April 27, 2025

ಅಕ್ಷಯ ತೃತೀಯ

    ಸಾಮಾನ್ಯವಾಗಿ ತೃತೀಯ ತಿಥಿ ವಿಶೇಷವಾಗಿ ಮಹಾ ಗೌರಿಗೆ ಸಂಬಂಧಪಟ್ಟಂತಹುದು ಹಾಗು ಆರ್ದ್ರಾ ನಂದಕರಿ ಎಂಬ ಮತ್ತೊಂದು ಹೆಸರಿನಿಂದ ಉಮಾ ಮಹೇಶ್ವರರನ್ನು ಪೂಜಿಸುವ ದಿನ. ಉಮಾಮಹೇಶ್ವರರನ್ನು ಪಾದಾದಿ ಕೇಶಾಂತ್ಯವಾಗಿ ಶುಕ್ಲಪಕ್ಷದ ತೃತೀಯದಲ್ಲಿ ಪ್ರಾರಂಭಿಸಿ ವರ್ಷಾಂತ್ಯದವರೆಗೆ ಪೂಜೆ ಮಾಡುತ್ತಾ ನಾಲ್ಕು ತಿಂಗಳು ಅನ್ನೋದಕ, ಮತ್ತೆ ನಾಲ್ಕು ತಿಂಗಳು ಹುರಿಟ್ಟಿನ ಪದಾರ್ಥ, ಮತ್ತೆ ನಾಲ್ಕು ತಿಂಗಳು ಎಳ್ಳನ್ನು ದಾನ ಕೊಡುವುದು. ಹನ್ನೆರಡು ತಿಂಗಳು ಈ ವ್ರತವನ್ನು ಮಾಡಿದ ನಂತರ ಗಂಧೋದಕ, ಪುಷ್ಪೋದಕ, ಶ್ರೀಗಂಧ, ಕೇಸರಿ ತೀರ್ಥ, ಹಸಿಯ ಹಾಲಿನ ಮೊಸರು, ಹಾಲು, ಗೋ ಶೃಂಗತೀರ್ಥ, ಹಿಟ್ಟು ಕಲಿಸಿದ ನೀರು, ಚಂಗಲಕೋಷ್ಟ ಚೂರ್ಣದ ನೀರು, ಲಾವಂಚದ ನೀರು, ಇವುಗಳನ್ನು ಪ್ರತಿ ತಿಂಗಳಿನ ಎರಡು ಪಕ್ಷದ ತೃತೀಯದಲ್ಲಿ ಸೇವಿಸಿ ವ್ರತ ಮಾಡುವುದು. ಸಂವತ್ಸರದ ಕೊನೆಯಲ್ಲಿ ಉಪ್ಪು, ಬೆಲ್ಲ ತುಂಬಿದ ಪಾತ್ರೆ, ಜೇನುತುಪ್ಪ, ಶ್ರೀಗಂಧ, ನವಿರಾದ ಪಂಚೆ, ಚಿನ್ನದ ತಾವರೆಯ ಇವೆಲ್ಲವನ್ನು ಉಮಾಮಹೇಶ್ವರ ಚಿನ್ನದ ಪ್ರತಿಮೆಯೊಂದಿಗೆ ಕಬ್ಬು ಮತ್ತು ಹಣ್ಣುಗಳ ಸಮೇತ ದಾನ ಮಾಡಬೇಕು.
    ಮತ್ತೊಂದು ಪುರಾಣದಲ್ಲಿ ಮಹಾಗೌರಿ ಪ್ರೀತ್ಯರ್ಥವಾಗಿ ತೃತೀಯ ತಿಥಿಯಲ್ಲಿ ವ್ರತವನ್ನು ಮಾಡಿ ಉಪ್ಪು ಹಾಕದ ಪದಾರ್ಥವನ್ನು ಆಹಾರವಾಗಿ ಸ್ವೀಕಾರ ಮಾಡುವುದು. ಜೀವನ ಪರ್ಯಂತ ಈ ವ್ರತ ಮಾಡಿದವರಿಗೆ ಮಹಾಗೌರಿಯು ಸೌಂದರ್ಯ, ಸೌಭಾಗ್ಯ, ಲಾವಣ್ಯ ಎಲ್ಲವನ್ನೂ ಕೊಡುತ್ತಾಳೆ. ವ್ರತದ ನಂತರ ಉಪ್ಪು ಹಾಕದ ಆಹಾರವನ್ನು ತೆಗೆದುಕೊಳ್ಳುವ ಪುರುಷರಿಗೆ ಮನೋಹರಿಯಾದ ಸ್ತ್ರೀಯು, ಸ್ತ್ರೀಗೆ ಮನೋಹರನಾದ ಪುರುಷ ಲಭಿಸಿ, ಮನುಷ್ಯರಿಗೆ ಸೌಭಾಗ್ಯವನ್ನುಂಟು ಮಾಡುವುದು. ಯುವತಿಯರಿಗೆ ಶೀಘ್ರ ವಿವಾಹ ಆಗುವುದು. ಸುವರ್ಣಮಯವಾದ ಗೌರಿ ಪ್ರತಿಮೆ ಇಟ್ಟುಕೊಂಡು ವಸ್ತ್ರಾಭರಣಗಳು, ಗಂಧಪುಷ್ಪಾದಿಗಳು, ಮಂಗಳ ದ್ರವ್ಯಗಳಿಂದ, ಪುಷ್ಪ ಮಾಲೆಗಳಿಂದ ಅಲಂಕರಿಸಿ ಪೂಜಿಸಿ ಉಪ್ಪು, ಬೆಲ್ಲ, ತುಪ್ಪ, ಎಣ್ಣೆ, ಇವುಗಳನ್ನು ಶಕ್ತಾನುಸಾರ ಕಲ್ಲುಸಕ್ಕರೆ, ಜೀರಿಕಾರಸ, ಸೊಪ್ಪಿನ ಪಲ್ಯಗಳು, ಬೆಲ್ಲ ಸೇರಿಸಿ ಅರೆದು ಬೇಯಿಸಿದ ಭಕ್ಷ್ಯ, ಹೋಳಿಗೆ, ಕರಿಗಡುಬು ಮುಂತಾದವುಗಳನ್ನು ಪೂಜ್ಯರಿಗೆ ದಾನ ಮಾಡಬೇಕು. ದಾನ ಕೊಡುವ ವಸ್ತುಗಳಲ್ಲದೆ, ಸುವರ್ಣ ಗೌರಿ ಪ್ರತಿಮೆಯನ್ನು ಪೂಜ್ಯರಿಗೆ ದಾನ ಮಾಡಬೇಕು.ಶಕ್ತಿ ಇಲ್ಲದಿದ್ದವರು ಬೆಲ್ಲದ ಅಚ್ಚಿನ ಮೇಲೆ ಅರಿಷಿಣ ಗೌರಿಯನ್ನು ಇಟ್ಟು ದಾನ ಮಾಡಬೇಕು. ಬೆಲ್ಲದ ಅಚ್ಚಿನಲ್ಲಿ ಯಾವಾಗಲೂ ಗೌರಿಯ ಸಾನ್ನಿಧ್ಯ ಇರುವುದರಿಂದ ಅದರಲ್ಲಿ ಆಕೆಯನ್ನು ಪೂಜಿಸಬೇಕು.ಹೀಗೆಯೇ ತೃತೀಯ ವ್ರತವನ್ನು ಮಾಡಿದ ಕನ್ಯೆಗೆ ಉತ್ತಮ ವರ ದೊರಕುತ್ತಾನೆ. ಸ್ತ್ರೀಗೆ ಪತಿ, ಪುತ್ರ ಸೌಖ್ಯ ದೊರೆಯುತ್ತದೆ. ವ್ರತ ಮಾಡಿದಂಥ ಸ್ತ್ರೀಯು ಪ್ರಾರಬ್ಧ ಕರ್ಮದಿಂದ ಒಂದು ವೇಳೆ ವಿಧವೆಯಾದರೂ ಮುಂದಿನ ಜನ್ಮದಲ್ಲಿ ಸಿಗುವ ಪತಿಯೂ ಚಿರಾಯುವಾಗುತ್ತಾನೆಂಬ ಉಲ್ಲೇಖಗಳಿವೆ.
    ವೈಶಾಖ ಮಾಸದಲ್ಲಿ ಬರುವ ಶುಕ್ಲ ತದಿಗೆ(ತೃತೀಯ) ವಿಶೇಷ ಪುಣ್ಯ ಕರವಾದ ಅಕ್ಷಯ ತೃತೀಯ. ಭಾದ್ರಪದ ಶುದ್ಧ ತದಿಗೆ(ತೃತೀಯ) ಸ್ವರ್ಣಗೌರೀವ್ರತ, ಮಾಘಶುದ್ಧ ತೃತೀಯದಲ್ಲಿ ಮೌನಗೌರಿ ವ್ರತ. ಒಟ್ಟಾರೆ ತದಿಗೆ(ತೃತೀಯ) ತಿಥಿ ಮಹಾಗೌರಿಗೆ ಸಂಬಂಧಿಸಿದ್ದಾಗಿದೆ. ಮಾಘಮಾಸ ತೃತೀಯದಲ್ಲಿ ಬೆಲ್ಲ ದಾನ, ಉಪ್ಪು ದಾನ ಮಾಡಿದ ಸ್ತ್ರೀ ಪುರುಷರಿಗೆ ಸಕಲ ಇಷ್ಟಾರ್ಥಗಳು ಲಭಿಸುವುವು. ಬೆಲ್ಲ ದಾನದಿಂದ ದತ್ತಾತ್ರೇಯನು, ಉಪ್ಪು ದಾನದಿಂದ ಸೃಷ್ಟಿಕರ್ತನು ಸುಪ್ರೀತರಾಗುವರು. ಭಾದ್ರಪದ ಮಾಸದಲ್ಲಿ ಬೆಲ್ಲ ಹಾಕಿ ಮಾಡಿದ ಒಬ್ಬಟ್ಟು ಮುಂತಾದ ಭಕ್ಷ್ಯಗಳನ್ನು ದಾನ ಮಾಡಬೇಕು. ಮಾಘಶುದ್ಧ ತೃತೀಯದಲ್ಲಿ ವಾಮದೇವ ಪ್ರೀತಿಗಾಗಿ ಉದಕುಂಭ, ಮೋದಕ ದಾನಕ್ಕೆ ಪ್ರಶಸ್ತವು. ವೈಶಾಖ ಶುದ್ಧ ತೃತೀಯಾ ಅಂದರೆ ಅಕ್ಷಯ ತೃತೀಯದಲ್ಲಿ ಗಂಧೋದಕ ದಾನ ಮಾಡುವುದರಿಂದ ಬ್ರಹ್ಮ ಸುಪ್ರೀತನಾಗುವನು, ಮೋದಕ ದಾನದಿಂದ ಶಿವ ತೃಪ್ತನಾಗುವನು, ನೀರಿನಿಂದಲೂ, ಕಾಳಿನಿಂದ ಕೂಡಿದ ಕರಗವೆಂಬ ಪಾತ್ರೆ ದಾನದಿಂದ ವಿಷ್ಣು ತೃಪ್ತಿಯಾಗುವನು.
        ವೈಶಾಖ ಶುದ್ಧ ತೃತೀಯ (ಅಕ್ಷಯ ತೃತೀಯ)ದಂದು ಸ್ವಲ್ಪ ದಾನ ಮಾಡಿದರೂ ಅಕ್ಷಯವಾಗುವುದರಿಂದ, ಇದಕ್ಕೆ ಅಕ್ಷಯ ತೃತೀಯವೆಂದು ಹೆಸರು ಬಂತು. ಅಕ್ಷಯ ತೃತೀಯದಂದು ಮಹಾ ಗೌರಿಯನ್ನು ಪೂಜಿಸಿ ಚಿನ್ನ, ತುಪ್ಪ, ಅನ್ನ ಹಾಗೂ ಮೇಲೆ ತಿಳಿಸಿದ ಪದಾರ್ಥಗಳನ್ನು ದಾನ ಮಾಡಬೇಕು. ಹೀಗೆ ಅನೇಕ ಉಲ್ಲೇಖಗಳನ್ನು ನೋಡಿದಾಗ ದಾನ ಪದಾರ್ಥಗಳೊಂದಿಗೆ ಚಿನ್ನದಗೌರಿ ಅಥವಾ ಚಿನ್ನ ದಾನದಿಂದ ಪುಣ್ಯಫಲ ಅಕ್ಷಯವಾಗುವುದೆಂದು ಉಲ್ಲೇಖವಿದೆ. ವ್ರತ ಸಂದರ್ಭದಲ್ಲಿ ಅನೇಕ ಪದಾರ್ಥಗಳು ಹಾಗು ಚಿನ್ನದಾನ ಕೊಡುವುದು ದುಬಾರಿಯಾದ ಕಾರಣ ಈ ವ್ರತವನ್ನು ಭೂಮಿಯಲ್ಲಿ ಭೂರಿಚಂದ್ರನೆಂಬ ಸಿರಿವಂತನು ಮೊದಲು ಆರಂಭಿಸಿದನು. ಸಾಮಾನ್ಯರು ಅವರವರ ಶಕ್ತ್ಯಾನುಸಾರ ವ್ರತ ಮಾಡಿ ಕೈಲಾದ ದಾನ ಮಾಡುತ್ತಿದ್ದರು. ಶಕ್ತಿ ಇದ್ದವರು ಚಿನ್ನದಾನ ಕೊಡುತ್ತಿದ್ದರು. ಒಟ್ಟಾರೆ ಅಕ್ಷಯ ತೃತೀಯದಂದು ದಾನ ಮಾಡಿದರೆ ಅದರ ಫಲ ಅಕ್ಷಯ ವಾಗುವುದೆಂಬ ಉಲ್ಲೇಖಗಳನ್ನು ನೋಡಬಹುದು. ಹಾಗಾಗಿ ಅಕ್ಷಯ ತೃತೀಯದಂದು ಶಕ್ತಿ ಇದ್ದವರು ವ್ರತಮಾಡಿ ಚಿನ್ನ ಇನ್ನಿತರ ವಸ್ತುಗಳನ್ನು ದಾನ ಕೊಡುವುದು ಫಲಪ್ರದಾಗಿದೆ. ಆದರೆ ಕೆಲವೊಬ್ಬರು ಹೇಳುವಂತೆ ಶಕ್ತಿ ಇರಲಿ ಇಲ್ಲದಿರಲಿ ಸಾಲ ಮಾಡಿಯಾದರೂ ಚಿನ್ನ ಕೊಂಡುಕೊಳ್ಳಲು ಶುಭ ದಿನವೆಂದು ಉಲ್ಲೇಖವಿದ್ದಂತೆ ಕಾಣುವುದಿಲ್ಲ .
        (ಅಕ್ಷಯ ತೃತೀಯ ವಿಶೇಷತೆ ಬಗ್ಗೆ ಸಾಕಷ್ಟು ಉಲ್ಲೇಖಗಳು, ಕಥೆಗಳು ಇದ್ದಾಗ್ಯೂ ಲೇಖನ ವಿಸ್ತಾರ ಭಯದಿಂದ ಕೆಲವು ಅಂಶಗಳನ್ನು ಮಾತ್ರ ಹಂಚಿಕೊಳ್ಳಲಾಗಿದೆ.)
ಅಕ್ಷಯ ತೃತೀಯ ತಿಥಿಯು ಮೂರೂವರೆ ಮಹಾ ಮುಹೂರ್ತಗಳಲ್ಲಿ ಒಂದಾಗಿದ್ದು, ಅಂದು ಸರ್ವ ಕಾರ್ಯಗಳಿಗೂ ಅತ್ಯಂತ ಶುಭಕರವಾದ ದಿನವಾಗಿದೆ.
- 🖋 ಎಡತೊರೆ ಶ್ರೀ ಗಣೇಶ ಶಾಸ್ತ್ರಿಗಳು.ಕೆ.ಆರ್.ನಗರ

ದೇವರಿಗೆ ದೀಪ ಯಾಕೆ ಇಡಬೇಕು?

        ನಾವು ಪ್ರತಿ ದಿನ ನಿತ್ಯ ದೇವರಿಗೆ ದೀಪ ಇಟ್ಟು, ಭಕ್ತಿಯಿಂದ ದೇವರಿಗೆ ಕೈ ಮುಗಿಯುತ್ತೇವೆ. ನಮ್ಮನ್ನು ಕುತೂಹಲದಿಂದ ನೋಡಿ ಕಲಿಯುವ ಮಕ್ಕಳು' ನಾವು ದೇವರಿಗೆ ದೀಪ ಯಾಕೆ ಇಡಬೇಕು?' ಅದೊಂದು ದಿನ ನಮ್ಮನ್ನು ಕೇಳಿಯೇ ಬಿಡುತ್ತವೆ. ನೀವು ತಬ್ಬಿಬ್ಬುಗೊಳ್ಳುತ್ತಿರಿ. 'ಇದು ನಮ್ಮ ಸಂಪ್ರದಾಯ ಮಗು, ಅಜ್ಜ ಇಡುತ್ತಿದ್ದರು ಆದನಂತರ ಅಪ್ಪ ಇಡುತ್ತಿದ್ದರು ಈಗ ನಾನು ಮುಂದೆ ನೀನು' ಎನ್ನುತ್ತಾ ಮಗುವನ್ನು ಸಮಾಧಾನ ಪಡಿಸುತ್ತಿರಿ. ಮಗು ಸತ್ಯ ಎನ್ನುತ್ತಾ ನಂಬಿ ಬಿಡುತ್ತದೆ!!. ಆದರೆ ಸತ್ಯ ಅದಲ್ಲ. ನೀವೂ ತಿಳಿದುಕೊಳ್ಳಿ ಮತ್ತು ನಿಮ್ಮವರೊಂದಿಗೂ ಹಂಚಿಕೊಳ್ಳಿ ದೀಪ ಅನ್ನುವುದು ಬರೀ ಬೆಳಕಿಗಾಗಿ ಇಡುವುದಲ್ಲ. ಬದಲಿಗೆ ನಿಮ್ಮ ಪ್ರಾರ್ಥನೆ ಮತ್ತು ಹರಕೆಗಳನ್ನು ದೇವರಿಗೆ ತಲುಪಿಸುವ ವಾಹಕ. ದೀಪ ಅನ್ನುವುದು ಅಗ್ನಿಯಿಂದ ಪ್ರಜ್ವಲಿತವಾಗಿದೆ.                 ನಾವು ಮಾಡುವ ಯಾಗದ ಹವಿಸ್ಸನ್ನು ಹೇಗೆ ಅಗ್ನಿಯು ಆಯಾ ದೇವತೆಗಳಿಗೆ ಕೊಂಡೊಯ್ದು ಒಪ್ಪಿಸುತ್ತದೋ ಅದೇ ತೆರನಾಗಿ ದೀಪವೂ ನಿಮ್ಮ ಪ್ರಾರ್ಥನೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುವ ಸಾಧನವಾಗಿದೆ. ನೀವು ಯಾವ ದೇವರನ್ನು ಪ್ರಾರ್ಥನೆ ಮಾಡುತ್ತಿರೋ ಆ ಪ್ರಾರ್ಥನೆ ನಿಮ್ಮ ಆ ದೇವರ ಬಳಿ ತಲುಪಲು ದೀಪ ಒಂದು ಮಾಧ್ಯಮ. ದೀಪವಿಲ್ಲದೆ ನಿಮ್ಮ ಪ್ರಾರ್ಥನೆ ತಲುಪಬೇಕಾದ ಜಾಗವನ್ನು ತಲುಪುವುದಿಲ್ಲ. ಹಿಂದೊಮ್ಮೆ ನಾವು ಪ್ರಾರ್ಥನೆ ಮಾಡುವಾಗ ದೀಪ ನಂದಿ ಹೋದರೆ ಅಪಶಕುನ ಅನ್ನುತ್ತಿದ್ದರು. ಯಾಕೆಂದರೆ ನಿಮ್ಮ ಪ್ರಾರ್ಥನೆ ಭಗವಂತನನ್ನು ತಲುಪಲಿಲ್ಲ ಅನ್ನುವುದೇ ಅದರ ತಾತ್ಪರ್ಯ. ಆತ್ಮ ಮತ್ತು ಪರಮಾತ್ಮನ ಮಧ್ಯೆ ಸಂಬಂಧ ಸೇತುವೆ ಒಂದು ಪುಟ್ಟ ದೀಪವಾಗಬಲ್ಲುದು. ನೀವು ನಿತ್ಯ ಮನೆಯಲ್ಲಿ ದೇವರಿಗೆ ಅಥವಾ ಧೈವಗಳಿಗೆ ಕೈ ಮುಗಿಯುವಾಗ ಪುಟ್ಟ ದೀಪವೊಂದನ್ನು ಪ್ರಜ್ವಲಿಸುವ ಪರಿಪಾಟವನ್ನು ಇಟ್ಟುಕೊಳ್ಳಿ. ನಿಮ್ಮ ಪ್ರತಿ ಪ್ರಾರ್ಥನೆ ಮುಟ್ಟಬೇಕಾದ ಜಾಗವನ್ನು ತಟ್ಟುತ್ತದೆ. ಪ್ರಾರ್ಥನೆಗಳು ಫಲಿಸುತ್ತವೆ. ದೇವರ ಮತ್ತು ನಿಮ್ಮ ಸಂಬಂಧಗಳು ಹತ್ತಿರ ಮತ್ತು ಗಟ್ಟಿಯಾಗುತ್ತದೆ. ಕಾರಣಿಕಗಳು ಮಾತಾಡುತ್ತವೆ‌. 
        ಇನ್ನು ಮಕ್ಕಳ ಜನ್ಮ ದಿನಾಚರಣೆಯ ಸಮಯದಲ್ಲಿ ಕ್ಯಾಂಡಲ್ ನಂದಿಸುವುದಕ್ಕಿಂತ ದೀಪ ಪ್ರಜ್ವಲಿಸುವುದು ತುಂಬಾ ಸೂಕ್ತವಾದ ಆಚಾರವಾಗಿದೆ. ಉರಿಯುತ್ತಿರುವ ಪುಟ್ಟ ದೀಪ ನಿಮ್ಮ ಬಂಧುಗಳ ಹಾರೈಕೆಯನ್ನು ಭಗವಂತನ ಬಳಿಗೆ ಕೊಂಡೊಯ್ಯುತ್ತದೆ. ಯಾರಾದರೂ ಕೆಟ್ಟ ಹಾರೈಕೆಯನ್ನು ಮಾಡಿದರೆ ಅವನ್ನು ಅಲ್ಲೇ ಸುಟ್ಟು ಒಳ್ಳೆಯ ಹಾರೈಕೆಗಳನ್ನು ಮಾತ್ರ ದೇವರ ಪಾದತಳದಲ್ಲಿಡುವ ಗುಣ ಒಂದು ಪುಟ್ಟ ಹಣತೆಗಿದೆ.

April 24, 2025

ಮನುಷ್ಯನ ತಲೆ ಬುರುಡೆ

ದಿನಕ್ಕೊಂದು ಕಥೆ
ಹಳ್ಳಿಯೊಂದಕ್ಕೆ  ಬೌದ್ಧ ಭಿಕ್ಷುಗಳೊಭ್ಬರು  ಬಂದಿದ್ದರು. ಸಾಮ್ರಾಟ ಅಶೋಕ  ಅವರಲ್ಲಿಗೆ ಹೋಗಿ ಭಿಕ್ಷುಗಳ ಚರಣಕ್ಕೆ ಎರಗಿದ.  ಇದು ಅಶೋಕನ ಮಂತ್ರಿಯೊಬ್ಬನಿಗೆ   ಇಷ್ಟವಾಗಲಿಲ್ಲ. ಅಶೋಕನಂತಹ ಮಹಾ ಸಾಮ್ರಾಟ ಹಳ್ಳಿಯಲ್ಲಿ ಭಿಕ್ಷೆ ಬೇಡುತ್ತಿರುವ ಭಿಕ್ಷುವಿನ ಪಾದಕ್ಕೆ ನಮಿಸುವುದು ಎಂದರೇನು? ಎಂದು ಅವನ ಭಾವನೆ. 
ಅರಮನೆಗೆ ಹಿಂತಿರುಗುತ್ತಿದ್ದಂತೆಯೇ, ಅವನು ಸಾಮ್ರಾಟನಿಗೆ ನೀವು ಮಾಡಿದ್ದು ನನಗೆ ಸ್ವಲ್ಪವೂ ಸರಿ ಎನಿಸಲಿಲ್ಲ. ನಿಮ್ಮಂತಹ ದೊಡ್ಡ ಸಾಮ್ರಾಟ, ಹೋಗಿ ,ಹೋಗಿ ಅಂತಹ ಒಬ್ಬ ಸಾಧಾರಣ ಭಿಕಾರಿಯ ಚರಣಕ್ಕೆ ವಂದಿಸುವುದು ಎಂದರೆ, ಇದು ನನಗೆ ಸ್ವಲ್ಪ  ಕೂಡಾ ಸರಿ ಕಾಣಲಿಲ್ಲ, ಎಂದು ಹೇಳಿದ. ಆಗ ಅಶೋಕ ಏನೂ ಮಾತನಾಡದೇ ನಕ್ಕು ಸುಮ್ಮನಾದ. 

     ಸ್ವಲ್ಪ ದಿನಗಳ ನಂತರ ಸಾಮ್ರಾಟ ಅಶೋಕ, ಆ ಮಂತ್ರಿಯನ್ನು ಕರೆದು, ನಾನೊಂದು ಪ್ರಯೋಗವನ್ನು ಮಾಡಬೇಕಿದೆ. , ನಾನು  ಕೊಡುವ ಈ ಸಾಮಾನುಗಳನ್ನು ನೀನು ತೆಗೆದುಕೊಂಡು ಹೋಗಿ ಮಾರುಕಟ್ಟೆಯಲ್ಲಿ ಮಾರಿಕೊಂಡು ಬರಬೇಕು, ಎಂದು ಹೇಳಿದ. ಆ ಸಾಮಾನುಗಳೆಂದರೆ, ಒಂದು ಕುರಿಯ ತಲೆ, ಒಂದು  ಹಸುವಿನ ತಲೆ, ಇನ್ನೊಂದು ಮನುಷ್ಯನ ತಲೆ, ಇತರ ಅನೇಕ ಪ್ರಾಣಿಗಳ  ತಲೆಗಳಿದ್ದವು. ಇವುಗಳನ್ನು ಮಾರುಕಟ್ಟೆಯಲ್ಲಿ ಮಾರಿಕೊಂಡು ಬಾ ಎಂದು ಹೇಳಿದ ಅಶೋಕ.
  ‌ ಈ   ಸಾಮ್ರಾಟರು ಏನು ಮಾಡಲು  ಹೊರಟಿದ್ದಾರೆ? ಎಂದು ಯೋಚಿಸುತ್ತಾ ಮಂತ್ರಿ, ಅವುಗಳನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋದ. ಹಸುವಿನ ತಲೆ , ಕುದುರೆಯ ತಲೆ, ವಿವಿಧ ಪ್ರಾಣಿಗಳ ತಲೆಗಳೆಲ್ಲವೂ ಬೇಗ  ಮಾರಾಟವಾದವು. ಆದರೆ ಮನುಷ್ಯನ ತಲೆ ಮಾತ್ರ ಮರಾಟವಾಗಲಿಲ್ಲ,ಯಾರೂ ಅದನ್ನು  ಕೊಂಡುಕೊಳ್ಳಲ್ಲಿಲ್ಲ.ಅದರ ಹತ್ತಿರವೂ  ಸುಳಿಯಲಿಲ್ಲ . ಅದೊಂದನ್ನು ವಾಪಾಸು ತೆಗೆದುಕೊಂಡು ಸಾಮ್ರಾಟರ  ಬಳಿಗೆ ಬಂದ ಮಂತ್ರಿ.

    ಆಗ ಸಾಮ್ರಾಟ , ಹೋಗಲಿ ಅದನ್ನು ಉಚಿತವಾಗಿ ಯಾರಿಗಾದರೂ ಕೊಟ್ಟು ಬಾ, ಎಂದು ಮಂತ್ರಿಗೆ ಹೇಳಿದ.
ಮಂತ್ರಿ ಪುನಃ ಹಿಂತುರುಗಿ  ಮಾರುಕಟ್ಟೆಗೆ ಹೋಗಿ , ಇದನ್ನು ಪುಕ್ಕಟೆಯಾಗಿ ಕೊಡುತ್ತಿದ್ದೇನೆ, ಯಾರು ಬೇಕಾದರೂ ತೆಗೆದುಕೊಳ್ಳಿ ಎಂದು  ಹೇಳಿದ. 
  ಆಗ ಜನರು , ಕೋಪದಿಂದ ನಿಮಗೇನು ತಲೆಕೆಟ್ಟಿದೆಯೇ? ಈ ಅನಿಷ್ಟವನ್ನು ಯಾರು ಇಟ್ಟು ಕೊಳ್ಳುತ್ತಾರೆ? ಇದನ್ನು ಯಾರು ಕೊಂಡು ಕೊಳ್ಳುತ್ತಾರೆ? ತೆಗೆದುಕೊಂಡು ಹೋಗಿ ,ಸ್ಮಶಾನದಲ್ಲಿ ಬಿಸಾಕಿ!  ಈ ಅಸಹ್ಯವನ್ನು ಇದಕ್ಕೆ ಅದೇ ಸರಿಯಾದ  ಜಾಗ" ಎಂದು ಮಂತ್ರಿಗೆ ಹೇಳಿದರು. ಮನುಷ್ಯನ ತಲೆಗೆ ಸ್ಮಶಾನವೇ ಸರಿಯಾದ ಜಾಗವೆಂದು ಮಂತ್ರಿಗೆ ಮನವರಿಕೆಯಾಯಿತು.

   ಮಂತ್ರಿ ಸಾಮ್ರಾಟನ ಬಳಿಗೆ ಬಂದು, ಇದನ್ನು ಉಚಿತವಾಗಿ  ಕೊಟ್ಟರೂ  ಸ್ವೀಕರಿಸಲು ಯಾರೂ  ಸಿದ್ದರಿಲ್ಲ ಎಂದು ಹೇಳಿದ.

    ‌ ಆಗ  ಅಶೋಕ,  ನಾನು ಸತ್ತ ನಂತರ ನನ್ನ ತಲೆಯನ್ನು ನೀನು ಮಾರಲು ಹೋದಲ್ಲಿ ಆಗ ಏನಾದರೂ ವ್ಯತ್ಯಾಸ ಆಗುತ್ತದೆಯೇ? ಎಂದು ಕೇಳಿದ.
   ಸಾಮ್ರಾಟನ ಈ ಪ್ರಶ್ನೆಗೆ ಉತ್ತರ ಹೇಗೆ ಹೇಳುವುದೆಂದು ಮಂತ್ರಿಗೆ ಸ್ವಲ್ಪ ಕಸಿವಿಸಿ ಯಾಯಿತು. ಪ್ರಭೂ, ನೀವು ಕ್ಷಮಿಸುವುದಾದರೆ, ನಾನು ಹೇಳಬಲ್ಲೆ, ನಿಮ್ಮ ತಲೆಯನ್ನು ಸಹಾ ಯಾರೂ ಕೊಂಡುಕೊಳ್ಳುವುದಿಲ್ಲ. ಇಂದು ನನಗೆ ಮೊಟ್ಟಮೊದಲ ಬಾರಿಗೆ ಅರಿವಾಯಿತು. ಮನುಷ್ಯನ ತಲೆಗೆ ಯಾವ ಬಿಡಿ ಕಾಸಿನ ಬೆಲೆಯೂ ಇಲ್ಲವೆಂದು, ಎಂದು ಹೇಳಿದ. 

   ಆಗ ಸಾಮ್ರಾಟ, ಈ ಬೆಲೆ ಇಲ್ಲದ ಶಿರವನ್ನು ನಾನೊಬ್ಬ ಭಿಕ್ಷುವಿನ ಚರಣಗಳಲ್ಲಿ ಇರಿಸಿದಾಗ ನಿನಗೇಕೆ ಅಷ್ಟೊಂದು ಅಸಮಾಧಾನವಾಯಿತು? 
ಮನುಷ್ಯನ ಶಿರಕ್ಕೆ ಯಾವ ಬೆಲೆಯೂ ಇಲ್ಲ ಎಂದಾದಮೇಲೆ,  ತಲೆಬಾಗಲು ಅಹಂಕಾರವೇಕೆ?   ಎಂದು  ಕೇಳಿದ.

   ಮಂತ್ರಿಗೆ ತನ್ನ ತಪ್ಪಿನ ಅರಿವಾಯಿತು, ತನಗೆ ಬುದ್ಧಿ ಕಲಿಸಲೆಂದೇ , ಸಾಮ್ರಾಟ ಈ ರೀತಿಯ ಆಟ ಕಟ್ಟಿದ ಎಂದು ಅವನಿಗೆ ಅರ್ಥವಾಯಿತು.  ಮನುಷ್ಯ ಬದುಕಿದ್ದಾಗ,ಅವನ ತಲೆಗೆ  ಇದ್ದ ಬೆಲೆ, ಸತ್ತನಂತರ ಇಲ್ಲ ಎನ್ನುವ ಸತ್ಯ ತಿಳಿಯಿತು.ಎಷ್ಟು ದೊಡ್ಡ ಅಧಿಕಾರದಲ್ಲಿರುವ ವ್ಯಕ್ತಿಗಳ, ಶ್ರೀಮಂತವ್ಯಕ್ತಿಗಳ ,ತಲೆ ಬುರುಡೆಯಾದರೂ, ಅವರು ಸತ್ತ ನಂತರ, ಅದನ್ನು  ಮುಟ್ಟಲಿಕ್ಕೂ ಎಲ್ಲರೂ ಹೆದರುತ್ತಾರೆ, ಅಸಹ್ಯ ಪಡುತ್ತಾರೆ, ಜೀವಂತವಾಗಿದ್ದಾಗಲಷ್ಟೇ  ಅದರ ಬೆಲೆ, ಅಹಂಕಾರ ,ಹಾರಾಟ  ಅಷ್ಟೇ. ಸತ್ತ ನಂತರ   ಅದೊಂದು   ಕಸವಷ್ಟೇ.

April 19, 2025

ಮನಸ್ಸು ಸ್ವಚ್ಚವಾಗಿದ್ದರೆ, ಎಲ್ಲವೂ ಸಾಧ್ಯ

ದಿನಕ್ಕೊಂದು ಕಥೆ
  ತೇನ್ ಸಿಂಗ್ ಚಿಕ್ಕವನಿದ್ದಾಗ, ಹಿಮಾಲಯದ ತಪ್ಪಲಲ್ಲಿ ಕುರಿ ಕಾಯುತ್ತಿದ್ದ. ಅವನು  ಇನ್ನೂ ಬಹಳ ಚಿಕ್ಕವನಿದ್ದಾಗಲೇ, ಅವನ ತಂದೆ ತೀರಿಕೊಂಡಿದ್ದರು, ಅವನ ತಾಯಿ ತೇನ್ ಸಿಂಗ್  ಕುರಿಮೇಯಿಸುವಲ್ಲಿಗೆ  ಬುತ್ತಿಕಟ್ಟಿಕೊಂಡು ಬರುತ್ತಿದ್ದಳು. ಮಗನಿಗೆ ಪ್ರೀತಿಯಿಂದ ಊಟ ಮಾಡಿಸಿ, ಮಗೂ  ಈ ಹಿಮಾಲಯ ಪರ್ವತ ಬಹಳ ಎತ್ತರವಿದೆ ಎಂದು ಎಲ್ಲರೂ ಹೇಳುತ್ತಾರೆ, ಇದುವರೆಗೂ ಇದನ್ನು ಯಾರೂ ಹತ್ತಿಲ್ಲ, ಇದನ್ನು ಒಮ್ಮೆ ನೀನು ಹತ್ತಲು ಪ್ರಯತ್ನಪಡು ನೋಡೋಣ ಎನ್ನುತ್ತಿದ್ದಳು. 

   ಅವಳ  ಮಾತಿನಂತೆ ಒಂದು ದಿನ ತೇನ್ ಸಿಂಗ್ ಹಿಮಾಲಯವನ್ನು ಹತ್ತಿ ಇಳಿದೇ ಬಿಟ್ಟ. ಆಗ ಅವನನ್ನು ಸಂದರ್ಶನ ಮಾಡಲು ಬಹಳ ಜನರು ಬಂದಿದ್ದರು. ಅವರೆಲ್ಲರೂ ಅವನ ಸಾಧನೆ ಬಗ್ಗೆ ಅನೇಕ ಪ್ರಶ್ನೆಯನ್ನು ಕೇಳುತ್ತಲೇ ಇದ್ದರು. ಇಷ್ಟು ದೊಡ್ಡ ಹಿಮಾಲಯ ಪರ್ವತವನ್ನು ಇದುವರೆಗೂ ಯಾರೂ ಹತ್ತಿಲ್ಲ, ನೀವು ಹೇಗೆ ಇದನ್ನ ಹತ್ತಿ ಇಳಿದಿರಿ?  ಇದರ ಯೋಚನೆ ನಿಮಗೆ ‌ಹೇಗೆ ಬಂತು?  ಇದಕ್ಕಾಗಿ ನೀವುಎಷ್ಟು ಸಮಯ ತೆಗೆದುಕೊಂಡಿರಿ, ಹತ್ತುವಾಗ ಏನೇನು ತೊಂದರೆ ಆಯಿತು, ಹೀಗೆಲ್ಲಾ ಅನೇಕ ಪ್ರಶ್ನೆ ಕೇಳಿದರು. 

   ಆಗ ತೇನ್ ಸಿಂಗ್, ನಾನು ಚಿಕ್ಕವನಿದ್ದಾಗ ನನ್ನ ತಾಯಿ ಈ ಹಿಮಾಲಯವನ್ನು ತೋರಿಸಿ ಇದನ್ನು ಇದುವರೆಗೂ ಯಾರು ಹತ್ತಿಲ್ಲ ನೀನು, ಹತ್ತಲೇಬೇಕು ಎಂದು ನನಗೆ ಆಗಾಗ ಒತ್ತಾಯಿಸಿ ಹೇಳುತ್ತಿದ್ದಳು, ಆಗಲೇ ನನ್ನ ಮನಸ್ಸಿನಲ್ಲೇ, ನಾನು ಹಿಮಾಲಯವನ್ನು ಹತ್ತಿಯಾಗಿತ್ತು, ಈಗ ನನ್ನ  ಈ ದೇಹ ಮಾತ್ರ , ಹಿಮಾಲಯವನ್ನು ಹತ್ತಿ ಇಳಿದಿದೆ, ಅಷ್ಟೇ ಎಂದು ಉತ್ತರಿಸಿದ.

   ತಾಯಿಯ ಒಂದು ಮಾತು, ಅವರಿಂದ ಇಂತಹ ಸಾಹಸವನ್ನು ಮಾಡಿಸಿದೆ ಎಂದಮೇಲೆ, ಆ ತಾಯಿಯ ಮಾತು ಹೇಗಿರಬೇಕಲ್ಲವೇ!  ತಾಯಿ ಹೇಳಿದ ಮಾತ್ರಕ್ಕೆ ಅದನ್ನು ಕೇಳಿ ಸಾಧಿಸಿದ ಈತನ ಮನಸ್ಸು ಕೂಡಾ ಒಂದು ವಿಶಿಷ್ಟವಾದ ಧೃಡ ಸಂಕಲ್ಪದಿಂದ ಕೂಡಿದ್ದು ಅಲ್ಲವೇ? 
ಆ ತಾಯಿಯ ಮಾತಿನಲ್ಲಿ ಎಂತಹ ಅದ್ಭುತ, ಸಾಮರ್ಥ್ಯ ಶಕ್ತಿ ಇತ್ತೊ ಹಾಗೆಯೇ ಅದನ್ನು ಸ್ವೀಕರಿಸಿದ ಮಗನ ಮನಸ್ಸಿನಲ್ಲಿಯೂ ಅಷ್ಟೇ ಅದ್ಭುತವಾದ ಧೃಡವಾದ ಸಂಕಲ್ಪವೂ ಇತ್ತು.
   
   ಇದೇ ರೀತಿಯಲ್ಲಿ ಮೊದಲು ಕುರಿ ಕಾಯುವ ಕೆಲಸವನ್ನು ಮಾಡುತ್ತಿದ್ದ ಕಾಳಿದಾಸನನ್ನು ಕೂಡಾ ಅವನ ಮನಸ್ಸೇ ಕವಿರತ್ನ ಕಾಳಿದಾಸನನ್ನಾಗಿ ಮಾರ್ಪಡಿಸಿತು, ದೋಣಿ ಕಟ್ಟುವವನ  ಮಗ ಅಬ್ದುಲ್ ಕಲಾಂ ಕೂಡಾ ಇಂತಹಾ ಅದ್ಭುತ ವ್ಯಕ್ತಿ ಆಗಿದ್ದು ಕೂಡಾ ಅವರ ದೃಢ ಮನಸ್ಸಿನಿಂದಲೇ.

   ಹೀಗೆ ಎಲ್ಲವುದಕ್ಕೂ, ನಮ್ಮ ಮನಸ್ಸೇ  ಕಾರಣ. ಎಲ್ಲವೂ ನಮ್ಮ ಮನಸ್ಸಿನಲ್ಲಿಯೇ  ಇರುವುದು.   ಮನುಷ್ಯನ ಮನಸ್ಸು ಸುಂದರವಾಗಿರಬೇಕು, ಸಶಕ್ತ ಹಾಗೂ ಸ್ವಚ್ಛವಾಗಿರಬೇಕು. ಆಗ ಮನುಷ್ಯನಲ್ಲಿ ಅಸಾಧ್ಯವಾದದ್ದನ್ನು ಸಾಧ್ಯ ಮಾಡಲು ಸಾಧ್ಯವಾಗುತ್ತದೆ.

 ಈ ರೀತಿಯಲ್ಲಿ  ಇರಬೇಕೆಂದು ನಾವೆಲ್ಲರೂ  ಬಯಸುತ್ತೇವೆ, ಆದರೆ ಈ ರೀತಿಯಾಗಿ ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟು ಕೊಳ್ಳುವುದು ತುಂಬಾ  ಕಷ್ಟ. ನಮ್ಮ ಮನಸ್ಸನ್ನು ದೋಷ ಮುಕ್ತವಾಗಿ, ತಿಳಿ ನೀರಿನಂತೆ ಮಾಡಿಕೊಂಡಾಗ ಮಾತ್ರ ಮನಸ್ಸಿನಲ್ಲಿರುವ ಬೇಡದ, ಬಗ್ಗಡ, ಕಸವೆಲ್ಲಾ, ಕೊಚ್ಚಿಹೋಗಿ, ಮನಸ್ಸು ತಿಳಿ ನೀರಿನಂತಾಗುವುದು. ಆಗಲೇ ಅದರಲ್ಲಿ ನಮ್ಮ ನಿಜವಾದ  ಸ್ವಚ್ಛ ಮುಖ ಕಾಣುವುದು.

April 11, 2025

ಕಾಂತೇಶ, ಭ್ರಾಂತೇಶ , ಶಾಂತೇಶ ಯಾರಿವರು?

ಶ್ರೀ ಹನುಮ ಜಯಂತಿಯ ಶುಭಾಶಯಗಳೊಂದಿಗೆ.

ಸಾಮಾನ್ಯವಾಗಿ ಈ ಹೆಸರುಗಳನ್ನು ಉ.ಕ. ಭಾಗದ ಬಹುತೇಕ ದೈವಭಕ್ತರು ಕೇಳಿರುತ್ತಾರೆ. ಈ ಹೆಸರುಗಳು ಹನುಮನ ವಿವಿಧ ರೂಪಕ್ಕೆ ಹಿಂದಿನ ಋಷಿಮುನಿಗಳು ಇಟ್ಟ ಹೆಸರು.

ಹೌದು, ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನ ಕದರಮಂಡಲಗಿಯಲ್ಲಿರುವ ಹನುಮನಿಗೆ ಕಾಂತೇಶಸ್ವಾಮಿ ಎಂದು ಹೆಸರು. ಇಲ್ಲಿಂದ ಹೆಚ್ಚು ಕಮ್ಮಿ 60 ಕಿ.ಮೀ. ಶಿಕಾರಿಪುರ. ಅಲ್ಲಿರುವವನು ಭ್ರಾಂತೇಶಸ್ವಾಮಿ (ಹುಚ್ಚೂರಾಯ ಎಂದೂ ಪ್ರಸಿದ್ಧಿಯಾಗಿದೆ).
ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿರುವ ಹನುಮ ಭ್ರಾಂತೇಶಸ್ವಾಮಿ ಎಂದು ಕರೆಯಿಸಿಕೊಂಡರೆ, ಅಲ್ಲಿಂದ ಸುಮಾರು 35 ಕಿ.ಮೀ. ಅಂತರದಲ್ಲಿರುವವನು ಹಿರೇಕೆರೂರು ತಾಲೂಕಿನ ಸಾತೇನಹಳ್ಳಿಯಲ್ಲಿ ನೆಲೆಸಿರುವ ಶಾಂತೇಶಸ್ವಾಮಿ
ಈ ಮೂರು ಊರುಗಳ ದೇವಾಲಯದಲ್ಲಿನ ಹನುಮನ ಮೂರ್ತಿಗಳನ್ನು ಸಹಸ್ರಾರು ವರ್ಷಗಳ ಹಿಂದೆಯೇ ದೂರ್ವಾಸ, ವಶಿಷ್ಠ ಮತ್ತು ವ್ಯಾಸ ಮುನಿಗಳು ಪ್ರತಿಷ್ಠಾಪಿಸಿದ್ದಾರೆ ಎಂಬ ಪ್ರತೀತಿ ಇದೆ. ಇದಕ್ಕೆ ಸಂಬಂಧಪಟ್ಟ ಸೂಕ್ತ ಐತಿಹಾಸಿಕ ದಾಖಲೆಗಳನ್ನು ಕೂಡ ಇಲ್ಲಿ ನೋಡಬಹುದು.
ಈ ಮೂರು ಊರಿನ ಹನುಮನರನ್ನು ಸೂರ್ಯೋದಯದಿಂದ ಸೂರ್ಯಾಸ್ತ ಆಗುವುದೊರಳಗಾಗಿ ದರ್ಶನ ಪಡೆದುಕೊಳ್ಳುವುದು ವಿಶೇಷ. ಸಾಡೇಸಾತಿ, ಅಷ್ಟಮ, ಅರ್ಧಾಷ್ಟಮ, ಪಂಚಮ ಶನಿಕಾಟದಲ್ಲಿರುವವರು ತಪ್ಪಿಸದೇ ಇಲ್ಲಿಗೆ ಹೋಗಬೇಕು. ಅಷ್ಟೊಂದು ಮಹತ್ವವಾದ ಸ್ಥಳ ಮಹಿಮೆ ಈ ಮೂರು ಸ್ಥಳಗಳಿಗಿವೆ.
ಹಲವಾರು ರೋಗ, ರುಜಿನಗಳಿಗೆ, ಅನೇಕ ಸಮಸ್ಯೆಗಳನ್ನು ಈ ಹನುಮರು ಪರಿಹರಿಸುತ್ತಾರೆ ಎಂಬ ನಂಬಿಕೆ ಜನರದ್ದು. ಹೀಗಾಗಿ ಅಧಿಕ ಮಾಸದ ಶನಿವಾರಗಳಂದು ಇಲ್ಲಿ ಜನಜಾತ್ರೆಯೇ ನೆರೆದಿರುತ್ತದೆ
ಹನುಮ ಚಿರಂಜೀವಿಯಾಗಿರುವುದರಿಂದ ಈಗಲೂ ಜೀವಂತವಾಗಿದ್ದು ಧ್ಯಾನಾಸಕ್ತನಾಗಿದ್ದಾನೆ ಎಂಬುದು ಪುರಾಣಗಳಿಂದ ತಿಳಿದು ಬರುತ್ತದೆ. ಅದಕ್ಕೆಂದೇ ಹನುಮನ ಭಕ್ತರು ಜಗತ್ತಿನಲ್ಲಿ ಸಾಕಷ್ಟಿದ್ದಾರೆ.
ಈ ಅಧಿಕ ಮಾಸದಲ್ಲಿ ಕಾಂತೇಶ, ಭ್ರಾಂತೇಶ ಮತ್ತು ಶಾಂತೇಶರ ದರ್ಶನ ಪಡೆದುಕೊಂಡು ಪುಣ್ಯವಂತರಾಗಬೇಕೆನ್ನುವವರು ತಡ ಮಾಡದೇ ಹೊರಟರೇ ಅದೃಷ್ಟವಂತರೆನ್ನಬಹುದು.
ಇನ್ನು, ಈಗಲೂ ಹಳ್ಳಿ ಕಡೆ ಅಧಿಕ ಮಾಸದಲ್ಲಿ ಅನೇಕ ಪೂಜೆ, ಪುನಸ್ಕಾರಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುತ್ತವೆ. ಏಕೆಂದರೆ ದೇವಾನುದೇವತೆಗಳು ಅಧಿಕ ಮಾಸದಲ್ಲಿ ಭೂಲೋಕದಲ್ಲಿ ಸಂಚರಿಸುತ್ತಾರೆ ಎಂಬ ನಂಬಿಕೆ ನಮ್ಮ ಹಿಂದೂ ಧರ್ಮೀಯರದು.
ಈ ಊರುಗಳ ಹತ್ತಿರದ ಭಕ್ತರು ಪ್ರತಿ ವರ್ಷದ ಶ್ರಾವಣದಲ್ಲೂ ಈ ದೇವಸ್ಥಾನಗಳಿಗೆ ಹೋಗುತ್ತಾರೆ. ದೂರದೂರಿನವರು ಕೇವಲ ಅಧಿಕ ಮಾಸದಲ್ಲಿ ಮಾತ್ರ ಇಲ್ಲಿ ಬರುತ್ತಾರೆ. ಏಕೆಂದರೆ ಇಲ್ಲಿ ಹೋಗಿ ಬಂದರೆ ಕಾಶಿ ಮತ್ತು ರಾಮೇಶ್ವರಕ್ಕೆ ಹೋಗಿ ಬಂದಷ್ಟು ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಆಸ್ತಿಕರದು.
ಇನ್ನು ಇಲ್ಲಿಗೆ ಭೇಟಿ ನೀಡುವ ಕೆಲವರು ಶನಿಕಾಟ ಹೇಳ ಹೆಸರಿಲ್ಲದಂತೆ ಪೇರಿ ಕಿತ್ತುತ್ತದೆ ಎಂಬುದಾಗಿ ಅಪಾರವಾಗಿ ನಂಬಿದ್ದಾರೆ. ಶ್ರಾವಣ ಮತ್ತು ಅಧಿಕ ಮಾಸದ ಶನಿವಾರಗಳಂದು ಇಲ್ಲಿ ಬರುವ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಇರುತ್ತದೆ. ಅನ್ನದಾಸೋಹಕ್ಕೆ ದೇಣಿಗೆ ನೀಡಬೇಕೆನ್ನವವರು ಇಂತಹ ಪುಣ್ಯ ಸ್ಥಳಗಳಲ್ಲಿ ದೇಣಿಗೆ ನೀಡಿ ಪಾವನರಾಗಬಹುದು.
ಇನ್ನೊಂದು ವಿಶೇಷವೆಂದರೆ, ಮೂರು ಅಥವಾ ನಾಲ್ಕು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಲ್ಲಿ ಈ ಮೂರು ದೇವಾಲಯಗಳಿಗೆ ಭೇಟಿ ನೀಡಿ, ಹನುಮನ ದರ್ಶನ ಪಡೆಯುವುದು ತುಂಬಾ ಶುಭ ಎನ್ನುವ ನಂಬಿಕೆ ಚಾಲನೆಯಲ್ಲಿದೆ.
ಮೂರ್ತಿ ಪ್ರತಿಷ್ಠಾಪಿಸುವಾಗ ಕಾಂತೇಶನ ಕಣ್ಣಲ್ಲಿ, ಭ್ರಾಂತೇಶನ ನೆತ್ತಿಯಲ್ಲಿ, ಶಾಂತೇಶನ ಪಾದದಲ್ಲಿ ಅತೀ ಶ್ರೇಷ್ಠವಾದ ಸಾಲಿಗ್ರಾಮವನ್ನು ಸ್ಥಾಪಿಸಲಾಗಿದೆ. ದರ್ಶನ ಮಾಡುವಾಗ ಈ ಸಾಲಿಗ್ರಾಮಗಳನ್ನೂ ಭಕ್ತರು ಕಣ್ತುಂಬಿಕೊಳ್ಳುವುದು ಮಹತ್ವದ್ದು.

April 8, 2025

ಆತ ವಿಜ್ಞಾನಿಯಾಗಲು ಅಜ್ಜಿ ಹೇಳಿದ ಸುಳ್ಳುಗಳೇ ಪ್ರೇರಣೆ!

🌻ದಿನಕ್ಕೊಂದು ಕಥೆ🌻                                            
ನಾವೆಲ್ಲಾ ಅಮ್ಮ ಹೇಳಿದ ಸುಳ್ಳುಗಳು, ಅಪ್ಪ ಹೇಳಿದ ಸುಳ್ಳುಗಳು ಮುಂತಾದ ಜನಪ್ರಿಯ ಪುಸ್ತಕಗಳನ್ನೂ, ಲೇಖನಗಳನ್ನೂ ಓದಿದ್ದೇವೆ. ಆನಂದಿಸಿದ್ದೇವೆ. ಈಗ ಅಜ್ಜಿ ಹೇಳಿದ ಸುಳ್ಳುಗಳ ಬಗ್ಗೆಯೂ ಓದೋಣವೇ? ಅಜ್ಜಿ ಹೇಳಿದ ಸುಳ್ಳಿನಿಂದಾಗಿ ಒಬ್ಬ ಮುಗ್ಧ ಬಾಲಕ ಒಬ್ಬ ಮಹಾನ್ ವಿಜ್ಞಾನಿ ಆದ ಬಗ್ಗೆ ತಿಳಿದುಕೊಳ್ಳೋಣವೇ? ಹದಿನಾರನೇ ಶತಮಾನದಲ್ಲಿ ಇಟಲಿಯಲ್ಲಿ ಗ್ಯಾಲಿಲೀ ಎಂಬ ಸಂಗೀತಗಾರರಿದ್ದರು. ದುರದೃಷ್ಟವಶಾತ್ ಅವರ ಪತ್ನಿ ಅನಾರೋಗ್ಯದಿಂದ ತೀರಿಕೊಂಡರು. ಅವರ ಒಬ್ಬನೇ ಮಗ ಎಂಟು ವರ್ಷ ವಯಸ್ಸಿನ ಹುಡುಗನ ಮುಗ್ಧ ಮನಸ್ಸಿಗೆ ತನ್ನ ತಾಯಿ ಸತ್ತಿದ್ದಾರೆ. ಮತ್ತೆಂದೂ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ಅರ್ಥವಾಗುತ್ತಿರಲಿಲ್ಲ. ಆತ ಯಾವಾಗಲೂ ತಾಯಿಯನ್ನು ನೆನಪಿಸಿಕೊಂಡು ಅಳುತ್ತಿದ್ದ. ಆಕೆಯನ್ನು ನೋಡಬೇಕೆಂದು ಹಠ ಹಿಡಿಯುತ್ತಿದ್ದ.

ಸಂಗೀತಗಾರರಾಗಿದ್ದ ಗ್ಯಾಲಿಲೀಯವರು ತಮ್ಮ ವೃತ್ತಿಯ ನಿಮಿತ್ತ ಊರಿಂದೂರಿಗೆ ಸುತ್ತಬೇಕಿತ್ತು. ಮಗನೊಟ್ಟಿಗೆ ಹೆಚ್ಚಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಅವರ ಮನೆಯಲ್ಲೊಬ್ಬ ಅಜ್ಜಿ ಇದ್ದರು. ಹುಡುಗನ ಪಾಲನೆ-ಪೋಷಣೆಯನ್ನು ಅವರು ನೋಡಿಕೊಳ್ಳುತ್ತಿದ್ದರು. ತನ್ನ ತಾಯಿಯನ್ನು ತೋರಿಸು ಎಂದು ಹುಡುಗ ಅತ್ತಾಗಲೆಲ್ಲ ಅಜ್ಜಿಯವರು ಅವನಿಗೆ ಏನಾದರೂ ತಿಂಡಿ-ತಿನಿಸು ಕೊಟ್ಟು ಸುಮ್ಮನಾಗಿಸುತ್ತಿದ್ದರು. ಬೇರೆ ಏನೇನೋ ಹೇಳಿ ಅವನ ಮನಸ್ಸನ್ನು ಬೇರೆ ಕಡೆ ತಿರುಗಿಸುತ್ತಿದ್ದರು. ಒಂದು ರಾತ್ರಿ ಹುಡುಗನಿಗೆ ತಾಯಿಯ ನೆನಪು ತುಂಬಾ ಕಾಡಿರಬೇಕು. ಆತ ಒಂದೇ ಸಮನೆ ಅಳುತ್ತಿದ್ದ. ಅಜ್ಜಿ ಸಮಾಧಾನ ಮಾಡುವಷ್ಟೂ ಮಾಡಿದರು. ಹುಡುಗ ಸುಮ್ಮನಾಗದಿದ್ದಾಗ ಅವರಿಗೆ ರೋಸಿ ಹೋಗಿರಬೇಕು. ಅವರು ಹುಡುಗನನ್ನು ಮನೆಯಿಂದ ಹೊರಕ್ಕೆ ಕರೆದುಕೊಂಡು ಬಂದರು. ಕತ್ತಲ ರಾತ್ರಿಯಲ್ಲಿ ಬಯಲಿನಲ್ಲಿ ನಿಲ್ಲಿಸಿದರು. ಆಕಾಶದತ್ತ ಕೈ ತೋರಿಸಿ ಮಗು ಸತ್ತವರೆಲ್ಲ ನಕ್ಷತ್ರಗಳಾಗುತ್ತಾರಂತೆ!

ಆಕಾಶದ ಕಡೆ ನೋಡು. ಅಲ್ಲಿರುವ ಸಾವಿರಾರು ನಕ್ಷತ್ರಗಳಲ್ಲಿ ಯಾವುದೋ ಒಂದು ನಕ್ಷತ್ರ ನಿಮ್ಮ ತಾಯಿಯೇ ಇರಬೇಕು. ನೀನು ಗಮನಕೊಟ್ಟು ಹುಡುಕಿದರೆ ಆಕೆ ನಿನಗೆ ಕಾಣಿಸಬಹುದು ಎನ್ನುತ್ತಾ ಅವನನ್ನು ಬಯಲಿನಲ್ಲೇ ಬಿಟ್ಟು ಹೋದರು. ಮುಗ್ಧ ಹುಡುಗ ಅಜ್ಜಿಯ ಮಾತನ್ನು ನಂಬಿಬಿಟ್ಟ. ರಾತ್ರಿ ಬಹಳ ಹೊತ್ತಿನವರೆಗೆ ನಕ್ಷತ್ರಗಳನ್ನೇ ದಿಟ್ಟಿಸಿ ನೋಡುತ್ತಿದ್ದ! ತಾಯಿಯನ್ನು ಹುಡುಕುತ್ತಿ ದ್ದ! ಅಂದಿನಿಂದ ರಾತ್ರಿಯ ಹೊತ್ತು ಬಟ್ಟ ಬಯಲಿನಲ್ಲಿ ನಿಂತು ನಕ್ಷತ್ರಗಳನ್ನು ದಿಟ್ಟಿಸಿ ನೋಡುವುದು ಅವನ ಅಭ್ಯಾಸವಾಗಿ ಬಿಟ್ಟಿತ್ತು. ಆತ ಅನೇಕ ವರ್ಷಗಳವರೆಗೆ ಅದನ್ನೇ ಮಾಡುತ್ತ ಬಂದ. ಆತ ಬೆಳೆದು ದೊಡ್ಡವನಾದಾಗ ಅಸಂಖ್ಯಾತ ನಕ್ಷತ್ರಗಳಲ್ಲಿ ತನ್ನ ತಾಯಿಯನ್ನು ಹುಡುಕುವುದು ವ್ಯರ್ಥವೆಂಬುದು ಅರ್ಥವಾಯಿತು. ಆದರೆ ನಕ್ಷತ್ರಕಾಯಗಳನ್ನು ಗಮನಿಸಿ ನೋಡುವ ಆತನಿಗೆ ಪ್ರಿಯವಾದ ಹವ್ಯಾಸವಾಗಿತ್ತು. ಅವರು ತಮ್ಮದೇ ಆದ ದುರ್ಬೀನನ್ನು ತಯಾರು ಮಾಡಿಕೊಂಡರು. ನಕ್ಷತ್ರಕಾಯಗಳ ಗ್ರಹಗಳ ಅಧ್ಯಯನ ಮಾಡುತ್ತಾ ಮಾಡುತ್ತಾ ಅವರು ಬಹು ದೊಡ್ಡ ಖಗೋಳ ಶಾಸ್ತ್ರಜ್ಞರಾದರು!

ಅವರ ಹೆಸರು ಗೆಲಿಲಿಯೋ ಗ್ಯಾಲಿಲೀ(1564-1642). ಅವರು ಗುರು ಮತ್ತು ಶುಕ್ರ ಗ್ರಹಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದರು. ಅವುಗಳಿಗಿರುವ ಉಪಗ್ರಹಗಳನ್ನು ಗುರುತಿಸಿದರು. ಅಂದಿನವರೆಗೆ ಎಲ್ಲರ ನಂಬಿಕೆಯಾಗಿದ್ದ ಭೂಮಿಯ ಸುತ್ತ ಎಲ್ಲ ಗ್ರಹಗಳೂ ಸುತ್ತುತ್ತವೆಂಬ ನಂಬಿಕೆಯನ್ನು ಸುಳ್ಳೆಂದು ಹೇಳಿದರು. ಸೂರ್ಯ ಮಧ್ಯದಲ್ಲಿದ್ದಾನೆಂದೂ ಅವನ ಸುತ್ತ ಎಲ್ಲ ಗ್ರಹಗಳೂ ಸುತ್ತುತ್ತವೆಂಬುದನ್ನು ಸಾಬೀತು ಮಾಡಿ ತೋರಿಸಿದ ಮಹಾನ್ ವಿಜ್ಞಾನಿ ಅವರು. ಈ ಕುತೂಹಲಕಾರಿ ಪ್ರಸಂಗವು ಕಾರ್ಕಳದ ಡಾ.ಕೆ. ಜಗದೀಶ ಪೈಗಳು ಬರೆದಿರುವ ರಾಷ್ಟ್ರೋತ್ಥಾನ ಪ್ರಕಾಶನದವರು ಪ್ರಕಟಿಸಿರುವ ಸಾರ್ಥಕ ಜೀವನದ ನಿಚ್ಚಣಿಗೆ ಪುಸ್ತಕದಲ್ಲಿ ನಿರೂಪಿತವಾಗಿದೆ.*

*ಅವರಿಗೆ ಪ್ರಣಾಮಗಳು. ಅಂದು ಅಜ್ಜಿಯವರು ಸುಳ್ಳು ಹೇಳಿ ಬಾಲಕನನ್ನು ಸುಮ್ಮನಾಗಿಸಿರಬಹುದು. ಆದರೆ ತನ್ನ ಮುಗ್ಧ ಬಾಲಕನೊಬ್ಬನಿಗೆ ನಕ್ಷತ್ರಗಳನ್ನು ಗಮನಿಸುವ ಹವ್ಯಾಸವನ್ನು ಹತ್ತಿಸಿದ ಆ ಅಜ್ಜಿಗೂ, ಮಹಾನ್ ಖಗೋಳ ಶಾಸ್ತ್ರಜ್ಞ ಗೆಲಿಲಿಯೋರವರಿಗೂ ಪ್ರಣಾಮಗಳು. ಅಜ್ಜ-ಅಜ್ಜಿಯರು ನಮಗೆ ಹೇಳುವ ಕತೆಗಳನ್ನೂ, ಮಾತುಗಳನ್ನೂ, ಅಡಗೂಲಜ್ಜಿಯ ಕಾಗಕ್ಕ-ಗುಬ್ಬಕ್ಕ ಕತೆಗಳೆಂದು ತಿರಸ್ಕರಿಸಬಾರದು. ಅವನ್ನು ಪುರಸ್ಕರಿಸಿದವರಿಗೆ, ಅರ್ಥೈಸಿಕೊಂಡವರಿಗೆ, ಹೊಸ-ಹೊಸ ಸತ್ಯಗಳ ಸಾಕ್ಷಾತ್ಕಾರ ಆಗಬಹುದಲ್ಲವೇ?