February 28, 2022

ತಿಳಿಯಾಗುವವರೆಗೆ ಕಾಯಬೇಕು

ತುಂಬಾ  ದಿನದಿಂದ ಹೇಳ್ಬೇಕು ಅನ್ಕೊಂಡಿದ್ದೆ ಸಮಯ ಸಿಕ್ಕಿರಲಿಲ್ಲ ಈಗ ಸಿಕ್ತು!

ಓದಿ ಅದ್ಭುತವಾದ ಕತೆ 

ಗೌತಮ ಬುದ್ಧ ತನ್ನ ಶಿಷ್ಯರೊಂದಿಗೆ ದೇಶ ಸಂಚಾರಕ್ಕೆ ಹೊರಟಿದ್ದ. ಶಿಷ್ಯನೊಬ್ಬ ಯಾವುದೋ ಚಿಂತೆಯಲ್ಲಿದ್ದಂತೆ ಕಾಣಿಸುತ್ತಿತ್ತು. ಬುದ್ಧ ಬಾಯಿಬಿಟ್ಟು ಏನನ್ನೂ ಕೇಳಲಿಲ್ಲ. ಹಾಗೆಯೇ ದಾರಿಮಧ್ಯೆ ಕೆರೆಯೊಂದು ಕಾಣಿಸಿತು. ಆಗ ಬುದ್ಧ ‘ನನಗೆ ಬಹಳ ನೀರಡಿಕೆಯಾಗುತ್ತಿದೆ. ಆ ಕೆರೆಯಿಂದ ನೀರು ತಂದುಕೊಡಿ’ ಎಂದು ಆ ಶಿಷ್ಯನಿಗೆ ಹೇಳಿದ. ಆತ ಕೆರೆಯ ಬಳಿಗೆ ಹೋದ. ಅಷ್ಟರಲ್ಲಿ ಎತ್ತಿನಗಾಡಿಯೊಂದು ಕೆರೆಯನ್ನು ಹಾದು ಹೋಯಿತು. ಆ ಪರಿಣಾಮ ಕೆರೆಯ ನೀರು ಕೆಸರಾಯಿತು. ಇಷ್ಟು ಕೊಳಕು ನೀರನ್ನು ಕುಡಿಯಲಾಗುತ್ತದೆಯೇ ಎಂದು ಯೋಚಿಸಿದ ಆ ಶಿಷ್ಯ ವಾಪಸಾಗಿ ವಿಷಯ ಹೀಗೆಂದು ತಿಳಿಸಿದ. ಅರ್ಧ ಗಂಟೆಯ ನಂತರ ಬುದ್ಧ ಪುನಃ ನೀರು ತರುವಂತೆ ಹೇಳಿ ಕಳುಹಿಸಿದ. ಆದರೆ ಕೆರೆಯ ನೀರು ಇನ್ನೂ ತಿಳಿಯಾಗಿರಲಿಲ್ಲ. ಆ ಶಿಷ್ಯ ಮತ್ತೆ ಖಾಲಿ ಕೈಯಲ್ಲಿ ವಾಪಸಾದ. ಬುದ್ಧ ಮತ್ತೆ ಅರ್ಧ ಗಂಟೆಯ ನಂತರ ನೀರು ಬೇಕೆಂದು ಕೇಳಿದ. ಶಿಷ್ಯ ಕೆರೆ ಬಳಿಗೆ ಬಂದ. ಅಷ್ಟರಲ್ಲಿ ನೀರು ಸಂಪೂರ್ಣವಾಗಿ ತಿಳಿಯಾಗಿತ್ತು. ಆತ ಒಂದು ಮಡಕೆಯಲ್ಲಿ ನೀರನ್ನು ಮೊಗೆದು ಬುದ್ಧನಿದ್ದಲ್ಲಿಗೆ ಹೋದ. ನೀರು ತೆಗೆದುಕೊಂಡ ಬುದ್ಧ ಕೇಳಿದ ‘ಕೆಸರಾಗಿದ್ದ ನೀರನ್ನು ತಿಳಿಯಾಗಿಸಲು ನೀನೇನು ಮಾಡಿದೆ?’. ಅದಕ್ಕೆ ಶಿಷ್ಯ ‘ಇಲ್ಲ ನಾನೇನು ಮಾಡಲಿಲ್ಲ ಗುರುಗಳೆ. ಅದು ತನ್ನಿಂದ ತಾನೇ ತಿಳಿಯಾಯಿತು’ ಎಂದ.

ಆಗ ನಸುನಕ್ಕ ಬುದ್ಧ ಹೇಳಿದ-‘ಹೌದು ನೀನೇನೂ ಮಾಡಲಿಲ್ಲ. ನೀರು ತಿಳಿಯಾಗುವವರೆಗೂ ನೀನು ಸಮಯ ನೀಡಿದೆ. ಅದನ್ನು ಮತ್ತಷ್ಟು ಕಲಕುವ ಕೆಲಸಕ್ಕೆ ಕೈ ಹಾಕಲಿಲ್ಲ. ನಮ್ಮ ಮನಸ್ಸು ಕೂಡ ಹಾಗೆಯೇ. ಯಾವಾಗ ಮನಸ್ಸು ವಿಚಲಿತಗೊಳ್ಳುತ್ತದೆಯೋ, ಚಂಚಲಗೊಳ್ಳುತ್ತದೆಯೋ, ಅದನ್ನು ಹಾಗೆಯೇ ಬಿಟ್ಟುಬಿಡಬೇಕು. ಅದನ್ನು ಮತ್ತಷ್ಟು ಕಲಕುವುದು ಬೇಡ. ಸಮಯ ಕೊಟ್ಟು ನೋಡಿ, ಅದು ತನ್ನಷ್ಟಕ್ಕೆ ತಾನೇ ತಿಳಿಯಾಗುತ್ತದೆ. ಗಲಿಬಿಲಿಗೊಂಡ ಮನಸ್ಸಿನಲ್ಲಿ ಯಾವುದಾದರೂ ನಿರ್ಧಾರ ತೆಗೆದುಕೊಂಡಿರೋ ಅದರ ಪರಿಣಾಮ ಕೆಟ್ಟದ್ದಾಗಿರುತ್ತದೆ. ಮನಶ್ಶಾಂತಿ ಪಡೆಯುವುದು ಶ್ರಮದ ಕೆಲಸವಲ್ಲ, ಅದು ಅನಾಯಾಸ ಪ್ರಕ್ರಿಯೆ. ಏನೂ ಮಾಡುವುದು ಬೇಡ, ಸುಮ್ಮನಿದ್ದರೆ ಸಾಕು!’
#ಚನ್ನೇಶಶಾಸ್ತ್ರಿಗಳು

February 16, 2022

ಸ ಚಿತ್ರ ಚಿತ್ರಂ ಚಿತಯಂತಮಸ್ಮೇ

ನವಗ್ರಹಗಳಲ್ಲಿ ಒಬ್ಬನಾದ ಚಂದ್ರ ಸ್ವಾಯಂಭುವ ಮನ್ವಂತರದವನಂತೆ. ಈತ ಅತ್ರಿ ಮಹರ್ಷಿಯ ಮಗ ಎನ್ನುವುದಾಗಿ ಭಾಗವತ ಪುರಾಣ ಹೇಳುತ್ತದೆ. ಬ್ರಹ್ಮನು ಒಮ್ಮೆ ಅತ್ರಿ ಮುನಿಯನ್ನು ಸೃಷ್ಟಿ ಕಾರ್ಯದಲ್ಲಿ ನಿಯಮಿಸಿದ. ಅತ್ರಿ ತಪೋನಿರತನಾಗಿದ್ದ ಸಮಯದಲ್ಲಿ ಆತನ ಕಣ್ಣಿನಿಂದ ದಿವ್ಯವಾದ ತೇಜಸ್ಸೊಂದು ಹೊರ ಹೊಮ್ಮುತ್ತದೆ. ಆ ತೇಜಸ್ಸನ್ನು ಹತ್ತು ದಿಕ್ಕುಗಳು ಸ್ವೀಕರಿಸಿದವು ಆದರೆ ಆ ತೇಜಸ್ಸಿನ ವೇಗವನ್ನು ಹಿಡಿದಿಟ್ಟುಕೊಳ್ಳಲು ಆಗಲಿಲ್ಲ. ಆಗ ಅದನ್ನು ಕ್ಷೀರ ಸಾಗರದಲ್ಲಿ ಬಿಟ್ಟವು. ಬ್ರಹ್ಮ ಆ ತೇಜಸ್ಸನ್ನೆಲ್ಲಾ ಒಟ್ಟು ಗೂಡಿಸಿ ಪುರುಷಾಕಾರ ಕೊಟ್ಟು ಒಬ್ಬ ವ್ಯಕ್ತಿಯಾಗುವಂತೆ ಮಾಡಿ ಆತನಿಗೆ ಚಂದ್ರ ಎನ್ನುವ ಹೆಸರಿಡುತ್ತಾನೆ. ಆತನನ್ನು ಗ್ರಹಮಂಡಲದಲ್ಲಿ ಒಬ್ಬನಾಗಿರುವಂತೆ ನಿಯಮಿಸುತ್ತಾನೆ. ಆಮೇಲೆ ಕ್ರಮೇಣ ಈತನನ್ನು ಸೋಮನೆನ್ನುವ ಹೆಸರಿನಿಂದ ಸಹ ಕರೆಯಲಾರಂಭಿಸುತ್ತಾರೆ. ಇದು ಬ್ರಹ್ಮಾಂಡ ಪುರಾಣದಲ್ಲಿ ಬರುವ ಕಥೆ.

ಚಂದ್ರನನ್ನು ಇಷ್ಟಪಡದ ಜೀವಿ ಇದ್ದಿರಲಿಕ್ಕಿಲ್ಲ. ಜಗತ್ತಿನ ಪ್ರತಿಯೊಂದು ಜೀವಿಯ ಮೇಲೂ ಚಂದ್ರ ಅಗಾಧವಾದ ಪ್ರಭಾವವನ್ನು ಬೀರುತ್ತಾನೆ. ಚಿಕ್ಕ ಮಗುವನ್ನು ಸಮಾಧಾನ ಪಡಿಸಲೂ ಉಪಯೋಗಿಸುವುದು ಚಂದ್ರನನ್ನೇ. ಚಂದಮಾಮಾ ಎಂದು ಸಂಬಂಧವಾಚಕನಾಗಿ ಕರೆಸಿಕೊಳ್ಳುವ ಈತ ಮನಸ್ಸಿನ ಮೇಲೆ ಪರಿಣಾಮ ಬೀರುವವನು. ಸಾಂದ್ರ ಬೆಳಕನ್ನು ಕರುಣಿಸುವ ಚಂದ್ರ ಜ್ಯೋತಿಷ್ಯದಲ್ಲೂ ಸಹ ಮನುಷ್ಯನ ಹುಟ್ಟಿನ ರಾಶಿಯನ್ನು ನಿರ್ಧರಿಸುತ್ತಾನೆ.

ಚಂದ್ರನು ಶಿವನ ತಲೆಯಲ್ಲಿ ಕೆಲವೊಮ್ಮೆ ಬಲಕ್ಕೂ ಕೆಲವೊಮ್ಮೆ ಎಡಕ್ಕೂ ಇರುವುದು ಗಮನಕ್ಕೆ ಬರುತ್ತದೆ. ಈತನನ್ನು ಅಗ್ನಿಯ ಸ್ಥಾನದಲ್ಲಿ ವೇದ ನಮಗೆ ದೊರಕಿಸಿಕೊಡುತ್ತದೆ. ಇಲ್ಲಿ ಅಗ್ನಿ ಎನ್ನುವುದು ಶಕ್ತಿಗೆ.  ಇಂತಹ ಶಕ್ತಿಯ ಪರಿಭ್ರಮಣವನ್ನು ಆ ಕಾಲದಲ್ಲಿಯೇ ಹೇಳಲಾಗಿತ್ತು. ಯಾವ ಇಂದಿನ ಸಾಧನವೂ ಇಲ್ಲದೇ ಅಂದು ಚಂದ್ರ ಚಲನಶೀಲ ಮತ್ತು ದ್ಯಾವಾ ಪೃಥಿವಿಗಳಿಗೆ ಆತನ ಸಂಪರ್ಕವನ್ನು ಹೇಳಲಾಗಿರುವುದು ಆಶ್ಚರ್ಯವನ್ನು ತರುತ್ತದೆ.

ಸ ಚಂದ್ರೋ ವಿಪ್ರಮರ್ತ್ಯೋ ಮಹೋ ವ್ರಾಧ ನ್ತಮೋ ದಿವಿ |
ಪ್ರಪ್ರೇತ್ತೇ ಅಗ್ನೇ ವನುಷಃ ಸ್ಯಾಮ || ಇದು ಋಗ್ವೇದ ಒಂದನೇ ಮಂಡಲದ ಇಪ್ಪತ್ತೊಂದನೇ ಸೂಕ್ತ.
ಮೇಧಾವಿಯಾದ ಎಲೈ ಅಗ್ನಿಯೇ, ಯಾವ ಮಾನವನು ನಿನ್ನನ್ನು ಯಜ್ಞಾದಿಗಳಿಂದ ಪೂಜಿಸುತ್ತಾನೆಯೋ ಆ ಮಾನವನು ಸ್ವರ್ಗಲೋಕದಲ್ಲಿ ಮನೋಹ್ಲಾದಕರ ಚಂದ್ರನ ಸ್ಥಾನವನ್ನು ಪಡೆಯುತ್ತಾನೆ. ದೇವತೆಗಳಿಗಿಂತಲೂ ಹೆಚ್ಚಿನ ಸ್ಥಾನ ಹೊಂದುತ್ತಾನೆ. ಆದುದರಿಂದ ಅಗ್ನಿಯೇ ನಾವೂ ಸಹ ನಿನ್ನನ್ನು ಆರಾಧಿಸುತ್ತೇವೆ ನೀನೂ ನಮ್ಮನ್ನು ಅದೇ ರೀತಿ ಅನುಗ್ರಹಿಸು ಎನ್ನಲಾಗಿದೆ. ಇಲ್ಲಿ ಚಂದ್ರನನ್ನು ಅಗ್ನಿಯನ್ನಾಗಿ ಹೇಳಲಾಗಿದೆ.

‘ಚಂದ್ರಃ’ ನನ್ನು ಎರಡು ರೀತಿಯಲ್ಲಿ ಅರ್ಥೈಸಲಾಗಿದೆ. ಒಂದು ಅಗ್ನಿಯನ್ನು ಆರಾಧಿಸುವವನು“ಸರ್ವೇಷಾಂ ಆಹ್ಲಾದಕಃ ಚಂದ್ರಃ ಎಂದಾಗಿ ಎಲ್ಲರಿಗೂ ಆಹ್ಲಾದವನ್ನುಂಟು ಮಾಡುವ ಚಂದ್ರನ ಕಾಂತಿಯಂತೆ ಕಾಂತಿಯನ್ನುಂಟುಮಾಡುವವನು. ಮತ್ತೊಂದು ಚಂದ್ರಸ್ಚಂದತೇಃ ಚಂದಃ ಕಾಂತಿಕರ್ಮಣಃ ಕಾಂತಿಯುತವಾದುದೂ ನೋಡಲು ರಮ್ಯವಾದುದು ಎಂಬ ಅರ್ಥವನ್ನು ಕೊಡುತ್ತದೆ ಎನ್ನುವುದು ನಿರುಕ್ತಕಾರರ ಅಭಿಮತ. ಚಂದ್ ಎನ್ನುವ ಧಾತುವಿನಿಂದ ಚಂದ್ರ ಪದ ಹುಟ್ಟಿದೆ ಎಂದು ಹೇಳಿ ಅಗ್ನಿಯ ಆರಾಧಕನು ಕಾಂತಿಯುಕ್ತನಾಗುತ್ತಾನೆ. ಹಾಗೂ ಯಜಮಾನಾನಾಂ ಚಂದ್ರತ್ವ ಪ್ರಾಪ್ತಿಃ ಎನ್ನುವುದು ಛಾಂದೋಗ್ಯ ಉಪನಿಷತ್ತಿನ ಮಾತು. ಯಜಮಾನನಿಗೆ ಚಂದ್ರತ್ವ ಪ್ರಾಪ್ತಿಯಾಗುತ್ತದೆ ಎನ್ನುತ್ತದೆ.

ಸಂಚಕ್ಷ್ಯಾ ಮರುತಶ್ಚಂದ್ರವರ್ಣಾ ಅಚ್ಚಾಂತ ಮೇ ಛಧಯಾಥಾ ಚ ನೂನಂ || ಇದು ಒಂದನೇ ಮಂಡಲದ ಇಪ್ಪತ್ತಮೂರನೇ ಸೂಕ್ತದಲ್ಲಿ ಬರುವ ಋಕ್ಕು. ಇಲ್ಲಿ ಮರುತಶ್ಚಂದ್ರವರ್ಣಾಃ ಎಂದು ಬಂದಿದೆ, ಚಿನ್ನದಂತೆ ಅತ್ಯಂತ ರಮಣೀಯವಾದ ಬಣ್ಣವನ್ನು ಹೊಂದಿರುವವನು ಎಂದು ಅರ್ಥೈಸಲಾಗಿದೆ.

ಸ ಚಿತ್ರ ಚಿತ್ರಂ ಚಿತಯಂತಮಸ್ಮೇ ಚಿತ್ರಕ್ಷತ್ರ ಚಿತ್ರತಮಂ ವಯೋಧಾಂ |
ಚಂದ್ರಂ ರಯಿಂ ಪುರುವೀರಂ ಬೃಹಂತಂ ಚಂದ್ರ ಚಂದ್ರಾಭಿರ್ಗೃಣತೇ ಯುವಸ್ವ || ಇದು ಋಗ್ವೇದದ ಆರನೇ ಮಂಡಲದ ಋಕ್ಕು.
ಆಕರ್ಷಕನೂ, ವಿಚಿತ್ರವಾದ ಬಲವುಳ್ಳವನೂ, ಆಹ್ಲಾದಕರ ರೂಪವುಳ್ಳವನೂ ಆದ ಎಲೈ ಅಗ್ನಿಯೇ ಪ್ರಸಿದ್ಧನಾದ ನೀನು ಆಹ್ಲಾದವನ್ನುಂಟುಮಾಡುವ ಸ್ತುತಿಗಳಿಂದ ನಿನ್ನನ್ನು ಸ್ತುತಿಸುವ ನಮಗೆಲ್ಲಾ ಆಕರ್ಷಕವಾದುದೂ, ನಮ್ಮ ಕರ್ತವ್ಯವನ್ನು ಜ್ಞಾಪಿಸತಕ್ಕದ್ದೂ, ಆಶ್ಚರ್ಯಕಾರಕವಾದುದೂ, ಅನ್ನವನ್ನು ಕೊಡತಕ್ಕದ್ದೂ, ವೀರ ಪುತ್ರಾದಿಗಳಿಂದ ಕೂಡಿದುದೂ, ಪ್ರಭೂತವಾದುದೂ ಆದ ಸಂಪತ್ತನ್ನು ವಿಭಾಗಮಾಡಿ ಕೊಡು. ಎಂದು ಈ ಸೂಕ್ತ ದೃಷ್ಟಾರ ಋಷಿ ಹೇಳುತ್ತಾನೆ.

ಚಂದ್ರಮಾ ಅಪ್ಸ್ವನ್ತತರಾ ಸುಪರ್ಣೋ ಧಾವತೇ ದಿವಿ|
ಇದು ಒಂದನೇ ಮಂಡಲದ ೧೦೫ನೇ ಸೂಕ್ತದ ಋಕ್ಕು. ಅಂತರಿಕ್ಷದಲ್ಲಿರುವ ಮಂಜಿನಿಂದಾವೃತವಾದ(ಉದಕಮಯ)ಮಂಡಲದ ಮಧ್ಯದಲ್ಲಿ ಮನೋಹರವಾಗಿ ಸಂಚರಿಸುತ್ತಿರುವ ಚಂದ್ರನು ಒಂದೇ ವೇಗದಲ್ಲಿ(ನಿರ್ದಿಷ್ಟವಾದ ವೇಗದಲ್ಲಿ) ಸ್ವರ್ಗಲೋಕದಲ್ಲಿ ಸಂಚರಿಸುತ್ತಿರುತ್ತಾನೆ. ಹೊಂಬಣ್ಣದ ಅಂಚಿನೊಂದಿಗೆ ಪ್ರಕಾಶಮಾನವಾದ ಎಲೈ ಚಂದ್ರಕಿರಣಗಳೇ ನಾನು ಬಾವಿಯಲ್ಲಿ ಬಿದ್ದಿರುವುದರಿಂದ ನಿಮ್ಮ ಪ್ರಕಾಶ ಯಾವುದು ಎನ್ನುವುದನ್ನು ನಾನು ತಿಳಿದುಕೊಳ್ಳಲು ಅಶಕ್ತನಾಗಿದ್ದೇನೆ. ನನ್ನ ಕಣ್ಣುಗಳು ಅದನ್ನು ಅರಿಯಲಾರವು. ಎಲೈ ದ್ಯಾವಾಪೃಥಿವಿಗಳೇ ನನ್ನನ್ನು ಈ ಬಾವಿಯಿಂದ ಮೇಲಕ್ಕೆತ್ತಿ ನನ್ನನ್ನು ಪಾರುಮಾಡಿ ಎಂದು ತ್ರಿತನು ಬೇಡಿಕೊಳ್ಳುತ್ತಾನೆ. 

ತಮುಕ್ಷಮಾಣಂ ರಜಸಿ ಸ್ವ ಆ ದಮೇ ಚಂದ್ರಮಿವ ಸುರುಚಂ ಹ್ವಾರ ಆ ದಧುಃ |
ಇದು ಎರಡನೇ ಮಂಡಲದ ಎರಡನೇ ಸೂಕ್ತ. ಚಿನ್ನದಂತೆ ಹೊಳೆಯುವ ಕಾಂತಿಯುಳ್ಳವನೂ, ಅಂತರಿಕ್ಷದಲ್ಲಿ ಸಂಚರಿಸುವವನೂ, ತನ್ನ ಜ್ವಾಲಾರೂಪದ ಅವಯವಗಳಿಂದ ಚೈತನ್ಯವನ್ನುಂಟು ಮಾಡುವವನೂ, ಉದಕದಂತೆ ರಕ್ಷಕನೂ, ದ್ಯಾವಾ ಪೃಥಿವಿಗಳೆರಡನ್ನೂ ವ್ಯಾಪಿಸಿರುವವನೂ, ಅಂತರಿಕ್ಷದಲ್ಲಿ ಎಲ್ಲೆಡೆ ಮಳೆ ಸುರಿಸುವವನೂ, ಪೂಜ್ಯನೂ ಆದ ಚಂದ್ರನಂತಿರುವ ಅಗ್ನಿಯನ್ನು ಸ್ವಕೀಯವೂ ನಿರ್ಜನವೂ ಆದ ಯಾಗ ಗೃಹದಲ್ಲಿ ಸ್ಥಾಪಿಸುತ್ತಾರೆ.
ಚಂದ್ರಮಾ ಮನಸೋ ಜಾತಶ್ಚಕ್ಷೋ ಸೂರ್ಯೋ ಅಜಾಯತ |
ಮುಖಾದಿಂದ್ರಶ್ಚಾಗ್ನಿಶ್ಚ ಪ್ರಾಣಾದ್ವಾಯುರಜಾಯತ || ಋಗ್ವೇದ ೧೦ : ೯೦
ಈ ವಿರಾಟ್ ಪುರುಷನ ಮನಸ್ಸಿನಿಂದ ಚಂದ್ರನೂ, ಕಣ್ಣಿನಿಂದ ಸೂರ್ಯನೂ, ಮುಖದಿಂದ ಇಂದ್ರ ಮತ್ತು ಅಗ್ನಿಯರೂ, ಪ್ರಾಣದಿಂದ ವಾಯುವೂ ಹುಟ್ಟಿದನು. ಚಂದ್ರಮಾಶ್ಚಾಯನ್ ದ್ರಮತಿ ಎನ್ನುವುದು ನಿರುಕ್ತದ ಮಾತು. ಚಂದ್ರ ಅವನ ಪಥದಲ್ಲಿ ಪ್ರಕಾಶಮಾನನಾಗಿ ಸುತ್ತುತ್ತಾನಂತೆ ಅದಕ್ಕಾಗಿಯೇ ಆತನಿಗೆ ಚಂದ್ರ ಎಂದು ಕರೆಯಲಾಗುತ್ತದೆ. ಭೂಮಿ ಮತ್ತು ಆಕಾಶಗಳೆರಡರಲ್ಲೂ ಪ್ರಕಾಶವನ್ನು ಕೊಡುವವನು. ಮನಸ್ಸಿಗೆ ಅತ್ಯಂತ ಮುದವನ್ನು ಕೊಡುವವನು ಎಂದು ಹೇಳುವುದರೊಂದಿಗೆ ಚಂದ್ರ ಮನಸ್ಸಿನಂತೆ ಮೃದು ಎನ್ನುವುದನ್ನೂ ಸೂಚಿಸಲಾಗಿದೆ. ಚಂದ್ರಮಾ ಮನಸೋ ಜಾತಃ ವಿರಾಟ್ ಪುರುಷನ ಮನಸ್ಸಿನಿಂದಲೇ ಜನಿಸಿದವನು ಚಂದ್ರ.

ಪರಮ ಪುರುಷನ ಕಣ್ಣುಗಳಿಂದ ಸೂರ್ಯನ ಜನವಾಯಿತು ಎನ್ನುವಲ್ಲಿ ಕಣ್ಣಿಗೂ ಬೆಳಕಿಗೂ ಸಂಬಂಧವನ್ನು ಚಕ್ಷೋಃ ಸೂರ್ಯೋ ಅಜಾಯತ ಎನ್ನಲಾಗಿದ್ದು, ಸೂರ್ಯನೇ ಜಗತ್ತಿನ ಜೀವಿಗಳಿಗೆ ಕಾರಣನು ಎನ್ನುವುದು ಸೂಕ್ಷ್ಮವಾದ ಅರ್ಥ. ಮನಸ್ಸು ಸದಾ ಪ್ರಶಾಂತವಾದ ಆಹ್ಲಾದವಾದ ವಾತಾವರಣ ಇಷ್ಟ ಪಡುತ್ತದೆ ಎನ್ನುವುದನ್ನೇ ಚಂದ್ರಮಾ ಮನಸೋ ಜಾತಃ ಎನ್ನಲಾಗಿದೆ. ಜೀವಿಗಳ ದೇಹದ ಒಳಗಿರುವ ವಾಯುವಿಗೆ ಪ್ರಾಣ ಎಂದು ಕರೆಯುವುದಾದರೆದೇಹದಿಂದ ಹೊರತಾಗಿ ಪ್ರಕೃತಿಯಲ್ಲಿ ಇರುವ ವಾಯುವು ವಾಯು ಎಂದು ಕರೆಯಲಾಗುತ್ತದೆ. ಅಂದರೆ ವಾಯುವಿನ ಗುರುತು ಹಚ್ಚುವುದೇ ಪ್ರಾಣ. ಹೀಗೇ ಪ್ರಕೃತಿ ಮತ್ತು ಜೀವಿಗಳ ಅವಿನಾಭಾವ ಸಂಬಂಧವನ್ನು ಹೇಳಲಾಗಿದೆ.

#ಚಂದ್ರಮಾ_ಅಪ್ಸ್ವನ್ತತರಾ 
Sadyojatha 

February 12, 2022

ಸಂಸ್ಕೃತ ವರ್ಣಮಾಲೆಯ ಎಲ್ಲಾ 33 ವ್ಯಂಜನಾಕ್ಷರಗಳನ್ನೂ ಬಳಸಿದ ಶ್ಲೋಕ

*ವಿಶ್ವದಲ್ಲೇ ಅತ್ಯಂತ ಸಮೃದ್ಧ ಭಾಷೆ ಸಂಸ್ಕೃತ*

ಇಂಗ್ಲೀಷ್ ಭಾಷೆಯಲ್ಲಿ ಒಂದು ಪ್ರಸಿದ್ಧ ವಾಕ್ಯ ಹೀಗಿದೆ :
*THE QUICK BROWN FOX JUMPS OVER A LAZY DOG*
ಈ ವಾಕ್ಯವು ಇಂಗ್ಲೀಷ್ ಭಾಷೆಯ ಎಲ್ಲಾ ಅಕ್ಷರಗಳನ್ನೂ ಒಳಗೊಂಡಿದೆ. ಇಂಗ್ಲೀಷ್ ಭಾಷೆಯಲ್ಲಿರುವುದು 26 ಅಕ್ಷರಗಳು ಮಾತ್ರ. ಆದರೆ, ಈಮೇಲಿನ ವಾಕ್ಯದಲ್ಲಿ ಒಟ್ಟು 33 ಅಕ್ಷರಗಳನ್ನು ಬಳಸಲಾಗಿದೆ. ಅಂದರೆ, ನಾಲ್ಕು ಬಾರಿ *O* ಮತ್ತು *A* *E* *U* *R* ಅಕ್ಷರಗಳನ್ನು ತಲಾ ಎರಡು ಬಾರಿ ಬಳಸಲಾಗಿದೆ. ಇಷ್ಟೇ ಅಲ್ಲ, ಈ ವಾಕ್ಯದಲ್ಲಿ ಅಕ್ಷರಗಳನ್ನು ಕ್ರಮಶಃ A ಯಿಂದ Z ವರೆಗೆ ಬಳಸಲಿಲ್ಲ. ವಾಕ್ಯವು T ಯಿಂದ ಆರಂಭಗೊಂಡು G ಯಲ್ಲಿ ಕೊನೆಗೊಳ್ಳುತ್ತದೆ.
ಈಗ ಸಂಸ್ಕೃತದ ಈ ಕೆಳಗಿನ ಶ್ಲೋಕವನ್ನು ನೋಡಿ..

*क:खगीघाङ्चिच्छौजाझाञ्ज्ञोटौठीडढण:।*
*तथोदधीन पफर्बाभीर्मयोरिल्वाशिषां सह॥*

*(ಕಃಖಗೀಘಾಙ್-ಚಿಚ್ಛೌಜಾಝಾಞ್-ಜ್ಞೋಟೌಠೀಡಢಣಃ*
*ತಥೋದಧೀನ ಪಫರ್ಬಾಭೀರ್ಮಯೋರಿಲ್ವಾಶಿಷಾಂ ಸಹ)*

ಬಹುಶಃ ಈ ಶ್ಲೋಕವನ್ನು ಉಚ್ಚರಿಸಲು ಕಷ್ಟವಾಗಬಹುದು. ಆದರೆ, ಇದು ಅರ್ಥಬದ್ಧವಾದ ಒಂದು ಶ್ಲೋಕ. ಮೊದಲು ಈ ಶ್ಲೋಕವನ್ನು ರಚಿಸಿದ ಕವಿಗೆ ಒಂದು ದೀರ್ಘ ನಮಸ್ಕಾರ.

ಅರ್ಥ – ಪಕ್ಷಿಪ್ರೇಮಿ ಎನಿಸಿಕೊಂಡ, ಶುದ್ಧಬುದ್ಧಿಯ, ಇತರರ ಬಲವನ್ನು ಅಪಹರಿಸುವುದರಲ್ಲಿ ಪಾರಂಗತನೂ, ಶತ್ರುಗಳ ಸಂಹಾರದಲ್ಲಿ ಅಗ್ರಣಿಯೂ, ನಿಶ್ಚಲ ಮನಸ್ಸನ್ನು ಹೊಂದಿರುವವನೂ ಮತ್ತು ಭಯವೇ ಇಲ್ಲದವನೂ ಹಾಗೂ ಮಹಾಸಾಗರವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದವನು ಯಾರು ? ಅವನೇ *ಮಯ* ಎಂಬ ಹೆಸರಿನ ರಾಜ. ಇವನಿಗೆ ಶತ್ರುಗಳ ಆಶೀರ್ವಾದವೂ ಲಭಿಸಿದೆ ಎಂದರೆ, ಅವನ ಪರಾಕ್ರಮ ಎಷ್ಟಿರಬಹುದು..?

ಈ ಶ್ಲೋಕದಲ್ಲಿ ಸಂಸ್ಕೃತ ವರ್ಣಮಾಲೆಯ ಎಲ್ಲಾ 33 ವ್ಯಂಜನಾಕ್ಷರಗಳೂ ಇವೆ. ಅದೂ ಕ್ರಮಬದ್ಧವಾಗಿ. ಯಾವುದೇ ಅಕ್ಷರವು ಪುನರಾವರ್ತನೆಗೊಂಡಿಲ್ಲ. ಇದು ಸಂಸ್ಕೃತದಲ್ಲಿ ಮಾತ್ರವೇ ಸಾಧ್ಯ. ವಿಶ್ವದ ಯಾವ ಭಾಷೆಯಲ್ಲೂ ಇಂತಹ ರಚನೆ ಇದುವರೆಗೆ ಕಂಡುಬಂದಿಲ್ಲ.

February 10, 2022

ಯಾಃ ಫಲಿನೀರ್ಯಾ

ಯಾಃ ಫಲಿನೀರ್ಯಾ ಅಫಲಾ ಅಪುಷ್ಪಾ . . . .

ಅಥರ್ವನ್, ನಲ್ಲಿರುವ ಅಥರ್ ಎನ್ನುವ ಶಬ್ದ ಅಗ್ನಿಯನ್ನು ಕುರಿತಾದದ್ದು. ಸೋಮವನ್ನು ಅಥವಾ ಸೋಮಯಾಗವನ್ನು ಮಾಡುವ ಪುರೋಹಿತನನ್ನು ಅಥರ್ವನ್ ಎಂದು ಕರೆಯುವ ರೂಢಿ ಇದೆ. ಬ್ರಹ್ಮ ವಿದ್ಯೆಯನ್ನು ಮೊದಲು ಕೊಟ್ಟವನು. ಬ್ರಹ್ಮನ ಹಿರಿಯ ಮಗ ಅಥರ್ವ. ಇಲ್ಲಿ ಅಥರ್ವಾಣ ಎನ್ನುವುದಾಗಿ ನೋಡಿದರೆ ಅದು ಶಿವನಿಗೆ ಇರುವ ಹೆಸರು. ಅದೇನೇ ಇರಲಿ ಇಲ್ಲಿ ನಾನು ಅಥರ್ವ ಮತ್ತು ಅಥರ್ವಾಣನ ಕುರಿತಾಗಿ ಹೇಳುತ್ತಿಲ್ಲ ಬದಲಾಗಿ ಭಿಷಗಾಥರ್ವಾಣ ಓಷಧೀ ಸ್ತುತಿಯ ಕುರಿತಾಗಿ ಹೇಳಲು ಬಯಸುವೆ.

ಯಾಃ ಫಲಿನೀರ್ಯಾ ಅಫಲಾ ಅಪುಷ್ಪಾ ಯಾಶ್ಚ ಪುಷ್ಪಿಣೀಃ |
ಬೃಹಸ್ಪತಿಪ್ರಸೂತಾಸ್ತಾ ನೋ ಮುಂಚಂತ್ವಂ ಹಸಃ || ಋಗ್ವೇದ ಹತ್ತನೇ ಮಂಡಲದಲ್ಲಿ ಬರುತ್ತದೆ.

ಈ ಓಷಧೀಯ ಸಸ್ಯಗಳಲ್ಲಿ ಬೇರೆ ಬೇರೆ ಜಾತಿಯ ಪ್ರಸಿದ್ಧ ಸಸ್ಯಗಳಿವೆ. ಬ್ರಹ್ಮನಿಂದ ಸೃಷ್ಟಿಸಲ್ಪಟ್ಟ ಈ ಸಸ್ಯಗಳಲ್ಲಿ ಕೆಲವು ಫಲಗಳನ್ನು (ಹಣ್ಣನ್ನು)ಕೊಡುವಂತವುಗಳು ಇನ್ನು ಕೆಲವು ಹಣ್ಣನ್ನು ಕೊಡುವುದಿಲ್ಲ, ಇನ್ನು ಕೆಲವು ಹೂವು ಕೊಡುತ್ತವೆ ಮತ್ತೆ ಕೆಲವು ಹೂವು ಕೊಡುವುದಿಲ್ಲ. ಆದರೆ ಇವೆಲ್ಲವೂ ಬೃಹಸ್ಪತಿಯ ಅನುಗ್ರಹಕ್ಕೆ ಪಾತ್ರವಾಗುವುದರಿಂದ ನಮಗೆ ಒದಗಿರುವ ರೋಗಗಳನ್ನೆಲ್ಲಾ ನಿನ್ನ ಔಷಧೀಯ ಗುಣಗಳಿಂದ ಪಾರು ಮಾಡು ಎನ್ನುವುದು ಈ ಋಕ್ಕಿನ ಅಭಿಪ್ರಾಯ.
ಅಂದರೆ ’ಫಲಿನೀರ್ಯಾ ಅಫಲಾ ಅಪುಷ್ಪಾ ಯಾಶ್ಚ ಪುಷ್ಪಿಣೀಃ’ ಎನ್ನುವಲ್ಲಿ ಅದು ಫಲವುಳ್ಳದ್ದಾಗಿರಲೀ ಅಥವಾ ಫಲಕೊಡದೇ ಅವುಗಳ ಬಳ್ಳಿ ಮತ್ತು ತೊಗಟೆಗಳಿಂದಾಗಲೀ, ಇನ್ನು ಕೆಲವು ಹೂವು ಬಿಡಲಿ ಬಿಡದೇ ಇರಲಿ ಅವೆಲ್ಲವೂ ಸಹ ರೋಗ ನಿರೋಧಕಗಳು ಎನ್ನುವುದು ಅಥರ್ವಾಣನ ನಿಲುವು.

ಇನ್ನು ಇದೇ ಮಂತ್ರ ಯಜುರ್ವೇದದ ತೈತ್ತಿರೀಯ ಸಂಹಿತೆಯ ೪ : ೨ : ೬ ರಲ್ಲಿ ಬಂದಿದ್ದು ಅಲ್ಲಿ ಫಲಯುಕ್ತವಾಗಿರುವ ಅಥವಾ ಫಲರಹಿತವಾದ ಮತ್ತು ಯಾವುದು ಹೂವು ಬಿಡುವಂತವುಗಳೋ ಅಥವಾ ಹೂವು ಬಿಡದೇ ಇರುವಂತಹ ಯಾವ ಓಷಧಿಗಳು ಇವೆಯೋ ಅವೆಲ್ಲಾ ಬೃಹಸ್ಪತಿಯಿಂದ ಜನ್ಮ ಪಡೆದಿವೆ. ಇವುಗಲೆಲ್ಲ ನಮ್ಮಿಂದ ಹುಟ್ಟಿದವಲ್ಲ ಆದರೆ ನಮಗೆ ಯಾವುದೋ ಪಾಪದ ಫಲವಾಗಿ ಬಂದ ರೋಗಗಳನ್ನು ಗುಣಪಡಿಸಲಿ ಎನ್ನುವ ಕೋರಿಕೆ ಕಂಡು ಬರುತ್ತದೆ.

ಓಷಧೀ ಎನ್ನುವುದೇ ’ದೋಷಂ ನಾಶಯತಿ’ ಎಂದು. ಅಂದರೆ ನಮ್ಮ ದೈಹಿಕ ಮತ್ತ ಮಾನಸಿಕ ದೋಷಗಳನ್ನು ಸರಿಪಡಿಸುತ್ತದೆ ಎಂದು.
ಯಾ ಓಷಧೀಃ ಪೂರ್ವಾ ಜಾತಾ ದೇವೇಭ್ಯಸ್ತ್ರಿಯುಗಂ ಪುರಾ |
ಮನೈ ನು ಬಭ್ರೂಣಾಮಹಂ ಶತಂ ಧಾಮಾನಿ ಸಪ್ತ ಚ ||
ಇಲ್ಲಿ ಗಮನಿಸಬೇಕಾದ ಅಂಶ ಅಂದರೆ ಮೊದಲನೆಯದಾಗಿ ಮೂರು ಯುಗ ಎನ್ನುವುದು ಇಲ್ಲಿ ಯುಗ ಎನ್ನುವುದು ಕೃತ ತ್ರೇತಾ ಮತ್ತು ದ್ವಾಪರ ಎನ್ನುವುದಕ್ಕಿಂತ ವಸಂತ, ವರ್ಷ ಮತ್ತು ಶರದೃತು ಎಂದು ತೆಗೆದು ಈ ಮೂರು ಋತುಗಳ ಹಿಂದೆ ಉತ್ಪನ್ನವಾದ ಮತ್ತು ಅತ್ಯಂತ ಪ್ರಾಚೀನವಾದ ಯಾವ ಔಷಧಯುಕ್ತ ಗುಣಗಳಿಂದ ಇರುವ ಯಾವ ಸಸ್ಯಗಳಿವೆಯೋ ಅವು ಹೊಂಬಣ್ಣದಿಂದ ಕಂಗೊಳಿಸುವ ಸೋಮದಂತಿದ್ದವು ಎನ್ನುವುದಾದರೆ, ಇನ್ನೊಂದು ಅರ್ಥ ದೇವತೆಗಳ ಸೃಷ್ಟಿಗೂ ಪೂರ್ವದಲ್ಲಿ ಮೂರು ಯುಗಗಳ ಮೊದಲು ಈ ಓಷಧಿಗಳು ಹುಟ್ಟಿದವು ಎನ್ನಬಹುದಾಗಿದೆ. ಇನ್ನೊಂದು ವಿಷಯ ಇಂತಹ ಸೋಮಗಳಿಂದ ನೂರ ಏಳು ವಿಧದ ಔಷದಗಳನ್ನು ತಯಾರಿಸ ಬಹುದು ಎನ್ನುವುದು. ಅಂದರೆ ಆಕಾಲಕ್ಕಾಗಲೇ ಸುಮಾರು ನೂರ ಏಳು ವಿಧದ ವಿವಿಧ ಔಷಧಗಳು ಈ ಭೂಮಿಯಲ್ಲಿ ತಯಾರಾಗುತ್ತಿದ್ದಿರಬಹುದು. ಅಥವಾ ನೂರು ಎನ್ನುವುದಕ್ಕೆ ಅನೇಕ ಎನ್ನುವ ಅರ್ಥಕೊಟ್ಟು ಆಯ್ದ ಸಸ್ಯಗಳಿಂದ ಬೇರೆ ಬೇರೆ ಉಪಯೋಗವನ್ನು ಪಡೆದುಕೊಳ್ಳಲಾಗುತ್ತಿತ್ತು ಎನ್ನುವುದು ತಿಳಿಯುತ್ತ್ತದೆ. ಇಲ್ಲಿ ಇನ್ನೊಂದು ರೀತಿಯಲ್ಲಿ ಹೇಳಿದರೆ ಮನುಷ್ಯನ ಶರೀರದಲ್ಲಿರುವ ಏಳುನೂರು ಸಂಧಿಸ್ಥಳಗಳಲ್ಲಿ ಚಿಕಿತ್ಸೆಯನ್ನು ಕೊಡುವುದನ್ನು ಸೂಚಿಸಲೂ ಬಹುದು. ಅಂದರೆ ಅಂದು ಆ ಕಾಲದಲ್ಲಿ ಅಷ್ಟು ಸ್ಥಳಗಳಲ್ಲಿ ಚಿಕಿತ್ಸೆ ಕೊಡಬಹುದು ಎನ್ನುವುದನ್ನು ಕಂಡುಕೊಂಡಿದ್ದರು.

ಮನೈ ನು ಬಭ್ರೂಣಾಮಹಂ ಶತಂ ಧಾಮಾನಿ ಸಪ್ತ ಚ ಎನ್ನುವಲ್ಲಿನ ಬಭ್ರೂಣ ಬೂದು ಬಣ್ಣ ಅಥವಾ ಕೆಂಬಣ್ಣವನ್ನು ಸೂಚಿಸುತ್ತವೆ. ಸೋಮಲತೆಯ ರೀತಿಯಲ್ಲೆ ಈ ಬಣ್ಣದ ಸಸ್ಯಗಳು ಔಷಧಯುಕ್ತವಾಗಿದ್ದು ಮಾನವರ ರೋಗ ರುಜಿನಗಳನ್ನು ಓಡಿಸಿ ನೂರಾರು ವರ್ಷ ದೀರ್ಘಾಯುಷಿಗಳಾಗಿ ಬದುಕುವ ಚೈತನ್ಯವನ್ನು ಕೊಡುತ್ತವೆ.
ಅಶ್ವತ್ಥೇ ವೋ ನಿಷದನಂ ಪರ್ಣೇ ವೋ ವಸತಿಷ್ಕೃತಾ ಎಂದು ಔಷಧಗಳಿಗೆಲ್ಲಾ ರಾಜನಂತಿರುವುದು ಅಶ್ವತ್ಥ ಮತ್ತು ಪಲಾಶ ಎನ್ನಲಾಗಿದೆ. ಓಷಧೀ ದೇವತೆಗಳು ಇರುವುದೇ ಈ ಎರಡು ವೃಕ್ಷಗಳಲ್ಲಿ ಎನ್ನುತ್ತಾನೆ ಅಥರ್ವಾನ. ವೈದೈ ಶಾಸ್ತ್ರ ತಿಳಿದ ವೈದ್ಯನೊಬ್ಬ ನಿನ್ನನ್ನು ಆಶ್ರಯಿಸಿದರೆ ಆತ ಎಲ್ಲಾ ಕಾಯಿಲೆಗಳನ್ನು ಗುಣ ಪಡಿಸಬಹುದು ಮತ್ತು ಹೇರಳವಾದ ಗೋ ಸಂಪತ್ತನ್ನು ಹೊಂದಿ ಆತ ನಿನಗೂ ಸಹ ಗೋವನ್ನು ಕೊಡಬಹುದು ಎಂದು ಹೇಳಿದ್ದಾನೆ. ಈ ಪಲಾಶ ಎಂದರೆ ಮುತ್ತುಗ ಎಂದು ಕನ್ನಡದಲ್ಲಿ ಕರೆಯಲಾಗುತ್ತದೆ. ಈ ಎರಡೂ ವೃಕ್ಷಗಳು ನಮ್ಮ ಊರಿನಲ್ಲಿ ಇರಲೇಬೇಕು ಎನ್ನುತ್ತಾನೆ. ಅಂದರೆ ಋಗ್ವೇದದ ಕಾಲ ಎನ್ನುವ ಸಮಯದಲ್ಲಿಯೇ ಈ ಭೂಮಿಯಲ್ಲಿ ಕಾಯಿಲೆಗೆ ಔಷಧವನ್ನು ಕಂಡುಕೊಂಡಾಗಿತ್ತು. ಮತ್ತು ಈ ಔಷಧಗಳಿಂದ ಗುಣಮುಖರಾಗುತ್ತಿದ್ದರು ಎನ್ನುವುದು ಸಹ ಬೇರೆ ಬೇರೆ ಸೂಕ್ತಗಳಿಂದ ತಿಳಿಯುತ್ತದೆ.

ತೈತ್ತಿರೀಯ ಸಂಹಿತೆಯ ಯಾ ಜಾತಾ ಓಷಧಯೋ ದೇವೇಭ್ಯಸ್ತ್ರಿಯುಗಂ ಪುರಾ | ಮಂದಾಮಿ ಬಭ್ರೂಣಾಮಹ ಗ್ಂ ಶತಂ ಧಾಮಾನಿ ಸಪ್ತಚ || ಎನ್ನುವ ಮಂತ್ರವನ್ನು ಗಮನಿಸಿದರೆ ಈ ಸೃಷ್ಟಿಯ ಆರಂಭದಲ್ಲಿ ನೀರಿನ ನಂತರ ಸೂರ್ಯ, ದಿಕ್ಕುಗಳ ಸೃಷ್ಟಿಯ ನಂತರ ಸಸ್ಯಗಳ ಸೃಷ್ಟಿಯಾಗುತ್ತದೆ. ಈ ಸಸ್ಯಗಳೆಂದರೆ ಓಷಧಿಗಳೂ ಸಹ. ಅಂದರೆ ಮಾನವನ ಜೀವಿತಕ್ಕೆ ಪೂರಕವಾದ ವಾತಾವರಣ ನಿರ್ಮಿಸಿ ಆನಂತರದಲ್ಲಿ ಜೀವ ಸಂಕುಲಗಳ ಸೃಷ್ಟಿಯಾಗಿದೆ. ಆದುದರಿಂದ ಈಗ ಬಂದಿರುವ ಜಾಗತಿಕ ರೋಗಕ್ಕೆ ಖಂಡಿತಾ ಔಷಧಗಳು ಸಿಗಬಹುದು ಎನ್ನುವ ಆಶಾಭಾವನೆ ಇದೆ.

#sadyojath bhat

February 1, 2022

ಕುಜದೋಷದ ನಿಜವಾದ ಮಾಹಿತಿ

ಕುಜದೋಷದ ಬಗ್ಗೆ ಮಾಹಿತಿ ನೀಡುವ ಅಗತ್ಯವು ಇಂದು ಎದ್ದು ಕಾಣುತ್ತಲಿದೆ.ಸರಿಯಾಗಿ ವಿಮರ್ಶಿಸದೆ ಮೇಲ್ನೋಟಕ್ಕೆ ಕಾಣುವ ಕುಜದೋಷವನ್ನು ಅರುಹಿ ಜನರನ್ನು ಭೀತಿಗೊಳಪಡಿಸುವ ಪ್ರವೃತ್ತಿ ಅಲ್ಲಲ್ಲಿ ಕಂಡುಬರುತ್ತಿದೆ.

ಕನ್ಯಾ-ವರರ ಜಾತಕ ಹೊಂದಾಣಿಕೆಯಲ್ಲಿ ಕುಜದೋಷವನ್ನು ಪರಿಶೀಲಿಸುವುದು ಸಂಪ್ರದಾಯ.ಜನ್ಮ ಕುಂಡಲಿಯಲ್ಲಿ ಲಗ್ನ,ಶುಕ್ರ, ಚಂದ್ರ ಸ್ಥಿತ ಸ್ಥಾನಗಳಿಂದ ೧,೨,೪,೫,೭,೮,೧೨ ನೇ ಸ್ಥಾನಗಳಲ್ಲಿ ಕುಜನು ಇದ್ದರೆ ಕುಜ ದೋಷ ಇದೆ ಎಂಬುದಾಗಿ ಮೇಲ್ನೋಟದ ತೀರ್ಮಾನಕ್ಕೆ ಬರುವುದು ಬಹುತೇಕ ಅನುಸರಿಸುವ ಕ್ರಮ .ಆದರೆ ಈ ರೀತಿಯಾಗಿ ತೀರ್ಮಾನಕ್ಕೆ ಬಂದರೂ ಅಂತಹಾ ದೋಷಗಳಿಗೆ ಅಪವಾದಗಳು ಕೂಡಾ ಇವೆ ಅಂದರೆ ಪರಿಹಾರಗಳೂ ಇವೆ ಎಂಬುದನ್ನು ಗಮನಿಸುವುದು ಅಗತ್ಯ ಇದೆ.ಕುಜದೋಷಕ್ಕೆ ೨೨ ರೀತಿಯಲ್ಲಿ ಅಪವಾದಗಳು ಇವೆ.ಆ ೨೨ ರೀತಿಯ ಪರಿಹಾರಗಳನ್ನು ಕುಂಡಲಿಯಲ್ಲಿಯೇ ಪರಿಶೀಲಿಸಬೇಕಾಗಿದೆ. ಅವುಗಳನ್ನು ಅನ್ವಯಿಸಿ ಪರಿಶೀಲನೆ ಮಾಡಿದಾಗ ಹೆಚ್ಚಿನ ಜಾತಕಗಳಲ್ಲಿ ಕುಜ ದೋಷ ಜಾತಕದಲ್ಲಿಯೇ ಪರಿಹಾರ ಆಗಿರುತ್ತದೆ.ಆ ಬಗ್ಗೆ ವಿವರಿಸುವುದು ಈ ಬರಹದ ಗುರಿ.

.[೧] ಕರ್ಕಾಟಕ ಮತ್ತು ಸಿಂಹ ಲಗ್ನ ಸಂಜಾತರಿಗೆ ಕುಜದೋಷ ಇಲ್ಲ.

[೨] ೭ ನೇ ರಾಶಿಯಲ್ಲಿರುವ ಕುಜನನ್ನು ಗುರು ನೋಡಿದಲ್ಲಿ ದೋಷ ಪರಿಹಾರ.

[೩] ಕನ್ಯಾ ಜಾತಕದಲ್ಲಿ ಜನ್ಮ ಲಗ್ನದಿಂದ ೭ ನೇ ರಾಶಿಯಲ್ಲಿ ಆ ರಾಶಿಯ ಅಧಿಪತಿ ಅಥವಾ ಯಾವುದಾದರೂ ಶುಭ ಗ್ರಹ ಇದ್ದರೆ ಸಂತಾನ ದೋಷ, ವೈಧವ್ಯ ದೋಷ, ಕುಜ ದೋಷ ಪರಿಹಾರ.

[೪] ೭ ನೇ ಸ್ಥಾನದ ಅಧಿಪತಿ ೭ ನೇ ಮನೆಯಲ್ಲಿ ಇದ್ದರೆ ಕುಜ ದೋಷ ಇಲ್ಲ.

[೫] ಕನ್ಯಾ- ವರರ ಜಾತಕಗಳಲ್ಲಿ ಸಮಾನವಾದ ಕುಜ ದೋಶ ಇದ್ದಲ್ಲಿ ಅಥವಾ ಕುಜದೋಶಕ್ಕೆ ಸಮಾನವಾದ ಪಾಪ ಗ್ರಹ ದೋಷ ಇದ್ದಲ್ಲಿ[ರವಿ,ಶನಿ,ಕೇತು,ರಾಹು, ಕುಜ-ಇವುಗಳು ಪಾಪ ಗ್ರಹರು]ಕುಜ ದೋಷ ಪರಿಹಾರ.

[೬]ಜನ್ಮ ಲಗ್ನದಿಂದ ೧,೪,೭,೮,೧೨ರಲ್ಲಿ ಶನಿ ಇದ್ದರೆ ಕುಜ ದೋಷ ಪರಿಹಾರ.

[೭]ಕನ್ಯಾ-ವರರ ಜಾತಕಗಳಲ್ಲಿ ಒಂದರಲ್ಲಿ ಕುಜದೋಶ ಇದ್ದು ಮತ್ತೊಂದರಲ್ಲಿ ೧,೪,೭,೮,೧೨ರಲ್ಲಿ ಶನಿ ಇದ್ದರೆ ಕುಜ ದೋಷ ಪರಿಹಾರ.

[೮]ಲಗ್ನದಿಂದ೨,೪,೭,೮,೧೨ರಲ್ಲಿರುವ ಕುಜನು ಗುರುವಿನೊಟ್ಟಿಗೆ ಇದ್ದರೆ ಅಥವಾ ಬುಧ,ಗುರು ಗಳಿಂದ ನೋಡಲ್ಪಟ್ಟರೆ ಕುಜದೋಷ ಪರಿಹಾರ.

[೯]ಕುಜನು ಗುರು ಅಥವಾ ಚಂದ್ರನ ಒಟ್ಟಿಗೆ ಇದ್ದರೆ ಅಥವಾ ಅವರಿಂದ ನೋಡಲ್ಪಟ್ಟರೆ ಕುಜ ದೋಷ ಪರಿಹಾರ.

[೧೦]ಮೇಷ,ವೃಶ್ಚಿಕ,ಮಕರ,ಕರ್ಕಟಕ,ಸಿಂಹ,ಧನುಸ್ಸು,ಮೀನ ಈ ರಾಶಿಗಳಲ್ಲಿ ಕುಜ ಇದ್ದರೆ ಕುಜ ದೋಷ ಇಲ್ಲ.

[೧೧]ಕುಜನು, ರವಿ, ಚಂದ್ರ,ಗುರು ನವಾಂಶದಲ್ಲಿ ಇದ್ದರೆ ಕುಜದೋಷ ಇಲ್ಲ.

[೧೨]ಕುಜನು ಕರ್ಕಾಟಕ,ಮಿಥುನ,ಕನ್ಯಾ ರಾಶಿಗಳಲ್ಲಿ ಇದ್ದರೆ ಅಥವಾ ಅಸ್ತನಾಗಿ ಇದ್ದರೆ ಶುಭಾಶುಭ ಫಲ ಇಲ್ಲವಾದ ಕಾರಣ ಕುಜ ದೋಷ ಇಲ್ಲ.

[೧೩]ಕನ್ಯಾ-ವರರ ಜಾತಕಗಳಲ್ಲಿ ಒಂದರಲ್ಲಿ ಕುಜ ದೋಷವಿದ್ದು ಮತ್ತೊಂದರಲ್ಲಿ ಅದೆ ರಾಶಿಯಲ್ಲಿ ಶನಿ,ಕುಜ,ಅಥವಾ ಯಾವುದಾದರೂ ಪಾಪಗ್ರಹ ಇದ್ದಲ್ಲಿ ಕುಜ ದೋಷ ಇಲ್ಲ.

[೧೪]ಜಾತಕದಲ್ಲಿ ಯಾವ ರಾಶಿಯಲ್ಲಿ ಕುಜನು ಇದ್ದಾನೋ ಆ ರಾಶಿಯ ಅಧಿಪತಿ ೧,೪,೭,೧೦,೫,೯ರಲ್ಲಿ ಇದ್ದರೆ ಕುಜ ದೋಷ ಪರಿಹಾರ.

[೧೫]ಮೇಷ ಲಗ್ನವಾಗಿ ಅಲ್ಲಿ ಕುಜನು ಇದ್ದರೆ,ಮಕರ ಲಗ್ನವಾಗಿ ಧನು ರಾಶಿಯಲ್ಲಿ ಕುಜನು ಇದ್ದರೆ,ಸಿಂಹ ಲಗ್ನವಾಗಿ ವೃಶ್ಚಿಕದಲ್ಲಿ ಕುಜನು ಇದ್ದರೆ,ಕರ್ಕಾಟಕ ಲಗ್ನವಾಗಿ ಮಕರದಲ್ಲಿ ಕುಜನು ಇದ್ದರೆ, ಧನುರ್ಲಗ್ನವಾಗಿ ಕರ್ಕಾಟಕದಲ್ಲಿ ಕುಜನು ಇದ್ದರೆ ಆಯಾಲಗ್ನದಲ್ಲಿ ಹುಟ್ಟಿದವರಿಗೆ ಕುಜ ದೋಷ ಇಲ್ಲ.
.

[೧೬]ಅಶ್ವಿನಿ,ಮೃಗಶಿರೆ,ಪುನರ್ವಸು,ಪುಷ್ಯ,ಆಶ್ಲೇಶಾ,ಉತ್ತರಾ,ಸ್ವಾತಿ,ಅನುರಾಧ,ಪೂರ್ವಾಷಾಢ, ಉತ್ತರಾಷಾಢ,ಶ್ರವಣ,ಉತ್ತರಾಭಾದ್ರ,ರೇವತಿ--ಈ ನಕ್ಷತ್ರದವರಿಗೆ ಕುಜದೋಷ ಇಲ್ಲ.

[೧೭]ಮಿಥುನ-ಕನ್ಯಾ ಲಗ್ನಗಳಲ್ಲಿ ಹುಟ್ಟಿದವರಿಗೆ ಕರ್ಕಟಕ-ತುಲಾ ರಾಶಿಗಳಲ್ಲಿ ಕುಜನು ಇದ್ದರೆ,ವೃಷಭ-ಸಿಂಹ ಲಗ್ನದವರಿಗೆ ಮಿಥುನ- ಕನ್ಯಾ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೧೮]ಮೇಷ-ವೃಶ್ಚಿಕ ಲಗ್ನದವರಿಗೆ ಕರ್ಕಟಕ- ಕುಂಭ ರಾಶಿಗಳಲ್ಲಿ, ಮಕರ- ಸಿಂಹ ಲಗ್ನದವರಿಗೆ ಮೇಷ- ವೃಶ್ಚಿಕ ರಾಶಿಗಳಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ.

[೧೯]ಮಕರ-ಕರ್ಕಟಕ ಲಗ್ನದವರಿಗೆ ಕರ್ಕಟಕ-ಮಕರ ರಾಶಿಗಳಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ ಮತ್ತು ಕರ್ಕಟಕ-ಮಕರ ಲಗ್ನದವರಿಗೆ ಮಕರ-ಕರ್ಕಟಕ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೨೦]ಧನು-ಮೀನ ಲಗ್ನದವರಿಗೆ ಕರ್ಕಟಕ-ತುಲಾರಾಶಿಗಳಲ್ಲಿ,ವೃಷಭ-ಸಿಂಹ ಲಗ್ನದವರಿಗೆ ಧನು-ಮೀನ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೨೧]ವೃಷಭ-ತುಲಾ ಲಗ್ನದವರಿಗೆ ಮೇಷ-ಕನ್ಯಾ ರಾಶಿಗಳಲ್ಲಿ,ವೃಶ್ಚಿಕ-ಮಿಥುನ ಲಗ್ನದವರಿಗೆ ವೃಷಭ- ತುಲಾ ರಾಶಿಗಳಲ್ಲಿ ಕುಜನು ಇದ್ದರೆ ದೋಷ ಇಲ್ಲ.

[೨೨]ಕುಂಭ-ಸಿಂಹ ಲಗ್ನದವರಿಗೆ ಕುಜನು ಯಾವರಾಶಿಯಲ್ಲಿ ಇದ್ದರೂ ದೋಷ ಇಲ್ಲ. ಕುಂಭ-ಸಿಂಹ ರಾಶಿಗಳು ಲಗ್ನದಿಂದ ೧-೨-೪-೫-೭-೮-೧೨ ನೇ ರಾಶಿಗಳಾಗಿದ್ದು ಅಲ್ಲಿ ಕುಜನು ಇದ್ದರೆ ಕುಜ ದೋಷ ಇಲ್ಲ.

ಈ ರೀತಿಯಾಗಿ ಕುಜದೋಷಗಳಿಗೆ ಅಪವಾದ ಅಥವಾ ಪರಿಹಾರಗಳನ್ನು ಶಾಸ್ತ್ರಕಾರರು ತಿಳಿಸಿರುವ ಕಾರಣ ಕೆಲವೇ ಕೆಲವು ಜಾತಕಗಳಲ್ಲಿ ಮಾತ್ರಾ ಕುಜ ದೋಷ ಇರಬಹುದಾಗಿದೆ. (ಈ ವಿಚಾರವನ್ನು ಜ್ಯೋತಿಷಿಗಳು ಗಮನದಲ್ಲಿರಿಸಿಕೊಂಡು ಕುಜದೋಷದ ಬಗ್ಗೆ ಪರಿಶೀಲಿಸ ಬೇಕೆಂಬುದು ಶಾಸ್ತ್ರಕಾರರ ಮತ.)

ಸಂಗ್ರಹ