ಸೆಪ್ಟೆಂಬರ್ 4, 2021

ದುರ್ಗಂಧ ಮತ್ತು ದುರ್ಗುಣ


ಒಂದು ಹಳ್ಳಿಯಲ್ಲಿ ಒಂದೇ ಒಂದು ಬಾವಿ ಇತ್ತು. ಅದನ್ನೆ ಎಲ್ಲಾ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಬಳಸುತ್ತಿದ್ದರು. ಒಮ್ಮೆ ಆ ಗ್ರಾಮದ ಮೂರ್ನಾಲ್ಕು ನಾಯಿಗಳು  ತಮ್ಮ ತಮ್ಮಲ್ಲೇ ಜಗಳ ಮಾಡುತ್ತಾ ಆ ಬಾವಿಯಲ್ಲಿ ಬಿದ್ದುಬಿಟ್ಟವು. ಕೆಲವು ದಿನಗಳ ನಂತರ ಆ ಬಾವಿಯಿಂದ ಕೆಟ್ಟ ವಾಸನೆ ಬರತೊಡಗಿತು. ಆಗ ಗ್ರಾಮದವರೆಲ್ಲ ಸೇರಿಕೊಂಡು ಪಂಚಾಯ್ತಿ ಸೇರಿ, ಏನು ಮಾಡುವುದೆಂದು ಚರ್ಚಿಸಿ ಆ ಊರಿಗೆ ಬಂದಿದ್ದ ಒರ್ವ ಸಂತರ ಬಳಿ ಹೋಗಿ ವಿಷಯ ತಿಳಿಸಿ , ಸಲಹೆ ಕೇಳಿದರು ಏನಾದರೂ ಮಾಡಿ ಆ ದುರ್ಗಂಧ  ಹೋಗುವಂತೆ ಮಾಡಿ ಎಂದು ಬೇಡಿಕೊಂಡರು. ಅವರು ಆ ಬಾವಿಗೆ ಸುಗಂಧ ದ್ರವ್ಯಗಳನ್ನು ಹಾಕುವಂತೆ ಹೇಳಿದರು. 

ಕೆಲವು ದಿನಗಳ ನಂತರ ಮತ್ತೇ ವಾಸನೆ ಜೋರಾಯಿತು. ಆಗ ಅವರು ಮತ್ತೆ ಸಂತರನ್ನು ಸಂಪರ್ಕಿಸಿದರು. ಆಗ ಅವರು ಹಾಗಾದರೆ ಅದಕ್ಕೆ ಶುದ್ಧವಾದ ಪವಿತ್ರ ಜಲವನ್ನು ಸೇರಿಸುವಂತೆ ಹೇಳಿದರು. ಆದರೂ ಕೆಲವು ದಿನಗಳ ನಂತರ ಮತ್ತೇ ದುರ್ಗಂಧದ ವಾಸನೆ ಜೋರಾಗಿ ಬರತೊಡಗಿತು. ಮತ್ತೆ ಸಂತರು ಈ ಬಾರಿ ದೇವರ ಪುರಾಣ - ಪ್ರವಚನ ಹಮ್ಮಿಕೊಳ್ಳಲು ಸಲಹೆ ನೀಡಿದರು. 

ಅದೂ ಆಯಿತು. ಅದರೂ ದಿನದಿಂದ ದಿನಕ್ಕೆ  ಬಾವಿಯಿಂದ ಕೆಟ್ಟ ವಾಸನೆ ಜೋರಾಗಿ ಬರತೊಡಗಿತು. ಈ ಸಾರಿ ಅವರು ಮತ್ತೆ ಸಂತರ ಬಳಿ ಬಂದು ಸಮಸ್ಯೆಯ ಗಂಭೀರತೆಯನ್ನು ತಿಳಿಸಿ ಶಾಶ್ವತವಾದ ಪರಿಹಾರ ತಿಳಿಸಿ ಎಂದು ಅವರ ಬಳಿ ಕೇಳಿಕೊಂಡರು.

ಆಗ ಸಂತರು ಒಂದು ಕ್ಷಣ ಯೋಚಿಸಿ "ಮೊದಲು ನೀವು  ಬಾವಿಯೊಳಗಿನ ಸತ್ತ ನಾಯಿಗಳನ್ನು ತೆಗೆದು ಹಾಕಿದ್ದೀರಾ?" ಎಂದು ಕೇಳಿದರು. ಆದರೆ ಗ್ರಾಮಸ್ಥರು ನಾಯಿಗಳನ್ನು ತೆಗೆದು ಹಾಕಿರಲಿಲ್ಲ. ಆಗ ಸಂತರು ಹೇಳಿದರು : "ವಾಸನೆ ಹೇಗೆ ಹೋಗಲು ಸಾಧ್ಯ? ಮೊದಲು ಆ ನಾಯಿಗಳನ್ನು ತೆಗೆದು ಹೊರ ಹಾಕಿ, ನಂತರ ನಾನು ಹೇಳಿದ್ದ ಕಾರ್ಯಗಳನ್ನು  ಮಾಡಿದರೆ ನೀರಿನಲ್ಲಿಯ ದುರ್ಗಂಧ ಹೋಗುತ್ತದೆ , ಇಲ್ಲದಿದ್ದರೆ ನೀವು ಏನೂ ಮಾಡಿದರೂ ವ್ಯರ್ಥ.." ಎಂದು ಹೇಳಿದರು.

*ನಮ್ಮ ಜೀವನವೂ ಹಾಗೇ ಅಲ್ಲವೆ!? ಮೊದಲು ನಮ್ಮಲ್ಲಿ ಇರುವ ದುರ್ಗುಣಗಳನ್ನು ನಾವು ಹೊರ ಹಾಕಬೇಕು. ನಂತರ ತೀರ್ಥಯಾತ್ರೇ, ಪುರಾಣ -  ಪ್ರವಚನ, ಸಾಧು ಸಂತರ ಸೇವೆ , ಪೂಜೆ ಪುನಸ್ಕಾರ,  ದೇವರ ಆರಾಧನೆ ಮಾಡಬೇಕು. ಆಗ ಮಾತ್ರ ನಾವು  ಮಲೀನತೆಯಿಂದ ಮುಕ್ತವಾಗಿ ನಮ್ಮ ಮನಸ್ಸು ಶುದ್ಧವಾಗುತ್ತದೆ.*