March 26, 2026

ನಮಸ್ಕಾರದಿಂದ ಆಯುಷ್ಯವೂ ವೃದ್ಧಿಯಾಗುತ್ತದೆ

ಮಾರ್ಕಂಡೇಯ ಮುನಿಗಳು ದೀರ್ಘಾಯುಷಿಯಾದುದರ ಬಗೆಗಿನ ಹಲವು ಕಥೆಗಳಲ್ಲಿ ಇದು ಒಂದು.

ಮೃಕಂಡು ಮನಿಗಳ ಮಗನಿಗೆ  9 ವರ್ಷಕ್ಕೆ ಮರಣ ಯೋಗ ಇತ್ತು. ಏಳನೇ ವರ್ಷಕ್ಕೆ ಉಪನಯನ ಮಾಡಿದ ಮುನಿಗಳು ಮಗನಿಗೆ ಹೀಗೆಂದರು.
"ಮಗು ಸಾತ್ವಿಕರು ಹಿರಿಯರು ಕಂಡಲ್ಲಿ ನಮಸ್ಕಾರ ಮಾಡು ಅವರ ಆಶೀರ್ವಾದವನ್ನು ಪಡೆದುಕೋ."

*ಅಭಿವಾದನ ಶೀಲಸ್ಯ ನಿತ್ಯಂ ವೃದ್ಧೋಪಸೇವಿನಃ| 
ಚತ್ವಾರಿ ತಸ್ಯ ವರ್ಧಂತೇ ಆಯುಃ ಪ್ರಜ್ಞಾ ಯಶೋ ಬಲಂ*॥

ನಮಸ್ಕಾರ ಮಾಡುವುದರಿಂದ; ಜ್ಞಾನ ವೃದ್ಧರ ಸೇವೆಯಲ್ಲಿ ನಿರತರಾದವರಿಗೆ ಆಯುಷ್ಯ ಪ್ರಜ್ಞೆ ಯಶಸ್ಸು ಬಲಗಳು ವೃದ್ಧಿಯಾಗುತ್ತವೆ.

ಬಾಲಕ ಮಾರ್ಕಂಡೇಯ ಹಾಗೆಯೇ ಮಾಡಿದ.
ತನ್ನ ಆಶ್ರಮದ ಮಾರ್ಗದಲ್ಲಿ ಬಂದ ಎಲ್ಲಾ ಹಿರಿಯ ಜ್ಞಾನಿಗಳ ಪಾದಕ್ಕೆ ಅಭಿವಾದನ ಮಾಡಿ ನಮಿಸುತ್ತಿದ್ದ. ದೀರ್ಘಾಯುಷ್ಮಾನ್ ಭವ ಎಂಬ ಆಶೀರ್ವಾದಗಳನ್ನು ಪಡೆದು ಹಿಂತಿರುಗುತ್ತಿದ್ದ.
ಆಶ್ರಮದ ಮಾರ್ಗದಲ್ಲಿ ಬಂದಂತಹ ಸಪ್ತಋಷಿಗಳಿಗೂ ಕೂಡ ಬಾಲಕನು ಅಭಿವಾದನ ಮಾಡಿದ. ದೈವ ಸಂಕಲ್ಪದಂತೆ ಪೂರ್ವಾಪರಗಳನ್ನು ಆಲೋಚನೆ ಮಾಡದೆ ಸಪ್ತಋಷಿಗಳು ಬಾಲಕ ಮಾರ್ಕಂಡೇಯನಿಗೆ ದೀರ್ಘಾಯುಷ್ಯ ದ ವರವನ್ನಿತ್ತರು.
ಜ್ಞಾನಿಗಳ ಸಜ್ಜನರ ಮುಖದಿಂದ ಹೊರಟ ಮಾತುಗಳು ಕೂಡ ಸುಳ್ಳಾಗಲು ಪರಮಾತ್ಮ ಬಿಡುವುದಿಲ್ಲ.

ಕಾಲ ಕಳೆಯಿತು.....

ನಿತ್ಯ ನಿರಂತರ ಪರಮ ಶಿವನನ್ನು ಆರಾಧಿಸುತ್ತಿದ್ದ ಬಾಲಕ ಮಾರ್ಕಂಡೇಯನ ಜೀವ ಒಯ್ಯಲು ಯಮದೂತರು ಬಂದರು ಅವರಿಗೆ ಬಾಲಕನನ್ನು ಸ್ಪರ್ಶಿಸಲು ಆಗಲಿಲ್ಲ. ಮಹಿಷ ವಾಹನ ನಾಗಿ ಯಮನೇ ಬಂದರೂ ಕೂಡ ಪ್ರಯೋಜನವಾಗಲಿಲ್ಲ. ಬಾಲಕನ ಸುತ್ತ ಆವರಿಸಿದ್ದ ಆಶೀರ್ವಾದದ ಕವಚವನ್ನು ಛೇದಿಸಲು ಸಾಧ್ಯವಾಗಲಿಲ್ಲ. ಶಿವ ಭಕ್ತ ಮಾರ್ಕಂಡೇಯನ ಆಯುಷ್ಯವನ್ನು ಸಪ್ತ ಕಲ್ಪದ ತನಕ ತಿದ್ದಿ ಬಿಡುವಂತೆ ಯಮಧರ್ಮರಾಜನಿಗೆ ಪರಶಿವನು ಸೂಚಿಸುತ್ತಾನೆ.
ಮಾರ್ಕಂಡೇಯ ಋಷಿಗಳನ್ನು ಸ್ಮರಿಸುವವನಿಗೆ ಆಯುಷ್ಯವೂ ವೃದ್ಧಿಯಾಗುತ್ತದೆ.

ಹಿರಿಯರು ಬಂದಾಗ ಎದ್ದು ನಿಲ್ಲುವುದು ಕರ್ತವ್ಯ ದೊಡ್ಡವರು ಸನಿಹದಿಂದ ಸಾಗುತ್ತಿದ್ದಾಗಲೂ ಎದ್ದು ನಿಲ್ಲದವನ ಆಯುಷ್ಯಕ್ಕೆ ಪೆಟ್ಟಿದೆ.
*ಊರ್ದ್ವಂ ಪ್ರಾಣ ಉತ್ಕ್ರಾಮಂತಿ ಯೂನಃ ಸ್ಥವಿರ ಆಗತೇ*
ಹಿರಿಯರು ಸನಿಹದಿಂದ ಸಾಗುತ್ತಿದ್ದಾಗ ಕಿರಿಯರ ಪ್ರಾಣಶಕ್ತಿ ತಾನಾಗಿ ಮೇಲಕ್ಕೆ ಚಿಮ್ಮುತ್ತದೆ. ಆಗ ಎದ್ದು ನಿಂತಲ್ಲಿ ಅದು ಶಾಂತವಾಗಿ ಶರೀರದಲ್ಲಿಯೇ ನೆಲೆಯಾಗುತ್ತದೆ ಇಲ್ಲವಾದರೆ ಆಯುಷ್ಯ ಕ್ಷೀಣ ವಾಗುತ್ತದೆ.

ಗುರು-ಹಿರಿಯರನ್ನು ತಂದೆತಾಯಿಗಳನ್ನು ಜ್ಞಾನಿಗಳನ್ನು ಗೌರವಿಸುವುದರಿಂದ ; ನಮಸ್ಕರಿಸುವುದರಿಂದ ನಮಗೆ ಸರ್ವ ಸೌಭಾಗ್ಯಗಳು ಲಭಿಸುತ್ತವೆ.

ಪ್ರದಕ್ಷಿಣ ನಮಸ್ಕಾರ

ಮಂದಿರಗಳಲ್ಲಿ,ಅಗ್ನಿಗೆ,ಅಶ್ವತ್ಥವೃಕ್ಷಕ್ಕೆ,ತುಳಸಿಗೆ ಸುತ್ತುವರಿದು ನಮಸ್ಕಾರ ಮಾಡುತ್ತೇವೆ.ಅದೇ ಪ್ರದಕ್ಷಿಣೆ ನಮಸ್ಕಾರ ಅಥವಾ ಪರಿಕ್ರಮ. ದೇವಸ್ಥಾನಕ್ಕೆ ಹೋಗಿ ದೇವರ ಪೂಜೆಯನ್ನು ಮಾಡಿ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸುವುದು ಪದ್ಧತಿ.ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣೆ ನಮಸ್ಕಾರ ಸಲ್ಲಿಸಬೇಕು.ದೇವರ ಅಭಿಮುಖವಾಗಿ ನಿಂತರೆ ಎಡಭಾಗ ಯಾವುದಾಗುವುದೋ ಅಲ್ಲಿಂದ ಪ್ರದಕ್ಷಿಣೆಯನ್ನು ಪ್ರಾರಂಭಿಸಬೇಕು.ಪ್ರದಕ್ಷಿಣೆಯನ್ನು ಮಾಡುವಾಗ ಮೌನದಿಂದ,ಸ್ತೋತ್ರಗಳನ್ನು ಪಠಿಸುತ್ತಾ,ಪ್ರಾರ್ಥಿಸುತ್ತಾ,ಏಕಾಗ್ರತೆಯಿಂದ ಪ್ರದಕ್ಷಿಣೆ ನಮಸ್ಕಾರವನ್ನು ಸಲ್ಲಿಸಬೇಕು.

ಒಂದು ವೃತ್ತಕ್ಕೆ ಒಂದು ಕೇಂದ್ರಬಿಂದುವಿರಲೇಬೇಕು. ಭಗವಂತನಿಂದ ರಚಿತವಾದ ಈ ಪ್ರಪಂಚ ಒಂದು ವೃತ್ತ(Circle). ಇಲ್ಲಿ ಕೇಂದ್ರಬಿಂದು (Center Point) ಪರಮಾತ್ಮ.ಕೇಂದ್ರಬಿಂದುವಿಲ್ಲದೇ ವೃತ್ತವಿಲ್ಲ.ಪರಮೇಶ್ವರನ ಅಸ್ತಿತ್ವವಿಲ್ಲದೇ ಲೋಕವಿಲ್ಲ. ಹಾಗಾಗಿ ಆ ಕೇಂದ್ರಬಿಂದುವಿನ ಸುತ್ತ ಭಕ್ತಿಯಿಂದ ಸುತ್ತಲೇಬೇಕು.ಹಾಗೇ ಸುತ್ತುವಾಗ ನಮ್ಮ ಕರ್ಮ ಹಾಗೂ ಚಿಂತನೆಗಳು ಕೇಂದ್ರಬಿಂದುವಾದ ಭಗವಂತನಲ್ಲಿ ಲೀನವಾಗುತ್ತವೆ.ಕೇಂದ್ರಬಿಂದು ಯಾವಾಗಲೂ ಸ್ಥಿರ.ಸೌರಮಂಡಲದಲ್ಲಿ ಸೂರ್ಯನೇ ಕೇಂದ್ರಬಿಂದು.ಆತನ ಸುತ್ತಲೂ ಉಳಿದ ಗ್ರಹಗಳು ಸುತ್ತುತ್ತಿರುತ್ತವೆ.ಹಾಗೇ ಪ್ರಪಂಚದಲ್ಲಿ ಭಗವಂತನೇ ಕೇಂದ್ರಬಿಂದು,ಹಾಗಾಗಿ ನಾವು ಭಗವಂತನ ಸುತ್ತ ಪ್ರದಕ್ಷಿಣೆಯನ್ನು ಮಾಡಬೇಕೆಂದು ತಿಳಿಯುತ್ತದೆ. ಕೇಂದ್ರಬಿಂದುವಿಲ್ಲದೇ ವೃತ್ತವನ್ನು ರಚಿಸಲು ಸಾಧ್ಯವಿಲ್ಲ.ಹಾಗೇ ನಮ್ಮ ಶರೀರದ ಕೇಂದ್ರಬಿಂದು ಮನಸ್ಸು.ಮನಸ್ಸಿನಲ್ಲಿ ಭಗವಂತನಿರದಿದ್ದರೆ ಶಾಂತಿ,ನೆಮ್ಮದಿ ದೊರಕುವುದಿಲ್ಲ.ಮನದಲ್ಲಿ ಭಗವಂತ ನೆಲೆಗೊಳ್ಳಲಿ ಎಂದು ಪ್ರದಕ್ಷಿಣೆ ನಮಸ್ಕಾರ ಮಾಡಬೇಕು.ವೃತ್ತದಲ್ಲಿರುವ ಪ್ರತಿಯೊಂದು ಬಿಂದುವೂ ಕೇಂದ್ರಬಿಂದುವಿಗೆ ಸರಿಸಮಾನವಾಗಿರುತ್ತದೆ.ಹಾಗೇ ನಾವೆಲ್ಲೇ ಇರಲಿ,ಏನನ್ನೇ ಮಾಡಲಿ ಅದು ಕೇಂದ್ರಬಿಂದುವಾದ ಭಗವಂತನಿಗೆ ಹತ್ತಿರವಾಗಿಯೇ ಇರುತ್ತದೆ.ಆತನ ದಯೆಯಿಲ್ಲದೇ ಏನನ್ನೂ ಸಾಧಿಸಲಾಗದು. ಹಾಗೇ ದೇವಾಲಯದ ಪರಿಸರ ಶಾಂತ ಹಾಗೂ ಸಕಾರಾತ್ಮಕ ಅಂಶಗಳಿಂದ ಕೂಡಿರುತ್ತದೆ.ಪ್ರದಕ್ಷಿಣೆಯ ಸಮಯದಲ್ಲಿ ಆ ಸಕಾರಾತ್ಮಕ ಶಕ್ತಿ ನಮ್ಮ ದೇಹವನ್ನು ಪ್ರವೇಶಿಸಿ ಶರೀರ ಚೈತನ್ಯಮಯವಾಗುತ್ತದೆ ಹಾಗೇ ಮಾನಸಿಕ ಶಾಂತಿಯೂ ಸಿಗುತ್ತದೆ.ಎಲ್ಲ ಜಂಜಾಟಗಳನ್ನು ಮರೆತು ಭಗವಂತನ ಸನ್ನಿಧಿಯಲ್ಲಿ ತುಸುಹೊತ್ತು ಕಳೆದರೆ ನವೋಲ್ಲಾಸ ಸಿಗುತ್ತದೆ.

ಸ್ಕಂದ ಪುರಾಣದ ಪ್ರಕಾರ ಮೊದಲ ಪ್ರದಕ್ಷಿಣೆಯಲ್ಲಿ ಮನದಿಂದ ಮಾಡಿದ ಪಾಪಗಳು ನಾಶವಾಗುತ್ತವೆ.
ಎರಡನೇ ಪ್ರದಕ್ಷಿಣೆಯಲ್ಲಿ ಮಾತಿನಿಂದ ಮಾಡಿದ ಪಾಪಗಳು ದೂರವಾಗುತ್ತವೆ.
ಮೂರನೇ ಪ್ರದಕ್ಷಿಣೆಯಲ್ಲಿ ದೇಹದಿಂದ ಮಾಡಿದಂತಹ ಪಾಪಗಳು ದೂರವಾಗುತ್ತವೆ
.ಮಾನಸಿಕ,ವಾಚಿಕ,ದೈಹಿಕ ಪಾಪಗಳ ನಿವಾರಣೆಗಾಗಿ ಮೂರು ಅಥವಾ 5 ಪ್ರದಕ್ಷಿಣೆಗಳನ್ನು ಹಾಕುವ ಸಂಪ್ರದಾಯ ಬೆಳೆದುಬಂದಿದೆ.

ಜಗತ್ತಿನ ಅಲೌಕಿಕ ಶಕ್ತಿಗೆ ನಮಸ್ಕರಿಸುವುದೇ ಪ್ರದಕ್ಷಿಣೆಯೆನಿಸುತ್ತದೆ. ಶಯನ ಪ್ರದಕ್ಷಿಣೆ ಹಾಗೂ ಆತ್ಮ ಪ್ರದಕ್ಷಿಣೆಯೂ ಸಹ ಪ್ರದಕ್ಷಿಣೆಯ ಭಾಗಗಳು.
ಶಯನ ಪ್ರದಕ್ಷಿಣೆ ಅಂದರೆ ಮಲಗಿ ದೇವರಿಗೆ ಪ್ರದಕ್ಷಿಣೆಯನ್ನು ಹಾಕುವುದು ಇದಕ್ಕೆ ಉರುಳು ಸೇವೆ ಎನ್ನುತ್ತಾರೆ.
ಆತ್ಮ ಪ್ರದಕ್ಷಿಣೆಯೆಂದರೆ ನಿಂತಲ್ಲೇ ಮೂರು ಪ್ರದಕ್ಷಿಣೆಯನ್ನು ಹಾಕಿ ದೇವರಿಗೆ ನಮಸ್ಕರಿಸುವುದು.

ಈ ಪ್ರಾರ್ಥನೆಯನ್ನು ಹೇಳುತ್ತಾ ಪ್ರದಕ್ಷಿಣೆ ಮಾಡಿದರೆ ಒಳ್ಳೆಯದು.

 "ಯಾನಿ ಕಾನಿ ಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇ ಪದೇ ||"

(ಅರಿತೋ ಅರಿಯದೆಯೋ ಏನಾದರೂ ಪಾಪ ಮಾಡಿದ್ದರೆ,ಹಿಂದಿನ ಜನ್ಮಗಳಲ್ಲಿ ಪಾಪ ಮಾಡಿದ್ದರೆ,ಅಂತಹ ಪಾಪಗಳು ಪ್ರದಕ್ಷಿಣೆ ನಮಸ್ಕಾರದಿಂದ ನಾಶವಾಗುತ್ತವೆ.)
ಲೋಕಾಃ ಸಮಸ್ತಾಃ ಸುಖಿನೋ ಭವಂತು.

No comments:

Post a Comment

If you have any doubts. please let me know...