February 22, 2026

ವಾಸ್ತು ಎಂದರೇನು?

“ವಾಸ್ತು” ಎಂಬ ಪದದ ವ್ಯುತ್ಪತ್ತಿಯನ್ನು ಸೂಚಿಸುವ ಶ್ಲೋಕವು ಈ ಕೆಳಗಿನಂತಿದೆ. 

“ವಸಂತಿ ಪ್ರಾಣಿನೋತ್ರ ಇತಿ ವಾಸ್ತು ಶಬ್ದ ವ್ಯತ್ಪತ್ತಿಃ”
ಅಂದರೆ, ಪ್ರಾಣಿಗಳು ಎಲ್ಲಿ ವಾಸಿಸುತ್ತಾರೋ ಆ ಸ್ಥಳವೇ “ವಾಸ್ತು” ಎಂದು ಕರೆಯುತ್ತಾರೆ. ಇಲ್ಲಿ “ಪ್ರಾಣಿ” ಎಂಬ ಪದವು ಕೇವಲ ಮನುಷ್ಯನಿಗಷ್ಟೇ ಸೀಮಿತವಲ್ಲ; ಎಲ್ಲಾ ಜೀವಿಗಳನ್ನು ಒಳಗೊಂಡಿದೆ. ಮನುಷ್ಯನೂ ಒಂದು ಪ್ರಾಣಿಯಾಗಿರುವುದರಿಂದ, ಜೀವಿಗಳು ವಾಸಿಸುವ ಸ್ಥಳವನ್ನು ಸೂಚಿಸಲು “ವಾಸ್ತು” ಎಂಬ ಪದವನ್ನು ಬಳಸಲಾಗಿದೆ.

ಇದೇ ಪದವು ಸಂಸ್ಕೃತದ “ವಸ” ಧಾತುವಿನಿಂದ ಬಂದಿದೆ. ಧಾತುವಿನ ಅರ್ಥವನ್ನು ವಿವರಿಸುವಂತೆ. 

“ವಸ ನಿವಾಸೇ, ವಸ ಆಚ್ಛಾದನೇ”
ಎಂಬ ರೂಪದಲ್ಲಿ ಎರಡು ಅರ್ಥಗಳನ್ನು ಸೂಚಿಸಲಾಗಿದೆ. “ವಸ ನಿವಾಸೇ” ಎಂದರೆ ವಾಸಿಸುವುದು, ನೆಲೆಸುವುದು ಎಂಬ ಅರ್ಥ. ಈ ಅರ್ಥದ ಪ್ರಕಾರ —
“ವಸ ನಿವಾಸೇ ಭಾವೇ ಲ್ಯುಟ್ – ವಸಂತ್ಯಸ್ಮಿನ್ ವಾಸ್ತುಃ”
ಅಂದರೆ, ಯಾರು ವಾಸಿಸುತ್ತಾರೋ ಆ ಸ್ಥಳವೇ ವಾಸ್ತು ಎಂದು ಅರ್ಥವಾಗುತ್ತದೆ.

“ವಸ ಆಚ್ಛಾದನೇ” ಎಂಬ ಅರ್ಥದ ಪ್ರಕಾರ, ಹೊದಿಸುವುದು ಅಥವಾ ಆವರಿಸುವುದು ಎಂಬ ಭಾವ ವ್ಯಕ್ತವಾಗುತ್ತದೆ. ಅಂದರೆ ವಾಸ್ತು ಎಂದರೆ ಕೇವಲ ವಾಸಸ್ಥಳವಷ್ಟೇ ಅಲ್ಲ, ಅದು ಜೀವಿಗಳಿಗೆ ರಕ್ಷಣೆಯನ್ನು ನೀಡುವ ಆಶ್ರಯವೂ ಆಗಿದೆ.
ಹೀಗಾಗಿ, ಶ್ಲೋಕ ಮತ್ತು ಧಾತುವ್ಯಾಖ್ಯಾನದ ಆಧಾರದ ಮೇಲೆ ನೋಡಿದರೆ, ಜೀವಿಗಳು ವಾಸಿಸುವ ಮತ್ತು ಅವರಿಗೆ ಆವರಣ–ಆಶ್ರಯವನ್ನು ಒದಗಿಸುವ ಸ್ಥಳವೇ “ವಾಸ್ತು” ಎಂದು ತಿಳಿಯುತ್ತದೆ.

“ನಿವಾಸಾತ್ ಸರ್ವ ಭೂತಾನಾಂ ವಾಸ್ತುರಿತಿ ಶಬ್ಬಿತಃ”
ಎಂಬುದು ಅಮರಕೋಶ ದಲ್ಲಿರುವ ಉಲ್ಲೇಖ. ಸಮಸ್ತ ಭೂತಗಳ, ಅಂದರೆ ಎಲ್ಲಾ ಜೀವಿಗಳ ನಿವಾಸವಾಗಿರುವುದರಿಂದ ಅದನ್ನು ‘ವಾಸ್ತು’ ಎಂದು ಕರೆಯುತ್ತಾರೆ ಎಂಬುದೇ ಇದರ ಅರ್ಥ. ಅಂದರೆ, ವಾಸ್ತು ಎಂಬುದು ಕೇವಲ ಕಟ್ಟಡವಲ್ಲ; ಜೀವಜಗತ್ತಿನ ವಾಸಸ್ಥಾನವಾಗಿರುವ ಭೂಮಿ ಮತ್ತು ಅದರ ಆಧಾರಭೂತ ತತ್ತ್ವವೇ ವಾಸ್ತು ಎಂಬ ಅಭಿಪ್ರಾಯ ಇಲ್ಲಿದೆ.

ಇದೇ ಅರ್ಥವನ್ನು ವಿಸ್ತರಿಸುವಂತೆ ಮತ್ಸ್ಯಪುರಾಣ ದಲ್ಲಿ “ನಿವಾಸಾತ್ ಸರ್ವ ದೇವಾನಾಂ ವಾಸ್ತುರಿತಿ ಶಬ್ಬಿತಃ” ಎಂದು ಹೇಳಲಾಗಿದೆ. ಇಲ್ಲಿ ವಾಸ್ತು ದೇವತೆಗಳ ನಿವಾಸವೂ ಆಗಿದೆ ಎಂಬ ಪರಿಕಲ್ಪನೆ ಮೂಡುತ್ತದೆ. ಈ ಹೇಳಿಕೆಯ ಹಿಂದೆ ಪೌರಾಣಿಕ ಹಿನ್ನೆಲೆ ಇದೆ. ದೇವತೆಗಳೂ ವಾಸಿಸುವ ತತ್ತ್ವರೂಪದ ವಾಸ್ತುವನ್ನು ಇಲ್ಲಿ ಗಮನಿಸಬೇಕು.

‘ಅಂಧಕಾಸುರನ ವಧೆ’ ಸಂದರ್ಭದಲ್ಲಿ ಶಿವ ಪರಮೇಶ್ವರನ ದೇಹದಿಂದ ಬಿದ್ದ ಬೆವರಿನ ಹನಿಗಳು ಭೂಮಿಗೆ ತಾಗಿದಾಗ ಭೀಕರ ಭೂತರೂಪವೊಂದು ಉತ್ಪನ್ನವಾಯಿತು. ಆ ಭೂತವು ಆಕಾಶ ಮತ್ತು ಭೂಮಿಯನ್ನು ನುಂಗುವಷ್ಟು ಪ್ರಬಲವಾಗಿತ್ತು. ಭೂಮಿಯ ಮೇಲೆ ಬಿದ್ದಿದ್ದ ಅಂಧಕಾಸುರನ ರಕ್ತವನ್ನೆಲ್ಲಾ ಅದು ಹೀರಿದರೂ ತೃಪ್ತಿಯಾಗಲಿಲ್ಲ. ತೀವ್ರ ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತ ಅದು ಸದಾಶಿವನನ್ನು ಕುರಿತು ತಪಸ್ಸು ಆಚರಿಸಿ, ಮೂರು ಲೋಕಗಳನ್ನೂ ನುಂಗುವ ಸಾಮರ್ಥ್ಯವನ್ನು ಬೇಡಿತು. ಸಂತುಷ್ಟನಾದ ಶಿವನು ಅದಕ್ಕೆ ವರವನ್ನು ಕರುಣಿಸಿದನು. ವರಪ್ರಭಾವದಿಂದ ಆ ಭೂತವು ಸ್ವರ್ಗ, ಆಕಾಶ ಮತ್ತು ಭೂಮಂಡಲವನ್ನೆಲ್ಲಾ ವ್ಯಾಪಿಸಿ, ಕೊನೆಗೆ ಭೂಮಿಯ ಮೇಲೆ ಬಿದ್ದು ಹಬ್ಬಿಕೊಂಡಿತು. ಇದರಿಂದ ಭಯಗೊಂಡ ದೇವತೆಗಳೆಲ್ಲರೂ ಒಟ್ಟಾಗಿ ಸೇರಿ, ಆ ಭೂತದ ಮೇಲೆ ಬಿದ್ದು ಅದರ ದೇಹದ ವಿವಿಧ ಭಾಗಗಳಲ್ಲಿ ನಿರ್ದಿಷ್ಟ ಸ್ಥಾನಗಳನ್ನು ಆಕ್ರಮಿಸಿಕೊಂಡು ಅದನ್ನು ಕಟ್ಟಿ ಹಾಕಿದರು. ಈ ರೀತಿ ದೇವತೆಗಳಿಂದ ಮೆಟ್ಟಿನಿಂತ ಭೂತವೇ ವಾಸ್ತುಮಂಡಲದಲ್ಲಿರುವ ವಾಸ್ತುಪುರುಷ.

ವಾಸ್ತುಮಂಡಲದ ಚೌಕಗಳಲ್ಲಿ ನಿರ್ದಿಷ್ಟವಾಗಿ ದೇವತೆಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಖಂಡವೂ ಒಂದು ದೇವತೆಯ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ “ನಿವಾಸಾತ್ ಸರ್ವದೇವಾನಾಂ” ಎಂಬ ಉಕ್ತಿಯ ಅರ್ಥ ಸ್ಪಷ್ಟವಾಗುತ್ತದೆ. ದೇವತೆಗಳಿಂದ ಮೆಟ್ಟಿನಿಂತ ವಾಸ್ತುಪುರುಷನನ್ನು ತಣಿಸಲು, ಅವನ ಕ್ಷುತ್‌ಬಾಧೆಯನ್ನು ಶಮನ ಮಾಡಲು ವಾಸ್ತುಹೋಮವನ್ನು ಆಚರಿಸಲಾಗುತ್ತದೆ. ಕಟ್ಟಡ ನಿರ್ಮಾಣದ ಪೂರ್ವದಲ್ಲಿ ನಡೆಯುವ ಈ ಕರ್ಮವು ವಾಸ್ತುಪುರುಷನ ಶಾಂತಿಗಾಗಿ ನಿರ್ದಿಷ್ಟವಾಗಿದೆ.
ಇದೇ ಹಿನ್ನೆಲೆಯಲ್ಲಿ ಮಯಮತ ದಲ್ಲಿಯೂ ವಾಸ್ತು ಪದದ ವಿವರಣೆ ದೊರೆಯುತ್ತದೆ (ಡಗೆನ್ಸ್, ೧೯೭೦: ೩೫). ಇಲ್ಲಿ ವಾಸ್ತು ಕೇವಲ ಭೌತಿಕ ವಸತಿ ಸ್ಥಳವಲ್ಲ; ಅದು ದೇವತೆಗಳ ಆವರಣ, ದೈವಿಕ ಸ್ಥಿತಿ ಮತ್ತು ಬ್ರಹ್ಮಾಂಡೀಯ ವಿನ್ಯಾಸದ ಪ್ರತಿರೂಪವೆಂದು ನಿರೂಪಿಸಲಾಗಿದೆ.

ಆಕರ
#ದೇವಾಲಯ_ವಾಸ್ತು_ದೀಪಿಕೆ

No comments:

Post a Comment

If you have any doubts. please let me know...