December 21, 2025

ಬದುಕಿನಲ್ಲಿ ಬಾಗುವುದನ್ನು ಕಲಿ

    ತಾಮ್ರದ ಕೊಡ ಬಾವಿಯಲ್ಲಿ ಇಳಿದಾಗ ಬಾಗಿ ತನ್ನೊಳಗೆ ಪೂರ್ಣ ನೀರು ತುಂಬಿಕೊಂಡು ಮೇಲೆ ಬರುತ್ತದೆ. ಆದರೆ ಪ್ಲಾಸ್ಟಿಕ್  ಕೊಡ ಹಾಗಲ್ಲ ನೀರು ತುಂಬಿಸಲು ಪ್ರಯಾಸ ಪಡಬೇಕು. ತುಂಬಿದರೂ ಚೂರು ಕಡಿಮೆಯಾಗಿಯೇ ಮೇಲೆ ಬರುತ್ತದೆ. ಯಾವುದು ಬಾಗುತ್ತದೆಯೋ, ಅದು ಪೂರ್ಣ ತುಂಬಿಕೊಳ್ಳುತ್ತದೆ. ಯಾವುದು ಬಾಗುವದಿಲ್ಲವೊ ಅದು ಅಪೂರ್ಣವೇ. ಇದೇ ಬದುಕಿನ ಸತ್ಯವೂ ಕೂಡ. 
    ನೈವೇದ್ಯಕ್ಕೆ ನಾವು ಭತ್ತದ ಅಕ್ಕಿಯ ಅನ್ನವನ್ನೇ ಶ್ರೇಷ್ಠವೆನ್ನುತ್ತೇವೆ. ಜೋಳದ ರೊಟ್ಟಿ  ನೈವೇದ್ಯ ಮಾಡುವದಿಲ್ಲ. ಕಾರಣ..ಭತ್ತದ ತೆನೆಗಳು ತನಗೆ ಜನ್ಮನೀಡಿದ ಭೂತಾಯಿಗೆ ತಲೆಬಾಗಿಸುತ್ತದೆ. ಆದರೆ ಜೋಳದ ತೆನೆ ಕಾಳು ತುಂಬಿಕೊಂಡರೂ ಸಹ ಯಾವ ಕಾರಣಕ್ಕೂ ಭೂಮಿಗೆ ತಲೆ ಬಗ್ಗಿಸದೇ ಆಕಾಶ ನೋಡುತ್ತ ನಿಲ್ಲುತ್ತವೆ.ಇದರರ್ಥ ಇಷ್ಟೇ .. ಸಂಸ್ಕೃತಿಗೆ, ಸಂಪ್ರದಾಯಕ್ಕೆ, ಗುರುಹಿರಿಯರಿಗೆ, ಆ ಭಗವಂತನಿಗೆ, ಭೂ ತಾಯಿಗೆ, ದೇಶಕ್ಕೆ ಹಾಗೂ ಹಲವು ಪೂಜ್ಯರಿಗೆ ತಲೆಬಾಗುವದನ್ನು ನಾವು ಕಲಿಯಬೇಕು. ಆಗಲೇ ಮನುಷ್ಯನ ವ್ಯಕ್ತಿತ್ವ ಬೆಳೆಯುವದು. ಅಹಂಕಾರ ಅಧಿಕಾರ ಶಾಶ್ವತವಲ್ಲ... ನಾನು ಎಂಬ ಗರ್ವ ತನ್ನೊಡಲನ್ನೇ  ಸುಡುತ್ತದೆ. ಕೋಪ, ಅಪಹಾಸ್ಯ ಅವಮಾನ, ದರ್ಪ, ಹಾಗೂ ಭ್ರಷ್ಠತೆ ಮನುಷ್ಯನ ಸರ್ವನಾಶಕ್ಕೆ ಕಾರಣ  ಎಲ್ಲವನ್ನೂ ನೋಡುತ್ತಿರುವ ಆ ಭಗವಂತ ಅಲ್ಲಿ ಕುಳಿತು ನಮ್ಮಾಟವ ನೋಡುತ್ತಿರುತ್ತಾನೆ... ಇದು ಅವನ ಮೈದಾನ ನಾವಿಲ್ಲಿ ಆಟಗಾರರಷ್ಟೇ. ಎಂಬ ಸತ್ಯದ ಅರಿವಾಗಬೇಕು.
    ಜಾಸ್ತಿ ಓದಿದಿನಿ ಎನ್ನುವ ಗರ್ವ ಬೇಡ.  ಓದಲು ಸಾಗರದಷ್ಟಿದೆ ಇನ್ನೂ, ನಾನೆಲ್ಲವನ್ನೂ ಬರೆಯುತ್ತೇನೆ.  ಎನ್ನುವ ಅಹಂ ಬೇಡ. ದಿನಕ್ಕೆ ಸಾವಿರಾರು ಪುಸ್ತಕಗಳು ಮುದ್ರಣವಾಗುತ್ತಲೇ ಇವೆ. ಎಲ್ಲ ಬಲ್ಲವರಿಲ್ಲ,ಬಲ್ಲವರು ಬಹಳಿಲ್ಲ,  ಮಗುವಿನಿಂದ ಗುರು ಹಿರಿಯರವರೆಗೂ ನಾವಿನ್ನೂ ಕಲಿಯುವದು ತುಂಬ ಇದೆ ಇಷ್ಟೇ ಮುಗಿಯಿತು ರಾತ್ರಿಯಾಯ್ತು ಅಂತ ತಿಳಿದರೆ ಇನ್ನೆಲ್ಲೋ ಬೆಳಕಿನ ಆರಂಭವಾಗಿರುತ್ತದೆ. ನೀ ಸಾಗುವ ಪಥ ಹೊಸ ಹೊಸ ಪಾಠಗಳನ್ನು ಕಲಿಸುತ್ತ ಅನುಭವಗಳನ್ನು ನೀಡುತ್ತಾ ಸಾಗುತ್ತದೆ. ಕೆಡಕನ್ನು ಒಳಿತನ್ನು ಆಯ್ಕೆ ಮಾಡಿಕೊಳ್ಳುವದು ನಿನಗೆ ಬಿಟ್ಟಿದ್ದು. ಏಕೆಂದರೆ, ಪ್ರತಿಯೊಂದಕ್ಕೂ ಫಲಾಫಲ ನಮಗಿದೆ.  ಆದ್ದರಿಂದ ಹೀಗಾಗಿ ಯೋಚಿಸಿ ನಡೆಯಬೇಕು.  ಆಲೋಚಿಸಿ ನುಡಿಯಬೇಕು.
    ಗುರು ಕಲಿಸಿದ ವಿದ್ಯೆ.. ತಾಯಿ ನೀಡಿದ ಮಮತೆ.. ತಂದೆ ಹೇಳಿದ ಸಲಹೆ.. ಕಿರಿಯರು ನೀಡಿದ ಪ್ರೀತಿ..  ರೈತ ಕೊಟ್ಟ ಅನ್ನ..ಯೋಧ ನೀಡಿದ ರಕ್ಷಣೆ ..ನಿನ್ನ ಹೊತ್ತ ಭೂಮಿತಾಯಿ ..ನಿನಗೆ ಭಾಷೆ ಸಂಸ್ಕೃತಿ ಕಲಿಸಿದ ನಾಡು, ದೇಶ ಕಷ್ಟಕಾಲದಲ್ಲಿ ಜೊತೆಯಾದ ಸ್ನೇಹ ಬಾಂದವ್ಯಗಳನ್ನು  ಎಂದಿಗೂ ಮರೆಯದಿರು. ಬದುಕಿನಲ್ಲಿ ಬಾಗುವದನ್ನು ಕಲಿ ಬದುಕುವದನ್ನು ಕಲಿ. 

ವಾಟ್ಸಪನಲ್ಲಿ ಬಂದಿದ್ದು. ಇದನ್ನು ಬರೆದವರಿಗೆ ಧನ್ಯವಾದಗಳು

No comments:

Post a Comment

If you have any doubts. please let me know...