ಮಹಿಳಾವಾದ ಇಂದು ಜಗತ್ತಿನಾದ್ಯಂತ ವಿಚಾರವಂತರ ಗಮನ ಸೆಳೆಯುತ್ತಿದೆ. ಪುರುಷ ಪ್ರಧಾನವಾದ ಸಮಾಜ ನಾರಿಯನ್ನು ಅತ್ಯಂತ ಕೀಳು ಭಾವನೆಯಿಂದ ನೋಡುತ್ತಿದೆ, ಆಕೆಯ ಶೋಷಣೆ ನಡೆಯುತ್ತಿದೆ, ದಬ್ಬಾಳಿಕೆ, ಅತ್ಯಾ ಚಾರ, ಬಲಾತ್ಕಾರ ಮುಂತಾದವುಗಳಿಂದಾಗಿ ಆಕೆಯ ಬಾಳು ಬರೀ ಗೋಳು, ಅದರಲ್ಲೂ ಭಾರತದಂತಹ ರಾಷ್ಟ್ರಗಳಲ್ಲಿ ನಾರಿಯನ್ನು ಸುಡುತ್ತಾರೆ, ಆಕೆಯ ಕೇಶ ಮುಂಡನ ಮಾಡುತ್ತಾರೆ, ಆಕೆ ಜೀತದಾಳಾಗಿ ಅಡುಗೆ ಮನೆಯ ನಾಲ್ಕು ಗೋಡೆಗಳೊಳಗೆ ಬಂಧಿಸಲ್ಪಟ್ಟಿದ್ದಾಳೆ, ಭಾರತೀಯ ಧರ್ಮಶಾಸ್ತ್ರ ಆಕೆಯನ್ನು ಎರಡನೆಯ ದರ್ಜೆಯ ಪ್ರಜೆಯಾಗಿ ಪರಿಗಣಿಸುತ್ತದೆ ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.
ಹೌದೇ ? ಹಾಗಾದರೆ ಇಂತಹ ಉಸಿರು ಕಟ್ಟುವ ವಾತಾವರಣದಲ್ಲಿಯೂ ಭಾರತದಲ್ಲಿ ಮಹಿಳೆಯರು ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು, ರಾಜ್ಯಪಾಲರುಗಳು, ನ್ಯಾಯಾಧೀಶರುಗಳು, ವೈದ್ಯರು, ವಿಜ್ಞಾನಿಗಳು, ತಂತ್ರಜ್ಞಾನಿಗಳು, ಕಲೆಗಾರರು, ಕವಯಿತ್ರಿಗಳು ಆಗಿ ಬೆಳೆದಿದ್ದಾರಲ್ಲ, ಅದು ಹೇಗೆ ಸಾಧ್ಯವಾಯಿತು ? ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಂತಹ ಪ್ರಭಾವಶಾಲಿ ಲಲನಾಮಣಿಗಳನ್ನು ಕೊಟ್ಟ ದೇಶ ಬೇರೆ ಯಾವುದಿದೆ ?
ಹಾಗಾದರೆ ಶೋಷಣೆ ಎಂಬುದು ಅರ್ಥಹೀನವಾದ ಮಾತೇ ? ಶೋಷಣೆಯೇನಾದರೂ ಇದ್ದರೂ ಅದು ಆಕೆ ನಾರಿಯಾದುದರಿಂದ ಪುರುಷ ಸಮಾಜ ಆಕೆಯ ಮೇಲೆ ಮಾಡಿದ ಶೋಷಣೆಯಲ್ಲ. ಧರ್ಮ ಪ್ರೇರಿತವಾದ ಶೋಷಣೆಯೂ ಅಲ್ಲ. ಸಂಪ್ರದಾಯದಿಂದಾಗಿ ಬೆಳೆದು ಬಂದ ಅತ್ಯಾಚಾರವಲ್ಲ.
ಸಾಮಾನ್ಯವಾಗಿ ಶೋಷಣೆಗೊಳಗಾಗುವವರು ಇದ್ದರೆ ಅಲ್ಲಿ ಶೋಷಣೆ ನಡೆಯುತ್ತದೆ. ಗಂಡು ಹೆಣ್ಣಿನ ಶೋಷಣೆ ಮಾಡಬಹುದು, ಹೆಣ್ಣು ಗಂಡಿನ ಶೋಷಣೆ ಮಾಡಬಹುದು, ಉಳ್ಳವರು ಇಲ್ಲದವರ ಶೋಷಣೆ ಮಾಡಬಹುದು, ಸಶಕ್ತರು ನಿರ್ಬಲರ ಶೋಷಣೆ ಮಾಡಬಹುದು, ಪ್ರಭಾವಶಾಲಿಗಳು ಪ್ರಭಾವಶಾಲಿಗಳಲ್ಲದವರ ಶೋಷಣೆ ಮಾಡಬಹುದು, ಮೇಲಧಿಕಾರಿಗಳು ಕೆಳಅಧಿಕಾರಿಗಳ ಶೋಷಣೆ ಮಾಡಬಹುದು, ದೊಡ್ಡವರು ಚಿಕ್ಕವರ ಶೋಷಣೆ ಮಾಡಬಹುದು, ಚಿಕ್ಕವರು ದೊಡ್ಡವರ ಶೋಷಣೆ ಮಾಡಬಹುದು. ಯಾರು ಯಾವ ಪರಿಸ್ಥಿತಿಯಲ್ಲಿ ಯಾರ ಶೋಷಣೆ ಮಾಡುತ್ತಾರೆ ಎಂಬುದನ್ನು ನಾವು ವಿಶ್ಲೇಷಣೆ ಮಾಡಬೇಕು. ಅದಕ್ಕೆ ಧರ್ಮ ಕಾರಣವಾಗುವುದಿಲ್ಲ, ಸಂಪ್ರದಾಯ ಕಾರಣವಾಗುವುದಿಲ್ಲ, ಜಾತಿಭೇದ ಕಾರಣವಾಗುವುದಿಲ್ಲ. ಒಂದು ನಿಶ್ಚಿತ ಪರಿಸ್ಥಿತಿ ಕಾರಣವಾಗುತ್ತದೆ. ಗಂಡಸರು ಹೆಂಗಸರ ಶೋಷಣೆ ಮಾಡಿದಂತೆಯೇ ಹೆಂಗಸರು ಗಂಡಸರ ಶೋಷಣೆ ಮಾಡುವುದಿಲ್ಲವೇ ? ಹೆಂಗಸರೇ ಹೆಂಗಸರ ಶೋಷಣೆ ಮಾಡುವುದಿಲ್ಲವೇ ?
ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತದೆ ಎಂಬುದಕ್ಕೆ ಪ್ರಜ್ಞಾವಂತರು ಕೊಡುವ ಉದಾಹರಣೆಯೆಂದರೆ ಸತೀ ಸಹ ಗಮನ ಪದ್ಧತಿ, ಬಾಲ್ಯವಿವಾಹ, ವಿದ್ಯಾಹೀನತೆ, ವರದಕ್ಷಿಣೆ, ವಿಧವಾ ಮುಂಡನ ಇತ್ಯಾದಿ. ಇತ್ಯಾದಿ. ಇದಕ್ಕೆ ಕಾರಣ ಆಯಾ ಕಾಲದ ರಾಜಕೀಯ ಸಾಮಾಜಿಕ ಅನಿವಾರ್ಯತೆಗಳು, ಧರ್ಮವಲ್ಲ. ಸತೀ ಪದ್ದತಿಗೆ ಧರ್ಮದ ಅನುಮತಿಯಿಲ್ಲ. ಮಧ್ಯಕಾಲದ ವಿದೇಶೀ ಆಕ್ರಮಣಕಾರರು ಗಂಡಂದಿರನ್ನು ಕೊಂದು ಹೆಂಡತಿಯರ ಮಾನಭಂಗಕ್ಕೆ ಯತ್ನಿಸಿದಾಗ ಅವರಿಂದ ಶೋಷಣೆಗೊಳಗಾಗುವುದಕ್ಕಿಂತ ಆತ್ಮಹತ್ಯೆ ಮಾಡಿಕೊಂಡು ಪತಿಯನ್ನು ಸೇರುವುದು ಲೇಸು ಎಂಬ ದೃಢ ಸಂಕಲ್ಪದಿಂದ ಹೆಂಗಸರೇ ಚಿತೆಯನ್ನೇರಿ ಪ್ರಾಣತ್ಯಾಗ ಮಾಡಿ ಬೆಳೆಸಿದ ಸಂಪ್ರದಾಯ. ಅದಕ್ಕಿಂತ ಹಿಂದೆ ಆ ಸಂಪ್ರದಾಯವಿರಲಿಲ್ಲ. ಪಾಂಡುರಾಜ ಮಡಿದಾಗ ಮಾದ್ರಿ ಚಿತೆಯೇರಿದ್ದು ತನ್ನಿಂದಾಗಿ ತನ್ನ ಗಂಡ ಪ್ರಾಣತ್ಯಾಗ ಮಾಡಬೇಕಾಯಿತು ಎಂಬ ಪಶ್ಚಾತ್ತಾಪದಿಂದ. ಕುಂತಿ ಚಿತೆಯೇರಲಿಲ್ಲ. ಮಧ್ಯಕಾಲದ ರಾಜಕೀಯ ಪರಿಸ್ಥಿತಿಯಿಂದಾಗಿ ಸ್ವ-ಇಚ್ಛೆಯಿಂದ ಚಿತೆಗೇರಿ ಬೆಳೆಸಿದ ಈ ಸಂಪ್ರದಾಯ ದೇಶದ ಕೆಲವು ಭಾಗಗಳಲ್ಲಿ ಕಾಲಕ್ರಮೇಣ ಬೆಳೆಯತೊಡಗಿತು. ಮತ್ತೆ ಜನ ಪ್ರಜ್ಞಾವಂತರಾದಾಗ ಈ ಪದ್ಧತಿಗೆ ವಿದಾಯ ಹೇಳಿದರು. ಈಗಂತೂ ಇದೊಂದು ಅನವಶ್ಯಕ ಚರ್ಚೆ.
ಬಾಲ್ಯವಿವಾಹವೂ ಇಂತಹ ಕಾರಣಗಳಿಂದಾಗಿ ಹುಟ್ಟಿಕೊಂಡಿತು. ಪ್ರಾಚೀನ ಕಾಲದಲ್ಲಿ ಯುವಕರು ವಿದ್ಯಾವಂತೆಯರಾದ ಯುವತಿಯರನ್ನು ಮದುವೆಯಾಗಲು ಇಚ್ಛಿಸುತಿದ್ದರು ಎಂಬುದಕ್ಕೆ ಅಥರ್ವ ವೇದದ 'ಬ್ರಹ್ಮಚರ್ಯೇಣ ಕನ್ಯಾ ಯುವಾನಂ ವಿಂದತೇ ಪತಿಂ' ಎಂಬ ಮಾತು ಆಧಾರ. ಬೃಹದಾರಣ್ಯಕ ಉಪನಿಷತ್ತಿನಲ್ಲಿ 'ಅಥಯ ಇಚ್ಛೇತ್ ದುಹಿತಾ ಮೇ ಪಂಡಿತಾ ಜಾಯೇತ' ಎಂದು ಹೇಳಿದಂತೆ ಅಂದಿನ ತಂದೆ ತಾಯಿಗಳು ಪಂಡಿತೆಯರಾದ ಪುತ್ರಿಯರನ್ನು ಪಡೆಯಲಿಚ್ಛಿಸುತ್ತಿದ್ದರು. ವಿದ್ಯಾವಂತ ಪ್ರಜ್ಞಾವಂತ ಹೆಣ್ಣಿನಿಂದ ಎರಡೂ ಕುಲದ ಉದ್ಧಾರವಾಗುತ್ತದೆ ಎಂಬುದನ್ನು ಅವರು ಗಮನಿಸಿದ್ದರು. ವೇದ ಮಂತ್ರಗಳನ್ನು ಕಂಡು ಹಿಡಿದವರು ಗಂಡಸು ಋಷಿಗಳು ಮಾತ್ರವಲ್ಲ. 'ಇಪ್ಪತ್ತೇಳು ವಿದುಷಿಯರಾದ ಮಂತ್ರದ್ರಷ್ಟಾರ ಬ್ರಹ್ಮವಾದಿನಿಯರ ಉಲ್ಲೇಖ ವೇದದಲ್ಲಿದೆ. ಶಂಕರಾಚಾರ್ಯರಿಗೂ ಮಂಡನ ಮಿಶ್ರರಿಗೂ ವಿದ್ವತ್ ಸದಸ್ಸಿನಲ್ಲಿ ನಡೆದ ವಾಗ್ವಾದದಲ್ಲಿ ನಿರ್ಣಾಯಕ ತೀರ್ಪುಗಾರಳಾಗಿ ಅಧ್ಯಕ್ಷ ಸ್ಥಾನದಲ್ಲಿ ಆಸೀನಳಾದವಳು ಮಂಡನ ಮಿಶ್ರರ ವಿದುಷಿ ಪತ್ನಿ.
ವರದಕ್ಷಿಣೆಯೂ ಧರ್ಮಸಮ್ಮತವಾದ ಆಚರಣೆಯಲ್ಲ. ಆಧುನಿಕ ಕಾಲದಲ್ಲಿ ಧನವಂತರು ಬೆಳೆಸಿಕೊಂಡು ಬಂದ ಸಂಪ್ರದಾಯ. ಇಂತಹ ಪದ್ಧತಿ ಒಮ್ಮೆ ಪ್ರಚಾರಕ್ಕೆ ಬಂದರೆ ಜನ ಅದರಿಂದ ಆದಷ್ಟು ಹೆಚ್ಚಿಗೆ ಪ್ರಯೋಜನ ಪಡೆಯಬಯಸುತ್ತಾರೆ. ಸಮಾಜ ಬಯಸಿದರೆ ಈ ಅನಿಷ್ಟ ಪದ್ಧತಿಯನ್ನು ನಿವಾರಿಸುವುದು ಕಷ್ಟದ ಕೆಲಸವಲ್ಲ. ಇದರ ಪ್ರಯೋಜನ ಪಡೆಯಲಿಕ್ಕಾಗಿ ಹೆಣ್ಣಿನ ಶೋಷಣೆ ಮಾಡುವುದರಲ್ಲಿ ಗಂಡಸಿನ ಪಾಲಿನ ತಪ್ಪಿಗಿಂತ ಹೆಂಗಸರ ಪಾಲಿನ ತಪ್ಪು ಹೆಚ್ಚು ಎನಿಸುತ್ತದೆ. ವರದಕ್ಷಿಣೆ ತಾರದಿದ್ದುದಕ್ಕಾಗಿ ಹುಡುಗಿಗೆ ಹಿಂಸೆ ಕೊಡುವುದರಲ್ಲಿ ಅತ್ತೆ ನಾದಿನಿಯರದ್ದು ಸಿಂಹಪಾಲು ಎಂದು ಹೇಳಬಹುದು.
ಚಲನಚಿತ್ರ, ದೂರದರ್ಶನ, ವೃತ್ತಪತ್ರಿಕೆ ಮುಂತಾದ ಮಾಧ್ಯಮಗಳಲ್ಲಿ ಹೆಣ್ಣಿನ ಶೋಷಣೆಯಾಗುವುದಕ್ಕೆ ಹೆಣ್ಣೆ ಕಾರಣ ಎನ್ನಬಹುದು. ಅರೆ ನಗ್ನಸ್ಥಿತಿಯಲ್ಲಿ ತಾನು ದೇಹ ಪ್ರದರ್ಶನ ಮಾಡುವುದಿಲ್ಲ ಎಂದು ಮಹಿಳೆ ನಿರ್ಧರಿಸಿದರೆ ಯಾರೂ ಆಕೆಯನ್ನು ಬಲಾತ್ಕರಿಸಲಾರರು. ಇಲ್ಲಿ ಮಹಿಳೆ ತನ್ನ ಸ್ವಾರ್ಥಕ್ಕಾಗಿ ತನ್ನ ಶೋಷಣೆ ತಾನೇ ಮಾಡಿಕೊಳ್ಳುತ್ತಾಳೆ. ಆಕೆ ಅಶ್ಲೀಲತೆಯ ದಾರಿ ಹಿಡಿಯಲಿಕ್ಕೆ ಆಕೆಯನ್ನು ಪ್ರೋತ್ಸಾಹಿಸುವವಳು ಇನ್ನೊಬ್ಬ ಮಹಿಳೆಯೇ ಆಗಿರುತ್ತಾಳೆ ಎಂಬುದೂ ಸತ್ಯ. ಹಾಗಾದರೆ ಪುರುಷನೇ ಮಹಿಳೆಯ -ಶೋಷಣೆಗೆ ಕಾರಣನು ಎಂದು ಹೇಳುವುದು ಎಷ್ಟು ಸತ್ಯ ?
ತುಳುವಿನಲ್ಲಿ ಒಂದು ಗಾದೆಯಿದೆ. ಸ್ವಲ್ಪ ಅಶ್ಲೀಲವಾದರೂ ಚಿಂತನಯೋಗ್ಯ. 'ತುತುದೀ ಕುಂಟು ಗಟ್ಟಿ ಉಂಡಡ ಬತ್ತೀ ಮಿಂಡೆ ದಾನೆ ಮಲ್ಪರೆ ಸಾಧ್ಯ ?' ಉಟ್ಟುಕೊಂಡ ಸೀರೆ ಗಟ್ಟಿಯಿದ್ದರೆ ಅಟ್ಟಿಕೊಂಡು ಬಂದ ವಿಟ ಏನು ಮಾಡಲಿಕ್ಕೆ ಸಾಧ್ಯ ? ತುಳು ಪಾಡ್ದನಗಳಲ್ಲಿ ತನ್ನ ಮಾನರಕ್ಷಣೆ ತಾನೇ ಮಾಡಿಕೊಂಡ ದಿಟ್ಟ ಮಹಿಳೆಯರ ಕತೆಗಳಿವೆ. ಶೋಷಣೆ ಮಾಡ ಬಯಸುವವರನ್ನು ಮೆಟ್ಟಿ ನಿಲ್ಲುವ ವೀರ ರಮಣಿಯರ ಉಲ್ಲೇಖವಿದೆ. ಸಿರಿ, ನಾಗಸಿರಿ, ಪರತಿ ಮಂಗಣೆ ಮುಂತಾದವರ ವೀರಗಾಥೆಗಳಿವೆ. ಆಕೆ ತನ್ನ ಶೀಲ ರಕ್ಷಣೆ ಮಾಡಿಕೊಳ್ಳುವವಳಾದರೆ ಯಾರೂ ಆಕೆಯ ಶೋಷಣೆ ಮಾಡಲಾಗದು. ಅಶೋಕ ವನದಲ್ಲಿ ಸೀತೆಯ ಮಾನ ರಕ್ಷಣೆ ಮಾಡಿದ್ದು ಯಾರು ? ಶ್ರೀರಾಮನೇ ? ಹನುಮಂತನೇ ? ಲಕ್ಷ್ಮಣನೇ ? ವಿಭೀಷಣನೇ ? ಯಾರೂ ಅಲ್ಲ. ಸೀತೆಯ ರಕ್ಷಣೆ ಮಾಡಿದ್ದು ಸೀತೆಯೇ.
ವಿಧವಾ ಮುಂಡನ ಪದ್ಧತಿ ಪ್ರಚಾರಕ್ಕೆ ಬಂದದ್ದೂ ಭಾರತದಲ್ಲಿ ಬೌದ್ಧ ಧರ್ಮ ಪ್ರಚಾರಕ್ಕೆ ಬಂದ ಮೇಲೆ ಬೌದ್ಧ ಸನ್ಯಾಸಿನಿಯರಂತೆ ಇವರೂ ತ್ಯಾಗ ವೈರಾಗ್ಯದ ಜೀವನ ನಡೆಸುವಂತಾಗಬೇಕು, ಗಂಡಸರು ಆಕೆಯ ಶೀಲಭಂಗಕ್ಕೆ ಪ್ರಯತ್ನಿಸುವಂತೆ ಆಗಬಾರದು ಎಂಬ ದೃಷ್ಟಿಯಿಂದ. ಈಗ ಅದೂ ಮಾಯವಾಗುತ್ತಿದೆ. ಏಕೆಂದರೆ ನಮ್ಮ ಧರ್ಮ ಸಂಪ್ರದಾಯಗಳು ನಿಂತ ನೀರಿನ ಹಾಗಲ್ಲ. ಕಾಲಕಾಲಕ್ಕೆ ಕಾಲಧರ್ಮಕ್ಕನುಗುಣವಾಗಿ ಸಂಪ್ರದಾಯ - ಆಚರಣೆಗಳು ಬದಲಾಗುತ್ತಲೇ ಬರುತ್ತವೆ.
ಹೀಗಾಗಿ ನಾವು ಯಾವುದೋ ಒಂದು ಕಾಲಘಟ್ಟದಲ್ಲಿ ಯಾವನೋ ಒಬ್ಬ ಧರ್ಮಶಾಸ್ತ್ರ - ಪಂಡಿತ ಒಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರೆ ಅದನ್ನೇ ಆಧಾರವಾಗಿಟ್ಟುಕೊಂಡು ಹಿಂದೂ ಧರ್ಮದಲ್ಲಿ ಹಾಗೆ ಹೀಗೆ ಎನ್ನುವಂತಿಲ್ಲ. ಧರ್ಮಶಾಸ್ತ್ರಕಾರರು ಹಲವಾರು ಮಂದಿ ಆಗಿಹೋಗಿದ್ದಾರೆ. ಆಯಾ ಕಾಲಧರ್ಮಕ್ಕನುಸಾರವಾಗಿ ತಮ್ಮ ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಒಬ್ಬರು ಹೇಳಿದ್ದಕ್ಕೂ ಇನ್ನೊಬ್ಬರು ಹೇಳಿದ್ದಕ್ಕೂ ವ್ಯತ್ಯಾಸವಿದೆ. ಒಬ್ಬರು ಹೇಳಿದ್ದಕ್ಕೆ ವಿರುದ್ಧವಾದ ಅಭಿಪ್ರಾಯವನ್ನು ಇನ್ನೊಬ್ಬರು ಹೇಳಿದ್ದಿದೆ. ಮನು, ಯಾಜ್ಞವಲ್ಕ, ಗೌತಮ, ಕೌಟಿಲ್ಯ, ಅಶ್ವಲಾಯನ, ಬೋಧಾಯನ ಮುಂತಾದವರಲ್ಲಿ ಅಭಿಪ್ರಾಯ ಭೇದಗಳಿವೆ. ಆಯಾ ಕಾಲಘಟ್ಟಗಳಲ್ಲಿ ರಾಜರುಗಳೂ ವಿದ್ವಾಂಸರುಗಳೂ ಸಾರ್ವಜನಿಕರೂ ವಿಮರ್ಶೆಮಾಡಿ ತಮ್ಮ ಕಾಲಕ್ಕೆ ಹೊಂದಿಕೆಯಾಗುವಂತಹ ನಿಯಮಗಳನ್ನೂ ಸಂಪ್ರದಾಯಗಳನ್ನೂ ನೀತಿ ಸಂಹಿತೆಗಳನ್ನೂ ರೂಪಿಸಿಕೊಂಡು ಬಂದಿದ್ದಾರೆ. ಹೀಗಾಗಿ ಒಬ್ಬನ ಅಭಿಪ್ರಾಯವನ್ನು ಎತ್ತಿ ಹಿಡಿದು ನಮ್ಮ ಸಂಸ್ಕೃತಿಯೇ ಹೀಗೆ ಎಂದು ತೀರ್ಪು ಕೊಡುವುದು ಸರಿಯಲ್ಲ. ಎಲ್ಲರ ಅಭಿಪ್ರಾಯಗಳನ್ನೂ ಕ್ರೋಢೀಕರಿಸಿ ನಮ್ಮ ಕಾಲ ಧರ್ಮಕ್ಕನುಸಾರವಾಗಿ ನಮ್ಮದೇ ಆದ ನೀತಿ ಸಂಹಿತೆಯನ್ನು ಬೆಳೆಸಿಕೊಳ್ಳುವ ಸ್ವಾತಂತ್ರ್ಯ ನಮಗಿದೆ, ಹಾಗೆ ನಡೆದುಕೊಂಡು ಬಂದು ನಮ್ಮ ಸಂಸ್ಕೃತಿ ಪರಿವರ್ತನಶೀಲವಾಗಿ ಮುಂದುವರಿಯುತ್ತಿದೆ.
ಕೆಲವೊಮ್ಮೆ ನಾವು ನಮ್ಮ ಪೂರ್ವಜರ ಅಭಿಪ್ರಾಯಗಳನ್ನು ತಪ್ಪಾಗಿ ಅರ್ಥಮಾಡಿ ಕೊಳ್ಳುವುದೂ ಇದೆ. 'ಮನು ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ' ಎಂದು ಹೇಳಿದ್ದಕ್ಕೆ ನಾವು ಸಾಕಷ್ಟು ಅಪಾರ್ಥ ಕಲ್ಪಿಸಿದ್ದೇವೆ. ಹೆಂಗಸರಿಗೆ ಸ್ವಾತಂತ್ರ್ಯ ಕೊಡಬಾರದು, ಆಕೆಯ ಶೋಷಣೆ ಮಾಡಬೇಕು ಎಂಬರ್ಥದಲ್ಲಿ ಅವನು ಬರೆದೇ ಇಲ್ಲ. ಆಕೆಗೆ ಕೆಲವು ನೈಸರ್ಗಿಕವಾದ ದೌರ್ಬಲ್ಯಗಳಿವೆ. ಸ್ವತಂತ್ರಳಾಗಿ ಇನ್ನೊಬ್ಬರ ಸಹಾಯವಿಲ್ಲದೆ ಬದುಕಲು ಕೆಲವು ಅಡಚಣೆಗಳಿವೆ. ಆದ್ದರಿಂದ ಬಾಲ್ಯಕಾಲದಲ್ಲಿ ಆಕೆಗೆ ತಂದೆ ರಕ್ಷಣೆ ಕೊಡಬೇಕು, ತಾರುಣ್ಯದಲ್ಲಿ ಗಂಡ ರಕ್ಷಣೆ ಕೊಡಬೇಕು, ವೃದ್ಧಾಪ್ಯದಲ್ಲಿ ಮಕ್ಕಳ ಸಹಾಯ ಬೇಕು ಎಂದು ನಾರಿಯರ ಬಗ್ಗೆ ಅತ್ಯಂತ ಅನುಕಂಪದ ಮಾತುಗಳನ್ನು ಹೇಳಿದ್ದಾನೆ. ನಮ್ಮ ನಾರಿಯರು ಮನುವಿಗೆ ಕೃತಜ್ಞರಾಗಿರಬೇಕು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಬಾಲ್ಯದಲ್ಲಿ ಹುಡುಗಿಯರಿಗೆ ತಂದೆ ತಾಯಿಗಳ ರಕ್ಷಣೆಯಿಲ್ಲದೆ ಪ್ರೌಢಶಾಲಾ ಮಟ್ಟದಲ್ಲಿಯೇ ತಪ್ಪುದಾರಿ ಹಿಡಿದು ಗರ್ಭಿಣಿಯರಾಗಿ ಆ ಪ್ರಿಯತಮನಿಂದ ಪರಿತ್ಯಕ್ತಳಾಗಿ ಮಗುವನ್ನು ಪಡೆದು 'ಸಿಂಗಲ್ ಮದರ್' ಆಗಿ ಪಡಬಾರದ ಪಾಡು ಪಡುತ್ತಾಳೆ. ತಾರುಣ್ಯದಲ್ಲಿ ಗಂಡನ ರಕ್ಷಣೆಯಿಲ್ಲದೆ ಅತ್ಯಾಚಾರಕ್ಕೊಳಗಾಗಿ ಮಾನಸಿಕ ವೇದನೆಗೊಳಗಾಗುತ್ತಾಳೆ. ವೃದ್ಧಾಪ್ಯದಲ್ಲಿ ಮಕ್ಕಳ ರಕ್ಷಣೆಯಿಲ್ಲದೆ ವೃದ್ಧಾಶ್ರಮದಲ್ಲಿ ಮಕ್ಕಳ ವಾತ್ಸಲ್ಯದಿಂದ ವಂಚಿತರಾಗಿ ಅನಾಥ ಪ್ರಜ್ಞೆಯಿಂದ ದೈಹಿಕ ಮಾನಸಿಕ ದುಃಖಗಳಿಗೊಳಗಾಗಿ ಯಾತನೆ ಪಡುತ್ತಾಳೆ. ನಮ್ಮ ಮಹಿಳೆಯರು ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಗಿ ಅಲ್ಲಿಯ ಬಾಲಕಿಯರ, ತರುಣಿಯರ ಹಾಗೂ ಮುದುಕಿಯರ ಮೂಕ ವೇದನೆಗಳನ್ನು ವಿಶ್ಲೇಷಿಸಿದರೆ ಮನುವಿನ ಮೇಲಣ ಅವರ ಗೌರವ ಖಂಡಿತ ಹೆಚ್ಚಾಗುತ್ತದೆ. ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ 'ಎಲ್ಲಿ ನಾರಿಯರು ಗೌರವದಿಂದ ಪೂಜಿಸಲ್ಪಡುತ್ತಾರೋ ಅಲ್ಲಿ ದೇವರ ಸಾನ್ನಿಧ್ಯವಿದೆ' ಎಂಬ ಮುತ್ತಿನಂತಹ ಮಾತನ್ನು ಹೇಳಿದ ಮನು ಹೆಂಗಸರ ಶೋಷಣೆ ಮಾಡಿ ಎಂಬರ್ಥದಲ್ಲಿ ಹೇಳಿಯಾನೇ ? ಶೋಷಣೆಯ ಅರ್ಥದಲ್ಲಿ ಹೇಳಿದ್ದರೆ 'ರಕ್ಷತಿ' ಎಂಬ ಶಬ್ದ ಉಪಯೋಗಿಸುತ್ತಿದ್ದನೇ ?
ನಾರಿಗೆ ನಮ್ಮ ಸಮಾಜ ಕೊಟ್ಟಷ್ಟು ಸ್ಥಾನಮಾನ ಪ್ರಪಂಚದ ಯಾವ ನಾಗರಿಕತೆಯೂ ಕೊಡಲಿಲ್ಲ. ನಾವು ಹೆಣ್ಣನ್ನು ಕಾಣುವುದು 'ಮಾತೆ' ಯಾಗಿ, 'ದೇವಿ'ಯಾಗಿ. ಅಪವಾದಗಳಿರಬಹುದು. ಅದು ವೈಯಕ್ತಿಕ ನೆಲೆಯಲ್ಲಿ ಕೆಲವರಿಂದ ಆಗಿರಬಹುದು. ಅದಕ್ಕೆ ನಮ್ಮ ಸಂಸ್ಕೃತಿ ಕಾರಣವಲ್ಲ. ಹೆಣ್ಣನ್ನು ಬಿಟ್ಟು ಗಂಡು ಯಾವ ಧಾರ್ಮಿಕ ಆಚರಣೆಯನ್ನೂ ಮಾಡುವಂತಿಲ್ಲ. ಯಾವ ಸಾಮಾಜಿಕ ಕಾರ್ಯವೂ ಆಕೆಯಿಲ್ಲದೆ ನಡೆಯುವಂತಿಲ್ಲ, ಯಾವ ಹಬ್ಬಹರಿದಿನವೂ ಅವಳಿಲ್ಲದೆ ನಡೆಯುವುದಿಲ್ಲ. ವಿಷ್ಣುವಿಗೆ ಜಗತ್ತಿನ ಪಾಲನೆ ಪೋಷಣೆ ಮಾಡಬೇಕಾದರೆ ಹಣ ಬೇಕಲ್ಲವೇ ? ಅದನ್ನು ಕೊಡುವವಳು ಅವನ ಪತ್ನಿ ಲಕ್ಷ್ಮಿ. ಬ್ರಹ್ಮನ ಸೃಜನಶೀಲತೆ ಸೃಷ್ಟಿಕಾರ್ಯಕ್ಕೆ ಬೇಕು ಬುದ್ಧಿಶಕ್ತಿ. ಅದಕ್ಕೆ ಬೇಕು ವಿದ್ಯಾಧಿದೇವತೆಯಾದ ಸರಸ್ವತಿ. ಶಿವನಿಗೆ ಧ್ವಂಸ ಮಾಡಲು ಬೇಕು ಶಕ್ತಿ. ಅದಕ್ಕಾಗಿ ಶಕ್ತಿ ಪ್ರತಿರೂಪಳಾದ ಪಾರ್ವತಿ ಬೇಕು. ಲಕ್ಷ್ಮಿ ಸರಸ್ವತಿ ಪಾರ್ವತಿಯರಿಲ್ಲದೆ ನಮ್ಮ ತ್ರಿಮೂರ್ತಿಗಳಿಂದ ಏನೂ ಮಾಡಲಿಕ್ಕಾಗುವುದಿಲ್ಲ. ಗಂಡು ಹೆಣ್ಣು ವಾಗರ್ಥದಂತೆ ಕೂಡಿದಾಗ ಎಲ್ಲ ಸಾಧ್ಯವಾಗುತ್ತದೆ. ಪ್ರಕೃತಿ-ಪುರುಷರ ಮಿಲನದಿಂದ ಜಗತ್ತು ನಡೆಯುತ್ತದೆ. ಅಲ್ಲಿ ಶೋಷಣೆಯಿಲ್ಲ, ಸಮಾನತೆಯಿದೆ.
ಡಾ। ಸುಶೀಲಾ ಪಿ. ಉಪಾಧ್ಯಾಯ