ಇಕಹಾರ್ಟ್ ಅಂತ ಒಬ್ಬರು ಜಪಾನ್ ದೇಶದ ಸಂತರಿದ್ದರು. ಅವರಿಗೆ ಒಮ್ಮೆ ದೇವಿ ಪ್ರತ್ಯಕ್ಷಳಾದಳು. ಸಂತ ಸುಮ್ಮನೆ ಕೈಮುಗಿದು ನಿಂತಿದ್ದ. ಅವರ ಸ್ನೇಹಿತರು "ದೇವರು ಪ್ರತ್ಯಕ್ಷ ಆಗಿದ್ದಾರೆ. ಏನಾದರೂ ಕೇಳು" ಎಂದರು. ಅದಕ್ಕೆ ಇಕಹಾರ್ಟ್ "ನಾನು ದೇವಸ್ಥಾನದ ಒಳಕ್ಕೆ ಬರುವಾಗ ಪಾದರಕ್ಷೆ ಬಿಡ್ತಾರಲ್ಲ, ಅಲ್ಲಿಯೇ ಕೇಳುವುದನ್ನು ಬಿಟ್ಟು ಬಂದಿದ್ದೇನೆ" ಎಂದ. ಅದಕ್ಕೆ ಸ್ನೇಹಿತರು "ಕೇಳುವುದು ಬಿಟ್ಟಿದ್ದೀಯ ಅಂದ ಮೇಲೆ ದೇವಸ್ಥಾನಕ್ಕೆ ಯಾಕೆ ಬಂದೆ ?" ಎಂದು ಪ್ರಶ್ನಿಸಿದರು. ದೇವರ ಹತ್ತಿರ ಏನಾದರೂ ಕೇಳುವುದಕ್ಕಾಗಿಯೇ ದೇವಸ್ಥಾನಕ್ಕೆ ಹೋಗಬೇಕು ಎನ್ನುವುದು ನಂಬಿಕೆ.
ಸ್ನೇಹಿತರ ಪ್ರಶ್ನೆಗೆ ಇಕಹಾರ್ಟ್, "ನಾನು ದೇವರಲ್ಲಿ ಏನಾದರೂ ಕೇಳಲು ಬಂದಿಲ್ಲ. ನನಗೆ ಇಷ್ಟೊಂದು ಸುಂದರವಾದ ಜೀವನ ಕೊಟ್ಟಿದ್ದಾನಲ್ಲ. ಅದಕ್ಕೆ ಅವನಿಗೆ ಧನ್ಯವಾದ ಹೇಳಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದ.
ದೇವರಿಗೆ ನಾವು ಧನ್ಯವಾದ ಹೇಳಬೇಕು. ಎಷ್ಟೋ ಜನರಿಗೆ ಉಣ್ಣಲು ಅನ್ನವೇ ಇಲ್ಲ. ಭಿಕ್ಷೆ ಬೇಡಿ ತಿನ್ನುತ್ತಾರೆ. ಆದರೆ ನನ್ನ ಡೈನಿಂಗ್ ಟೇಬಲ್ ಮೇಲೆ ಅನ್ನ ಇದೆಯಲ್ಲ. ಅದಕ್ಕಾಗಿಯಾದರೂ ನಾನು ದೇವರಿಗೆ ಕೃತಜ್ಞನಾಗಿರಬೇಕು. ಎಷ್ಟೋ ಮಂದಿಗೆ ನಡೆಯಲು ಕಾಲುಗಳೇ ಇಲ್ಲ. ನನಗೆ ನಡೆಯುವುದಕ್ಕೆ ಸದೃಢವಾದ ಕಾಲುಗಳನ್ನು ನೀಡಿದ್ದಾನಲ್ಲ. ಅದಕ್ಕೆ ಉಪಕೃತನಾಗದಿದ್ದರೆ ಹೇಗೆ ಹೇಳಿ?
ನಾವು ದೇವಸ್ಥಾನಕ್ಕೆ ಹೋಗುವಾಗ ಪಟ್ಟಿ ಹಿಡಿದುಕೊಂಡೇ ಹೋಗಿರುತ್ತೇವೆ. ಈ ಜೀವನ ದೇವರು ಕೊಟ್ಟ ಭಿಕ್ಷೆ. ಅದಕ್ಕೆ ದೇವರಿಗೆ ಧನ್ಯವಾದ ಅರ್ಪಿಸಲು ದೇವಾಲಯಕ್ಕೆ ಹೋಗಬೇಕೇ ವಿನಃ ಏನನ್ನೋ ಕೇಳುವುದಕ್ಕಲ್ಲ. ಸಮುದ್ರದ ನೀರು ಉಪ್ಪು. ಸಮುದ್ರದ ನೀರನ್ನೇ ನಮ್ಮ ಬಾಯಲ್ಲಿ ಹಾಕಿದ್ದರೆ ನಡೆಯುತ್ತದೆಯೇ ? ಉಪ್ಪು ನೀರು ಮೇಲೆ ತೆಗೆದುಕೊಂಡು ಹೋಗಿ ಮಳೆಯ ಮೂಲಕ ನಮ್ಮ ಬಾಯಿಗೆ ಸಿಹಿ ನೀರು ಹಾಕಿದ್ದಾನೆ. ಅದಕ್ಕೆ ಧನ್ಯವಾದ ಹೇಳು ದೇವನಿಗೆ. ಬಸ್ಸು ತುಂಬಿತ್ತು ಅಂದರೆ ದುಡ್ಡು ಕೊಡ್ತೀನಿ ಅಂದರೂ ಹತ್ತಿಸಿಕೊಂಡು ಹೋಗಲ್ಲ. ಕೆಳಕ್ಕೆ ಇಳಿ ಅಂತಾರೆ. ಟಿಕೆಟ್ ಇಲ್ಲದೆ ನಮಗೆ ಇಲ್ಲಿ ಇರಲು ದೇವರು ಒಂದು ಅವಕಾಶ ಕೊಟ್ಟಿದ್ದಾನಲ್ಲ, ಅದಕ್ಕೆ ಒಂದು ಧನ್ಯವಾದ ಹೇಳಬೇಕು. ವಾಹನಕ್ಕೆ ಪೆಟ್ರೋಲ್ ಹಾಕಿಸಲು ಪೆಟ್ರೋಲ್ ಬಂಕಿಗೇ ಹೋಗಬೇಕು. ಆದರೆ ನಮ್ಮ ಮೂಗು ಇರುವಲ್ಲಿಗೇ ಗಾಳಿ ತಂದು ಇಟ್ಟಿದ್ದಾನಲ್ಲ. ಅದಕ್ಕೆ ದೇವರಿಗೆ ಒಂದು ಧನ್ಯವಾದ ಹೇಳಬೇಕು. ಮಣ್ಣು ತಿಂದರೆ ಹಣ್ಣು ತಿಂದ ಹಾಗೆ ಆಗುವುದಿಲ್ಲ. ಆದರೆ, ಹಣ್ಣು ಬಂದಿದ್ದೂ ಮಣ್ಣಿನಿಂದ. ಇಂತಹ ಮ್ಯಾಜಿಕ್ ಮಾಡಿದ ದೇವರಿಗೆ ಧನ್ಯವಾದ ಹೇಳದಿದ್ದರೆ ಹೇಗೆ?
No comments:
Post a Comment
If you have any doubts. please let me know...