March 22, 2025

ವೀರಶೈವ ಧರ್ಮದಲ್ಲಿ ಅಂತಿಮ ಯಾತ್ರೆ

ಅಂತಿಮಯಾತ್ರೆಯಲ್ಲಿ ಆ ನಾಲ್ಕು ಜನ!
ವೀರಶೈವಧರ್ಮದಲ್ಲಿ ವೃಷಭೇಶ್ವರನಿಗೆ ಪ್ರಮುಖ ಸ್ಥಾನವಿದೆ. ವೀರಭದ್ರನಿಂದ "ವೀರಶೈವ" ಪದ ಹುಟ್ಟಿದೆಯೆಂದು, ಅವನೇ ವೀರಶೈವ ಧರ್ಮದ ಸ್ಥಾಪಕನೆಂದು ಕೆಲವರು ಹೇಳುವುದುಂಟು. ಒಂದು ವಿಧದಲ್ಲಿ ಅದು ಸರಿ ಎನಿಸಿದರೂ ವೀರಭದ್ರ ಪ್ರಮಥಗಣಗಳಲ್ಲಿ ಒಬ್ಬ; ಮೊದಲಿಗನಲ್ಲ. ವೃಷಭೇಶ್ವರನೇ ಪ್ರಮಥಗಣಗಳಲ್ಲಿ ಮೊದಲಿಗ; ಪ್ರಮಥಗಣಾಧಿಪತಿ. ಆದ್ದರಿಂದಲೇ  ವೀರಶೈವಧರ್ಮವನ್ನು "ವೃಷಭಧರ್ಮ" ಎಂಬ ಹೆಸರಿನಿಂದಲೂ ಕರೆಯುವುದುಂಟು. ಈ ವೃಷಭೇಶ್ವರನ ಕುರಿತು "ಯಾವುದು ವೀರಶೈವಧರ್ಮಧ್ವಜ?" ಎಂಬ ಶೀರ್ಷಿಕೆಯ ಅಡಿಯಲ್ಲಿ ಹಲವು ವಿಚಾರಗಳನ್ನು ಹಿಂದೊಮ್ಮೆ ತಿಳಿಸಿದ್ದೇವೆ. ಅಂದು ನಮ್ಮ ಜನನ,ಜೀವನ,ಮರಣಗಳಲ್ಲಿ ವೃಷಭನ ಪಾತ್ರ ಏನು ಎಂಬುದನ್ನು ನೋಡಿದ್ದೇವೆ. ಈಗ ಮತ್ತೊಂದು ವಿಚಾರವನ್ನು ನೋಡೋಣ. 

 ವೃಷಭನು "ಶಿವ"ವಾಹಕನಷ್ಟೇ ಅಲ್ಲ, "ಶವ"ವಾಹಕನೂ ಹೌದು. ಅದು ಹೇಗೆ? 

ನಮ್ಮ ಬದುಕು ಹೇಗಿರಬೇಕೆಂದರೆ ನಾವು ಸತ್ತಾಗ ನಮ್ಮ ದೇಹವನ್ನು ನಾಲ್ಕು ಜನ ಪ್ರೀತಿಯಿಂದ ಹೊತ್ತುಕೊಂಡು ಹೋಗುವಂತಿರಬೇಕೇ ವಿನಹ ಎತ್ತಿ ಬಿಸಾಕುವಂತಿರಬಾರದು. ಅಂತಹ ಶಿವಮಯ ಬದುಕು ನಮ್ಮದಾಗಬೇಕು. ವೀರಶೈವಧರ್ಮದಲ್ಲಿ ಲಿಂಗದೀಕ್ಷೆಯನ್ನು ಪಡೆದ ವ್ಯಕ್ತಿ ತನ್ನ ಅಂಗಗುಣಗಳನ್ನು ತ್ಯಜಿಸಿ ಲಿಂಗಗುಣಗಳನ್ನು ಅಳವಡಿಸಿಕೊಳ್ಳಬೇಕಾಗಿರುತ್ತದೆ. ಅವನು ದೇಹವನ್ನು ಕಳಚುವುದರೊಳಗೆ  "ಸರ್ವಾಂಗಲಿಂಗಿ"ಯಾಗಬೇಕು. ಅಂಗ ಲಿಂಗವಾಗಬೇಕು. ಆದ್ದರಿಂದಲೇ ಲಿಂಗವಂತನು ದೇಹ ತೊರೆದಾಗ ಆ ದೇಹಕ್ಕೆ "ಪಾರ್ಥಿವಶರೀರ"ಎಂದು ಕರೆಯುವುದಿಲ್ಲ; "ಲಿಂಗಶರೀರ"ಎಂದು ಕರೆಯುತ್ತಾರೆ. ಇಂತಹ ಲಿಂಗಶರೀರವನ್ನು ಮನೆಯಿಂದ ರುದ್ರಭೂಮಿಗೆ ಒಯ್ಯುವಾಗ  ಯಜಮಾನನು ಲಿಂಗವಂತರಾದ ನಾಲ್ಕು ಜನರನ್ನು ಕರೆದು, ಅವರಿಗೆ ವೃಷಭೇಶ್ವರನ ನಾಲ್ಕು ಹೆಸರುಗಳಿಂದ ಅರ್ಥಾತ್ ಮಹೋಕ್ಷ- ವೃಷಭ- ನಂದೀ-ನಂದಿಕೇಶ್ವರ ಎಂಬ  ಹೆಸರುಗಳಿಂದ ವರಿಸಿ, ವಿಭೂತಿವೀಳ್ಯ, ವಸ್ತ್ರಗಳನ್ನು ಕೊಟ್ಟು "ಲಿಂಗಶರೀರವನ್ನು ಹೊರಲು ಮತ್ತು ಗರ್ತವನ್ನು ಅಗಿಯಲು" ಪ್ರಾರ್ಥಿಸುವನು. ಯಜಮಾನನ ಪ್ರಾರ್ಥನೆಯಂತೆ ವೃಷಭಸ್ವರೂಪರಾದ ಆ ನಾಲ್ಕು ಜನರು "ವೃಷಭನು ಶಿವನನ್ನು ಹೊತ್ತುಕೊಂಡು ಹೋಗುವಂತೆ" ಲಿಂಗಶರೀರವನ್ನು ರುದ್ರಭೂಮಿಗೆ ಒಯ್ಯುತ್ತಾರೆ.

No comments:

Post a Comment

If you have any doubts. please let me know...