March 19, 2026

ದೀಪಾವಳಿ ಮತ್ತು ಜ್ಯೋತಿಷ್ಯ

ಭಾದ್ರಪಸದ ಮಾಸದ ಪಿತೃ
ಪಕ್ಷದಲ್ಲಿ ಪಿತೃಗಳಿಗೆ ಋಣ  ಕಾರ್ಯ 
ಮಾಡಿದ ಮೇಲೆ ......ರವಿ ಹಾಗೂ ಚಂದ್ರರು ಮುಂದಿನ ರಾಶಿಯಾದ ತುಲಾಗೆ ಬರುತ್ತಾರೆ..
ರವಿಯು - *ಪಿತೃ* ಲೋಕಕ್ಕೆ ಕಾರಕ
ಚಂದ್ರನು -  *ಚಂದ್ರ*  ಲೋಕಕ್ಕೆ ಕಾರಕ
*ರವಿ* - ತಂದೆಯ ಕಡೆಯ ಮರಣ ಹೊಂದಿದ ಪುರುಷ  ಪಿತೃಗಳು
*ಚಂದ್ರ* - ತಾಯಿಯ ಕಡೆ ಮರಣ ಹೊಂದಿದ ಸ್ತ್ರೀ ಯರ ಪಿತೃಗಳು

ತುಲಾದಲ್ಲಿ ರವಿ ನೀಚನಾಗಿ ಚಂದ್ರನೊಂದಿಗೆ ಅಮಾವಾಸ್ಯೆ ಬಂದರೆ ಅದು ರವಿ ಹಾಗು ಚಂದ್ರರಿಗೆ *ಶಕ್ತಿ ಹೀನ* ವಾಗುವ ಪರಿಸ್ತಿತಿ ..
ಅಂದರೆ  ಪಿತೃದೇವತೆಗಳು ಪಂಚಭೂತವಾದ ಭೂಮಿಯ ಜಗತ್ತಿನಲ್ಲಿ ಶಕ್ತಿಹೀನರಾಗಿ  ಬಲ ಕಳೆದುಕೊಂಡು ತಮ್ಮ ಲೋಕವಾದ ಪಿತೃಲೋಕಕ್ಕೆ ತೆರಳುತ್ತಾರೆ.ಪಿತೃಗಳು ಅವರ ಲೋಕಕ್ಕೆ ಶಾಂತರಾಗಿ ಹೋದರೆ ಇಲ್ಲಿರುವ ಅವರ ವಂಶಸ್ಥರಿಗೆ   *ಶಾಪವಿಮೋಚನೆಯಾಗುತ್ತದೆ* ಕಷ್ಡ ಕಾರ್ಪಣ್ಯ ಬಗೆಹರಿದು ನಿವಾರಣೆಯಾಗಿ *ಹಣ ಸುಖ ಸೌಭಾಗ್ಯಗಳು* ಲಭಿಸುತ್ತವೆ.. 

ಸುಖ - ಹಣಕ್ಕೆ ಕಾರಕ- ಶುಕ್ರ ಶುಕ್ರನ ಅಧಿದೇವತೆ  - ಲಕ್ಷ್ಮೀ  
ವ್ಯವಹಾರ ಚೆನ್ನಾಗಿ ನಡೆದರೆ ಅಪಾರ ಹಣ ಪ್ರಾಪ್ತಿ. ತುಲಾ ರಾಶಿಯು ವ್ಯವಹಾರದ ರಾಶಿಯಾಗಿದೆ ವ್ಯವಹಾರಕ್ಕೆ ಪ್ರತೀಕವಾದ ತಕ್ಕಡಿ ಅದರ ಸಂಕೇತವಾಗಿದೆ. ಅದರ ಸಂಕೇತವಾಗಿ ಅಮಾವಾಸ್ಯೆಯಲ್ಲಿ *ಲಕ್ಷ್ಮಿಪೂಜೆ* ಆಚರಿಸಲಾಗುತ್ತದೆ.

ಪಿತೃಗಳ ಆತ್ಮವು 
*ಜ್ಯೋತಿಯ*
 ರೂಪದಲ್ಲಿ ಇರುತ್ತದೆ . ಆ ಜ್ಯೋತಿಯು ಪಿತೃಲೋಕಕ್ಕೆ ತೆರಳುವ ಸಂಕೇತವಾಗಿ *ದೀಪ* ಹಚ್ಚಲಾಗುತ್ತದೆ.
 
💐 *ಸೂರ್ಯ + ಚಂದ್ರ ಸಂಯೋಗ*.
ಸಂಯೋಗವಾಗುವುದು ಚಿತ್ತಾ ನಕ್ಷತ್ರದಲ್ಲಿ... ಚಿತ್ತಾ ನಕ್ಷತ್ರವು  ವಿಶ್ವಕರ್ಮನ ನಕ್ಷತ್ರ
*ವಾಸ್ತುಶಿಲ್ಪ ವಿದ್ಯೆಯ* ಅಧಿದೇವತೆ. ಈ ವಿದ್ಯೆಯು *ಬೆಳಕು ಹಾಗೂ ಜ್ಯೋತಿಯ* ಸಂಕೇತವಾಗಿದೆ.ನೈಸರ್ಗಿಕ *ಬೆಳಕಿನ ಗ್ರಹಗಳಾದ ರವಿ ಹಾಗೂ ಚಂದ್ರರು ವಿದ್ಯೆ ಎಂಬ ಬೆಳಕಿನೊಡನೆ  ಚಿತ್ತಾ ನಕ್ಷತ್ರದಲ್ಲಿ ಸಂಯೋಗವಾಗುವುದರಿಂದ ಅದರ  ಸಂಕೇತವಾಗಿ ದೀಪ* ಹಚ್ಚಲಾಗುತ್ತದೆ.

💐 *ರಾಕ್ಷಸ ಹಾಗು ದೇವತೆಗಳು*
ತುಲಾರಾಶಿಯ ಒಡೆಯ ಶುಕ್ರ ರಾಕ್ಷಸರ ಪಕ್ಷ  .ಸೂರ್ಯ ಚಂದ್ರರು  ದೇವತೆಗಳ ಪಕ್ಷ. ಅಸುರತ್ವ ನಿಗ್ರಹಿಸಲು ಬೇಕಾದ ಶಕ್ತಿಯನ್ನು  ವಿದ್ಯೆಯು ನೀಡುತ್ತದೆ
ಅದರ ಸಂಕೇತವಾಗಿ *ದೀಪ* ಹಚ್ಚಲಾಗುತ್ತದೆ.

💐 *ರಾಮಾಯಣ..ಹಾಗೂ ದೀಪಾವಳಿ* 
ರವಿ - ರಾಮ 
ಚಂದ್ರ -ಸೀತೆ
ಸೀತೆಯನ್ನು ಅಸುರನಾದ ರಾವಣ ಶನಿ ಅಪಹರಿಸುತ್ತಾನೆ ಅಪಹರಣ ಆರನೇ ಮನೆ . 
ನಂತರ ರಾಮನು ಹನುಮಂತ ಹಾಗೂ ವಾನರರ ಕುಜ ನ ಸಹಾಯ ಪಡೆದು ಯುದ್ದ ಮಾಡಿ ರಾವಣನನ್ನು ವಧೆ ಮಾಡುತ್ತಾನೆ.ವಧೆ ಹಾಗೂ ಯುದ್ದವು  "ಅಷ್ಡಮ " ಅಂದರೆ " ವೃಶ್ಚಿಕ" . ವೃಶ್ಚಿಕಕ್ಕೆ ವ್ಯಯ ರಾಶಿ ತುಲಾ 
ಸೀತೆಯನ್ನು ರಾಮನು ಅಯೋದ್ಯೆಗೆ ಕರೆತರುವಾಗ ತುಲಾರಾಶಿಯ ಅಮಾವಾಸ್ಯೆ ಆಗಿದ್ದಾಗ ಅವರಿಗೆ ದಾರಿ ಕಾಣಲೆಂದು ಪ್ರಜೆಗಳು *ದೀಪ* ಹಚ್ಚಿ ಇಟ್ಟಿದ್ದರು.

💐 *ಭಾಗವತ ಹಾಗು ದೀಪಾವಳಿ*
 ನರಕಾಸುರನ ವಧೆ
ನರಕಾಸುರನ  ನರಕದ ಮನೆ ಅಷ್ಟಮ ಅಂದರೆ ವೃಶ್ಚಿಕ ರಾಶಿ ನರಕಾಸುರನ್ನು ವಧೆ ಮಾಡಿದ್ದು 

ಕೃಷ್ಣ ವೃಶ್ಚಿಕಕ್ಕೆ ಮಾರಕ
ಸ್ತಾನವಾದ ವೃ಼ಷಭ ರಾಶಿಯ  ಸಂಜಾತ
ವಧೆಗೆ ಆರಿಸಿಕೊಂಡ ದಿನ ತುಲಾರಾಶಿಯ ಅಮಾವಾಸ್ಯೆ ಕಾರಣ ವೃಶ್ಚಿಕಕ್ಕೆ ತುಲಾ *ದ್ವಾದಶ* ವ್ಯಯ .ಅಂದರೆ ನಾಶ .ನರಕದ ಅಧಿಪತಿಗೆ ನಾಶದ  ದಿನವನ್ನಾಗಿ ಆರಿಸಿ *ವಧೆ* ಮಾಡಿದ ಕೃಷ್ಣ
ರಾಕ್ಷಸರು - *ಕತ್ತಲೆ ಸಂಕೇತ ಅಸುರತ್ವ ನಾಶವಾದರೆ ಅದು ಬೆಳಕು ಆ ಕಾರಣ ಇಂದು ದೀಪ* ಹಚ್ಚುತ್ತಾರೆ.

ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ *ಅಭೀಂದ್ರ*🙏🏻🙏🏻🙏🏻🙏🏻

March 6, 2026

ಕೋಟಿ ಗಳಿಸಿ ಮನೆ ಮೇಲೊಂದು ಮನೆ

ಅದ್ಭುತವಾದ ಕಥೆ ಇದು ಎಲ್ಲರೂ ತಪ್ಪದೇ ಓದಿರಿ….. ಈ ಕಥೆಯನ್ನು ಓದಿದ ಕೆಲವರಲ್ಲಾದರೂ ಬದಲಾವಣೆ ಯಾಗುತ್ತದೆ. 

    ನಿಜವಾಗಿಯೂ ಇದೊಂದು ಕಣ್ಣು ತೆರೆಸುವಂತಹ ಅದ್ಭುತವಾದ ನೀತಿಕಥೆ. ಒಂದಾನೊಂದು ನಗರದಲ್ಲಿ ಲಕ್ಷ್ಮೀಪತಿ ಎಂಬ ವ್ಯಕ್ತಿ ಇದ್ದನು. ಆತನಿಗೆ ಒಂದು ಸಂಕಲ್ಪವಿದೆ. ಅವರ ಮನೆಯ ಹತ್ತಿರದಲ್ಲಿ ಒಂದು ಸುಂದರವಾದ ಭವನವಿದೆ. ಯಾರದು ಆ ಮನೆ ಎಂದು ಕೇಳಿದರೆ ಯಾರೋ ಕೋಟ್ಯಾಧಿಪತಿಯ ಮನೆ ಎಂಬ ಉತ್ತರ ಬರುತ್ತದೆ. ಆಗ ಅಂದು ಕೊಳ್ಳುತ್ತಾನೆ ಈ ನಗರದಲ್ಲಿರುವ ಕೋಟ್ಯಾಧಿಪತಿಗಳ ಸಾಲಿನಲ್ಲಿ ತಾನೂ ಸೇರಬೇಕು ಎಂದು. ಅದಕ್ಕಾಗಿ ಆತನು ಯುವಕನಾಗಿದ್ದಾಗಿನಿಂದಲೂ ತುಂಬಾ ಕಷ್ಟಪಡುತ್ತಿದ್ದನು. ಹಗಲು ರಾತ್ರಿ ದುಡಿಯುತ್ತಿದ್ದನು. ಸಂಪಾದನೆ ಮಾಡುವುದೇ ಸರ್ವಸ್ವವೆಂದು ಭಾವಿಸಿ ದುಡಿಯುತ್ತಿದ್ದನು.

    40 ವರ್ಷದೊಳಗೆ ಕೋಟ್ಯಾಧಿಪತಿಯಾದನು. ಒಂದು ಕೋಟಿಯ ನಂತರ ಇನ್ನೊಂದು ಕೋಟಿ ಹೀಗೆ 50 ವರ್ಷದೊಳಗೆ ಎಷ್ಟೋ ಕೋಟಿಗಳ ಹಣ ಸಂಪಾದನೆ ಮಾಡಿದ. ಹಿಂದೆ ತಾನು ನೋಡಿದ ಬಂಗಲೆಯಂತಹ 2-3 ಬಂಗಲೆಗಳನ್ನು ಕಟ್ಟಿಸಿದನು. ಆದರೂ ತೃಪ್ತಿಯಾಗಲಿಲ್ಲ. ಈಗಿರುವ ಮನೆಗಳಲ್ಲದೆ, ನಗರದ ಮಧ್ಯಭಾಗದಲ್ಲಿ ತನ್ನ ಶ್ರೀಮಂತಿಕೆಯನ್ನು ಜನರಿಗೆ ತಿಳಿಯುವಂತೆ ಮಾಡಲು ಇಂದ್ರ ಭವನದಂತಹ ಒಂದು ಮನೆಯನ್ನು ಕಟ್ಟಿಸಬೇಕೆಂದು ಅದಕ್ಕಾಗಿ ಮತ್ತಷ್ಟು ಕಷ್ಟಪಟ್ಟು ದುಡಿದನು.

    ಅಂದುಕೊಂಡದ್ದನ್ನು ಸಾಧಿಸಿದನು ಲಕ್ಷ್ಮೀಪತಿ. ನಗರದ ಮಧ್ಯದಭಾಗದಲ್ಲಿ ವಿಶಾಲವಾದ ಸ್ಥಳದಲ್ಲಿ ಅತ್ಯಾಧುನಿಕ ಸೌಲಭ್ಯಗಳಿಂದ ಕೂಡಿದ ಅದ್ಭುತವಾದ ಭವನವನ್ನು ಕಟ್ಟಿಸಿದನು.  ಅದರ ಗೃಹಪ್ರವೇಶದ ದಿನದಂದು ನಗರದ ಪ್ರಮುಖ ವ್ಯಕ್ತಿಗಳೆಲ್ಲರನ್ನು ಆಹ್ವಾನಿಸಿದನು. ಒಂದೊಂದು ದೇಶಕ್ಕೆ ಸಂಬಂದಿಸಿದ ಒಂದೊಂದು ವೈಶಿಷ್ಠತೆಗಳೆಲ್ಲವನ್ನು ಒಂದೇ ಕಡೇ ಹೊಂದಿಸಿದಂತೆ ಆ ಮನೆ ಇರುವುದರಿಂದ ಎಲ್ಲರೂ ಅಬ್ಬಾ! ಎಂದು ಆಶ್ಚರ್ಯಪಟ್ಟರು. ಶಭಾಷ್ ಎಂದು ಲಕ್ಷ್ಮೀಪತಿಯನ್ನು ಅಭಿನಂದಿಸಿದರು.

    ಬಂದಿದ್ದ ಅತಿಥಿಗಳೆಲ್ಲರೂ ಹೋದ ಮೇಲೆ, ಲಕ್ಷ್ಮೀಪತಿ ಮಲಗುವ ಕೋಣೆಗೆ ಹೋಗಿ ಹಾಸಿಗೆ ಮೇಲೆ ಹಾಗೆಯೇ ಮಲಗಿದನು. ಹೆಂಡತಿ ಮಕ್ಕಳು ಇನ್ನೂ ಪೋನ್ ನಲ್ಲಿ ಎಲ್ಲರೊಂದಿಗೆ ಮಾತಾಡುತ್ತಿದ್ದರು. ಮನೆಯ ವೈಭೋಗದ ಬಗ್ಗೆ, ಅಥಿತಿಗಳ ಕಾಮೆಂಟಗ’ಗಳ ಬಗ್ಗೆ, ಮನೆಗೆ ಆದ ಖರ್ಚಿನ ಬಗ್ಗೆ ಅವರು ತಮ್ಮ ಸ್ನೇಹಿತರ ಜೊತೆ ಮಾತನಾಡುತ್ತಿದ್ದರು. ಲಕ್ಷ್ಮೀಪತಿಗೆ ಯಾಕೋ ಇಂದು ಕಣ್ತುಂಬ ನಿದ್ದೆ ಹೋಗಬೇಕೆನ್ನಿಸಿತು.

    ನಿಧಾನವಾಗಿ ಕಣ್ಣು ಮುಚ್ಚುತ್ತಿರುವಾಗ “ನಾನು ಹೋಗುತ್ತೇನೆ” ಎಂದು ಯಾರೋ ಕಿವಿಯಲ್ಲಿ ಹೇಳಿದಂತಾಯಿತು. ಕಣ್ಣು ತೆರೆದು ನೋಡಿದರೆ ಏನೂ ಕಾಣಿಸಲಿಲ್ಲ. ಎಲ್ಲಾ ಕತ್ತಲೆಯಂತಿದೆ. ಯಾರು? ಎಂದನು…. ಲಕ್ಷ್ಮೀಪತಿ. ಆದರೂ ತನ್ನ ಧ್ವನಿಗೆ ಪ್ರತಿಧ್ವನಿ ನೀಡಿದಂತೆ ಆಯಿತು. ನಾನು ನಿನ್ನ ಆತ್ಮ , ನಾನು ಹೋಗುತ್ತಿದ್ದೇನೆ ಎಂದು  ಕೇಳಿ ಬಂದಿತು.

    ಅದೇನು, ನೀನು ಹೋದರೆ ನಾನು ಸತ್ತು ಹೋಗ್ತೀನಿ ಅಲ್ವಾ! ಎಂದು ಗಾಬರಿಯಾದನು ಲಕ್ಷ್ಮೀಪತಿ. ಹೌದು ಎಂದು ಪ್ರತಿಧ್ವನಿಸಿತು. ಆಗ ಆತ್ಮ ಬೇಡ ಹೋಗಬೇಡ! ನೋಡು ಎಷ್ಟು ಸುಂದರವಾದ ಮನೆಯನ್ನು ಕಟ್ಟಿಸಿದ್ದೇನೆ. ಎಷ್ಟು ಹಣ ಸಂಪಾಧನೆ ಮಾಡಿದ್ದೆನೆ. ನೋಡು ಇವೆಲ್ಲಾ ನಿನಗೋಸ್ಕರನೇ ಅಲ್ವಾ! ನಿನ್ನನ್ನು ಸುಖಪಡಿಸುವುದಕ್ಕೆ ಅಲ್ವಾ, ನಿನ್ನ ತೃಪ್ತಿಗಾಗಿಯೇ ಅಲ್ವಾ. ಇರು ನನ್ನಲ್ಲಿದ್ದು ಇವೆಲ್ಲವನ್ನು ಅನುಭವಿಸು ಎಂದನು ಲಕ್ಷ್ಮೀಪತಿ. ಅನುಭವಿಸಬೇಕಾ….? ಹೇಗೆ ಅನಿಭವಿಸಲಿ….? ನಿನ್ನ ಶರೀರಕ್ಕೆ ಡಯಾಬೀಟಿಸ್ ಇರುವುದರಿಂದ ಸಿಹಿ ತಿನ್ನಲು ಆಗುವುದಿಲ್ಲ, ನಿನ್ನ ಶರೀರಕ್ಕೆ BP ಇರುವುದರಿಂದ ಉಪ್ಪು ಕಾರವನ್ನು ತಿನ್ನುವುದಕ್ಕೆ ಆಗುವುದಿಲ್ಲ, ಅದರ ಮೇಲೆ ಇಷ್ಟುವೂ ಇಲ್ಲ. ಇನ್ನೂ ಇಷ್ಟವಾದದ್ದೂ ಏನೂ ತಿನ್ನಲಾರೆ ಏಕೆಂದರೆ ನಿನ್ನ ಶರೀರಕ್ಕೆ ಜೀರ್ಣಮಾಡಿಕೊಳ್ಳಲು ಆಗುವುದಿಲ್ಲ. ನಿನ್ನ ಶರೀರವು ಒಟ್ಟಾರೆಯಾಗಿ ಕಣ್ಣಿನಿಂದ ಕಾಲಿನ ಏರೆಗೂ ಒಂದು ರೀತಿಯ ರೋಗಗಳ ಹುತ್ತವಾಗಿದೆ.

    ಆ ಹೊಟ್ಟೆ ನೋಡು ಹೇಗೆ ಮುಂದಕ್ಕೆ ಬಂದಿದೆ. ಹೆಜ್ಜೆ ತೆಗೆದು ಮರು ಹೆಜ್ಜೆಹಾಕುವುದಕ್ಕೆ ನೀನು ಎಷ್ಟು ಆಯಾಸ ಪಡುತ್ತೀಯಾ ಎಂಬುದು ನಮ್ಮಿಬ್ಬರಿಗೂ ಗೊತ್ತು. ನೀನೇ ಹೇಳು ನಿನ್ನ ಶರೀರದಲ್ಲಿ ಹೇಗಿರಲಿ…? ಅಲ್ಲಲ್ಲಿ ಶಿಥಿಲವಾಗಿರುವ ಮನೆಯಲ್ಲಿ ಯಾರಾದ್ರು ಇರ್ತಾರಾ…? ನೀನು ಕಟ್ಟಿಸಿದ ಸುಂಧರವಾದ ಮನೆಯಿಂದ ನನಗೇನು ಸಂಬಂಧ…? ನಾನಿರುವುದು ನಿನ್ನ ಶರೀರದಲ್ಲಿ, ಅದೇ ನನ್ನ ನಿವಾಸಸ್ಥಳ. ನನ್ನ ಮನೆಗೆ ಇರುವ ಒಂಭತ್ತು ದ್ವಾರಗಳಿಗೂ ಸಮಸ್ಯೆಗಳೇ, ನನಗೆ ರಕ್ಷಣೆ ಇಲ್ಲ, ಸುಖವಿಲ್ಲ, ಎಲ್ಲಕ್ಕಿಂತ ಮಿಗಿಲಾಗಿ, ನಿನಗೆ ಮೊದಲಿಗೆ ಬಂದತಹ ಖಾಯಿಲೆ, ಹಣದ ಖಾಯಿಲೆ ‌.

    ಹಣದ ಖಾಯಿಲೆ ನಿನಗೆ ಬಂದಂದಿನಿಂದ, ನನ್ನನು ಒಮ್ಮೆಯಾದರೂ ನಿದ್ದೆ ಮಾಡಲು ಬಿಟ್ಟಿದ್ದೀಯಾ…? ನಾನಿರುವ ಶರೀರಕ್ಕೆ ಸ್ವಲ್ಪವಾದರೂ ವಿಶ್ರಾಂತಿ ನೀಡಿದ್ದೀಯಾ….? ಪ್ರತೀಕ್ಷಣವೂ ಇನ್ನೊಬ್ಬನಿಗೆ ಪೈಪೋಟಿಯಾಗಿ ನನ್ನಲ್ಲಿ ಅಸೂಯೆಯನ್ನು ತುಂಬಿದ್ದೀಯಾ…? ಇನ್ನೊಬ್ಬನನ್ನು ಹಿಂದೆ ತಳ್ಳಲು ನನ್ನಿಂದ ಕುತಂತ್ರಗಳನ್ನು ಮಾಡಿಸಿದೆ. ಎಷ್ಟೋ ಸಾರಿ ನನ್ನನ್ನು ಹಗೆಯಿಂದ, ಹೊಟ್ಟೆಕಿಚ್ಚಿನಿಂದ, ಎಷ್ಟು ನೋಯಿಸಿದೆಯೋ ಒಂದುಸಾರಿ ನೆನಪುಮಾಡಿಕೋ… ರೋಗಗಳು ಆವರಿಸಿದರೂ, ಎಂದಾದರೂ ಗಮನ ಹರಿಸಿದೆಯಾ? ಯೋಚನೆ ಮಾಡಿ ನೋಡು. ಇನ್ನೂ ಒಂದು ಕ್ಷಣವೂ ನಾನು ನಿನ್ನ ಶರೀರದಲ್ಲಿ ಇರುವುದಿಲ್ಲ. ನಾನು ಹೋಗುತ್ತಿದ್ದೇನೆ…!” ಎಂದು ಆ ರಾತ್ರಿ ತಾನು ಸಂಪಾದನೆ ಮಾಡಿರುವ ಲಕ್ಷ್ಮೀಯನ್ನು ಇಲ್ಲಿಯೇ ಬಿಟ್ಟು ಲಕ್ಷ್ಮೀಪತಿ ಸ್ವರ್ಗಕ್ಕೋ ನರಕಕ್ಕೋ ಯಾವುದೋ ಒಂದು ಲೋಕಕ್ಕೆ ಕಾಣದಂತಹ ಲೋಕಕ್ಕೆ ಹೋಗಿಬಿಟ್ಟನು.

    ಇಂದು ಪ್ರತಿ ಮನುಷ್ಯನಿಗೂ ನಾಳೆಯ ಬಗ್ಗೆ ಆಲೋಚನೆ ಅಧಿಕವಾಗಿದೆ. ಆದ್ದರಿಂದ ಈ ದಿನ, ಈ ಕ್ಷಣವನ್ನು ಆನಂದದಿಂದ ಅನಿಭವಿಸುವುದನ್ನು ಮರೆತಿದ್ದಾನೆ. ದೇವರು ಕೊಟ್ಟ ಆರೋಗ್ಯವೇ ಮಹಾಭಾಗ್ಯ ಎಂಬ ವಿಷಯವನ್ನು ಮರೆತು, ಮನುಷ್ಯ ಸೃಷ್ಠಿಸಿಕೊಂಡ ಹಣವನ್ನೇ ಭಾಗ್ಯವೆಂದುಕೊಳ್ಳುತ್ತಿದ್ದಾನೆ. ಒಂದು ಮಾತಿನಲ್ಲಿ ಹೇಳುವುದಾದರೆ, ರೋಗಗಳನ್ನು ಬರಲೆಂದು ಆಹ್ವಾನ ನೀಡಿ,  ಅವು ಬಂದಾಗ ಖರ್ಚು ಮಾಡಲು ಕಷ್ಟಪಟ್ಟು ಹಣಸಂಪಾದನೆ ಮಾಡುತ್ತಿದ್ದಾನೆ. ನಮ್ಮ ಅವಶ್ಯಕತೆಗಳನ್ನು ನೀಗಿಸಿಕೊಳ್ಳಲು ಕಷ್ಟಪಡಬೇಕು. ಆನಂದಿಸಲು ಕಷ್ಟಪಡಬೇಕು. ನಾವು ಇರುವ ಜೀವನಕ್ಕಾಗಿ ಕಷ್ಟಪಡಬೇಕು. ಅಷ್ಟೇ ಆಗಲಿ ನಾವು ಹೋದ ನಂತರದ ಜೀವನಕ್ಕಾಗಿ ಕಷ್ಟ ಪಡುವುದರಲ್ಲಿ ಏನಾದರೂ ಅರ್ಥವಿದೆಯೇ….?             

ಕೃಪೆ:-ಮುಖ ಪುಸ್ತಕ.
ಸಂಗ್ರಹ:- ಶ್ರೀ ಮಲ್ಲಿಕಾರ್ಜುನ ಎಸ್ ಬಿರಾದಾರ ಸೊನ್ನ

March 5, 2026

ಬ್ರೇಕ್ ಇರುವುದು ಕಾರು ನಿಲ್ಲಿಸುವುದಕ್ಕಲ್ಲ

ಅದು ಪಿಯುಸಿಯ ಒಂದು ಕ್ಲಾಸ್. ಭೌತಶಾಸ್ತ್ರ ಉಪನ್ಯಾಸಕ ವಿದ್ಯಾರ್ಥಿಗಳಿಗೆ ಒಂದು ಪ್ರಶ್ನೆ ಕೇಳಿದರು: ನಮ್ಮ ಕಾರುಗಳಲ್ಲಿ ಬ್ರೇಕ್‍ಗಳು ಯಾಕಿರ್ತವೆ ಅಂತ ಹೇಳಿನೋಡೋಣ.
ಎಲ್ಲ ಮಕ್ಕಳಿಗೆ ವಿಚಿತ್ರ ಅನಿಸಿತು.. ಇದೆಂಥ ಪ್ರಶ್ನೆ ಅಂತ. ಒಬ್ಬ ವಿದ್ಯಾರ್ಥಿ ಕೂಡಲೇ ಎದ್ದು ನಿಂತು ಹೇಳಿದ: ಸರ್ ಬ್ರೇಕುಗಳಿರುವುದು  ಕಾರನ್ನು ನಿಲ್ಲಿಸಲು.
ಇನ್ನೊಬ್ಬ ಹೇಳಿದ: ಕಾರಿನ ವೇಗವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು.
ಒಬ್ಬ ವಿದ್ಯಾರ್ಥಿ ಅಪಘಾತ ಆಗುವುದನ್ನು ತಪ್ಪಿಸಲಿಕ್ಕೆ.. ಡಿಕ್ಕಿ ಹೊಡೆಯೋದು ತಪ್ಪುತ್ತದೆ ಎಂದು ಹೇಳಿದ.
ಹೀಗೆ ವಿದ್ಯಾರ್ಥಿಗಳು ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದರು. ಎಲ್ಲರ ಉತ್ತರಗಳೂ ಬಹುತೇಕ ಒಂದೇ ರೀತಿ ಇದ್ದವು.
ಆಗ ಉಪನ್ಯಾಸಕರು ತಾವೇ ಉತ್ತರ ನೀಡಲು ಮುಂದಾದರು.
`ನೀವೆಲ್ಲ ಸರಿಯಾದ ಉತ್ತರಗಳನ್ನೇ ನೀಡಿದ್ದೀರಿ. ನಿಮ್ಮ ಯೋಚನಾ  ಶಕ್ತಿ ನನಗೆ ಖುಷಿಯಾಯಿತು. ಆದರೆ, ಇದಕ್ಕಿಂತಲೂ ಮಿಗಿಲಾದ ದೊಡ್ಡ ಕಾರಣವೊಂದಿದೆ'-ಎಂದು ಹೇಳಿದಾಗ ವಿದ್ಯಾರ್ಥಿಗಳಿಗೆ ಅಚ್ಚರಿ. ಇನ್ನೇನಿರುತ್ತದೆ ಅಂತ.

ಬ್ರೇಕ್ ಇರುವುದು ಕಾರನ್ನು ಅತ್ಯಂತ ವೇಗವಾಗಿ ಓಡಿಸಲಿಕ್ಕೆ !
ಹೀಗೆಂದು ಪವನ್ ಪ್ರಸಾದ್ ಹೇಳಿದಾಗ ವಿದ್ಯಾರ್ಥಿಗಳು ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡರು. ಕ್ಲಾಸಿನಲ್ಲಿ ಒಂದು ಗಾಢ ಮೌನ. ಯಾಕೆಂದರೆ, ಯಾರು ಕೂಡಾ ಈ ಉತ್ತರವನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೆ, ವೇಗವಾಗಿ ಹೋಗಲು ಬೇಕಿರುವುದು ಎಕ್ಸಿಲೇಟರ್ ಅಲ್ವಾ? ಬ್ರೇಕ್ ಹೇಗಾಗ್ತದೆ ಎಂಬ ಪ್ರಶ್ನೆ ಅವರೆಲ್ಲರನ್ನೂ ಕಾಡಿತು.
ಉಪನ್ಯಾಸಕರು ತಾವೇ ಉತ್ತರಿಸಲು ಶುರು ಮಾಡಿದರು.
ಸುಮ್ಮನೆ ಕಲ್ಪನೆ ಮಾಡಿಕೊಳ್ಳಿ. ಕಾರಿಗೆ ಬ್ರೇಕೇ ಇಲ್ಲ ಅಂತಿದ್ರೆ ನೀವು ಕಾರನ್ನು ಎಷ್ಟು ವೇಗವಾಗಿ ಓಡಿಸುತ್ತೀರಿ? ಬ್ರೇಕ್ ಫೇಲ್ ಆಗಿರೋ ಕಾರು ಕೊಡ್ತೇನೆ ಅಂತಿಟ್ಕೊಳ್ಳಿ.
ವೇಗ ಬಿಡಿ, ಒಂದು ಮೀಟರ್ ಮುಂದೆ ಕೂಡಾ ಹೋಗುವುದಿಲ್ಲ ಅಲ್ವೇ? ಒಂದು ಕಾರನ್ನು ವೇಗವಾಗಿ ಓಡಿಸಲು ನಮಗೆ ಧೈರ್ಯ ನೀಡುವುದು ಅದಕ್ಕೊಂದು ಬ್ರೇಕ್ ಇದೆ ಎನ್ನುವ ನಂಬಿಕೆ ಅಲ್ವೇ? ಏನೇ ಆದರೂ ಬ್ರೇಕ್ ಇದೆ ಎನ್ನುವ ನಂಬಿಕೆಯಿಂದ ಅಲ್ಲವೇ ಕಾರನ್ನು 100, 200 ಕಿ.ಮೀ. ವೇಗದಲ್ಲಿ ಓಡಿಸುವುದು?
ಮುಂದುವರಿಸಿ.... ನಮ್ಮ ಬದುಕಿನಲ್ಲೂ ಅಷ್ಟೆ ಕೆಲವೊಂದು ಬ್ರೇಕ್‍ಗಳಿರ್ತವೆ. ಹೆತ್ತವರು, ಶಿಕ್ಷಕರು, ಸ್ನೇಹಿತರು ಎಲ್ಲರೂ ನಮ್ಮನ್ನು ಪ್ರಶ್ನೆ ಮಾಡ್ತಾರೆ. ಎಲ್ಲಿ ಹೋಗ್ತಾ ಇದ್ದೀಯಾ, ಏನ್ಮಾಡ್ತಾ ಇದೀಯಾ, ಮುಂದೇನು ಮಾಡ್ತೀಯಾ ಅಂತೆಲ್ಲ. ಇದೆಲ್ಲ ನಮಗೆ ಕಿರಿಕಿರಿ ಅನಿಸ್ತಾ ಇರ್ತದೆ. ಇದೆಲ್ಲ ನಮಗೆ ಅಡೆತಡೆ ಎಂದೇ ನಾವು ಭಾವಿಸುತ್ತೇವೆ.
ಆದರೆ, ಇವೇ ಪ್ರಶ್ನೆಗಳು ನಾವು ಹೋಗ್ತಾ ಇರುವ ದಾರಿ ಸರಿ ಇದೆಯಾ? ಎಷ್ಟು ವೇಗವಾಗಿ ಹೋಗ್ತಾ ಇದೇವೆ (ಹೋಮ್ ವರ್ಕ್ ಕಂಪ್ಲೀಟ್ ಆಯ್ತಾ?), ದಾರಿ ತಪ್ಪಿದ್ದೇವಾ ಎನ್ನುವುದನ್ನು ಅವಲೋಕನ ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತವೆ.
 ನಾವು ಬ್ರೇಕ್ ಅಂದುಕೊಂಡಿದ್ದು ನಿಜದಲ್ಲಿ ನಮ್ಮ ಬದುಕಿನ ದಿಕ್ಕನ್ನು ನಿರ್ಧರಿಸುತ್ತಾ ಇರುತ್ತದೆ. ತಪ್ಪಿದ್ದರೆ ಸರಿ ಮಾಡಿಕೊಳ್ಳಲು ಅವಕಾಶ ಕೊಡುತ್ತದೆ. ವೇಗವರ್ಧಕವಾಗಿ ಕೆಲಸ ಮಾಡುತ್ತದೆ. ಎಲ್ಲೂ ಆಕ್ಸಿಡೆಂಟ್ ಆಗದಂತೆ ನೋಡಿಕೊಳ್ಳುತ್ತದೆ.
ಅಂತ ಹೇಳಿ ಉಪನ್ಯಾಸಕರು ಮಕ್ಕಳ ಮುಖ ಮುಖ ನೋಡಿದರು. ಹೌದಲ್ವಾ ಅನ್ನುವ ಅಚ್ಚರಿ ಮಕ್ಕಳ ಮುಖದಲ್ಲಿತ್ತು.

#ಓದಿದ್ದು

March 3, 2026

ದಶಾಸಂಧಿ ಶಾಂತಿಗಳು

ದಶಾಸಂಧಿ ಕಾಲವು ಯಾವಾಗ ಬರುತ್ತದೆ ?
 
ದಕ್ಷಿಣಭಾರತದಲ್ಲಿ ಪ್ರಸಿದ್ಧವಾಗಿರುವುದು ವಿಂಶೋತ್ತರೀ ದಶಾ ಪದ್ಧತಿ. ನಾಕ್ಷತ್ರ ದಶಾ ,ಉಡುದಶಾ ಎಂದರೂ ಇದೇ ದಶಾಪದ್ಧತಿಯೇ ಆಗಿದೆ. ಇದು  ಜ್ಯೋತಿಷ ಶಾಸ್ತ್ರದ ಅಷ್ಟಾದಶ ಪ್ರವರ್ತಕರಲ್ಲಿ ಒಬ್ಬರಾದ ಪರಾಶರ ಮಹರ್ಷಿ ಪ್ರೋಕ್ತವಾದದ್ದು. ಇಲ್ಲಿ ರವಿಯಿಂದ ಶುಕ್ರನವರೆಗೆ ಒಂಭತ್ತು ದಶೆಗಳಿದ್ದು ಈ ದಶೆಗಳ ವಿರಾಮಕಾಲವೇ ದಶಾಸಂಧಿ ಕಾಲಗಳಾಗಿವೆ.

ಈ ದಶಾಸಂಧಿಕಾಲಗಳು ಅಶುಭಪ್ರದವೇ ?  ಈ ಕುರಿತು ಜ್ಯೋತಿಷ ಶಾಸ್ತ್ರದ ಮೂಲಗ್ರಂಥಗಳು ಏನು ಹೇಳುತ್ತವೆ ?

ಪ್ರಶ್ನಮಾರ್ಗ ಗ್ರಂಥವು ಎಲ್ಲಾ ದಶೆಗಳ ಅಂತ್ಯವು ಅಶುಭವೆಂದೂ, ದೋಷಪ್ರದವಾಗಿದ್ದರೆ ಮತ್ತೂ ಅಶುಭಪ್ರದವೆಂದು ಹೇಳುತ್ತದೆ. ಎರಡು, ಮೂರಕ್ಕಿಂತಲೂ ಅಧಿಕ ದಶಾಪದ್ಧತಿಗಳ ದಶಾಂತ್ಯವೂ ಏಕಕಾಲಕ್ಕೆ ಬಂದರೆ ಕಷ್ಟಪ್ರದವೆಂದು ಹೇಳಿದೆ.  ಅನೇಕ ಪ್ರಮಾಣಗ್ರಂಥಗಳಲ್ಲಿ ದಶಾನಾಥಗ್ರಹವು 6 8 12 ರಲ್ಲಿದ್ದರೆ, ಈ ಭಾವಗಳ ಅಧಿಪತಿಗಳ ಜೊತೆಗಿದ್ದರೆ, ಈ ಗ್ರಹವೇ 6 8 12 ರ ಅಧಿಪತಿಯಾಗಿದ್ದರೆ, ನೀಚಕ್ಷೇತ್ರ, ಶತ್ರುಕ್ಷೇತ್ರದಲ್ಲಿದ್ದರೆ, ಪಾಪಗ್ರಹ ಆಗಿದ್ದರೆ.........ಹೀಗೆ ಅನೇಕ ನಿಮಿತ್ತವನ್ನು ಹೇಳಿ ಆ ಸ್ಥಿತಿಯಿದ್ದಾಗ ಆ ದಶೆಯಲ್ಲಿ ವ್ಯಕ್ತಿಗೆ ಅಶುಭ ಫಲಗಳು  ಸಂಭವಿಸುತ್ತವೆಯೆಂದು ಹೇಳಿವೆ.  ಇವು ಆ ಗ್ರಹನದಶೆಯ ಆರಂಭದಿಂದ ಅಂತ್ಯದವರೆಗೂ ಸಂಭವಿಸಬಹುದಾದ ಅನಿಷ್ಟಗಳಾಗಿವೆ. ಇದರಲ್ಲಿ ದಶಾಸಂಧಿಕಾಲವೂ ಸೇರಿದೆ. 

ಅನಿಷ್ಟಪ್ರದ ದಶೆಯೆಂದು ಕಂಡುಬಂದಾಗ  ಶಾಂತಿ ಮಾಡಬೇಕೇ ?  ಯಾವಾಗ ಶಾಂತಿಯನ್ನು ಮಾಡಬೇಕು ?

ಆಯಾ ಗ್ರಹಸೂಚಿತ ಅನಿಷ್ಟವನ್ನು ವ್ಯಕ್ತಿಯು ಅನುಭವಿಸಬೇಕಾಗಿರುವುದರಿಂದ ಆ ಅನಿಷ್ಟವನ್ನು ಕಡಿಮೆ ಮಾಡಿಕೊಳ್ಳಲು ದಶೆಯ ಆರಂಭದಲ್ಲೇ ಶಾಂತಿಯನ್ನು ಮಾಡಬೇಕು. ಯಾವ ಶಾಂತಿಯನ್ನು ಮಾಡಬೇಕೆಂಬುದರ ಬಗ್ಗೆ ಜ್ಯೋತಿಷಶಾಸ್ತ್ರದಲ್ಲಿ    ಹೇಳಿರುವುದು ಸ್ವಲ್ಪ‌ ಮಾತ್ರ.   ವೈದಿಕ ಪ್ರಯೋಗ ಗ್ರಂಥಗಳನ್ನು, ತಂತ್ರಶಾಸ್ತ್ರದ  ಗ್ರಂಥಗಳನ್ನು ಆಶ್ರಯಿಸಿ ಜ್ಯೋತಿಷಿಯು ಯಾವ ಶಾಂತಿಯೆಂದು ನಿರ್ಧರಿಸಿ ಹೇಳಬೇಕಾಗುತ್ತದೆ. ಶಾಂತಿಯೆಂದರೆ ಜಪ, ಪೂಜೆ, ಹೋಮ, ಸ್ತುತಿ ಇತ್ಯಾದಿ ಯಾವುದೂ ಆಗಬಹುದು. ಈ ಶಾಂತಿಗಳಲ್ಲಿ ನವಗ್ರಹ ಶಾಂತಿ, ಪ್ರತ್ಯೇಕ ಗ್ರಹಶಾಂತಿ, ವೇದ ಮತ್ತು ತಂತ್ರಗಳಲ್ಲಿ ಪ್ರೋಕ್ತವಾದ ಮೃತ್ಯುಂಜಯ ಹೋಮ, ರುದ್ರಹೋಮವೇ ಮುಂತಾದ ತತ್ತದ್ದೇವತಾ ಅನುಷ್ಠಾನಗಳು ಸೇರಿವೆ.  ದಶಾಸಂಧಿಯಲ್ಲೂ ಆ ಗ್ರಹನು ಅರಿಷ್ಟಸೂಚಕನಾಗಿದ್ದರೆ ಸಂಧಿಕಾಲಕ್ಕೆ ಮುಂಚಿತವಾಗಿ ಶಾಂತಿಯನ್ನು ಮಾಡಬೇಕು. ಇದು ಎಲ್ಲಾ ಒಂಭತ್ತು ದಶೆಗಳ ಸಂಧಿಕಾಲಕ್ಕೂ ಅನ್ವಯಿಸುತ್ತದೆ. 

ಇಲ್ಲಿ ಕುಜ -ರಾಹು / ರಾಹು -ಬೃಹಸ್ಪತಿ / ಶುಕ್ರ -  ಆದಿತ್ಯ ಗ್ರಹಗಳು ಪರಸ್ಪರ ವಿರೋಧಿಗಳಾದ್ದರಿಂದ ಆ ಕಾಲದಲ್ಲಿ ಮಾತ್ರ ಸಂಧಿಶಾಂತಿ ಹೋಮವನ್ನು ಹೇಳಿದ್ದಾರಲ್ಲವೇ ? ಇದೇ ಸತ್ಯವೆಂದು ಕಾಣುತ್ತದೆ.  ಈ ಕುರಿತು ಜ್ಯೋತಿಷ ಗ್ರಂಥಗಳು ಏನು ಹೇಳಿವೆ ?

ಬೃಹಜ್ಜಾತಕ, ಜಾತಕ ಪಾರಿಜಾತ, ಫಲದೀಪಿಕಾ, ಸಾರಾವಲೀ,  ಉತ್ತರ ಕಾಲಾಮೃತ ಮುಂತಾದ ಜ್ಯೋತಿಷದ ಪ್ರಮಾಣ ಗ್ರಂಥಗಳಲ್ಲಿ ಈ ಮೂರು ದಶಾಸಂಧಿಗಳು ಮಾತ್ರ ವಿಶೇಷ ಅನಿಷ್ಟಪ್ರದವೆಂಬ ಉಕ್ತಿಯೇ ಇಲ್ಲ. ವಿಂಶೋತ್ತರೀ ದಶಾಪದ್ಧತಿಯನ್ನು ಹೇಳಿದ ಪರಾಶರ ಹೋರೆಯಲ್ಲಿಯೇ ಈ ಮೂರು ದಶಾಂತ್ಯಗಳು ಮಾತ್ರ ಅಶುಭಪ್ರದವೆಂಬ ಉಲ್ಲೇಖವಿಲ್ಲ. ಅಲ್ಲದೆ ದಶಾನಾಥ, ಭುಕ್ತಿನಾಥರ ಪರಸ್ಪರ ಸಂಬಂಧಗಳಿಂದ ಇಷ್ಟ, ಅನಿಷ್ಟ ಫಲಗಳನ್ನು ಹೇಳಿದ್ದಾರೆಯೇ ಹೊರತು ಎರಡು ದಶಾಧಿಪತಿಗಳ ಪರಸ್ಪರ ಸಂಬಂಧದಿಂದ ಶುಭಾಶುಭ ಫಲಗಳನ್ನು ಪ್ರಮಾಣ ಗ್ರಂಥಗಳು ಹೇಳಿಲ್ಲ! ರಾಹು ಛಾಯಾಗ್ರಹನಾದ್ದರಿಂದ ಆತನ ಶತೃತ್ವ, ಮಿತ್ರತ್ವಗಳೂ ಪ್ರಧಾನವಲ್ಲ. ಬಹುಗ್ರಂಥಗಳು ಸಪ್ತಗ್ರಹಗಳ ಶತೃತ್ವ, ಮಿತ್ರತ್ವಗಳನ್ನು ಮಾತ್ರ ಹೇಳಿವೆ. ಎರಡು ದಶಾನಾಥರ ಪರಸ್ಪರ ಸಂಬಂಧದಿಂದ ಫಲವನ್ನು ಹೇಳಿಲ್ಲವಾದ್ದರಿಂದ ಈ ಮೂರು ದಶಾಸಂಧಿಗಳಿಗೆ ಈ ಶತೃತ್ವ, ಮಿತ್ರತ್ವಗಳು  ಅನ್ವಯಿಸುವುದಿಲ್ಲ.

ಈ ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ ಸಂಧಿಶಾಂತಿ ಹೋಮಗಳ ಬಗ್ಗೆ ಪ್ರಾಚೀನ ಗ್ರಂಥಗಳು ಏನು ಹೇಳುತ್ತವೆ ?

ಶಾಂತಿಯ ಕುರಿತಾದ ಪ್ರಾಚೀನ ಗ್ರಂಥಗಳಾದ ಶಾಂತಿಸಾರ, ಶಾಂತಿರತ್ನ, ಶಾಂತಿ ಮಯೂಖ ಹಾಗೂ ಪ್ರಸಿದ್ಧ ಪ್ರಯೋಗ ಗ್ರಂಥಗಳಾದ ವಿಧಾನ ಪಾರಿಜಾತ, ಪ್ರಯೋಗ ಪಾರಿಜಾತ, ಋಗ್ವೇದೀಯ ಬ್ರಹ್ಮಕರ್ಮಸಮುಚ್ಚಯ,  ಹಿರಣ್ಯಕೇಶೀಯ ಬ್ರಹ್ಮಕರ್ಮಸಮುಚ್ಚಯ ಮುಂತಾದ ವುಗಳಲ್ಲಿ ಈಗ ಪ್ರಚಲಿತದಲ್ಲಿರುವ ಸಂಧಿಶಾಂತಿ ಹೋಮಗಳು ಪ್ರೋಕ್ತವಾಗಿಲ್ಲ.  ಈ ಗ್ರಂಥಗಳು ನವಗ್ರಹಶಾಂತಿ ಹೋಮವನ್ನು ಹೇಳಿವೆ. ಜ್ಯೋತಿಷದ ಕೆಲವು ಗ್ರಂಥಗಳಲ್ಲಿ, ಶಾಂತಿ ಮತ್ತು ಪ್ರಯೋಗ ಗ್ರಂಥಗಳಲ್ಲಿಯೂ ಸಹ  ಗ್ರಹವು ದುಃಸ್ಥವಾಗಿದ್ದಾಗ ಪ್ರತ್ಯೇಕ ಗ್ರಹಶಾಂತಿಯನ್ನು ವಿಧಿಸಿರುವುದು ಕಂಡುಬರುತ್ತದೆ. . "ಯಶ್ಚ ಯಸ್ಯ ಯದಾ ದುಃಸ್ಥಃ ಸ ತಂ ಯತ್ನೇನ ಪೂಜಯೇತ್*" ಎಂಬ ಯಾಜ್ಞವಲ್ಕ್ಯ ಸ್ಮೃತಿವಾಕ್ಯವೂ ಕೂಡ ಇದನ್ನು ಪುಷ್ಟೀಕರಿಸುತ್ತದೆ. ಈ ಯಾವ ಗ್ರಂಥಗಳೂ ಸುಸ್ಥ ಗ್ರಹನಿಗೆ ಶಾಂತಿಯನ್ನು ಮಾಡಲು ಹೇಳಿಲ್ಲ ಎಂಬುದು ಗಮನಾರ್ಹ. (ನವಗ್ರಹಶಾಂತಿ ಮಾಡಬಹುದು)
ಈ ಪ್ರತ್ಯೇಕ ಗ್ರಹಶಾಂತಿಗಳನ್ನು ಅನಿಷ್ಟಸೂಚಕ ಗ್ರಹದ ದಶೆಯ ಆರಂಭದಲ್ಲೇ ಮಾಡಬೇಕು. ದಶೆಯ ಸಂಧಿಕಾಲದಲ್ಲಿಯೂ ಮುಂಚಿತವಾಗಿ ಮಾಡಬಹುದು. ಇದು ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ ದಶಾಸಂಧಿಗಳಿಗೆ ಮಾತ್ರ ಅನ್ವಯವಲ್ಲ. ಎಲ್ಲ ದಶೆಗಳಿಗೂ ಸಮಾನವಾಗಿ ಅನ್ವಯ. ಇನ್ನು  ಬೋಧಾಯನ ಗೃಹ್ಯಸೂತ್ರದಲ್ಲಿ ನವಗ್ರಹ ಪೂಜೆ ಮತ್ತು ನವಗ್ರಹಶಾಂತಿಯೂ ಸಹ ಉಕ್ತವಾಗಿದ್ದು ಅಲ್ಲಿ ಒಂದೋ, ಎರಡೋ ಗ್ರಹರು ವಿಷಮಸ್ಥರಾಗಿರುವಾಗ ಆ ಗ್ರಹಗಳನ್ನು ಮಾತ್ರ ಅರ್ಚಿಸುವಂತಿಲ್ಲ. ಎಲ್ಲಾ ಗ್ರಹರನ್ನೂ ಅರ್ಚಿಸಬೇಕು ಎಂಬ ನಿರ್ದೇಶವಿದೆ. ಇಲ್ಲಿ ನವಗ್ರಹಶಾಂತಿಯ ಅನಂತರ ಪುನಃ ಅನಿಷ್ಟಸ್ಥಿತ ಗ್ರಹರನ್ನು ಮಾತ್ರ ಅರ್ಚಿಸುವಂತಿಲ್ಲ. ಆಗಲೂ ಎಲ್ಲ ಗ್ರಹರನ್ನೂ ಅರ್ಚಿಸಬೇಕು. ಆಗ ನವಗ್ರಹಶಾಂತಿ ಪೂರ್ವಕ ನವಗ್ರಹಶಾಂತಿ ಮಾಡಬೇಕಾಗುತ್ತದೆ. 

ಪ್ರಾಚೀನವಾದ  ಶಾಂತಿ ಮತ್ತು ಪ್ರಯೋಗ ಗ್ರಂಥಗಳಲ್ಲಿ ಈ ಮೂರು ಸಂಧಿಶಾಂತಿ ಹೋಮಗಳನ್ನು ಹೇಳದಿದ್ದರೂ ಈಗ ರೂಢಿಯಲ್ಲಿರುವ ಮೂರು ಸಂಧಿಶಾಂತಿ ಹೋಮಗಳು ಶೌನಕ ಮಹರ್ಷಿಯ ವಚನಗಳನ್ನು ಆಧರಿಸಿಯೇ ರೂಪುಗೊಂಡಿವೆಯಲ್ಲವೇ ?

    ಶೌನಕೀಯವಾದ ಮೂಲಗ್ರಂಥಗಳಲ್ಲಿ ಈ ಸಂಧಿಶಾಂತಿ ಹೋಮಗಳ ವಿಧಿ ಇರುವುದು ಇಲ್ಲಿಯವರೆಗೆ ಲಭ್ಯವಾಗಿಲ್ಲ. ಪ್ರಸಿದ್ಧ ಮತ್ತು ಬೃಹತ್ ಗ್ರಂಥವಾದ ವಿಧಾನ ಪಾರಿಜಾತದಲ್ಲಿ ಗ್ರಹಯಜ್ಞವು ಬಹು ವಿಸ್ತಾರವಾಗಿ ಉಕ್ತವಾಗಿದ್ದು ಅದರಲ್ಲಿ ನವಗ್ರಹಶಾಂತಿ ಕುರಿತಾದ ಶೌನಕೀಯ ವಚನಗಳು ಲಭ್ಯವಿದೆ. ನಿತ್ಯ, ನೈಮಿತ್ತಿಕ ಮತ್ತು ಕಾಮ್ಯವಾಗಿ ನವಗ್ರಹಶಾಂತಿಯನ್ನು ಶೌನಕ ಮಹರ್ಷಿಗಳು ಹೇಳಿದ್ದು ಗ್ರಹರ ಉಗ್ರಚೇಷ್ಟೆಯಲ್ಲಿ (ಅನಿಷ್ಟಸ್ಥಿತಿಯಲ್ಲಿ) ನವಗ್ರಹಶಾಂತಿಯನ್ನು  ಹೇಳಿದ್ದಾರೆ. ಅದೇ ವಿಧಾನಪಾರಿಜಾತದಲ್ಲಿ -  ಪುತ್ರಿಯ ವಿವಾಹ ಸಂದರ್ಭದಲ್ಲಿ ಮತ್ತು ಪುತ್ರನ ಉಪನಯನ ಸಮಯದಲ್ಲಿ ಗುರುಬಲ ಹಾಗೂ ರವಿಬಲ ಇಲ್ಲದಿದ್ದರೆ ಕ್ರಮವಾಗಿ  ಬೃಹಸ್ಪತಿ ಶಾಂತಿಹೋಮ ಮತ್ತು ರವಿಶಾಂತಿ ಹೋಮಗಳನ್ನು ಶೌನಕ ಋಷಿಪ್ರೋಕ್ತವೆಂದೇ  ಉಲ್ಲೇಖಿಸಿದ್ದಾರೆ. ಈ ಆದಿತ್ಯ ಶಾಂತಿ, ಬೃಹಸ್ಪತಿ ಶಾಂತಿಗಳನ್ನು ಪ್ರಯೋಗ ಪಾರಿಜಾತ ಮತ್ತು ಶಾಂತಿರತ್ನ ಗ್ರಂಥಗಳೂ ಕೂಡ ಶೌನಕಪ್ರಣೀತವೆಂದೇ ಹೇಳಿವೆ. ಪಾಂಡುರಂಗ ವಾಮನ ಕಾಣೆಯವರು "ಧರ್ಮಶಾಸ್ತ್ರದ ಇತಿಹಾಸ" ಗ್ರಂಥದಲ್ಲಿ ಶೌನಕೀಯವಾದ ಕೆಲವು ಗ್ರಂಥಗಳ ಪಟ್ಟಿಯನ್ನು ಕೊಟ್ಟಿದ್ದು ಅವುಗಳಲ್ಲಿ ನವಗ್ರಹಶಾಂತಿ ಮತ್ತು ಬೃಹಸ್ಪತಿ ಶಾಂತಿ ವಿಧಿಗಳು ಉಕ್ತವಾಗಿವೆಯೆಂದು ಬರೆದಿದ್ದಾರೆ. ಈ ಎಲ್ಲ ಆಧಾರಗಳಿಂದ ನವಗ್ರಹಶಾಂತಿ, ಆದಿತ್ಯ ಶಾಂತಿ, ಬೃಹಸ್ಪತಿ ಶಾಂತಿ ವಿಧಾನಗಳನ್ನು ಶೌನಕರು ಹೇಳಿದ್ದಾರೆಂದು ವಿಶ್ವಾಸವಿಡಬಹುದಾಗಿದೆ. ವಿಧಾನಪಾರಿಜಾತದಲ್ಲಿ ಶೌನಕೋಕ್ತ ಆದಿತ್ಯ ಶಾಂತಿಯ ತುದಿಯಲ್ಲಿ "ಏವಂ ಯೋ ಯೋ ಗ್ರಹೋ ದುಷ್ಟಸ್ತತ್ತಚ್ಛಾಂತಿಂ ಸಮಾಚರೇತ್" ಎಂಬ ವಾಕ್ಯವಿದೆ. ಆದಿತ್ಯ ಶಾಂತಿಯ ಕ್ರಮದಲ್ಲಿಯೇ ಯಾವ ಯಾವ ಗ್ರಹರು ದುಷ್ಟರಾಗಿದ್ದಾರೆಯೋ ಆ ಗ್ರಹದ ಶಾಂತಿ ಮಾಡಿರಿ ಎಂದು ನಿರ್ದೇಶನವಿದೆ. ಇಲ್ಲಿ ವಿವಾಹ/ಉಪನಯನಗಳಲ್ಲಿ ಅನಿಷ್ಟಸ್ಥಿತ ಗ್ರಹರಿಗೆ ಶಾಂತಿಯನ್ನು ಹೇಳಿದ್ದು  ಇದು ಉಪನಯನ ವಿವಾಹಗಳ ಆರಂಭದಲ್ಲಿ ಮಾಡುವುದಾಗಿದೆ. ಹೀಗೆ ವಿವಾಹ, ಉಪನಯನಗಳಲ್ಲಿ ಗುರುಬಲ, ರವಿಬಲ, ಇತರ ಗ್ರಹಬಲ ಇಲ್ಲದಿದ್ದಾಗ / ದುಷ್ಟಸ್ಥಾನ ಸ್ಥಿತರಾಗಿದ್ದಾಗ ಮಾತ್ರ ಪ್ರತ್ಯೇಕ ಗ್ರಹಶಾಂತಿಯನ್ನು ಹೇಳಿದ ಶೌನಕ ಮಹರ್ಷಿಗಳು ಸೂತ್ರಕಾರರೂ, ಜ್ಯೋತಿಷ ಶಾಸ್ತ್ರ ಪ್ರವರ್ತಕರೂ ಆಗಿ -  ಕುಜರಾಹುದಶಾಸಂಧಿಯಲ್ಲಿ ಕುಜ/ಚಂದ್ರ/ರಾಹುಗ್ರಹರ, ರಾಹುಬೃಹಸ್ಪತಿ ದಶಾಸಂಧಿಯಲ್ಲಿ ರಾಹು/ಕುಜ/ಗುರುಗ್ರಹರ, ಶುಕ್ರಾದಿತ್ಯ ದಶಾಸಂಧಿಯಲ್ಲಿ ಶುಕ್ರ/ಕೇತು/ರವಿಗ್ರಹರ ಇಷ್ಟಾನಿಷ್ಟ ಸ್ಥಿತಿ ಎಲ್ಲವನ್ನೂ ಬದಿಗೊತ್ತಿ ಆ ಗ್ರಹರು ಅನಿಷ್ಟಪ್ರದರೆಂದೇ ಪರಿಗಣಿಸಿ ಶಾಂತಿಯೊಂದನ್ನು ಬರೆದಿರಲು ಸಾಧ್ಯವೇ ? ಸಾಧ್ಯವಿಲ್ಲ ಎಂದೇ ಹೇಳಬೇಕಾಗುತ್ತದೆ.  ಈಗ ನಡೆಯುತ್ತಿರುವ ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ 
    ಸಂಧಿಶಾಂತಿಗಳು  ಜಾತಕದಲ್ಲಿ ಆ ಆ  ಗ್ರಹರು ಇಷ್ಟಸ್ಥಾನದಲ್ಲಿದ್ದಾರೋ, ಅನಿಷ್ಟ ಸ್ಥಾನದಲ್ಲಿದ್ದಾರೋ ಯಾವುದನ್ನೂ ನೋಡದೆ ಆ ಗ್ರಹರು ಅನಿಷ್ಟಪ್ರದರೆಂದೇ ಪರಿಗಣಿಸಿ ಶಾಂತಿಯನ್ನು ಮಾಡುವುದಾಗಿದೆ. ಜ್ಯೋತಿಷದಲ್ಲಿ ಗ್ರಹರ ಇಷ್ಟಾನಿಷ್ಟ ಸ್ಥಿತಿ ನೋಡಿಯೇ ಪ್ರತ್ಯೇಕ ಗ್ರಹಶಾಂತಿಯನ್ನು ನಿರ್ದೇಶಿಸಬೇಕಾಗುತ್ತದೆ. ಇಲ್ಲಿ ಮೂರೂ ಸಂಧಿಶಾಂತಿಗಳಲ್ಲಿ ಬರುವ ಮೂರು ಮೂರು ಗ್ರಹರಲ್ಲಿ ಯಾರು ಅನಿಷ್ಟಪ್ರದ ಗ್ರಹವೋ ಆ ಗ್ರಹಕ್ಕೆ ಮಾತ್ರ ಶಾಂತಿಯನ್ನು ಮಾಡಬೇಕು. ಅದನ್ನು ಜ್ಯೋತಿಷಿಗಳು ಸೂಚಿಸಬೇಕಾಗುತ್ತದೆ.  ಆಗ ಇದನ್ನು ಸಂಧಿಶಾಂತಿ ಹೋಮವೆಂದು ಕರೆಯುವಂತಿಲ್ಲ. ಆಯಾ ಗ್ರಹದಶಾಂತಿಯೆಂದೇ ಕರೆಯಬೇಕು. 
    ರಾಹುಬೃಹಸ್ಪತಿ ಸಂಧಿಶಾಂತಿ ಪ್ರಯೋಗದಲ್ಲಿ ಲಭಿಸುವ ಶೌನಕೋಕ್ತವೆಂದು ಹೇಳಲಾದ ಶ್ಲೋಕಗಳ ತುದಿಯಲ್ಲಿ ಇತ್ಯಾದಿ ಎಂದು ಇರುವುದರಿಂದ ಮುಂದಿನ ಭಾಗ ಇದೆಯೆಂದೇ ಅರ್ಥ. ಮುಂದೊಂದು ದಿನ ಅದು ಪೂರ್ತಿಯಾಗಿ ಲಭಿಸೀತು. ಲಭಿಸಿದರೂ ಕೂಡ - ಗ್ರಹರು ಅನಿಷ್ಟಸ್ಥಾನದಲ್ಲಿದ್ದರೆ  ಆದಿತ್ಯ ಶಾಂತಿ, ಬೃಹಸ್ಪತಿ ಶಾಂತಿ, ಉಳಿದ  ಗ್ರಹಶಾಂತಿಯನ್ನು ವಿಧಿಸಿದ ಶೌನಕ ಮಹರ್ಷಿಯ ವಾಕ್ಯಗಳು ಪ್ರಾಚೀನ ಗ್ರಂಥಗಳಲ್ಲಿ ಲಭಿಸುವುದರಿಂದ/ ಶೌನಕೋಕ್ತವಾದ ಹಲವು ಶಾಂತಿಗಳು ಈ ಗ್ರಂಥಗಳಲ್ಲಿ ಲಭಿಸುವುದರಿಂದ/ ಈ ಮೂರು ಸಂಧಿಶಾಂತಿಗಳು ಆ ಗ್ರಂಥಗಳಲ್ಲಿ. ಎಲ್ಲಿಯೂ ಇಲ್ಲದಿರುವುದರಿಂದ - ಇದು ಆ ವಾಕ್ಯಗಳ ವಿರುದ್ಧವಾಗಿ ಗ್ರಹರ ಇಷ್ಟಾನಿಷ್ಟ ಸ್ಥಿತಿಯನ್ನು ಪರಿಗಣಿಸದೆ ಶಾಂತಿಯನ್ನು ಹೇಳುವ ಶ್ಲೋಕಗಳಾಗುವುದರಿಂದ ಶೌನಕಪ್ರೋಕ್ತವೆಂದು ಹೇಳಲಾಗದು. ಶೌನಕರ ಹೆಸರಿನಲ್ಲಿ ಪಂಡಿತರೊಬ್ಬರು  ಶ್ಲೋಕರಚನೆ ಮಾಡಿ ಸೇರಿಸಿದ್ದಾರೆ ಎಂದೇ ಖಚಿತವಾಗಿ ಊಹಿಸಬಹುದಾಗಿದೆ. ಶೌನಕರು ಹೇಳಿಲ್ಲದ ವಾಕ್ಯಗಳನ್ನು ಶೌನಕರದ್ದೆಂದು ನಂಬಿ ಅದಕ್ಕೊಂದು ಪ್ರಯೋಗ ವಿಧಾನ ಸಿದ್ಧವಾಗಿ 75 -100 ವರ್ಷಗಳಿಂದೀಚೆಗೆ ಪ್ರಚಲಿತಕ್ಕೆ ಬಂದಿದೆಯಷ್ಟೆ. ಪ್ರತ್ಯೇಕ ಗ್ರಹಶಾಂತಿ ವಿಧಾನವೆಂದು ಪರಿಗಣಿಸಲಿಕ್ಕೂ ಕೂಡ ಅದರಲ್ಲಿ ಹಲವಾರು ತೊಡಕುಗಳಿವೆ.   ಇತ್ತ ಜ್ಯೋತಿಷದ ನಿಯಮಗಳನ್ನು ಅನುಸರಿಸದೆ, ಅತ್ತ ಶೌನಕರ ವಚನಗಳನ್ನೂ ಅನುಸರಿಸದೆ, ಗೃಹ್ಯಸೂತ್ರವನ್ನೂ ಅನುಸರಿಸದೆ ರಚಿಸಿರುವ ಶಾಂತಿಯಾಗಿದೆ. ಶೌನಕ ಮಹರ್ಷಿಗಳು ಗ್ರಹರ ದುಃಸ್ಥಾನ ಸ್ಥಿತಿ, ಸುಸ್ಥಾನಸ್ಥಿತಿ ಯಾವುದನ್ನೂ ಪರಿಗಣಿಸದೆ  ಮೂರುಸಂಧಿಶಾಂತಿ ಹೋಮಗಳನ್ನು ರಚಿಸಿರಲಾರರು ಎಂಬುದೇ ನನ್ನ ಅಭಿಪ್ರಾಯವಾಗಿದೆ.

ಸಂಧಿಶಾಂತಿ ಹೋಮವನ್ನು ಮಾಡುವ ಉದ್ದೇಶವೇನು ?

ಸಂಧಿಕಾಲವು ಅಶುಭಪ್ರದವೆಂದು ಶಾಸ್ತ್ರಕಾರರು ಹೇಳಿರುವುದರಿಂದ ಆ ಕಾಲದಲ್ಲಿ ಅಪಮೃತ್ಯುವೋ, ರೋಗಬಾಧೆಯೋ, ಅಪಘಾತವೋ, ಉದ್ಯೋಗದಲ್ಲಿ ಸಂಕಷ್ಟವೋ,. ಕುಟುಂಬದ ಸದಸ್ಯರಿಗೆ ತೊಂದರೆಯೋ ಯಾವುದಾದರೂ ಆಗಬಹುದಾಗಿದೆ. ಈ ಅನಿಷ್ಟಗಳನ್ನು ಕಡಿಮೆ ಮಾಡಿಕೊಳ್ಳುವುದೇ ದಶಾಸಂಧಿಶಾಂತಿಯ ಪ್ರಧಾನ ಉದ್ದೇಶ.

ಈ ಕುಜರಾಹು, ರಾಹುಬೃಹಸ್ಪತಿ, ಶುಕ್ರಾದಿತ್ಯ ದಶಾಸಂಧಿಗಳಲ್ಲಿ ಮಾತ್ರ ಶಾಂತಿಹೋಮವನ್ನು ಮಾಡುವುದು  ಬಲವಾಗಿ ಆಚರಣೆಯಲ್ಲಿ ಇರುವುದರಿಂದ ಜ್ಯೋತಿಷಿಗಳು ಹೆಚ್ಚಿನ ಸಂದರ್ಭಗಳಲ್ಲಿ ಶಾಂತಿಹೋಮವನ್ನು ಸೂಚಿಸಲೇಬೇಕಾಗುತ್ತದೆ. ಆಗ ಯಾವ ಶಾಂತಿಯನ್ನು ಮಾಡುವುದುತ್ತಮ?

ಗ್ರಹರ ವಿಷಮಸ್ಥಿತಿಗೆ ಬೋಧಾಯನ ಗೃಹ್ಯಸೂತ್ರದಲ್ಲಿ ನವಗ್ರಹಾರಾಧನೆ  ಹೇಳಿರುವುದರಿಂದ ಮೊದಲಿಗೆ ನವಗ್ರಹಶಾಂತಿಯನ್ನು ಮಾಡುವುದುತ್ತಮ. ಅನಂತರ ದುಃಸ್ಥಗ್ರಹರಿಗೆ ಮಾತ್ರ ಪ್ರತ್ಯೇಕ ಹೋಮ ಮಾಡಬಹುದು. ನವಗ್ರಹಶಾಂತಿಯನ್ನೇ ಮಾಡಿದ ಮೇಲೆ ಪ್ರತ್ಯೇಕ ಗ್ರಹಶಾಂತಿಯನ್ನೋ, ಸಂಧಿಶಾಂತಿ ಹೋಮವನ್ನೋ ಮಾಡುವುದರ ಬದಲು  ಬೋಧಾಯನಾಚಾರ್ಯರು ಹೇಳಿರುವ ದೂರ್ವಾಮೃತ್ಯುಂಜಯ ಶಾಂತಿ ಮತ್ತು ಮಹಾಮೃತ್ಯುಂಜಯ ಶಾಂತಿ ಹಾಗೂ ಶಾಂತಿಕಾಮ ಆಯುಷ್ಯಕಾಮಕ್ಕೆ ಹೇಳಿದ ರುದ್ರಜಪ, ರುದ್ರಾಭಿಷೇಕ, ರುದ್ರಹೋಮಗಳು, ಶಂಕರಾಚಾರ್ಯರ ಪ್ರಪಂಚಸಾರ ತಂತ್ರದಲ್ಲಿ ಪ್ರೋಕ್ತವಾದ ತ್ರ್ಯಂಬಕ ಹೋಮ, ಮೃತ್ಯುಂಜಯ ಹೋಮ, ಶತಾಕ್ಷರೀ ಹೋಮ ಮುಂತಾದ ಹೋಮಗಳು , ಅಪಮೃತ್ಯುನಿವಾರಣದ್ವಾರಾ ಆಯುಃಪ್ರದ ಮಂತ್ರಗಳ, ಆಪನ್ನಿವಾರಕ ಮಂತ್ರಗಳ ಅನುಷ್ಠಾನ ಇವೇ ಮುಂತಾದ್ದನ್ನು ಆಚರಿಸುವುದು  ವಿಹಿತವೆಂದು ನನ್ನ ಅಭಿಪ್ರಾಯ.  ಈ ಶಾಂತಿಗಳಲ್ಲಿ ಪಾಪ, ಅಪಮೃತ್ಯು, ರೋಗ, ಆಪನ್ನಿವಾರಕ ಮಂತ್ರಗಳೂ, ಆಯುಃಪ್ರದ ಮಂತ್ರಗಳೂ ವಿಶೇಷವಾಗಿವೆ. ದೂರ್ವೆ ಇತ್ಯಾದಿ ಆಯುಃಪ್ರದ ದ್ರವ್ಯಗಳ ಹೋಮವೂ ಇದೆ. ಪ್ರಮಾಣಗ್ರಂಥಪ್ರೋಕ್ತವಾದುದೂ ಆಗಿದೆ.  ದೋಷಗಳ ಬಲಾಬಲಕ್ಕೆ ಅನುಸಾರವಾಗಿ ಯಾವ ಶಾಂತಿಯೆಂದು ನಿರ್ಧರಿಸುವುದು ಜ್ಯೋತಿಷಿಯ ಕರ್ತವ್ಯವಾಗಿರುತ್ತದೆ.


ರವೀಂದ್ರ ಶರ್ಮಾ ಕೋಣನಕಟ್ಟೆ.
                         

ಬಣ್ಣಗಳ ರಹಸ್ಯ

ಶಿವನಿಂದ ಪಾರ್ವತಿಗೆ ಬಣ್ಣಗಳ ರಹಸ್ಯ
ಪೂರ್ವ ಕಾಲದಲ್ಲಿ ಪಾರ್ವತಿಯು ಶಿವನಿಗೆ "ಸ್ವಾಮಿ, ನೀವು ಭೂಲೋಕದಲ್ಲಿ ಸಂಚರಿಸುತ್ತಿರುವಾಗ ಅಲ್ಲಿನ ಜನರ ನಡವಳಿಕೆಗಳನ್ನು ಗಮನಿಸಿರಬಹುದು. ಅವರು ಏಕೆ ಹೀಗೆ ವಿವಿಧ ರೀತಿಯಲ್ಲಿ ವರ್ತಿಸುತ್ತಾರೆ? ಕೆಲವರು ಸದಾ ಸಂತೋಷವಾಗಿರುತ್ತಾರೆ, ಇನ್ನು ಕೆಲವರು ದುಃಖಿತರಾಗಿರುತ್ತಾರೆ. ಕೆಲವರು ಪ್ರೀತಿಯಿಂದ ಇತರರನ್ನು ಕಾಣುತ್ತಾರೆ, ಕೆಲವರು ದ್ವೇಷದಿಂದ ವರ್ತಿಸುತ್ತಾರೆ. ಇದಕ್ಕೆ ಕಾರಣವೇನು?" ಎಂದು ಪ್ರಶ್ನಿಸಿದಳು.

ಶಿವನು ಪಾರ್ವತಿಯ ಪ್ರಶ್ನೆಗೆ ಮೆಚ್ಚಿ, ಅವಳಿಗೆ ಒಂದು ವಿಶೇಷವಾದ ಉತ್ತರವನ್ನು ನೀಡಲು ನಿರ್ಧರಿಸಿದ. ಅವನು ತನ್ನ ಮೂರನೇ ನೇತ್ರವನ್ನು ತೆರೆದು ಒಂದು ಅದ್ಭುತವಾದ ದೃಶ್ಯಾವಳಿಯನ್ನು ಸೃಷ್ಟಿಸಿ, "ಪಾರ್ವತೀ, ನೋಡು. ಇದೇ ಬಣ್ಣಗಳ ಲೋಕ" ಎಂದು ಶಿವನು ಹೇಳಿದ.

ಪಾರ್ವತಿಯ ಮುಂದೆ ಒಂದು ಅದ್ಭುತ ಲೋಕವೇ ತೆರೆದುಕೊಂಡಿತು. ಅಲ್ಲಿ ಎಲ್ಲೆಡೆ ಬಣ್ಣಗಳೇ ಬಣ್ಣಗಳು. ಕೆಂಪು, ಹಸಿರು, ಹಳದಿ, ನೀಲಿ, ಕೇಸರಿ, ಬಿಳಿ, ಕಪ್ಪು - ಹೀಗೆ ಅಸಂಖ್ಯಾತ ಬಣ್ಣಗಳು ತುಂಬಿದ್ದವು. ಆ ಬಣ್ಣಗಳು ಕೇವಲ ವರ್ಣಗಳಾಗಿರದೆ, ಅವುಗಳಲ್ಲಿ ಜೀವಕಳೆ ಇತ್ತು. ಪ್ರತಿಯೊಂದು ಬಣ್ಣವೂ ಒಂದು ನಿರ್ದಿಷ್ಟ ಭಾವನೆಯನ್ನು ಸೂಸುತ್ತಿತ್ತು.

*ಶಿವನು ಆ ಬಣ್ಣಗಳ ಬಗ್ಗೆ ವಿವರಿಸಲಾರಂಭಿಸಿದನು*:--
*ಕೆಂಪು ಬಣ್ಣ*:-- ಇದು ಪ್ರೀತಿಯ ಸಂಕೇತ. ಪ್ರೇಮಿಗಳ ಹೃದಯದಲ್ಲಿ ಹರಿಯುವ ಭಾವನೆ ಇದು. ತ್ಯಾಗ, ಶೌರ್ಯ, ಉತ್ಸಾಹಗಳನ್ನೂ ಇದು ಸೂಚಿಸುತ್ತದೆ. ನಿನ್ನಲ್ಲಿರುವ ಮಾತೃಪ್ರೀತಿಯೂ ಕೆಂಪು ಬಣ್ಣದಿಂದಲೇ ಪ್ರಕಟವಾಗುತ್ತದೆ, ಪಾರ್ವತೀ.

*ಹಸಿರು ಬಣ್ಣ*:-- ಇದು ಹೊಸ ಚಿಗುರಿನ ಸಂಕೇತ. ಪ್ರಕೃತಿಯಲ್ಲಿ ಹೊಸ ಜೀವನದ ಆರಂಭವನ್ನು ಇದು ತೋರಿಸುತ್ತದೆ. ಸಮೃದ್ಧಿ, ಫಲವತ್ತತೆ, ಶಾಂತಿ - ಇವೆಲ್ಲವೂ ಹಸಿರಿನ ಲಕ್ಷಣಗಳು. ಭೂಲೋಕದ ರೈತನು ತನ್ನ ಹೊಲದಲ್ಲಿ ಹಸಿರು ಬೆಳೆಯನ್ನು ಕಂಡಾಗ ಅನುಭವಿಸುವ ಸಂತೋಷವೇ ಬೇರೆ.

*ಹಳದಿ ಬಣ್ಣ*:-- ಇದು ಸಂತೋಷದ ಸಂಕೇತ. ಜ್ಞಾನ, ವಿದ್ಯೆ, ಐಶ್ವರ್ಯಗಳನ್ನೂ ಇದು ಸೂಚಿಸುತ್ತದೆ. ಸೂರ್ಯನ ಕಿರಣಗಳಲ್ಲಿರುವ ಹಳದಿ ಬಣ್ಣವು ಜೀವನದಲ್ಲಿ ಬೆಳಕನ್ನು ತರುತ್ತದೆ. ನಿನ್ನ ಪುತ್ರ ಕಾರ್ತಿಕೇಯನ ಜ್ಞಾನದ ಕಾಂತಿಯೂ ಹಳದಿಯೇ.

*ನೀಲಿ ಬಣ್ಣ*:-- ಇದು ಶಾಂತಿ ಮತ್ತು ಗಾಂಭೀರ್ಯದ ಸಂಕೇತ. ಆಕಾಶದ ಅಪಾರತೆಯನ್ನು, ಸಾಗರದ ಅಗಾಧತೆಯನ್ನು ಇದು ತೋರಿಸುತ್ತದೆ. ನನ್ನ ಕಂಠವೂ ನೀಲಿಯಾಗಿರುವುದು ಸರ್ವವನ್ನೂ ತನ್ನಲ್ಲಿ ಅಡಗಿಸಿಕೊಳ್ಳುವ ಸಾಮರ್ಥ್ಯದ ಸಂಕೇತ.

*ಕೇಸರಿ ಬಣ್ಣ*:--ಇದು ತ್ಯಾಗ ಮತ್ತು ಧೈರ್ಯದ ಸಂಕೇತ. ಸೂರ್ಯೋದಯದ ಕಾಂತಿಯು ಮನುಷ್ಯನಿಗೆ ಹೊಸ ದಿನದ ಸಂದೇಶವನ್ನು ನೀಡುತ್ತದೆ. ಸನ್ಯಾಸಿಗಳು ಧರಿಸುವ ವಸ್ತ್ರದ ಬಣ್ಣವೂ ಇದೇ ಆಗಿದೆ - ಇದು ವೈರಾಗ್ಯ ಮತ್ತು ತ್ಯಾಗವನ್ನು ಸೂಚಿಸುತ್ತದೆ.

*ಬಿಳಿ ಬಣ್ಣ*:-- ಇದು ಪವಿತ್ರತೆ ಮತ್ತು ಶುದ್ಧತೆಯ ಸಂಕೇತ. ಹಿಮದಂತೆ ಶುಭ್ರವಾದ ಈ ಬಣ್ಣವು ಸತ್ಯದ ಪ್ರತೀಕ. ನಿರ್ಮಲ ಮನಸ್ಸಿನ ಸಂಕೇತವೂ ಇದೇ.

*ಕಪ್ಪು ಬಣ್ಣ*:-- ಇದು ರಹಸ್ಯ ಮತ್ತು ಆಳದ ಸಂಕೇತ. ರಾತ್ರಿಯ ಕತ್ತಲೆಯಲ್ಲಿ ಅಡಗಿರುವ ನಕ್ಷತ್ರಗಳಂತೆ, ಕಪ್ಪು ಬಣ್ಣದಲ್ಲಿ ಅನೇಕ ಸಾಧ್ಯತೆಗಳು ಅಡಗಿವೆ. ಕಾಲವನ್ನೂ ನಾನು ಕಪ್ಪು ಬಣ್ಣದಲ್ಲೇ ಪ್ರತಿನಿಧಿಸುತ್ತೇನೆ.

ಶಿವನ ಮಾತುಗಳನ್ನು ಕೇಳಿದ ಪಾರ್ವತಿಗೆ ಅಚ್ಚರಿಯಾಯಿತು. "ಸ್ವಾಮಿ, ಇಷ್ಟೊಂದು ಸುಂದರವಾದ ಬಣ್ಣಗಳನ್ನು ಸೃಷ್ಟಿಸಿದ್ದೀರಿ. ಆದರೆ ಭೂಲೋಕದ ಜನರಿಗೆ ಈ ಬಣ್ಣಗಳ ಮಹತ್ವ ತಿಳಿದಿದೆಯೇ?" ಎಂದು ಕೇಳಿದಳು.

ಶಿವನು ನಗುತ್ತಾ "ಪಾರ್ವತೀ, ಭೂಲೋಕದ ಜನರಿಗೆ ಸ್ವಲ್ಪಮಟ್ಟಿಗೆ ಈ ಬಣ್ಣಗಳ ಮಹತ್ವ ತಿಳಿದಿದೆ. ಅವರು ವಸಂತ ಋತುವಿನಲ್ಲಿ ಬರುವ ಫಾಲ್ಗುಣ ಪೂರ್ಣಿಮೆಯ ದಿನದಂದು ಬಣ್ಣಗಳ ಹಬ್ಬವನ್ನು ಆಚರಿಸುತ್ತಾರೆ. ಅದಕ್ಕೆ 'ರಂಗ ಪಂಚಮಿ' ಎಂದು ಹೆಸರು. ಐದು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಅವರು ಒಬ್ಬರಿಗೊಬ್ಬರು ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸುತ್ತಾರೆ" ಎಂದು ಹೇಳಿದ.

"ಆದರೆ ಸ್ವಾಮಿ, ಬಣ್ಣಗಳನ್ನು ಎರಚಿಕೊಳ್ಳುವುದರಿಂದ ಅವರಿಗೆ ಏನು ಪ್ರಯೋಜನ?" ಎಂದು ಪಾರ್ವತಿಯು ಕೇಳಿದಾಗ "ಪ್ರಿಯೆ, ಬಣ್ಣಗಳನ್ನು ಎರಚಿಕೊಳ್ಳುವುದು ಕೇವಲ ಆಟವಲ್ಲ. ಅದರ ಹಿಂದೆ ಒಂದು ಗಹನ ಅರ್ಥವಿದೆ. ಜೀವನದಲ್ಲಿ ವಿವಿಧ ಭಾವನೆಗಳು ಬರುತ್ತವೆ - ಪ್ರೀತಿ, ಸಂತೋಷ, ಶಾಂತಿ, ಉತ್ಸಾಹ, ತ್ಯಾಗ, ಜ್ಞಾನ. ಆದರೆ ಮನುಷ್ಯನು ತನ್ನೊಳಗೆ ಈ ಭಾವನೆಗಳನ್ನು ಬೆಳೆಸಿಕೊಳ್ಳಲು ಮರೆತುಬಿಡುತ್ತಾನೆ. ಆಗ ಅವನು ಬಾಹ್ಯ ಬಣ್ಣಗಳ ಮೂಲಕ ಈ ಆಂತರಿಕ ಭಾವನೆಗಳನ್ನು ನೆನಪಿಸಿಕೊಳ್ಳಬೇಕಾಗುತ್ತದೆ." ಎಂದು ಶಿವ ವಿವರಿಸಿದ.

"ಅದರ ಅರ್ಥವೇನು?" ಎಂದು ಪಾರ್ವತಿಯು ಕುತೂಹಲದಿಂದ ಕೇಳಿದಳು. "ನೋಡು, ಒಬ್ಬನು ಇನ್ನೊಬ್ಬನಿಗೆ ಕೆಂಪು ಬಣ್ಣವನ್ನು ಎರಚಿದಾಗ, ಅವನು "ನಿನ್ನ ಮೇಲೆ ನನಗೆ ಪ್ರೀತಿಯಿದೆ" ಎಂಬ ಸಂದೇಶವನ್ನು ಕೊಡುತ್ತಾನೆ. ಹಸಿರು ಬಣ್ಣವನ್ನು ಎರಚಿದಾಗ "ನಿನ್ನ ಜೀವನದಲ್ಲಿ ಹೊಸ ಚಿಗುರು ಬೆಳೆಯಲಿ" ಎಂದು ಆಶೀರ್ವದಿಸುತ್ತಾನೆ. ಹಳದಿ ಬಣ್ಣವನ್ನು ಎರಚಿದಾಗ "ನೀನು ಸದಾ ಸಂತೋಷವಾಗಿರು" ಎಂದು ಹಾರೈಸುತ್ತಾನೆ. ಹೀಗೆ ಪ್ರತಿಯೊಂದು ಬಣ್ಣವೂ ಒಂದು ಭಾವನೆಯ ಸಂಕೇತವಾಗುತ್ತದೆ.

ಪಾರ್ವತಿಯು ಶಿವನ ಮಾತುಗಳನ್ನು ಕೇಳಿ ಬಹಳ ಸಂತೋಷಪಟ್ಟಳು. "ಸ್ವಾಮಿ, ಈ ಬಣ್ಣಗಳ ಹಬ್ಬವನ್ನು ನಾನೂ ನೋಡಬೇಕೆನಿಸುತ್ತದೆ" ಎಂದಳು. ಅದಕ್ಕೆ ಶಿವನು ಒಪ್ಪಿ, ತನ್ನ ದಿವ್ಯದೃಷ್ಟಿಯನ್ನು ಪಾರ್ವತಿಗೆ ನೀಡಿದ. ಪಾರ್ವತಿಯು ಭೂಲೋಕದಲ್ಲಿ ನಡೆಯುತ್ತಿರುವ ರಂಗ ಪಂಚಮಿ ಹಬ್ಬವನ್ನು ನೋಡಿದಳು. ಮಕ್ಕಳು, ಯುವಕರು, ವೃದ್ಧರು ಎಲ್ಲರೂ ಬಣ್ಣಗಳಲ್ಲಿ ಮಿಂದೆದ್ದಿದ್ದರು. ಎಲ್ಲೆಡೆ ಸಂತೋಷದ ವಾತಾವರಣವಿತ್ತು. ಯಾರೂ ಯಾರನ್ನೂ ಜಾತಿ, ಮತ, ವರ್ಗ, ಬಣ್ಣದ ಭೇದವೆಂದು ನೋಡುತ್ತಿರಲಿಲ್ಲ. ಎಲ್ಲರೂ ಒಂದಾಗಿ ಬಣ್ಣಗಳಾಡುತ್ತಿದ್ದರು.

"ಇದು ನಿಜಕ್ಕೂ ಅದ್ಭುತವಾಗಿದೆ, ಸ್ವಾಮಿ! ಬಣ್ಣಗಳು ಜನರನ್ನು ಒಂದುಗೂಡಿಸುತ್ತಿವೆ" ಎಂದು ಪಾರ್ವತಿಯು ಉದ್ಗರಿಸಿದಳು. ಶಿವನು "ಹೌದು, ಪಾರ್ವತೀ. ಬಣ್ಣಗಳು ಮನುಷ್ಯರನ್ನು ಒಂದುಗೂಡಿಸುತ್ತವೆ. ಅವು ಜೀವನದಲ್ಲಿ ವೈವಿಧ್ಯತೆಯನ್ನು ತರುತ್ತವೆ. ಪ್ರತಿಯೊಂದು ಬಣ್ಣಕ್ಕೂ ಒಂದು ಮಹತ್ವವಿದೆ, ಒಂದು ಸಂದೇಶವಿದೆ. ಈ ಬಣ್ಣಗಳ ಹಬ್ಬವನ್ನು 'ಹೋಳಿ' ಎಂದೂ ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಇದನ್ನು 'ರಂಗ ಪಂಚಮಿ' ಎಂದು ಐದು ದಿನಗಳ ಕಾಲ ಆಚರಿಸುತ್ತಾರೆ. ಐದು ದಿನಗಳು ಐದು ಪ್ರಮುಖ ಭಾವನೆಗಳನ್ನು ಸಂಕೇತಿಸುತ್ತವೆ - ಪ್ರೀತಿ, ಸಂತೋಷ, ಶಾಂತಿ, ಧೈರ್ಯ, ಮತ್ತು ಜ್ಞಾನ." ಎಂದು ಹೇಳಿದ.

ಅಂದಿನಿಂದ, ಶಿವ-ಪಾರ್ವತಿಯರು ಪ್ರತಿವರ್ಷವೂ ಫಾಲ್ಗುಣ ಪೂರ್ಣಿಮೆಯಂದು ಭೂಲೋಕದ ಜನರು ಆಚರಿಸುವ ರಂಗ ಪಂಚಮಿ ಹಬ್ಬವನ್ನು ವೀಕ್ಷಿಸುತ್ತಾರೆಂಬ ಭಕ್ತರ ನಂಬಿಕೆ. ಈ ಹಬ್ಬವು ಬಣ್ಣಗಳ ಮೂಲಕ ಜೀವನದ ವಿವಿಧ ಭಾವನೆಗಳನ್ನು ಆಚರಿಸುವ, ಸಂಭ್ರಮಿಸುವ, ಮತ್ತು ಹಂಚಿಕೊಳ್ಳುವ ಒಂದು ಮಾರ್ಗವಾಗಿದೆ.

ಪ್ರತಿಯೊಂದು ಬಣ್ಣವೂ ಜೀವನದ ಒಂದು ಮಗ್ಗುಲನ್ನು ಪ್ರತಿನಿಧಿಸುತ್ತದೆ ಎಂಬ ಈ ಕಥೆಯು, ರಂಗ ಪಂಚಮಿ ಅಥವಾ ಹೋಳಿ ಹಬ್ಬಕ್ಕೆ ಒಂದು ವಿಶಿಷ್ಟ ಆಯಾಮವನ್ನು ನೀಡುತ್ತದೆ. ಕೇವಲ ಬಣ್ಣಗಳಾಟವಲ್ಲ, ಅದು ಜೀವನದ ಸಂಭ್ರಮದ ಆಚರಣೆ - ಇದೇ ಈ ಕಥೆಯ ಸಂದೇಶ.

ವಾದವನ್ನು ಯಾರೊಂದಿಗೆ ಮಾಡಬೇಕು?

ಅಜ್ಞಾನವು ಗಂಟಲು ಹರಿಯುವಂತೆ ಕಿರುಚುತ್ತಿರುವಾಗ, ಬುದ್ಧಿವಂತಿಕೆಯು ಮೌನವಾಗಿರಬೇಕು."

ಕತ್ತೆಯೊಂದು , ಹುಲಿಗೆ ಹೇಳಿತು: 

"ಹುಲ್ಲಿನ ಬಣ್ಣ ನೀಲಿ".

ಹುಲಿ ಉತ್ತರಿಸಿತು:

"ಇಲ್ಲ, ಹುಲ್ಲು ಹಸಿರು ಬಣ್ಣದ್ದು."

ಚರ್ಚೆಯ ಬಿಸಿ ಯದ್ವಾತದ್ವಾ ಏರಿತು.

ವಾದ ಬಗೆ ಹರಿಯುವ ಸೂಚನೆ ಕಾಣದೆ ಇದ್ದಾಗ ಇಬ್ಬರು ಸೇರಿ ಒಂದು ಮಧ್ಯಸ್ಥಿಕೆಗೆ ಒಪ್ಪಿಸಲು ನಿರ್ಧಾರ ಮಾಡಿದರು.

ಇದಕ್ಕಾಗಿ ಕಾಡಿನ ರಾಜನಾದ ಸಿಂಹದ ಮೊರೆ ಹೋರಟರು.

ಸಿಂಹರಾಜ ತನ್ನ ಸಿಂಹಾಸನದ ಮೇಲೆ ಗಂಭೀರವದನನಾಗಿ ವಿರಾಜಮಾನನಾಗಿದ್ದ. 

ಸಿಂಹವನ್ನು ದೂರದಿಂದ ನೋಡುತ್ತಲೇ ಕತ್ತೆರಾಯ ಕೂಗಲು ಪ್ರಾರಂಭಿಸಿತು:

"ಓ ಮಹಾಪ್ರಭುಗಳೇ, ನೀವೇ ಹೇಳಿ, ಹುಲ್ಲಿನ ಬಣ್ಣ ನೀಲಿ ಎಂಬುದು ನಿಜವಲ್ಲವೇ?".

ತಡಮಾಡದಲೇ ಸಿಂಹ ಉತ್ತರಿಸಿತು:

"ಹೌದು ,ನಿಜ, ಹುಲ್ಲು ನೀಲಿ ಬಣ್ಣದ್ದು."

ಕತ್ತೆಗೆ ಎಲ್ಲಿಲ್ಲದ ಖುಷಿ, ಆತುರದಿಂದ ಮುಂದುವರಿದು ಹೇಳಿತು:

"ಇಲ್ಲಿ ನೋಡಿ ಮಹಾಸ್ವಾಮಿ ಈ ಹುಲಿಯಪ್ಪ ನನ್ನ ಮಾತನ್ನು ಒಪ್ಪುವುದಿಲ್ಲ, ವಿರೋಧಿಸುತ್ತಾನೆ ಮತ್ತು ನನಗೆ ಕಿರಿಕಿರಿ ಉಂಟುಮಾಡುತ್ತಿದ್ದಾನೆ, ದಯವಿಟ್ಟು ಇವನನ್ನು ಶಿಕ್ಷಿಸಿ."

ಆಗ ಸಿಂಹರಾಜನು ಘೋಷಿಸಿದನು:

"ಹುಲಿಗೆ 5 ವರ್ಷಗಳ ಕಾಲ ವಾಗ್ದಂಡನೆಯ (ಮೌನದಿಂದ ಇರಬೇಕು ಎಂಬ) ಶಿಕ್ಷೆ ನೀಡಲಾಗಿದೆ, ಇದನ್ನು ಹುಲಿ ಪಾಲಿಸತಕ್ಕದ್ದು."

ಕತ್ತೆಗೆ ಯುದ್ಧಗೆದ್ದ ಸಂಭ್ರಮ. ಹರ್ಷಚಿತ್ತದಿಂದ  "ಹುಲ್ಲಿನ ಬಣ್ಣ ನೀಲಿ , ಹುಲ್ಲಿನ ಬಣ್ಣ ನೀಲಿ"…ಎನ್ನುತ್ತಾ ಇನ್ನಷ್ಟು ಪ್ರಾಣಿಗಳಿಗೆ ತನ್ನ ಮಾತನ್ನು ಹೇಳುತ್ತಾ, ಜಿಗಿ ಜಿಗಿದು ಕೇಕೆ ಹಾಕುತ್ತಾ ಕತ್ತೆ ಓಡಿ ಹೋಯಿತು.

ಇತ್ತ ಹುಲಿ ತನ್ನ ಶಿಕ್ಷೆಯನ್ನು ಒಪ್ಪಿಕೊಂಡಿತು, 

ಆದರೆ

"ಮಹಾಸ್ವಾಮಿ ನಿಮಗೂ ಗೊತ್ತು , ಹುಲ್ಲಿನ ಬಣ್ಣ ಹಸಿರು. ಅದಾಗ್ಯೂ ನೀವು ನನ್ನನ್ನು ಏಕೆ ಶಿಕ್ಷಿಸಿದ್ದೀರಿ?" 

ಎಂದು ಸಿಂಹವನ್ನು ಅಮಾಯಕ ಹುಲಿ, ಮುಗ್ಧವಾಗಿ ಕೇಳಿತು,

ಸಿಂಹ ಉತ್ತರಿಸಿತು:

"ಹುಲಿಯಪ್ಪಾ ವಾಸ್ತವವಾಗಿ, ಹುಲ್ಲಿನ ಬಣ್ಣ ಹಸಿರು."

ಹುಲಿ ಕೇಳಿತು:

"ಅದೇ ಪ್ರಭುವೇ, ನಾನು ಹೇಳಿದ್ದು ಅದನ್ನೇ. ಹಾಗಾದರೆ ನೀವು ನನ್ನನ್ನು ಏಕೆ ಶಿಕ್ಷಿಸುತ್ತಿದ್ದೀರಿ?". ಹುಲಿ ಸ್ವಲ್ಪ ಗಟ್ಟಿದನಿಯಿಂದಲೇ ಕೇಳಿತು.

ಆಗ,

ಸಿಂಹ ಉತ್ತರಿಸಿತು:

"ಹುಲ್ಲಿನ ಬಣ್ಣ ನೀಲಿಯೋ ಅಥವಾ ಹಸಿರೋ ಎಂಬುದು ತಳಬುಡವಿಲ್ಲದ  ಪ್ರಶ್ನೆ.

ಇಂತಹ ಯಕಃಶ್ಚಿತ್‌ ಪ್ರಶ್ನೆಯನ್ನು ಇಟ್ಟುಕೊಂಡು, ಹೋಗಿ ಹೋಗಿ ಕತ್ತೆಯೊಂದಿಗೆ ಜಗಳವಾಡುತ್ತಾ ಸಮಯ ಹಾಳು ಮಾಡುತ್ತಿದ್ದೀಯಾ, ಅದೂ ಅಲ್ಲದೆ ಆ ವಾದವನ್ನು ನನ್ನ ಬಳಿಗೆ ಎಳೆತಂದು ನನ್ನ ಕ್ಷಣಗಳನ್ನು ಸವೆಸಿದೆಯಲ್ಲಾ, ಇದೆಲ್ಲಾ ನಿನ್ನಂತಹ ಧೀರ ಬುದ್ಧಿ ಜೀವಿಗಳಿಗೆ ತಕ್ಕುದಾದುದಲ್ಲ. ಅದಕ್ಕೇ ಈ ಶಿಕ್ಷೆ, ಇನ್ನೊಮ್ಮೆ ಇಂತಹ ಅಚಾತುರ್ಯ ಘಟಿಸಕೂಡದು, ಎಚ್ಚರಿಕೆ!”. ಎಂದು ಸಿಂಹ ಘರ್ಜಿಸಿತು.

ಕಟುಸತ್ಯ ಅಥವಾ ವಾಸ್ತವದ ಬಗ್ಗೆ ಕಾಳಜಿ ಇರದ ಮೂರ್ಖರೊಂದಿಗೆ ವಾದಮಾಡುವುದು ಅತ್ಯಂತ ಕೆಟ್ಟದ್ದು. ಅದರಿಂದ ಅಮೂಲ್ಯ ಸಮಯ ವ್ಯರ್ಥವಾಗುವುದು.

ಆ ಮೂರ್ಖರಿಗೆ ಸತ್ಯಕ್ಕಿಂತ ಅವರ ನಂಬಿಕೆ ಮತ್ತು ಭ್ರಮೆಗಳ ಗೆಲುವುಗಳ ಬಗ್ಗೆ ಮಾತ್ರ ಒಲವಿರುತ್ತದೆ. 

ಹಾಗಾಗಿ

ಅರ್ಥವಿಲ್ಲದ ವಾದಗಳಿಗಾಗಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ…

ನೀವು ಎಷ್ಟೇ ದಾಖಲೆ ಮತ್ತು ಪುರಾವೆಗಳನ್ನು ಪ್ರಸ್ತುತಪಡಿಸಿದರೂ, ಅರ್ಥಮಾಡಿಕೊಳ್ಳುವ ಸಾಮರ್ಥ್ಯವಿಲ್ಲದ ಜನರಿದ್ದಾರೆ, ಅವರಿಗೆ ತಿಳಿ ಹೇಳುವ ದುಸ್ಸಾಹಸಕ್ಕೆ ಕೈ ಹಾಕದಿರಿ.

ಅಹಂಕಾರ, ದ್ವೇಷ ಮತ್ತು ಅಸಮಾಧಾನಗಳಿಂದ ಕುರುಡಾಗಿರುವ ಮೂರ್ಖ ಜನತೆ, ಸರಿಯಾಗಲೊಲ್ಲರು.

ತಮ್ಮದೇ ತಪ್ಪಿದ್ದರು ತಾವೇ ಸರಿ ಎಂದು ಬೀಗುವವರ ಮುಂದೆ ನಿಮ್ಮ ಪಾಂಡಿತ್ಯದ ಪ್ರದರ್ಶನ ಅನವಶ್ಯಕ.

"ಅಜ್ಞಾನವು ಗಂಟಲು ಹರಿಯುವಂತೆ ಕಿರುಚುತ್ತಿರುವಾಗ, ಬುದ್ಧಿವಂತಿಕೆಯು ಮೌನವಾಗಿರಬೇಕು."

ಅದುವೇ ಯಶಸ್ಸಿನ ಗುಟ್ಟ. 

ನಿಮ್ಮ ಶಾಂತಿ ಮತ್ತು ನೆಮ್ಮದಿಗಳು ಅತ್ಯಂತ ಮೌಲ್ಯಯುತವಾದವುಗಳು, ಅವುಗಳಿಗೆ ಧಕ್ಕೆಯಾಗುವುದು ಬೇಡ. ‌

February 28, 2026

ಶತ್ರು ದಂಡನ ಮುಹೂರ್ತ

    ಶತ್ರುಗಳಿಂದ ಉಂಟಾಗುವ ಅನ್ಯಾಯ, ದ್ರೋಹ, ಕಾನೂನು ವ್ಯಾಜ್ಯ ಅಥವಾ ರಹಸ್ಯ ಕುತಂತ್ರಗಳ ಸಂದರ್ಭಗಳಲ್ಲಿ ಆತುರದಿಂದ ಕ್ರಮ ಕೈಗೊಳ್ಳುವುದಕ್ಕಿಂತ, ಶಾಸ್ತ್ರೋಕ್ತ ಮುಹೂರ್ತವನ್ನು ಆಯ್ಕೆ ಮಾಡುವುದು ವಿಜಯದ ಮಾರ್ಗವೆಂದು ಮುಹೂರ್ತ ಶಾಸ್ತ್ರ ಹೇಳುತ್ತದೆ. ಅಂತಹ ಸಂದರ್ಭಗಳಿಗೆ ಆಯ್ಕೆ ಮಾಡುವ ವಿಶೇಷ ಸಮಯವೇ ಶತ್ರು ದಂಡನ ಮುಹೂರ್ತ.

ಮುಖ್ಯ ಸೂಚನೆ:
ಈ ಮುಹೂರ್ತವು ಕೇವಲ ಸ್ವರಕ್ಷಣೆ, ಧರ್ಮಪಾಲನೆ ಮತ್ತು ನ್ಯಾಯಸ್ಥಾಪನೆಗಾಗಿ ಮಾತ್ರ. ಯಾವುದೇ ಕಾರಣವಿಲ್ಲದೆ ಇತರರಿಗೆ ಹಾನಿ ಮಾಡುವ ಉದ್ದೇಶಕ್ಕೆ ಇದನ್ನು ಬಳಸುವುದು ಶಾಸ್ತ್ರೋಕ್ತ ಮಾರ್ಗವಲ್ಲ.

 ಈ ಮುಹೂರ್ತದಲ್ಲಿ ಪರಿಗಣಿಸುವ ಕಾರ್ಯಗಳು
• ಶತ್ರುವಿನ ಅನ್ಯಾಯಕ್ಕೆ ದೃಢ ಪ್ರತಿಕ್ರಿಯೆ
• ಕಾನೂನು ಕ್ರಮ ಆರಂಭ (ದೂರು ಸಲ್ಲಿಕೆ, ನ್ಯಾಯಾಲಯ ವ್ಯಾಜ್ಯ)
• ಪೊಲೀಸ್ ಠಾಣೆ / ಆಡಳಿತಾತ್ಮಕ ವಿಚಾರಣೆ
• ಕುತಂತ್ರ ಅಥವಾ ರಹಸ್ಯ ಸಂಚುಗಳನ್ನು ತಡೆಯುವುದು
• ಧೈರ್ಯಪೂರ್ಣ ಮುಖಾಮುಖಿ ಮಾತುಕತೆ
• ತಂತ್ರಾತ್ಮಕ ಅಥವಾ ರಕ್ಷಣಾತ್ಮಕ ಕ್ರಮಗಳು

1. ಉಗ್ರ ತಿಥಿಗಳ ಶ್ಲೋಕ:
ಉಗ್ರಾಣಿ ಕ್ರೂರಕಾರ್ಯೇಷು ತಿಥಯಃ ಪರಿಕೀರ್ತಿತಾಃ ।
ಚತುರ್ಥ್ಯಷ್ಟಮಿ ನವಮಿ ಚ ಚತುರ್ಧಶೀ ತ್ರಯೋದಶೀ ॥
ಗ್ರಂಥ: ಮುಹೂರ್ತ ಚಿಂತಾಮಣಿ

ಅರ್ಥ:
ಚತುರ್ಥಿ, ಅಷ್ಟಮಿ, ನವಮಿ, ಚತುರ್ಧಶಿ ಮತ್ತು ತ್ರಯೋದಶಿ ತಿಥಿಗಳು ಉಗ್ರ ಮತ್ತು ಕಠಿಣ ಕಾರ್ಯಗಳಿಗೆ ಯೋಗ್ಯವೆಂದು ಹೇಳಲಾಗಿದೆ.

ತೃತೀಯವೂ ದೃಢ ನಿರ್ಧಾರಗಳಿಗೆ ಅನುಕೂಲಕರವೆಂದು ಕೆಲವು ಪರಂಪರೆಗಳು ಪರಿಗಣಿಸುತ್ತವೆ.

2. ಉಗ್ರ ನಕ್ಷತ್ರಗಳ ಶ್ಲೋಕ:
ಉಗ್ರಾಣಿ ಭರಣ್ಯಾರ್ದ್ರಾ ಮಘಾಶ್ಲೇಷಾ ತಥೈವ ಚ ।
ಜ್ಯೇಷ್ಠಾ ಮೂಲಂ ಚ ಪೂರ್ವಾಷಾಢಾ ಪೂರ್ವಾಭಾದ್ರಾ ಚ ಕೀರ್ತಿತಾಃ ॥
ಗ್ರಂಥ: ಕಾಲಾಮೃತ

ಅರ್ಥ:
 ಭರಣಿ, ಆರ್ದ್ರ, ಮಘಾ, ಆಶ್ಲೇಷಾ, ಜ್ಯೇಷ್ಠಾ, ಮೂಲ, ಪೂರ್ವಾಷಾಢಾ ಮತ್ತು ಪೂರ್ವಾಭಾದ್ರ ನಕ್ಷತ್ರಗಳು ಉಗ್ರಸ್ವಭಾವವುಳ್ಳವು.

ಪೂರ್ವ ಫಲ್ಗುನಿಯೂ ಕೆಲವು ಸಂಪ್ರದಾಯಗಳಲ್ಲಿ ತೀಕ್ಷ್ಣ ಸ್ವಭಾವಕ್ಕೆ ಸೇರಿಸಲಾಗಿದೆ.

3. ಮಂಗಳವಾರ ಮತ್ತು ಶನಿವಾರ ಶ್ಲೋಕ:
ಭೌಮೇ ಶತ್ರುವಿನಾಶಾಯ ಶನೌ ದಂಡಪ್ರದಾಯಕೇ ॥
ಗ್ರಂಥ: ಬೃಹತ್ ಸಂಹಿತಾ

ಅರ್ಥ:
 ಮಂಗಳವಾರ ಶತ್ರುನಾಶಕ್ಕೆ ಯೋಗ್ಯ; ಶನಿವಾರ ದಂಡನೆ ಮತ್ತು ಕಠಿಣ ಕ್ರಮಗಳಿಗೆ ಅನುಕೂಲಕರ.

 ಸೋಮವಾರ ಮನೋಸ್ಥೈರ್ಯ ಮತ್ತು ನಿಯಂತ್ರಿತ ನಿರ್ಧಾರಕ್ಕೆ ಸಹಕಾರಿ.

4. ಪಾಪಗ್ರಹ ಸಂಯುಕ್ತ ಲಗ್ನ ಶ್ಲೋಕ:
ಪಾಪಗ್ರಹೈಃ ಸಂಯುತೋ ಲಗ್ನೋ ರಿಪುನಾಶಕರೋ ಭವೇತ್ ॥
ಗ್ರಂಥ: ಧರ್ಮಸಿಂಧು

ಅರ್ಥ: ಪಾಪಗ್ರಹಗಳಿಂದ ಸಂಯುಕ್ತವಾದ ಲಗ್ನವು ಶತ್ರುನಾಶಕಾರಕವಾಗುತ್ತದೆ.

ಲಗ್ನದಲ್ಲಿ ಅಥವಾ ಲಗ್ನಕ್ಕೆ ದೃಷ್ಟಿ ನೀಡುವ ಮಂಗಳ, ಶನಿ, ರಾಹು, ಕೇತುಗಳ ಬಲವು ದಿಟ್ಟ ಕ್ರಮಗಳಿಗೆ ಶಕ್ತಿ ನೀಡುತ್ತದೆ.

ಅನುಕೂಲಕರ ಲಗ್ನ / ರಾಶಿಗಳು
• ಮೇಷ
• ಸಿಂಹ
• ವೃಶ್ಚಿಕ
• ಮಕರ
• ಕುಂಭ

ಈ ರಾಶಿಗಳು ಧೈರ್ಯ, ಸ್ಥೈರ್ಯ ಮತ್ತು ಪ್ರತಿರೋಧ ಶಕ್ತಿಯನ್ನು ಸೂಚಿಸುತ್ತವೆ.

ಜ್ಯೋತಿಷ್ಯ ಸಾರಾಂಶ
ಉಗ್ರ ತಿಥಿ + ತೀಕ್ಷ್ಣ ನಕ್ಷತ್ರ + ಮಂಗಳ/ಶನಿ ಪ್ರಭಾವ + ಪಾಪಗ್ರಹ ಬಲ
= ಶತ್ರು ದಂಡನ ಅಥವಾ ರಕ್ಷಣಾತ್ಮಕ ಕ್ರಮಗಳಿಗೆ ಶಕ್ತಿದಾಯಕ ಸಂಯೋಗ.

ಆದರೆ ಜೊತೆಗೆ ಗಮನಿಸಬೇಕಾದ ಅಂಶಗಳು:

• ಲಗ್ನಬಲ ಮತ್ತು ಚಂದ್ರಬಲ
• ಷಷ್ಠಭಾವ ಬಲ (ಶತ್ರುಭಾವ)
• ಮಾತನಾಡಲು ಹೋಗವ ಕಾಲಕ್ಕೆ ರಾಹುಕಾಲ, ಯಮಗಂಡ, ಗುಳಿಕಕಾಲ ತ್ಯಜಿಸಬೇಕು
• ಗುರುದೃಷ್ಟಿ ಇದ್ದರೆ ಜಯ ಸ್ಥಿರವಾಗುತ್ತದೆ

ಧಾರ್ಮಿಕ ಸಂದೇಶ
ಧರ್ಮದ ಪರವಾಗಿ ಕೈಗೊಂಡ ಕ್ರಮವೇ ಶಾಶ್ವತ ಜಯಕ್ಕೆ ಕಾರಣ.
ಅಧರ್ಮದಿಂದ ಮಾಡಿದ ಪ್ರಯತ್ನ ಕರ್ಮಫಲದ ಮೂಲಕ ವಿಪರೀತ ಫಲ ನೀಡುತ್ತದೆ.

ಆದ್ದರಿಂದ ಶತ್ರು ದಂಡನ ಮುಹೂರ್ತವನ್ನು ಆಯ್ಕೆ ಮಾಡುವಾಗ ಧೈರ್ಯಕ್ಕಿಂತಲೂ ಧರ್ಮಬುದ್ಧಿ ಮುಖ್ಯ.

ಶ್ರೀ ಗುರುರಾಜಾಚಾರ್ಯ ಜೋಶಿ

ವಿವಾಹ ಸಮಯದಲ್ಲಿ ವಧು ವರನ ಎಡಭಾಗದಲ್ಲೇ ಏಕೆ ಕುಳಿತುಕೊಳ್ಳಬೇಕು?

ಹಿಂದೂ ವಿವಾಹದಲ್ಲಿ ವಿವಿಧ ರೀತಿಯ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ವಿವಾಹದ ಸಮಯದಲ್ಲಿ ವಧು ವರನ ಎಡಭಾಗದಲ್ಲೇ ಕುಳಿತುಕೊಳ್ಳಬೇಕೆನ್ನುವ ನಿಯಮವಿದೆ.ವಧು ವರನ ಎಡಭಾಗದಲ್ಲೇ ಯಾಕೆ ಕುಳಿತುಕೊಳ್ಳಬೇಕು.? ಇದಕ್ಕೆ ಕಾರಣ?
ಸನಾತನ ಧರ್ಮವಾದ ಹಿಂದೂ ಧರ್ಮದಲ್ಲಿ ನಡೆಯುವ ಮದುವೆಯಲ್ಲಿ ವಿವಿಧ ರೀತಿಯ ಆಚರಣೆಗಳನ್ನು ಪಾಲಿಸಲಾಗುತ್ತದೆ. ಹಿಂದೂ ವಿವಾಹದಲ್ಲಿನ ಈ ಎಲ್ಲಾ ಆಚರಣೆಗಳ ಬಗ್ಗೆ ನಮಗೆ ಪೂರ್ಣವಾಗಿ ತಿಳಿಯದೇ ಇದ್ದರೂ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಂಡಿರಬೇಕು. ವಧು - ವರರಿಬ್ಬರೂ ಈ ಆಚರಣೆಗಳ ಬಗ್ಗೆ ತಿಳಿದಿರುವುದು ತುಂಬಾನೇ ಮುಖ್ಯ. ವಿವಾಹದಲ್ಲಿನ ಆಚರಣೆಗಳು, ಪದ್ಧತಿಗಳು ವಧು - ವರರ ವೈವಾಹಿಕ ಜೀವನದೊಂದಿಗೆ ನೇರ ಸಂಬಂಧವನ್ನು ಹೊಂದಿರುತ್ತದೆ,
ನಮ್ಮ ವಿವಾಹ ಪದ್ಧತಿಯಲ್ಲಿನ ಆಚರಣೆಗಳಲ್ಲಿ ವಧು ಮತ್ತು ವರರು ಹೇಗೆ ಕುಳಿತುಕೊಳ್ಳಬೇಕು ಎಂಬುದರ ಕುರಿತೂ ನಿಯಮಗಳಿವೆ. ಮದುವೆಯ ಸಮಯದಲ್ಲಿ ವಧು ವರನ ಎಡಭಾಗದಲ್ಲಿ ಕುಳಿತುಕೊಳ್ಳಬೇಕೆನ್ನುವ ನಿಯಮವಿದೆ. ಹೀಗೆ ಕುಳಿತುಕೊಳ್ಳುವ ಮೂಲಕ ವಿವಾಹ ಕಾರ್ಯ ಮಾಡುವುದರಿಂದ ಅದು ಪೂರ್ಣವೆಂದು ಕರೆಸಿಕೊಳ್ಳುತ್ತದೆ. ಯಾವ ಕಾರಣಕ್ಕಾಗಿ ವಧು ವರನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾಳೆ,
01 ಸ್ತ್ರೀ ಅಥವಾ ಮಹಿಳೆಯು ಶಿವನ ಎಡಭಾಗದಿಂದ ಸೃಷ್ಟಿಯಾದವಳು ಎನ್ನುವ ನಂಬಿಕೆಯಿದೆ. ಈ ಭಾಗವು ಶಿವನ ಅರ್ಧನಾರೀಶ್ವರನಿಗೆ ಸಂಬಂಧಿಸಿದ. ಈ ಕಾರಣಕ್ಕಾಗಿ ವಿವಾಹದ ಸಮಯದಲ್ಲಿ ವಧು ವರನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾಳೆ,
02 ಎಡಭಾಗವನ್ನು ಪ್ರೀತಿ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಧುವಾದವಳು ವರನ ಎಡಭಾಗದಲ್ಲಿ ಕುಳಿತುಕೊಳ್ಳುವುದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ ಮತ್ತು ಪ್ರೀತಿ ಯಾವಾಗಲೂ ತುಂಬಿರುತ್ತದೆ ಎನ್ನುವ ನಂಬಿಕೆಯಿದೆ,
03 ಪ್ರಾಚೀನ ನಂಬಿಕೆಗಳ ಪ್ರಕಾರ, ವರರು ತಮ್ಮನ್ನು ರಕ್ಷಿಸಿಕೊಳ್ಳಲು ವಿವಾಹದ ಸಮಯದಲ್ಲಿ ತಮ್ಮ ಬಲಭಾಗದಲ್ಲಿ ಆಯುಧಗಳನ್ನು ಇಟ್ಟುಕೊಳ್ಳುತ್ತಿದ್ದರು. ಈ ಕಾರಣಕ್ಕಾಗಿ ವಧುವನ್ನು ವರನ ಎಡಭಾಗದಲ್ಲಿ ಕುಳಿತುಕೊಳ್ಳಿಸುತ್ತಿದ್ದರು.
04📖, ಇನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡುವುದಾದರೆ, ಧರ್ಮಗ್ರಂಥಗಳಲ್ಲಿ ಪತ್ನಿಯನ್ನು ವಾಮಾಂಗಿ ಎಂದು ಕರೆಯಲಾಗುತ್ತಿತ್ತು. ವಧು - ವರರನ್ನು ಶಿವ - ಪಾರ್ವತಿಯ ಹಾಗೂ ಲಕ್ಷ್ಮಿ ನಾರಾಯಣರ ರೂಪವೆಂದು ಪರಿಗಣಿಸಲಾಗುತ್ತದೆ. ಪಾರ್ವತಿ ಹೇಗೆ ಶಿವನ ಎಡಭಾಗದಲ್ಲಿ ಮತ್ತು ಲಕ್ಷ್ಮಿ ಹೇಗೆ ವಿಷ್ಣುವಿನ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾಳೋ ಹಾಗೇ ವಧು - ವರರನ್ನು ಕೂಡ ಕೂರಿಸಲಾಗುತ್ತದೆ.
05 ಮದುವೆಯ ಎಲ್ಲಾ ವಿಧಿ -ವಿಧಾನಗಳಲ್ಲೂ ವಧುವನ್ನು ವರನ ಎಡಭಾಗದಲ್ಲಿ ಕೂರಿಸುವ ಮೂಲಕ ಎಲ್ಲಾ ರೀತಿಯ ವಿವಾಹ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತದೆ. ವಿವಾಹ ಕಾರ್ಯಗಳಲ್ಲಿ ವಧು - ವರರನ್ನು ವಿಷ್ಣು ಮತ್ತು ಲಕ್ಷ್ಮಿ ದೇವಿಯ ಸ್ಥಾನದಲ್ಲಿಡುತ್ತಾರೆ.
👆,ಈ ಮೇಲಿನ ಕಾರಣದಿಂದಾಗಿ ವಧುವಾದವಳು ವಿವಾಹದ ಸಮಯದಲ್ಲಿ ಅಥವಾ ಮದುವೆಯ ಸಮಯದಲ್ಲಿ ವರನ ಎಡಭಾಗದಲ್ಲಿ ಕುಳಿತುಕೊಂಡು ವಿವಾಹದ ಎಲ್ಲಾ ವಿಧಿ - ವಿಧಾನಗಳನ್ನು ಪೂರ್ಣಗೊಳಿಸುತ್ತಾಳೆ, ಎಂದು ಹೇಳಲಾಗುತ್ತದೆ.

February 27, 2026

ಸಂಗ್ರಹ ದೋಷ ನಿವಾರಣ

ವಿವಾಹ, ಯಾತ್ರೆ, ಗೃಹಪ್ರವೇಶಾದಿ ಶುಭಕಾರ್ಯಗಳಲ್ಲಿ ಚಂದ್ರನ ಸ್ಥಿತಿ ಅತ್ಯಂತ ಮುಖ್ಯ. ಸಂಗ್ರಹ ಅಥವಾ ಯುತಿ ದೋಷ ಇದ್ದರೂ ಕೆಲವು ವಿಶೇಷ ಸ್ಥಿತಿಗಳಲ್ಲಿ ಶಾಸ್ತ್ರವು ಅದನ್ನು ಶಮನಗೊಂಡಂತೆ ಪರಿಗಣಿಸುತ್ತದೆ. 

ಶ್ಲೋಕ – 1
ಶ್ಲೋಕ :-
ಏಕಸ್ಮಿನ್ನಪಿ ಧಿಷ್ಣ್ಯೋಭಿನ್ನ ರಾಶೌ ಖಲಗ್ರಹೇ|
ತಚ್ಚಂದ್ರರ್ಕ್ಷೇ ಕುರ್ಯಾದ್ ವಿವಾಹಯಾತ್ರಾದಿಕಂ ಸರ್ವಂ||
– ಜ್ಯೋತಿರ್ನಿಬಂಧ

ಅರ್ಥ :-
ಚಂದ್ರ ಮತ್ತು ಪಾಪಗ್ರಹಗಳು ಒಂದೇ ನಕ್ಷತ್ರದಲ್ಲಿ ಸ್ಥಿತರಾಗಿ ರಾಶಿ ಬೇರೆ ಬೇರೆ ಆದರೆ ವಿವಾಹಾದಿ ಶುಭ ಕಾರ್ಯಗಳನ್ನು ಮಾಡಿದರೆ ಒಳ್ಳೆಯ ಫಲ ಸಿಗುತ್ತದೆ.

ವಿವರಣೆ :
“ಧಿಷ್ಣ್ಯ” ಎಂದರೆ ನಕ್ಷತ್ರ.
“ಖಲಗ್ರಹ” ಎಂದರೆ ಪಾಪಗ್ರಹಗಳು (ಶನಿ, ಮಂಗಳ, ರಾಹು, ಕೆತು ಇತ್ಯಾದಿ).
ಚಂದ್ರ ಮತ್ತು ಪಾಪಗ್ರಹಗಳು ಒಂದೇ ನಕ್ಷತ್ರದಲ್ಲಿ ಇದ್ದರೂ, ಅವು ವಿಭಿನ್ನ ರಾಶಿಗಳಲ್ಲಿದ್ದರೆ ಸಂಪೂರ್ಣ ಸಂಗ್ರಹ ದೋಷ ಉಂಟಾಗುವುದಿಲ್ಲ.

ಇದರಿಂದ ತಿಳಿಯುವುದು ಏನೆಂದರೆ —
ನಕ್ಷತ್ರ ಒಂದೇ ಆಗಿರುವುದರಿಂದ ಮಾತ್ರ ದೋಷ ನಿರ್ಧಾರ ಮಾಡಬಾರದು. ರಾಶಿ ಭೇದ ಇದ್ದರೆ ದೋಷ ಶಮನವಾಗುತ್ತದೆ.

ಆದ್ದರಿಂದ ವಿವಾಹ ಮುಹೂರ್ತ ನಿರ್ಣಯದಲ್ಲಿ ನಕ್ಷತ್ರ ಮಾತ್ರವಲ್ಲ, ರಾಶಿ ಸ್ಥಿತಿಯೂ ಪರಿಶೀಲನೀಯ.

ಶ್ಲೋಕ – 2
ಶ್ಲೋಕ :-
ವಿಧೌ ಶುಭರತೇ ಸೌಮ್ಯದೃಷ್ಟೇ ವರ್ಗೇ ನಿಜೇ ಸತಾಂ|
ಸಕ್ರೂರೇ ದುಸ್ತಿತಂ ದೋಷಂ ವ್ಯಪೋಹತಿ ವಿಧುಸ್ತದಾ||
– ಬೃಹಸ್ಪತಿ

ಅರ್ಥ :--
ಚಂದ್ರನು ಇರುವ ರಾಶಿಯು ಶುಭಗ್ರಹಾದಿಪತಿ ಆಗಿ ಅದರಲ್ಲಿ ಚಂದ್ರನು ಇದ್ದೂ ಮತ್ತು ವರ್ಗೋತ್ತಮ ಸಹಿತ ಸೌಮ್ಯಗ್ರಹ ದೃಷ್ಟಿ ಇದ್ದರೂ ಪಾಪಗ್ರಹ ಯುತಿ ಇದ್ದರು ಯಾವುದೇ ದೋಷವಾಗುವದಿಲ್ಲ.

ವಿವರಣೆ :
“ವಿಧು” ಎಂದರೆ ಚಂದ್ರ.
ಚಂದ್ರನು ಶುಭಗ್ರಹದ ಸ್ವರಾಶಿಯಲ್ಲಿ ಇದ್ದರೆ (ಉದಾ: ಗುರು, ಶುಕ್ರ ಅಧಿಪತ್ಯ ರಾಶಿ).
ವರ್ಗೋತ್ತಮ ಸ್ಥಿತಿಯಲ್ಲಿ ಇದ್ದರೆ ಬಲ ದ್ವಿಗುಣ.
ಸೌಮ್ಯಗ್ರಹಗಳ (ಗುರು, ಶುಕ್ರ, ಬುಧ) ದೃಷ್ಟಿ ಇದ್ದರೆ ಶುದ್ಧತೆ ಹೆಚ್ಚುತ್ತದೆ.

ಈ ಸ್ಥಿತಿಯಲ್ಲಿ ಪಾಪಗ್ರಹ ಯುತಿ ಇದ್ದರೂ ದೋಷ ಪರಿಣಾಮಕಾರಿಯಾಗುವುದಿಲ್ಲ.

ಅರ್ಥಾತ್ —
ಚಂದ್ರಬಲ ಮತ್ತು ಶುಭದೃಷ್ಟಿ ಇದ್ದರೆ ಪಾಪಸಂಯೋಗ ಶಮನಗೊಳ್ಳುತ್ತದೆ.

ತಾತ್ಪರ್ಯ
ಸಂಗ್ರಹ ಅಥವಾ ಯುತಿ ದೋಷವು ಪ್ರತೀ ಸಂದರ್ಭದಲ್ಲೂ ಅನಿಷ್ಟವಲ್ಲ.
ನಕ್ಷತ್ರ ಒಂದೇ ಇದ್ದರೂ ರಾಶಿ ಭೇದ ಇದ್ದರೆ ದೋಷವಿಲ್ಲ.
ಚಂದ್ರನು ಶುಭಸ್ಥಿತಿಯಲ್ಲಿ, ವರ್ಗೋತ್ತಮದಲ್ಲಿ, ಸೌಮ್ಯ ದೃಷ್ಟಿಯಲ್ಲಿದ್ದರೆ ಪಾಪಯುತಿ ಪರಿಣಾಮಕಾರಿಯಾಗುವುದಿಲ್ಲ.

ಶಾಸ್ತ್ರವಾಕ್ಯ ಸ್ಪಷ್ಟ —
“ಚಂದ್ರಬಲ ಹಾಗೂ ಶುಭದೃಷ್ಟಿ ಇದ್ದಲ್ಲಿ ದೋಷ ಶಮನ ನಿಶ್ಚಿತ.

ಶ್ರೀ ಗುರುರಾಜಾಚಾರ್ಯ ಜೋಶಿ ತಾಳಿಕೋಟೆ 

February 25, 2026

ನಿಶ್ಚಯ ಮತ್ತು ನಂಬಿಕೆ

    ಒಂದು ಸಲ ದೇವರ್ಷಿ ನಾರದರು ಹೋಗ್ತಾ ಇದ್ರು. ಒಬ್ಬ ಮನುಷ್ಯ, ಆಲದ ಮರದ ಕೆಳಗೆ ತಪಸ್ಸು ಮಾಡುತ್ತಿದ್ದ.  ನಾರದರನ್ನು ಕಂಡು," ಮಹರ್ಷಿಗಳೇ  ನನಗೆ ಜೀವನದಿಂದ ಯಾವಾಗ ಮುಕ್ತಿ ಸಿಗತ್ತೆ" ಎಂದು ಕೇಳಿದನು. ನಾರದರು ಅವನು ತಪಸ್ಸು ಮಾಡುತ್ತಿದ್ದ ಮರದ ಮೇಲೆ ನೋಡಿದರು. ನಂತರ ಅವನಿಗೆ "ನೋಡಪ್ಪ ನೀನು ಕೂತಿದಿಯಲ್ಲ, ಈ ಆಲದ ಮರದಲ್ಲಿ ಎಷ್ಟು ಎಲೆಗಳು ಇದೆಯೋ ಅಷ್ಟು ಜನ್ಮ ನಿನಗೆ ಇದೆ. ಅಷ್ಟು ಜನ್ಮಗಳು ಮುಗಿದಮೇಲೆ ನಿನಗೆ ಮುಕ್ತಿ ಸಿಗುತ್ತೆ" ಅಂದರು. ಅವನು ಹೇಳಿದ ಅಯ್ಯೋ ಕರ್ಮ, ಇನ್ನೂ ಅಷ್ಟು ಜನ್ಮಗಳಿದಾವೆ, ನಾನ್ಯಾಕೆ ಕಷ್ಟಪಟ್ಟು ತಪಸ್ಸು ಮಾಡ್ಲಿ. ಸುಮ್ಮನೆ ಮನೆಗೆ ಹೋಗೋದೇ  ವಾಸಿ.  ಹೀಗೆ ತಪಸ್ಸು ಮಾಡುವುದರಿಂದ  ಯಾವ ಪ್ರಯೋಜವು ಇಲ್ಲ. ಹೀಗೆ ಅಂದ್ಕೊಂಡು  ತಪಸ್ಸು ಬಿಟ್ಟೆದ್ದು ತನ್ನ ಮನೆಕಡೆ ನಡೆದ.

    ನಾರದರು  ಹಾಗೆ ಮುಂದೆ ಹೋಗ್ತಾ ಇದ್ರು. ಇನ್ನೊಬ್ಬ ವ್ಯಕ್ತಿ ಹುಣಸೆ ಗಿಡದ ಕೆಳಗೆ ಕುಳಿತು ತಪಸ್ಸು ಮಾಡ್ತಿದ್ದ. ನಾರದ್ರು  ಬಂದ್ಕೂಡ್ಳೆ, "ಮಹರ್ಷಿಗಳೇ, ನನ್ನ ಜನ್ಮ ಯಾವಾಗ ಮುಗಿ ಯುತ್ತೆ, ಪುನರ್ಜನ್ಮಾನೇ  ಇಲ್ಲದಂತಾಗುವುದು ಯಾವಾಗ" ಎಂದು ಕೇಳಿದ. ಪುನಃ ನಾರದರು  ತಪಸ್ಸು ಮಾಡ್ತಿದ್ದ  ಮರದ ಮೇಲೆ ನೋಡಿ, "ನೀನು ಯಾವ ಮರದ ಕೆಳಗೆ  ಕೂತಿದ್ಯೊ, ಆ ಮರದ ಎಲೆಗಳು ಎಷ್ಟು ಇದೆಯೋ, ಅಷ್ಟು ಜನ್ಮ ನಿನಗೆ ಇದೆ. ಆಮೇಲೆ ನಿನಗೆ “ಮುಕ್ತಿ” ಎಂದರು.
ಈ ಮಾತನ್ನು ಕೇಳಿ, ಆ ಮನುಷ್ಯ ಸಂತೋಷದಿಂದ ಕುಣಿ ಯಲು ಶುರುಮಾಡಿದ. ನಾರದರಿಗೆ  ಆಶ್ಚರ್ಯವಾಯ್ತು. ಅಯ್ಯೋ ಇವ್ನಾ, ಇವನು ಕೂತಿರೊ ಮರ ಹುಣಸೇಮರ ಇದ್ರಲ್ಲಿ  ಇರೊದೆಲ್ಲ ಸಣ್ಣ ಸಣ್ಣ ಎಲೆಗಳು,ಒಂದೊಂದು  ರೆಂಬೆಗಳಲ್ಲೂ  ಸಾವಿರಾರು  ಎಲೆಗಳಿವೆ. ಇವನ್ಯಾಕೆ ಇಷ್ಟೊಂದು ಖುಷಿ  ಪಡ್ತಿದಾನೆ. ಅಂದ್ಕೊಂಡ, ನಾರದ್ರು ಅವನನ್ನು ಏಕೆ ಹೀಗೆ ಕುಣಿಯುವೆ ಎಂದು ಕೇಳಿದರು, ಅದಕ್ಕೆ ಮಹರ್ಷಿಗಳೇ ಸದ್ಯ ಒಂದಲ್ಲ ಒಂದು ದಿವಸ ಈ ಜನುಮ ಮುಗಿಯುತ್ತೆ ಅಂತ ಖುಷಿಯಾಯಿತು ಎಂದ. ಅವನಲ್ಲಿ ಆ ನಂಬಿಕೆ ಇತ್ತು.

    ಮೊದಲ ಮನುಷ್ಯ ಕುಳಿತ ಆಲದ ಮರದ ಎಲೆಗಳು  ದೊಡ್ಡದಿರುತ್ತೆ. ಆದ್ರೂ ಅವನಿಗೆ ಆ ನಂಬಿಕೆ ಮತ್ತು ನಿಶ್ಚಯ ಇರಲಿಲ್ಲ. ಹಾಗಾಗಿ ಅವನು ಎದ್ಹೋಗ್ಬಿಟ್ಟ.  ಎರಡನೇ ಮನುಷ್ಯ ಕುಳಿತ ಹುಣಸೆ ಮರದಲ್ಲಿ, ಆಲದ ಮರಕ್ಕಿಂತ  ಎರಡುಪಟ್ಟು  ಸಣ್ಣಸಣ್ಣ ಎಲೆಗಳು ಇದ್ದರೂ,  ಈತನ ನಿಶ್ಚಯ ಮತ್ತು ನಂಬಿಕೆ ಗಟ್ಟಿಯಾಗಿತ್ತು. ಈ ಜೀವನ ನಂದಲ್ಲ  ಭಗವಂತನದು ಎಂದು ಅವನು ತಿಳಿದಿದ್ದ. ಹಾಗಾಗಿ ಸಂತೋಷಗೊಂಡ.

" ಮಾಂ ಚಿ ಯೋ  ವ್ಯಭಿಚಾರೇಣ, ಭಕ್ತಿ ಯೋಗೇನ ಸೇವತೇ, ಸ  ಗುಣಾನ್ ಸಮತೀ ತ್ಯೈತಾನ್ ಬ್ರಹ್ಮ ಭೂಯಾಯ ಕಲ್ಪತೇ!"
ಅರ್ಥ:- ಯಾವನೋ  ನನ್ನನ್ನು ಅನನ್ಯ, ಪರಮ ಪ್ರೇಮ ಲಕ್ಷಣವಾದ ,ಅವ್ಯಭಿಚಾರೀ   ಭಕ್ತಿ ಯೋಗದಿಂದ ಸೇವಿಸುತ್ತಾನೋ  ಅವನು ಈ ಗುಣಗಳನ್ನು ಮೀರಿ ಬ್ರಹ್ಮಸ್ವರೂಪವನ್ನು ಹೊಂದಲು ಸಮರ್ಥನಾಗುತ್ತಾನೆ.

ಅಪರಿಚಿತನ ಕೊನೆಯ ಪಯಣ

    ನಾನು ಒಬ್ಬ ಕಾರು ಚಾಲಕ. ಹೆಚ್ಚಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತೇನೆ. ಕಳೆದ ವಾರ ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಒಬ್ಬ ವಯಸ್ಸಾದ ವ್ಯಕ್ತಿ ನನ್ನ ಟ್ಯಾಕ್ಸಿ ಏರಿದರು. ಬಿಳಿ ಕುರ್ತಾ, ದೋತಿ, ದಣಿದ ಕಣ್ಣುಗಳು—ಆದರೆ ಅವರ ಧ್ವನಿಯಲ್ಲಿ ಒಂದು ವಿಚಿತ್ರವಾದ ದೃಢತೆ ಇತ್ತು. ಅವರು ಕಾರು ಹತ್ತಿದ ತಕ್ಷಣ ಹೀಗೆಂದರು: "ಇಂದು ರಾತ್ರಿ ನೀನು ನನ್ನನ್ನು ಐದು ಸ್ಥಳಗಳಿಗೆ ಕರೆದೊಯ್ಯಬೇಕು. ನಾನು ನಿನಗೆ 5000 ರೂಪಾಯಿ ನಗದು ಕೊಡುತ್ತೇನೆ. ಆದರೆ ಪಯಣ ಮುಗಿಯುವವರೆಗೂ 'ಏಕೆ?' ಎಂದು ಪ್ರಶ್ನಿಸಬಾರದು." ಅವರು ಒಂದು ಚೀಟಿಯನ್ನು ನನ್ನ ಕೈಗಿಟ್ಟರು. ಅದರಲ್ಲಿ ಐದು ವಿಳಾಸಗಳಿದ್ದವು.

​ಮೊದಲ ನಿಲ್ದಾಣ
ದಕ್ಷಿಣ ಕೋಲ್ಕತ್ತಾದ ಒಂದು ಹಳೆಯ ಮನೆ. ನಾನು ಕಾರು ನಿಲ್ಲಿಸಿದೆ. ಅವರು ಕೆಳಗಿಳಿಯಲಿಲ್ಲ. ಕಿಟಕಿಯ ಗಾಜು ಇಳಿಸಿ ಸುಮ್ಮನೆ ಆ ಮನೆಯನ್ನು ದಿಟ್ಟಿಸಿ ನೋಡಿದರು. ಹತ್ತು ನಿಮಿಷ ಕಳೆದವು. ಅವರ ಕಣ್ಣುಗಳಿಂದ ನೀರು ಹರಿಯುತ್ತಿತ್ತು, ಆದರೆ ಸದ್ದಿರಲಿಲ್ಲ. "ಹೋಗೋಣ... ಮುಂದಿನ ಜಾಗಕ್ಕೆ," ಎಂದರು.

​ಎರಡನೇ ನಿಲ್ದಾಣ
ಒಂದು ಪ್ರಾಥಮಿಕ ಶಾಲೆ. ಗೇಟ್ ಲಾಕ್ ಆಗಿತ್ತು. ಒಳಗೆ ಕತ್ತಲಲ್ಲಿ ಆಟದ ಮೈದಾನವಿತ್ತು. ಅವರು ಕೆಳಗಿಳಿದು ಮೆಲ್ಲನೆ ಅಲ್ಲಿನ ಉಯ್ಯಾಲೆಯ ಬಳಿ ಹೋದರು. ಅದರ ಮೇಲೆ ಕುಳಿತು ಮೃದುವಾಗಿ ತೂಗಿದರು. ಇಪ್ಪತ್ತು ನಿಮಿಷಗಳ ನಂತರ ಮರಳಿ ಬಂದರು. "ನಾನು ಇಲ್ಲಿ 43 ವರ್ಷ ಪಾಠ ಮಾಡಿದ್ದೇನೆ. ಅದು ನನ್ನ ಜೀವನದ ಅತ್ಯುತ್ತಮ ಸಮಯವಾಗಿತ್ತು."

​ಮೂರನೇ ನಿಲ್ದಾಣ
ಒಂದು ಸಣ್ಣ ಹಳೆಯ ಕಾಫಿ ಹೌಸ್. ಅವರು ಒಳಗೆ ಹೋಗಿ ಒಂದು ಕಪ್ ಚಹಾವನ್ನು ಆರ್ಡರ್ ಮಾಡಿದರು. ಮೂಲೆಯ ಟೇಬಲ್‌ನಲ್ಲಿ ಒಬ್ಬರೇ ಕುಳಿತರು. ಚಹಾವನ್ನು ಮುಟ್ಟಲೇ ಇಲ್ಲ. ಸುಮ್ಮನೆ ಸುತ್ತಲೂ ನೋಡುತ್ತಿದ್ದರು. ಹದಿನೈದು ನಿಮಿಷಗಳ ನಂತರ ಮಂದಸ್ಮಿತರಾಗಿ ಹಿಂತಿರುಗಿದರು. "ನಾನು ಮೊದಲ ಬಾರಿಗೆ ಉಮಾದೇವಿಯನ್ನು ಭೇಟಿಯಾಗಿದ್ದು ಇಲ್ಲೇ. 1969ರಲ್ಲಿ."

​ನಾಲ್ಕನೇ ನಿಲ್ದಾಣ
ನಿಮ್ತಾಲ ಚಿತಾಗಾರ. ಅವರು ಕೆಳಗಿಳಿದರು. ಒಂದು ನಾಮಫಲಕದ ಮುಂದೆ ನಿಂತು ಯಾವುದೋ ಮಂತ್ರ ಪಠಿಸಿದಂತೆ ಪಿಸುಗುಟ್ಟುತ್ತಿದ್ದರು. ಅರ್ಧ ಗಂಟೆಯ ನಂತರ ಮರಳಿದಾಗ ಅವರ ಕಣ್ಣುಗಳು ಕೆಂಪಾಗಿದ್ದವು. "ಅವಳು ಹೋಗಿ ಮೂರು ವರ್ಷಗಳಾದವು."

​ಐದನೇ ನಿಲ್ದಾಣ
ಒಂದು ದೊಡ್ಡ ಸರ್ಕಾರಿ ಆಸ್ಪತ್ರೆ. ಅವರು ಕಾರನ್ನು ನಿಲ್ಲಿಸಲು ಹೇಳಿದರು. ನಂತರ ನನ್ನನ್ನು ನೋಡಿ ಹೀಗೆಂದರು: "ಈಗ ನಾನು ನಿನಗೆ ಕಾರಣ ಹೇಳುತ್ತೇನೆ. ನನಗೆ ನಾಲ್ಕನೇ ಹಂತದ ಕ್ಯಾನ್ಸರ್ ಇದೆ. ಡಾಕ್ಟರ್ ಹೇಳಿದ್ದಾರೆ ಇನ್ನೇನು ಕೆಲವು ವಾರಗಳು... ಅಥವಾ ಕೆಲವು ದಿನಗಳಷ್ಟೇ ಬಾಕಿ ಅಂತ. ಇಂದು ರಾತ್ರಿ ನನ್ನ ಇಡೀ ಜೀವನವನ್ನು ಕೊನೆಯ ಬಾರಿಗೆ ಒಮ್ಮೆ ನೋಡಬೇಕೆಂದುಕೊಂಡಿದ್ದೆ."
​ನಾನು ಸ್ಟೀರಿಂಗ್ ವೀಲ್ ಮೇಲೆ ತಲೆಯಿಟ್ಟು ಅಳಲು ಪ್ರಾರಂಭಿಸಿದೆ. 

ಅವರು ಹೇಳಿದರು:
"ಆ ಮನೆ—ನನ್ನ ಮಕ್ಕಳನ್ನು ಬೆಳೆಸಿದ ಜಾಗ. 
ಆ ಶಾಲೆ—ನನ್ನ ಜೀವನದ ಉದ್ದೇಶವನ್ನು ಕಂಡುಕೊಂಡ ಜಾಗ. 
ಆ ಕಾಫಿ ಹೌಸ್—ನಾನು ಪ್ರೀತಿಯಲ್ಲಿ ಬಿದ್ದ ಜಾಗ. 
ಆ ಚಿತಾಗಾರ—ನನ್ನವಳಿಗೆ ಕೊನೆಯ ವಿದಾಯ ಹೇಳಿದ ಜಾಗ ಮತ್ತು 
ಈ ಆಸ್ಪತ್ರೆ—ಇಲ್ಲಿ ನಾನು ಇಂದು ದಾಖಲಾಗುತ್ತಿದ್ದೇನೆ. ನಾನು ಮತ್ತೆ ಮನೆಗೆ ಮರಳುವುದಿಲ್ಲ."

​ಅವರು 5000 ರೂಪಾಯಿಗಳನ್ನು ಬಲವಂತವಾಗಿ ನನ್ನ ಕೈಗಿಟ್ಟರು. "ಧನ್ಯವಾದಗಳು. ನನ್ನ ಜೀವನವನ್ನು ಮತ್ತೊಮ್ಮೆ ನೋಡಲು ನೀನು ಸಹಾಯ ಮಾಡಿದೆ. ನನ್ನನ್ನು ಪ್ರೀತಿಯಿಂದ ನಡೆಸಿಕೊಂಡ ನನ್ನ ಜೀವನದ ಕೊನೆಯ ಅಪರಿಚಿತ ವ್ಯಕ್ತಿ ನೀನು." ನಾನು ಅದನ್ನು ತೆಗೆದುಕೊಳ್ಳಲು ಇಷ್ಟಪಡಲಿಲ್ಲ. "ಬೇಡ ತಾತಾ, ಇದನ್ನು ನಾನು ಸ್ವೀಕರಿಸಲಾರೆ," ಎಂದೆ. ಅವರು ಹೇಳಿದರು, "ತೆಗೆದುಕೋ. ಇದನ್ನು ಕೊಡಲು ನನಗೆ ಯಾರೂ ಇಲ್ಲ. ನನ್ನ ಮಕ್ಕಳು ನನ್ನ ಜೊತೆ ಮಾತನಾಡುವುದಿಲ್ಲ. ಯಾವ ಸ್ನೇಹಿತರೂ ಉಳಿದಿಲ್ಲ. ನೀನು ನನಗೆ ಮೂರು ಗಂಟೆಗಳ ಕಾಲಾವಕಾಶ ನೀಡಿದ್ದೀಯ. ಮೂರು ಗಂಟೆಗಳ ಮಾನವೀಯತೆ. ಇದು ಹಣಕ್ಕಿಂತ ಹೆಚ್ಚು ಬೆಲೆಬಾಳುವಂತದ್ದು."  ತಮ್ಮ ಸಣ್ಣ ಸೂಟ್‌ಕೇಸ್ ಹಿಡಿದು ಅವರು ಆಸ್ಪತ್ರೆಯ ಒಳಗೆ ಹೋದರು.

​ಮಾರನೇ ದಿನ ನಾನು ಮತ್ತೆ ಆ ಆಸ್ಪತ್ರೆಗೆ ಅವರನ್ನು ನೋಡಲು ಹೂವಿನ ಗುಚ್ಛದೊಂದಿಗೆ ಹೋದೆ.  ಅವರು ಮಂದಹಾಸ ಬೀರಿದರು. "ನೀನು ಬಂದೆಯಾ?" ಇಂದು ಕೇಳಿದರು "ನಿಮ್ಮನ್ನು ಹಾಗೆಯೇ ಬಿಟ್ಟು ಬರಲು ಮನಸ್ಸು ಬರಲಿಲ್ಲ." ಎಂದೆ 
​ನಾವು ಎರಡು ಗಂಟೆಗಳ ಕಾಲ ಮಾತನಾಡಿದೆವು. ಅವರ ಪತ್ನಿ ಉಮಾದೇವಿ, ಅವರ ವಿದ್ಯಾರ್ಥಿಗಳು ಮತ್ತು ದೂರಾದ ಮಕ್ಕಳ ಬಗ್ಗೆ ಹರಟೆ ಹೊಡೆದೆವು. 

ನಾನು ಪ್ರತಿದಿನ ಹೋಗಲಾರಂಭಿಸಿದೆ. ಚಹಾ ತೆಗೆದುಕೊಂಡು ಹೋಗುತ್ತಿದ್ದೆ, ಪತ್ರಿಕೆ ಓದಿ ಹೇಳುತ್ತಿದ್ದೆ. ಕೆಲವೊಮ್ಮೆ ಸುಮ್ಮನೆ ಅವರ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದೆ. ಒಂದು ದಿನ ಅವರು ಹೇಳಿದರು, "ನಾನು ಒಬ್ಬಂಟಿಯಾಗಿ ಸಾಯುತ್ತೇನೆ ಎಂದುಕೊಂಡಿದ್ದೆ. ಆದರೆ ನೀನು ಈಗ ಇಲ್ಲಿದ್ದೀಯ. ಕೊನೆಯಲ್ಲಿ ಒಬ್ಬ ಅಪರಿಚಿತನೇ ಜೊತೆಯಾಗಿ ಕುಟುಂಬದಂತಾದನು—ಇದೇ ನನ್ನ ಸೌಭಾಗ್ಯ." ನಾನು ಅವರ ಕೈ ಹಿಡಿದು ಹೇಳಿದೆ, "ನೀವು ಒಬ್ಬಂಟಿಯಲ್ಲ."

​ಮರುದಿನ ಬೆಳಗಿನ ಜಾವ 3:17ಕ್ಕೆ ಅವರು ನಿಧನರಾದರು. ನಾನು ಅಲ್ಲಿಯೇ ಅವರ ಕೈ ಹಿಡಿದು ಕುಳಿತಿದ್ದೆ. ಅವರ ಕೊನೆಯ ಮಾತುಗಳೆಂದರೆ, "ಎಲ್ಲರಿಗೂ ಹೇಳು... ಅಪರಿಚಿತರನ್ನು ಗಮನಿಸಿ ನೋಡಿ ಅಂತ. ನಾವೆಲ್ಲರೂ ಎಲ್ಲೋ ಹೊರಟಿದ್ದೇವೆ. ಕೆಲವರು ವೇಗವಾಗಿ, ಕೆಲವರು ನಿಧಾನವಾಗಿ. ದಾರಿಯುದ್ದಕ್ಕೂ ದಯೆ ತೋರಿಸಿ. ನೀನು ಹಾಗೆಯೇ ಇದ್ದೆ. ನನ್ನ ಕೊನೆಯ ದಿನಗಳನ್ನು ನೀನು ಸುಂದರಗೊಳಿಸಿದೆ."
​ಮಾನಿಟರ್‌ನ ಶಬ್ದ ನಿಂತು ನೇರ ಗೆರೆಯಾಯಿತು.

​ಅವರ ಅಂತ್ಯಕ್ರಿಯೆಯಲ್ಲಿ ಕೇವಲ ಆರು ಜನರಿದ್ದರು. ನಾನು, ಮೂವರು ದಾದಿಯರು (nurses), ಒಬ್ಬ ವಕೀಲ ಮತ್ತು ಅವರ ಒಬ್ಬ ಹಳೆಯ ವಿದ್ಯಾರ್ಥಿ. 

43 ವರ್ಷಗಳ ಬೋಧನೆ. 
52 ವರ್ಷಗಳ ದಾಂಪತ್ಯ. 
81 ವರ್ಷಗಳ ಜೀವನ. ಕೇವಲ ಆರು ಜನ.

​ನಾನು ಅಂದುಕೊಂಡೆ: ಅವರು ನನಗೆ ಕಲಿಸಿದ್ದು—
ಪ್ರತಿಯೊಬ್ಬ ಅಪರಿಚಿತನೂ ಯಾರೋ ಒಬ್ಬರ ಇಡೀ ಪ್ರಪಂಚವಾಗಿರುತ್ತದೆ.
ಪ್ರತಿಯೊಬ್ಬ ಪ್ರಯಾಣಿಕನೂ ಒಂದು ಕಥೆ.
ಪ್ರತಿಯೊಬ್ಬ ವ್ಯಕ್ತಿಯೂ ಬದುಕುತ್ತಿದ್ದಾನೆ, ಸಾಯುತ್ತಿದ್ದಾನೆ, ಯಾರಾದರೂ ತನ್ನನ್ನು ಗಮನಿಸಲಿ ಎಂದು ಕಾಯುತ್ತಿದ್ದಾನೆ.

ಅವರು ತಮ್ಮ ಜೀವನದ ಹಾದಿಯಲ್ಲಿ ನನ್ನನ್ನು ಕರೆದೊಯ್ದಿದ್ದಕ್ಕಾಗಿ 5000 ರೂಪಾಯಿ ನೀಡಿದರು. ಆದರೆ ಅವರು ನನಗೆ ಕಲಿಸಿದ ಪಾಠ ಅದಕ್ಕಿಂತ ಹೆಚ್ಚು ಬೆಲೆಬಾಳುವಂತದ್ದು. ಮಾನವೀಯತೆ ಎಂಬುದು ಹೆಚ್ಚುವರಿ ಗುಣವಲ್ಲ, ಅದೇ ಅಸಲಿ ಬದುಕು.

​ಇಂದಿಗೂ ನಾನು ಆ 5000 ರೂಪಾಯಿಗಳನ್ನು ಖರ್ಚು ಮಾಡದೆ ನನ್ನ ಕಾರಿನಲ್ಲೇ ಇಟ್ಟಿದ್ದೇನೆ. ಏಕೆಂದರೆ ಪ್ರತಿ ಪ್ರಯಾಣಿಕನೂ ತನ್ನ ಕೊನೆಯ ಪಯಣದಲ್ಲಿರಬಹುದು. ಪ್ರತಿಯೊಬ್ಬ ಅಪರಿಚಿತನೂ ತನ್ನ ಕೊನೆಯ ವಿದಾಯ ಹೇಳುತ್ತಿರಬಹುದು. ಹಾಗಾಗಿ ಈಗ ನಾನು ಚಾಲನೆ ಮಾಡುವ ರೀತಿಯೇ ಬದಲಾಗಿದೆ. ನಾನು ಕೇಳುತ್ತೇನೆ, ಆಲಿಸುತ್ತೇನೆ, ಜನರನ್ನು ಗಮನಿಸುತ್ತೇನೆ. ಒಬ್ಬ ವಯಸ್ಸಾದ ಶಿಕ್ಷಕ ತನಗಾಗಿ ಒಂದು ಸುಂದರವಾದ ಸಂತೋಷದ ರಾತ್ರಿಯನ್ನು ಬಯಸಿದ್ದರು, ಒಬ್ಬ ಅಪರಿಚಿತ ಅದನ್ನು ನೀಡಿದ್ದ.

​ನಾವು ಕೂಡ ಅಂತಹ ವ್ಯಕ್ತಿಯಾಗೋಣ. ನಾವು ಭೇಟಿಯಾಗುವ ಯಾರಾದರೂ ತಮ್ಮ ಜೀವನದ ಕೊನೆಯ ಪಯಣದಲ್ಲಿರಬಹುದು. ಅಂತವರ ಜೀವನವನ್ನು ಸುಂದರಗೊಳಿಸೋಣ.

ಮನುಷ್ಯರಾಗಿ ಹುಟ್ಟಿದ ಮೇಲೆ ಮಾನವೀಯತೆ ಮರೆತರೆ ಹೇಗೆ ??

ಇದು ಅದಾವ ಚಾಲಕನ ಸ್ವ ಅನುಭವವೋ ಅಥವಾ ಅದಾವ ಕತೆಗಾರನ ಕಲ್ಪನೆಯೋ ಕಾಣೆ ಇಂಗ್ಲೀಷಿನಲ್ಲಿ ಓದಿದ್ದನ್ನು ಕೊಂಚ ಬದಲಿಸಿ ಸದುದ್ದೇಶದಿಂದ ಒಂದು ಒಳ್ಳೆ ಸಂದೇಶ ಕೊಡುವ ಉದ್ದೇಶದಿಂದ ಇಲ್ಲಿ ಹಂಚಿಕೊಂಡಿರುವೆ 

*ಕೃಪೆ : ಫೇಸ್ಬುಕ್* 
*ಅನುಪಮ ಅರುಲಿಕೆ ಅವರ ವಾಲ್ ನಿಂದ... 

ದೇವರಿಗೆ ಧನ್ಯವಾದಗಳು

    ಇಕಹಾರ್ಟ್ ಅಂತ ಒಬ್ಬರು ಜಪಾನ್ ದೇಶದ ಸಂತರಿದ್ದರು. ಅವರಿಗೆ ಒಮ್ಮೆ ದೇವಿ ಪ್ರತ್ಯಕ್ಷಳಾದಳು. ಸಂತ ಸುಮ್ಮನೆ ಕೈಮುಗಿದು ನಿಂತಿದ್ದ. ಅವರ ಸ್ನೇಹಿತರು "ದೇವರು ಪ್ರತ್ಯಕ್ಷ ಆಗಿದ್ದಾರೆ. ಏನಾದರೂ ಕೇಳು" ಎಂದರು. ಅದಕ್ಕೆ ಇಕಹಾರ್ಟ್ "ನಾನು ದೇವಸ್ಥಾನದ ಒಳಕ್ಕೆ ಬರುವಾಗ ಪಾದರಕ್ಷೆ ಬಿಡ್ತಾರಲ್ಲ, ಅಲ್ಲಿಯೇ ಕೇಳುವುದನ್ನು ಬಿಟ್ಟು ಬಂದಿದ್ದೇನೆ" ಎಂದ. ಅದಕ್ಕೆ ಸ್ನೇಹಿತರು "ಕೇಳುವುದು ಬಿಟ್ಟಿದ್ದೀಯ ಅಂದ ಮೇಲೆ ದೇವಸ್ಥಾನಕ್ಕೆ ಯಾಕೆ ಬಂದೆ ?" ಎಂದು ಪ್ರಶ್ನಿಸಿದರು. ದೇವರ ಹತ್ತಿರ ಏನಾದರೂ ಕೇಳುವುದಕ್ಕಾಗಿಯೇ ದೇವಸ್ಥಾನಕ್ಕೆ ಹೋಗಬೇಕು ಎನ್ನುವುದು ನಂಬಿಕೆ. 

    ಸ್ನೇಹಿತರ ಪ್ರಶ್ನೆಗೆ ಇಕಹಾರ್ಟ್, "ನಾನು ದೇವರಲ್ಲಿ ಏನಾದರೂ ಕೇಳಲು ಬಂದಿಲ್ಲ. ನನಗೆ ಇಷ್ಟೊಂದು ಸುಂದರವಾದ ಜೀವನ ಕೊಟ್ಟಿದ್ದಾನಲ್ಲ. ಅದಕ್ಕೆ ಅವನಿಗೆ ಧನ್ಯವಾದ ಹೇಳಲು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದ.

    ದೇವರಿಗೆ ನಾವು ಧನ್ಯವಾದ ಹೇಳಬೇಕು. ಎಷ್ಟೋ ಜನರಿಗೆ ಉಣ್ಣಲು ಅನ್ನವೇ ಇಲ್ಲ. ಭಿಕ್ಷೆ ಬೇಡಿ ತಿನ್ನುತ್ತಾರೆ. ಆದರೆ ನನ್ನ ಡೈನಿಂಗ್ ಟೇಬಲ್ ಮೇಲೆ ಅನ್ನ ಇದೆಯಲ್ಲ. ಅದಕ್ಕಾಗಿಯಾದರೂ ನಾನು ದೇವರಿಗೆ ಕೃತಜ್ಞನಾಗಿರಬೇಕು. ಎಷ್ಟೋ ಮಂದಿಗೆ ನಡೆಯಲು ಕಾಲುಗಳೇ ಇಲ್ಲ. ನನಗೆ ನಡೆಯುವುದಕ್ಕೆ ಸದೃಢವಾದ ಕಾಲುಗಳನ್ನು ನೀಡಿದ್ದಾನಲ್ಲ. ಅದಕ್ಕೆ ಉಪಕೃತನಾಗದಿದ್ದರೆ ಹೇಗೆ ಹೇಳಿ? 

    ನಾವು ದೇವಸ್ಥಾನಕ್ಕೆ ಹೋಗುವಾಗ ಪಟ್ಟಿ ಹಿಡಿದುಕೊಂಡೇ ಹೋಗಿರುತ್ತೇವೆ. ಈ ಜೀವನ ದೇವರು ಕೊಟ್ಟ ಭಿಕ್ಷೆ. ಅದಕ್ಕೆ ದೇವರಿಗೆ ಧನ್ಯವಾದ ಅರ್ಪಿಸಲು ದೇವಾಲಯಕ್ಕೆ ಹೋಗಬೇಕೇ ವಿನಃ  ಏನನ್ನೋ ಕೇಳುವುದಕ್ಕಲ್ಲ. ಸಮುದ್ರದ ನೀರು ಉಪ್ಪು. ಸಮುದ್ರದ ನೀರನ್ನೇ ನಮ್ಮ ಬಾಯಲ್ಲಿ ಹಾಕಿದ್ದರೆ ನಡೆಯುತ್ತದೆಯೇ ?  ಉಪ್ಪು ನೀರು ಮೇಲೆ ತೆಗೆದುಕೊಂಡು ಹೋಗಿ ಮಳೆಯ ಮೂಲಕ ನಮ್ಮ ಬಾಯಿಗೆ ಸಿಹಿ ನೀರು ಹಾಕಿದ್ದಾನೆ. ಅದಕ್ಕೆ ಧನ್ಯವಾದ ಹೇಳು ದೇವನಿಗೆ. ಬಸ್ಸು ತುಂಬಿತ್ತು ಅಂದರೆ ದುಡ್ಡು ಕೊಡ್ತೀನಿ ಅಂದರೂ ಹತ್ತಿಸಿಕೊಂಡು ಹೋಗಲ್ಲ. ಕೆಳಕ್ಕೆ ಇಳಿ ಅಂತಾರೆ. ಟಿಕೆಟ್ ಇಲ್ಲದೆ ನಮಗೆ ಇಲ್ಲಿ ಇರಲು ದೇವರು ಒಂದು ಅವಕಾಶ ಕೊಟ್ಟಿದ್ದಾನಲ್ಲ, ಅದಕ್ಕೆ ಒಂದು ಧನ್ಯವಾದ ಹೇಳಬೇಕು. ವಾಹನಕ್ಕೆ ಪೆಟ್ರೋಲ್ ಹಾಕಿಸಲು ಪೆಟ್ರೋಲ್‌ ಬಂಕಿಗೇ  ಹೋಗಬೇಕು. ಆದರೆ ನಮ್ಮ ಮೂಗು ಇರುವಲ್ಲಿಗೇ ಗಾಳಿ ತಂದು ಇಟ್ಟಿದ್ದಾನಲ್ಲ. ಅದಕ್ಕೆ ದೇವರಿಗೆ ಒಂದು ಧನ್ಯವಾದ ಹೇಳಬೇಕು. ಮಣ್ಣು ತಿಂದರೆ ಹಣ್ಣು ತಿಂದ ಹಾಗೆ ಆಗುವುದಿಲ್ಲ. ಆದರೆ, ಹಣ್ಣು ಬಂದಿದ್ದೂ ಮಣ್ಣಿನಿಂದ. ಇಂತಹ ಮ್ಯಾಜಿಕ್ ಮಾಡಿದ ದೇವರಿಗೆ ಧನ್ಯವಾದ ಹೇಳದಿದ್ದರೆ ಹೇಗೆ?

February 24, 2026

"ಬ್ರಹ್ಮ" ಪದದ ಉಚ್ಚಾರ ಜಿಜ್ಞಾಸೆಯನ್ನು ಸ್ವತಃ ಬ್ರಹ್ಮನಿಂದಲೂ ಬಗೆಹರಿಸಲಾಗದು!

"ಬರೆದಂತೆಯೇ ಉಚ್ಚರಿಸುವುದು, ಉಚ್ಚರಿಸಿದಂತೆಯೇ ಬರೆಯುವುದು ಸಂಸ್ಕೃತ ಮತ್ತು ಕನ್ನಡ ಭಾಷೆ್ಗಳ ಜಾಯಮಾನ".  ಹೌದು ತಾನೆ? ಅಂದಮೇಲೆ "ಬ್ರಹ್ಮ"ವನ್ನು "ಬ್ರ ಹ್ ಮ" ಎಂದು, "ಜಾಹ್ನವಿ"ಯನ್ನು "ಜಾ ಹ್ ನ ವಿ" ಎಂದು, "ಮಧ್ಯಾಹ್ನ"ವನ್ನು "ಮ ಧ್ಯಾ ಹ್ ನ" ಎಂದು ಉಚ್ಚರಿಸಿದರೆ ತಪ್ಪಂತೂ ಅಲ್ಲವೇ ಅಲ್ಲ. ನಿಜವಾಗಿಯಾದರೆ ಅದೇ ಸೂಕ್ತ. 

ಆದರೆ, ಈ ರೀತಿ ಹ್ ಜೊತೆ ಇನ್ನೊಂದು ವ್ಯಂಜನ ಸೇರಿ ಸಂಯುಕ್ತಾಕ್ಷರವಾದಾಗ ಮೊದಲಿಗೆ ಆ ’ಇನ್ನೊಂದು ವ್ಯಂಜನ’ವನ್ನು ಉಚ್ಚರಿಸಿ ಆಮೇಲೆ ಹ್ ವನ್ನು ಉಚ್ಚರಿಸಬಹುದು ಎಂದು, ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿಕೊಂಡಿರುವ ಒಂದು ಅನುಕೂಲ ಶಾಸ್ತ್ರ. 

ವಿಪರ್ಯಾಸವೇನೆಂದರೆ, ಈ ತಥಾಕಥಿತ ಅನುಕೂಲ ಶಾಸ್ತ್ರದಲ್ಲಿ ಏಕರೂಪತೆ ಇಲ್ಲ. ಒಬ್ಬೊಬ್ಬರದು ಒಂದೊಂದು ರೀತಿಯ ಪ್ರತಿಪಾದನೆ. ಕೆಲವರು "ಹಿ ನ ಮ ಪರೇ ತತ್ಪರಸ್ಯ ಚ" ಎಂಬ ಒಂದು ಸೂತ್ರವನ್ನು ಪ್ರಸ್ತಾವಿಸಿ, "ಹ್ ಜೊತೆ ಮ್/ನ್ ಇದ್ದರೆ ಮೊದಲಿಗೆ ಮ್/ನ್ ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು" ಎನ್ನುತ್ತಾರೆ. "ಹ್ ಜೊತೆ ಣ್ ಬಂದರೆ- ಉದಾಹರಣೆಗೆ ಅಪರಾಹ್ಣ- ಏನು ಮಾಡಬೇಕು?" ಎಂಬುದಕ್ಕೆ ಅವರ ಬಳಿ ಉತ್ತರವಿಲ್ಲ! "ಹ್ ಜೊತೆ ಯ್/ರ್/ಲ್/ವ್ ಬಂದರೆ- ಉದಾಹರಣೆಗೆ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿ- ಏನು ಮಾಡಬೇಕು?" ಎಂಬುದಕ್ಕೂ ಅವರ ಬಳಿ ಉತ್ತರವಿಲ್ಲ! 

ಇನ್ನು ಕೆಲವರು "ಹ್ ಜೊತೆ ಯಾವುದೇ ಅನುನಾಸಿಕ ಇದ್ದರೆ ಮೊದಲಿಗೆ ಅನುನಾಸಿಕವನ್ನು ಉಚ್ಚರಿಸಿ ಆಮೇಲೆ ಹ್ ಉಚ್ಚರಿಸಬೇಕು" ಎನ್ನುತ್ತಾರೆ. ಅವರ ವ್ಯಾಖ್ಯೆಯಲ್ಲಿ ಬ್ರಹ್ಮ, ಜಾಹ್ನವಿ, ಅಪರಾಹ್ಣಗಳು ಒಳಗೊಳ್ಳುತ್ತವಾದರೂ ಬಾಹ್ಯ, ಹ್ರೀರ, ಪ್ರಹ್ಲಾದ, ಜಿಹ್ವಾ ಇತ್ಯಾದಿಗಳ ಉಚ್ಚಾರಕ್ಕೆ ಅವರ ಬಳಿಯೂ ನಿರ್ದಿಷ್ಟ ಉತ್ತರವಿಲ್ಲ.

ಆದ್ದರಿಂದಲೇ, "ಬರೆದಂತೆಯೇ ಉಚ್ಚರಿಸುವುದು" ಯಾವುದೇ ಗೊಂದಲವಿಲ್ಲದ ಆಯ್ಕೆ. ಬನ್ನಂಜೆ ಗೋವಿಂದಾಚಾರ್ಯರು, ಈಗ ಅವರ ಪುತ್ರಿ ವೀಣಾ ಬನ್ನಂಜೆ ಮುಂತಾದ ಕೆಲವು ವಿದ್ವಾಂಸರು ಇದನ್ನೇ ಆಯ್ದುಕೊಂಡಿದ್ದಾರೆ. ಅವರು "ಬ್ರಹ್ಮ" ಪದವನ್ನು "ಬ್ರ ಹ್ ಮ" ಎಂದೇ ಉಚ್ಚರಿಸುತ್ತಾರೆ, "ಬ್ರ ಮ್ ಹ" ಎಂದು ಅಲ್ಲ. 

ಅಷ್ಟಾಗಿ, ‘ಬ್ರಹ್ಮ’ ಪದದ ವ್ಯುತ್ಪತ್ತಿ ಏನು? ಬೃಹ್ + ಮನಿನ್. ‘ಬೃಹ್’ ಆಂದರೆ something that is expanded, or great; ‘ಬೃಹತ್’ ಪದ ಸಹ ಅದೇ ಮೂಲದಿಂದ ಬಂದದ್ದು. ಬೃಹ್ + ಮನಿನ್ ರೀತಿಯಲ್ಲಿ ಬ್ರಹ್ಮ ಪದ ಉಂಟಾದದ್ದು ಅಂದಮೇಲೆ ಆ ದೃಷ್ಟಿಯಿಂದಲೂ ‘ಹ್’ ಉಚ್ಚಾರವೇ ಮೊದಲು. ಬ್ರಮ್ಹ ಎಂದು ಉಚ್ಚರಿಸಿದರೆ ಅಲ್ಲಿ ‘ಬೃಹ್’ ಧಾತುವನ್ನೇ ಕೊಂದಂತಾಗುತ್ತದಲ್ಲ!? 

ವಹ್ನಿ ಪದ ಸಹ ಹೀಗೆಯೇ. ವಹ್ + ನಿ. ‘ವಹ್’ ಅಂದರೆ something that carries. ಅಗ್ನಿಯು ದೇವತೆಗಳ ಮತ್ತು ಮನುಷ್ಯರ ನಡುವಿನ ಕೊಡುಕೊಳ್ಳುವಿಕೆಯ ವಾಹಕ. ಆದ್ದರಿಂದ ವಹ್ನಿ ಎಂದು ಹೆಸರು. ಅದನ್ನು ವನ್ಹಿ ಎಂದು ಉಚ್ಚರಿಸಿದರೆ ಅಲ್ಲಿ ‘ವಹ್’ ಧಾತುವಿನಿಂದ ಪಡೆದ ಅರ್ಥವನ್ನೇ ಬೆಂಕಿಗೆ ಹಾಕಿ ನಾಶಮಾಡಿದಾಂತಾಗುತ್ತದೆ.

ಮಧ್ಯಾಹ್ನ, ಅಪರಾಹ್ಣಗಳದೂ ಇದೇ ಕಥೆ. ಮಧ್ಯ + ಅಹ್ + ನ. ‘ಅಹ್’ ಎಂದರೆ ಹಗಲು. ಹಗಲಿನ ಮಧ್ಯಭಾಗವೇ ಮಧ್ಯಾಹ್ನ. ಅದನ್ನು ಮಧ್ಯಾನ್ಹ, ಮಧ್ಯಾನ್ನ, ಮಧ್ಯಾನ, ಮದ್ಯಾನ ಅಂತೆಲ್ಲ ಉಚ್ಚರಿಸಿದರೆ/ಬರೆದರೆ ಹಗಲುದರೋಡೆ (“ಅಹ್  = ಹಗಲು" ಎಂಬ ಅರ್ಥವನ್ನು ದರೋಡೆ ಮಾಡಿದಂತೆ) ಆಗುತ್ತದೆ!

ಇದ್ಯಾವ ಗೊಂದಲ ಪಾಪಪ್ರಜ್ಞೆಯೂ ಬೇಡವೆಂದು ಗೀತಾಪರಿವಾರವು "ಬರೆದಂತೆಯೇ ಉಚ್ಚರಿಸುವುದು" ರೀತಿಯನ್ನು ಆಯ್ದುಕೊಂಡಿದೆ. ಗೀತಾಪರಿವಾರದಲ್ಲಿ ನಾವು "ಬ್ರ ಹ್‌ ಮ", "ಜಾ ಹ್ ನ ವಿ", "ಮ ಧ್ಯಾ ಹ್ ನ" ಎಂಬಂತೆ ಉಚ್ಚರಿಸುತ್ತೇವೆ.

ಒಟ್ಟಾರೆಯಾಗಿ ಈ ಉಚ್ಚಾರವಿಷಯವನ್ನು ಸರಿ-ತಪ್ಪು ಎಂದು ನಿಷ್ಕರ್ಷೆ ಮಾಡುವುದಕ್ಕಿಂತ "ಎರಡು ವಿಭಿನ್ನ ಚಿಂತನಾ ಶಾಲೆಗಳು" (two different schools of thought) ಎಂದು ಪರಿಗಣಿಸಬಹುದು ಅಷ್ಟೇ. 🙏

-  ಶ್ರೀವತ್ಸ ಜೋಶಿ. 24ಫೆಬ್ರವರಿ2026.
= = =

ವೃದ್ಧ ತಂದೆಯ ವಿನಂತಿ ....

ಚಿತೆಗೆ ಬೆಂಕಿ ಹಚ್ಚುವಾಗ ಕೈ ಕಂಪಿಸದಿರಲಿ : ವೃದ್ಧ ತಂದೆಯ ವಿನಂತಿ ....   

              ಪುಣೆಯಲ್ಲಿನ ದೊಡ್ಡ ಸ್ಮಶಾನ .  ಸಂಜೆ 3:00 ಗಂಟೆ .  ರೋಹನ್ (35), ಅಮೆರಿಕದ ಪ್ರಮುಖ ಸಾಫ್ಟ್‌ವೇರ್ ಕಂಪನಿಯ ಉಪಾಧ್ಯಕ್ಷ, ತನ್ನ ವಿಮಾನದಿಂದ ಇಳಿದು ನೇರವಾಗಿ ಸ್ಮಶಾನಕ್ಕೆ ಬಂದಿದ್ದ.
                ಅವರ ತಂದೆ ಸದಾಶಿವರಾವ್ (75) ಹಿಂದಿನ ದಿನ ರಾತ್ರಿ ಕೊನೆಯುಸಿರೆಳೆದಿದ್ದರು . ರೋಹನ್ ದುಬಾರಿ ಲ್ಯಾಪ್‌ಟಾಪ್ ಬ್ಯಾಗ್ ಹಿಡಿದುಕೊಂಡು ರೇ-ಬ್ಯಾನ್ ಸನ್‌ಗ್ಲಾಸ್ ಧರಿಸಿದ್ದ. ಅವನು ಬೆವರುತ್ತಿದ್ದ ಮತ್ತು ನಿರಂತರವಾಗಿ ತನ್ನ ಗಡಿಯಾರವನ್ನು ಪರಿಶೀಲಿಸುತ್ತಿದ್ದ.       

                 "ಮೋಕ್ಷ ಈವೆಂಟ್ ಮ್ಯಾನೇಜ್ಮೆಂಟ್" 
(ಅಂತ್ಯಕ್ರಿಯೆ ಸೇವಾ ಸಂಸ್ಥೆ) ದ ಸುಮಿತ್ ಅಲ್ಲಿ ನಿಂತಿದ್ದ. ಸುಮಿತ್ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದ. ಉರುವಲುಗಳನ್ನು ಜೋಡಿಸಲಾಗಿತ್ತು, ಪುರೋಹಿತರನ್ನು ಕರೆಯಲಾಗಿತ್ತು, ಮತ್ತು ಸದಾಶಿವರಾವ್ ಅವರ ದೇಹವನ್ನು ಸ್ನಾನ ಮಾಡಿಸಿ ಸಿದ್ಧಪಡಿಸಲಾಗಿತ್ತು.
            ರೋಹನ್  ತನ್ನ ತಂದೆಯ ಮುಖವನ್ನು ನೋಡಿದ. ಒಂದು ಹನಿ ಕಣ್ಣೀರು ಅಥವಾ ಎರಡು ಅವನ ಕಣ್ಣು
ಗಳಿಂದ ಉರುಳಿತು. 
                  ಅವನು ಸುಮಿತ್‌ಗೆ ಕೇಳಿದ: "ಮಿಸ್ಟರ್ ಸುಮಿತ್, ಎಲ್ಲವೂ ಸಿದ್ಧವಾಗಿದೆ, ಸರಿ? ನನಗೆ ಸಂಜೆ 6 ಗಂಟೆಗೆ ಹಿಂದಿರುಗುವ ವಿಮಾನವಿದೆ. ನಾಳೆ ನನಗೆ ಪ್ರಮುಖ ಸಭೆ ಇದೆ. ಇದನ್ನು ಬೇಗ ಮುಗಿಸಿ." 
             ಸುಮಿತ್ ಆಶ್ಚರ್ಯಚಕಿತನಾದ. ಈ ಮಗನನ್ನು ಬೆಳೆಸಿದ ತಂದೆಗೆ ಮೂರು ಗಂಟೆಗಳ ಕಾಲಾವಕಾಶವೂ ಸಿಗಲಿಲ್ಲವೇ? ಸುಮಿತ್ ಚಪ್ಪಾಳೆ ತಟ್ಟಿದ. ಆಚರಣೆಗಳನ್ನು ನೆರವೇರಿಸಲಾಯಿತು. 
             ರೋಹನ್ ಚಿತೆಗೆ ಬೆಂಕಿ ಹಚ್ಚಿದ. ಹೊಗೆ ಆಕಾಶಕ್ಕೆ ಏರಿತು. ರೋಹನ್ ಸುಮಿತ್‌ಗೆ ಬದಿಯಲ್ಲಿ ಕರೆದು ತನ್ನ ಚೆಕ್‌ಬುಕ್ ತೆಗೆದ. "ಸುಮಿತ್, ಧನ್ಯವಾದಗಳು. ನೀವು ಉತ್ತಮ ವ್ಯವಸ್ಥೆ ಮಾಡಿದ್ದೀರಿ. ನಿಮ್ಮ ಬಿಲ್ ಎಷ್ಟು? 50,000? 1,00,000? ಮೊತ್ತವನ್ನು ಹೇಳಿ, ನಾನು ಚೆಕ್ ಬರೆಯುತ್ತೇನೆ. ನಾನು ಮತ್ತೆ ಬರಲು ಸಾಧ್ಯವಾಗುವುದಿಲ್ಲ. ಚಿತಾಭಸ್ಮವನ್ನು ವಿಸರ್ಜಿಸುವುದನ್ನೂ ನೀವು ನೋಡಿಕೊಳ್ಳಿ." 
             ಸುಮಿತ್ ವಿಚಿತ್ರವಾದ ನಗೆ ನಗುತ್ತಾ ರೋಹನ್‌ನತ್ತ ನೋಡಿದ. "ಸರ್, ಪಾವತಿಸಲು ಏನೂ ಇಲ್ಲ. ನಿಮ್ಮ ಬಿಲ್ ಈಗಾಗಲೇ ಪಾವತಿಸಲಾಗಿದೆ." 
                    ರೋಹನ್ ಗೊಂದಲಕ್ಕೊಳಗಾದ. "ಪಾವತಿಸಲಾಗಿದೆಯೇ? ಯಾರು ಪಾವತಿಸಿದರು? ನನ್ನ ಚಿಕ್ಕಪ್ಪ?" 
           ಸುಮಿತ್ ಉತ್ತರಿಸಿದ: "ಇಲ್ಲ ಸರ್. ಐದು ವರ್ಷಗಳ ಹಿಂದೆ, ಸದಾಶಿವರಾವ್ (ನಿಮ್ಮ ತಂದೆ) ನಮ್ಮ ಕಚೇರಿಗೆ ಬಂದಿದ್ದರು. ಅವರು ತುಂಬಾ ಅನಾರೋಗ್ಯದಿಂದ ಇದ್ದರು. ಅವರು ಕಷ್ಟದಿಂದ ನಡೆಯುತ್ತಿದ್ದರು. ಅವರು ನಮ್ಮನ್ನು ಕೇಳಿದರು, 'ನಿಮ್ಮ ಪ್ಯಾಕೇಜ್ ಏನು? ನನ್ನ ಮಗನಿಗೆ ಯಾವುದೇ ತೊಂದರೆಯಾಗದಂತೆ ನೀವು ಎಲ್ಲವನ್ನೂ ನೋಡಿಕೊಳ್ಳುತ್ತೀರಾ?' 
                   ನಾವು ಅವರಿಗೆ ಪ್ಯಾಕೇಜ್ ವಿವರಗಳನ್ನು ಹೇಳಿದೆವು. ಆ ದಿನವೇ ಅವರು ಮುಂಗಡವಾಗಿ 50,000 ರೂಪಾಯಿಗಳನ್ನು ಠೇವಣಿ ಇತ್ತರು. ಮತ್ತು ಅವರು ನನಗೆ ಈ ಪತ್ರವನ್ನು ನೀಡಿದರು. ಅವರು ನನಗೆ ಹೇಳಿದರು, 'ನನ್ನ ಮಗ ಬಂದಾಗ, ಈ ಪತ್ರವನ್ನು ಅವನಿಗೆ ಕೊಡಿ. ಮತ್ತು ಅವನು ಬರದಿದ್ದರೆ, ನೀವು ನನ್ನ ಅಂತ್ಯಕ್ರಿಯೆಯನ್ನು ನೋಡಿಕೊಳ್ಳಿ.'" 
           ಸುಮಿತ್ ರೋಹನ್‌ಗೆ ಪತ್ರವನ್ನು ನೀಡಿದ.  ಕಂಪಿಸುತ್ತಿರುವ ಕಂಪಿಸುತ್ತಿರುವ ಕೈಗಳಿಂದ  ರೋಹನ್ ಅದನ್ನು ತೆರೆದ.
                    ತಂದೆಯ ಅಸ್ಪಷ್ಟ ಕೈಬರಹದಲ್ಲಿ ಬರೆಯಲಾಗಿತ್ತು:  "ಪ್ರಿಯ ರೋಹನ್, ನನ್ನ ಮಗ, ನೀನು ತುಂಬಾ ಬ್ಯುಸಿ ಎಂದು ನನಗೆ ಗೊತ್ತು. ಅಮೆರಿಕದಲ್ಲಿ, ನೀನು ಉಸಿರಾಡಲು ಸಮಯವಿಲ್ಲ. ನಿನಗೆ ನನ್ನ ಸಾವು ತಿಳಿದಾಗ, ನೀನು ತುಂಬಾ ತಳಮಳಗೊಳ್ಳುತ್ತೀಯೆಂದು ನನಗೆ ಗೊತ್ತು. 'ನನಗೆ ರಜೆ ಸಿಗುತ್ತದೆಯೇ? ಟಿಕೆಟ್ ಸಿಗುತ್ತದೆಯೇ? ನನ್ನ ಸಭೆಯ ಬಗ್ಗೆ ಏನು?' — ಈ ಪ್ರಶ್ನೆಗಳು ನಿನ್ನನ್ನು ಕಾಡುತ್ತವೆ. ಮಗ, ನಿನ್ನ ಸಮಯ ಮತ್ತು ನಿನ್ನ ವೃತ್ತಿಜೀವನ ತುಂಬಾ ಮುಖ್ಯ. ನಾನು ನಿನ್ನನ್ನು ಬೆಳೆಸಿದ್ದು ನೀನು ಜಗತ್ತನ್ನು ಜಯಿಸುವುದಕ್ಕಾಗಿ. ಒಬ್ಬ ವೃದ್ಧನ ಶವಕ್ಕಾಗಿ ನೀನು ನಷ್ಟ ಅನುಭವಿಸಬೇಡ. ಆದ್ದರಿಂದ ನಾನು ನನ್ನ ಸಾವಿಗೆ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದೇನೆ. ನಾನು ಏಜೆನ್ಸಿಗೆ ಶುಲ್ಕ ಪಾವತಿಸಿದ್ದೇನೆ. ಅವರು ಅದನ್ನು ನೋಡಿಕೊಳ್ಳುತ್ತಾರೆ. ನೀನು ಬಂದರೆ ಒಳ್ಳೆಯದು, ಬಾರದಿದ್ದರೆ ನನಗೆ ಕೋಪ ಬರುವುದಿಲ್ಲ. ನಿನ್ನಲ್ಲಿ ಒಂದೇ ಒಂದು ವಿನಂತಿ... ನೀನು ಚಿಕ್ಕವನಾಗಿದ್ದಾಗ ನಾನು ನಿನ್ನನ್ನು ಶಾಲೆಗೆ ಕರೆದೊಯ್ಯುತ್ತಿದ್ದಾಗ, ನಾನು ನಿನ್ನ ಕೈಯನ್ನು ಬಿಡುತ್ತಿರಲಿಲ್ಲ. ಇಂದು, ನೀನು ನನ್ನ ಚಿತೆಗೆ ಬೆಂಕಿ ಹಚ್ಚುವಾಗ, ನಿನ್ನ ಕೈ ಕಂಪಿಸಬಾರದು. ಬೇಗ ಹಿಂತಿರುಗಿ ಹೋಗು . ನಿನ್ನ ಹೆಂಡತಿ ಕಾಯುತ್ತಿದ್ದಾಳೆ. 
                  ನಿನ್ನ, ಬಾಬಾ.
ಪತ್ರವನ್ನು ಓದಿದ ನಂತರ, ಚೆಕ್‌ಬುಕ್ ರೋಹನ್‌ನ ಕೈಯಿಂದ ಕೆಸರಿನಲ್ಲಿ ಜಾರಿತು. ಉರುವಲು ಸುಡುವ ಶಬ್ದ ತುಂಬಿದ್ದ ಶ್ಮಶಾನದಲ್ಲಿ... ರೋಹನ್‌ನ ಅಹಂಕಾರ ಮತ್ತು ವೃತ್ತಿಜೀವನದ ಮೇಲಿನ ಹೆಮ್ಮೆ ಬೂದಿಯಾಯಿತು. 
                  ಅವನು ತನ್ನ ಮೊಣಕಣಗಳ ಮೇಲೆ ಬಿದ್ದ. "ಬಾಬಾ...! ನನ್ನನ್ನು ಕ್ಷಮಿಸು, ಬಾಬಾ!" 
          ರೋಹನ್ ಸುಮಿತ್‌ನ ಪಾದಗಳನ್ನು ಹಿಡಿದುಕೊಂಡ. "ಸುಮಿತ್, ನಾನು ಅಮೆರಿಕಕ್ಕೆ ಹಿಂತಿರುಗಲು ಬಯಸುವುದಿಲ್ಲ! ನಾನು ನನ್ನ ತಂದೆಯೊಂದಿಗೆ ಇರಲು ಬಯಸುತ್ತೇನೆ! ನಾನು ಲಕ್ಷಾಂತರ ಗಳಿಸಿದೆ, ಆದರೆ ನಾನು ಭಿಕ್ಷುಕನಾದೆ! ನನ್ನ ತಂದೆ, ತಮ್ಮ ಸಾವಿನ ಸಮಯದಲ್ಲೂ, ನನ್ನ ಸಭೆಯ ಬಗ್ಗೆ ಯೋಚಿಸಿದರು... ಮತ್ತು ನಾನು ಅವರ ಅಂತ್ಯಕ್ರಿಯೆಯ ವೆಚ್ಚದ ಬಗ್ಗೆ ಚೌಕಾಸಿ ಮಾಡುತ್ತಿದ್ದೆ?"
                    ಆ ದಿನ, ರೋಹನ್ ತನ್ನ ವಿಮಾನ ಏರಲಿಲ್ಲ . ಅವನು ಸುಡುತ್ತಿರುವ ಚಿತೆಯ ಮುಂದೆ ಇಡೀ ರಾತ್ರಿ ಕುಳಿತಿದ್ದ. 
         ಏಕೆಂದರೆ ಅವನಿಗೆ ಅಂತಿಮವಾಗಿ ಅರ್ಥವಾಯಿತು— "ಪ್ರಿಪೇಡ್" ಎಂದರೆ ಸಿಮ್ ಕಾರ್ಡ್‌ಗೆ... ಆದರೆ ತಂದೆಯ ಪ್ರೀತಿಗೆ ಯಾವುದೇ ಪ್ರಿಪೇಡ್ ಇಲ್ಲ. ತಂದೆಯ ಪ್ರೀತಿ ಅಪರಿಮಿತ — ಮತ್ತು ಯಾವುದೇ ಕರೆನ್ಸಿ ಅದನ್ನು ಮರುಪಾವತಿಸಲು ಸಾಧ್ಯವಿಲ್ಲ. ⸻ ನೀನು ಜಗತ್ತಿನಲ್ಲಿ ಎಷ್ಟೇ ದೊಡ್ಡವನಾಗಿದ್ದರೂ, ಎಷ್ಟು ಹಣ ಸಂಪಾದಿಸಿದರೂ... ನಿನ್ನನ್ನು ಡೈಪರ್‌ಗಳಲ್ಲಿ ಸುತ್ತಿದ ಪೋಷಕರು ಅಂತಿಮ ಪ್ರಯಾಣದಲ್ಲಿ ನಿನ್ನನ್ನು ಬಯಸಿದಾಗ, ಅಸುಕುಳಿಯಬೇಡ. ಅಂತ್ಯಕ್ರಿಯೆಯನ್ನು ಏಜೆನ್ಸಿ ಮಾಡಬಹುದು. ಆದರೆ ಕಣ್ಣೀರು... ಅದನ್ನು ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ. ಅದು ರಕ್ತದಿಂದ ಬರಬೇಕು. 

#ಶ್ರೀಕಾಂತ್ ಕಾಮತ್

February 23, 2026

ತನ್ನ ಶವವನ್ನೇ ತಾನು ತಿನ್ನುತ್ತಿದ್ದ ರಾಜ

ನಾವು ಪೌರಾಣಿಕ ಪ್ರಪಂಚದಲ್ಲಿ ವಿಹರಿಸತೊಡಗಿದರೆ ನಮಗೆ ಮುತ್ತು, ರತ್ನಗಳಂಥ ಅಸಂಖ್ಯಾತ ಕಥೆಗಳ ದೊಡ್ಡ ಗಣಿಗಳೇ ಸಿಗುತ್ತವೆ! ಬಗೆಬಗೆಯಾದ, ಸ್ವಾರಸ್ಯಕರ, ನೀತಿಬೋಧಕ, ಮನರಂಜನಾತ್ಮಕ ಕಥೆಗಳು ಹೇರಳವಾಗಿ ಸಿಗುತ್ತವೆ! ಇಂಥವನ್ನು ಬಳಸಿಕೊಂಡು ಅನೇಕ ಚಲನಚಿತ್ರಗಳು, ವೆಬ್ ಸೀರಿಸ್ ಗಳನ್ನು ಧಾರಾಳವಾಗಿ ಮಾಡಬಹುದು! 
    ರಾಮಾಯಣದ ಅಂಥ ಒಂದು ಉಪಕಥೆಯನ್ನು ಈಗ ನೋಡೋಣ. ಇದು ತನ್ನ ಹೆಣವನ್ನು ತಾನೇ ತಿನ್ನುತ್ತಿದ್ದ ಒಬ್ಬ ರಾಜನ ವಿಚಿತ್ರ, ವಿಲಕ್ಷಣ, ಬೀಭತ್ಸ ಕಥೆ! ಆದರೆ ಇದರಲ್ಲಿ ಒಂದು ಅದ್ಭುತ ಸಂದೇಶವಿದೆ! ಇದು ವಾಲ್ಮೀಕಿ ರಾಮಾಯಣದ ಉತ್ತರಕಾಂಡದಲ್ಲಿ ಬರುತ್ತದೆ. ಶ್ರೀರಾಮನು ಒಮ್ಮೆ ಅಗಸ್ತ್ಯ ಮಹರ್ಷಿಗಳನ್ನು ನೋಡಲು ಹೋದಾಗ, ಅವರು ಅವನಿಗೆ ಒಂದು ದಿವ್ಯಾಭರಣವನ್ನು ಉಡುಗೊರೆಯಾಗಿ ನೀಡುತ್ತಾರೆ. ಆಶ್ಚರ್ಯಗೊಂಡ ರಾಮನು, ಮುನಿಗಳಾದ ಅವರಿಗೆ ಈ ದಿವ್ಯಾಭರಣವು ಹೇಗೆ ದೊರೆಯಿತೆಂದು ಕುತೂಹಲದಿಂದ ಕೇಳಿದಾಗ, ಅವರು ಅದರ ಹಿಂದಿನ ವಿಚಿತ್ರ ಕಥೆ ಹೇಳುತ್ತಾರೆ.
      ಅಗಸ್ತ್ಯರು ಹಿಂದಿನ ತ್ರೇತಾಯುಗದಲ್ಲಿ ಒಂದು ದೊಡ್ಡ ಅರಣ್ಯಕ್ಕೆ ಹೋಗಿದ್ದರು. ನೂರು ಯೋಜನಗಳಷ್ಟು ದೊಡ್ಡದಾಗಿದ್ದರೂ ಅದು ನಿರ್ಜನವಾಗಿದ್ದು ಮೃಗಪಕ್ಷಿಗಳಿಂದಲೂ ರಹಿತವಾಗಿತ್ತು! ಆದರೆ ಅಲ್ಲಿ ಸೊಗಸಾದ ಫಲಮೂಲಗಳಿದ್ದವು! ಆ ಅರಣ್ಯದಲ್ಲಿ ಸಂಚರಿಸುತ್ತಾ ಹೋಗಲು, ಅದರ ಮಧ್ಯದಲ್ಲಿ ಅವರೊಂದು ಸುಂದರ ಸರೋವರವನ್ನು ಕಂಡರು! ಪಾಚಿಯೂ ಇಲ್ಲದ ತಿಳಿನೀರಿನಿಂದ ಕೂಡಿದ್ದ ಆ ಸರೋವರದಲ್ಲಿ ಹಂಸ, ಕಾರಂಡವ, ಚಕ್ರವಾಕ ಪಕ್ಷಿಗಳೂ ಕಮಲ, ನೀಲೋತ್ಪಲ ಪುಷ್ಪಗಳೂ ಇದ್ದವು! ಆ ಸರೋವರದ ತೀರದಲ್ಲಿ ಒಂದು ಹಳೆಯ ಆಶ್ರಮವಿತ್ತು! ಆದರೆ ಅಲ್ಲಿ ಯಾವ ಋಷಿ, ಮುನಿಗಳೂ ಇರಲಿಲ್ಲ! ಆ ಆಶ್ರಮದಲ್ಲಿ ಅವರು ಒಂದು ರಾತ್ರಿ ಕಳೆದು ಬೆಳಗಾಗೆದ್ದು ನೋಡಲು, ಆ ಸರೋವರದ ಬಳಿ ಒಂದು ಹೆಣವಿತ್ತು! ಪುಷ್ಟವಾಗಿಯೂ ಕಾಂತಿಯುಕ್ತವಾಗಿಯೂ ಇದ್ದ ಆ ಹೆಣವನ್ನು ನೋಡಿ ಇದೆಂಥ ವಿಚಿತ್ರ ಎಂದು ಆಶ್ಚರ್ಯಗೊಂಡರು ಅಗಸ್ತ್ಯರು! 
    ಆಗ ಇನ್ನೊಂದು ಆಶ್ಚರ್ಯ ನಡೆಯಿತು! ಆಕಾಶದಿಂದ ಒಂದು ಅದ್ಭುತವಾದ ದಿವ್ಯ ವಿಮಾನವು ಬರತೊಡಗಿತು! ಆ ವಿಮಾನದಲ್ಲಿ ಸ್ವರ್ಗೀಯ ಪುರುಷನೊಬ್ಬ ಸಿಂಹಾಸನದ ಮೇಲೆ ಕುಳಿತಿದ್ದನು! ಸಾವಿರಾರು ಅಪ್ಸರೆಯರು ಅವನನ್ನು ಸೇವಿಸುತ್ತಿದ್ದರು! ಕೆಲವರು ಗಾಯನ ಮಾಡುತ್ತಲೂ ಕೆಲವರು ವಾದ್ಯಗಳನ್ನು ನುಡಿಸುತ್ತಲೂ ಕೆಲವರು ಅವನಿಗೆ ಚಾಮರ ಬೀಸುತ್ತಲೂ ಇದ್ದರು! ಆಗ ಆ ವಿಮಾನ ಕೆಳಗಿಳಿದಂತೆ ಆ ಸ್ವರ್ಗೀಯ ಪುರುಷನು, ಮೇರು ಪರ್ವತವನ್ನು ಬಿಟ್ಟು ಹೋಗುವ ಸೂರ್ಯನಂತೆ ತನ್ನ ಸಿಂಹಾಸನದಿಂದ ಇಳಿದು ಸರೋವರದ ಬಳಿಗೆ ಬಂದನು. ಅನಂತರ ಅವನು ಮಾಡಿದ್ದೇನು? ಅಲ್ಲಿದ್ದ ಆ ಹೆಣವನ್ನು ಕಿತ್ತು ಕಿತ್ತು ತಿನ್ನತೊಡಗಿದನು! ಅಗಸ್ತ್ಯರಿಗೆ ಪರಮಾಶ್ಚರ್ಯವಾಯಿತು! 
     ಹಾಗೆ ಶವದ ಮಾಂಸವನ್ನು ಚೆನ್ನಾಗಿ ಭಕ್ಷಿಸಿ, ಆ ಸ್ವರ್ಗೀಯ ಪುರುಷನು ತನ್ನ ಕೈಕಾಲು ಮುಖಗಳನ್ನು ತೊಳೆದುಕೊಂಡು ಆಚಮನ ಮಾಡಿ ಹೊರಡಲನುವಾದನು! ಆಗ ಕುತೂಹಲ ತಡೆಯಲಾಗದೆ ಅಗಸ್ತ್ಯರು ಅವನನ್ನು ತಡೆದು," ಯಾರು ನೀನು? ದೇವತೆಯಂತಿರುವ ನೀನು ಇಂಥ ಕುತ್ಸಿತ, ನಿಂದನೀಯ ಆಹಾರವನ್ನೇಕೆ ಸೇವಿಸಿದೆ? ನಿನ್ನಂಥವನಿಗೆ ಶವಭಕ್ಷಣೆ ಯೋಗ್ಯವಲ್ಲ ಎಂದು ನನ್ನ ಭಾವನೆಯಾಗಿದೆ! ಏಕೆ ಹೀಗೆ ಮಾಡಿದೆ?" ಎಂದು ಕೇಳಿದರು.
     ಅದಕ್ಕೆ ಅವನು ಕೈಮುಗಿದುಕೊಂಡು," ಋಷಿವರ್ಯರೇ! ಬ್ರಹ್ಮಜ್ಞಾನಿಗಳಲ್ಲಿ ಶ್ರೇಷ್ಠರೇ! ಈ ಕಾರ್ಯವನ್ನು ನಾನು ಬಿಡಲಾಗುತ್ತಿಲ್ಲ! ಇದಕ್ಕೆ ಕಾರಣ ಹೇಳುತ್ತೇನೆ, ಕೇಳಿ! 
      "ನಾನು ಹಿಂದೆ ಸುದೇವನೆಂಬ ರಾಜನ ಮಗನಾಗಿದ್ದೆ! ವಿದರ್ಭವನ್ನು ಆಳುತ್ತಿದ್ದ ಅವನು ಮಹಾಯಶೋವಂತನೂ ವೀರ್ಯವಂತನೂ ಆಗಿದ್ದು, ಮೂರು ಲೋಕಗಳಲ್ಲೂ ವಿಖ್ಯಾತನಾಗಿದ್ದ! ಅವನಿಗೆ ಇಬ್ಬರು ಪತ್ನಿಯರಿಂದ ಇಬ್ಬರು ಪುತ್ರರು ಜನಿಸಿದರು! ಒಬ್ಬನು ಶ್ವೇತನೆಂಬ ನಾನಾದರೆ, ಇನ್ನೊಬ್ಬನು, ಸುರಥನೆಂಬ ನನ್ನ ತಮ್ಮ! ನನ್ನ ತಂದೆಯು ಸ್ವರ್ಗಸ್ಥನಾದ ಬಳಿಕ, ನಾನು ಒಂದು ಸಾವಿರ ವರ್ಷಗಳ ಕಾಲ ಧರ್ಮದಿಂದ ರಾಜ್ಯಭಾರ ಮಾಡಿಕೊಂಡಿದ್ದೆ. ಆಗ ಒಮ್ಮೆ ನನಗೆ ಯಾವುದೋ ಕಾರಣದಿಂದ ನನ್ನ ಆಯುಷ್ಯ ಎಷ್ಟೆಂದು ತಿಳಿದುಹೋಯಿತು! ಆಗ ನನಗೆ ರಾಜ್ಯವಾಳಲು ಮನಸ್ಸು ಬಾರದೇ ನನ್ನ ತಮ್ಮನಿಗೆ ಪಟ್ಟಗಟ್ಟಿ ತಪಸ್ಸು ಮಾಡಲೆಂದು ಮೃಗಪಕ್ಷಿರಹಿತವಾದ ಈ ದುರ್ಗಮ ಅರಣ್ಯಕ್ಕೆ ಬಂದೆ! ಈ ಸರೋವರದ ಬಳಿಯೇ ಆಶ್ರಮ ನಿರ್ಮಿಸಿಕೊಂಡು ಮೂರು ಸಾವಿರ ವರ್ಷಗಳ ಕಾಲ ದುಷ್ಕರ ತಪಸ್ಸು ಮಾಡಿ ಮೃತನಾದ ಬಳಿಕ ಬ್ರಹ್ಮಲೋಕ ಪಡೆದೆ! ಆದರೆ ಅತ್ಯಂತ ಶ್ರೇಷ್ಠವಾದ ಬ್ರಹ್ಮಲೋಕವನ್ನು ಪಡೆದರೂ ನನಗೆ ಹಸಿವು, ಬಾಯಾರಿಕೆಗಳು ಬಾಧಿಸತೊಡಗಿದವು! ಬ್ರಹ್ಮಲೋಕದಲ್ಲಿ ಹೀಗಾಗಬಾರದಲ್ಲ ಎಂದು ಯೋಚಿಸಿ ಪಿತಾಮಹ ಬ್ರಹ್ಮದೇವನ ಬಳಿ ಹೋಗಿ,'ಪಿತಾಮಹ! ಈ ಬ್ರಹ್ಮಲೋಕದಲ್ಲಿ ಕ್ಷುತ್ಪಿಪಾಸೆಗಳು ಕಾಡುವುದಿಲ್ಲ! ಆದರೆ ಅವು ನನ್ನನ್ನು ಕಾಡುತ್ತಿವೆ! ಇದೇಕೆ ಹೀಗೆ? ಈಗ ನನಗೆ ಆಹಾರ ಯಾವುದು?' ಎಂದು ಕೇಳಿದೆ. ಅದಕ್ಕೆ ಅವನು,'ಎಲೈ ಶ್ವೇತನೇ! ನಿನ್ನ ಶವದ ಮಾಂಸವೇ ನಿನಗಿನ್ನು ಆಹಾರ! ನೀನು ಹಿಂದೆ ಭೂಮಿಯ ಮೇಲೆ ತಪಸ್ಸು ಮಾಡುತ್ತಿದ್ದಾಗ ನಿನ್ನ ಶರೀರವನ್ನು ಸ್ವಾದಿಷ್ಟ ಆಹಾರದಿಂದ ಚೆನ್ನಾಗಿ ಪೋಷಿಸಿಕೊಳ್ಳುತ್ತಿದ್ದೆ! ಆದರೆ ಆಗ ನೀನು ಯಾರಿಗೂ ಏನನ್ನೂ ಕೊಡಲಿಲ್ಲ! ಒಂದಿಷ್ಟೂ ದಾನ ಮಾಡಲಿಲ್ಲ! ಕೇವಲ ತಪಸ್ಸು ಮಾಡುತ್ತಿದ್ದೆ ಹಾಗೂ ನೀನು ಮಾತ್ರ ಚೆನ್ನಾಗಿ ತಿನ್ನುತ್ತಿದ್ದೆ! ಯಾರಿಗೂ ಸ್ವಲ್ಪವೂ ಅನ್ನದಾನ ಮಾಡಲಿಲ್ಲ! ಆದ್ದರಿಂದಲೇ ಈಗ ನಿನಗೆ ಹಸಿವು, ತೃಷೆಗಳು ಬಾಧಿಸುತ್ತಿವೆ! ಬೀಜವನ್ನು ಬಿತ್ತದೇ ಸಸ್ಯವು ಬೆಳೆಯುವುದೇ? ಆದ್ದರಿಂದಲೇ ನಿನಗೆ ಹಸಿವಿನ ಸಂಕಷ್ಟ! ಇದಕ್ಕೆ ಪರಿಹಾರವೆಂದರೆ, ನೀನೇ ಬೆಳೆಸಿರುವ ಸ್ವಾದಿಷ್ಟವಾದ ನಿನ್ನ ಶರೀರವನ್ನೇ ತಿನ್ನುವುದು! ಅದು ಇನ್ನೂ ಆ ಸರೋವರದ ಬಳಿಯೇ ಇದೆ! ಒಳ್ಳೆಯ ಆಹಾರಗಳಿಂದ ಪೋಷಿಸಿರುವ ಅದು ರಸಭರಿತವಾಗಿದೆ! ದಿನವೂ ಹೋಗಿ ಅದನ್ನು ತಿನ್ನು! ಅದರಿಂದ ನಿನಗೆ ತೃಪ್ತಿಯಾಗುತ್ತದೆ! ನೀನು ತಿಂದ ಬಳಿಕ ಅದು ಪುನಃ ಮರುದಿವಸಕ್ಕೆ ತುಂಬಿಕೊಳ್ಳುತ್ತದೆ! ಕೊನೆಗೊಂದು ದಿನ, ಅಗಸ್ತ್ಯ ಮಹರ್ಷಿಗಳು ಬಂದಾಗ ನಿನ್ನ ಕಷ್ಟ ಪರಿಹಾರವಾಗುತ್ತದೆ!' ಎಂದನು. ಅದರಂತೆ ನಾನು ಅನೇಕ ವರ್ಷಗಳಿಂದ ನಿಂದ್ಯವಾದ ನನ್ನ ಶವವನ್ನೇ ತಿನ್ನುತ್ತಿದ್ದೇನೆ! ಅದು ಕ್ಷಯಿಸದೇ ಮತ್ತೆ ಮತ್ತೆ ತುಂಬಿಕೊಳ್ಳುತ್ತಲೇ ಇದೆ! ಈಗ ನೀವು ದುರ್ಗಮವಾದ ಈ ಅರಣ್ಯಕ್ಕೆ ಬಂದಿರುವಿರೆಂದರೆ ನೀವು ಅಗಸ್ತ್ಯ ಮಹರ್ಷಿಗಳೇ ಇರಬೇಕು! ನಿಮ್ಮನ್ನು ಬಿಟ್ಟು ಬೇರಾರೂ ಇಲ್ಲಿಗೆ ಬರಲಾರರು! ದಯವಿಟ್ಟು ನನ್ನನ್ನು ಈ ಸಂಕಷ್ಟದಿಂದ ಪಾರುಮಾಡಿ! ನನ್ನ ಈ ಒಂದು ಆಭರಙವನ್ನು ತೆಗೆದುಕೊಂಡು ನನ್ನನ್ನು ಅನುಗ್ರಹಿಸಿ! ಇದು ಸಾಮಾನ್ಯ ಆಭರಣವಾಗಿರದೇ ದಿನವೂ ಅಪಾರ ಚಿನ್ನ, ವಸ್ತ್ರ, ಆಭರಣ, ಭಕ್ಷ್ಯ ಭೋಜ್ಯಗಳನ್ನು ಕೊಡುತ್ತದೆ!" 
        ಹೀಗೆ ತನ್ನ ಕಥೆ ಹೇಳಿ ಆ ಸ್ವರ್ಗೀಯ ಪುರುಷನು ಅಗಸ್ತ್ಯ ಮಹರ್ಷಿಗಳಿಗೆ ಆ ದಿವ್ಯಾಭರಣವನ್ನು ಕೊಟ್ಟನು. ಅವನನ್ನು ಕಾಪಾಡಲೆಂದು ಅಗಸ್ತ್ಯರೂ ಅದನ್ನು ಸ್ವೀಕರಿಸಿದರು. ಆಗ ಶ್ವೇತನ ಶವವು ಅದೃಶ್ಯವಾಯಿತು! ಶ್ವೇತನು ಸಂತೋಷದಿಂದ ತನ್ನ ವಿಮಾನದಲ್ಲಿ ಕುಳಿತು ಬ್ರಹ್ಮಲೋಕಕ್ಕೆ ತೆರಳಿದನು!
       ಇದಿಷ್ಟು ಕಥೆಯನ್ನು ಅಗಸ್ತ್ಯರು ಶ್ರೀರಾಮನಿಗೆ ಹೇಳಿದರು. ಅದನ್ನು ಕೇಳಿ ರಾಮನೂ ಆಶ್ಚರ್ಯಗೊಂಡನು! 
     ಈ ಕಥೆಯಲ್ಲಿ ಅನ್ನದಾನ ಎಷ್ಟು ಮುಖ್ಯ ಎಂಬ ಸಂದೇಶವಿರುವುದನ್ನು ನೋಡಬಹುದು. ನಾವು ಏನೇ ಒಳ್ಳೆಯ ಕೆಲಸ ಮಾಡಿದರೂ ಕಷ್ಟದಲ್ಲಿರುವ ಇನ್ನೊಬ್ಬರಿಗೂ ಏನಾದರೂ ಕೊಡಬೇಕು. ನಮಗಷ್ಟೇ ಮಾಡಿಕೊಂಡರೆ ಸಾಲದು. ಇತರರಿಗೂ ಅಲ್ಪಸ್ವಲ್ಪ ದಾನ ಮಾಡಬೇಕು. ಆದ್ದರಿಂದಲೇ, ವೈದಿಕ ಸಂಸ್ಕೃತಿಯಲ್ಲಿ ನಾವು ಪ್ರತಿನಿತ್ಯ ಮಾಡುವ ಪಂಚಮಹಾಯಜ್ಞಗಳಲ್ಲಿ ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯರಿಗೆ ಅನ್ನದಾನ, ಸೇವೆಗಳು ಸೇರಿವೆ. ಪಂಚಮಹಾಯಜ್ಞಗಳೆಂದರೆ, ಬ್ರಹ್ಮಯಜ್ಞ ( ಪವಿತ್ರ ಗ್ರಂಥಗಳ ಅಧ್ಯಯನದ ಮೂಲಕ ಬ್ರಹ್ಮಪೂಜೆ), ದೇವಯಜ್ಞ (ಪೂಜೆ, ಪುನಸ್ಕಾರಗಳ ಮೂಲಕ ದೇವಪೂಜೆ), ಪಿತೃಯಜ್ಞ ( ತರ್ಪಣಗಳಿಂದ ಪಿತೃಗಳ ಸ್ಮರಣೆ, ಪೂಜೆ), ಭೂತಯಜ್ಞ ( ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ಅವುಗಳ ಸೇವೆ), ಮತ್ತು ಮನುಷ್ಯಯಜ್ಞ ( ಅತಿಥಿ ಸತ್ಕಾರ, ಕಷ್ಟದಲ್ಲಿರುವ ಮನುಷ್ಯರ ಸೇವೆ ಇತ್ಯಾದಿ ಮನುಷ್ಯರ ಸೇವೆ).
      ಭಾರತೀಯ ಕಥೆಗಳ ಒಂದು ಸ್ವಾರಸ್ಯವೆಂದರೆ ಕಥೆಯೊಳಗೆ ಕಥೆಯಿರುವುದು! ಅನೇಕ ಕಥೆಗಳು ಹೀಗಿರುತ್ತವೆ. ಅದನ್ನು ಇಲ್ಲಿಯೂ ನೋಡಬಹುದು. ಮೊದಲನೆಯ ಸ್ತರದಲ್ಲಿ ಅಗಸ್ತ್ಯರು ರಾಮನಿಗೆ ಕಥೆ ಹೇಳುತ್ತಾರೆ. ಎರಡನೆಯ ಸ್ತರದಲ್ಲಿ ಶ್ವೇತನೆಂಬ ಸ್ವರ್ಗೀಯ ಪುರುಷನು ಅಗಸ್ತ್ಯರಿಗೆ ಅವನ ಕಥೆ ಹೇಳಿಕೊಳ್ಳುತ್ತಾನೆ. ಹೀಗೆ ಕಥೆಯೊಳಗೆ ಒಂದು ಕಥೆಯಿರುವ ಸ್ವಾರಸ್ಯವನ್ನು ಇಲ್ಲಿ ನೋಡಬಹುದು.

#ರಾಮಾಯಣದ_ಉಪಕಥೆಗಳು #ಪೌರಾಣಿಕ_ಕಥೆಗಳು #ಪೌರಾಣಿಕ_ಸ್ವಾರಸ್ಯಗಳು

February 22, 2026

ವಾಸ್ತು ಎಂದರೇನು?

“ವಾಸ್ತು” ಎಂಬ ಪದದ ವ್ಯುತ್ಪತ್ತಿಯನ್ನು ಸೂಚಿಸುವ ಶ್ಲೋಕವು ಈ ಕೆಳಗಿನಂತಿದೆ. 

“ವಸಂತಿ ಪ್ರಾಣಿನೋತ್ರ ಇತಿ ವಾಸ್ತು ಶಬ್ದ ವ್ಯತ್ಪತ್ತಿಃ”
ಅಂದರೆ, ಪ್ರಾಣಿಗಳು ಎಲ್ಲಿ ವಾಸಿಸುತ್ತಾರೋ ಆ ಸ್ಥಳವೇ “ವಾಸ್ತು” ಎಂದು ಕರೆಯುತ್ತಾರೆ. ಇಲ್ಲಿ “ಪ್ರಾಣಿ” ಎಂಬ ಪದವು ಕೇವಲ ಮನುಷ್ಯನಿಗಷ್ಟೇ ಸೀಮಿತವಲ್ಲ; ಎಲ್ಲಾ ಜೀವಿಗಳನ್ನು ಒಳಗೊಂಡಿದೆ. ಮನುಷ್ಯನೂ ಒಂದು ಪ್ರಾಣಿಯಾಗಿರುವುದರಿಂದ, ಜೀವಿಗಳು ವಾಸಿಸುವ ಸ್ಥಳವನ್ನು ಸೂಚಿಸಲು “ವಾಸ್ತು” ಎಂಬ ಪದವನ್ನು ಬಳಸಲಾಗಿದೆ.

ಇದೇ ಪದವು ಸಂಸ್ಕೃತದ “ವಸ” ಧಾತುವಿನಿಂದ ಬಂದಿದೆ. ಧಾತುವಿನ ಅರ್ಥವನ್ನು ವಿವರಿಸುವಂತೆ. 

“ವಸ ನಿವಾಸೇ, ವಸ ಆಚ್ಛಾದನೇ”
ಎಂಬ ರೂಪದಲ್ಲಿ ಎರಡು ಅರ್ಥಗಳನ್ನು ಸೂಚಿಸಲಾಗಿದೆ. “ವಸ ನಿವಾಸೇ” ಎಂದರೆ ವಾಸಿಸುವುದು, ನೆಲೆಸುವುದು ಎಂಬ ಅರ್ಥ. ಈ ಅರ್ಥದ ಪ್ರಕಾರ —
“ವಸ ನಿವಾಸೇ ಭಾವೇ ಲ್ಯುಟ್ – ವಸಂತ್ಯಸ್ಮಿನ್ ವಾಸ್ತುಃ”
ಅಂದರೆ, ಯಾರು ವಾಸಿಸುತ್ತಾರೋ ಆ ಸ್ಥಳವೇ ವಾಸ್ತು ಎಂದು ಅರ್ಥವಾಗುತ್ತದೆ.

“ವಸ ಆಚ್ಛಾದನೇ” ಎಂಬ ಅರ್ಥದ ಪ್ರಕಾರ, ಹೊದಿಸುವುದು ಅಥವಾ ಆವರಿಸುವುದು ಎಂಬ ಭಾವ ವ್ಯಕ್ತವಾಗುತ್ತದೆ. ಅಂದರೆ ವಾಸ್ತು ಎಂದರೆ ಕೇವಲ ವಾಸಸ್ಥಳವಷ್ಟೇ ಅಲ್ಲ, ಅದು ಜೀವಿಗಳಿಗೆ ರಕ್ಷಣೆಯನ್ನು ನೀಡುವ ಆಶ್ರಯವೂ ಆಗಿದೆ.
ಹೀಗಾಗಿ, ಶ್ಲೋಕ ಮತ್ತು ಧಾತುವ್ಯಾಖ್ಯಾನದ ಆಧಾರದ ಮೇಲೆ ನೋಡಿದರೆ, ಜೀವಿಗಳು ವಾಸಿಸುವ ಮತ್ತು ಅವರಿಗೆ ಆವರಣ–ಆಶ್ರಯವನ್ನು ಒದಗಿಸುವ ಸ್ಥಳವೇ “ವಾಸ್ತು” ಎಂದು ತಿಳಿಯುತ್ತದೆ.

“ನಿವಾಸಾತ್ ಸರ್ವ ಭೂತಾನಾಂ ವಾಸ್ತುರಿತಿ ಶಬ್ಬಿತಃ”
ಎಂಬುದು ಅಮರಕೋಶ ದಲ್ಲಿರುವ ಉಲ್ಲೇಖ. ಸಮಸ್ತ ಭೂತಗಳ, ಅಂದರೆ ಎಲ್ಲಾ ಜೀವಿಗಳ ನಿವಾಸವಾಗಿರುವುದರಿಂದ ಅದನ್ನು ‘ವಾಸ್ತು’ ಎಂದು ಕರೆಯುತ್ತಾರೆ ಎಂಬುದೇ ಇದರ ಅರ್ಥ. ಅಂದರೆ, ವಾಸ್ತು ಎಂಬುದು ಕೇವಲ ಕಟ್ಟಡವಲ್ಲ; ಜೀವಜಗತ್ತಿನ ವಾಸಸ್ಥಾನವಾಗಿರುವ ಭೂಮಿ ಮತ್ತು ಅದರ ಆಧಾರಭೂತ ತತ್ತ್ವವೇ ವಾಸ್ತು ಎಂಬ ಅಭಿಪ್ರಾಯ ಇಲ್ಲಿದೆ.

ಇದೇ ಅರ್ಥವನ್ನು ವಿಸ್ತರಿಸುವಂತೆ ಮತ್ಸ್ಯಪುರಾಣ ದಲ್ಲಿ “ನಿವಾಸಾತ್ ಸರ್ವ ದೇವಾನಾಂ ವಾಸ್ತುರಿತಿ ಶಬ್ಬಿತಃ” ಎಂದು ಹೇಳಲಾಗಿದೆ. ಇಲ್ಲಿ ವಾಸ್ತು ದೇವತೆಗಳ ನಿವಾಸವೂ ಆಗಿದೆ ಎಂಬ ಪರಿಕಲ್ಪನೆ ಮೂಡುತ್ತದೆ. ಈ ಹೇಳಿಕೆಯ ಹಿಂದೆ ಪೌರಾಣಿಕ ಹಿನ್ನೆಲೆ ಇದೆ. ದೇವತೆಗಳೂ ವಾಸಿಸುವ ತತ್ತ್ವರೂಪದ ವಾಸ್ತುವನ್ನು ಇಲ್ಲಿ ಗಮನಿಸಬೇಕು.

‘ಅಂಧಕಾಸುರನ ವಧೆ’ ಸಂದರ್ಭದಲ್ಲಿ ಶಿವ ಪರಮೇಶ್ವರನ ದೇಹದಿಂದ ಬಿದ್ದ ಬೆವರಿನ ಹನಿಗಳು ಭೂಮಿಗೆ ತಾಗಿದಾಗ ಭೀಕರ ಭೂತರೂಪವೊಂದು ಉತ್ಪನ್ನವಾಯಿತು. ಆ ಭೂತವು ಆಕಾಶ ಮತ್ತು ಭೂಮಿಯನ್ನು ನುಂಗುವಷ್ಟು ಪ್ರಬಲವಾಗಿತ್ತು. ಭೂಮಿಯ ಮೇಲೆ ಬಿದ್ದಿದ್ದ ಅಂಧಕಾಸುರನ ರಕ್ತವನ್ನೆಲ್ಲಾ ಅದು ಹೀರಿದರೂ ತೃಪ್ತಿಯಾಗಲಿಲ್ಲ. ತೀವ್ರ ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತ ಅದು ಸದಾಶಿವನನ್ನು ಕುರಿತು ತಪಸ್ಸು ಆಚರಿಸಿ, ಮೂರು ಲೋಕಗಳನ್ನೂ ನುಂಗುವ ಸಾಮರ್ಥ್ಯವನ್ನು ಬೇಡಿತು. ಸಂತುಷ್ಟನಾದ ಶಿವನು ಅದಕ್ಕೆ ವರವನ್ನು ಕರುಣಿಸಿದನು. ವರಪ್ರಭಾವದಿಂದ ಆ ಭೂತವು ಸ್ವರ್ಗ, ಆಕಾಶ ಮತ್ತು ಭೂಮಂಡಲವನ್ನೆಲ್ಲಾ ವ್ಯಾಪಿಸಿ, ಕೊನೆಗೆ ಭೂಮಿಯ ಮೇಲೆ ಬಿದ್ದು ಹಬ್ಬಿಕೊಂಡಿತು. ಇದರಿಂದ ಭಯಗೊಂಡ ದೇವತೆಗಳೆಲ್ಲರೂ ಒಟ್ಟಾಗಿ ಸೇರಿ, ಆ ಭೂತದ ಮೇಲೆ ಬಿದ್ದು ಅದರ ದೇಹದ ವಿವಿಧ ಭಾಗಗಳಲ್ಲಿ ನಿರ್ದಿಷ್ಟ ಸ್ಥಾನಗಳನ್ನು ಆಕ್ರಮಿಸಿಕೊಂಡು ಅದನ್ನು ಕಟ್ಟಿ ಹಾಕಿದರು. ಈ ರೀತಿ ದೇವತೆಗಳಿಂದ ಮೆಟ್ಟಿನಿಂತ ಭೂತವೇ ವಾಸ್ತುಮಂಡಲದಲ್ಲಿರುವ ವಾಸ್ತುಪುರುಷ.

ವಾಸ್ತುಮಂಡಲದ ಚೌಕಗಳಲ್ಲಿ ನಿರ್ದಿಷ್ಟವಾಗಿ ದೇವತೆಗಳನ್ನು ಗುರುತಿಸಲಾಗಿದೆ. ಪ್ರತಿಯೊಂದು ಖಂಡವೂ ಒಂದು ದೇವತೆಯ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ “ನಿವಾಸಾತ್ ಸರ್ವದೇವಾನಾಂ” ಎಂಬ ಉಕ್ತಿಯ ಅರ್ಥ ಸ್ಪಷ್ಟವಾಗುತ್ತದೆ. ದೇವತೆಗಳಿಂದ ಮೆಟ್ಟಿನಿಂತ ವಾಸ್ತುಪುರುಷನನ್ನು ತಣಿಸಲು, ಅವನ ಕ್ಷುತ್‌ಬಾಧೆಯನ್ನು ಶಮನ ಮಾಡಲು ವಾಸ್ತುಹೋಮವನ್ನು ಆಚರಿಸಲಾಗುತ್ತದೆ. ಕಟ್ಟಡ ನಿರ್ಮಾಣದ ಪೂರ್ವದಲ್ಲಿ ನಡೆಯುವ ಈ ಕರ್ಮವು ವಾಸ್ತುಪುರುಷನ ಶಾಂತಿಗಾಗಿ ನಿರ್ದಿಷ್ಟವಾಗಿದೆ.
ಇದೇ ಹಿನ್ನೆಲೆಯಲ್ಲಿ ಮಯಮತ ದಲ್ಲಿಯೂ ವಾಸ್ತು ಪದದ ವಿವರಣೆ ದೊರೆಯುತ್ತದೆ (ಡಗೆನ್ಸ್, ೧೯೭೦: ೩೫). ಇಲ್ಲಿ ವಾಸ್ತು ಕೇವಲ ಭೌತಿಕ ವಸತಿ ಸ್ಥಳವಲ್ಲ; ಅದು ದೇವತೆಗಳ ಆವರಣ, ದೈವಿಕ ಸ್ಥಿತಿ ಮತ್ತು ಬ್ರಹ್ಮಾಂಡೀಯ ವಿನ್ಯಾಸದ ಪ್ರತಿರೂಪವೆಂದು ನಿರೂಪಿಸಲಾಗಿದೆ.

ಆಕರ
#ದೇವಾಲಯ_ವಾಸ್ತು_ದೀಪಿಕೆ

February 20, 2026

ಮರಣದ ಮಹತ್ವ

    ಊರ ಹೊರಗಿನ ಮರದ ಕೆಳಗೆ  ಸದಾ ಧ್ಯಾನಸ್ಥರಾಗಿ ಕುಳಿತಿರುವ  ಒಬ್ಬ ಋಷಿಯ ಬಳಿಗೆ , ಒಬ್ಬ ರಾಜ ಹೋಗಿ,  ಗುರುಗಳೇ, ಅಮರತ್ವವನ್ನು ನೀಡುವ ಯಾವುದಾದರೂ ಔಷಧಿ, ಅಥವಾ ಗಿಡಮೂಲಿಕೆಗಳಿದ್ದರೆ ದಯವಿಟ್ಟು ನನಗೆ ತಿಳಿಸಿ, ಎಂದು ಕೇಳಿದ.

  ಆಗ ಋಷಿಗಳು, ರಾಜ ಇಲ್ಲಿರುವ  ಎರಡು   ಮಹಾ ಪರ್ವತಗಳನ್ನು ದಾಟಿದ ನಂತರ , ಅಲ್ಲಿ ಒಂದು ಸರೋವರವಿದೆ,ಅದರ ನೀರನ್ನು ಕುಡಿದಾಗ, ನೀನು ಅಮರನಾಗುವೆ, ಎಂದು ಹೇಳಿದರು.

    ಋಷಿಗಳು ಹೇಳಿದಂತೆ ಎರಡು ಪರ್ವತಗಳನ್ನು ದಾಟಿದ ನಂತರ ರಾಜ ,ಒಂದು ಸರೋವರವನ್ನು ಕಂಡ. ಇನ್ನೇನು ಅದರಲ್ಲಿನ ನೀರು ಬಾಚಿ ಕುಡಿಯಬೇಕೆಂದು ಕೊಂಡಾಗ,ಯಾರೋ  ಜೋರಾಗಿ ನರಳುತ್ತಿರುವಂತ  ಶಬ್ದ ಕೇಳಿಸಿತು. ಶಬ್ದ ಬಂದ ಕಡೆಗೆ ಹೋಗಿ ನೋಡಿದರೆ, ಅಲ್ಲೊಬ್ಬ ಅತ್ಯಂತ ದುರ್ಬಲ ವ್ಯಕ್ತಿಯನ್ನು ಕಂಡನು.ಆ ವ್ಯಕ್ತಿ ನರಳುತ್ತಿರುವ ಕಾರಣವನ್ನು  ರಾಜ ಕೇಳಿದಾಗ,  ಆತ ,ನಾನು  ಈ ಸರೋವರದ ನೀರನ್ನು ಕುಡಿದು ಅಮರನಾದೆ, ನನಗೆ ನೂರು ವರ್ಷ ತುಂಬಿದ ನಂತರ ‌ನನ್ನ ಮಗ ನನ್ನನ್ನು ಮನೆಯಿಂದ ಆಚೆ ಓಡಿಸಿದ,ಕಳೆದ ಐವತ್ತು ವರ್ಷಗಳಿಂದ  ನಾನು ಹೀಗೇ  ಇಲ್ಲೇ, ನರಳುತ್ತಾ ಮಲಗಿದ್ದೇನೆ, ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ, ನನ್ನ ಮಗ  ಈಗ ತೀರಿಕೊಂಡಿದ್ದಾನೆ, ನನ್ನ ‌ಮೊಮ್ಮಕ್ಕಳೂ ಈಗ ‌ವೃದ್ದರಾಗಿದ್ದಾರೆ, ಸಾಯಬೇಕೆಂದುಕೊಂಡು ನಾನು, ಅನ್ನ ,ನೀರು  ಸೇವಿಸುವುದನ್ನು ಬಿಟ್ಟು ಬಿಟ್ಟಿದ್ದೇನೆ, ಆದರೂ ಕೂಡ ನಾನಿನ್ನು ಬದುಕಿದ್ದೇನೆ, ಎಂದು ದುಃಖಿಸುತ್ತಾ ಹೇಳಿದ.

    ರಾಜನಿಗೆ ಅವನನ್ನು ನೋಡಿ, ಅಯ್ಯೋ, ಅನ್ನಿಸಿತು, ಆದರೆ ಅವನಿಗೊಂದು ‌ಆಲೋಚನೆ ಬಂತು. ಬರೀ ಅಮರತ್ವದಿಂದ ಏನೂ ಪ್ರಯೋಜನವಿಲ್ಲ, ಅದರ ಜೊತೆಗೆ ಯೌವ್ವನವನ್ನು ಪಡೆದುಕೊಂಡರೆ,ಆಗ ಸರಿ ಹೋಗಬಹುದು, ಎಂದುಕೊಂಡು, ಇದಕ್ಕೆ ಪರಿಹಾರವನ್ನು ಋಷಿಗಳ ಬಳಿ ಕಂಡುಕೊಳ್ಳಲು ಅವನು ಪುನಃ ಅವರ ಬಳಿಗೆ  ಹೋಗಿ, ಗುರುಗಳೇ ನನಗೆ ಅಮರತ್ವದೊಂದಿಗೆ ಯೌವ್ವನವನ್ನು ಕೂಡಾ ಹೇಗೆ ಪಡೆಯುವುದೆಂಬುದನ್ನು ದಯವಿಟ್ಟು ತಿಳಿಸಿಕೊಡಿ ಎಂದು ಕೇಳಿದನು.

    ಆಗ ಋಷಿಗಳು, ನಿನಗೆ ಇದೇ ಸರೋವರನ್ನು ದಾಟಿದ ನಂತರ, ಮತ್ತೊಂದು  ಮಹಾ ಪರ್ವತ ಕಾಣುತ್ತದೆ, ಅದನ್ನು ದಾಟಿದರೆ, ಹಳದಿ ಹಣ್ಣುಗಳಿಂದ ತುಂಬಿದ ಮರವೊಂದು ಕಾಣುತ್ತದೆ, ಅವುಗಳಲ್ಲಿ ಒಂದು ಹಣ್ಣನ್ನು ತಿಂದರೆ, ನೀನು ಅಮರತ್ವ ಮತ್ತು ಯವ್ವನ ಎರಡನ್ನೂ ಪಡೆಯುತ್ತೀಯ ಎಂದು ಹೇಳಿದರು.

    ಆಗ ರಾಜನಿಗೆ ಬಹಳ ಸಂತೋಷವಾಯಿತು .ಋಷಿಗಳು  ಹೇಳಿದಂತೆ, ಪರ್ವತವನ್ನು ದಾಟಿ, ಹಳದಿ ಹಣ್ಣಿನಿಂದ ತುಂಬಿದ ಮರದತ್ತ ಹೋದ. ಆತ ಒಂದು ಹಣ್ಣನ್ನು ಕಿತ್ತು ತಿನ್ನಲು ಹೋದಾಗ, ಅವನಿಗೆ ಯಾರೋ, ಜೋರಾಗಿ  ಕಿರುಚಾಡುತ್ತಾ ಜಗಳ ವಾಡುತ್ತಿರುವಹಾಗೆ, ಭಾಸವಾಯಿತು. ಹಣ್ಣು ತಿನ್ನುವುದನ್ನು ಬಿಟ್ಟು, ಶಬ್ದ ಬಂದ ಕಡೆ ಹೋಗಿ ನೋಡಿದಾಗ, ನಾಲ್ವರು ಯುವಕರು ಜೋರಾಗಿ ವಾದ ಮಾಡುತ್ತಾ ಜಗಳವಾಡುತ್ತಿದ್ದರು. ಅವರು ಏಕೆ ಹೀಗೆ ಹೊಡೆದಾಡುತ್ತಿದ್ದಾರೆ ಎಂದು ರಾಜ ಕೇಳಿದ. 
   ಆಗ ಒಬ್ಬ ಹೇಳಿದ, ನನಗೀಗ ಇನ್ನೂರೈವತ್ತು ವರ್ಷವಾಗಿದೆ, ಮತ್ತು ನನ್ನ ಬಲಭಾಗದಲ್ಲಿರುವ ವ್ಯಕ್ತಿ, ಆತ ನನ್ನ ತಂದೆ, ಅವನಿಗೆ ಮುನ್ನೂರು ವರ್ಷವಾಗಿದೆ, ಅವರು ಇನ್ನೂ ನನ್ನ ಪಾಲಿನ ಆಸ್ತಿಯನ್ನು ನನಗೆ ನೀಡುತ್ತಿಲ್ಲ, ಎಂದು ಹೇಳಿದ.
    ರಾಜ ಬಲಭಾಗದಲ್ಲಿರುವ ವ್ಯಕ್ತಿಯನ್ನು ಏಕೆಂದು ಕೇಳಿದಾಗ, ಆತ , ಮುನ್ನೂರೈವತ್ತು ವರ್ಷ ವಯಸ್ಸಿನ ನನ್ನ ತಂದೆ ಇನ್ನೂ ಬದುಕಿದ್ದಾರೆ,  ಆತ ನನ್ನ ಪಾಲನ್ನು ನನಗೇ  ನೀಡಿಲ್ಲ, ಇನ್ನು ನಾನು ನನ್ನ ಮಗನಿಗೆ ಹೇಗೆ ಕೊಡಲಿ,ಎಂದ. ಮುನ್ನೂರೈವತ್ತರ ಯುವಕ,ನಾನೂರು ವರ್ಷ ವಯಸ್ಸಿನ ತನ್ನ ತಂದೆಯನ್ನು ತೋರಿಸಿ, ಅದೇ ದೂರನ್ನು ಹೇಳಿದನು.

   ಹೀಗೆ ಆಸ್ತಿಗಾಗಿ , ನಮ್ಮ ಅಂತ್ಯವಿಲ್ಲದ ಹೋರಾಟವನ್ನು ನೋಡಿ ಗ್ರಾಮಸ್ಥರು, ನಮ್ಮನ್ನು  ಹಳ್ಳಿಯಿಂದ ಹೊರಗೆ ಹಾಕಿದ್ದಾರೆ, ಎಂದು ಅವರೆಲ್ಲರೂ ರಾಜನಿಗೆ ತಿಳಿದರು. 

   ಇದನ್ನು ಕೇಳಿದ ರಾಜ ಅಘಾತಕ್ಕೊಳಗಾಗಿ,  ಸದ್ಯ!  ನಾನಿನ್ನೂ ಹಣ್ಣನ್ನು ತಿನ್ನಲಿಲ್ಲವಲ್ಲಾ!  ಎಂದುಕೊಂಡು,ಋಷಿಯ ಬಳಿಗೆ ಪುನಹ ಓಡಿ  ಹೋದ. ನನಗೆ ಸಾವಿನ ಮಹತ್ವವನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು, ಗುರುಗಳೇ ಎಂದು ಅವರ ಪಾದಗಳಿಗೆ  ಎರಗಿದನು.

    ಋಷಿಗಳು ನಗುತ್ತಾ, ಸಾವು ಅಸ್ತಿತ್ವದಲ್ಲಿರುವುದರಿಂದ, ಜಗತ್ತಿನಲ್ಲಿ ಇನ್ನೂ ಪ್ರೀತಿ ವಿಶ್ವಾಸವಿದೆ. ಅಮರತ್ವವನ್ನು ಪಡೆಯಲು ಪ್ರಯತ್ನಿಸುವ ಬದಲು, ಬದುಕಿರುವಷ್ಟು ದಿನವೂ ಪ್ರತಿಕ್ಷಣವನ್ನೂ ಸಂತೋಷದಿಂದ, ಆನಂದದಿಂದ ಜೀವಿಸುವುದನ್ನು  ಕಲಿಯಿರಿ, ಆಗ  ಇಡೀ ಜಗತ್ತೇ ಜಗಮಗಿಸುತ್ತಿರುತ್ತದೆ. ಎಂದು ಹೇಳಿದರು.

ವಿವಾಹ ಮೂಹೂರ್ತದಲ್ಲಿ ಯುತಿ ದೋಷ

ಮೂಲ ಶ್ಲೋಕ ಪ್ರಮಾಣ
ಶ್ಲೋಕ ೧:
ಪಾಪದ್ವಯಯುತೇ ಚಂದ್ರೇ ದಂಪತ್ಯೋರ್ಮರಣಂ ಧ್ರುವಂ॥
— ನಾರದ ಪುರಾಣ
ಅರ್ಥ:
ವಿವಾಹ ಸಮಯದಲ್ಲಿ ಚಂದ್ರನು ಎರಡು ಪಾಪಗ್ರಹಗಳೊಂದಿಗೆ ಯುತಿಯಾಗಿದ್ದರೆ ದಂಪತಿಗಳಿಗೆ ಗಂಭೀರ ದೋಷ ಉಂಟಾಗಿ, ಆಯುಷ್ಯ ಅಥವಾ ದಾಂಪತ್ಯ ಸುಖದಲ್ಲಿ ಭಾರಿ ವಿಘ್ನ ಸಂಭವಿಸುವ ಸಾಧ್ಯತೆ ಇದೆ.

ಶ್ಲೋಕ ೨:
ಚಂದ್ರರ್ಕ್ಷೇ ಪಾಪಯುಕ್ತೇತ್ಸ್ಯಾದ್ಯು ದೋಷಸ್ತದೋದಿತಃ॥
— ಮೂಹೂರ್ತ ಗಣಪತಿ
ಅರ್ಥ:
ವಿವಾಹ ಮೂಹೂರ್ತದಲ್ಲಿ ಚಂದ್ರನಿಗೆ ಪಾಪಗ್ರಹಗಳ ಸಂಯೋಗ ಅಥವಾ ದೃಷ್ಟಿ ಇದ್ದರೆ ಯುತಿ ದೋಷ ಉಂಟಾಗುತ್ತದೆ ಎಂದು ಮೂಹೂರ್ತ ಶಾಸ್ತ್ರದಲ್ಲಿ ಹೇಳಲಾಗಿದೆ.

ಗ್ರಂಥಾಂತರ ವಚನ (ವಶಿಷ್ಠ):
ಶಶಿಯುತೈರ್ದೀರ್ಘಪ್ರವಾಸಃ ಶುಭೈಃ ॥
ಅರ್ಥ:
ಚಂದ್ರನು ಒಂದಕ್ಕಿಂತ ಹೆಚ್ಚು ಶುಭಗ್ರಹಗಳೊಂದಿಗೆ ಯುತಿಯಾದರೆ ದೀರ್ಘ ಪ್ರವಾಸ ಅಥವಾ ವಿದೇಶ ವಾಸದ ಯೋಗ ಉಂಟಾಗುತ್ತದೆ.

ವಿವಾಹ ಯುತಿ (ಸಂಗ್ರಹ) ದೋಷ ಎಂದರೆ
ವಿವಾಹ ಮೂಹೂರ್ತದಲ್ಲಿ ಚಂದ್ರನು ಅತ್ಯಂತ ಪ್ರಮುಖ ಗ್ರಹ. ಚಂದ್ರನು ಮನಸ್ಸು, ದಾಂಪತ್ಯ ಸೌಹಾರ್ದ, ಕುಟುಂಬ ಜೀವನ ಮತ್ತು ಸಂತಾನ ಭಾಗ್ಯವನ್ನು ಸೂಚಿಸುತ್ತಾನೆ.
ಚಂದ್ರನೊಂದಿಗೆ ಇತರೆ ಗ್ರಹಗಳು ಒಂದೇ ರಾಶಿಯಲ್ಲಿ ಸೇರಿ ಸ್ಥಿತರಾದರೆ ಅದನ್ನು ಯುತಿ (ಸಂಗ್ರಹ) ಎಂದು ಕರೆಯುತ್ತಾರೆ.
ಈ ಯುತಿ ಶುಭಗ್ರಹಗಳಾದರೆ ಶುಭಫಲ, ಪಾಪಗ್ರಹಗಳಾದರೆ ದೋಷಫಲ ಉಂಟಾಗುತ್ತದೆ. 

ಗ್ರಹ ಯುತಿಗಳ ವಿವರವಾದ ಫಲಗಳು
1. ಚಂದ್ರ–ರವಿ ಯುತಿ Sun + Moon
ವಿವಾಹದ ನಂತರ ಹಣಕಾಸಿನ ಏರುಪೇರು.
ಕುಟುಂಬದಲ್ಲಿ ಅಹಂಕಾರದಿಂದ ಕಲಹ.
ಗೃಹಸೌಖ್ಯದಲ್ಲಿ ಅಸ್ಥಿರತೆ.
ಸೂಚನೆ: ಆರ್ಥಿಕ ನಿರ್ವಹಣೆಯಲ್ಲಿ ಎಚ್ಚರಿಕೆ ಅಗತ್ಯ.

2. ಚಂದ್ರ–ಮಂಗಳ ಯುತಿ Mars + Moon
ಅಪಘಾತ ಭೀತಿ.
ದಂಪತಿಗಳಲ್ಲಿ ಒಬ್ಬರಿಗೆ ಸದಾ ಆರೋಗ್ಯ ತೊಂದರೆ.
ಆಕ್ರೋಶದಿಂದ ಜಗಳ.
ಸೂಚನೆ: ವಾಹನ ಚಾಲನೆಯಲ್ಲಿ ವಿಶೇಷ ಜಾಗ್ರತೆ.

3. ಚಂದ್ರ–ಬುಧ ಯುತಿ Mercury + Moon
ಸಂತಾನ ಸಂಬಂಧಿ ವಿಘ್ನ.
ಗರ್ಭಹಾನಿ ಅಥವಾ ಸಂತಾನ ವಿಳಂಬ.
ಮಾನಸಿಕ ಒತ್ತಡ.
ಸೂಚನೆ: ಗರ್ಭಧಾರಣೆಗೆ ಮುಂಚೆ ವೈದ್ಯಕೀಯ ಹಾಗೂ ದೈವಪರಿಹಾರ ಅಗತ್ಯ.

4. ಚಂದ್ರ–ಗುರು ಯುತಿ Jupiter + Moon
ಸೌಭಾಗ್ಯ ವೃದ್ಧಿ.
ಸಂತಾನ ಭಾಗ್ಯ.
ಕುಟುಂಬದಲ್ಲಿ ಧರ್ಮ ಮತ್ತು ಗೌರವ.
ಇದು ಶುಭ ಯೋಗ.

5. ಚಂದ್ರ–ಶುಕ್ರ ಯುತಿ Venus + Moon
ಮರು ವಿವಾಹ ಯೋಗ.
ದಾಂಪತ್ಯದಲ್ಲಿ ತೃತೀಯ ವ್ಯಕ್ತಿ ಪ್ರವೇಶ.
ಕನ್ಯೆಗೆ ಸವತಿ ಯೋಗ.
ಸೂಚನೆ: ನಿಷ್ಠೆ ಮತ್ತು ಸಂಯಮ ಅವಶ್ಯಕ.

6. ಚಂದ್ರ–ಶನಿ ಯುತಿ Saturn + Moon
ದಂಪತಿಗಳು ಬೇರೆಬೇರೆ ಜೀವನ.
ಗೃಹತ್ಯಾಗ ಅಥವಾ ದೂರ ವಾಸ.
ಮನಸ್ಸಿನ ದೂರಾವಸ್ಥೆ.

7. ಚಂದ್ರ–ರಾಹು ಯುತಿ Rahu + Moon
ನಿತ್ಯ ಕಲಹ.
ಅನುಮಾನ, ಭ್ರಮೆ.
ಕುಟುಂಬದಲ್ಲಿ ಅಶಾಂತಿ.

8. ಚಂದ್ರ–ಕೇತು ಯುತಿ Ketu + Moon
ಕಷ್ಟಪೂರ್ಣ ಜೀವನ.
ದಾಂಪತ್ಯ ಸುಖಾಭಾವ.
ದೈನ್ಯತೆ, ಆರ್ಥಿಕ ಸಂಕಷ್ಟ.

ವಿಶೇಷ ನಿಯಮ:
ಚಂದ್ರನು ಒಂದಕ್ಕಿಂತ ಹೆಚ್ಚು ಶುಭಗ್ರಹಗಳ (ಗುರು, ಶುಕ್ರ, ಬುಧ) ಯುತಿ ಹೊಂದಿದರೆ:

ವಿದೇಶ ವಾಸ ಯೋಗ
ದೀರ್ಘ ಪ್ರವಾಸ
ಹೊರನಾಡಿನಲ್ಲಿ ಸ್ಥಿರತೆ

ಸಂಕ್ಷಿಪ್ತವಾಗಿ
ವಿವಾಹ ಮೂಹೂರ್ತದಲ್ಲಿ ಚಂದ್ರನ ಯುತಿ ಅತ್ಯಂತ ಸೂಕ್ಷ್ಮ ವಿಷಯ.
ಶುಭಗ್ರಹ ಯುತಿ ದಾಂಪತ್ಯ ಸುಖವನ್ನು ವೃದ್ಧಿಸುತ್ತದೆ.
ಪಾಪಗ್ರಹ ಯುತಿ ಜೀವನದಲ್ಲಿ ಕಲಹ, ದೂರಾವಸ್ಥೆ ಅಥವಾ ಆರ್ಥಿಕ/ಸಂತಾನ ತೊಂದರೆ ಉಂಟುಮಾಡುತ್ತದೆ.

ಆದ್ದರಿಂದ ವಿವಾಹ ನಿಶ್ಚಯಕ್ಕೂ ಮುನ್ನ ಅನುಭವಜ್ಞ ಜ್ಯೋತಿಷ್ಯರಿಂದ ಸೂಕ್ತ ಪರಿಶೀಲನೆ ಅಗತ್ಯ.

ಶ್ರೀ ಗುರುರಾಜಾಚಾರ್ಯ ಜೋಶಿ