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು.
ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು
ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು.
ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು
ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು_
ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು
ಅರಿದು ಆಚರಿಸುವುದು.
ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ
ಕೂಡಲಚೆನ್ನಸಂಗಮದೇವಾ."
ಅದೇ ರೀತಿ ಗುರುಸಿದ್ಧದೇವರ ವಚನ ಹೀಗಿದೆ:
"ಅಯ್ಯ, ಪರಮಸಚ್ಚಿದಾನಂದಮಂತ್ರಮೂರ್ತಿ ಜಂಗಮದೇವನು
ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಪ್ಪಿಗೆಯಿಂದ
ನಿರಂಜನಜಂಗಮಕ್ಕೆ ಉಪರಿಸಿಂಹಾಸನ ಮಾಡಿ,
ಮುಹೂರ್ತಮಾಡಿದ ಮೇಲೆ ಷಡಕ್ಷರಮಂತ್ರಸ್ವರೂಪವಾದ
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯದಲ್ಲಿ ಮೂರ್ತಿಗೊಂಡಿರುವ
ಈಶಾನ್ಯಕಲಶ ಮೊದಲಾಗಿ ಪಂಚಕಲಶಂಗಳಿಗೆ
ಜಂಗಮದೀಕ್ಷಾಪಾದೋದಕವ ತುಂಬಿ,
ಮಂಟಪಷಟ್ಸಮ್ಮಾರ್ಜನೆ, ಷಡ್ವಿಧ ವರ್ಣದ ರಂಗಮಾಲೆ,
ನವಧಾನ್ಯ, ನವಸೂತ್ರ, ವಿಭೂತಿವೀಳ್ಯೆ,
ಸುವರ್ಣಕಾಣಿಕೆ, ಪಂಚಮುದ್ರೆ, ಅಷ್ಟವಿಧ
ಷೋಡಶೋಪಚಾರಂಗಳಿಂದೊಪ್ಪುವ
ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ
ಕಲಶಮೂರ್ತಿಗಳ ಪಶ್ಚಿಮಭಾಗದಲ್ಲಿ
ಜಂಗಮಪಾದ ಸೋಂಕುವಂತೆ ಗುರುವು ಮುಹೂರ್ತಮಾಡಿ,
ಆ ಕಲಶಂಗಳ ಸೂತ್ರವ ತನ್ನ ಪಾದಕ್ಕೆ ಹಾಕಿ,
ತನ್ನ ಚಿದ್ಬೆಳಗಿನ ಮುಂದೆ ಮೂರ್ತಿಗೊಂಡಿರುವ ಕಲಶಂಗಳ
ಪೂರ್ವಭಾಗದಲ್ಲಿ ಕರಿಯಕಂಬಳಿಯ ಗರ್ದುಗೆಯ ಮಾಡಿಸಿ,
ಹಸೆಯ ರಚಿಸಿ, ಆ ಗರ್ದುಗೆಯ ಮೇಲೆ
ಶಿಷ್ಯೋತ್ತಮನ ಮುಹೂರ್ತವ ಮಾಡಿಸಿ, ಆತನಂಗಕ್ಕೆ ಗುರುಸೂತ್ರವ ಹಾಕಿ,
ಶಿಷ್ಯನಂಗದ ಮೇಲೆ ಮೂರ್ತಿಗೊಂಡಿರುವ ಪರಶಿವಲಿಂಗವ
ಗಣಸಾಕ್ಷಿಯಾಗಿ ಶ್ರೀ ಗುರುದೇವನು
ತನ್ನ ಕರಸ್ಥಲದಲ್ಲಿ ಮುಹೂರ್ತವ ಮಾಡಿಸಿ,
"ಆ ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ,"
ಆ ಪಂಚಕಲಶಂಗಳಲ್ಲಿ ಶೋಬ್ಥಿಸುವಂಥ ದೇವಗಂಗಾಜಲಸ್ವರೂಪವಾದ
ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ
ಆ ಕಲಶಂಗಳೈದರಲ್ಲಿ ತೆಗೆದುಕೊಂಡು
ಗುರುವಿನ ದಕ್ಷಿಣಭಾಗದಲ್ಲಿ ಮೂರ್ತಿಗೊಂಡಿರುವ ಪಾದೋದಕ ಕುಂಭದಲ್ಲಿ
ಒಂದು ಬಿಂದುವ ತಗೆದುಕೊಂಡು ಆ ಪಾತ್ರೆಯಲ್ಲಿ ಹಾಕಿ,
ಇವಾರುತೆರದ ಅರ್ಘೋದಕಂಗಳ ಪ್ರಮಥಗಣರಾಧ್ಯ ಭಕ್ತಮಹೇಶ್ವರರೆಲ್ಲ
ಆ ಗುರುವಿನ ಹಸ್ತಕಮಲದಲ್ಲಿರುವಂಥ ಉದಕವನ್ನು ತೆಗೆದುಕೊಂಡು,
ಶರಣಸತಿ ಲಿಂಗಪತಿಯಾಗಿ ಒಪ್ಪುವ ಶಿಷ್ಯೋತ್ತಮನ
ಮಸ್ತಕದಮೇಲೆ ಮಂತ್ರಧ್ಯಾನದಿಂದ ಸಂಪ್ರೋಕ್ಷಣೆಯ
ಮಾಡುವಂಥಾದೆ ಕಲಶಾಬ್ಥಿಷೇಕದೀಕ್ಷೆ.
ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು
ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ
ಸಂಗನಬಸವೇಶ್ವರ."
ಬಸವಾದಿ ಶರಣರೇ "ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ..." ಎಂದಿರುವಾಗ ಈ ಲಿಂಗಾಹತಿಗಳು ಯಾವ ಬಸವ, ಯಾವ ಶರಣ, ಯಾವ ವಚನ, ಯಾವ ಲಿಂಗಾಯತದ ಬಗ್ಗೆ ಮಾತನಾಡುತ್ತಿದ್ದಾರೆ?!?!
ಅಂದು ನನಗೆ "ಬ್ರಹ್ಮ ದೊಡ್ಡವನೋ, ಗುರು ದೊಡ್ಡವನೋ" ಎಂದು ಕೇಳಿ ಚಾಲನಾ ಪರವಾನಗಿ ನೀಡಿದಂತೆ ಇಂದು ಗುರು, ಲಿಂಗ, ಜಂಗಮ, ಬಸವಣ್ಣ, ವಚನ, ಲಿಂಗಾಯತದ ಬಗ್ಗೆ ಮಾತನಾಡುವ ಅರ್ಹತಾ ಪತ್ರ ಅತ್ಯವಶ್ಯವಾಗಿದೆ. ಏನೊಂದರಿಯದೆ ಎಂತೆಂದರಿಯದೆ ಕೇವಲ "ಬಸವಪರ ಸಂಘಟನೆಗಳು"ಎಂದರೆ ಅವು ಭಕ್ತಿ ಭಂಡಾರಿ ಬಸವಣ್ಣನ ಹೆಸರಿನ ಸಂಘಟನೆಗಳಲ್ಲ! ಅವು ಕೇವಲ ಬೀಜವಿರದ ತುಡುಗು ದನಗಳ ಸಂಘಗಳು. ಬಸವ ದಟ್ ಬಸವ ದಿಸ್ ಎಂದು ಎಲ್ಲೆಲ್ಲಿಯೂ ಬುಲ್ ಶಿಟ್ ಹಾಕಿ ಸಮಾಜವನ್ನು ಕಲುಷಿತಗೊಳಿಸುತ್ತಿರುವ ಈ ದನಗಳ ಬಗ್ಗೆ ಸಮಾಜ ಎಚ್ಚರಗೊಂಡು ಪಾಠ ಕಲಿಸುವ ತುರ್ತು ಇಂದು ಅಖಂಡ ವೀರಶೈವ ಲಿಂಗಾಯತ ಸಮಾಜದ ಮುಂದಿದೆ.
~ ರವಿ ಹಂಜ್.
No comments:
Post a Comment
If you have any doubts. please let me know...